ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, October 7, 2009

ಮುಳ್ಳಯ್ಯನ ಗಿರಿ-ಕೆಮ್ಮಣ್ಣುಗುಂಡಿ ಚಾರಣ

ನವೆಂಬರ್ ೨೯,೩೦ ೨೦೦೮

ದಿನಪೂರ್ತಿ ಕಂಪ್ಯೂಟರಿನ ಮುಂದೆ ಕೆಲ್ಸಮಾಡಿ, ಮನೆಗೆ ಹೋಗಿ ಮನೆಲೂ ಕೆಲ್ಸ ಮಾಡಿ ಸಕತ್ ಬೇಜಾರಾಗೋಗಿತ್ತು. ಇದರ ನಡುವೆ ಒಂದು ಪುಟ್ಟ Break ಬೇಕಾಗಿತ್ತು. ಯಾವರೀತಿ Timepass ಮಾಡಿದ್ರೆ ಚೆನ್ನಾ ಅಂತ ಲೆಕ್ಕಾಚಾರ ಹಾಕ್ತಾ ಇರೋಹಾಗೇ ಮನೋಹರ ನಂಗೆ call ಮಾಡಿದ್ದ. ಒಂದು Trekking ಇದೆ, ಬರ್ತೀಯಾ ? ಬರೋಹಾಗಿದ್ರೆ ನನ್ನ Accountಗೆ ದುಡ್ಡು Transfer ಮಾಡ್ಬಿಡು ಅಂದ. ನಿಸರ್ಗದ ನಡುವೆ ಇರೋ ಅವಕಾಶ ತಾನಾಗೇ ಸಿಕ್ಕಿರೋವಾಗ ತಡಮಾಡದೇ ಮನೋಹರನಿಗೆ ಈ ಚಾರಣದ ವಿಷಯ ತಿಳಿಸಿದ್ದಕ್ಕೆ ಮನದಲ್ಲೇ Thanks ಹೇಳ್ತಾ ಚಾರಣಕ್ಕೆ ಬೇಕಾಗುವ ಮೊತ್ತವನ್ನ ಮುಂಗಡವಾಗಿ ಇಂಟರ್ನೆಟ್ಟಿನಿಂದ ಸುಲಭವಾಗಿ ಮನೋಹರನ ಖಾತೆಗೆ ಜಮಾ ಮಾಡಿ ನಾನು ಚಾರಣಕ್ಕೆ ಬರುವುದನ್ನ ಖಾತ್ರಿ ಪಡಿಸಿಕೊಂಡೆ.

ಮನೋಹರ್ ಮತ್ತೆ ಹರ್ಷ ಗುಂಪಿನೊಡನೆ ಇದು ನನ್ನ ಎರಡನೇ ಚಾರಣ. ಚಾರಣಕ್ಕೆ ಹೋಗಬೇಕಾಗಿದ್ದ ಜಾಗ "ಮುಳ್ಳಯ್ಯನ ಗಿರಿ", ಅಲ್ಲಿಂದ ನಾವು ಕೆಮ್ಮಣ್ಣುಗುಂಡಿಗೆ ಬಂದು ನಮ್ಮ ಚಾರಣವನ್ನ ಅಂತ್ಯಗೊಳಿಸೋದು ಅಂತ ಅವರಿಬ್ಬರೂ Plan ಮಾಡಿದ್ರು.

ಮೊದಲಿಗೇ ಚಾರಣದ ಸಿದ್ದತೆಯನ್ನು ಮಾಡಿಕೊಂಡಿದ್ದವರು ನಮ್ಮ ಗುಂಪಿನ ನಾಯಕರಾದ ಹರ್ಷ ಮತ್ತು ಮನೋಹರ. ಚಾರಣದ ಆಸಕ್ತಿ ಇರೋ ೧೧ ಚಾರಣಿಗರನ್ನ ಒಟ್ಟುಸೇರಿಸಿ, ಅವರಿಂದ ಮುಂಗಡ ಹಣ ಪಡೆದು KSRTC ಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಮುಂಗಡ ಟಿಕೇಟ್ ಖರೀದಿ ಮಾಡಿ, ಬೀರೂರಿನಿಂದ ಬೆಂಗಳೂರಿಗೆ Return Journey ಯನ್ನ ಕಾದಿರಿಸಿದ್ರು. ನಾನು ಸಾಮಾನ್ಯವಾಗಿ ಚಾರಣಕ್ಕೆ ಹೋಗುವಾಗೆಲ್ಲಾ ನಮ್ಮ ಊಟ ಕಾಡಿನಲ್ಲೇ ತಯಾರಾಗುತ್ತಿತ್ತು. ಆದರೆ ಇಲ್ಲಿ ಅದು ಸ್ವಲ್ಪ ಬದಲಾಗಿತ್ತು. ಕಾಡಿನಲ್ಲಿ ಅಡುಗೆ ಮಾಡಿ ಊಟಮಾಡುವಬದಲಿಗೆ MTRನ Ready To Eat Packetsನ ತಂದಿದ್ದರು. ಅದರ ಜೊತೆಯಲ್ಲಿ ಕಾಡಿನಲ್ಲಿ Campingಗೆ ಬೇಕಾಗುವ Tent ಮತ್ತೆ sleeping bag ಗಳು, Tentನ ಒಳಗೆ ಹಾಸಲು ಬೇಕಾಗುವ Matಗಳ ಪೂರ್ವ ಸಿದ್ದತೆ ಆಗಿತ್ತು. ಈ ಸಲದ ಚಾರಣದಲ್ಲಿ ನನಗೆ ಹೊಸದೆನಿಸಿದ್ದು ಹರ್ಷ ತಂದಿದ್ದ GPS. ಅದರಲ್ಲಿ Google earth ನಿಂದ ಮೊದಲೇ ನಾವು ಚಾರಣ ಮಾಡುವ ಮಾರ್ಗವನ್ನ ಸಿದ್ಧಪಡಿಸಿ ತಂದಿದ್ದರು, ಅದಿಲ್ಲದಿದ್ದಲ್ಲಿ ದಟ್ಟವಾಗಿ ಮಂಜು ಕವಿದಿದ್ದರಿಂದ ನಮಗೆ ಚಾರಣ ಮಾಡಲು ದಿಕ್ಕು ದಾರಿ ತಿಳಿಯುತ್ತಿರಲಿಲ್ಲ.

ಚಾರಣಿಗರ ಪಟ್ಟಿ ಇಂತಿದೆ:


Harsha
Manohar D.C ಅವರ ಇನ್ನೊಂದು ಹೆಸರು Manu
Vishwanath ಅವರ ಇನ್ನೊಂದು ಹೆಸರು Choodi
Anees K.A
Santhosh
Dilip
Linson Jose ಅವರ ಇನ್ನೊಂದು ಹೆಸರು Linsa
Arun Sadasivan ಅವರ ಇನ್ನೊಂದು ಹೆಸರು Sadasiva
Praveen ಅವರ ಇನ್ನೊಂದು ಹೆಸರು SNMP
Joephin


ಶನಿವಾರ: ಚಿಕ್ಕಮಗಳೂರು-ಮುಳ್ಳಯ್ಯನ ಗಿರಿ-ಬಾಬಾ ಬುಡನ್ ಗಿರಿ-ಗಾಳಿಕೆರೆ ಚಾರಣ

ಶುಕ್ರವಾರ ರಾತ್ರಿ ನಾವೆಲ್ಲಾ ಬೆಂಗಳೂರಿನಿಂದ ವೋಲ್ವೋ ಬಸ್ಸಿನಲ್ಲಿ ಹೊರಟು ಶನಿವಾರ ಬೆಳಗಿನಜಾವ ಸುಮಾರು ೪:೩೦ಕ್ಕೆ ನಮ್ಮ ಐರಾವತದಲ್ಲಿ ಚಿಕ್ಕಮಗಳೂರಿಗೆ ಬಂದು ತಲುಪಿದೆವು. ಬೆಳ್ಳಂಬೆಳಿಗ್ಗೆ ಆ ಚುಮು ಚುಮು ಚಳಿಯಲ್ಲಿ ಎಲ್ಲಾ ಐರಾವತದಿಂದ ಧರೆಗಿಳಿದೆವು :D . ಇಳಿಯುತ್ತಿದ್ದಂತೇ ಎಲ್ಲರ ಕಣ್ಣೂ ಹುಡುಕಿದ್ದು ಟೀ ಅಂಗಡಿಯನ್ನ. ನಾವೆಲ್ಲಾ ಬಿಸಿ ಬಿಸಿ ಟೀ ಆಸ್ವಾಧಿಸುತ್ತಿದ್ದರೆ ಹರ್ಷ ಮತ್ತೆ ವಿಶ್ವನಾಥ್ ನಮಗಾಗಿ Lodge ವ್ಯವಸ್ಥೆ ಮಾಡಲು ಹೋಗಿದ್ದರು. ಒಟ್ಟಿಗೇ ಅಷ್ಟುಜನ ಬಸ್ಸಿನಿಂದ ಇಳಿದದ್ದನ್ನು ನೋಡಿದ Wollen Cap ಮಾರುವವನು ತನ್ನ ಅಂಗಡಿಯನ್ನೇ ನಾವು ನಿಂತಿದ್ದ ಸ್ಥಳಕ್ಕೆ ತಂದಿದ್ದ. ನಮ್ಮಲ್ಲಿ ಕೆಲವರು ಅವನಿಂದ Cap ಖರೀದಿಸಿದ ನಂತರ ಹರ್ಷ ಅವರು Book ಮಾಡಿದ್ದ Lodgeನತ್ತ ಪಯಣ ಬೆಳೆಸಿದ್ವಿ.


ಹರ್ಷ ಮತ್ತೆ ವಿಶ್ವನಾಥ್ ಬಹಳಹೊತ್ತು ಹುಡುಕಿದ ನಂತರ Naveen-Lodge ಎಂಬಲ್ಲಿ ನಮಗೆ ಕೊಠಡಿಯ ವ್ಯವಸ್ಥೆಯಾಯಿತು. ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ಇಡ್ಲಿ, ವಡೆ ತಿಂಡಿ ತಿಂದು ಸುಮಾರು ೭:೪೫ ಕ್ಕೆ ಅಲ್ಲಿಯೇ ಒಂದು ಜೀಪು ಮತ್ತೊಂದು ಮಾರುತಿ ಆಮ್ನಿ ಯನ್ನ ಬಾಡಿಗೆ ಪಡೆದು ಸುಮಾರು ೧೫ ಕಿ.ಮೀ ದೂರದ ನಮ್ಮ ಚಾರಣ ಪ್ರಾರಂಭವಾಗುವ ಸ್ಥಳಕ್ಕೆ ೮:೩೦ ರ ಹೊತ್ತಿಗೆ ಎಲ್ಲಾ ಚಾರಣಿಗರು ಬಂದಿಳಿದೆವು.


ಆ ಎರಡೂ ವಾಹನಗಳಿಗೆ ೬೦೦ ರೂಪಾಯಿ ಹಣ ನೀಡಿ, ಮೊದಲೇ ಚಿಕ್ಕಮಗಳೂರಿನ ಕಾಮತ್ ಹೋಟೇಲಿನಿಂದ ಕಟ್ಟಿಸಿಕೊಂಡು ಬಂದಿದ್ದ ತಿಂಡಿಯ ಪೊಟ್ಟಣಗಳನ್ನ (೨ ಚಪಾತಿ + ಖಾರಾ ಭಾತ್) ಪ್ರತಿಯೊಬ್ಬರು ಪಡೆದು, ನಮ್ಮ ಕಾಲಿಗೆ ಜಿಗಣೆಗಳು ಹತ್ತದಂತೆ ಮನೋಹರ ತಂದಿದ್ದ Body sprayಯನ್ನ ಹಾಕಿಸಿಕೊಂಡು ಚಾರಣದ ಹಾದಿಯಲ್ಲಿ ನಡೆದೆವು.


ಈ ಸ್ಥಳಕ್ಕೆ ಸರ್ಪಹಾದಿ ಎಂದು ಹೆಸರು. ಇಲ್ಲಿಂದಲೇ ನಮ್ಮ ಚಾರಣದ ಆರಂಭ. ಚಾರಣದ ಹಾದಿ ಹಾವಿನ ಮಾದರಿಯಲ್ಲಿ ಇದ್ದದ್ದರಿಂದಲೇ ಆ ಹೆಸರು ಬಂದಿರಬೇಕು. ನಮ್ಮ ಹಾದಿ ಸರ್ಪಹಾದಿಯ ಕಮಾನಿನಿಂದ ಪ್ರಾರಂಭವಾಯ್ತು. ಹಾದಿ ಸ್ವಲ್ಪ ಕಡಿದಾಗಿದ್ದರೂ ಬಹಳ ಕಠಿಣವಾಗಿರಲಿಲ್ಲ. ಪಕ್ಕಾ ಹಾವಿನ ಹಾದಿಯಂತೆ Zig-zag ಆಗಿತ್ತು. ಹಾದಿಬದಿಯಲ್ಲಿ ಹಲವಾರು ಪದರಗಳೊಳಗೊಂಡ ಬಂಡೆಗಲ್ಲುಗಳು ಸುಂದರವಾಗಿದ್ದವು. ಚಾರಣದ ಆರಂಭದಲ್ಲಿ ಸಾಧಾರಣ ಕ್ಯಾಮರಾ ತಂದಿದ್ದ ನನಗೆ ನಮ್ಮನ್ನ ಸುತ್ತುವರೆದಿದ್ದ ಮಂಜಿನಿಂದ ಹೆಚ್ಚು Photoಗಳನ್ನ ತೆಗೆಯಲಾಗಲಿಲ್ಲ :(


ಚಾರಣದ ಪ್ರಾರಂಭದಿಂದ ಅಂತ್ಯದವರೆಗೂ ನಮ್ಮೊಡನೆ "ನಿಷ" ಇದ್ದದ್ದು ಒಂದುರೀತಿಯಲ್ಲಿ ಸಂತಸದ ವಿಷಯವಾದರೂ ಮತ್ತೊಂದೆಡೆ ಬೇಸರ ತರಿಸಿತ್ತು. ಅಂದಹಾಗೆ ಈ "ನಿಷ" ಯಾರೆಂದು ಕುತೂಹಲವಿದ್ದಲ್ಲಿ ಹೇಳಿಬಿಡುತ್ತೇನೆ. ೨೦೦೮ರ ನವೆಂಬರಿನ ಕೊನೆಯವಾರದಲ್ಲಿ ತಮಿಳುನಾಡಿಗೆ ಅಪ್ಪಳಿಸಿದ್ದ ಚಂಡಮಾರುತದ ಹೆಸರೇ "ನಿಷ" ಇದರಿಂದ ನಮಗಾದ ಉಪಯೋಗ ಅಂದರೆ ಚಾರಣದಲ್ಲಿ ಎಲ್ಲಿಯೂ ನಾವು ಬಿಸಿಲಿನ ತಾಪದಿಂದ ಬಳಲಲಿಲ್ಲ ಆದ್ದರಿಂದ ಸಂತಸ :). ಬೇಸರದ ವಿಷಯ ಎಂದರೆ ನಿಸರ್ಗದ ಸೊಬಗನ್ನು ನಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಲಿಲ್ಲ ಎಂಬುದು :|. ಚಂಡಮಾರುತದ ಪ್ರಭಾವ ಎಷ್ಟಿತ್ತೆಂದರೆ ದಟ್ಟವಾದ ಮಂಜು ನಮ್ಮ ದೃಷ್ಟಿ ೧೦ಮೀಟರ್ ಮೀರಿ ಹೋಗದಂತೆ ತಡೆ ಹಿಡಿದಿತ್ತು. ನನ್ನ ಹಿಂದಿನ ಕೆಲವು ಚಾರಣದಲ್ಲಿ ವರುಣನ ಜೊತೆಯಾದರೆ ಇಲ್ಲಿ ಮಂಜಿನ ಜೊತೆಗೇ ನಮ್ಮ ಚಾರಣ ಮುಂದುವರೆದಿತ್ತು.


ನಮ್ಮಂತೆಯೇ ಹಲವು ಚಾರಣಿಗರು ಇಲ್ಲಿ ಆಗಾಗ ಬರುವುದುಂಟು, ಹಾಗಾಗಿ ಕಾಲುದಾರಿ ನಮಗೆ ಸ್ಪಷ್ಟವಾಗೇ ಕಾಣುತ್ತದೆ. ಇದು ಆರಂಭದ ಹಂತ ಮಾತ್ರ. ಮಂಜಿನ ಕಾರಣದಿಂದ ನಮಗೆ ಬೆಟ್ಟದಮೇಲಿನ ದೊಡ್ಡ ಬಂಡೆ ಕಾಣಲಿಲ್ಲ, ಸೂರ್ಯನ ಬೆಳಕಿದ್ದಲ್ಲಿ ಅದು ಗೊಚರಿಸುತ್ತದೆ ಎಂದು ಹರ್ಷನಿಂದ ತಿಳಿದುಬಂತು. ಹಾದಿಯುದ್ದಕ್ಕೂ ಹುಲ್ಲು ಹಾಸಿನ ಮೇಲೆ ಮಂಜಿನ ಹನಿಗಳು ಮುತ್ತಿನ ಮಾಲೆಯಂತೆ ಕಾಣಿಸುತ್ತಿತ್ತು. ಸಾಧ್ಯವಾದಷ್ಟೂ ಅವುಗಳನ್ನ ನನ್ನ ಕ್ಯಾಮರದಲ್ಲಿ ಸೆರೆ ಹಿಡಿದೆ. ಮಾರ್ಗಮಧ್ಯದಲ್ಲಿ ಸ್ವಲ್ಪ ಹಾದಿ ತಪ್ಪಿ ಬೇರೆ ಹಾದಿ ಹಿಡಿದು ಹೊರಟಿದ್ದೆವು, ನಂತರ ಮರಳಿ ಸರಿಯಾದ ದಾರಿಯಲ್ಲಿ ನಮ್ಮ ಪಯಣ ಮುಂದುವರೆಯಿತು.





ಅಂದಾಜು ಅರ್ಧ ದಾರಿಯಾದಮೇಲೆ ಒಂದು ನಂದಿಯ ವಿಗ್ರಹವನ್ನು ಕಾಣಬಹುದು. ಸೂರ್ಯನ ಬೆಳಕಿದ್ದಲ್ಲಿ ಇಲ್ಲಿಂದಲೇ ದೇವಸ್ಥಾನದ ಗೋಪುರವನ್ನ ನೋಡಬಹುದಂತೆ. ಅಲ್ಲಿಂದ ಸುಮಾರು ೧೦-೧೫ ನಿಮಿಷಗಳ ಚಾರಣದ ನಂತರ ನಮಗೆ ಒಂದು ಗುಹೆ ಕಾಣಿಸಿತು.


ನಮ್ಮಲ್ಲಿ ಕೆಲವರು ಆಲ್ಲಿಗೆ ಹೋಗಿ ಅದರ ಒಳಹೊಕ್ಕು ಕೆಲವು Photoಗಳನ್ನ ಕ್ಲಿಕ್ಕಿಸಿ ಮತ್ತೆ ದೇವಸ್ಥಾನದ ದಾರಿ ಹಿಡಿದೆವು. ದೇವಸ್ಥಾನ ತಲುಪುವ ಹೊತ್ತಿಗೆ ಸಮಯ ಅಂದಾಜು ೧೦:೧೫ ಆಗಿತ್ತು.



ಮೊದಲಿದ್ದ ದೇವಸ್ಥಾನವನ್ನ "ಜೀರ್ಣೊದ್ಧಾರ" ಮಾಡುತ್ತಿದ್ದರು, ಹಾಗಾಗಿ ಅಲ್ಲಿ ಹಲವು ಕಾರ್ಮಿಕರು ಮತ್ತು ಹತ್ತಿರದ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಇದ್ದರು. ನಮ್ಮನ್ನೆಲ್ಲಾ ನೋಡಿ ಮಂಜಿನ ನಡುವೆ ನಮ್ಮ ಚಾರಣಮಾಡುವ ಉತ್ಸಾಹ ಕಂಡು ಅಚ್ಚರಿ ಪಟ್ಟರು. ಅಲ್ಲಿಯ ಪ್ರಧಾನ ಅರ್ಚಕರಿಂದ ನೆನ್ನೆ ಬಾಬಾಬುಡನ್ ಗಿರಿ ಮತ್ತು ಸುತ್ತಲ ಪ್ರದೇಶಗಳಲ್ಲಿ ಧರಾಕಾರವಾಗಿ ಮಳೆಯಾಗಿ ಮಣ್ಣು ಕುಸಿದಿರುವುದು ತಿಳಿದುಬಂತು. ಅಲ್ಲಿಯೇ ಸ್ವಲ್ಪ ಹೊತ್ತು ಕೂತಿದ್ದು ಅರ್ಚಕರ ಮನೆಯಲ್ಲಿ ನಾವು ಕೊಂಡೊಯ್ದಿದ್ದ ಹಾಲನ್ನು ಅವರಿಗೆ ನೀಡಿ ಅವರಿಂದ ಕಾಫೀ ಮಾಡಿಸಿಕೊಂಡು ಕುಡಿದು ಅವರು ಸಾಕಿದ್ದ ಬೆಕ್ಕಿನ Photoಗಳನ್ನ ಸೆರೆ ಹಿಡಿದು ಪರ್ವತದಂಚಿನ ಕಡೆಗೆ (Ridge) ನಮ್ಮ ಪಯಣಬೆಳೆಸಿದೆವು.





ನಾವು ಮುಳ್ಳಯ್ಯನ ಗಿರಿಯಿಂದ ಬಾಬಾ ಬುಡನ್ ಗಿರಿಯನ್ನು ತಲುಪಲು ಪರ್ವತಗಳ ಅಂಚಿನಲ್ಲೇ ಸಾಗಬೇಕಿತ್ತು.




ಆ ದಟ್ಟವಾಗಿ ಕವಿದಿದ್ದ ಮಂಜಿನ ನಡುವೆ GPSನ ಸಹಾಯದಿಂದ ಸರಿಯಾದ ದಾರಿಯಲ್ಲೇ ಹೋಗುತ್ತಿದ್ದೆವು. ನಮ್ಮ ಸಧ್ಯದ ಗುರಿಯಿದ್ದದ್ದು ನಮ್ಮ Lunch point ನೆಡೆಗೆ. ನಾವು ದೇವಸ್ಥಾನದಿಂದ ಹೊರಟಾಗ ಅಂದಾಜು ೧೧:೧೫ ರ ಸಮಯ. ನಮ್ಮ Lunch point ತಲುಪಲು ನಾವು ಪರ್ವತದಿಂದ ಇಳಿದು ಮತ್ತೆ ನಮ್ಮ ಊಟದ ಕಾರ್ಯಕ್ರಮವನ್ನ ಮುಗಿಸಿ ಮುಂದೆ ಸಾಗಬೇಕಿತ್ತು. ಇಂತಹಾ ಸ್ಥಳಗಳಲ್ಲಿ ಸಂಜೆಯ ಹೊತ್ತಿಗೆ ಸುರಿಯುವ ಮಳೆ ಸಾಮಾನ್ಯ. ಮಳೆಯನಡುವೆ ಪರ್ವತದ ಅಂಚಿನಲ್ಲಿ ಚಾರಣ ಮಾಡುವುದು ಕಷ್ಟವಾದ್ದರಿಂದ ಅಲ್ಲಿದ್ದ ಅನುಭವಿ ಚಾರಣಿಗರು ಎಲ್ಲರನ್ನೂ ಸಾಧ್ಯವಾದಷ್ಟು ಬೇಗ ಗುರಿ ಮುಟ್ಟಿಸಲು ನಮ್ಮೆಲ್ಲರನ್ನು ಹುರಿದುಂಬಿಸುತ್ತಿದ್ದರು. ಅಂದಾಜು ಒಂದು ಘಂಟೆಯ ಚಾರಣದ ನಂತರ ಸ್ವಲ್ಪ ಸ್ವಲ್ಪವಾಗಿ ಸೂರ್ಯಕಿರಣ ಕಾಣಲಾರಂಭಿಸಿತು. :) ಆದರೆ ಅದು ಇದ್ದದ್ದು ಕೇವಲ ೫ ನಿಮಿಷಗಳು ಮಾತ್ರ. ಆದರೂ ಆ ನಡುವೆಯೇ ನಮಗೆ ಛಾಯಾಗ್ರಹಣಕ್ಕೆ ಸಮಯ ಸಿಕ್ಕಿತ್ತು. ಮೋಡಗಳು ನಮ್ಮ ಕಾಲಕೆಳಗೆ ತೇಲಾಡುತ್ತಿದ್ದವು. ಇದುವರೆವಿಗೂ ಮೋಡದ ಒಳಗೇ ಚಾರಣ ಮಾಡುತ್ತಿದ್ದ ನಮಗೆ ಪ್ರಕೃತಿಯ ಸೊಬಗು ಕಂಡಿದ್ದು ಆ ೫ ನಿಮಿಷಗಳಲ್ಲೇ ಹೆಚ್ಚು. ಪರ್ವತಗಳ ನಡುವೆ ಕಂಡುಬರುವ ಕಣಿವೆಗಳ ನೋಟ, ಮೋಡಗಳ ತೇಲಾಟ ಎಲ್ಲವೂ ನಯನ ಮನೋಹರವಾಗಿತ್ತು.

ಇದುವರೆವಿಗೂ ತಮ್ಮ ಬ್ಯಾಗಿನಲ್ಲಿ ಬೆಚ್ಚಗೆ ಕುಳಿತಿದ್ದ ಎಲ್ಲಾ ಕ್ಯಾಮರಗಳೂ ಆ ಸೊಬಗನ್ನು ನೋಡಲು ಹೊರಗೆ ಬಂದಿದ್ದವು. ಅಲ್ಲಿ ಕ್ಯಾಮರ ಹೊಂದಿದ್ದ ಪ್ರತಿಯೊಬ್ಬರೂ ಆಗ ಅತ್ಯುತ್ತಮ ಛಾಯಾಗ್ರಾಹಕರೇ !!!! :D




ನಾವೆಲ್ಲಾ ಸುಮಾರು ೧೨:೪೦ ರ ಹೊತ್ತಿಗೆ Lunch point ತಲುಪಿದ್ದೆವು. ನಮ್ಮ Lunch point ಒಂದು Tar-roadನ ಹತ್ತಿರವಿದ್ದ View point. ಅಲ್ಲಿಂದ ಸುತ್ತಮುತ್ತಣ ಪರ್ವತ ಶ್ರೇಣಿಗಳು, ನಿಸರ್ಗದ ಹಸಿರಿನ ಸಿರಿ ಎಲ್ಲಾ ರಮಣೀಯವಾಗಿ ಕಾಣುತ್ತಿತ್ತು. ನಾವು ಊಟಮಾಡಲು ಆಯ್ಕೆಮಾಡಿದ ಸ್ಥಳದಲ್ಲಿಯೇ ಚಿಕ್ಕಮಗಳೂರಿನ ಕೆಲವು ಪ್ರಾಧ್ಯಾಪಕರು, ಮತ್ತೆ ಕೆಲವು Business men ಗಳೂ ಸೇರಿ ಅಲ್ಲಿ ತಮ್ಮ Party ಆಚರಿಸಲು ಬಂದಿದ್ದರು :P. ಅವರೊಡನೆ ಸ್ವಲ್ಪ ಮಾತುಕತೆಯಾದ ನಂತರ ನಮಗೆ ಅವರಿಂದ ಸ್ವಲ್ಪ ತಿಂಡಿ ಮತ್ತು ಹಣ್ಣುಗಳು ಸಿಕ್ಕಿತು. ಸುಮಾರು ೧೨:೪೦ ರ ಹೊತ್ತಿಗೆ ನಮ್ಮ ಊಟದ ಕಾರ್ಯಕ್ರಮ ಸಂಪನ್ನ ಗೊಂಡಿತ್ತು.




ಅಲ್ಲಿ ಬಂದವರೊಂದಿಗೆ ಕೆಲವು Photo ತೆಗೆಸಿಕೊಂಡು ಅಲ್ಲಿಂದ ಸುಮಾರು ೧೩:೩೦ರ ಹೊತ್ತಿಗೆ ನಮ್ಮ ಚಾರಣವನ್ನು ಮುಂದುವರೆಸಿದೆವು. ನಮ್ಮ ಮುಂದಿನ ಗುರಿ ಇದ್ದದ್ದು BSNLನ tower ಬಳಿಗೆ. ಸಾಮಾನ್ಯ ದಿನಗಳಂದು ಬರಿಗಣ್ಣಿಗೆ ಕಾಣುವ ಈ tower ಅಂದು ಮುಸುಕಿದ್ದ ಮಂಜಿನ ಕಾರಣದಿಂದ ನಮಗೆ ಕಾಣಿಸಲಿಲ್ಲ. GPSನ ಸಹಾಯ ಪಡೆದು ಪರ್ವತದ ಮತ್ತೊಂದು ತುದಿಯಲ್ಲಿದ್ದ ಆ towerನೆಡೆಗೆ ನಾವೆಲ್ಲಾ ಪರ್ವತದ ಅಂಚಿನಲ್ಲಿ ಹೆಬ್ಬಂಡೆಗಳ ನಡುವೆ ಸಾಹಸ ಪಡುತ್ತಾ ನಡೆಯುತ್ತಿದ್ದೆವು. ನಮ್ಮ ಗುರಿಯಿದ್ದದ್ದು ಆ ಟವರ್ರಿನ ಬಳಿಯಿರುವ ರಸ್ತೆ ಸೇರಿ ಅಲ್ಲಿಂದ ಅಂದಾಜು ೭ ಕಿ.ಮೀ ದೂರವನ್ನ ಕ್ರಮಿಸಿ ಬಾಬಾ ಬುಡನ್ ಗಿರಿಯನ್ನು ತಲುಪಬೇಕೆನ್ನುವುದು. ಅದಕ್ಕಾಗಿ ನಾವು ಹುಲ್ಲುಗಾವಲುಗಳು ಮತ್ತು ಹೆಬ್ಬಂಡೆಯಿಂದ ಕೂಡಿದ ಪರ್ವತಗಳನ್ನ ದಾಟಿ ಹೋಗಬೇಕಿತ್ತು.



