ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, August 27, 2010

ನನ್ನೊಲುಮೆಯಾ ಸಖೀ....

ದೇವ ದೇವರಲಿ ನಮಿಸಿ

ಬೇಡಿಕೆಗಳ ಮಳೆ ಸುರಿಸಿ

ಬಂದೆ ನಾ ನಗು ಮೊಗವನರೆಸಿ

ಹುಡುಕಿದ್ದೆ ನಾನಂದು ಎನ್ನ ಅರಸಿ



ಕಂಡಿದ್ದೆ ನಾ ನಂದು

ನಗುಮೊಗದ ಕನಸೊಂದು

ಕನಸಿನಲಿ ನೀ ಬಂದು

ನಿಂತಿದ್ದೆ ನಗು ತಂದು



ನಿನ್ನ ಆ ಹೊಳೆವ ಕಣ್ಗಳು

ನಗುವಿನಾ ಅಲೆಗಳು

ಕಣ್ಣಂಚಿನಲಿ ಇದ್ದ ಆ ನಿನ್ನ ಕುಡಿನೋಟ

ಕುಡಿನೋಟದೊಳಗಿದ್ದ ಆ ನಿನ್ನ ತುಂಟಾಟ



ಬಾ ಸಖಿ ಸಾಗುವ ಬಾಳ ಬಂಡಿಯಲಿ

ದೂರ, ಬಲುದೂರದಾ ಪಯಣದಲಿ

ನಾ ನಿನ್ನ ಜೊತೆಗಾರ ನೀ ಎನಗೆ ಆಧಾರ

ಪ್ರೀತಿಯದು ಜೊತೆಯಿರಲು ಸುಖಮಯವು ಸಂಸಾರ

Friday, May 28, 2010

ಭಾವನೆಗಳ ಬುತ್ತಿ

ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ

ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ

ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ

ಮತ್ತೊಮ್ಮೆ ಅದರದ್ದೇ ಘಾಟು

ಯಾವುದನ್ನು ಪುರಸ್ಕಾರಿಸುವುದು

ಯಾವುದನ್ನು ತಿರಸ್ಕರಿಸುವುದು

ಒಮ್ಮೊಮ್ಮೆ ಸವಿಯಾದ ಭಾವನೆ

ಮತ್ತೊಮ್ಮೆ ಕಹಿಯಾದ ಭಾವನೆ

ಎರಡಕ್ಕೂ ಸರಿ ಸಮಾನ ಪೈಪೋಟಿ

ಸಕಲ ರುಚಿಗಳ ಸಮ್ಮೇಳನ

ಬುತ್ತಿಯ ಹಂಚಿಕೊಳ್ಳಲು ನನ್ನವರಿಲ್ಲ

ಸಕಲ ಖಾದ್ಯಗಳೂ ನನ್ನವೇ

ಅತ್ತ ಇತ್ತ ಎತ್ತನೋಡಿದರೂ ಯಾರ ಸುಳಿವಿಲ್ಲ

ಆದರೂ ಬುತ್ತಿಯ ಬಿಡಲು ಮನಸ್ಸಿಲ್ಲ

ಭಾವನೆಗಳ ಬುತ್ತಿಯಿಲ್ಲದೇ ಬದುಕಿಲ್ಲ

ದೂರದಿಂದ ಒಂದು ಅಸ್ಪಷ್ಟ ಆಕೃತಿ ನನ್ನೆಡೆಗೆ ಬರುತ್ತಿದೆ

ಬುತ್ತಿಯನ್ನೋಮ್ಮೆ ಅದರೊಡನೆ ಹಂಚಿಕೊಳ್ಳಲಾ?

Thursday, May 6, 2010

ನೀನಾರೇ...

ನೀಳಕೂದಲು, ಹೊಳೆವ ಕಣ್ಗಳು

ಬಂದು ನೆಲೆಸಿಹೆ ಎನ್ನ ಮನದೊಳು

ಬಿಂಕದ ವೈಯಾರಿ, ನೀನಾರೇ...



ಮಿಂಚಿನ ನೋಟ, ಸೊಬಗಿನ ಮೈ ಮಾಟ

ತುಂಟತನದಿ ಆಡುವ ಹುಡುಗಾಟ

ಬೈತಲೆಯ ಸೊಬಗಿ, ನೀನಾರೇ...