ನಾವು ನಡೆಯುತ್ತಿದ್ದ ಹಾದಿಯಲ್ಲಿ ಯಾವುದೇ ಕಾಲುದಾರಿಯ ಕುರುಹುಗಳಿರದ ಕಾರಣ ನಮ್ಮ ದಾರಿಯನ್ನು ನಾವೇ ಕಂಡುಕೊಂಡು ಮುನ್ನಡೆಯಬೇಕಿತ್ತು. ಹೀಗಿರುವಾಗ ಮಾರ್ಗಮಧ್ಯದಲ್ಲಿ ನಮಗೆ ಹೆಬ್ಬಂಡೆಯೊಂದು ಎದುರಾಗಿ ಎತ್ತಕಡೆ ಹೋಗುವುದು ಎಂದು ಯೋಚಿಸುವಂತಾಯಿತು. ಸ್ವಲ್ಪ ವಾಲಿಕೊಂಡಿದ್ದ ಆ ಬಂಡೆಯನ್ನು ದಾಟಿ ಹೋಗಲು ಒಂದೋ ಅದರ ಕೆಳಗಿನಿಂದ ಇದ್ದ ಸ್ವಲ್ಪವೇ ಜಾಗದಲ್ಲಿ ನುಸುಳಿಕೊಂಡು ಹೋಗಬೇಕು, ಇಲ್ಲವಾದಲ್ಲಿ ಅದನ್ನ ಜಾಗ್ರತೆಯಿಂದ ಹತ್ತಿ ದಾಟಬೇಕಾಗಿತ್ತು. ಎರಡೂ ಕಷ್ಟವಾದ ಕೆಲಸಗಳೇ. ಮಂಜಿನಿಂದ ಸ್ವಲ್ಪ ಒದ್ದೆಯಾಗಿದ್ದ ಆ ಬಂಡೆಯ ಕೆಳಗೆ ನುಸುಳುವಾಗ ಅಥವಾ ಹತ್ತಿ ದಾಟುವಾಗ ಆಯತಪ್ಪಿದಲ್ಲಿ ಪರ್ವತದಿಂದ ನೇರವಾಗಿ ಕೆಳಗೆ ಬೀಳುವುದೇ !!!! ನಮ್ಮಲ್ಲಿ ಕೆಲವರು ಆ ಬಂಡೆಯ ಕೆಳಗಿನಿಂದ ನುಸುಳಿದರೆ ಮಿಕ್ಕವರು ಅದನ್ನು ಏರಿಕೊಂಡು ಹಾಗೂ ಹೀಗೂ ದಾಟಿ ಬಂದರು. ಕೆಲವು ಬಂಡೆಗಳು ಮಂಜಿನ ನೀರಿಗೆ ಒದ್ದೆಯಾದ್ದರಿಂದ ನಮ್ಮ ಕಾಲುಗಳು ಜಾರುತ್ತಲಿದ್ದವು. ಇಂತಹಾ ಸಮಯದಲ್ಲಿ ನಿಮ್ಮ ಅನುಭವ ಮತ್ತು ತಾಳ್ಮೆಯೇ ನಿಮಗೆ ಶ್ರೀರಕ್ಷೆ. ಒಂದು ಹಂತದಲ್ಲಿ ನಮ್ಮೊಂದಿಗೆ ಬಂದಿದ್ದ ಪ್ರವೀಣ್ ಆ ಬಂಡೆಗಳನ್ನು ಹತ್ತಲಾಗದೇ ನಮ್ಮ Lunch Point ಗೆ ಮರಳಿ ಅಲ್ಲಿಂದ ಇದ್ದ ರಸ್ತೆಯಲ್ಲಿ ಯಾವುದಾದರೂ ಬಸ್ ಹಿಡಿದು ಬಾಬಾ ಬುಡನ್ ಗಿರಿಗೆ ಬರುವುದಾಗಿ ಹೇಳಿದರೂ ನಂತರ ಪ್ರಯಾಸದಿಂದ ನಮ್ಮ ಮಾರ್ಗದಲ್ಲೇ ಬಂದದ್ದು ನಮಗೂ ಮತ್ತು ಅವನಿಗೂ ಖುಷಿತಂದಿತ್ತು.


ಬಂಡೆಗಳನ್ನ ದಾಟಿ ನಂತರ ಹುಲ್ಲುಗಾವಲಿನ ಚಾರಣ ಆರಂಭವಾಯಿತು. ಇಷ್ಟು ಹೊತ್ತಿಗೆ ನಮ್ಮನ್ನಾವರಿಸಿದ್ದ ಮಂಜು ಕರಗಿದ್ದದ್ದರಿಂದ ನಮಗೆ ದೂರದಲ್ಲಿ ನಿಂತಿದ್ದ ಟವರ್ ಕಾಣುತ್ತಿತ್ತು. ಬಂಡೆಗಳನ್ನ ಹತ್ತುವ ಸಾಹಸವಿಲ್ಲದ್ದರಿಂದ ಎಲ್ಲಾ ಹುಲ್ಲುಗಾವಲಿನಲ್ಲಿ ಸ್ವಲ್ಪ ಸುಧಾರಿಸಿಕೊಂಡು ನಡೆಯುತ್ತಿದ್ದೆವು. ಇದೇ ಜಾಗದ ಸಪೀಪದಲ್ಲಿ ಇರುವುದೇ "ಮಾಣಿಕ್ಯಧಾರಾ". ನಾವೆಲ್ಲಾ ಸುಮಾರು ೧೬:೦೦ ರ ಹೊತ್ತಿಗೆ BSNL ಟವರ್ರಿನ ಹತ್ತಿರವಿರುವ ಪಾಳುಬಿದ್ದಿದ್ದ ಪೋಲೀಸ್ ಚೆಕ್ ಪೋಸ್ಟ್ ಬಳಿ ಬಂದೆವು. ಅಲ್ಲಿ ಕೆಲವರು ಕುಳಿತುಕೊಂಡು ಸುಧಾರಿಸಿಕೊಂಡರೆ ಮಿಕ್ಕವರು ಆ ಟವರ್ರನ್ನು ಹತ್ತುವ ಸಾಹಸ ಮಾಡುತ್ತಿದ್ದರು. :D


ಅಲ್ಲಿಂದ ನಮ್ಮ ಚಾರಣ ೧೪:೩೦ಕ್ಕೆ ಮತ್ತೆ ಪ್ರಾರಂಭವಾಗಿ ಡಂಬಾರು ರಸ್ತೆಯ ಮೂಲಕ ಬಾಬಾ ಬುಡನ್ ಗಿರಿಯತ್ತ ಹೊರಟಿತ್ತು. ಮಾರ್ಗಮಧ್ಯದಲ್ಲಿ ನಮಗೆ ಕೆಲವು ಸುಂದರವಾದ Photoಗಳು ಸೆರೆ ಸಿಕ್ಕವು. ನಾವಲ್ಲಿಂದ ಹೋಗುತ್ತಿದ್ದಂತೆಯೇ ನಮ್ಮನ್ನ ಗಾಳೀಕೆರೆಗೆ ಕರೆದೊಯ್ಯಲು ಜೀಪ್ ಡ್ರೈವರ್ ಗಳು ಪೈಪೋಟಿ ನಡೆಸುತ್ತಿದ್ದರು. ಕೊನೆಗೆ ಒಂದು ಜೀಪ್ ಚಾಲಕನ ಹತ್ತಿರ ಹರ್ಷ ಮಾತನಾಡಿ ಚರ್ಚೆ ಮಾಡಿ ಅವನಿಗೆ ನಮ್ಮ ಲಘು ಉಪಹಾರವನ್ನು ಮುಗಿಸುವ ವರೆಗೆ ಕಾಯುವಂತೆ ಹೇಳಿ ಹೊಟೇಲಿನ ಕಡೆಗೆ ನಡೆದೆವು, ಸಮಯ ಸುಮಾರು ೧೭:೧೫ ಆಗಿರಬಹುದು. ನಾನು, ಹರ್ಷ, ಪ್ರವೀಣ್ ಮತ್ತೆ ವಿಶ್ವನಾಥ್ ಸಸ್ಯಾಹಾರಿಗಳಾದ್ದರಿಂದ ಪರೋಟ ಮತ್ತು ದಾಲ್ ತಿಂದರೆ ಮಿಕ್ಕವರು ಆಮ್ಲೇಟನ್ನು ಸವಿದರು. ಅಲ್ಲಿಂದ ಕೇವಲ ೧೦ ನಿಮಿಷದ ದಾರಿಕ್ರಮಿಸಿದ ನಂತರ ನಮ್ಮ ಮುಂದಿನ ಗುರಿ ಸಿಕ್ಕಿಬಿಟ್ಟಿತು, ಅದೇ ಗಾಳೀಕೆರೆ. ಇಷ್ಟು ಹೊತ್ತಿಗೇ ಸಂಜೆ ೧೮:೩೦ರ ಸಮಯ, ಮಂಜು ನಮ್ಮನ್ನು ಸ್ವಲ್ಪ ಸ್ವಲ್ಪವಾಗೇ ನುಂಗುತ್ತಿತ್ತು.


ಸಂಜೆ ಅಲ್ಲಿಯೇ Camping ಆದ್ದರಿಂದ ನಾವೆಲ್ಲಾ ನಮ್ಮ ಬೆನ್ನ ಮೇಲಿದ್ದ ಹೊರೆಯನ್ನು ಕೆಳಗಿಳಿಸಿ ಸ್ವಲ್ಪ ವಿಶ್ರಾಂತಿ ಪಡೆದೆವು. ಪರ್ವತಗಳಿಂದ ಮೂರೂಕಡೆಗಳಿಂದ ಆವರಿಸಲ್ಪಟ್ಟ ಪ್ರದೇಶವಿದು. ಮತ್ತೊಂದೆಡೆ ದೊಡ್ಡ ಕಣಿವೆ, ಅಲ್ಲಿಯೇ ಒಂದು ಪುಟ್ಟ ಕೆರೆ. ಆ ಕೆರೆ ಎಷ್ಟು ದೊಡ್ಡದೆಂದು ನೋಡಲಾಗಲಿಲ್ಲ, ಎತ್ತನೋಡಿದರೂ ಅಲ್ಲಿ ಬರೀ ಮಂಜನ್ನು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ. ಆ ಸ್ಥಳದಲ್ಲಿ ಒಂದು ಗುಡಿಸಲಿನ ಅಳಿದುಳಿದ ಕಂಬಗಳಿದ್ದವು. ಅಲ್ಲಿ ೩ Tentಗಳನ್ನು ಹಾಕಲು ಸ್ಥಳಾವಕಾಶವಿಲ್ಲದ್ದರಿಂದ ಅಲ್ಲಿಂದ ಸ್ವಲ್ಪ ಮುಂದೆ ಸಮತಟ್ಟಾದ ಪ್ರದೇಶದಲ್ಲಿ ನಮ್ಮ Tentಗಳನ್ನ ಹಾಕುವುದಾಗಿ ನಿರ್ಧರಿಸಿ Tentಗಳನ್ನ ಹಾಕಲು ಶುರುಮಾಡಿದೆವು. ಸಂಜೆ ಮಂಜು ಮುಸುಕಿದ್ದರಿಂದ ಬಹಳ ಬೇಗ ಕತ್ತಲು ಆವರಿಸುತ್ತಿತ್ತು. ಅನೀಸ್ ಮತ್ತು ತಂಡ ಬಿಸಿನೀರಿನ ವ್ಯವಸ್ಥೆಮಾಡಲು ಶುರುಮಾಡಿದರೆ ನಾವೆಲ್ಲಾ ಟೆಂಟ್ ಗಳನ್ನ ಹಾಕುತ್ತಿದ್ದೆವು.

ಟೆಂಟ್ ಹಾಕಿದನಂತರ ನಾವೆಲ್ಲಾ ಊಟಕ್ಕೆ ಹಾಜರಾದೆವು. ಅಂದಿನ ಊಟ MTRರವರ Ready to eat Rice items ಆಗಿತ್ತು. ತಯಾರಿಸಲು ಬಹಳ ಸುಲಭವಾದ ಆ ಪ್ಯಾಕೇಟುಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ ೫ ನಿಮಿಷಗಳಕಾಲ ಬಿಟ್ಟರೆ ಬಿಸಿ ಬಿಸಿಯಾದ ರುಚಿ ರುಚಿಯಾದ ಅಡುಗೆ ಸಿದ್ದ. ಆದರೆ ಆ ಮಂಜು ಮುಸುಕಿದ್ದ ಬೆಟ್ಟದಲ್ಲಿ ಕುದಿಯುವ ನೀರನ್ನು ಸಿದ್ದಪಡಿಸುವುದೇ ಒಂದು ಸಾಹಸ. ಅಂತೂ ಇಂತೂ ಅನೀಸ್ ಮತ್ತವನ ತಂಡದಿಂದ ನಮ್ಮೆಲ್ಲರ ಊಟದ ಕಾರ್ಯಕ್ರಮ ಮುಗಿದಿತ್ತು.

ಕತ್ತಲು ಬೇಗನೇ ಆವರಿಸಿದ್ದರಿಂದ ಸುಮಾರು ೮.೩೦ಕ್ಕೆ ನಾವೆಲ್ಲಾ ನಮ್ಮ ನಮ್ಮ ಟೆಂಟಿನಲ್ಲಿ ಮಲಗಿದ್ವಿ. ನಾನು ಮತ್ತು ಪ್ರವೀಣ್ ಒಂದು ಟೆಂಟಿನಲ್ಲಿ ಮಲಗಿದ್ವಿ. ನಮ್ಮ ಟೆಂಟ್ ಸ್ವಲ್ಪ ಮಧ್ಯದಲ್ಲಿ ಇದ್ದದ್ದರಿಂದ ನಮಗೇನೂ ತೊಂದರೆ ಆಗಲಿಲ್ಲ. ಆದರೆ ಮಿಕ್ಕ ೨ ಟೆಂಟ್ ಗಳಲ್ಲಿದ್ದವರಿಗೆ ನಿದ್ರೆ ಇರಲಿಲ್ಲ ಅಂತ ಬೆಳಗ್ಗೆ ನಾನು ಎದ್ದಮೇಲೆ ತಿಳಿದದ್ದು. ರಾತ್ರಿ ರಭಸದಿಂದ ಬೀಸಿದ ಗಾಳಿ ಎರಡರಲ್ಲಿ ಒಂದು ಟೆಂಟಿನ ಮೇಲ್ಚಾವಣಿಯನ್ನ ಹಾರಿಸಿತ್ತಂತೆ. ನಂತರ ಅವರೆಲ್ಲಾ ಬೇರೆಕಡೆಗಳಲ್ಲಿ ಮತ್ತೆ ಟೆಂಟನ್ನ ಹಾಕಿ ಮಲಗಿದ್ರಂತೆ. ನಾವಿಬ್ಬರೂ ಚೆನ್ನಾಗಿ ನಿದ್ದೆ ಮಾಡಿದ್ವಿ :)

ಎರಡನೇ ದಿನ (ಭಾನುವಾರ) ನಮ್ಮ ಪಯಣ ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಗೆ ಹೋಗಿ ಅಲ್ಲಿಂದ ಬೀರೂರಿನಲ್ಲಿರುವ ರೈಲ್ವೇನಿಲ್ದಾಣಕ್ಕೆಬಂದು ಅಲ್ಲಿಂದ ಬೆಂಗಳೂರಿನ ಕಡೆಗೆ.

ಬೆಳಗ್ಗೆ ೬.೩೦ಕ್ಕೆ ಎದ್ದು, ನಮ್ಮ ಎಲ್ಲಾಕೆಲಸವನ್ನೂ ಮುಗಿಸಿ ತಿಂಡಿ ತಿಂದು ಪಯಣ ಮುಂದುವರೆಸಿದೆವು. ಬೆಳಗಿನ ತಿಂಡಿಗೆ Cornflakes ಮತ್ತು ಹಾಲು.

ಮುರಿದು ಹೋಗಿದ್ದ ಗುಡಿಸಲಿನ ಮಧ್ಯದಲ್ಲಿ ಮೂರುಕಲ್ಲುಗಳನ್ನು ಇಟ್ಟು ಒಲೆ ಹತ್ತಿಸಿ ಹಾಲನ್ನು ಬಿಸಿಮಾಡಿಕೊಂಡು ಅದಕ್ಕೆ Cornflakes ಹಾಕಿ ತಿಂದೆವು. ನಾನು ಕೊಂಡೊಯ್ದಿದ್ದ ಸೌತೇಕಾಯಿಯನ್ನು ತಿನ್ನಲು ಇನ್ನೂ ಸಮಯ ಬಂದಿರದ ಕಾರಣ ಅದನ್ನು ಮತ್ತೆ ನನ್ನ ಬ್ಯಾಗಿಗೆ ಹಾಕಿಕೊಂಡು ಅಲ್ಲೇ ಕೆಲವು photo ಕ್ಲಿಕ್ಕಿಸಿ ಅಂದಾಜು ೮.೩೦ಕ್ಕೆ ನಮ್ಮ ಪಯಣ ಅಲ್ಲಿಂದ ಉತ್ತರದಿಕ್ಕಿನೆಡೆಗೆ ಮುಂದುವರೆಯಿತು. ದಟ್ಟವಾದ ಮಂಜು ಮುಸುಕಿದ್ದರಿಂದ ನಮ್ಮ ಎಲ್ಲಾ ಕಾರ್ಯಗಳೂ ನಿಧಾನಗತಿಯಲ್ಲಿ ಸಾಗುತ್ತಿತ್ತು.

ಅಂದಾಜು ೧೪ ಕಿಲೋಮೀಟರಿನ ಈ ಹಾದಿ ಕಠಿಣವಾದ ಹಾದಿಯೇನಲ್ಲ. ಮಾರ್ಗಮಧ್ಯದಲ್ಲಿ ನಮಗೆ ಹಲವಾರು ಶೋಲಾಗಳು (ಎರಡುಪರ್ವತಗಳು ಸೇರುವ ಮಧ್ಯದ ಕಾಡು) ಮತ್ತೆ ಕೆಲವು ಪರ್ವತದ ಅಂಚು ಮತ್ತೆ ಕೆಲವು ಝರಿಗಳು ಈ ಮಾರ್ಗದಲ್ಲಿ ಸಿಕ್ಕುತ್ತವೆ.


ಮಾರ್ಗ ಪೂರ್ಣವಾಗಿ ಮಂಜು ಮುಸುಕಿದ್ದರಿಂದ ಪ್ರತಿಯೊಬ್ಬರೂ ನಿರ್ಧಿಷ್ಟ ಅಂತರದಲ್ಲಿ ಮುಂದುವರೆಯುತ್ತಿದ್ದೆವು. ಹೆಚ್ಚುದೂರ ಬಂದರೆ ಇಬ್ಬರ ನಡುವೆ ಮಂಜು ಆವರಿಸಿ ದಾರಿ ಕಾಣಿಸುತ್ತಿರಲಿಲ್ಲ. ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಯ ವರೆಗೂ ಇರುವ ಹಾದಿಯನ್ನ "ರಾಜ-ಹಾದಿ" ಎನ್ನುತ್ತಾರಂತೆ. ಹಿಂದೆ ರಾಜ ಮಹರಾಜರುಗಳು ಇದೇಹಾದಿಯಲ್ಲಿ ಕ್ರಮಿಸುತ್ತಿದ್ದರಂತೆ. ನಾವು ಚಾರಣ ಮಾಡುವಹೊತ್ತಿಗೆ ಆ ವಿಶಾಲವಾದ ಹಾದಿ ಬಹುತೇಕ ಗಿಡಗಂಟೆಗಳಿಂದ ಮುಚ್ಚಲ್ಪಟ್ಟಿತ್ತು. ನಮ್ಮೊಡನೆ GPS ಇಲ್ಲದಿದ್ದಲ್ಲಿ ಮಾರ್ಗಮಧ್ಯೆ ಕಳೆದುಹೋಗುವ ಸಂಭವ ಹೆಚ್ಚಿತ್ತು. ಚಾರಣದ ಮಧ್ಯೆ ಮಂಜಿಲ್ಲದ ದಿನಗಳಲ್ಲಿ ಹಾದಿ ಸುಗಮವಾಗಿರುತ್ತದೆ. ಮಾರ್ಗಮಧ್ಯೆ ನಮಗೆ ಅಂದಾಜು ೬-೭ ಶೋಲಾ ಕಾಡುಗಳು ಎದುರಾಗುತ್ತವೆ. ಅಲ್ಲೆಲ್ಲಾ ನಿಮ್ಮ ದಾರಿಯನ್ನು ನೀವೇ ಮಾಡಿಕೊಂಡು ಮುನ್ನಡೆಯಬೇಕು. ಸಹಚಾರಣಿಗರು ತಂದಿದ್ದ "ಖರ್ಜೂರ" ಮತ್ತು "ಟ್ಯಾಂಗ್" ಅನ್ನು ಸೇವಿಸುತ್ತಾ ಮಾರ್ಗ ಮಧ್ಯದಲ್ಲಿ ಜೋಫಿನ್ ಮತ್ತು ಸಂಗಡಿಗರ ನೃತ್ಯ ಕಾರ್ಯಕ್ರಮವನ್ನ ನೋಡಿಕೊಂಡು ಮುಂದುವರೆದೆವು. :) ಹರ್ಷ ಅದರ ವಿಡಿಯೋ ಚಿತ್ರಣ ಮಾಡಿದರು, ಮಂಜಿನ ಮಧ್ಯೆ ಹೇಗೆ ಮೂಡಿ ಬಂದಿತ್ತೂ... ನಾನು ನೋಡಲಾಗಲಿಲ್ಲ.

ಶೋಲಾ ಕಾಡುಗಳನ್ನೆಲ್ಲಾ ದಾಟಿ ಒಂದು ಬಯಲಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ಎಲ್ಲರಿಗೂ ದಣಿವಾದ್ದರಿಂದ ಮತ್ತೆ ನಮ್ಮ "ಟ್ಯಂಗ್" ಕುಡಿದು ಪಯಣ ಮುಂದುವರಿಸಿದೆವು. ಮಧ್ಯಹ್ನ ಅಂದಾಜು ೧೨.೦೦ ಘಂಟೆಗೆ ನಮ್ಮ ಮತ್ತೊಂದು ವಿರಾಮ. ಅಷ್ಟು ಹೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಲು ತನ್ನ ಕಿರಣಗಳನ್ನ ಬೀರಿದ್ದ, ಮಂಜು ಕರಗುತ್ತಿತ್ತು.

ಆ ಸ್ಥಳದ ಎದುರಿನಲ್ಲಿ ದಟ್ಟವಾದ ಕಾಡಿನಿಂದಾವೃತವಾದ ಕಣಿವೆ, ಮತ್ತು ಭದ್ರಾ ಅಣೇಕಟ್ಟೆಯ ನಯನ ಮನೋಹರವಾದ ದೃಷ್ಯ ನಮ್ಮ ದಣಿವನ್ನು ಮರೆಯಾಗಿಸಿತ್ತು. ಅಲ್ಲಿ ನಮ್ಮ ಕಣ್ಣುಗಳಲ್ಲದೇ ಕ್ಯಾಮರಾ ಕಣ್ಣುಗಳೂ ಆ ಸೊಬಗನ್ನ ಸೆರೆಹಿಡಿಯುತ್ತಿದ್ದವು.



ಆ ವಿರಾಮದಲ್ಲಿ ನಮಗೆಲ್ಲಾ ಮೊದಲೇ ತಂದಿದ್ದ Dil-pasand ಮತ್ತು Cream-bun ನೀಡಲಾಯಿತು. ನನ್ನ ಬ್ಯಾಗಿನಲ್ಲಿ ಇಲ್ಲಿಯ ತನಕ ಜೊತೆಯಾಗಿ ಬಂದಿದ್ದ ಸೌತೇಕಾಯಿಯನ್ನು ಎಲ್ಲರಿಗೂ ನೀಡಿ ನನ್ನ ಭಾರವನ್ನ ಕಡಿಮೆ ಮಾಡಿಕೊಂಡೆ ;) ಅಲ್ಲಿಂದ ಕೆಳಗೆ ಕಣಿವೆಯ ಕಡೆಗೆ ಇಳಿದರೆ ಒಂದು ಗುಹೆ ಇದೆಯಂತೆ, ನಮ್ಮಲ್ಲಿ ಕೆಲವರು ಅತ್ತಕಡೆಗೆ ಹೊರಟರು. ಮಿಕ್ಕವರು ಕೆಮ್ಮಣ್ಣುಗುಂಡಿಯ ಹಾದಿ ಹಿಡಿದೆವು. ಹಾಗೆಯೇ ಮುಂದೆ ಸಾಗುವಾಗ ಅಲ್ಲಿ ಮಹಾರಾಜರು ಹಿಂದೆ ತಂಗಲು ಬಳಸುತ್ತಿದ್ದ ಮಹಲಿನ ಪಳಯುಳಿಕೆ ಇದೆ. ದಾರಿಯುದ್ದಕ್ಕೂ ಪ್ರಕೃತಿಯ ಸೊಬಗನ್ನ ಸಾಧ್ಯವಾದಷ್ಟೂ ನನ್ನ ಕ್ಯಾಮರದ ಒಳಗಡೆ ತುಂಬಿಸುವ ಪ್ರಯತ್ನ ಮಾಡುತ್ತಾ ನಮ್ಮ ಅಂತಿಮವಾದ ಮತ್ತು ಕಠಿಣವಾದ ಮಾರ್ಗದ ಮುಂದೆ ಬಂದು ನಿಂತಾಗ ಸಮಯ ಸುಮಾರು ೧.೩೦.

ಈ ದುರ್ಗಮವಾದ ಹಾದಿ ಎದುರಾಗುವಮುನ್ನ ನಮಗೆ ಕೆಮ್ಮಣ್ಣುಗುಂಡಿಯ ಕಟ್ಟಡಗಳು ಬರಿಗಣ್ಣಿಗೇ ಕಾಣುತ್ತವೆ, ಆದರೆ ಮಾರ್ಗಮಾತ್ರ ಕಾಣುವುದಿಲ್ಲ. ಹಾಗಾಗಿ ಆ ಹಾದಿಯನ್ನ ನಾವೇ ಮಾಡಿಕೊಂಡು ಕೆಳಗಿಳಿಯಬೇಕು. ಮನು ಮತ್ತು ಹರ್ಷ ಕೆಳಗಿಳಿಯುವ ಹಾದಿಯ ಪತ್ತೆಯಲ್ಲಿ ತೊಡಗಿ ವಿಫಲರಾದರು. ಕಾರಣ ಅಷ್ಟು ದಟ್ಟವಾದ ಆ ಕಾಡುಮರಗಳು ಮತ್ತು ಮುಳ್ಳಿನಿಂದ ಕೂಡಿದ ಪೊದೆಗಳು.

ಸುಮಾರು ೩೦ ನಿಮಿಷದ ಹಾದಿಯಲ್ಲಿ ೬ ಅಡಿಗೂ ಮೀರಿದ ಎತ್ತರದ ಪೊದೆಗಳನ್ನು ಸರಿಸುತ್ತಾ ನಾವೆಲ್ಲಾ ಯುದ್ದಕ್ಕೆ ಹೊರಟ ಸೈನಿಕರಂತೆ ಮುನ್ನುಗ್ಗುತ್ತಿದ್ದೆವು. ನಮ್ಮ ಗುರಿಇದ್ದದ್ದು ಕೆಮ್ಮಣ್ಣುಗುಂಡಿಯೊಂದೇ. ಮಾರ್ಗಮಧ್ಯದಲ್ಲಿ ನಮ್ಮನ್ನು ದಾರಿ ತಪ್ಪಿಸುವ ಹಾದಿಗಳು ಹಲವಾರು, ಆದರೆ ನಾವು ಕೇವಲ GPSನ ಮಾತನ್ನು ಮಾತ್ರ ಕೇಳುತ್ತಾ ಮುನ್ನಡೆದೆವು. ಮಾರ್ಗಮಧ್ಯದಲ್ಲಿ ಮತ್ತೊಮ್ಮೆ ಕಡಿದಾದ ಪರ್ವತವನ್ನು ಹತ್ತಬೇಕಾಯಿತು, ಆದರೆ ಹತ್ತಲು ಯಾವುದೇ ಆಧಾರವಿರಲಿಲ್ಲ, ಇದ್ದದ್ದು ಅಲ್ಲಿ ಬೆಳೆದು ನಿಂತಿದ್ದ ಮುಳ್ಳಿನ ಪೊದೆಗಳಷ್ಟೇ. ನಾನು ನನ್ನ ಕೈಗಳಿಗೆ Glove ಹಾಕಿದ್ದರಿಂದ ಆ ಪೊದೆಗಳನ್ನ ಸರಿಸಲು ಅನುಕೂಲವಾಯಿತು. ಮುಳ್ಳಿನ ಪೊದೆಗಳು ನಮ್ಮ ಮೈ ಮೇಲೆ ಮಾಡಿದ್ದ ಗಾಯಗಳು ನಮ್ಮ ಮುಖ್ಯಹಾದಿ ದೊರೆತ ಸಂಭ್ರಮದಲ್ಲಿ ಮರೆಯಾಗಿದ್ದವು. ಅಂತೂ ಇಂತೂ ನಾವೆಲ್ಲಾ ಸುರಕ್ಷಿತವಾಗಿ ಮುಖ್ಯ ರಸ್ತೆಯಲ್ಲಿದ್ದೆವು... ಹುರ್ರೇ..... :D

ನಾವೆಲ್ಲಾ ಕೆಮ್ಮಣ್ಣುಗುಂಡಿ ತಲುಪಿ ವಿಶ್ರಮಿಸಿಕೊಳ್ಳುತ್ತಿರುವಾಗ ಹರ್ಷ ಮತ್ತವನ ಸಂಗಡಿಗರು ಅಲ್ಲಿಂದ ಬೀರೂರಿಗೆ ಹೊರಡಲು ನಮಗೆ ಜೀಪಿನ ವ್ಯವಸ್ಥೆ ಮಾಡಲು ಹೊರಟಿದ್ದರು. ನಾವೆಲ್ಲಾ ಎರಡು ಜೀಪಿನಲ್ಲಿ ಬೀರೂರಿನ ಕಡೆಗೆ ಪಯಣ ಬೆಳೇಸಿದೆವು.

ಮಾರ್ಗಮಧ್ಯದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ನಮ್ಮನ್ನೆಲ್ಲಾ ಬೀಳ್ಗೊಟ್ಟಿತು. ಬೀರೂರಿನಿಂದ ನಮ್ಮ ರೈಲ್ವೇ ಪ್ರಯಾಣ ೫.೪೫ಕ್ಕೆ ಶುರುವಾಗಿ ೯.೨೦ಕ್ಕೆ ಬೆಂಗಳೂರನ್ನು ತಲುಪಿದೆವು. ಅಲ್ಲಿಂದ ನಾನು ನನ್ನ ಮನೆಯಕಡೆ ಹೊರಡುವ BMTC ಹತ್ತಿ ಮನೆಗೆ ಬಂದೆ.


ನಿಸರ್ಗಮಾತೆಯ ಮಡಿಲಿನಲ್ಲಿ ಕಳೆದ ಆ ೨ ದಿನ ಅವಿಸ್ಮರಣೀಯ.... :)

Friday, August 21, 2009

"ಮುನಿಯ"



"ಮುನಿಯ" ಎಂದಾಕ್ಷಣ ಯಾವುದೋ ಕನ್ನಡ ಚಿತ್ರವಲ್ಲ... ಇದು ಒಂದು ಪುಟ್ಟ ಪಕ್ಷಿಯ ಉಳಿವಿನ ಹೋರಾಟದ ಲೇಖನ...

ಶುಕ್ರವಾರದಂದು ವಾರಾಂತ್ಯವಾದ್ದರಿಂದ ಕೆಲಸದ ಒತ್ತಡ ಹೆಚ್ಚಿರಲಿಲ್ಲ. ರಾತ್ರಿ ಸವಿಯಾದ ನಿದ್ದೆ ಮಾಡಿ ಬೆಳಗ್ಗೆ ಬೇಗ ಎದ್ದು ಬರಿಅಕ್ಕಿ ದೋಸೆ (ನೀರು ದೋಸೆ) ಮತ್ತೆ ಕಡಲೇ ಬೇಳೆ ಚಟ್ನಿ ಮಾಡಿದ್ದೆ. ನೆನ್ನೆ ನನ್ನ ಸಹೋದ್ಯೋಗಿಯಾದ ಕನಕರಾಜ ತನಗೂ ತಿಂಡಿ ತರುವಂತೆ ಹೇಳಿದ್ದರಿಂದ ಅವನನಿಗೂ ದೋಸೆಯನ್ನ ಮಾಡಿಕೊಂಡು ಡಬ್ಬಿಯಲ್ಲಿ ತಂದಿದ್ದೆ. ಪ್ರತಿದಿನದಂತೆ ಇಂದಿನ ಕೆಲಸ ಪ್ರಾರಂಭಿಸಿ ಮಧ್ಯೆ ವಿರಾಮದ ಸಲುವಾಗಿ ನಮ್ಮ ಕ್ಯಾಂಟಿನಿಗೆ ಟೀ ಕುಡಿಯಲು ಹೋದಾಗ ಅಲ್ಲಿ ಒಂದು ಪುಟ್ಟ ಪಕ್ಷಿ ಹಾರಾಡಿದಂತಾಯಿತು. ಸಂಪೂರ್ಣವಾಗಿ ಕಿಟಕಿಗಳನ್ನು ಮುಚ್ಚಿರುವ ಜಾಗದಲ್ಲಿ ಇದ್ಯಾವ ಹಕ್ಕಿ ಬಂದಿತೆಂದು ಗಮನವಿಟ್ಟು ನೋಡಿದಾಗ ಅದು ಹಿಂದೆ ನಾನು ಸಾಕಿದ್ದ "ಮುನಿಯ" ಎಂಬ ಹಕ್ಕಿ ಎಂದು ತಿಳಿಯಿತು. ಪಾಪ... ಅದು ಹೇಗೋ ದಾರಿ ತಪ್ಪಿ ಕ್ಯಾಂಟಿನಿಗೆ ಬಂದುಬಿಟ್ಟಿತ್ತು. ಹವಾನಿಯಂತ್ರಿತವಾದ ನಮ್ಮ ಕಾರ್ಯಾಲಯದಲ್ಲಿ ಯಾವುದೇ ಕಿಟಕಿಯನ್ನು ತೆರೆದಿಡುವ ಹಾಗಿಲ್ಲ, ದಾರಿ ತಪ್ಪಿ ಒಳಗೆ ಬಂದಿರುವ ಇದನ್ನು ಮತ್ತೆ ಹೊರಗೆ ಕಳಿಸುವುದು ಹೇಗೆಂದು ನನಗೆ ತಿಳಿಯಲಿಲ್ಲ. ಆ ಪಕ್ಷಿಯೋ ಅಪಾರ ಜನ ಜಂಗುಳಿಯನ್ನು ಕಂಡು ಬೆದರಿ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಾ ತನ್ನಲ್ಲಿದ್ದ ಶಕ್ತಿಯನ್ನ ಕಳೆದುಕೊಳ್ಳುತ್ತಲಿತ್ತು. ಅದನ್ನು ಕಂಡು ಹಾಗೇ ಏನೂಮಾಡಲಾಗದೇ ಮರಳಿ ನನ್ನ ಜಾಗಕ್ಕೆ ಬಂದೆ.

ಕೆಲಸದ ಒತ್ತಡದಲ್ಲೂ ನನಗೆ ಅದರದೇ ಚಿಂತೆ... ಮತ್ತೊಂಮ್ಮೆ ನಾನು ಹೊರಬಂದಾಗ ಅದೇ ಹಕ್ಕಿ ನಮ್ಮ ಕ್ಯಾಂಟಿನಿನಿಂದ ಹೊರಬಂದು ನಮ್ಮ ಕಾರ್ಯಾಲಯದ ಆವರಣದಲ್ಲಿ ಹಾರಾಡುತ್ತಾ ಹೊರ ಹೋಗುವ ದಾರಿ ಹುಡುಕುತ್ತಿತ್ತು. ನಾನು ಕೆಲಸ ಮಾಡುವುದು ೬ನೇ ಅಂತಸ್ಥಿನಲ್ಲಿ. ಅದೂ ಪೂರ್ಣವಾಗಿ ಗಾಜಿನಿಂದಾವ್ರುತವಾದ ಕಟ್ಟಡ. ಇನ್ನು ಅದಕ್ಕೆ ಹೊರ ಹೋಗುವ ದಾರಿಯಾದರೂ ಹೇಗೆ ಸಿಗಬೇಕು... ನಾನು ಅದನ್ನು ಹಿಡಿದು ಹೊರಬಿಡಲು ನನ್ನ ಶಕ್ತಿಮೀರಿದ ಪ್ರಯತ್ನ ಮಾಡಿ ವಿಫಲನಾಗಿದ್ದೆ. ಅದು ನನ್ನ ಕೈಗೆಟುಕದಂತೆ ಮೇಲೆ ಹೋಗಿ ಕಣ್ಮುಚ್ಚಿ ಕುಳಿತಿತ್ತು.

ದಾರಿಕಾಣದೇ ಕೊನೆಗೆ ಆ ಗಣೇಶನನ್ನು ನೆನೆದು ಆ ಪಕ್ಷಿಗೆ ಒಂದು ದಾರಿ ತೋರಿಸೆಂದು ಕೋರಿಕೊಂಡು ಮತ್ತೆ ನನ್ನ ಕಾರ್ಯಸ್ಥಳಕ್ಕೆ ಮರಳಿದೆ. ಪ್ರತೀ ಅರ್ಧ ಘಂಟೆಗೊಮ್ಮೆ ಅದು ಕುಳಿತಿದ್ದ ಸ್ಥಳಕ್ಕೆ ಹೋಗಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಕಡೆಗೂ ನನ್ನ ಕೋರಿಕೆ ಆ ಗಣೇಶನಿಗೆ ಕೇಳಿಸಿತೇನೋ ಎಂಬಂತೆ ಆ ಹಕ್ಕಿ ನನ್ನ ಕೈಗೆಟುಕುವ ಸ್ಥಳಕ್ಕೆ ಬಂದು ಕಣ್ಮುಚ್ಚಿ ಕುಳಿತಿತ್ತು. ಬಹಳಹೊತ್ತಿನಿಂದಾ ಹಾರಾಡಿ ಸ್ವಲ್ಪ ಬಳಲಿದ್ದರಿಂದ ಮಿಸುಕಾಡದೇ ಕುಳಿತಿದ್ದ ಅದರೆಡೆಗೆ ಸದ್ದು ಮಾಡದೇ ಹೆಜ್ಜೆ ಹಾಕಿದೆ. ಆ ಪಕ್ಷಿಯನ್ನ ನನ್ನೆರಡೂ ಕೈಗಳಿಂದ ಅದಕ್ಕೆ ತೊಂದರೆಯಾಗದಂತೆ ಹಿಡಿದು ನಮ್ಮ ಕಟ್ಟಡದಿಂದ ಹೊರಬಂದು ಅದನ್ನು ಮತ್ತೆ ನಿಸರ್ಗದ ಮಡಿಲಿಗೆ ಬಿಟ್ಟೆ. ಬದುಕಿದೆಯಾ ಬಡಜೀವವೇ ಎಂಬಂತೆ ತನ್ನೆ ರೆಕ್ಕೆಗಳನ್ನು ಚಾಚುತ್ತಾ ಅದು ಹತ್ತಿರವಿದ್ದ ಒಂದು ಮರದ ಮೇಲೆ ಹಾರಿ ಕುಳಿತಿತು. :-D

ಕೆಲವು ತಿಂಗಳ ಹಿಂದೆ ಒಂದು ಪುಟ್ಟ ಅಳಿಲಿನ ಮರಿಯನ್ನ ಕಾಪಾಡಲು ಪ್ರಯತ್ನ ಪಟ್ಟು ಅದು ವಿಫಲವಾಗಿತ್ತು :-( , ಆದರೆ ಇಂದು ಆ ಪುಟ್ಟಜೀವವನ್ನ ಕಾಪಾಡಿದ ಸಂತಸದಿಂದ ಮರಳಿ ನನ್ನ ಕೆಲಸದೆಡೆಗೆ ಮರಳಿದೆ :-) . ಮೇಲೆ ಲಗತ್ತಿಸಿರುವ ಚಿತ್ರವನ್ನ ಗೂಗಲ್ಲಿನಿಂದ ಪಡೆದದ್ದು.

Monday, July 20, 2009

RJಗಳೊಡನೆ ಒಂದು ಸಂಜೆ

ಪ್ರತೀದಿನ ಬೆಳ್ಳಂಬೆಳಿಗ್ಗೆ ಎದ್ದು ಚುಮು ಚುಮು ಮುತ್ತಿಡುವ ಚಳಿಯಲ್ಲಿ ರೇಡಿಯೋ ಸ್ಟೇಷನ್ನಿಗೆ ಬಂದು ಸರಿಯಾಗಿ 7ಘಂಟೆಗೆ Very Goooooooood Morning ಅಂತ ಫುಲ್ಲ್ ಜೋಷಿನಲ್ಲಿ ಎಲ್ಲರ ದಿನ ಪ್ರಾರಂಭಿಸುವ RJ Pradeepa ನ ಕಾರ್ಯಕ್ರಮವನ್ನ ಪ್ರತೀದಿನ ಕೇಳುವ ಕೇಳುಗ ನಾನು. ಪ್ರದೀಪ ಪ್ರತಿ ದಿನ ಮಳೆಯಿರಲಿ ಮಂಜಿರಲಿ ರೇಡಿಯೋ ಸ್ಟೇಷನ್ನಿಗೆ ಬಂದು 7:15ಕ್ಕೆ ಯಾರಿಗಾದರೂ ಕೋಳಿ ಕೂಗಿಸಿ ತರಲೆ ಮಾಡಿ ಸದಾ ಖುಷಿಯಿಂದ ಚಟಪಟನೆ ಮಾತನಾಡುತ್ತಾ ಇರುವ RJ ಪ್ರದೀಪನ ಕಾರ್ಯಕ್ರಮ Whatte fun Morning. ಆ ಕಾರ್ಯಕ್ರಮವನ್ನ ಕೇಳುತ್ತಲೇ ನಾನು ಆಫೀಸಿಗೆ ರೆಡಿಯಾಗುವುದು. ಸಮಯ ಸಿಕ್ಕಾಗೆಲ್ಲಾ ಪ್ರದೀಪನಿಗೆ ಕಾಲ್ ಮಾಡಿ ಅವರೊಡನೆ ಮಾತನಾಡ್ತಾ ಗಡಿಬಿಡಿಯಲ್ಲಿ ಆಫೀಸಿಗೆ ಹೊರಡುತ್ತೇನೆ.

Sardaar ಗಳಿಗೆ ಗುಂಡ ಅನ್ನುವ ಹೊಸಾ ನಾಮಕರಣ ಮಾಡಿ ಯಾವುದೇ Sardaar ಗಳಿಗೆ ಬೇಸರವಾಗದಂತೆ ಪ್ರತೀದಿನ ಒಂದೊಂದು ನಗೆಚಟಾಕಿಯನ್ನ ಹಾರಿಸುತ್ತಾ, ನಮ್ಮ ಬೆಂಗಳೂರಿನ ಸುತ್ತ ಮುತ್ತಲ ಆಗು ಹೋಗುಗಳಬಗ್ಗೆ ಎಲ್ಲರಿಗೂ Update ಕೊಡುತ್ತಾ ಎಲ್ಲರೊಡನೆ ಸೌಜನ್ಯದಿಂದ ಮಾತನಾಡುತ್ತಾ ಇರುವ ಪ್ರದೀಪನನ್ನ ನಾನು ನೋಡಿಯೇ ಇರಲಿಲ್ಲ. ಆದರೂ ಅವರು ಆಯ್ಕೆಮಾಡಿ ಹಾಕುವ ಹಾಡುಗಳನ್ನ ಕೇಳುತ್ತಾ, ಅವರ ಸಂಭಾಷಣೆಯ ರೀತಿಯನ್ನು ಕೇಳುತ್ತಾ ಅವರ ಅಭಿಮಾನಿಯಾದೆ. ಕೇಳುಗರನ್ನ ತನ್ನತ್ತ ಸೆಳೆಯುವಲ್ಲಿ RadioCity ಯಶಸ್ವಿಯಾಗಿದೆಯೆಂದರೆ ಅದು ಇಂತಹಾ RJ ಗಳಿಂದಲೇ. ಪ್ರತಿದಿನ ಜನರ ಪ್ರತಿನಿಧಿಯಾಗಿ ಬರುವ Character(ಮಣಿ) ಮತ್ತು ಪ್ರದೀಪನ ಸಂಭಾಷಣೆ ಸಕತ್ ಮಜ ಕೊಡತ್ತೆ.

ಹೀಗೇ ಒಮ್ಮೆ RadioCity ಯವರು ಪ್ರಾರಂಭಿಸಿದ Musicನ ಕಿಲಾಡಿಗಳಲ್ಲಿ ನಾನು ಭಾಗವಹಿಸಿ ಸರಿಸುಮಾರು 600 to 700 ಸಲ ಪ್ರದೀಪನಿಗೆ Vote ಮಾಡಿದ್ದೆ. ಕಾರಣ ಪ್ರದೀಪನ ಕಾರ್ಯಕ್ರಮ ಅಷ್ಟು ಹಿಡಿಸಿಬಿಟ್ಟಿತ್ತು. ಅದರ ನಡುವೇ ಬುಧವಾರ RadioCityಗೆ call ಮಾಡಿದ್ದಾಗ ಪ್ರದೀಪ ನನಗೆ ಅವರ ಕಡೆಯಿಂದ ಒಂದು T-Shirt ಮತ್ತು Mug ಕೊಡ್ತೀನಿ ಅಂತ ಹೇಳಿದ್ರು. ಇದೇ ರೀತಿ ಗುರುವಾರವೂ ಮತ್ತೊಮ್ಮೆ T-Shirt ಮತ್ತು Mug ಗೆಲ್ಲುವ ಅವಕಾಶ ನನಗೆ ದೊರಕಿತ್ತು. ಇದಕ್ಕಾಗಿ 600 to 700 ಸಲ SMS ಕಳಿಸಿದ್ರಿಂದ ಆ ತಿಂಗಳು ಹೊರಲಾರದ ಭಾರ ಹೊರುವ ಹಾಗೆ Vodafoneನವರು ಸರಿಯಾಗಿ Bill ಕಳಿಸಿಕೊಟ್ಟಿದ್ದರು.



ಶನಿವಾರ ಗರುಡಾ ಮಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ Musicನ ಕಿಲಾಡಿಯ Result ಹೊರಬರತ್ತೆ, ಅಲ್ಲೇ ನಿಮಗೆ ನಿಮ್ಮ ಬಹುಮಾನ ಅಂದರೆ T-Shirt ಮತ್ತು Mugನ ಕೊಡ್ತಾರೆ, ಸಂಜೆ ಸರಿಯಾಗಿ 5 ಘಂಟೆಗೆ ಬಂದ್ಬಿಡಿ ಅಂತ RadioCity office ನ ಸಿಬ್ಬಂದಿ ಫೋನ್ ಮಾಡಿದ್ರು. ಶನಿವಾರ ರಜೆ ಇದ್ದರೂ ಆಫೀಸಿನಲ್ಲಿ ಇದ್ದ ಸ್ವಲ್ಪ ಕೆಲಸವನ್ನ ಮುಗಿಸಿ ಗರುಡಾ ಮಾಲ್ Address ಮತ್ತು ದಾರಿಯನ್ನು ಕೇಳ್ಕೊಂಡು ಅಂತೂ ಇಂತೂ ತಲುಪಿದೆ. ಅಲ್ಲಿ ಆಗತಾನೆ ವೇದಿಕೆ ಸಜ್ಜಾಗುತ್ತಿತ್ತು. ದೊಡ್ಡದಾಗಿ ಪ್ರದೀಪನ ಮತ್ತು ವಿನಾಯಕ ಜೋಷಿಯ Photo ಹಾಕಿದ್ರು. ಯಾವಾಗ Programe ಶುರುಆಗೋದು ಅಂತ ಕೇಳಿದ್ದಕ್ಕೆ ಇನ್ನೇನು ಆಗತ್ತೆ, ಇಬ್ಬರೂ RJಗಳು ಬರ್ತಾಇದಾರೆ ಅನ್ನೋ ಸಾಲುಗಳು 5 ಘಂಟೆಗೆ ಶುರುವಾದದ್ದು ಪ್ರತೀ ಅರ್ಧ ಘಂಟೆಗೆ ಪ್ರತಿದ್ವನಿಸುತ್ತಿತ್ತು. ಅಂತೂ ಇಂತೂ ಇಬ್ಬರೂ RJಗಳು Film Actor ತರುಣ್ ಜೊತೆಯಲ್ಲಿ ವೇದಿಕೆಗೆ ಬಂದೇಬಿಟ್ರು. ಅಲ್ಲಿ ಸ್ವಲ್ಪ ಕೂಗಾಟ ಕಿರುಚಾಟ ಎಲ್ಲ ಮಜವಾಗಿತ್ತು.

ಮಜ ಬೇಸರವಾಗಿ ಮಾರ್ಪಾಡಾಗಿದ್ದು ಕಾರ್ಯಕ್ರಮದ ಅಂತ್ಯದಲ್ಲಿ T-Shirt ಮತ್ತು Mugನ ಹಂಚೋವಾಗ. ಸತತವಾಗಿ ಎರಡುದಿನ ಗೆದ್ದಿದ್ದರೂ ನನಗೆ ಒಂದೂ T-Shirt ಮತ್ತುMug ಸಿಕ್ಕಲಿಲ್ಲ. ಕೆಲವರಿಗೆ ಮಾತ್ರ ಅದು ಸಿಕ್ಕರೂ ನನಗೆ ಮತ್ತೆ ಕೆಲವರಿಗೆ ಸಿಕ್ಕಲಿಲ್ಲ. ಅಲ್ಲಿಂದ ಬಂದದಕ್ಕೆ ಕೇವಲ RJ ಗಳನ್ನ ನೋಡಿ ಅದರಲ್ಲೇ ಸಮಾಧಾನ ಪಟ್ಟುಕೊಂಡು ವಾಪಾಸ್ ಬರೋಣ ಅಂದುಕೊಂಡೆ. ಆದರೆ RadioCity ಗೆ ಸಂಭಂದಿಸಿದ ಒಬ್ಬರು (ಮಧು) ಎದುರಿಗೆ ಬರುತ್ತಿದ್ದನ್ನ ನೋಡಿ ಅವರಿಗೆ ನಡೆದ ವಿಷಯ ತಿಳಿಸಿ ಸೋಮವಾರ ಅವರ Office ನಿಂದಲೇ ಅದನ್ನ ಪಡೆದುಕೊಳ್ಳುವ ಭರವಸೆ ಮಧುವಿನಿಂದ ಪಡೆದು ಮನೆಯತ್ತ ಪಯಣ ಬೆಳೆಸಿದೆ. ಅಂದಿನ ದಿನ "Radio City" Musicನ ಕಿಲಾಡಿಯಾಗಿ ಹೊರಹೊಮ್ಮಿತ್ತು.



ಶನಿವಾರದ ಆ ಘಟನೆಯ ನಂತರ ಮತ್ತೆ ಸೋಮವಾರ RadioCityಯ Officeಗೆ ಹೋಗಿ ನನ್ನ ಆ T-Shirt ಮತ್ತು Mugಅನ್ನ ತಂದೆ. ಇದಾದ ನಂತರ ಗುರುವಾರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಗ ನನ್ನ ಮೊಬೈಲ್ ರಿಂಗಣಿಸಿತು, ಯಾರಿರಬಹುದು ಎಂದು ನೋಡಿದಾಗ RadioCity ಆಫೀಸಿನ ನಂಬರ್ ಕಂಡಿತು. ಕಳೆದವಾರದ ಹಿಂದೆಯಷ್ಟೇ ಮ್ಯೂಸಿಕ್ ನ ಕಿಲಾಡಿಗಳು ಸ್ಪರ್ಧೆ ನಡ್ದಿದ್ದರಿಂದ ಆ ವಿಚಾರವಾಗೇನಾದರೂ ಈ ಕರೆ ಇರಬಹುದು ಅಂತ Phone call ರಿಸೀವ್ ಮಾಡ್ದಾಗ ಅತ್ತಕಡೆಯಿಂದ RJ Pradeepa ನ ಧ್ವನಿ ಕೇಳಿಸಿತು. ಶುಕ್ರವಾರ ಸಂಜೆ ಒಟ್ಟಿಗೇ Coffee ಕುಡ್ಯೋಣ ನಮ್ Officeಗೆ ಬರ್ತೀರಾ ?? ಅಂತ ಪ್ರದೀಪ ಕೇಳಿದಾಗ "ಖಂಡಿತಾ ಬಂದೇ ಬರ್ತೀನಿ" ಅಂತ ಖುಷಿಯಿಂದ ಒಪ್ಪಿಕೊಂಡೆ.

ಹೇಗಿದ್ದರೂ ವಾರಾಂತ್ಯವಾದ್ದರಿಂದ ಕೆಲಸವನ್ನ ಬೇಗ ಮುಗಿಸಿ ಸರಿಯಾಗಿ 6 ಘಂಟೆಗೆ ಸುರಿವ ಮಳೆಯಲ್ಲಿ RadioCity Office ಗೆ ಬಂದೆ. ಅಲ್ಲಿ ನನ್ನಂತೆಯೇ ಆಮಂತ್ರಿತ ಕೆಲವು ಕೇಳುಗರಿದ್ದರು. ಗರುಡಾ ಮಾಲಿನಲ್ಲಿ ಪ್ರದೀಪನನ್ನ ಗುರುತಿಸಿದ್ದರಿಂದ ಈಸಲ ಪ್ರಯಾಸಪಡದೇ ಗುರುತಿಸಿದೆ. ಆತ್ಮೀಯವಾಗಿ ಬರಮಾಡಿಕೊಂಡ ಪ್ರದೀಪ ಅಲ್ಲಿ ಬಂದಿದ್ದ ಕೇಳುಗರಿಗೆ ನನ್ನ ಕಿರುಪರಿಚಯ ಮಾಡಿಕೊಟ್ಟರು. ಮಳೆಯಲ್ಲಿ ನೆನೆದುಬಂದಿದ್ದ ನನಗೆ ಬಿಸಿ ಬಿಸಿ Tea ಕೊಟ್ಟರು. ಆತ್ಮೀಯವಾಗಿ ಹರಟಿದರು. ಆ ನಡುವೆ ಸ್ವಲ್ಪ Flash back ಘಟನೆಗಳನ್ನ ನೆನೆಯುತ್ತಾ ಹರಟೆ ಹೊಡೆಯುತ್ತಾ ಇರುವಾಗ ಅಲ್ಲಿಗೆ RJ Sweet heart ಸೌಜನ್ಯ ಬಂದರು. ಅವರೊಡನೆ ಮಾತನಾಡಿದ ನಂತರ Loveguru ಖ್ಯಾತಿಯ RJ ರಾಜೇಶ್ ಪ್ರದೀಪನೊಡಗೂಡಿ ಬಂದರು. ಎಲ್ಲಾ RJ ಗಳನ್ನ ನೋಡಿ ಖುಷಿಯಾಯ್ತು. ಎಲ್ಲರೂ Tea ಕುಡಿದ ನಂತರ ಪ್ರದೀಪ ತಮ್ಮ Radio station ತೊರಿಸಲು ನಮ್ಮನ್ನ ತಮ್ಮೊಡನೆ ಕರೆದೊಯ್ದರು. RJ ವಿನಾಯಕ ಜೋಷಿ ತಮ್ಮ City ಮಾತು ಕಾರ್ಯಕ್ರಮ ನಡೆಸಿಕೊಡುತ್ತಲಿದ್ದರು. ಮೊಟ್ಟಮೊದಲಿಗೆ ಒಂದು Radio Station ನ ನೋಡಿದೆ.



ಅಲ್ಲಿಂದ ಪ್ರದೀಪ, ರಾಜೇಶ್, ಮತ್ತು ವಿನಾಯಕ ಜೋಷಿಯೊಡನೆ ನಮ್ಮ Mobileನಲ್ಲಿ Photo ಕ್ಲಿಕ್ಕಿಸಿ ಪ್ರದೀಪನಿಗೆ ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ವಂದನೆ ಸಲ್ಲಿಸುತ್ತಾ ಅದೇ ಜಿನುಗುತ್ತಿದ್ದ ಮಳೆಯಲ್ಲಿ ನೆನೆದುಕೊಂಡು Radio city ಯ ಮಧುರ ಹಾಡುಗಳನ್ನ ಕೇಳಿಕೊಂಡು ನನ್ನ ಗೂಡು ಸೇರಿಕೊಂಡೆ.

ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ Happy manಗೆ ವಂದನೆಗಳು :) ಮತ್ತೊಮ್ಮೆ "ಒಟ್ಟಿಗೇ ಕಾಫೀ ಕುಡಿಯೋಣ, ನಮ್ಮ ಆಫೀಸಿಗೆ ಬರ್ತೀರಾ?" ಅಂತ ನೀವು ಕರೆಮಾಡ್ತೀರ ಅಂತ ಕಾಯ್ತಾ ಇದೀನಿ.


ಕೊನೆಯಲ್ಲಿ ನಾನು ಹೇಳೋದೇನು ಅಂದ್ರೆ ನೀವು RJ ಅಲ್ಲ, ಬದಲಾಗಿ RG ಅಂದರೆ....

ರೇಡಿಯೋ ಜಾಕಿ ಅಲ್ಲ, ರೇಡಿಯೋ ಗೆಳೆಯ.... :-)

Monday, February 16, 2009

ಫೆಬ್ರವರಿ ೧೪ ೨೦೦೯

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅನ್ನನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

Thursday, December 11, 2008

ಪರೋಕ್ಷ ಸಂಗಾತಿಗೆ...

ನಾ ನಿನಗಾಗಿ ನಿನ್ನ ದಿನವ
ಬೆಳಗುವ ಸೂರ್ಯನಾಗಬೇಕಿದೆ
ನಾ ನಿನಗಾಗಿ ಇರುಳಿನಲಿ
ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ,
ನಾ ನಿನ್ನಲಿರುವ ದುಃಖ ದುಮ್ಮಾನವನು
ಹೊತ್ತೋಯ್ಯುವ ನದಿಯಾಗಬೇಕಿದೆ,
ನಾ ನಿನ್ನಜೊತೆ ಜೊತೆಯಲಿ
ಹೆಜ್ಜೆಯಿಡುವ ನೆರಳಾಗಬೇಕಿದೆ,
ನಾ ನಿನ್ನ ಪ್ರೀತಿ ಪಡೆಯಬೇಕಿದೆ,
ನಿನ್ನೋಂದಿಗೆ ನಡೆಯಬೇಕಿದೆ
ದೂರ ಬಲು ದೂರ ಸಾಗಬೇಕಿದೆ
ನಾ ನಿನ್ನೊಳು ಬೆರೆಯಬೇಕಿದೆ
ನಾ ನಿನ್ನ ಕಾಣದಿದ್ದರೇನು,
ನಿನ್ನಯ ಸ್ಪರ್ಶವ ಕಂಡಿಹೆನು
ನೀ ಬರುವೆ ತಂಗಾಳಿಯ ನಡುವೆ ತೇಲುತಾ,
ಮನಕೆ ಮುದವ ನೀಡುತಾ
ನೀಲಿಗಗನದಿ ತೇಲುವ ಮೇಘಮಾಲೆಯ
ನಡುವೆ ನಾ ಕಾಣುವೆ ನಿನ್ನಯ ಚಿತ್ತಾರವ
ಇರುಳಿನ ತಂಪಾದ ಸಮಯದಲಿ ನಾ ಕಾಣುವೆ
ನಿನ್ನಯ ಚಂದವನು ಆ ಚುಕ್ಕಿಗಳ ಸೇರಿಸುತ...

Thursday, December 4, 2008

ಕೊಡುಗೆ




ಮೇಘಮಾಲೆಯ ತುಂತುರಿನ ಸಿಂಚನದಿ
ಮಿಂದೆದ್ದ ಕುಸುಮ ಆಗಸವ
ನೋಡುತಾ ಮುಗುಳ್ನಕ್ಕಿತ್ತು

ಅರಳಿನಿಂತ ಕುಸುಮವನ್ನು ಚುಂಬಿಸುತಾ
ಬೀಸಿಬಂದ ಗಾಳಿ ಅದರ
ಪರಿಮಳವ ಘಮ್ಮನೆ ಹರಡಿತ್ತು

ಗಾಳಿಯೊಡನೆ ಬೆರೆತ ಸುಗಂಧ
ದುಂಬಿಯ ಕರೆತಂದಿತ್ತು,
ಅರಳಿನಿಂತ ಕುಸುಮ ನಾಚಿ ರಂಗೇರಿತ್ತು

ರಂಗೇರಿದ ಕುಸುಮ ಕುಸುಮಬಾಲೆಯ
ಮುಡಿಯೇರಿತ್ತು, ಶೃಂಗಾರ ಕಾವ್ಯಕ್ಕೆ
ಮುನ್ನುಡಿ ಬರೆದಿತ್ತು

ಕುಸುಮಬಾಲೆಯ ಶೃಂಗಾರ ಕಾವ್ಯಕ್ಕೆ
ಹೃದಯವೊಂದು ಮಿಡಿದಿತ್ತು,
ಕಣ್ ಕಣ್ಣಲ್ಲೇ ಕವನ ಬರೆದಿತ್ತು

ಕವನದ ಛಾಪು ಹೃದಯದಲಿ
ಮೂಡಿತ್ತು, ಹೃದಯಗಳ ಮಿಲನ
ಮಹೋತ್ಸವ ಅನುದಿನವು ಸಾಗಿತ್ತು.

Monday, November 17, 2008

ಹುನ್ಕಲ್ ವುಡ್

ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕಜೀವನದಿಂದ ಸ್ವಲ್ಪ ಬದಲಾವಣೆ ಇರಲೆಂದು ನಮ್ಮ ಚಾರಣದ ತಂಡ ಡಿಸೆಂಬರಿನಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಕಳೆದಬಾರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ಕೈತಪ್ಪಿದ್ದರಿಂದ ಈ ಸಲವಾದರೂ ಚಾರಣಕ್ಕೆ ಹೋಗಲೇಬೇಕೆಂದು ಮೊದಲೇ ಮನದಲ್ಲಿ ಎಣಿಸಿದ್ದೆ. ನಾನು ಖಂಡಿತವಾಗಿ ಬರುವುದಾಗಿಯೂ ತಿಳಿಸಿದ್ದೆ.