ಸರಳ ಸೌಂದರ್ಯ, ತುಸು ಗಾಂಭೀರ್ಯ

ದನಿಯ ಮಧುರ ಮಾಧುರ್ಯ

ನಾಚಿ ನೀರಾದ ಬಾಲೆ, ನೀನಾರೇ...



ಮನದ ಮುಗಿಲಿನಲಿ ಹೂ ಮಳೆಯ ಸುರಿಸಿದಾಕೆ

ಕಣ್ಣಂಚಿನಲೇ ಮಾತನಾಡಿ ಪುಳಕಗೊಂಡಾಕೆ

ಅಕ್ಕರೆಯ ಸಕ್ಕರೆ ಗೊಂಬೆ, ನೀನಾರೇ...

Thursday, April 22, 2010

ಚುಟುಕ - Weekend ಪ್ರೇಮಿ

ಅನುದಿನ ಮಟ ಮಟ ಮಧ್ಯಾನವಾದರೂ ಸರಿಯೇ
ಸೂರ್ಯನ ಕಾಟವಿದ್ದರೂ ಸರಿಯೇ
ದಟ್ಟ ಕಂಬಳಿಯನು ಮುಸುಕು ಹಾಕಿಕೊಂಡು ಮಲಗುವ ಈ ನನ್ನ ರೀತಿ...
ದುರಭ್ಯಾಸವಲ್ಲ HERO...

ಅದೇನಂದರೆ..
ಶನಿವಾರ ಭಾನುವಾರ ನೀವೆನ್ನ ಎಚ್ಚರಿಸುವ ಪರಿಯ ಮೋಡಿಯನನುಭವಿಸಿ
ಪ್ರತಿನಿತ್ಯವೂ WEEKEND ಎಂಬ ಹುಸಿ ಆಶ್ವಾಸನೆ ನೀಡಿ
ಕನವರಿಸಿ ಮಲಗುವ ಹಾಗೆ ಮಾಡುವ ನನ್ನ ಈ ಹುಚ್ಚು ಹೃದಯದ "WEEKEND ಪ್ರೀತಿ"!!!

Wednesday, April 21, 2010

ಮೊಟ್ಟ ಮೊದಲ ಕೇಕ್ ಕಟ್ಟಿಂಗ್

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅಣ್ಣನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

(ಲೇಖನ ಬರೆದು ಬಹಳ ತಿಂಗಳಾಯ್ತು. ಆದ್ರೆ ನಾ ಬರೆದಿದ್ದ ಪುಸ್ತಕ ನನ್ನ ಕೈಗೆ ಸಿಕ್ಕದೇ ಕಣ್ಣಾಮುಚ್ಚೇ ಕಾಡೇಗೂಡೇ ಆಡ್ತಾ ಇತ್ತು... ಇವತ್ತಿಗೆ ಸಿಕ್ಕೇ ಬಿಡ್ತು :) ಅದಕ್ಕೇ ನಿಮ್ಮೊಂದಿಗೆ ಹಂಚಿಕೊಳ್ತಾ ಇದೀನಿ....)