ಆದರೆ ಸ್ವಲ್ಪದಿನಗಳ ನಂತರವಷ್ಟೇ ನೆನಪಾಗಿದ್ದದ್ದು.... ನಾವು ಚಾರಣಕ್ಕೆ ಹೊರಡುವ ದಿನಾಂಕದಂದೇ ಅಪ್ಪನ ಮಾಸಿಕ ಇದೆಯೆಂದು. ಚಾರಣಕ್ಕಿಂತಾ ಮಾಸಿಕ ಮುಖ್ಯವಾದದ್ದರಿಂದ ಈ ಸಲವೂ ಚಾರಣದ ಅವಕಾಶ ಕೈ ತಪ್ಪಿ ಹೋಯಿತು. ಪ್ರಕೃತಿಯ ಮಡಿಲಿನಲ್ಲಿ ಪ್ರತಿವರುಷವೂ ಕಳೆಯುತ್ತಿದ್ದ ದಿನಗಳನ್ನು ಈ ಸಲ ಕಳೆಯಲಾಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಮನೋಹರ ೨ ದಿನಗಳ ಚಾರಣದಬಗ್ಗೆ ಹೇಳಿದ. ಚಾರಣದ ಸ್ಥಳ, ಹೊರಡುವ ವೇಳೆ, ಅಲ್ಲಿಗೆ ಹೋಗುವ ವ್ಯವಸ್ಥೆ ಎಲ್ಲಾ ತಿಳಿದುಕೊಂಡು ನಾನು ಬರುವುದಾಗಿ ಹೇಳಿ ಆ ವಿಚಾರವಾಗಿ ಅದರಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡೆ. ಹರ್ಷ ಈ ಚಾರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಪ್ರಾಕ್-ಸಿಸ್ ಅನ್ನುವ ಕಂಪನಿಯಲ್ಲಿ ಕೆಲಸ ಮಾಡುವ ಅವರು ಮತ್ತು ಅವರ ಸಹೋದ್ಯೋಗಿಗಳ ಜೊತೆಯಲ್ಲಿ ನಾನೂ ಒಬ್ಬನಾಗಿ "ಹುನ್ಕಲ್ ವುಡ್" ಅನ್ನುವ ಧಾಮಕ್ಕೆ (Resort) ಹೋಗಿ ಹತ್ತಿರದಲ್ಲೇ ಇರುವ ಹುನ್ಕಲ್-ರಾಕ್ ಅನ್ನು ಹತ್ತುವುದು ನಮ್ಮ ಪೂರ್ವಯೋಜಿತ ಕಾರ್ಯಕ್ರಮವಾಗಿತ್ತು. ಅಂದಾಜು ೩೪ ಜನ ಒಟ್ಟಿಗೇ ಒಂದು ಬಸ್ಸಿನಲ್ಲಿ ಚಿಕ್ಕಮಗಳೂರಿನ ಮೂಲಕ "ಹುನ್ಕಲ್ ವುಡ್" ಧಾಮಕ್ಕೆ ಹೋಗಬೇಕಾಗಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದದ್ದರಿಂದ ಹರ್ಷ ಮೊದಲೇ ಅದನ್ನು ಕಾದಿರಿಸಿದ್ದರು. ಆ ೩೪ ಜನದಲ್ಲಿ ೪ ಪುಟ್ಟ ಮಕ್ಕಳೂ ಇದ್ದದ್ದು ವಿಷೇಶ.



ಪ್ರಕೃತಿಯ ಈ ಸೊಬಗನ್ನ ಸವಿಯಲು ನಾವು ನಾಡಿನ ಜನಜಂಗುಳಿಯಿಂದ, ಯಾಂತ್ರಿಕ ಬದುಕಿನಿಂದ ದೂರ ಅಂದರೆ ಚಿಕ್ಕಮಗಳೂರಿನಿಂದ ಅಂದಾಜು ೨೨ ಕಿ.ಮೀ ದೂರ ಬರಬೇಕು. ಇಲ್ಲಿಗೆ ಬಂದಾದಮೇಲೆ ಯಾವುದೇ ಮೊಬೈಲ್ ಕೆಲಸ ಮಾಡುವುದಿಲ್ಲ. ಬಿ.ಎಸ್.ಎನ್.ಎಲ್ ಬಿಟ್ಟು, ಅದು ಸಿಟಿಯ ಒಳಗಡೆ ಕೆಲಸ ಮಾಡದಿದ್ದರೂ ಇಲ್ಲಿ ಕೆಲಸ ಮಾಡುತ್ತದೆ ;)

ಇಲ್ಲಿಯೇ ವಾಸವಾಗಿರುವ ಸಹಾಯಕರು ನಮ್ಮ ಅಡುಗೆ, ತಿಂಡಿ ಮತ್ತು ಕಾಫಿಯ ವ್ಯವಸ್ಥೆ ಮಾಡಿದ್ದರು. ಇಲ್ಲಿಯ ರಾತ್ರಿಗಳನ್ನು ನೀವು ಮೇಣದಬತ್ತಿಯ ಸಹಾಯದಿಂದ ಕಳೆಯಬೇಕಾದೀತು, ಜೊತೆಯಲ್ಲಿ ಬ್ಯಾಟರಿಯನ್ನು ಕೊಂಡೊಯ್ದರೆ ಒಳಿತು. ಇಲ್ಲಿಗೆ ನೀವು ಈ ಮಾರ್ಗದಲ್ಲಿ ಬರಬಹುದು: ಬೆಂಗಳೂರು>ಚನ್ನರಾಯಪಟ್ಟಣ>ಹಾಸನ>ಬೇಲೂರು>ಚಿಕ್ಕಮಗಳೂರು>ಹೊಸಪೇಟೆ. ಅಲ್ಲಿಂದ ಅವರದೇ ಆದ ಸಾರಿಗೆ ವ್ಯವಸ್ಥೆಯಲ್ಲಿ ಹುನ್ಕಲ್ ವುಡ್ ತಲುಪಬೇಕು. ನೀವು ಕ್ರಮಿಸುವ ಅಂದಾಜು ದೂರ ೨೭೦ ಕಿ.ಮೀ. ಗಳು

ನಾವು ಬೆಂಗಳೂರನ್ನು ಶುಕ್ರವಾರ ರಾತ್ರಿ ಬಿಟ್ಟು ಶನಿವಾರ ಮುಂಜಾವದಂದು ಆ ಸ್ಥಳವನ್ನು ತಲುಪಿ, ಅಲ್ಲಿನ ಕಾರ್ಯಕ್ರಮಗಳನ್ನ ಮುಗಿಸಿ ಭಾನುವಾರ ರಾತ್ರಿ ಮರಳಿ ಬೆಂಗಳೂರಿಗೆ ಬರುವ ಯೋಜನೆಯನ್ನು ಹರ್ಷ ಮೊದಲೇ ಸಿದ್ದಪಡಿಸಿದ್ದರು.

ಪೂರ್ವನಿರ್ಧಾರಿತ ಯೋಜನೆಯಂತೆ ಖಾಸಗಿ ಬಸ್ಸನ್ನು ಬಾಡಿಗೆಗೆ ಪಡೆದುಕೊಂಡದ್ದರಿಂದ ಆಯ್ದ ಸ್ಥಳಗಳಿಂದ ನಾವೆಲ್ಲಾ ಆ ಬಸ್ಸನ್ನು ಹತ್ತಿ ರಾತ್ರಿ ಸುಮಾರು ರಾತ್ರಿ ೧೧.೩೦ ಕ್ಕೆ ಬಿಟ್ಟು ಬೆಳಗ್ಗೆ ಸುಮಾರು ೫.೩೦ ರ ಸಮಯಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ಹೋಲಿಸಿದರೆ ಅಲ್ಲಿನ ಚಳಿ ಒಂದು ಕೈ ಮೇಲೆ ಇದ್ದಂತಿತ್ತು. ರೆಸಾರ್ಟಿಗೆ ಹೋಗಲು ಇನ್ನು ಸಮಯವಿದ್ದದ್ದರಿಂದ ಅಲ್ಲೇ ಬಿಸಿ ಬಿಸಿ ಟೀ ಕುಡಿದು ನಂತರ ಮುಂದೆ ಸಾಗಿತ್ತು ನಮ್ಮ ಪಯಣ. ಆ ಚಳಿಯಲ್ಲಿ ಕೈಯಲ್ಲಿ ಬಿಸಿ ಬಿಸಿ ಟೀ ಕುಡಿಯುವ ಮಜವೇ ಬೇರೆ !!! ಗ್ರಾಹಕರಿಗೆ ಕಾದಿದ್ದ ಒಬ್ಬ ಟೋಪಿ ಮಾರುವವನಿಗೆ ನಮ್ಮ ಬಸ್ಸನ್ನು, ಬಸ್ಸಿನ ತುಂಬಾ ತುಂಬಿರುವ ಜನರನ್ನು ನೋಡಿ ಬಸ್ಸಿನಬಳಿಗೇ ತನ್ನ ಟೋಪಿ ತುಂಬಿದ ಚೀಲವನ್ನು ತಂದು ತನ್ನ ವ್ಯಾಪಾರವನ್ನು ಪ್ರಾರಂಭಿಸಿದ. ಅಲ್ಲಿಂದ ಹೊರಟ ನಮ್ಮ "ಹಂಸ" ಸುಮಾರು ೭.೦೦ ಸಮಯಕ್ಕೆ "ಹುನ್ಕಲ್ ವುಡ್" ಹತ್ತಿರದ ಮುಖ್ಯರಸ್ತೆಗೆ ಬಂದಿತ್ತು. ಅಲ್ಲಿಂದ ಅವರದೇ ಸಾರಿಗೆ ವ್ಯವಸ್ಥೆಯಲ್ಲಿ ನಾವು ಆ ಧಾಮಕ್ಕೆ ಹೋಗಬೇಕಾಗಿತ್ತು.

ಅಲ್ಲಿ ಮತ್ತೊಂದು ಚಹಾ ವಿರಾಮದ ನಂತರ ಸರಕುಸಾಗಾಣೆ ವಾಹನವೊಂದು ಅಲ್ಲಿನ ದಿನಗೂಲಿ ಕಾರ್ಮಿಕರನ್ನು ಹೊತ್ತು ಆ ಎಸ್ಟೇಟಿನ ಒಳಗೆ ಹೋಯಿತು. ಅದು ಮರಳಿ ನಮ್ಮ ಮುಂದೆ ಬಂದು ನಿಂತಾಗಲೇ ನಮಗೆ ತಿಳಿದದ್ದು, ಅದೇ ನಮ್ಮ ಮುಂದಿನ "ರಾಜಹಂಸ"ವೆಂದು. ನಾವೆಲ್ಲಾ ಅದರೊಳಗೆ (ಕುರಿಗಳು ಸಾರ್, ಕುರಿಗಳು) ಹತ್ತಿ ಯಾವ ಟೋರಾ ಟೋರಾದಲ್ಲೂ ಸಿಗದ ಮಜವನ್ನು ಅನುಭವಿಸಿ ೭.೫೦ಕ್ಕೆ ರೆಸಾರ್ಟ್ ತಲುಪಿದೆವು.

ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿ ತಿಂಡಿಯನ್ನು ತಿಂದು ಮಧ್ಯಾನ್ನದ ಊಟವನ್ನು ಕಟ್ಟಿಸಿಕೊಂಡು ಸುಮಾರು ೧೧.೨೦ಕ್ಕೆ ನಮ್ಮ ಚಾರಣವನ್ನು ಪ್ರಾರಂಭಿಸಿದೆವು. ಪುಟ್ಟಾಣಿ ರತನ್ ಪುಟ್ಟ ಬ್ಯಾಗ್ ಮತ್ತು ಪುಟ್ಟ ಬೈನಾಕ್ಯುಲರ್ ನೊಂದಿಗೆ ತಾನೂ ದೊಡ್ಡವರಿಗಿಂತ ಏನೂ ಕಡಿಮೆಯಿಲ್ಲವೆನ್ನುವಂತೆ ಬಂದಿದ್ದ. ಮಿಕ್ಕ ಪುಟಾಣಿಗಳು ತಮ್ಮ ಪೋಷಕರ ರಕ್ಷಣೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗುತ್ತಿದ್ದರು.



ಸಾಹಸಿಗರಿಗೆ, ಚಾರಣಿಗರಿಗೆ ಹೇಳಿಮಾಡಿಸಿದ ಈ ನಿಸರ್ಗತಾಣದಲ್ಲಿ ಸಣ್ಣ ಝರಿ, ಮನಮೊಹಕ ಪರ್ವತ ಶ್ರೇಣಿ, ದಟ್ಟವಾದ ಕಾಡುಗಳನ್ನೊಳಗೊಂಡಿರುವ ಈ ತಾಣ ಮುಖ್ಯವಾಗಿ ದಿನನಿತ್ಯದ ಜಂಜಾಟದಿಂದ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತ್ತು

ಮಧ್ಯಾನ್ನ ೧೨ರ ಸಮಯದಲ್ಲಿ ನಮ್ಮ ತಂಡಕ್ಕೆ ಹಸಿರು ಹಾವಿನ ದರುಶನವಾಯಿತು. ನವೆಂಬರ್ ತಿಂಗಳಿನಲ್ಲಿ ಮಳೆ ಇರದ ಕಾರಣ ನಮಗೆ ಜಿಗಣೆಗಳ ಕಾಟ ಇರಲಿಲ್ಲ, ಹಾಗೂ ಎಲ್ಲೆಲ್ಲಿ ತೇವಾಂಶವಿರುತ್ತದೋ ಅಲ್ಲೆಲ್ಲಾ ಅವುಗಳದೇ ರಾಜ್ಯಾಭಾರ... ಕಾಫೀ ಎಸ್ಟೇಟಿನಲ್ಲಿ ಕೆಲಸಾಮಾಡುವ ಕಾರ್ಮಿಕರು ಈ ಜಿಗಣೆಗಳ ಕಾಟದಿಂದ ಪಾರಾಗಲು ಸಾಸಿವೆ ಎಣ್ಣೆಗೆ ನಷ್ಯದ ಪುಡಿಯನ್ನು ಬೆರೆಸಿ ತಮ್ಮ ಕೈ ಕಾಲುಗಳಿಗೆ ಲೇಪಿಸಿಕೊಳ್ಳುತ್ತಾರಂತೆ, ಅದು ಅಲ್ಲಿ ಕೆಲಸಮಾಡಲು ಬಂದಿದ್ದವರಿಂದ ನಮಗೆ ತಿಳಿದುಬಂದ ವಿಷಯ. ಅಲ್ಲಿಂದ ಬಳಲಿದ್ದ ತಂಡದ ಸದಸ್ಯರನ್ನು ಹುರಿದುಂಬಿಸುತ್ತಾ ನಮ್ಮ ಹೆಜ್ಜೆಗಳನ್ನು ಹುನ್ಕಲ್-ರಾಕ್ ನ ಕಡೆಗೆ ಸವೆಸುತ್ತಿದ್ದೆವು. ಮಧ್ಯಾನ್ನ ೧.೨೦ ರ ಸಮಯದಲ್ಲಿ ಊಟಮಾಡುವ ಸಲುವಾಗಿ ಒಂದು ಝರಿಯಬಳಿ ತಂಗಿದ್ದೆವು, ಅಲ್ಲಿ ನಮಗೆ ಜಿಗಣೆ, ಮತ್ತು ಪಿಟ್ ವೈಪರ್ ಗಳು ಕಾಣಿಸಿದವು. ಈ ವೈಪರ್ ಅನ್ನುವ ಉರಗ ಪ್ರಭೇದ ಅತ್ಯಂತ ವಿಷಕಾರಿ. ನಮಗೆ ಕಂಡಿದ್ದು ಆಕಾರದಲ್ಲಿ ಪುಟ್ಟ ಮರಿಯಂತಿದ್ದರೂ ಅದರ ವಿಷ ಮಾರಣಾಂತಿಕವೇ. ಎಲ್ಲರ ಕ್ಯಾಮರಾ ಕಣ್ಣು ಆ ವೈಪರಿನತ್ತ ಹೊರಳಿತು.... ಕ್ಯಾಮರಾಗಳು ಮಾತನಾಡತೊಡಗಿದವು, ಕ್ಲಿಕ್.... ಕ್ಲಿಕ್... ಕ್ಲಿಕ್.... ಆ ವೈಪರ್ ತನ್ನ ಸುರುಳಿ ಸುತ್ತಿದ ಮೈಯನ್ನು ಛಾಯಾಗ್ರಾಹಕರಿಗೆ ಪ್ರದರ್ಶಿಸುತ್ತಾ ತನ್ನ ಬಳಿ ಬರಬೇಡಿರೆಂದು ಎಚ್ಚರಿಕೆ ನೀಡುತ್ತಿತ್ತು. ಅಲ್ಲಿಂದ ಸ್ವಲ್ಪ ಮುಂದೆ ಬಂದಂತೆ ಹಾವಿಗಿಂತಾ ನಾನೇನು ಕಮ್ಮಿ ಎನ್ನುವಂತೆ ಮತ್ತೊಂದು ಕೀಟ ತನ್ನ ಹೊಳಪಿನ ಮೈಮಾಟ ಪ್ರದರ್ಶಿಸಿತು.




ಚಾರಣಿಗರೆಲ್ಲಾ ಉತ್ಸಾಹದಿಂದ ಆ ಹೆಬ್ಬಂಡೆಯಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಮಿಕ್ಕವರು ಸುಸ್ತಾಗಿ ಹಿಂದೆ ಉಳಿದಿದ್ದೆವು. ಕಡಿದಾದ ಹುಲ್ಲುತುಂಬಿದ ಆ ಪರ್ವತವನ್ನು ಹತ್ತಲು ಅನುಭವ ಬೇಕೇ ಬೇಕು. ನಮ್ಮೊಂದಿಗೆ ಬಂದಿದ್ದ ಗೈಡ್ ನಮ್ಮಿಂದ ದೂರ ಹೋಗಿದ್ದರಿಂದ ನಮ್ಮ ಮತ್ತು ಅವರ ನಡುವಣ ಸಂಪರ್ಕ ಇರಲಿಲ್ಲ. ಹಾಗಾಗಿ ನಾವು ಹಿಂದುಳಿಯಬೇಕಾಯಿತು. ನಾವೆಲ್ಲಾ ಅಲ್ಲೇ ಕುಳಿತು ನಿಸರ್ಗದ ಸೊಬಗನ್ನು ಸವಿಯುತ್ತಲಿದ್ದರೆ ಮೇಲಿನ ತಂಡ ಆ ಹೆಬ್ಬಂಡೆಯನ್ನು ತಲುಪಲೇ ಬೇಕೆಂದು ತನ್ನ ಚಾರಣವನ್ನು ಮುಂದುವರಿಸಿತ್ತು. ಮುಂದಿನ ದಾರಿ ಕಡಿದಾದ್ದರಿಂದ ನಮ್ಮ ವಿಭಜಿತ ತಂಡ ಸುಮಾರು ೩.೦೦ ಘಂಟೆಯ ಸಮಯದಲ್ಲಿ ಮರಳಿ ರೆಸಾರ್ಟಿಗೆ ಹೋಗುವ ನಿರ್ಧಾರಕ್ಕೆ ಬಂದೆವು. ಹತ್ತುವಾಗ ನಿಂತು ಹತ್ತಿದ್ದ ತಂಡದ ಸದಸ್ಯರು ಇಳಿಯುವಾಗ ಪುಟ್ಟ ಮಕ್ಕಳು ಜಾರುಬಂಡೆಯಲ್ಲಿ ಜಾರಿದಂತೆ ಜಾರಿಕೊಂಡು ಇಳಿಯುತ್ತಿದ್ದರು. ಚಾರಣವನ್ನು ಮುಗಿಸಿ ಮರಳಿ ರೆಸಾರ್ಟಿಗೆ ಬಂದಾಗ ಸಂಜೆ ೬.೩೦ರ ಸಮಯ.

ಅಲ್ಲಿಂದ ಬಂದು ಸ್ವಲ್ಪ ಸುಧಾರಿಸಿಕೊಂಡಮೇಲೆ ಕರೆಂಟ್ ಇಲ್ಲದ ಕಾರಣ ನನ್ನ ಕ್ಯಾಮರದ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲಾಗಲಿಲ್ಲ. ಸಂಜೆಯಹೊತ್ತಿಗೆ ಬಿಸಿ ಬಿಸಿ ಮೆಣಸಿನಕಾಯಿ ಭಜ್ಜಿ, ಮತ್ತೆ ಕಾಪಿ ಬಂದಿತು. ಬೆಂಗಳೂರಿನಲ್ಲಿ ಬಹಳ ಕಡಿಮೆ ಕಾಫಿ ಕುಡಿಯುವ ನಾನು ಅಲ್ಲಿ ಅವರು ಕೊಟ್ಟಾಗಲೆಲ್ಲ ಬೇಡ ಎನ್ನದೇ ಕುಡಿಯುತ್ತಿದ್ದೆ, ಅಲ್ಲಿಯ ಚಳಿಗೆ ಅದು ಅತ್ಯವಶ್ಯಕ. ರಾತ್ರಿ Camp fireಹಾಕಿಕೊಂಡು ಅದರಲ್ಲಿಯ ಬಿಸಿಗೆ ಮೈಒಡ್ಡಿ ಕುಳಿತು ನಮಗೆ ತಿಳಿದಿರುವ ಹಾಡುಗಳನ್ನ ನಮ್ಮದೇ ರೀತಿಯಲ್ಲಿ ಹಾಡಿ, ಮಲಗುವ ಮುಂಚೆ ಮಲ್ಲಿ ಅವರಿಂದ "ಪಾಚೊ ನಾ ಆಯೋ" ಕಥೆಯನ್ನು ಕೇಳಿ ನಂತರ ಎಲ್ಲಾ ತಮ್ಮ ತಮ್ಮ ಕನಸಿನಲೋಕಕ್ಕೆ ಹೊರಳಿದರು.


ಬೆಳಿಗ್ಗೆ ಮನೋಹರ ಕತ್ತಿಗೆ ತನ್ನ ಕ್ಯಾಮರವನ್ನ ತೂಗುಹಾಕಿಕೊಂಡು ಪಕ್ಷಿವೀಕ್ಷಣೆಗೆ ಹೊರಟ. ಅಲ್ಲಿ ನಮಗೆ "ಬೀ ಈಟರ್" "ವ್ಯಾಗ್ ಟೈಲ್" "ಬುಲ್ ಬುಲ್" ಇವೇ ಮೊದಲಾದ ಪಕ್ಷಿಗಳನ್ನು ನೋಡುವ ಅವಕಾಶ ದೊರಕಿತು. ಬೆಳಗಿನ ತಿಂಡಿ ಮುಗಿಸಿ ಅದೇ ಬಂಗಲೆಯ ಹತ್ತಿರದಲ್ಲಿದ್ದ ಒಂದು ಸಣ್ಣ ಝರಿಯನ್ನು ನೋಡಲು ನಮ್ಮತಂಡ ಹೊರಟಿತು. ಸಾಮಾನ್ಯವಾಗಿ ನಮ್ಮಲ್ಲಿ ಕಾಣಸಿಗುವ Dragan flyನ ಮತ್ತೊಂದು ಪ್ರಭೇಧ ನಮ್ಮನ್ನು ಚಕಿತಗೊಳಿಸಿತು. ಸಾಮಾನ್ಯ ಚಿಟ್ಟೆಯಂತೆ ಹಾರುತ್ತಿದ್ದ ಆ ಚಿಟ್ಟೆ ಹೋಲಿಕೆಯಲ್ಲಿ Dragan flyನಂತಿತ್ತು. ಸಾಮಾನ್ಯವಾಗಿ Dragan flyಗಳು ಕುಳಿತಾಗ ತಮ್ಮ ರೆಕ್ಕೆಯನ್ನು ಅಗಲವಾಗಿ ಹರಡಿ ಕೂರುತ್ತವೆ, ಆದರೆ ಈ Dragan flyಪ್ರಭೇಧ ತನ್ನ ರೆಕ್ಕೆಯನ್ನು ಮಡಚಿ ಕೂರುತ್ತಿತ್ತು.



ಆ ಸೊಬಗನ್ನು ಸವಿಯುತ್ತಾ ನಂತರ ಅಲ್ಲಿಂದ ನಮ್ಮ ತಾಣಕ್ಕೆ ಮರಳಿ ಬಂದೆವು. ಅಲ್ಲಿ ಊಟಮಾಡಿಕೊಂಡು ಮತ್ತದೇ "ರಾಜಹಂಸ" ದಲ್ಲಿ ಮುಖ್ಯರಸ್ತೆಗೆ ಬಂದು ನಮಗಾಗಿ ಕಾದು ಕುಳಿತಿದ್ದ "ಹಂಸ"ವನ್ನೇರಿ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆವು. ಪಯಣದ್ದ ಪ್ರಾರಂಭದಲ್ಲಿ ನಮ್ಮ ಹಂಸದಲ್ಲಿ Sansui ಚಿತ್ರ ಪ್ರದರ್ಶನವಾಯಿತು. ನಂತರ ಹಿಂದಿನ ಸಾಲುಗಳಲ್ಲಿ ಕುಳಿತಿದ್ದ ನಮ್ಮ ಮಧುರ !!!! ಕಂಠದಿಂದ ಸುಶ್ರಾವ್ಯ ಗಾನಸಿರಿ ಶುರುವಾಗಿ ಅದು ಬೆಂಗಳೂರಿನ ತನಕ ಮುಂದುವರಿದಿತ್ತು. ೨ ದಿನಗಳಿಂದ ಜೊತೆಯಲ್ಲಿದ್ದ ತಂಡದ ಸದಸ್ಯರು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿದ್ದರು.

Thursday, November 13, 2008

ಪ್ರೀತಿ ಮೂಡಿದಾಗ...

ಛೇ....

ನಾನು ಹೀಗೆ ಮಾಡಬಾರದಿತ್ತು.....
ಆ ಪುಟ್ಟ ಮನಸ್ಸಿಗೆ ನೋವು ನೀಡಬಾರದಿತ್ತು....
ನಾನು ಅವಳನ್ನು ನೋಯಿಸಿಬಿಟ್ಟೆ ಕಣೋ !!!!
ಅವಳ ಆ ಕಣ್ಣುಗಳಿಂದ ಕಣ್ಣೀರಿಳಿಸಿಬಿಟ್ಟೆ....
ದೇವರು ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ....
ಅಲ್ಲ ಅಲ್ಲ ತಪ್ಪು....
ಈ ಪ್ರಶ್ನೆ ಬರುವುದೇ ಇಲ್ಲ ಅಲ್ವೇನೋ ???
ನಾನು ಈ ರೀತಿ ಮಾಡಿದ್ದು ಅವನ ಸಹಾಯದಿಂದನೇ ಅಲ್ವಾ ?
ಅವ್ನು ನನ್ಗೆ ಯಾಕೆ ಈ ರೀತಿ ತೊಂದ್ರೆ ಕೊಡ್ತ ಇದಾನೆ ?
ನಾನು ಮತ್ತೆ ಅವಳು ಗೆಳೆತನದಲ್ಲಿ ಖುಷಿಯಾಗಿದ್ವೋ ಆದ್ರೆ ಅದ್ಯಾವತ್ತು ಈ ರೀತಿ ಪ್ರೀತಿಗೆ ತಿರುಗಿತ್ತೋ ನನ್ಗೇ ಗೊತ್ತಾಗ್ಲಿಲ್ಲ ಕಣೋ....

ಇದು ಗಿರಿಧರ ತನ್ನ ಆಪ್ತಗೆಳೆಯ ಶಶಾಂಕನೊಂದಿಗೆ ಆಡಿದ ನೋವು ತುಂಬಿದ ಮಾತುಗಳು... ಗಿರಿಧರ ಪ್ರತೀದಿನ ಅವನ ಆಗು ಹೋಗುಗಳನ್ನ ಶಶಾಂಕನೊಂದಿಗೆ ಚಾಚೂ ತಪ್ಪದೇ ಹೇಳುತ್ತಿದ್ದ, ಅಂದು ಅವನು ಅಂದು ಪುಟ್ಟ ಮಗುವಾಗಿದ್ದ... ನೋವು ತುಂಬಿದ ಹೃದಯದಿಂದ ಸೊರಗಿಹೋಗಿದ್ದ. ಕಾಲೇಜಿನಲ್ಲಿ ವ್ಯಾಸಂಗಮಾಡುವಾಗ ಇವರಿಬ್ಬರ ಗೆಳೆತನ ಪ್ರಾರಂಭವಾದದ್ದು... ಒಂದು ಜೀವ ಎರೆಡು ದೇಹದಂತಿದ್ದ ಆ ಇಬ್ಬರ ಗೆಳೆತನ ನಿತ್ಯ ನೂತನವಾಗಿತ್ತು. ಗೆಳೆಯರು ಎಂದರೆ ಹೀಗಿರಬೇಕು- ಇವರೇ ಬೇರೆಯವರಿಗೆ ಮಾದರಿ ಎಂದು ಎಲ್ಲಾ ಹೊಗಳುತ್ತಿದ್ದರು.

ಗಿರಿಧರ ಸ್ವಭಾವದಲ್ಲಿ ಸಾಧು, ಮೃದು ಹೃದಯಿ. ಬಹಳ ಬೇಗ ನೊಂದುಕೊಳ್ಳುವ ಅವನು ಅಂದು ಶಶಾಂಕನೊಡನೆ ತನ್ನ ಜೀವನದಲ್ಲಾದ ಘಟನೆಯನ್ನು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಒಂದೇ ಊರಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಬೇರೆ ಬೇರೆ ಸ್ಥಳದಲ್ಲಿದ್ದದ್ದರಿಂದ ಕೇವಲ ದೂರವಾಣಿಯಲ್ಲಿ ಸಂವಾದ ಮಾಡುತ್ತಿದ್ದರು.

ಗಿರಿಧರನ ಮತ್ತು ಲಾಸ್ಯಳ ಪರಿಚಯವಾಗಿ ೧ ವರುಷ ೬ ತಿಂಗಳು ಕಳೆದಿದ್ದರೂ ಅವರು ಒಬ್ಬರನ್ನೊಬ್ಬರು ಭೇಟಿಮಾಡಿರಲಿಲ್ಲ. ಪರಸ್ಪರ ಪ್ರೀತಿಸುತ್ತಿದ್ದ ಯುವಜೋಡಿ ಅದು. ತಮ್ಮದೇ ಆದ ಕನಸುಗಳಲೋಕದಲ್ಲಿದ್ದ ಅವರಿಗೆ ವಾಸ್ತವ ಬದುಕಿನ ಕಟು ಸತ್ಯದ ಅರಿವಾಗಿರಲಿಲ್ಲ. ಕೆಲಸದಲ್ಲಿ ಉತ್ತಮ ಪ್ರಗತಿಹೊಂದಿ ಆಕೆಯ ಮನೆಯಲ್ಲಿ ಆಕೆಯನ್ನು ವಿವಾಹವಾಗುವ ಕನಸ ಕಂಡಿದ್ದ. ಆದರೆ ಅವನ ಮನೆಯಲ್ಲಿನ ಪರಿಸ್ಥಿತಿ ಅವನನ್ನು ಆಕೆಯಿಂದ ದೂರಮಾಡಿತ್ತು. ಪ್ರತಿದಿನ ಸಮಯದ ಅರಿವಿಲ್ಲದೇ ಕೇವಲ ದೂರವಾಣಿಯ ಸಂಪರ್ಕದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು... ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಅಡಿಪಾಯವಿಲ್ಲದ ಕಟ್ಟಡದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ತಮ್ಮದೇ ಆದ ಪುಟ್ಟ ಮನೆ, ಮನೆಯಲ್ಲಿ ತಮ್ಮ ಸಂಸಾರದ ಕನಸ ಹೆಣೆಯುತ್ತಿದ್ದರು. ಶಶಾಂಕ ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಮತ್ತು ಗಿರಿಧರ-ಲಾಸ್ಯರ ಸಂಭಂದವನ್ನು ಗೌರವಿಸುತ್ತಿದ್ದ. ಪ್ರತಿದಿನ ಲಾಸ್ಯಳೊಂದಿಗೆ ಮಾತನಾಡಿ ಶಶಾಂಕನೊಂದಿಗೆ ಮಾತನಾಡಿದರೆ ಗಿರಿಧರನಿಗೆ ಒಂದುರೀತಿಯ ಸಮಾಧಾನ. ಗಿರಿಧರ-ಲಾಸ್ಯರ ಜೋಡಿ ಎಲ್ಲಾ ಯುವಪ್ರೇಮಿಗಳಂತೆ ಇರಲಿಲ್ಲ. ಪರಸ್ಪರ ಗೌರವಿಸುತ್ತಾ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರು. ಮುಂದೆ ಒಮ್ಮೆ ತಾವು ಬೇರೆ ಬೇರೆ ಆಗುವ ಸಂಧರ್ಭ ಒದಗಿ ಬಂದರೂ ಧೈರ್ಯಗೆಡದೇ ಅದನ್ನು ಎದುರಿಸಬೇಕೆಂದು ನಿರ್ಧರಿಸಿದ್ದರು.

ಅಂದು ಆಕಸ್ಮಿಕವಾಗಿ ಆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಗಿರಿಧರನ ಮನೆಯವರು ಸಂಪ್ರದಾಯಸ್ಥರು. ಗಿರಿಧರನಿಗೆ ಮದುವೆ ಮಾಡುವ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ನಡೆದಿತ್ತು. ಮೊದಲು ಹುಡುಗಿಯ ಚಿತ್ರವನ್ನು ನೋಡಿ ನಂತರ ಜಾತಕವನ್ನು ನೋಡಿ ಅದೆರಡೂ ಒಪ್ಪಿಗೆಯಾದರೆ ಮುಂದಿನ ಮಾತುಕತೆ ಮುಗಿಸಿ ಮದುವೆ... ಗಿರಿಧರನಿಗೆ ಇದೆಲ್ಲಾ ತಿಳಿದಿದ್ದರೂ ಆತ ಲಾಸ್ಯಳನ್ನ ಪ್ರೀತಿಸುತ್ತಿದ್ದ. ಆ ವಿಚಾರವಾಗಿ ಆಕೆಯೊಡನೆ ಸಮಾಲೋಚನೆಕೂಡಾ ನಡೆಸಿದ್ದ. ಪರಸ್ಪರ ಒಪ್ಪಿಗೆಯಾದಮೇಲೆ, ಜಾತಕದ ಪ್ರಶ್ನೆ ಕಾಡುವುದಿಲ್ಲವೆಂದು ಅವರಿಬ್ಬರ ನಂಬಿಕೆ. ಆದರೆ ಒಂದು ದಿನ ಗಿರಿಧರನ ತಾಯಿಗೆ ತನ್ನ ಮನದ ಇಂಗಿತವನ್ನ ತಿಳಿಸಬೇಕೆನಿಸುವಷ್ಟರಲ್ಲಿ ಆತನ ತಾಯಿ ಮದುವೆಯ ವಿಚಾರ ಮಾತನಾಡತೊಡಗಿದರು.

"ನೋಡೋ ಗಿರೀ... ನಾನು ಮೊನ್ನೆ ಊರಿಗೆ ಹೋಗಿದ್ದಾಗ ಸುಬ್ಬಾಶಾಸ್ರಿಗಳ ಮಗಳು ಸಿಕ್ಕಿದ್ಳು ಕಣೋ... ಈಗ ಚಂದ ಕಾಣ್ತಾಳೆ... ಅವ್ಳಿಗೂ ಡಿಗ್ರೀ ಆಗಿದ್ಯಂತೆ.... ಹುಡುಗೀ ಅಂದ್ರೆ ಹಾಗಿರ್ಬೇಕು ನೋಡು. ದೊಡ್ಡವ್ರು ಅಂದ್ರೆ ಅವ್ಳಿಗೆ ಗೌರವ ಇದೆ. ನನ್ಗೆ ಅಂತವ್ಳ್ನೇ ಸೊಸೆಯಾಗಿ ತಂದ್ಕೋಬೇಕು ಅಂತ ಆಸೆ ಕಣೋ... ನೀನು ಅದಿಕ್ಕೆ ಒಪ್ಕೋತೀಯ ಅಂತನೂ ಗೊತ್ತು. ನನ್ ಕಣ್ ಮುಚ್ಚೋದ್ರೋಳ್ಗೇ ನಿನ್ ಮದ್ವೆ ನೋಡ್ಬೇಕು ಅಂತ ಆಸೆ. ನೆರವೇರಿಸ್ಕೊಡ್ತೀಯಾ......"

ಈ ವಿಚಾರವನ್ನ ಕೇಳಿ ಗಿರಿಧರನಿಗೆ ಸಿಡಿಲು ತಲೆಯಮೇಲೆರಗಿದ ಹಾಗಾಯಿತು... ಇನ್ನೂ ಒದುತ್ತಿರುವ ಅವನ ಲಾಸ್ಯಳಿಗೆ ಈ ವಿಚಾರವನ್ನ ಹೇಳುವುದು ಹೇಗೆ ? ಮುಂದಿನ ಜೀವನದಬಗ್ಗೆ ಸುಂದರ ಕನಸುಗಳನ್ನ ಹೆಣೆದಿರುವ ನಾವಿಬ್ಬರೂ ದೂರ ದೂರವಾದರೆ ನಮ್ಮ ಭವಿಷ್ಯದ ಕತೆ ಏನಾದೀತು ?? ಈ ವಿಚಾರವನ್ನು ಅವಳೊಡನೆ ಪ್ರಸ್ತಾಪ ಮಾಡುವುದಾದರೂ ಹೇಗೆ ? ತಲೆಯಲ್ಲಿ ನೂರಾರು ರೀತಿಯ ಪ್ರಶ್ನೆಗಳ ಸುರಿಮಳೆಗೆ ಗಿರಿಧರ ತತ್ತರಿಸಿ ಹೋಗಿದ್ದ...

ಅಂದಿನಿಂದ ಅವನಿಗೆ ಲಾಸ್ಯಳ ಜೊತೆಯಲ್ಲಿ ಮಾತನಾಡುವುದು ಕಷ್ಟವಾಗ ತೊಡಗಿತು. ಲಾಸ್ಯಳ ಹಲವು ಪ್ರಯತ್ನದ ನಡುವೆಯೂ ಗಿರಿಧರ ಅವನ ಮನೆಯಲ್ಲಿ ನಡೆದ ವಿಷಯವನ್ನ ಹೇಳಲಾಗಲಿಲ್ಲ. ಅವನ ಆ ರೀತಿಯ ವರ್ತನೆ ಲಾಸ್ಯಳ ಮೇಲೆ ಬಹಳವಾಗಿ ಪರಿಣಾಮಬೀರತೊಡಗಿತು. ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಆದರೆ ಗಿರಿಧರನ ವರ್ತನೆ ಆಕೆಗೆ ಅರ್ಥವಾಗಲಿಲ್ಲ. ಪರಿಪರಿಯಾಗಿ ಕೇಳಿದರೂ ಗಿರಿಧರನಿಂದ ಉತ್ತರ ಬಾರದ ಕಾರಣ ಲಾಸ್ಯ ತನಗಾಗುತ್ತಿರುವ ವೇದನೆಯನ್ನು ಅವನೊಡನೆ ಹೇಳಿದಳು.

ಇಷ್ಟುದಿನಗಳಿಂದ ಒಳಗೆ ಬಚ್ಚಿಟ್ಟಿದ್ದ ನೋವನ್ನು ಅಂದು ಗಿರಿಧರ ಹೊರಗೆಡವಿದ: ದಯವಿಟ್ಟೂ ನನ್ನ ಕ್ಷಮಿಸಿಬಿಡು.... ನಾನು ನಿನ್ನ ಮನಸ್ಸನ್ನ ಕೆಡಿಸಿದವನು... ಆದರೆ ನಾನು ಇಂದು ನಿಸ್ಸಹಾಯಕನಾಗಿದ್ದೇನೆ. ಮನೆಯಲ್ಲಿ ಅಮ್ಮನ ಬೇಡಿಕೆಯನ್ನು ಈಡೇರಿಸದ ಮಗ ಎನ್ನುವ ಪಟ್ಟ ನನ್ನಿಂದ ಕಟ್ಟಿಕೊಳ್ಳಲಾಗುವುದಿಲ್ಲ, ಹಾಗೆಂದು ನನ್ನ ಪ್ರೀತಿಗೂ ಮೋಸ ಮಾಡಲಾಗುವುದಿಲ್ಲ. ನನಗೆ ದಾರಿ ತೋಚದಾಗಿದೆ..... ಇಷ್ಟು ಹೇಳುತ್ತಲೇ ಅವನ ಕಣ್ಣೀರು ಧರೆಗಿಳಿಯತೊಡಗಿತು. ಪುಟ್ಟಮಗುವಿನಂತೆ ಅಳುತ್ತಾ ನಿಂತುಬಿಟ್ಟ. ಇತ್ತಕಡೆ ಲಾಸ್ಯಳಿಗೆ ಅವನ ಮಾತುಗಳನ್ನು ಕೇಳಿ ಯಾವರೀತಿ ಪ್ರತಿಕ್ರಿಯಿಸಬೇಕೆಂಬುದು ತಿಳಿಯಲಿಲ್ಲ. ಎರಡೂ ಕಡೆಯಿಂದ ಕೇವಲ ಬಿಕ್ಕಳಿಸಿ ಅಳುವ ಧನಿಯನ್ನು ಬಿಟ್ಟು ಬೇ‍ರೆ ಏನೂ ಸದ್ದಿರಲಿಲ್ಲ....

Friday, November 7, 2008

ನಿಮ್ಮಲ್ಲಿ ನಲ್ಮೆಯ ವಿನಂತಿ...

ನಾವು ನಮ್ಮ ಕಳೆದುಹೋದ ದಿನಗಳತ್ತ ತಿರುಗಿ ನೋಡಿದರೆ ಎಂದಾದರೂ ಒಮ್ಮೆ ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಅಥವಾ ಕರಪತ್ರ ಬಂದಿರಬಹುದು... "ಜೈ ಸಂತೋಷೀ ಮಾ" ...... ಹೀಗೆ ಆರಂಭವಾಗುವ ಪತ್ರ "ಇದನ್ನು ____ ಜನರಿಗೆ ಕಳುಹಿಸಿದರೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಡುಕಾಗುತ್ತದೆ" ಇಲ್ಲಿಯವರೆಗೆ ಇರುತ್ತಿತ್ತು. ಆದರೆ ಕಾಲ ಬದಲಾದಂತೆ ಇದು ಮರೆಯಾಯಿತೆಂದೇನಲ್ಲ, ಇದನ್ನು ಕಳುಹಿಸುವ ಜನರು ಹೊಸಾ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಈ ರೀತಿಯ ಸಂದೇಶಗಳನ್ನ ಬದಲಾಯಿಸಿಕೊಂಡಿದ್ದಾರೆ... ಅಂಚೆಯನ್ನು ಮರೆತು ಮೊಬೈಲಿಗೆ, ಈ-ಮೈಲಿಗೆ ದಾಸರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು e-mailಗಳು, SMSಗಳು, Orkut scrapಗಳು ನಿಮಗೆ ಅಷ್ಟಾಗಿ ಪರಿಚಯವಿಲ್ಲದವರಿಂದ ಬಂದಿರುತ್ತದೆ, ಅದರ ಅಡಕ ಈ ಮೇಲೆ ಹೇಳಿದ್ದಕ್ಕಿಂತಾ ಭಿನ್ನವೇನಲ್ಲ... "ಇದು _____ ದೇವಿಯ/ದೇವರ ಪವಾಡ... ಇದನ್ನು ೨೦ ಜನಗಳಿಗೆ ಕಳುಹಿಸಿದರೆ ನಿಮ್ಮ ಭವಿಷ್ಯ ಉತ್ತಮವಾಗುವುದು, ಕಡೆಗಾಣಿಸಿದರೆ ಕೆಡುಕಾಗುವುದು. ನಾನು ಇದನ್ನು ನಿಮಗೆ ಕಳುಹಿಸಲೇ ಬೇಕಾಗಿದೆ, ಕ್ಷಮೆ ಇರಲಿ" ಇತ್ಯಾದಿ ಇತ್ಯಾದಿ...

ದೇವರು ಅಥವಾ ದೇವತೆಯ ಹೆಸರು ಜೈ ಸಾಯಿನಾಥ್, ಜೈ ಅಂಬಾ..... ಏನಾದರೂ ಆಗಿರಬಹುದು ಹೀಗೇ ಪಟ್ಟಿ ಮಾಡುತ್ತಲಿದ್ದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಈ ಪಟ್ಟಿಯಲ್ಲಿ ಅಲ್ಲ, ಜೀಸಸ್ ದೇವರುಗಳೂ ಸೇರಿದ್ದಾರೆ. ಮೇಲಿನ ಹೆಸರನ್ನು ನೋಡಿಯೇ ಆಸ್ತಿಕರು ದೇವರಮೇಲಿನ ಭಕ್ತಿಯಿಂದಲೋ, ಭಯದಿಂದಲೋ, ತಮ್ಮ ಭವಿಷ್ಯದ ಚಿಂತೆಯಿಂದಲೋ ತಮ್ಮ ಪರಿಚಯದವರಿಗೆ ಅದನ್ನು ಕಳುಹಿಸುತ್ತಾರೆ. ಅವರ ಮಟ್ಟಿಗೆ ಅದು ಕೇವಲ ಒಂದು ಸಂದೇಶ ಮಾತ್ರ, ಆದರೆ ಅದರ ಹಿಂದೆ ತಂತ್ರಜ್ಞಾನ ತಿಳಿಯುವ ಆಸಕ್ತಿ ಅವರಲ್ಲಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪನಿಗಳು ನೀಡಿರುವ ಉಚಿತ SMS package ನಿಂದ ಆ ಸಂದೇಶ ಕಳುಹಿಸುವ ವ್ಯಕ್ತಿಗೆ ಯಾವುದೇ ಖರ್ಚಿಲ್ಲದೇ ತನ್ನ ಕೆಲಸ ಆಗಿಹೋಗುತ್ತದೆ. ಆದರೆ ಅದೇ ಒಂದು e-mail ಆದರಂತೂ ಒಂದು ನಯಾಪೈಸೆ ಕೂಡಾ ಖರ್ಚಿಲ್ಲ... ಉಚಿತವಾಗಿ ತಮ್ಮ ಪರಿಚಯಸ್ಥರ e-mailಐಡಿ ಗಳನ್ನ ಹಾಕಿ ಕಳುಹಿಸಿದರಾಯಿತು. e-mailವಿಚಾರದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಹಳ ದೊಡ್ಡಮೊತ್ತವನ್ನು ವ್ಯಯಿಸುತ್ತಿರುವುದು ಕಳುಹಿಸಿವವನ ಗಮನಕ್ಕೆ ಬರುವುದಿಲ್ಲ. ಅವನ ಮಟ್ಟಿಗೆ ಅದು ಕೇವಲ ಒಂದು ಸಂದೇಶವಷ್ಟೇ... ಆದರೆ ಆ ಸಂದೇಶವನ್ನ ಸ್ವೀಕರಿಸುವ ವ್ಯಕ್ತಿಗೆ ಮೇಲೆ ಹೇಳಿದಂತೆ ಅಪಾರ ನಂಬಿಕೆ ಇದ್ದಲ್ಲಿ ಆತ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ, ಕಳುಹಿಸದೇ ಬೇರೆ ದಾರಿ ಇಲ್ಲ... ಹಾಗಾಗಿ ಅವನಿಂದ ಆ e-mail ಮತ್ತಷ್ಟು e-mailಐಡಿ ಗಳಿಗೆ ತಳ್ಳಲ್ಪಡುತ್ತದೆ. ಅದರಿಂದ ಆಗುವ ಲಾಭ ???

ಸುಮ್ಮನೆ ಸಮಯದ ನಷ್ಟ ಮಾನಸಿಕ ಕಿರಿಕಿರಿ ಇತ್ಯಾದಿ.... ಈ ಮೇಲಿನ ಸಂದೇಶಗಳು ಕೇವಲ ದೇವರಿಗೆ ಸೀಮಿತವಾಗಿಲ್ಲ, ಅದು ನಿಮ್ಮ ಗೆಳೆತನಕ್ಕೂ ಸವಾಲೊಡ್ಡಬಹುದು.... "ನಿನಗೆ ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ಇದ್ದರೆ ನನಗೂ ಸೇರಿದಂತೆ ಇದನ್ನು ೨೦ ಜನರಿಗೆ ಕಳುಹಿಸು, ಎಷ್ಟು ಜನ ನಿನ್ನ ಬಗ್ಗೆ ಕಾಳಜಿ ಹೊಂದಿದ್ದರೆಂದು ನಿನಗೆ ಅರಿವಾಗುತ್ತದೆ". ಕೇವಲ ಸಂದೇಶ ಕಳುಹಿಸಿದರೆ ಮಾತ್ರಕ್ಕೆ ಕಾಳಜಿಯೆ ??? ಒಂದು ರೀತಿಯಲ್ಲಿ ಇಂತಹಾ ಸಂದೇಶಗಳು ಮೊಬೈಲ್ ಕಂಪನಿಯನ್ನು ಉದ್ದಾರ ಮಾಡುತ್ತವೆ !!! ನಾನು ಸಾಧ್ಯವಾದಷ್ತೂ ಇಂತಹಾ ಸಂದೇಶ ಕಳುಹಿಸುವ ಸ್ನೇಹಿತರಿಗೆ ಆದಷ್ಟೂ ತಿಳಿಹೇಳುತ್ತೇನೆ. ಸಾಧ್ಯವಾದಲ್ಲಿ ನೀವೂ ತಿಳಿಹೇಳಿ :)

ಕೊನೆಯದಾಗಿ ನಾನು ಹೇಳುವುದಿಷ್ಟೆ : ಇದನ್ನು ೨೦ ಜನಕ್ಕಲ್ಲ ಸಾಧ್ಯವಾದಷ್ಟು ಜನರಿಗೆ ತಿಳಿಹೇಳಿ ಅವರಲ್ಲಿ ಅರಿವು ಮೂಡಿಸಿರಿ :) ದೇವರು ನಮ್ಮ SMS ನಿಂದ ಸಂತಸ ಗೊಳ್ಳುವುದಿಲ್ಲ.... ಬದಲಾಗಿ ಕಷ್ಟಪಟ್ಟು ದುಡಿದರೆ ಸಂತಸ ಪಡಬಹುದೇನೊ....

Monday, November 3, 2008

ಪಯಣ-1

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...

ನಾನು ನನ್ನ ಆಫೀಸನ್ನ ಸಂಜೆ ಸರಿ ಸುಮಾರು ೫.೪೫ಕ್ಕೆ ಬಿಟ್ಟು ಮನೆಗೆ ಬಂದೆ. ಇನ್ನೂ ಹೊರಡುವ ತಯಾರಿ ಆಗಿಲ್ಲದ ಕಾರಣ ಸ್ವಲ್ಪ ಗಡಿಬಿಡಿಯಾಗುತ್ತಿತ್ತು. ಮನೆಗೆ ಬರುವ ಮುನ್ನ ಗಟ್ಟಿ ಅವಲಕ್ಕಿ, ಸ್ಲೈಸ್, ಮತ್ತೆ ಖರ್ಜೂರವನ್ನ ಮನೆಗೆ ತಂದಿದ್ದೆ. ನನ್ನ ಮನೆಯಿಂದ ಹೊರಟು ಕೆಂಪೇಗೌಡ ಬಸ್ ನಿಲ್ದಾಣವನ್ನ ತಲುಪಲು ಕನಿಷ್ಟಪಕ್ಷ ೧ ಘಂಟೆಯಾದರೂ ಬೇಕು. ಬೆಂಗಳೂರಿನ ಅದರಲ್ಲೂ ಬನ್ನೆರುಘಟ್ಟ ರಸ್ತೆಯ ವಾಹನದಟ್ಟಣೆಯಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕು. ಹಾಗಾಗಿ ಅಡುಗೆ ಮಾಡಿಕೊಂಡು ಊಟಮಾಡಿ ಹೊರಡಲು ನನ್ನ ಬಳಿ ಸಮಯದ ಅಭಾವವಿತ್ತು. ಹೇಗಿದ್ದರೂ ಆಗತಾನೆ ತಂದಿದ್ದ ಅವಲಕ್ಕಿ ಕೈಗೆ ಸಿಕ್ಕಿದ್ದರಿಂದ ಅದನ್ನೇ ಸ್ವಲ್ಪ ನೆನೆಸಿಕೊಂಡು ಮೊಸರಿನೊಂದಿಗೆ ತಿಂದು ಬಸ್ಸನ್ನು ಹುಡುಕುತ್ತಾ ಹೊರಟೆ. ನಾನಿರುವ ಮನೆಯ ಹತ್ತಿರದಲ್ಲಿ ಯಾವುದೇ Busstop ಇಲ್ಲದ್ದರಿಂದ ನಡೆದುಕೊಂಡು ಬನ್ನೇರುಘಟ್ಟ ಮುಖ್ಯರಸ್ತೆಗೆ ಬಂದೆ. ರಾತ್ರಿ ೧೦.೪೫ ಕ್ಕೆ ಗಂಗಾವತಿಗೆ ಹೊರಡುವ ಐರಾವತ ಬಸ್ಸನ್ನು ನಾನು ಹತ್ತಬೇಕಿತ್ತು. ನಾನು ಕೆಂಪೇಗೌಡ ನಿಲ್ದಾಣದ ಬಸ್ಸನ್ನು ಹತ್ತಿದಾಗಲೇ ೯ ಘಂಟೆ ಸಮಯವಾಗಿತ್ತು. ಮನದಲ್ಲೇ Traffic jamನ ಭಯಂಕರ ರೂಪವನ್ನ ನೆನೆಸಿಕೊಂಡು ನಾನು ಅದರಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಐರಾವತವನ್ನೇರಿದರೆ ಸಾಕೆನ್ನಿಸಿತ್ತು.

ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಾನು ಬಂದಾಗ ಇನ್ನೂ ಘಂಟೆ ೧೦ರ ಸಮಯ. ೪೫ ನಿಮಿಷ ಸಮಯವಿದ್ದದ್ದರಿಂದ ಅಲ್ಲೇ ಕುಳಿತುಕೊಳ್ಳುವ ಆಸನ ಖಾಲಿ ಇದ್ದದ್ದನ್ನು ಹುಡುಕಿ ಕುಳಿತೆ. ನಾನೇನೋ ಸಮಯಕ್ಕೆ ಮುಂಚಿತವಾಗಿ ಬಂದು ನಿರಾಳವಾಗಿ ಕುಳಿತಿದ್ದೆ. ಆದರೆ ನನ್ನ ಸುತ್ತ ಮುತ್ತ ಸ್ವಲ್ಪ ತಡವಾಗಿ ಬಂದವರ ಮುಖದಲ್ಲಿ ತಮ್ಮ ಬಸ್ಸು ತಪ್ಪಿಹೋದಬಗ್ಗೆ ಬೇಸರ, ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಪರಸ್ಪರ ದೂಷಿಸುತ್ತಿದ್ದ ದೃಷ್ಯ, ಆ ಜನಜಂಗುಳಿಯ ನಡುವೆ ಕುಡುಕರ ಕಾಟ, ಅವನನ್ನು ಬೆನ್ನಟ್ಟಿ ಬರುತ್ತಿದ್ದ ಪೋಲೀಸ್ ಪೇದೆಗಳು, ಭಿಕ್ಷುಕಿಯೊಬ್ಬಳು ತಾನು ಸಾಕಿದ ನಾಯಿಯ ಜೊತೆಯಲ್ಲಿ ತಿನ್ನುತ್ತಿದ್ದ Tigerಬಿಸ್ಕತ್ತಿನ ದೃಷ್ಯ ನನ್ನ ಸುತ್ತ ಸುಳಿದಾಡುತ್ತಿದ್ದವು. ಮನೆಯಿಂದ, ಮನೆಯವರಿಂದ ತಿರಸ್ಕಾರಕ್ಕೊಳಗಾದ ಹಲವಾರುಮಂದಿ ಇದೇರೀತಿ ರೈಲ್ವೇ ನಿಲ್ದಾಣದಲ್ಲೋ, ಬಸ್ ನಿಲ್ದಾಣದಲ್ಲೋ ತಮ್ಮ ಆಶ್ರಯವನ್ನ ಕಾಣಬೇಕಾಗುತ್ತದೆ. ಅದೇ ವಿಚಾರವನ್ನ ಯೋಚಿಸುತ್ತಿದ್ದಂತೆ ಅಲ್ಲಿ ಸಂತಸದ ಕ್ಷಣಗಳೂ ಕಂಡು ಬಂದವು. ಎಂದೋ ಭೇಟಿಯಾಗಿ ಸ್ನೇಹಿತರಾಗಿದ್ದು ನಂತರ ಜೀವನದ ಓಟದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗದೇ ಇದ್ದ ಸ್ನೇಹಿತರು ಆ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಪರಸ್ಪರ ಹಸ್ತಲಾಘವಮಾಡುತಾ ಒಬ್ಬರನ್ನೊಬ್ಬರು ಖುಷಿಯಾಗಿ ಮಾತನಾಡಿಸುತ್ತಾ ಇದ್ದದ್ದನ್ನು ಕಾಣುತ್ತಿದ್ದಂತೇ ನಾ ಕಾದು ಕುಳಿತಿದ್ದ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು.

ಹೊಸಪೇಟೆಗೆ ಇದು ನನ್ನ ೨ನೇ ಪಯಣ. ಆ ಸ್ಥಳದ ಪರಿಚಯ ಹೆಚ್ಚಾಗಿ ಇರದ ಕಾರಣ ಆ ಬಸ್ಸಿನ ನಿರ್ವಾಹಕನನ್ನ ಸ್ವಲ್ಪ ಹೊಸಪೇಟೆ ಬಂದಾಗ ನನ್ನನ್ನು ಎಚ್ಚರಿಸುವಂತೆ ಕೇಳಿಕೊಂಡು ನನ್ನ ಜಾಗಕ್ಕೆ ಹೋಗಿ ಕುಳಿತೆ. ಬಸ್ಸಿನ ಒಳಗಡೆ ಕನ್ನಡ ಚಲನಚಿತ್ರಗಳ ಗಾನಸುಧೆ ಹರಿದು ಬರುತ್ತಿತ್ತು. ಆದರೆ ಅದನ್ನು ಆಸ್ವಾದಿಸಲು ಬಸ್ಸಿನ ಒಳಗೆ ಕುಳಿತಿದ್ದ ಇಬ್ಬರು ಆಂಗ್ಲಭಾಷಿಗ ಕನ್ನಡಿಗರು ಅವಕಾಶ ನೀಡುತ್ತಿರಲಿಲ್ಲ. ದಾರಿಯುದ್ದಕ್ಕೂ ಪರಸ್ಪರ ಆಂಗ್ಲಭಾಷೆಯಲ್ಲೇ ಸಂಭಾಷಿಸುತ್ತಾ ತಮ್ಮ ದೂರವಾಣಿಯಲ್ಲಿ ಕನ್ನಡ ಮಾತನಾಡುತ್ತಾ (ಅಲ್ಲಾದರೂ ಕನ್ನಡದಲ್ಲಿ ಮಾತನಾಡಿದರೆನ್ನುವುದೇ ಸಮಾಧಾನ) ಕಿರಿಕಿರಿ ಉಂಟುಮಾಡುತ್ತಿದ್ದರು. ಅವರಿ ಕಿರಿಕಿರಿ ತಾಳಲಾಗದೇ ನಾನು ನನ್ನ ಕಿವಿಗೆ ಎಫ್ ಎಂ ಅನ್ನು ಚುಚ್ಚಿಕೊಂಡೆ. ರಾತ್ರಿಯ ಹೊತ್ತು ಬಸ್ಸು ದಾರಿಯನ್ನು ಸವೆಸುತ್ತಾ ಮುಂದೆಸಾಗಿತ್ತು. ಎಲ್ಲಾ ಸಹಪ್ರಯಾಣಿಗರು ನಿದ್ರಾದೇವಿಯ ವಶವಾದರೂ ನಾನವರ ಗೊರಕೆ ಸದ್ದಿಗೆ ನಿದ್ರಿಸಲಾಗದೇ ನಿದ್ರಿಸುವ ಪ್ರಯತ್ನ ಮಾಡುತ್ತಿದ್ದೆ. ಅಂತೂ ಇಂತೂ ಕತ್ತಲು ಕಳೆದು ಬೆಳಗಿನ ಚುಮುಚುಮು ಬೆಳಕಿನೊಂದಿಗೆ ಹೊಸಪೇಟೆ ನನ್ನನ್ನು ಸ್ವಾಗತಿಸಿತು.

ಬಸ್ ನಿಲ್ದಾಣದಿಂದ ಮೊದಲೇ ಕಾದಿರಿಸಿದ್ದ ಪ್ರಿಯದರ್ಶಿನಿ ಹೋಟೆಲಿಗೆ ನಡೆದುಕೊಂಡು ಬಂದು ನಿತ್ಯಕರ್ಮಗಳನ್ನು ಮುಗಿಸಿ ನಾ ತಂತ್ರಾಂಶವನ್ನ ಅಳವಡಿಸಿಕೊಡಬೇಕಾದ ಕಂಪನಿಗೆ ಹೊರಟೆ. ಮೊದಲೇ ಸ್ವಲ್ಪ ತಡವಾಗಿದ್ದದ್ದರಿಂದ ಗಡಿಬಿಡಿಯಲ್ಲಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಒಂದು ಧ್ವನಿ ನನ್ನ ಕೂಗಿದಂತಾಯಿತು. ಪರಿಚಯವಿಲ್ಲ ಈ ಊರಿನಲ್ಲಿ ನನ್ನ ಯಾರಾದರೂ ಏತಕ್ಕಗಿ ಕರೆದಾರು ? ಅವರು ಯಾರನ್ನೋ ಕರೆದಿರಬೇಕೆಂದು ಮುಂದೆ ಸಾಗಿದೆ. ನಂತರ ಹಿಂದಿನಿಂದ ಬಂದ ಬಾಲಕನೊಬ್ಬ ತನ್ನ ಕೈನಲ್ಲಿ ನಾ ಕಾದಿರಿಸಿದ್ದ ಬಸ್ಸಿನ ಟಿಕೇಟನ್ನು ಹಿಡಿದು ತಂದಿದ್ದ. ತಡವಾಯಿತೆಂದು ಗಡಿಬಿಡಿಯಲ್ಲಿ ಹೆಜ್ಜೆಹಾಕುವಾಗ ಪುಸ್ತಕದೊಳಗಿನಿಂದ ಟಿಕೇಟು ಬಿದ್ದುಹೋದದ್ದು ನನ್ನ ಗಮನಕ್ಕೇ ಬಂದಿರಲಿಲ್ಲ. ಆ ಹುಡುಗನಿಗೆ ಧನ್ಯವಾದಗಳನ್ನು ಹೇಳಿ ಟಿಕೇಟನ್ನ ಭದ್ರವಾಗಿರಿಸಿಕೊಂಡೆ.