Monday, April 12, 2010

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ. ಮೊದಲಿಗೆ ನನ್ನ ಸ್ನೇಹಿತನಿಂದ ನಿನ್ನ ಪರಿಚಯವಾದರೂ ಬರಿಯ ನಗೆ ಬೀರಿ ಸುಮ್ಮನಾದೆ. ಅಲ್ಲಿಂದ ನಮ್ಮ ತಂಡ ಪ್ರವಾಸ ಮಾಡಲಿದ್ದ ಸ್ಥಳಕ್ಕೆ ಬಂದಾಗ ಕತ್ತಲೆಯನ್ನ ಸೀಳಿಕೊಂಡು ಸೂರ್ಯದೇವ ನಮಗೆಲ್ಲ ಶುಭೋದಯವನ್ನ ಸಾರಿದ್ದ. ಮಾರ್ಗ ಕಡಿದಾದ್ದರಿಂದ ನಾವೆಲ್ಲಾ ಅಲ್ಲಿದ್ದ ಮಿನಿ ಲಾರಿಯೊಂದನ್ನೇರಿ ಪಯಣವನ್ನು ಮುಂದುವರೆಸಿದ್ದೆವು. ನಾನು ನನ್ನಷ್ಟಕ್ಕೇ ನನ್ನ ಕ್ಯಾಮರಾ ಕಣ್ಣಿನಿಂದ ಸುತ್ತಲ ಪರಿಸರವನ್ನ ನೋಡುತ್ತಿದ್ದೆ. ಆಗ ಮೊದಲಬಾರಿಗೆ ನೀನು ನನ್ನೊಡನೆ ಮಾತಿಗಿಳಿದೆ. "ಬರೀ ನಿಮ್ದೇ ಫೋಟೋ ತೆಕ್ಕೋತೀರಾ ? ನಾವೂ ಎಲ್ಲಾ ಇಲ್ಲೇ ಇದೀವಲ್ಲ"... ಸರಿ... ಮಾತಿಗಿಳಿದಾಯಿತು. "ಅದಕ್ಕೇನಂತೆ, ನಿಮ್ದೂ ಒಂದ್ ಫೋಟೋ ತೆಗೀತೀನಿ" ಅಂದು ನಿನ್ನದೂ ಒಂದು ಫೋಟೋವನ್ನ ತೆಗೆದಿದ್ದೆ. ತದನಂತರ ನಿನ್ನ ಈ-ಮೈಲ್ ಐಡಿಯನ್ನು ನನಗೆ ತಿಳಿಸಿ "ಈ ಫೋಟೋನ ಮೈಲ್ ಮಾಡಿ, ಮರೀಬೇಡಿ" ಅಂದಿದ್ದೆ- ಅಷ್ಟಕ್ಕೇ ನಮ್ಮ ಮಾತು ಅಲ್ಲಿಗೆ ಮುಗಿದಿತ್ತು.

ನಮ್ಮ ಚಾರಣದ ಪ್ರಾರಂಭದ ಹಂತದಲ್ಲಿ ಹೆಚ್ಚಾಗಿ ಕಷ್ಟಕರವೆನಿಸಿರದಿದ್ದರೂ ನಮ್ಮಲ್ಲಿ ಕೆಲವರು ತುಸು ಬಳಲಿದ್ದರು, ನೀನೂ ಅದರಲ್ಲೊಬ್ಬಳು. ಚಾರಣದ ಮೊದಲ ಹಂತದಲ್ಲಿ ಎಲ್ಲಾ ಒಟ್ಟಿಗೇ ಮಾತನಾಡುತ್ತಾ ಹೋದಂತೆ ನೀನೂ ನನ್ನೊಡನೆ ಮಾತಿಗಿಳಿದೆ. ಆ ಗುಂಪಿನಲ್ಲಿ ನನಗೆ ಪರಿಚಯವಿದ್ದ ಒಬ್ಬನೇ ಗೆಳೆಯ ತುಸು ದೂರದಲ್ಲಿ ಹೋಗುತ್ತಿದ್ದರಿಂದ ನಿನ್ನೊಡನೆ ಮಾತನಾಡುತ್ತಾ ನಾನೂ ಹೆಜ್ಜೆ ಹಾಕತೊಡಗಿದೆ. ಅದು ನಿನ್ನ ಮೊದಲನೇ ಚಾರಣ. ನಾನು ವರ್ಷಕ್ಕೊಂದುಬಾರಿ ತಪ್ಪದೇ ಚಾರಣಕ್ಕೆ ಹೋಗುತ್ತಿದ್ದ ಚಾರಣಿಗ. ನನಗೆ ಚಾರಣದಲ್ಲಿದ್ದ ಅನುಭವವನ್ನ ಹಂಚಿಕೊಳ್ಳುತ್ತಾ ನಿನ್ನೊಡನೆ ನಡೆಯುತ್ತಿದ್ದೆ. ಒಂದು ಹಂತದಲ್ಲಿ ಚಾರಣದ ಹಾದಿ ಕಡಿದಾಗಿತ್ತು ಅಲ್ಲಿ ನಿನ್ನಿಂದ ಹತ್ತಲು ತುಸು ಕಷ್ಟವೆನಿಸಿದ್ದರಿಂದ ನನ್ನ ಸಹಾಯ ಹಸ್ತವನ್ನ ನಿನ್ನೆಡೆಗೆ ಚಾಚಿದ್ದೆ. ಅಲ್ಲಿಂದ ಮುಂದೆ ಎಲ್ಲೇ ಕಡಿದಾದ ದಾರಿಯಿದ್ದರೂ ನಾನು ನಿನ್ನ ಸಹಾಯಕ್ಕೆ ನಿಂತಿರುತ್ತಿದ್ದೆ, ಕೈ ಹಿಡಿದು ಮೇಲೆ ಹತ್ತಿಸುತ್ತಿದ್ದೆ.