ಅಲ್ಲಿಂದ ಗ್ರಾಹಕರ ಕಂಪನಿಗೆ ಹೋಗಿ ಅಲ್ಲಿ ಆ ಹೊಸಾ ತಂತ್ರಾಂಶವನ್ನ ಅಳವಡಿಸಿ ಅದರಬಗ್ಗೆ ಅವರಿಗೆ ವಿವರಿಸಿ ನಂತರ ನಾನು ಮರಳಿ ಬೆಂಗಳೂರಿಗೆ ಪಯಣ ಬೆಳೆಸಿದೆ.

Tuesday, October 14, 2008

ನನ್ನ ಪುಟ್ಟ ಗೂಡು



ಹಲೋ !!! ನಮಸ್ಕಾರ ಮೇಡಂ, ನಾನು ಪ್ರಶಾಂತ್, ನೆನ್ನೆ ಮನೆವಿಚಾರಕ್ಕೆ ಫೋನ್ ಮಾಡಿದ್ನಲ್ಲ....

ಇಲ್ಲ, ಅದನ್ನ ಕೊಟ್ಟಾಯ್ತು, ನೀವು ಲೇಟ್ ಮಾಡ್ಬಿಟ್ರಿ... ಹಾಗಂತ ಅತ್ತಕಡೆಯಿಂದ ಬಂದ ಧ್ವನಿ ನನ್ನ ಕನಸುಗಳಿಗೆ ಕತ್ತರಿಹಾಕಿತ್ತು.

ನೆನ್ನೆಯಷ್ಟೇ ನಾನು ಆಕೆಗೆ ದೂರವಾಣಿ ಕರೆನೀಡಿ ಮಾತನಾಡಿದ್ದೆ. ಇಂದು ಆ ಮನೆಯತ್ತ ಹೋಗುವ ದಾರಿಯನ್ನ ಬಲ್ಲವರಿಂದ ತಿಳಿದುಕೊಂಡು ಆಕೆಗೆ ನಾನು ಬರುವ ವಿಷಯವನ್ನ ತಿಳುಸುವ ಸಲುವಾಗಿ ಕರೆ ನೀಡಿದ್ದೆ. ಆದರೆ ನನ್ನ ಅದೃಷ್ಟವೋ ದುರಾದೃಷ್ಟವೋ ತಿಳಿಯದು. ನನಗೆ ಆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಕೈ ತಪ್ಪಿ ಹೋಯಿತು. ಇದು ಒಂದು ಮನೆಯ ಕಥೆಯಾದರೆ ಇಂತಹಾ ಕಥೆಗಳು ಹಲವಾರು. ನಾನು ಮನೆಗಾಗಿ ಅಂತರ್ಜಾಲದಲ್ಲೂ ಹುಡುಕಾಟ ಆರಂಭಿಸಿದ್ದೆ. ಆದರೂ ಅದು ಫಲ ನೀಡಲಿಲ್ಲ. "ನೀವು bachelorಆ, sorry, ನಾವು bachelorಗಳಿಗೆ ಮನೆ ಕೊಡೋದಿಲ್ಲ" ಇದೇ ಉತ್ತರ ನನಗೆ ಬಹಳಷ್ಟುಕಡೆ ಸಿಕ್ಕಿದ್ದು. bachelorಗಳಿಗೆ ಮನೆ ಕೊಡದಿರಲು ಕಾರಣ ?? ಹಿಂದೆಂದೋ ಆ ಮನೆಯನ್ನು ಯಾವುದೋ bachelorಗೆ ಕೊಟ್ಟು ಆ ಪುಣ್ಯಾತ್ಮ ಮನೆಯನ್ನ ಚೊಕ್ಕಟವಾಗಿಡದಿದ್ದದ್ದೋ, ಅಥವಾ ಅವನ ಕೆಟ್ಟ ಹವ್ಯಾಸಗಳೋ... ಕಾರಣಗಳು ನೂರ್‍ಆರು. ಆದರೆ ಅದರ ಪರಿಣಾಮದಿಂದ ನನಗೆ ಮನೆ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟು ಬೇಗ ನಾನು ನನ್ನ ಕಾಲಮೇಲೆ ನಿಲ್ಲಬೇಕೆಂಬ ಆಸೆ, ಆದರೆ ಆ ಸಂಧರ್ಭ ನನಗೆ ಹತ್ತಿರದಲ್ಲಿಲ್ಲ ಎಂದು ತೋರುತ್ತಿತ್ತು.

ಅಂತೂ ಇಂತೂ ಅಂತರ್ಜಾಲದ ಸಹಾಯದಿಂದ ಒಂದು ಮನೆಯನ್ನ ನೋಡಿ, ಆ ಮನೆಗೆ ಭೇಟಿನೀಡಲು ಅಣಿಯಾದೆ. ಆ ಮನೆ ಇದ್ದದ್ದು ಜೆ.ಪಿ ನಗರ ೬ನೇ ಹಂತದಲ್ಲಿ. ಕೆಲಸ ಬೇಗ ಮುಗಿಸಿ ರಾತ್ರಿ ಸರಿ ಸುಮಾರು ೭ ಘಂಟೆಯ ಹೊತ್ತಿಗೆ ಅಲ್ಲಿ ತಲುಪಿದ್ದೆ. ಮನೆಯ ಯಜಮಾನ ತುಸು ಮುಂಗೋಪಿಯಂತೆ ಕಂಡರೂ ನನಗೆ ಯಜಮಾನನಿಂದ ಏನೂ ನಷ್ಟವಾಗದೆಂದು ಮನೆಯ ಒಳಗಡೆ ಯಜಮಾನನ ಕಾವಲಿನಲ್ಲಿ ಕಾಲಿಟ್ಟೆ. ಮನೆಯೇನೋ ಚಿಕ್ಕದಾಗಿ ಚೊಕ್ಕವಾಗಿತ್ತು. ಅಮೃತಶಿಲೆಯ ಹಾಸುಗಲ್ಲು ಮನೆಯ ಅಂದವನ್ನು ಹೆಚ್ಚಿಸಿತ್ತು. ಒಂದು ಕೊಠಡಿಯ ಮನೆಯಲ್ಲಿ ಬಚ್ಚಲುಮನೆ ಕೊಠಡಿಗೆ ಹೊಂದಿಕೊಂಡಂತೆ ಇತ್ತು. ಆದರೂ ಪರವಾಗಿಲ್ಲ ಬಾಡಿಗೆ ವಿಚಾರಿಸಿ ಕಡಿಮೆಯಾದಲ್ಲಿ ಇಲ್ಲಿಯೇ ಇರಬಹುದೆಂದು ಆಲೋಚಿಸಿ ಆ ಯಜಮಾನನೊಡನೆ ಮಾತನಾಡೋಣ ಎಂದುಕೊಂಡರೆ ಆತನಿಗೆ ಮಾತನಾಡಲು ಪುರುಸೊತ್ತೂ ಇರಲಿಲ್ಲದ ಕಾರಣ ನಂತರ ನನಗೆ ಕರೆ ನೀಡುವುದಾಗಿ ಹೇಳಿದರು. ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಮನೆಗೆ ಮರಳಿದೆ. ಸರಿಸುಮಾರು ೯ ಘಂಟೆಗೆ ಆತನಿಂದ ಕರೆ ಬಂದಿತು. ಮನೆಯ ಬಾಡಿಗೆ ವಿಚಾರ ತಿಳಿಸಲು ಆತ ಕರೆ ನೀಡಿದ್ದರು. ಆತ ಹೇಳಿದ ಬಾಡಿಗೆ ಕೇಳಿ ಮೈ ನಡುಕ ಬಂದಿತ್ತು.

ಬಾಡಿಗೆ ೫.೦೦೦/- ಮತ್ತೆ ಮುಂಗಡ ಹಣ ೭೦.೦೦೦/- ಉಸ್ಸಪ್ಪಾ !!! ಬೆಂಗಳೂರಿನ ಜನರಿಗೆ ಹಣದ ಬೆಲೆ ತಿಳಿಯದೇನೋ ಅಂದೆನಿಸಿಬಿಟ್ಟಿತು. ಕಾಸು ಕಾಸು ಸೇರಿಸಿ ಜೋಡಿಸಿಟ್ಟ ಹಣವನ್ನೆಲ್ಲಾ ಈ ಮನೆಯಸಲುವಾಗಿ ನೀಡಬೇಕಾಗುವುದಲ್ಲ ಎಂದು ಮನಸ್ಸಿನಲ್ಲಿಯೇ ಯೋಚಿಸಿ ಈ ಮನೆಯ ಸಹವಾಸವೇ ಬೇಡವೆಂದುಕೊಂಡು ಮತ್ತೊಮ್ಮೆ ನನ್ನ ಅಮ್ಮ, ಅಣ್ಣನ ಅಭಿಪ್ರಾಯ ಕೇಳಿ ಆತನನ್ನು ಸಂಪರ್ಕಿಸುವೆನೆಂದು ಹೇಳಿದೆ. ಅಲ್ಲಿಂದ ಮತ್ತೆ ಬೇರೆ ಬೇರೆ ಮನೆಯ ಭೇಟೆ ಮುಂದುವರಿಸಿದೆ. ನನ್ನ ಮೈಸೂರಿನ ಮನೆಯ ಎದುರಿನಲ್ಲಿರುವ ಪರಿಚಯಸ್ಥರೊಬ್ಬರ ಮಗನಿಗೆ ಬೆಂಗಳೂರಿನಲ್ಲೇ ಕೆಲಸ. ಆತ ಮೈಸೂರಿಗೆ ಬಂದಿದ್ದಾಗ ನನ್ನ ಅಣ್ಣನೊಡನೆ ಮಾತನಾಡಿ ನನ್ನ ಮನೆಯ ಭೇಟೆಯ ಬವಣೆಯನ್ನು ಪರಿಹರಿಸುವ ಸಲುವಾಗಿ ಆತನೂ ಈ ಕೆಲಸಕ್ಕೆ ಕೈ ಜೋಡಿಸಿದ. ಆತ ತೋರಿಸಿದ ಮನೆಗಳು ನನಗೆ ಸ್ವಲ್ಪ ದೂರ ಎನಿಸಿತು. ಅದೂ ಅಲ್ಲದೇ ಅಮ್ಮನ್ನನ್ನು ಒಪ್ಪಿಸಿ ನನ್ನಜೊತೆ ಇರಿಸಿಕೊಳ್ಳುವುದು ಎಂದು ತೀರ್ಮಾನಿಸಿದ್ದೆ. ಹಾಗಾಗಿ ಮನೆಯ ಸುತ್ತ ಮುತ್ತ ಸ್ವಲ್ಪ ಅಚ್ಹುಕಟ್ಟಾಗಿರಬೇಕು, ಮನೆಯಿರುವ ಸ್ಥಳ ಪ್ರಶಾಂತವಾಗಿರಬೇಕೆಂದು ನಾನು ಎಣಿಸಿದ್ದೆ. ನನ್ನ ಈ ಮನೆ ಭೇಟೆ ಮುಂದುವರಿಸುವ ಭರದಲ್ಲಿ ಸಿಕ್ಕ ಮನೆಯನ್ನ ಬಿಡುವುದು ಬೇಡವೆಂದು ಮತ್ತೆ ೫.೦೦೦/- ಬಾಡಿಗೆಯ ಮನೆಗೆ ಬಂದು ಆ ಮನೆಯ ಯಜಮಾನನಿಗೆ ೧೦೦೦/- ಮುಂಗಡ ಹಣ ನೀಡಿ ಮತ್ತೆ ನನ್ನ ಹುಡುಕಾಟವನ್ನ ಮುಂದುವರಿಸಲು ನಿರ್ಧರಿಸಿದೆ.

ಮೊದಲೇ ನಿರ್ಧರಿಸಿದಂತೆ ಮುಂಗಡ ಹಣ ನೀಡಲು ಆ ಮನೆಯತ್ತ ಹೊರಟೆ. ಅಂದು ಆ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಇದು ಒಳ್ಳೆಯ ಲಕ್ಷಣವೆಂದುಕೊಂಡು ಮನೆಯ ಯಜಮಾನನಿಗೆ ೧೦೦೦/- ಮುಂಗಡ ಹಣವನ್ನು ನೀಡಿ ಪ್ರಸಾದವನ್ನು ಪಡೆದು ಮರಳಿ ನನ್ನ ಹಳೇ ಮನೆಗೆ ಬರುವಾಗ ದಾರಿಯಲ್ಲಿ ನನ್ನ ಮಿತ್ರ ಸೋಮ ಸಿಕ್ಕಿದ. ಆತನಿಗೆ ಮನೆಯ ವಿಚಾರವನ್ನೆಲ್ಲಾ ಹೇಳಿದಮೇಲೆ ಹತ್ತಿರದಲ್ಲೇ ಕಡಿಮೆ ಬಾಡಿಗೆಗೆ ಮನೆಗಳು ದೊರೆಯುತ್ತವೆ ಅನ್ನುವುದು ತಿಳಿಯಿತು. ಆತನಿಗೆ ಯಾವುದಾದರೂ ಇದ್ದರೆ ತಿಳಿಸೆಂದು ಹೇಳಿ ಮನೆಗೆ ಬಂದೆ. ಮನೆಗೆ ಬಂದು ಅಡುಗೆಗೆ ಸಿದ್ಧತೆ ಮಾಡುತ್ತಿದ್ದಾಗ ಸೋಮನ ಮಿತ್ರನಿಂದ ಕರೆಬಂತು. ಒಂದು ಮನೆಇರುವುದಾಗಿ ತಕ್ಷಣ ಬಂದು ನೋಡಬೇಕಾಗಿ ಹೇಳಿದರು. ಅಡುಗೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಆ ಮನೆಯನ್ನ ನೋಡಲು ಹೊರಟೆ.

ಆ ಮನೆ ನಾನಿದ್ದ ಸ್ಥಳದಿಂದ ೩ ಕಿಮೀ ದೂರದಲ್ಲಿತ್ತು. ಒಂದು ಕೊಠಡಿಯ ಮನೆ ಮೊದಲ ಮಹಡಿಯಲ್ಲಿದ್ದರೂ ಚೊಕ್ಕಟವಾಗಿತ್ತು. ಆ ತಕ್ಷಣವೇ ಆ ಮನೆಯ ಯಜಮಾನರಿಗೆ ೫೦೦೦ ಮುಂಗಡ ಹಣ ನೀಡಿ ೧ನೇ ತಾರೀಖು ಬರುವುದಾಗಿ ಹೇಳಿ ಮನೆಗೆ ಬಂದೆ. ಮನೆಗೆ ಬಂದು ಅಮ್ಮ, ಅಣ್ಣನಿಗೆ ಕರೆ ಮಾಡಿ ಹಾಲು ಉಕ್ಕಿಸುವ ಕಾರ್ಯಕ್ರಮವನ್ನ ಅಮ್ಮನಿಂದಲೇ ಮಾಡಿಸುವುದಾಗಿ ತಿಳಿಸಿ ಅಂತೂ ಇಂತೂ ೧ನೇ ತಾರೀಖು ಅಮ್ಮ, ಅಕ್ಕ, ಅಣ್ಣ ಮತ್ತು ಕುಟುಂಬದೊಡನೆ ನನ್ನ ಜೀವನದ ಮೊದಲ ಮನೆಯಲ್ಲಿ ಬಾಳುವೆ ನಡೆಸಲು ಪ್ರಾರಂಭಿಸಿದೆ. ಆ ಮನೆಯಲ್ಲಿ ಅಣ್ಣನ ಮಗಳು ೧ ವರುಷದ "ವಿಸ್ಮಯ" ತನ್ನ ಅಂಬೇಗಾಲಿನಲ್ಲಿ ಮನೆಯತುಂಬಾ ಓಡಾಡುವುದನ್ನ, ಅಕ್ಕನ ಮಗಳು "ಸ್ಪೂರ್ತಿ"ಯ ಆಟಪಾಟಗಳನ್ನ ಕಂಡು ಏನೋ ಒಂದು ರೀತಿಯ ಸಂತಸವಾಗುತ್ತಿತ್ತು.

Friday, September 12, 2008

ಚೆಂಗುಲಾಬಿ ಅರಳಿ ನಗುವ ಹೊಮ್ಮಿಸೀತೇ ???

ಮನದ ತುಂಬಾ ಬೇಸರ, ಏನೋ ಕೇಳುವ ತವಕ, ಮನಸ್ಸಿಗೆ ಬೇಸರವಾದರೆ ? ನೊಂದಮನಕೆ ಮತ್ತೊಮ್ಮೆ ನೋವುಕೊಡುವುದು ಎಷ್ಟುಸರಿ ? ನಾನಾಡುವ ನಾಲ್ಕುಮಾತುಗಳು ಆ ಜೀವಕ್ಕೆ ನೆಮ್ಮದಿಯ ತರಲೆಂದು ನನ್ನ ಆಸೆ, ಆದರೆ ಆ ಮನಸ್ಸು....

ಬೇಸರದ ಮನದಿ ಉಲ್ಲಾಸಮೂಡಿಸುವ ನನ್ನ ಸರ್ವಪ್ರಯತ್ನಗಳೂ ವಿಫಲವಾಯಿತೇ ??? ಆ ಪುಟ್ಟ ಘಾಸಿಗೊಂಡ ಮನಸ್ಸಿಗೆ ಗೆಳೆತನದ ಔಷಧವ ಲೇಪನ ನನ್ನಿಂದ ಹಚ್ಚಲಾದೀತೇ ? ಒಮ್ಮೊಮ್ಮೆ ಮನಃ ಬಿಚ್ಚಿಮಾತನಾಡುವ, ಮತ್ತೊಮ್ಮೆ ಮೌನವಾಗಿರುವ ಆ ಮನಸ್ಸು ವಿಚಲಿತಗೊಂಡಂತಿದೆ. ನನ್ನ ಜೀವನದ ಅನುಭವವನ್ನೆಲ್ಲಾ ಧಾರೆಯೆರೆದಾಯ್ತು, ಆ ಮನಸ್ಸಿಗೆ ಚೇತರಿಕೆ ಮೂಡಿಸುವ ಪ್ರಯತ್ನದಲ್ಲಿ. ಓ ದೇವರೇ... ಏತಕ್ಕೆ ಈ ತುಡಿತ !!!

ಆ ನಗೆಯಲ್ಲಿ ಅದೇನು ಮೋಡಿ !!! ಏನೋ ಒಂದುರೀತಿಯ ಸೆಳೆತ ಮೇಲ್ನೋಟಕ್ಕೆ... ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ ಆರಲಾಗದ ಗಾಯ... ಮುದುಡಿಹೋದ ಕನಸುಗಳ ದೊಡ್ಡ ಭಂಡಾರ. ಆ ಮರುಭೂಮಿಯಲ್ಲಿ ಒಂದು ಚೆಂಗುಲಾಬಿಯ ಚಿಗುರಿಸುವ ಪ್ರಯತ್ನ ನನ್ನದು... ಅದು ಚಿಗುರೀತೇ ??? ಸುಂದರ ಸ್ವಪ್ನಗಳು ಫಲಿಸೀತೇ ??? ಆ ಚಿಗುರಿದ ಗಿಡದಿಂದ ಒಂದು ಚೆಂಗುಲಾಬಿ ಅರಳಿ ನಗುವ ಹೊಮ್ಮಿಸೀತೇ ???

Tuesday, September 9, 2008

ಮಳೆಬರುವ ತುಸು ಮುಂಚೆ

ಮಳೆಬರುವ ತುಸು ಮುಂಚೆ
ತಂಗಾಳಿ ಬೀಸಿತ್ತು...
ನಿನ್ನ ಕಂಪತಂದಿತ್ತು...
ಮನಸ್ಸೇಕೋ ನಾಚಿತ್ತು...
ಮುಗುಳ್ನಗೆಯು ಹೊಮ್ಮಿತ್ತು...
ನಿನ್ನ ಸನಿಹ ಬೇಕಿತ್ತು...
ನಿನ್ನ ಒಲುಮೆಗೆ ಕಾದಿತ್ತು...
ಸಿಹಿಮುತ್ತ ಬೇಡಿತ್ತು...

ಹಾ ಗೆಳತೀ... ಕಂಡೆ ನಾ ನಿನ್ನನು...
ಕೋಲ್ಮಿಂಚಿನಲಿ ನಿನ್ನ ಕಣ್ನೋಟ ಕಂಡೆ
ತುಂತುರು ಹನಿಯಲಿ ಸಿಹಿಮುತ್ತನುಂಡೆ...
ತಂಗಾಳಿಯಲಿ ನೀ ಬಂದೆನ್ನ ಅಪ್ಪಿದೆ...

ಮಳೆಗೂ ನಿನಗೂ ಎಂತಹಾ ಹೋಲಿಕೆ...

Saturday, September 6, 2008

ಹಬ್ಬ ತಂದ ನೆನಪು...

ಹಬ್ಬ ತಂದ ನೆನಪು...

ಇವತ್ತು ಗಣೇಶ ಚತುರ್ಥಿ... ಏನು ಮಾಡಿದ್ದೀಯೋ ??? ನಮ್ಮನೇಲಿ ಕಡುಬು, ಒಬ್ಬಟ್ಟು, ಪಾಯಸ ಮಾಡಿದ್ದೀನಿ...

ಹೀಗೆ ನನ್ನ ಗೆಳತಿಯೊಬ್ಬಳು ಹೇಳುತ್ತಿರುವಾಗ ನನ್ನ ಕಣ್ತುಂಬಿ ಬಂದಿತ್ತು. ಮನೆಯಲ್ಲಿ ಯಾರಾದರೂ ಸಾವನ್ನಪ್ಪಿರುವಾಗ ಯಾವುದೇ ಹಬ್ಬ ಹರಿದಿನಗಳನ್ನ ಆಚರಿಸುವುದಾದರೂ ಹೇಗೆ ? ಅಪ್ಪ ಕಳೆದ ಗಣಪತಿ ಹಬ್ಬದಂದು ನಮ್ಮೊಂದಿಗಿದ್ದರು, ಆದರೆ ಈ ಬಾರಿ.... ಅವರು ನಮ್ಮನ್ನಗಲಿ ೮ ತಿಂಗಳು ಕಳೆದಿದೆ. ನಮ್ಮನ್ನಗಲಿಯೂ ಅವರು ನಮ್ಮೊಂದಿಗಿದ್ದಾರೆ. ಕಳೆದ ೨ ವರುಷಗಳ ಹಿಂದೆ ಇದೇ ಸಮಯಕ್ಕೆ ನಾವೆಲ್ಲಾ ಉಡುಪಿಗೆ ಹೋಗಿ ನಮ್ಮ ಅಜ್ಜನಮನೆಯಲ್ಲಿ ಹಬ್ಬವನ್ನಾಚರಿಸಿದ್ದುಂಟು... ಆಗ ಮನೆ ಮಂದಿಯೆಲ್ಲಾ ಒಟ್ಟಿಗೇ ಸೇರಿ ಮನೆಯಲ್ಲಿ ಏನೋ ಒಂದುರೀತಿಯ ಸಂಬ್ರಮ, ಸಡಗರ ನೆಲೆಸಿತ್ತು. ನಮ್ಮ ಮಾವನವರು ಸ್ವತಃ ತಾವೇ ತಯಾರಿಸಿದ ಗಣಪನ ಮೂರ್ತಿಯನ್ನು ಪೂಜಿಸಿ ನಂತರ ನಮ್ಮ ಅಜ್ಜನ ಮನೆಮುಂದಿರುವ ಕೆರೆಯಲ್ಲಿ ವಿಸರ್ಜಿಸುತ್ತಿದ್ದರು. ಆ ಸಂಧರ್ಬದಲ್ಲಿ ಅಲ್ಲಿಯ ವಾತಾವರಣವನ್ನು ನೋಡುವುದೇ ಒಂದು ರೀತಿಯ ಖುಷಿ...

ಎಲ್ಲರೋಂದಿಗೆ ಬೆರೆತು ಮಾತನಾಡಿ ಅಜ್ಜನ ತೋಟದೊಳಗಡೆ ತಿರುಗಾಡಿ ಬುಗುರಿಮರದಡಿಯಲ್ಲಿ ಬಿದ್ದಿದ್ದ ಬುಗುರಿ ಹಣ್ಣನ್ನು ಹೆಕ್ಕಿ ತಿನ್ನುತ್ತಿದ್ದೆವು. ಕೊಟ್ಟಿಗೆಯಲ್ಲಿ ಇರುವ ದನ ಕರುಗಳ ಮೈದಡವುತ್ತಾ ಹಕ್ಕಿಗಳ ಚಿಲಿಪಿಲಿಯನ್ನು ಕೇಳುತ್ತಾ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಆದರೆ ಈ ವರುಷ ಮನೆಯಲ್ಲಿ ಸಂಭ್ರಮ, ಸಡಗರ ಇಲ್ಲ, ಹಬ್ಬಕ್ಕೆಂದು ನಾನು ಮೈಸೂರಿಗೂ ಹೋಗಲಿಲ್ಲ. ಮನದಲ್ಲಿ ಏನೋ ಒಂದು ರೀತಿಯ ಬೇಸರ ಮಡುಗಟ್ಟಿತ್ತು. ಬೆಳಗಿನಿಂದ ತಿಂಡಿಯನ್ನೂ ಮಾಡಿಕೊಳ್ಳದೇ ಕಂಪ್ಯೂಟರಿನಲ್ಲಿ ನಾನು ತೆಗೆದಿದ್ದ ಹಳೆಯ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ. ಆ ಸಂಧರ್ಭದಲ್ಲಿ ಅಪ್ಪನ ಕೆಲವು ಚಿತ್ರಗಳು ಹಾದು ಹೋದವು. ಅದು ಆಯುಧಪೂಜೆಯ ಸಂಧರ್ಭ. ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗೆ ಪೂಜೆ ಮಾಡಿ ಅವರ ಸೈಕಲ್ಲಿಗೆ ಮತ್ತೆ ನನ್ನ, ಅಣ್ಣನ ಬೈಕಿಗೆ ಪೂಜೆ ಮಾಡುತ್ತಿದ್ದರು. ಅವರ ಕೈಇಂದಲೇ ಪೂಜೆಯನ್ನು ಮಾಡಿಸುವ ಸಲುವಾಗಿ ನಾನು ಬೆಂಗಳೂರಿನಿಂದ ಮೈಸೂರಿಗೆ ನನ್ನ ಬೈಕಿನಲ್ಲೇ ಹೋಗುತ್ತಿದ್ದೆ. ಅವರನ್ನು ಕೊನೆಯ ಸಲ ಕಾಣಲು ನಾನು ಹೋಗಿದ್ದೂ ಅದೇ ಬೈಕಿನಲ್ಲಿ.

ಅಪ್ಪನಿಗೆ ಸಕ್ಕರೆಖಾಯಿಲೆ ಇದ್ದರೂ ಹಬ್ಬದ ದಿನಗಳಂದು ಸಿಹಿ ಊಟ ಮಾಡದೇ ಬಿಡುತ್ತಿರಲಿಲ್ಲ, ಬಾಕಿ ದಿನಗಳಂದು ಕಹಿಬೇವಿನ ಮಾತ್ರೆಯನ್ನ ತೆಗೆದುಕೊಂಡು ತಮ್ಮ ಆರೋಗ್ಯವನ್ನ ಸರಿದೂಗಿಸಿಕೊಳ್ಳುತ್ತಿದ್ದರು. ಅವರ ಮನಸ್ಸಿಗೆ ಬೇಸರವಾಗಬಾರದೆಂದು ಮನೆಯಲ್ಲಿ ಸಿಹಿತಿಂಡಿಗಳನ್ನು ತರುವುದನ್ನೇ ನಾವೆಲ್ಲಾ ಕಡಿಮೆ ಮಾಡಿದ್ದೆವು. ಹಬ್ಬ ಹರಿದಿನಗಳಂದು ಸ್ವಲ್ಪವೇ ಸ್ವಲ್ಪ ದೇವರಿಗೆ ನೈವೇದ್ಯ ಮಾಡುವ ಸಲುವಾಗಿ ಸಿಹಿತಿಂಡಿ ಇರುತ್ತಿತ್ತು. ಅಪ್ಪನಿಗೆ ಮೊದಲಿಂದಲೂ ಸಿಹಿತಿಂಡಿಯನ್ನು ಕಂಡರೆ ಪ್ರೀತಿ ಹೆಚ್ಚು. ಅವರಿಗೆ ಸಕ್ಕರೆಖಾಯಿಲೆ ಬಂದಮೇಲೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ... ಪ್ರತಿ ಹೆಜ್ಜೆಯಲ್ಲೂ ಮೈಎಲ್ಲಾ ಕಣ್ಣಾಗಿಸಿಕೊಂಡು ತಿರುಗಾಡಬೇಕಾಗಿ ಬಂತು. ಅಪ್ಪಿ ತಪ್ಪಿ ಕೈಗೇನಾದರೂ ಮುಳ್ಳು ಚುಚ್ಹಿದರೆ ಚಿಮ್ಮುಟವನ್ನು ಬಿಸಿಮಾಡಿ ಮುಳ್ಳು ತೆಗೆದು ಅವರಿಗೆ ಇನ್ಫೆಕ್ಶನ್ ಆಗದಂತೆ ನೋಡಿಕೊಳ್ಳುತ್ತಿದ್ದೆವು.

ಇಂದು ಅಪ್ಪ ನೆಟ್ಟು ಬೆಳೆಸಿದ, ಫಲನೀಡುತ್ತಿರುವ ತೆಂಗಿನ ಮರವನ್ನ ಪಕ್ಕದ ಮನೆಯವರು ಕತ್ತರಿಸಿ ಹಾಕಿ ಎಂದು ಹೇಳುತ್ತಿದ್ದಾರೆ !!! ಆ ಮರವನ್ನ ನೇರವಾಗಿ ಬೆಳೆಸಲು ಸೈಕಲ್ಲಿನ ಟಯರ್‍ಅನ್ನು ಹಾಕಿ ಎಳೆದು ಕಟ್ಟಿ ನಾವೆಲ್ಲಾ ಪಟ್ಟ ಪಾಡು ಅಷ್ಟಿಷ್ಟಲ್ಲ... ಅಪ್ಪ ನಮ್ಮನ್ನಗಲಿ ಇನ್ನೂ ವರುಷ ಕೂಡಾ ಸಂಧಿಲ್ಲ, ಪಕ್ಕದ ಮನೆಯವನು ಗಲಾಟೆ ಮಾಡುತ್ತಿದ್ದಾನೆ. ಆ ಮರದಲ್ಲಿ ಜೀವ ತುಂಬಿದೆ, ಅಪ್ಪ ಕಂಡ ಕನಸುಗಳು ತುಂಬಿದೆ, ಅವರ ನೆನಪಿದೆ, ಅವರ ಶ್ರಮ, ದುಡಿಮೆ ಎಲ್ಲಾ ಸೇರಿ ಆ ಮರ ಇಂದು ಬೆಳೆದು ನಿಂತಿದೆ. ಅದನ್ನು ಯಾವ ಕೈ ಇಂದ ಕಡಿಯುವುದು ??? ಏನು ಮಾಡಲೂ ದಾರಿ ಕಾಣುತ್ತಿಲ್ಲ...

ಅಪ್ಪಾ, ನೀವು ನೆಟ್ಟ ಆ ಕಲ್ಪವೃಕ್ಷವನ್ನು ಉಳಿಸಿಕೊಳ್ಳಲು ನಮ್ಮ ಕೈಲಾದ ಪ್ರಯತ್ನ ನಾವು ಮಾಡುತ್ತೇವೆ... ನಮ್ಮ ದಾರಿದೀಪವಾಗಿ... ನಮಗೆ ದಾರಿ ತೋರಿಸಿ

ವೃತ್ತಿಜೀವನದ ಹಂತಗಳು...

ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ. ಇದರ ಹಿಂದೆ ಸಾಕಷ್ಟು ಜನರ ಹಾರೈಕೆ, ಒಲವು ಪ್ರೋತ್ಸಾಹಗಳು ನನ್ನನ್ನು ಕಾಪಾಡಿಕೊಂಡು ಬಂದಿವೆ. ಮೈಸೂರಿನಿಂದ ನನ್ನ ಟಿ.ವಿ.ಎಸ್ ನಲ್ಲಿ ನಾನು ಮತ್ತೆ ನನ್ನ ನಲ್ಮೆಯ ಅಣ್ಣ ಜೊತೆಗೆ ನನ್ನ ಬಟ್ಟೆಗಳನ್ನ ಹೊತ್ತುಕೊಂಡು ಹೊರಟು ಬಂದಿದ್ದೆವು. ಬೆಂಗಳೂರಿಗೆ ಬಂದ ಹೊಸದರಲ್ಲಿ ಇಲ್ಲಿನ ಟ್ರಾಫಿಕ್ ನಲ್ಲಿ ನಮ್ಮ ಪುಟ್ಟದಾದ ಟಿ.ವಿ.ಎಸ್ ಅನ್ನು ಓಡಿಸುವುದೇ ಒಂದು ದೊಡ್ಡ ಪರೀಕ್ಷೆ. ಅಲ್ಲಿಂದ ಬಂದ ನಾನು ನನ್ನ ಸಂಭಂದಿಕರ ಮನೆಯಲ್ಲಿ ವಾಸ್ತವ್ಯ ಹೂಡಿದೆ.

ಏನೇ ಆದರೂ ಒಂದುರೀತಿಯ ಸಂಕೋಚ, ಭಯ. ನನ್ನ ಸಂಭಂದಿಯೇ ಆದರೂ ಅವರಲ್ಲಿ ನಾನು ಮನಬಿಚ್ಚಿ ಮಾತನಾಡುತ್ತಿರಲಿಲ್ಲ. ಕಾಲೇಜಿನಲ್ಲಿ ಬಿಕಾಂ ಓದಿದ್ದರೂ ಅದರ ಕಡೆಗೆ ಒಲವಿಲ್ಲದ ಕಾರಣ ನನ್ನ ಆಸಕ್ತಿ ಕಂಪ್ಯೂಟರಿನ ಕಡೆಗೆ ಇತ್ತು. ನನ್ನ ಅಣ್ಣನ ಸಹಾಯದಿಂದ ಕಂಪ್ಯೂಟರ್ ಹಾರ್ಡ್ವೇರ್ ಶಿಕ್ಷಣವನ್ನ ಮುಗಿಸಿದ್ದೆ. ಆಗ ನನಗೆ ತಿಳಿದಿದ್ದು ಕೇವಲ ಕಂಪ್ಯೂಟರ್ ಮದರ್ ಬೋರ್‍ಡ್ assembel ಮಾಡೋದು, ಆಪರೇಟಿಂಗ್ ಸಿಸ್ಟಮ್ install ಮಾಡೋದು, ಮತ್ತೆ ಕೆಲವು ಹಂತದ ಕಂಪ್ಯೂಟರಿನ ಸಮಸ್ಯೆಗಳಿಗೆ ಪರಿಹಾರ ನೀಡುವುದು. ನನ್ನ ಆ skillset ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ್ದು. ನಾನು ನನ್ನ ಅಣ್ಣನಿಗೆ ಚಿರರುಣಿ. ಬೆಂಗಳೂರಿನ ನನ್ನ ಮೊದಲ ಕೆಲಸ ಪೂರ್‍ಣವಾಗಿ ಕಂಪ್ಯೂಟರ್ ಅನ್ನು ಜೋಡಿಸಿ ಅದರ ಗ್ರಾಹಕರ ಮನೆಗೆ ತಲುಪಿಸುವುದು, ಏನಾದರೂ ತಾಂತ್ರಿಕ ತೊಂದರೆ ಇದ್ದಲ್ಲಿ ಅದನ್ನ ನಿವಾರಿಸುವುದು ಆಗಿತ್ತು. ನನ್ನ ಆ ಕೆಲಸಕ್ಕೆ ನಾಲ್ಕಂಕಿಯ ಸಂಬಳ ಕೊಡುತ್ತಿದ್ದರು. ನನ್ನ ಜೊತೆಯಲ್ಲಿ ನಮ್ಮ ಟ್ರಕ್ಕಿಂಗ್ ಟೀಮಿನ ಮತ್ತೊಬ್ಬ ಪ್ರಮುಖ ಸದಸ್ಯ ರಾಜೇಶ್ ಕೆಲಸ ಮಾಡುತ್ತಿದ್ದರು. ಪ್ರಾರಂಭದಲ್ಲಿ ಬೆಂಗಳೂರಿನ ದರುಶನ ಆದದ್ದು ಆತನಿಂದಲೇ. ನಂತರವಷ್ಟೇ ನಾನು ಸ್ವಂತವಾಗಿ ತಿರುಗಾಡಲು ಪ್ರಾರಂಭಿಸಿದ್ದು.

ಹೀಗೇ ಹೆಚ್ಚುಕಡಿಮೆ ಒಂದು ಆರುತಿಂಗಳ ನಂತರ ನನ್ನದಲ್ಲದ ತಪ್ಪಿನಿಂದ ನನ್ನ ಸಂಭಂದಿಕರ ಮನೆ ಬಿಟ್ಟು ನಮ್ಮ ಟ್ರಕ್ಕಿಂಗ್ ಟೀಮಿನ ಕ್ಯಾಪ್ಟನ್ ಮನೆ ಸೇರಿಕೊಂಡೆ. ನೇರ ನಡೆ ನುಡಿಯ ಅವರ ಮನೆಯಲ್ಲಿ ವಾಸ ಮಾಡತೊಡಗಿದೆ. ನನ್ನ ಕಾರ್ಯಾಲಯಕ್ಕೆ ದೂರದ ಪ್ರಯಾಣ ಮಾಡಬೇಕಾದರೂ ನನಗೆ ಇಲ್ಲಿ ನೆಮ್ಮದಿ ಸಿಕ್ಕುತ್ತಿತ್ತು. ಹೀಗೇ ಸರಿ ಸುಮಾರು ಒಂದು ವರುಷ, ಆರು ತಿಂಗಳ ನಂತರ ನನ್ನ ಅಣ್ಣನ ಸ್ನೇಹಿತರ ಮೂಲಕ ವಾಸು ಅಗರಬತ್ತಿಯ ಅಂಗ ಸಂಸ್ಥೆಯಲ್ಲಿ System administrator ಹುದ್ದೆ ಇರುವ ವಿಷಯ ತಿಳಿಯಿತು. ಅಲ್ಲೂ ಒಂದು ಪ್ರಯತ್ನ ಮಾಡೇ ಬಿಡೋಣವೆಂದು Interview attend ಮಾಡಿದೆ. ನನ್ನ ಅದೃಷ್ಟಕ್ಕೆ ನನಗೆ ಅಲ್ಲಿ ಕೆಲಸ ಸಿಕ್ಕಿತು. ಮನೆಯಿಂದ ಸರಿ ಸುಮಾರು ೨೦ ಕಿ.ಮೀ ದೂರದಲ್ಲಿದ್ದ ಆ ಕಾರ್ಯಾಲಯಕ್ಕೆ ನನ್ನ ಕ್ಯಾಪ್ಟನ್ ಜೊತೆಯಲ್ಲೇ ಹೋಗುತ್ತಿದ್ದೆ. ಅವರು ಐಟಿಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ನನ್ನ ಕಾರ್ಯಾಲಯ ಮಾರತ್ ಹಳ್ಳಿಯಲ್ಲಿ ಇದ್ದದ್ದರಿಂದ ಅವರ ಐರಾವತ (ಸ್ಯಾಂಟ್ರ್‍ಓ) ದಲ್ಲಿ ನನ್ನನ್ನು ಕರೆದುಕೊಂದು ಹೋಗುತ್ತಿದ್ದರು. ಪುನಃ ಅವರಜೊತೆಯಲ್ಲೇ ಮನೆಗೆ ಬರುತ್ತಿದ್ದೆ. ಅಲ್ಲಿ ಕೂಡಾ ನನಗೆ ಬರುತ್ತಿದ್ದದ್ದು ೪ ಅಂಕಿಯ ಸಂಬಳ. ಏನಾದರೂ ಆಗಲಿ ಕೆಲವು ವರುಷಗಳು ಇಲ್ಲಿಯೇ ಇದ್ದು Experience ಪಡೆಯಬೇಕೆಂದು ನಿರ್ಧರಿಸಿದ್ದೆ. ಕೆಲಸದ ವಾತಾವರಣ ನನಗೆ ಬಹಳವಾಗಿ ಹಿಡಿಸಿತ್ತು. ನಮ್ಮ ಕಾರ್ಯಾಲಯದ ಮುಖ್ಯಸ್ತರಾದ ರವಿಶಂಕರ ಬಹಳ ಆತ್ಮೀಯರಾಗಿದ್ದರು. ತಮ್ಮ ಸಂಸ್ಥೆಯ ಯಾವುದೇ ಉದ್ಯೋಗಿಯನ್ನಾಗಲಿ ನಗುನಗುತ್ತಾ ಮಾತನಾಡಿಸಿ ಕೆಲಸದಲ್ಲಿ ಹುರಿದುಂಬಿಸುತ್ತಿದ್ದರು. ಅವರ ಪ್ರೋತ್ಸಾಹದ ಮಾತುಗಳು ಆ ಕಾರ್ಯಾಲಯದ ವಾತಾವರಣವನ್ನೇ ಬದಲಾಯಿಸಿತ್ತು. ಎಲ್ಲಾ ಒಂದೇ ಮನೆಯ ಸದಸ್ಯರಂತೆ ಸೇರಿ ದುಡಿಯುತ್ತಿದ್ದೆವು. ಅಲ್ಲಿ ಸತತವಾಗಿ ೩ ವರುಷದ ಅನುಭವದ ನಂತರ ನನ್ನ ಪಯಣ Computer Securities ನತ್ತ ಹೊರಳಿತು. ಅಲ್ಲಿಯೂ ನನ್ನ ಟ್ರಕ್ಕಿಂಗ್ ಟೀಮಿನ ಸಹಾಯ ಬಹಳವಾಗೇ ಇತ್ತು. ಟೀಮಿನ ಕ್ಯಾಪ್ಟನ್ ಹೇಳಿದ್ದರಿಂದ ಪ್ರವೀಣ್, ನಮ್ಮ ಟೀಮಿನ ಮತ್ತೊಬ್ಬ ಸದಸ್ಯ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಉದ್ಯೋಗಾವಕಾಶ ಮೂಡಿಬಂತು. ಅದಕ್ಕೆ ನಾನು ಪ್ರವೀಣ್ ಮನೆಗೆ ಹೋಗಿ ತಯಾರಾಗುತ್ತಿದ್ದೆ. ಅಲ್ಲಿನ ಕೆಲಸ ಸಿಕ್ಕಮೇಲೆ ಒಂದು ಪ್ರಖ್ಯಾತ Antivirus ಅನ್ನು Support ಮಾಡುವ ಕೆಲಸ ಸಿಕ್ಕಿತು. ಪ್ರವೀಣ್ ಜೊತೆಯಲ್ಲೇ ನನ್ನ ಕೆಲಸ ಸಾಗುತ್ತಿತ್ತು. ಮನೆಯಿಂದ ಕೇವಲ ೪ ಕಿ.ಮೀ ದೂರದಲ್ಲಿದ್ದ ಕಾರ್ಯಾಲಯಕ್ಕೆ ಹೋಗಿ ಅಲ್ಲಿಂದ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಹೆಚ್ಚು ಕಡಿಮೆ ೯ರಿಂದ ೧೦ ತಿಂಗಳುಗಳ ಕಾಲ ಅಲ್ಲಿ ದುಡಿದೆ. ಅಲ್ಲಿಯ ವಾತಾವರಣ ನನಗೆ ಹಿಡಿಸಲಿಲ್ಲ... ನನ್ನ ಸೀನಿಯರ್ ಗಳ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಸ್ವಾಭಿಮಾನಿಯಾದ ನಾನು ಅಲ್ಲಿಂದ ಬೇರೆಡೆಗೆ ಹೊರಡುವ ಆಲೋಚನೆ ಮಾಡಿದೆ.

ಅಮರನಾಥ, ನನ್ನ ಸಹೋದ್ಯೋಗಿ ಕೂಡಾ ಅದೇ ರೀತಿಯಲ್ಲಿ ಕೆಲಸ ಬಿಟ್ಟು ಮತ್ತೊಂದು ಕಡೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಆತನ ಸಹಾಯದಿಂದ ನನಗೆ ಅವನ ಕಾರ್ಯಾಲಯದಲ್ಲಿ ಕೆಲಸ ಸಿಕ್ಕಿತು. ಮೊದಲ ಬಾರಿ ೫ ಅಂಕಿಯ ಸಂಬಳ ಪಡೆಯುವ ಸುಯೋಗ ಕೂಡಿಬಂದಿತ್ತು. ಆ ಸಂತಸವನ್ನ ನನ್ನ ಹಳೆಯ ಕಂಪನಿಯವರಿಗೆ ತಿಳಿಯದಂತೆ ಅಕ್ಟೋಬರಿನ ತಿಂಗಳಲ್ಲಿ ಅವರು ಕೊಟ್ಟ ೩೦೦೦ ರೂ ಗಳ ಬೋನಸ್ ಚೆಕ್ಕನ್ನು ಪಡೆದುಕೊಂಡು ಆ ಕಂಪನಿಗೆ ಒಂದು ಸಲಾಮ್ ಹೊಡೆದು ನನ್ನ ಹೊಸ ಕಂಪನಿಯತ್ತ ನನ್ನ ಪಯಣ ಬೆಳೆಸಿದೆ. ಅಲ್ಲಿಂದ ಪ್ರಾರಂಭಿಸಿದ ಪಯಣ ಇಂದಿಗೂ ಮುಂದುವರಿಯುತ್ತಲೇ ಇದೆ... ಇಲ್ಲಿನ ವಾತಾವರಣ ನನ್ನ ಹಿಂದಿನ ಕಂಪನಿಗೆ ಹೋಲಿಸಿದರೆ ಉತ್ತಮವಾಗಿದೆ. ಇಲ್ಲಿ ನಾನು ಸರಿ ಸುಮಾರು ೨ ವರುಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕೇವಲ ಕಂಪ್ಯೂಟರಿನ ಹಾರ್ಡ್ವೇರ್ ತಿಳಿದಿದ್ದ ನಾನು ಇಂದು ಕಂಪ್ಯೂಟರಿನ ನೆಟ್ವರ್ಕ್ ಸೆಕ್ಯೂರಿಟಿಯನ್ನು ತಿಳಿದಿದ್ದೇನೆ. ಅಷ್ಟೇ ಅಲ್ಲದೇ ಅದರಲ್ಲಿ ಬರುವ ಬೇರೆ ಬೇರೆ ಹಂತಗಳನ್ನು ಅರಿತಿದ್ದೇನೆ...

Wednesday, July 16, 2008

ಅನುಭವ ಕಥನ

ನಮಸ್ಕಾರ,

ಮೊನ್ನೆ ದಿನಪೂರ್ತಿ ಕಂಪ್ಯೂಟರಿನ ಮುಂದೆ ಕಣ್ಣುರಿಸಿಕೊಂಡು ಕೆಲಸ ಮಾಡಿ ಬಹಳ ದಣಿವಾಗಿತ್ತು. ಆಯಾಸ ಪರಿಹರಿಸಿಕೊಳ್ಳಲು ತಂಪಾಗಿ ಏನಾದರೂ ಬೇಕೆನಿಸಿತು. ಆಫೀಸಿನ ಕಿಟಕಿಯಿಂದ ಹೊರಕ್ಕೆ ಇಣುಕಿನೋಡಿದಾಗ ದಟ್ಟವಾದ ಮೋಡಗಳು ಭುವಿಯನ್ನು ತಬ್ಬಿ ಹಿಡಿದಿದ್ದವು... ಇನ್ನೇನು ಅವುಗಳ ಮಿಲನಕಾಲ ಹತ್ತಿರವಾದಂತಿತ್ತು. ಹೇಗಿದ್ದರೂ ದಣಿವಾಗಿದ್ದರಿಂದ ಮಳೆಯಲ್ಲಿ ನೆನೆಯುವ ಆಸೆ, ಉತ್ಸಾಹ ಮನದಲ್ಲಿ ಪುಟಿಯುತ್ತಿತ್ತು. ಮನದ ಆಸೆಯನ್ನು ಮನದಲ್ಲೇ ಅಡಗಿಸಿಡುವುದು ಬೇಡವೆನಿಸಿ ನನ್ನ ಸಂಚಾರಿ ದೂರವಾಣಿಗಳನ್ನ ಮತ್ತೆ ಮುಖ್ಯವಾಗಿ ಬೇಕಾಗುವ Documentsಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೆ ನೀರು ಬೀಳದಂತೆ ಅದನ್ನು ನನ್ನ ಭದ್ರಪಡಿಸಿಕೊಂಡೆ.

ಅಷ್ಟರಲ್ಲಿ ಊರಿನಿಂದ ಅಮ್ಮ ಕರೆ ಮಾಡತೊಡಗಿದರು. ಅವರೊಡನೆ ಮಾತನಾಡುವಾಗ ಅಲ್ಲಿ ಸ್ವಲ್ಪವೂ ಮಳೆಯೇ ಬಾರದ ಕಾರ್‍ಅಣ ಅಲ್ಲಿಯ ಬೇಸಾಯಕ್ಕೆ ತೊಂದರೆಯಾಗುತ್ತಿದೆ ಎಂದು ಅಮ್ಮ ಹೇಳಿದರು. ಹಾಗೇ ಕರುಳಬಳ್ಳಿಯ ಕಡೆಗಿನ ಪ್ರೀತಿಯನ್ನು ತೋರುತ್ತಾ, "ನೆನೀಬೇಡಾ ಕಣೋ, ಮಳೆ ಬಂದು ನಿಂತ್ಮೇಲೆ ಹೊರಡು, ಅಕಸ್ಮಾತ್ ನನ್ಕೊಂಡು ಹೋದ್ರೆ ಮನೆಗೆ ಹೋದ ತಕ್ಷಣಾ ತಲೆನ ಟವಲ್ ಇಂದ ಒರಸ್ಕೊಂಡು ಒಣಗಿಸ್ಕೋ" !!! ಅಮ್ಮನ ಪ್ರೀತಿ ತುಂಬಿದ ಮಾತುಗಳು ಮನಸ್ಸಿಗೆ ಏನೋ ಖುಷಿತುಂಬಿದವು. ಆದರೂ "ಅಮ್ಮಾ, ತಲೆಮೇಲೆ ಹೆಲ್ಮೆಟ್ ಇದ್ದೇ ಇರತ್ತೆ, ಮತ್ತೆ ಮೈ ಗೆ ಜರ್ಕಿನ್ ಹಾಕಿದೀನಿ, ಲೇಟಾಗಿ ಮನೆಗೆ ಹೋದ್ರೆ ನನ್ಗೊಸ್ಕರ ಅಡುಗೆ ಮಾಡ್ಕೊಂಡು ಯಾರು ಕಾಯ್ತಾ ಇರ್ತಾರೆ ಹೇಳಿ ??? ನಾನು ಜೋಪಾನವಾಗಿ ಮನೆಗೆ ಹೋಗಿ ನಿಮಗೆ ಫೋನ್ ಮಾಡ್ತೀನಿ, ಆಯ್ತಾ ?? ಅಂತೆ ಸಮಾಧಾನಿಸಿ ಅಲ್ಲಿಂದ ಮನೆಯೆಡೆಗೆ ಪಯಣ ಬೆಳೆಸಲು ಅಣಿಯಾದೆ.

ನಾನು ಮೊದಲೇ ಮಳೆಯಲ್ಲಿ ನೆನೆಯಬೇಕೆಂದು ನಿರ್ಧಾರ ಮಾಡಿದ್ದರಿಂದ ಸರಿಯಾಗಿ ೬.೦೦ಘಂಟೆಗೆ ನನ್ನ ಕಾರ್ಯಾಲಯವನ್ನ ಬಿಟ್ಟು ನನ್ನ ಲೋಹಕುದುರೆ (ಬಜಾಜ್)ಯನ್ನೇರಿ ಮನೆಯತ್ತ ಪಯಣ ಬೆಳೆಸಿದೆ. ಹೊರಟು ೧ ನಿಮಿಷಕೂಡಾ ಆಗಿರಲಿಲ್ಲ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಕಾಶವೇ ಕಳಚಿ ಮೇಲೆ ಬೀಳುತ್ತಿದೆಯೇನೋ ಅನ್ನುವಂತಾ ದಪ್ಪ ದಪ್ಪ ಹನಿಗಳು !!! ನಾನು ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದುಹೋದೆ. ಮನಸ್ಸಿನಲ್ಲಿ ಏನೋ ಸಂತಸ... ಉಲ್ಲಾಸ... ೩ ದಿನಗಳ ಹಿಂದೆಯಷ್ಟೇ ಹಲ್ಲು ನೋವಿನಿಂದ ಡಾಕ್ಟರ್ ಹತ್ತಿರ ಹೋಗಿ ಬಂದು ಅದರ ನೋವಿನಿಂದ ಬಳಲುತ್ತಿದ್ದೆ, ಒಮ್ಮೆ ಮಳೆ ಬಂದದ್ದೇ ತಡ !!! ಯಾವ ನೋವೂ ನನ್ನ ಪರಿವೆಗೆ ಇರಲಿಲ್ಲ, ನೀರಿನಲ್ಲಿ ಬಿಟ್ಟ ಮೀನಿನಂತೆ ಮಳೆಯಲ್ಲಿ ಸಾಗಿದೆ. ನನ್ನ ಬೈಕನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪುಟ್ಟ ಮಗುವಿನಂತೆ ಮಳೆಯಲ್ಲಿ ನನ್ನ ಕೈಗಳನ್ನ ಚಾಚಿ ನಿಂತೆ...

ಆಗಷ್ಟೆ ಸುರಿದ ಮಳೆ ನನ್ನ ಮನದಲ್ಲಿದ್ದ ನೋವುಗಳನ್ನ ಅಲ್ಪಕಾಲವಾದರೂ ಕೊಚ್ಚಿಕೊಂಡು ಹೋಗಿತ್ತು. ನಾನು ಒಂಟಿಯಾಗಿ ಮನೆಗೆ ಹೋಗಲು ಬಿಡದ ಮಳೆ ಮನೆಯ ತನಕ ನನ್ನ ಜೊತೆಗೂಡಿ ಬಂದಿತ್ತು, ಆದರೆ ಮನೆಯ ಬಳಿ ನನ್ನ ಬಿಟ್ಟು ತಾನೆಲ್ಲೋ ಮಾಯವಾಗಿತ್ತು.

ಹೈದರಾಬಾದಿನಲ್ಲಿ ನಾನಿದ್ದ ದಿನಗಳಂದು ಬಂದ ಮಳೆಯ ಬಗ್ಗೆ ಬರೆದ ಕೆಲವೇ ಸಾಲುಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ...

ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...

ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...

ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...

ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...

ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...

ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...

ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...

ಮಳೆಯೇ ನಿನ್ನ ಮಾಯವಿದೇನೇ...

Friday, July 11, 2008

ಕನ್ನಡದಲ್ಲಿ ಬರೆಯೋದು ಬಹಳ ಸುಲಭ....

ಎಲ್ಲಾ ಸಹೃದಯ ಓದುಗರಿಗೆ ನಮಸ್ಕಾರಗಳು,

ಹೀಗೇ ಅಂತರ್ಜಾಲದಲ್ಲಿ ಸುತ್ತಾಡುತ್ತಿದ್ದಾಗ ನನಗೆ ಕನ್ನಡದಲ್ಲಿ ಬರೆಯುವ ಒಂದು ಒಳ್ಳೇ ಕೊಂಡಿ ಸಿಕ್ಕಿತು. ನಿಮ್ಮಲ್ಲಿ ಬಹುತೇಕರಿಗೆ ಇದರ ಬಗ್ಗೆ ಸುಳಿವಿದ್ದಿರಬಹುದು. ಆದರೂ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣಾ ಅಂತ ನಾನು ಇಲ್ಲಿ ಆ ಕೊಂಡಿಯನ್ನ ಹಾಕುತ್ತಿದ್ದೇನೆ. ಇದನ್ನು ಉಪಯೋಗಿಸಲು ನಿಮ್ಮ ಗಣಕಯಂತ್ರದಲ್ಲಿ ಬರಹ ತಂತ್ರಾಂಶ ಇರಲೇಬೇಕೆಂದೇನಿಲ್ಲ.

http://www.yanthram.com/kn/type/

ಸಾಧ್ಯವಾದಷ್ಟೂ ಕನ್ನಡದಲ್ಲಿ ಮಾತನಾಡೋಣ....

ಇಂತಿ ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ

Wednesday, July 9, 2008

ಮುಂದೇನಾಗಬಹುದು ???

ಉಸ್ಸಪ್ಪಾಪ್ಪಾಪ್ಪಾ !!!!


ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!


ಯಾಕೋ ಈ ನಡುವೆ ನನ್ಗೆ ಸರಿಯಾಗಿ ಟೈಮ್ ಸಿಕ್ತಾನೇ ಇಲ್ಲ. ಆ ತೊಂದರೆ ಇಂದ ನನ್ನ friends ನ meetಕೂಡಾ ಮಾಡೋಕೆ ಅಗ್ತಾ ಇಲ್ಲ. ಹೀಗೇ ಯೋಚನೆ ಮಾಡ್ತಾ ಇರೋವಾಗ ನನ್ಗನ್ನಿಸ್ತು... ನಾಳೆದಿನ ನಮ್ಗೇನಾದ್ರೂ ಹೆಚ್ಚು ಕಮ್ಮಿ ಆಗಿ ನಾವು ಪರಲೋಕಕ್ಕೆ ಪ್ರಯಾಣ ಬೆಳೆಸಿದ್ರೆ ನಮ್ಮ ಬಗ್ಗೆ ನಮ್ಮ ಗೆಳೆಯರು ಏನಂತ ಮಾತಾಡ್ಕೋಬಹುದು ??? ಕೆಲವರಿಗೆ ಅಯ್ಯೋ ಪಾಪಾ ಅಂತ ಅನ್ನಿಸ್ಬಹುದು, ಮತ್ತೆ ಕೆಲವರ ಓಹೋ ಹೌದಾ ??? ಹೇಗಾಯ್ತಂತೆ ???? ಯಾವಾಗಾ ???? ಅಂತ ರಾಗ ತೆಗೆದು ತಮಗಿಲ್ಲದ ಕಾಳಜಿ ತೋರಿಸಬಹುದು, ಮತ್ತೆ ಕೆಲವರಿಗೆ ನಮ್ಮ ಉಳಿವು, ಅಳಿವಿನ ಸುಳಿವೇ ಇಲ್ಲದೇ ಹೋಗಬಹುದು... ಸುಮಾರು ದಿನಗಳ ನಂತರ ನನ್ನ ಮೊಬೈಲಿನಲ್ಲಿ Store ಆಗಿರುವ ಅವರ ನಂಬರಿನಿಂದ call ಬಂದು ಮೊಬೈಲ್ ರಿಂಗಣಿಸಬಹುದು, ಆನಂತರ ಆ ಕಡೆ ಇರುವ ವ್ಯಕ್ತಿ, ಛೇ !!! ನಂಗೆ ವಿಷ್ಯ ಗೊತ್ತೇ ಇರ್ಲಿಲ್ಲ.... ಅಂತ ಅನ್ನ ಬಹುದು. ಮತ್ತೆ ಕೆಲವರು ನಿಜವಾಗಿಯೂ ದುಃಖ ಪಡಬಹುದು...


ಇನ್ನು ನಮ್ಮ ಕುಟುಂಬದವರಲ್ಲಿ ದುಃಖ ಮಡುಗಟ್ಟಿರಬಹುದು.... ತದ ನಂತರ ನೆಂಟರಿಷ್ಟರಲ್ಲಿ ಕೆಲವರು ಮೊಸಳೇ ಕಣ್ಣೀರು ಇಡುತ್ತಾ Phone ಮಾಡಿ ದುಃಖದಲ್ಲಿರಿವವರನ್ನು ಮತ್ತಷ್ಟು ಅಳುವಂತೆ ಮಾಡಿ ತಾವೂ ದುಃಖಿತರಾಗಿದ್ದೀವಿ ಅಂತ ತೋರ್ಪಡಿಸಬಹುದು... ಕೆಲವರಿಗೆ ನೊಂದವರನ್ನು ಸಮಾಧಾನ ಪಡಿಸಲು ಬಾರದಿದ್ದರೂ, ಮತ್ತಷ್ಟು ಅಳಿಸಿ ಮರೆಯಲೆತ್ನಿಸುತ್ತಿದ್ದ ನೋವನ್ನ ಮತ್ತೆ ಕೆದಕಿ ತಿಳಿಗೊಳ್ಳುತ್ತಿರುವ ಮನವನ್ನ ಕದಡಿ ರಾಡಿ ಎಬ್ಬಿಸಿ ಹೋಗುತ್ತಾರೆ.


ನಮ್ಮ ಬ್ಯಾಂಕಿನ ಅಕೌಂಟುಗಳಲ್ಲಿ ಕೆಲವುದರ ಬಗ್ಗೆ ಮನೆಯವರಿಗೆ ತಿಳಿದಿದ್ದು ಸುಖಾಂತ್ಯ ಪಡೆಯಬಹುದು, ಮತ್ತೆ ಕೆಲವು ಸದ್ದಿಲ್ಲದೇ ಸತ್ತುಹೋಗಬಹುದು... ನಾವು ಉಪಯೋಗಿಸುತ್ತಿದ್ದ ವಸ್ತುಗಳು ಪರರ ಪಾಲಾಗಬಹುದು... ನಮ್ಮ ಬ್ಲಾಗು, ಈ-ಮೈಲ್ ಐಡಿ ಗಳು, ಅದರಲ್ಲಿ ಇರಬಹುದಾದ ವಿಷಯಗಳು ಎಲ್ಲಾ ಯಾರಕೈಗೂ ಸಿಗದೇ ಮುಂದೊಂದುದಿನ ಸರ್ವರ್ ಇಂದ ತೆಗೆಯಲ್ಪಡುತ್ತದೆ. ಇದೆಲ್ಲಾ ಆಗುವುದಂತೂ ಸತ್ಯ. ಏನಾದರೇನು ? ಅದನ್ನೆಲ್ಲಾ ನೋಡುವುದಕ್ಕೆ ನಾವೇ ಅಲ್ಲಿ ಇರುವುದಿಲ್ಲ ಅಲ್ವಾ ??? ಸುಮ್ಮನೇ ಯೋಚನೆ ಏತಕ್ಕೆ ಮಾಡಿ ತಲೆ ಕೆಡಿಸಿ ಇವತ್ತಿನ ದಿನವನ್ನ ಯಾಕೆ ಹಾಳುಮಾಡಿಕೊಳ್ಳುವುದು....
ಅಲ್ವಾ !!!


ಮತ್ತೆ ನೀವು ಈಗ ಕೇಳ್ತೀರಿ, ಯಾಕೆ ಅಷ್ಟೆಲ್ಲಾ ಹೇಳಿದ್ದು, ಬರೆದಿದ್ದು ಅಂತ.... ಸುಮ್ನೆ ಯಾಕೋ ತಲೇಲಿ ಯೋಚ್ನೆ ಬಂತು, ನಿಮ್ಮಲ್ಲಿ ಬೇರೆ ಯಾರಿಗಾದ್ರೂ ಇದೇ ಯೋಚ್ನೆ ಬಂದಿರ್ಬಹುದು, ಆದ್ರೆ ಅದ್ನ ಹೇಳಿರೋದಿಲ್ಲ ಅಷ್ಟೆ.
ಓಟ್ಟಿನಲ್ಲಿ ಎಲ್ಲಾ ಒಳ್ಳೇದಾಗ್ಲಿ ಅಂತ ಮಾತ್ರ ಹಾರೈಸಬಹುದು....

Tuesday, July 8, 2008

ದಿನಚರಿಯ ಒಂದು ದಿನ...

ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕೆ ಕಾರಣ ಏನು ? ನನಗಂತೂ ಗೊತ್ತಿಲ್ಲ... ನಿಮ್ಗೆನಾದ್ರೂ... ????

ಒಮ್ಮೊಮ್ಮೆ ಯಾವುದಾದರೂ ಪುಟ್ಟ ಮಕ್ಕಳನ್ನು ನೋಡಿದರೆ ನಾವೂ ಮಕ್ಕಳಾಗಿಬಿಡಬಾರದಾ !!! ಈ ಜಂಜಾಟಕ್ಕೆ ಸ್ವಲ್ಪನಾದ್ರೂ ಬಿಡುವು ಸಿಕ್ಕಬಾರದಾ ಅಂತ ಅನ್ಸತ್ತೆ. ದಿನಾ ಬೆಳಿಗ್ಗೆ ಎದ್ದು, ಗಡಿಬಿಡಿಯಲ್ಲಿ ಆಫೀಸಿಗೆ ಬಂದು ಬಾಸ್ ಎಂಬ ಭಾವನೆ ಇಲ್ಲದ ಪ್ರಾಣಿಯ ಕಿರಿ ಕಿರಿಯನ್ನ ಸಹಿಸಿಕೊಂಡು ಮನಸ್ಸಿಲ್ಲದ ಮನಸ್ಸಿಂದ ಆತನಿಗೆ ಒಂದು ಸ್ಮೈಲ್ ಕೊಟ್ಟು ಮತ್ತೆ ಕಂಪ್ಯೂಟರಿನ ಮುಂದೆ ಕೀಬೋರ್ಡನ್ನು ಕುಟ್ಟುತ್ತಾ ಕೆಲವೊಮ್ಮೆ ಊಟವನ್ನೂ ಮರೆಯುತ್ತಾ ಕೆಲಸ ಮಾಡಿ ಸಂಜೆಯ ಹೊತ್ತಿಗೆ ಅಲ್ಲಿಂದ ಯಾವಾಗ ಕಾಲು ಕೀಳುತ್ತೇವೋ ಅನ್ನುವ ರೀತಿ ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಸಾಕಪ್ಪಾ !!! ಸಾಕು !!!!

ಅಂದು ನನಗೂ ಇದೇ ರೀತಿ ಆಯಿತು, ಆರೋಗ್ಯ ಹದಗೆಟ್ಟಿದ್ದ ಕಾರಣ ದೇಹಕ್ಕೆ ದಣಿವಾಗಿತ್ತು. ರಾತ್ರಿ ಕೆಮ್ಮು ನಿದ್ದೆ ಮಾಡಲು ಅನುವುಮಾಡಿ ಕೊಟ್ಟಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ನನ್ನ ಮೊಬೈಲಿನ ಅಲಾರಾಂ ನನ್ನ ಬೈದು ಬೈದು ಎಬ್ಬಿಸೋದಕ್ಕೆ ಪ್ರಯತ್ನಿಸುತ್ತಿತ್ತು. ಅದರ ಮೇಲೊಂದು ಮೊಟಕಿ ಮತ್ತೆ ಐದು ನಿಮಿಷ, ಮತ್ತೆ ಐದು ನಿಮಿಷ ಅಂತಾ ೬.೩೦ ಕ್ಕೆ ಎದ್ದೆ, ಎದ್ದು ನಿದ್ದೆಗಣ್ಣಿಂದ ಗಡಿಯಾರ ನೋಡಿದಾಕ್ಷಣ ಎದೆ ಧಸಕ್ ಅಂತು, ಇನ್ನೂ ಸ್ನಾನ ಮಾಡಿ ತಿಂಡಿ ಮಾಡ್ಕೊಂಡು ಆಫೀಸಿಗೆ ಹೋಗೋದು ಯಾವಾಗ ??? ಮೀಟಿಂಗ್ ಬೇರೆ ಇದೆ, ಇವತ್ತು ನನ್ನ ಕತೆ ಅಷ್ಟೇ !!! ಅಂದುಕೊಂಡು ಈ ದಿನ ಎಲ್ಲಾ ಸಸೂತ್ರವಾಗಿ ಸಾಗಲಿ ದೇವರೇ ಅಂತ ವಿಘ್ನನಿವಾರಕನಲ್ಲಿ ಬೇಡಿಕೊಂಡು ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಷೂಗಳಿಗೆ ಪಾಲಿಶ್ ಮಾಡಿಲ್ಲ, ಕರ್ಮಕಾಂಡವೇ.... ಸರಿ ಇನ್ನು ಅದಕ್ಕೆ ೫ ನಿಮಿಷ ತಡವಾಯ್ತು, ಅಲ್ಲಿಂದ ಗಾಡಿ ಹತ್ತಿದ ನಂತರವೇ ನೆನಪಿಗೆ ಬಂದದ್ದು, ಗಾಡಿಯಲ್ಲಿ ಪೆಟ್ರೋಲ್ ಕೇವಲ ಮುಂದಿನ ಬಂಕ್ ತನಕವೇ ನನ್ನ ಗಾಡಿಯನ್ನ ಮುನ್ನಡೆಸಬಲ್ಲದು ಅಂತ, ವಿಧಿ ಇಲ್ಲ.... ಪೆಟ್ರೋಲ್ ಬಂಕ್ ಕಡೆಗೆ ಗಾಡಿಯನ್ನ ತಿರುಗಿಸಿ ಅಲ್ಲಿದ್ದ ಸಾಲಿನಲ್ಲಿ ನಾನೂ ನಿಂತು ಮತ್ತೆ ೧೦ ನಿಮಿಷ ತಡ ಮಾಡಿಕೊಂಡು ಅಲ್ಲಿಂದ ಟ್ರ್‍ಆಫಿಕ್ ನೊಡನೆ ಹೋರಾಡುತ್ತಾ ಅಂತೂ ಇಂತೂ ಆಫೀಸಿಗೆ ಬರುವ ಹೊತ್ತಿಗೆ ನನ್ನ ಮೊಬೈಲಿನಲ್ಲಿ ೩ ಮಿಸ್ಸ್ಡ್ ಕಾಲ್ಗಳು !!!! ಇನ್ಯಾರದ್ದು ??? ನಮ್ಮ ರೇಷ್ಮ (ನಮ್ಮ ಆಫೀಸಿನ efficient worker!!!) ನನಗೆ ಮತ್ತೊಮ್ಮೆ ಕಾಲ್ ಮಾಡಿ "ಪ್ರಶಾಂತ್, ಎಲ್ಲಿದ್ದೀರ ? ಎಲ್ಲಾ ಮೀಟಿಂಗಿಗೆ ಬಂದಿದ್ದಾರೆ.... ನೀವೊಬ್ಬರೇ ತಡ" ಅಂತ ಹೇಳಿದಳು. ಗಡಿಬಿಡಿಯಲ್ಲಿ ತಲೆಯ ಕೂದಲನ್ನ ಸರಿಪಡಿಸಿಕೊಳ್ಳುತ್ತಾ Conference room ಕಡೆಗೆ ಹೆಜ್ಜೆ ಹಾಕಿದೆ, ನನ್ನ ಬಾಸ್ ಒಮ್ಮೆ ನನ್ನಕಡೆ ತನ್ನ ಕೆಂಗಣ್ಣು ಬೀರಿ ನಂತರ ತನ್ನ ಕೆಲಸದಲ್ಲಿ ಮಗ್ನರಾದರು. ಅದರ ಅರ್ಥ ಮೀಟಿಂಗ್ ಮುಗಿದ ಮೇಲೆ ನನಗೆ ಗ್ರಹಚಾರ ಕಾದಿದೆ ಅಂತ.

As usual ಮೀಟಿಂಗಿನಲ್ಲಿ ಅದೇ ಹಳೇ ಭರವಸೆಗಳು... ಅಂತೂ ಇಂತೂ ಮೀಟಿಂಗ್ ಮುಗೀತು, ನಂತರ ನನಗೆ ಒಂದು Customer call ಇದ್ದದ್ದರಿಂದ ನಾನು ಹೊರಡಬೇಕಾಯಿತು. ಪಯಣ ಬಹಳ ದೂರ ಆದ್ದರಿಂದ ಸ್ವಲ್ಪ ಸಮಾಧಾನ ಪಡಿಯೋದಕ್ಕೆ ರೇಡಿಯೋ ಕೇಳುವ ಮನಸ್ಸಾಯಿತು. ರೇಡಿಯೋ ಹಾಕಿದಾಗ ಅದರಲ್ಲಿ ಬರ್ತಾ ಇದ್ದ ಹಾಡು "ಜಾನೆ ತು ಮೆರ ಕ್ಯಾ ಹೈ, ಜಾನೆ ತು ಮೆರ ಕ್ಯ ಥಾ...." ಅನ್ನೋ ಹೊಸಾ ಹಾಡು. ಈ ಹಾಡು ಬರಿಯೋವ್ರಿಗೆ ಅದನ್ನ ಕೇಳೋವ್ರ ಮನಸ್ಸು ಹೇಗೆ ಅರ್ಥ ಆಗತ್ತೋ !!!! ನಿಜ ಅಲ್ವಾ ? ಒಮ್ಮೊಮ್ಮೆ ನಮ್ಗೂ ಹಾಗೇ ಅನ್ಸತ್ತೆ. ಯಾರಾದರೂ ನಮಗೆ ಹತ್ತಿರ ಅನ್ಸಿದ್ರೆ ಅವ್ರಜೊತೆ ಏನೇನೋ ಹೇಳೋಣ ಅಂತ ಅನ್ನಿಸ್ಬಹುದು, ಆದ್ರೆ ಅವ್ರು ಏನಾದ್ರೂ ಅಂದ್ಕೊಂಡ್ಬಿಟ್ರೇ ??? ಅನ್ನೋ ಭಾವನೆ. ಹಾಗಾಗಿ ಬಹಳಷ್ಟು ಮಾತುಗಳು ಮನಸ್ಸಲ್ಲೇ ಮೂಡಿ ಮನಸ್ಸಲ್ಲೇ ಮುದುಡಿ ಹೋಗ್ತಾವೆ.

ನಾನು ಕಾಲ್ ಮುಗಿಸಿ ಸಂಜೆ ಮನೆಗೆ ಬಂದಾಗ ನನ್ನ ಹೂವಿನ ಗಿಡ ಒಂದು ಚೆಲುವಾದ ಹೂವನ್ನ ಅರಳಿಸಿ ನಗು ನಗುತ್ತಾ ತನ್ನ ಕಂಪನ್ನ ಬೀರಿ ನನ್ನ ಸ್ವಾಗತಿಸ್ತಾ ಇತ್ತು. ಅದನ್ನ ನೋಡಿ ನನ್ನಲ್ಲೇ ಏನೋ ಒಂದು ರೀತಿಯ ಸ್ಪೂರ್ತಿ ಮೂಡಿಬಂತು. ಮನೆಯ ಒಳಗೆ ಹೋಗಿ ಮನೆಯನ್ನ ಗುಡಿಸಿ, ಬಟ್ಟೆಗಳನ್ನ ಮಡಿಸಿಟ್ಟು ಗಿಡಗಳಿಗೆ ನೀರು ಹಾಕಿ ಅಮ್ಮನೊಡನೆ ಮಾತನಾಡಲು ಫೋನ್ ಮಾಡಿದೆ...

ಅನಿರೀಕ್ಷಿತ ಅತಿಥಿ...




ಕಳೆದ ತಿಂಗಳು ಒಂದು ಶುಕ್ರವಾರದಂದು ನಡೆದ ಘಟನೆ ಇದು. ವಾರಾಂತ್ಯವಾದ್ದರಿಂದ ನನ್ನ ಆಫೀಸಿನಿಂದ ಸ್ವಲ್ಪ ಬೇಗ ಹೊರಟಿದ್ದೆ. ಹೇಗಿದ್ದರೂ ಬೇಗ ಹೊರಟಿದ್ದರಿಂದ ಜಯನಗರದ ಜನತಾಬಜಾರ್‍ ನಿಂದ ಚಪಾತಿ ಮಾಡುವ ಸಲುವಾಗಿ ಹಿಟ್ಟು ಮತ್ತು ಸ್ವಲ್ಪ ತರಕಾರಿಯನ್ನ ತಂದು ಮನೆಗೆ ಬಂದ ನನಗೆ ಮನೆಯ ಗೇಟಿನ ಬಳಿ ಅನಿರೀಕ್ಷಿತವಾಗಿ ಯಾವುದೋ ಪ್ರಾಣಿ ಮಲಗಿರುವಂತೆ ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಒಂದು ಪುಟಾಣಿ ಅಳಿಲಿನ ಮರಿ !!!

ಪಾಪ ಅದು ಅಲ್ಲಿ ಏತಕ್ಕಾಗಿ ಬಂದು ಬಿದ್ದಿತ್ತೋ ? ಯಾರಾದರೂ ಕಿಡಿಗೇಡಿಗಳು ಅದನ್ನ ಹಿಡಿಯಲು ಪ್ರಯತ್ನಿಸಿ ಹಿಡಿಯಲಾಗದೇ ಕಲ್ಲು ತೂರಿ ಅದನ್ನು ಬಿಟ್ಟು ಹೋಗಿದ್ದರೋ ನನಗೆ ಅರ್ಥವಾಗಲಿಲ್ಲ, ಪಾಪ, ಅದರ ಬಾಯಿಯಲ್ಲಿ ಕೆಳಗಿನ ಒಂದು ಹಲ್ಲು ಮುರಿದಿತ್ತು, ಬಾಯಿಯಿಂದ ರಕ್ತ ಬಂದಿತ್ತು. ನಿತ್ರಾಣಗೊಂಡಿದ್ದ ಅದನ್ನ ತಕ್ಷಣವೇ ಕೈನಲ್ಲಿ ಎತ್ತಿಕೊಂಡು ಮನೆಗೆ ಓಡಿಬಂದು ಅದಕ್ಕೆ ಸ್ವಲ್ಪ ನೀರು ಕುಡಿಸಿದೆ... ಉಸಿರಾಡುವಲ್ಲಿ ಕಷ್ಟ ಪಡುತ್ತಿದ್ದ ಅದನ್ನು ನಿಧಾನವಾಗಿ ಮನೆಯ ಬಕೇಟಿನೊಳಗೆ ತೆಂಗಿನನಾರು ಮತ್ತೆ ಹಳೇ ಬನಿಯನ್ ಅನ್ನು ಇಟ್ಟು ಅದರೊಳಗೆ ಜೋಪಾನವಾಗಿ ಅಳಿಲಿನ ಮರಿಯನ್ನ ಇಟ್ಟು ಅಂಗಡಿಗೆ ಹಾಲು ತರಲು ಓಡಿದೆ. ಹಲ್ಲು ಇಲ್ಲದ ಕಾರಣ ಅದಕ್ಕೆ ಏನನ್ನೂ ತಿನ್ನಲು ಆಗುವುದಿಲ್ಲವೆಂದು ತಿಳಿದಿತ್ತು. ಹಾಲು ತಂದು ಅದಕ್ಕೆ ಸ್ವಲ್ಪ ಬಿಸ್ಕೇಟನ್ನು ನುರಿದು ಆ ಬಿಸ್ಕೇಟಿನ ಹಾಲನ್ನು ಸ್ವಲ್ಪ ಸ್ವಲ್ಪವಾಗೇ ಅದರ ಬಾಯಿಗೆ ಹಾಕಿದೆ. ಕೇವಲ ಬಾಯಿಯ ಮೂಲಕ ಉಸಿರಾಡುತ್ತಿದ್ದ ಆ ಮರಿ ವಿಧಿಯಿಲ್ಲದೇ ನಾನು ಹಾಕಿದ ಹಾಲನ್ನು ಕುಡಿಯುತ್ತಲಿತ್ತು. ನಾನು ಬಲವಂತದಿಂದಾದರೂ ಸ್ವಲ್ಪ ಕುಡಿಸಲೇಬೇಕು, ಶಕ್ತಿಯಿಲ್ಲದಿದ್ದರೆ ಅದು ಮತ್ತೆ ಮೊದಲಿನಂತೆ ಆಗುವುದಾದರೂ ಹೇಗೆ ಅಂತ ಪ್ರಯತ್ನ ಪಟ್ಟು ಸ್ವಲ್ಪ ಕುಡಿಸಿ ನಂತರ ಅದನ್ನು ಆ ಬಕೇಟಿನಲ್ಲಿ ಮಲಗಿಸಿದೆ.

ಪಾಪ, ಅದರಲ್ಲಿ ಶಕ್ತಿ ಅಡಗಿಹೋಗಿತ್ತು. ಪೂರ್ಣವಾಗಿ ನಿತ್ರಾಣಗೊಂಡಿದ್ದ ಅದು ನನಗೆ ಮುಗ್ದ ಮಗುವಿನಂತೆ, ಕೈಲಾಗದ ಹಸುಗೂಸಿನಂತೆ ಕಾಣಿಸಿತು. ನಾನು ಹೇಳಿದ ಮಾತನ್ನು ಕೇಳುತ್ತಿದೆಯೇನೋ ಅನ್ನುವಹಾಗೆ ಹಾಲು ಕುಡಿದು ತನ್ನ ಬಕೇಟಿನಲ್ಲಿ ಮಲಗಿತ್ತು. ಅದಕ್ಕೆ ಹೊರಗಿನಿಂದ ಏನೂ ಪೆಟ್ಟಾದಂತೆ ಕಾಣದಿದ್ದರೂ ಒಳಗಿನಿಂದ ಪೆಟ್ಟಾದದ್ದು ಅದರ ನಿತ್ರಾಣಕ್ಕೆ ಕಾರಣವಾಗಿತ್ತು. ಸಂಜೆಯಿಂದಾ ರಾತ್ರಿಯ ವರೆವಿಗೂ ಅದನ್ನು ಗಮನಿಸುತ್ತಲೇ ಇದ್ದೆ. ರಾತ್ರಿಯ ಹೊತ್ತಿಗೆ ಅದರಲ್ಲಿ ಸ್ವಲ್ಪ ಚೈತನ್ಯ ಬಂದು ಆ ಬಕೇಟಿನ ಒಳಗಡೆ ಓಡಾಡುತ್ತಲಿತ್ತು. ಅಬ್ಬಾ !!! ಸಧ್ಯ ಅಪಾಯದಿಂದ ಪಾರಾಯಿತಲ್ಲ !!! ಅಂದುಕೊಂಡು ಸಂತಸದಿಂದ ಅದನ್ನು ಬಕೇಟಿನಿಂದ ಹೊರಗೆ ತೆಗೆದು ಹಾಲು ಕುಡಿಸಿದೆ. ಮನೆಯೆಲ್ಲಾ ತಿರುಗಾಡಿದ ಅದು ನನ್ನ ಕೈಮೇಲೆಲ್ಲಾ ಹತ್ತಿ ನಂತರ ಕೈಲಾಗದ ಮಗುವಿನಂತೆ ಬಂದು ನನ್ನ ತೊಡೆಯನ್ನೇರಿ ಅಲ್ಲೇ ತನ್ನ ಸುಂದರ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನೇ ನೋಡುತ್ತಾ ನನ್ನಲ್ಲಿ ಏನೋ ಹೇಳುತ್ತಿದೆಯೇನೋ ಅನ್ನಿಸುತ್ತಿತ್ತು. ಮೊದಲೇ ಪ್ರಾಣಿ ಪ್ರಿಯನಾದ ನಾನು ಅದನ್ನೆತ್ತಿಕೊಂಡು ಮುದ್ದಾಡಿ ಮತ್ತೆ ರಾತ್ರಿಯಾದ್ದರಿಂದ ಅದರ ಬಕೇಟಿನಲ್ಲಿ ಮಲಗಿಸಿ ಚಳಿಯಾಗದಂತೆ ಅದಕ್ಕೆ ಬನಿಯನ್ ಬಟ್ಟೆಯನ್ನು ಹೊದ್ದಿಸಿ ಮಲಗಿಸಿದೆ. ಹಾಲು ಕುಡಿದು ಹೊಟ್ಟೇ ತುಂಬಿಸಿಕೊಂಡಿದ್ದ ಅದು ನಿರಮ್ಮಳವಾಗಿ ನಿದ್ರೆ ಮಾಡುತ್ತಿತ್ತು. ಅದನ್ನು ನೋಡಿ ನಾನು ನಿದ್ರೆ ಮಾಡಿದೆ. ಬೆಳಗ್ಗಿನತನಕ ನನಗೆ ಅದರದ್ದೇ ಯೋಚನೆ, ಮುಂಜಾವದಲ್ಲಿ ಎದ್ದು ಅದು ಏನುಮಾಡುತ್ತಿದೆ ಎಂದು ನೋಡಿ, ಇನ್ನೂ ನಿದ್ರೆ ಮಾಡುತ್ತಿದ್ದರಿಂದ ನಾನು ನನ್ನ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ಮಾಡಿ ಬಂದು ನೋಡುವ ಹೊತ್ತಿಗೆ ಅದು ಎದ್ದು ಅತ್ತಿಂದಿತ್ತ ಓಡಾಡುತ್ತಿತ್ತು. ಅದಕ್ಕೆ ಹಾಲು ಕುಡಿಸಿ ಎಂದಿನಂತೆ ನನ್ನ ಕೆಲಸಕ್ಕೆ ಹೊರಟೆ.

ಮಧ್ಯಾನ್ನ ಬೇಗ ಮನೆಗೆ ಬಂದು ಅದು ಏನುಮಾಡುತ್ತಿದೆ ಎಂದು ನೋಡುವ ತವಕದಿಂದಲೇ ಹೊರಟೆ. ಹಾಗೆಯೇ ಅಕಸ್ಮಾತಾಗಿ ಅದಕ್ಕೆ ಹೊಟ್ಟೆ ಹಸಿದರೆ ಎಂದು ಒಂದು ಬಿಸ್ಕೇಟನ್ನೂ ಆ ಬಕೇಟಿನಲ್ಲಿ ಇಟ್ಟಿದ್ದೆ. ಮಧ್ಯಾನ್ನ ಮನೆಗೆ ಬಂದಾಕ್ಷಣ ಅದಕ್ಕೆ ಹಾಲು ಕುಡಿಸಿ ಸಾಧ್ಯವಾದರೆ ಸ್ವಲ್ಪ ಅನ್ನ, ಬಿಸ್ಕೇಟನ್ನು ನೀಡಬೇಕೆಂದು ಮನದಲ್ಲೇ ನೆನೆದು ಬಂದು ಅದನ್ನು ನೋಡಿದೆ, ಅದು ಸ್ವಲ್ಪ ನಿತ್ರಾಣಗೊಂಡಂತೆ ಕಂಡದ್ದರಿಂದ ತಕ್ಷಣ ಅದಕ್ಕೆ ಸ್ವಲ್ಪ ಹಾಲು ಕುಡಿಸಿ ಮಲಗಲು ಬಿಟ್ಟೆ. ಮಧ್ಯಾನ್ನದ ಮಂಪರು ಹತ್ತಿದ್ದರಿಂದ ಆ ಬಕೇಟಿನ ಪಕ್ಕದಲ್ಲೇ ನಾನು ನಿದ್ರೆಗೆ ಶರಣಾದೆ. ಒಂದು ೩೦ ನಿಮಿಷಗಳ ತರುವಾಯ ಎಚ್ಚರವಾಗಿ ಅದನ್ನು ನೋಡಿದರೆ ಅದು ಉಸಿರಾಡುತ್ತಿರುವಂತೆ ಕಾಣಲಿಲ್ಲ, ಅಯ್ಯೋ ದೇವರೇ ಎಂದುಕೊಂಡು ಅದನ್ನು ಎತ್ತಿಕೊಳ್ಳಲು ಕೈಚಾಚಿದರೆ ಅದರ ದೇಹ ಪೂರ್ಣವಾಗಿ ಮರುಗಟ್ಟಿತ್ತು, ಅದರ ಹೃದಯಬಡಿತ ನಿಂತುಹೋಗಿತ್ತು, ಅದು ಆತ್ಮವಿಲ್ಲದ ಶರೀರವಾಗಿತ್ತು. ಕೇವಲ ಒಂದು ದಿನದ ಅತಿಥಿಯಾಗಿ ಬಂದ ಅದು ನನ್ನ ಮನದಲ್ಲಿ ಆಳವಾದ ಹೆಜ್ಜೆಯ ಗುರುತನ್ನ ಮೂಡಿಸಿ ಪರಲೋಕಕ್ಕೆ ಪಯಣ ಬೆಳೆಸಿತ್ತು. ಮುಂಗಾರುಮಳೆಯಲ್ಲಿನ ದೇವದಾಸ ಗಣೇಶನನ್ನು ಬಿಟ್ಟು ಹೋದಾಗ ಕೂಡಾ ನನ್ನ ಕಣ್ಣಿನಲ್ಲಿ ನೀರು ಬಂದಿತ್ತು, ಅದು ಕೇವಲ ಸಿನಿಮಾ ಆದರೂ ದುಃಖ ತಡಿಯಲಾಗಿರಲಿಲ್ಲ, ಅಂತದ್ದರಲ್ಲಿ ನನ್ನ ಜೊತೆಯಲ್ಲೇ, ನನ್ನ ಆರೈಕೆಯಲ್ಲೇ ಒಂದು ದಿನ ಕಳೆದ ಆ ಪುಟ್ಟ ಅಳಿಲಿನ ಮರಿಯೊಡನೆ ಬೆಳೆದ ಬಾಂಧವ್ಯ ನನ್ನ ಕಣ್ಣಂಚಿನಲ್ಲಿ ನೀರುಬರಿಸಿತ್ತು. ನೆನ್ನೆತಾನೆ ಜಿಗಿದು ಓಡಾಡಿಕೊಂಡಿದ್ದ ಅಳಿಲು ಇಂದು ಕೇವಲ ಒಂದು ಶವವಾಗಿತ್ತು. ಅದನ್ನು ಎಲ್ಲೆಲ್ಲೋ ಬಿಸಾಡಲು ಮನಸ್ಸು ಬರದೇ ನನ್ನಬಳಿ ಇದ್ದ ಒಂದು ಹೂವಿನ ಕುಂಡದಲ್ಲಿ ಅದನ್ನು ಮಣ್ಣು ಮಾಡಿ ಅದರ ನೆನಪಿಗೆ ಅದೇ ಕುಂಡದಲ್ಲಿ ಒಂದು ಗಿಡವನ್ನ ನೆಟ್ಟೆ.

ಇಂದು ಆ ಗಿಡದಲ್ಲಿ ಹೂ ಮೂಡಿದೆ, ಆ ಗಿಡದ ಬುಡದಲ್ಲಿ ಬಹುಷ: ಮಣ್ಣಲ್ಲಿ ಮಣ್ಣಾಗಿ ಆ ಪುಟ್ಟ ಅಳಿಲುಮರಿ ನಿಸರ್ಗದ ಮಡಿಲಲ್ಲಿ ಸೇರಿಹೋಗಿದೆ...

Tuesday, June 24, 2008

ಕಾವ್ಯ ಗಂಗೆಯನ್ನರಸುತ್ತಾ...

ಬಹಳದಿನಗಳಾಗಿ ಹೋಯಿತು
ಕಾವ್ಯ ಗಂಗೆಯನ್ನ ಹರಿಬಿಟ್ಟು
ಎಲ್ಲಿ ಹೊರಟಿದೆಯೋ ಅವಳ ಪಯಣ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಮುಂಜಾನೆ ಎದ್ದು ಸೂರ್ಯೋದಯಕ್ಕೆ
ಮುಂಚಿನಸಮಯದಲ್ಲಿ ಜಳಕವಮಾಡಿ
ಜಪ ತಪದಲ್ಲಿ ಲೀನವಾಗುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಪ್ರತಿದನದ ಎಂದೂ ಮುಗಿಯದ
ಪಯಣದಲ್ಲಿ ದಾರಿಯಲ್ಲಿ ಸಿಕ್ಕುವ
ಅಪರಿಚಿತ ಮುಖಗಳಲ್ಲಿ ಅಡಗಿರುವ ಪರಿಚಯವನ್ನು ಹುಡುಕುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಹಕ್ಕಿಗಳ ಇಂಪಾದ್ ಇಂಚರದಿ
ದಿಗಂತದಿ ತೇಲುವ ತಿಳಿ ಮೋಡದ ನಡುವೆ
ಇಣುಕಿ ನೋಡುವ ಭಾಸ್ಕರನ ನೋಡುತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ತಂಪಾದ ತಂಗಾಳಿಯಲ್ಲಿ ತೇಲಿಬರುವ
ನನ್ನವರ ನೆನಪುಗಳ ಮೆಲುಕುಹಾಕುತ್ತಾ
ದಿನದ ದಣಿವನ್ನ ಬೆಳದಿಂಗಳ ಚೆಂದಿರನೊಡನೆ ಕಳೆಯುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