ನಿನ್ನಲ್ಲಿ ಏನೋ ವಿಷೇಶತೆ ಇರುವ ಹಾಗನಿಸುತ್ತಿತ್ತು. ಎಲ್ಲರಂತೆ ನೀನು ಅತಿಯಾಗಿ ಅಲಂಕಾರ ಮಾಡಿರಲಿಲ್ಲ ನಿನ್ನಲ್ಲಿ ಮುಗ್ಧತೆ ಮತ್ತು ಸರಳತೆ ಎದ್ದು ಕಾಣುತ್ತಿತ್ತು. ನಿನ್ನ ಸ್ನೇಹಮಾಡಬೇಕೆನಿಸಿತು. ಸಾಮಾನ್ಯವಾಗಿ ಬಹುಪಾಲು ಹುಡುಗರಿಗೆ ಗರ್ಲ್ ಫ್ರೆಂಡ್ಸ್ ಇದ್ದೇ ಇರುತ್ತಾರೆ. ಎಲ್ಲೋ ನೂರಕ್ಕೆ ೧೦ ಜನಮಾತ್ರ ಆ ತಾಪತ್ರೇಯ (?) ದಿಂದ ದೂರ ಉಳಿದಿರುತ್ತಾರೆ. ಆ ಹತ್ತು ಜನರಲ್ಲಿ ನಾನೂ ಒಬ್ಬನಾಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳು ಇದ್ದೇ ಇರುತ್ತದೆ. ನನ್ನ ಜೀವನದಲ್ಲಿಕೂಡಾ ಹಲವು ಘಟನೆಗಳು ನಡೆದಿವೆ. ಆದರೆ ನಿನ್ನೊಡನೆ ಕಳೆದ ಆ ೨ ದಿನಕೂಡಾ ಆ ಘಟನೆಗಳ ಸಾಲಿನಲ್ಲಿ ಬಂದು ನಿಲ್ಲುತ್ತವೆಂದು ನಾನು ಎಣಿಸಿರಲಿಲ್ಲ.

ಬಿಸಿಲಿನ ತಾಪ ಏರುತ್ತಲಿತ್ತು. ನೀನು ತಲೆಯಮೇಲೆ ಯಾವುದೇ cap ಹಾಕಿರಲಿಲ್ಲ. ಬಹುಷಃ ಅನುಭವದ ಕೊರತೆ ಅಂತ ಕಾಣ್ಸತ್ತೆ. ನಾನು ಪೂರ್ವಸಿದ್ದತೆ ಮಾಡಿಕೊಂಡೇ ಬಂದಿದ್ದೆ. ತಲೆಯಮೇಲೆ ಒಂದು ಕ್ಯಾಪ್, ಸೊಂಟಕ್ಕೊಂದು ಪೌಚ್, ಅದರಲ್ಲಿ ಕೆಲವು ಪೆಪ್ಪರ್ಮೆಂಟ್ ಗಳು. ಪುಟ್ಟದೊಂದು ನೀರಿನ ಬಾಟಲಿ, ಆಪತ್ಕಾಲಕ್ಕೆ ಗಾಯಗಳಿಗೆ ಹಚ್ಚುವ ಒಂದು ತೈಲ... ಇತ್ಯಾದಿ. ನಿನ್ನ ಪಾಡು ನೋಡಿ ಅಯ್ಯೋ ಅನ್ನಿಸ್ತಾ ಇತ್ತು ನನ್ಗೆ. ಹುಡುಗರಾದರೆ ಗಟ್ಟಿಗರು.. ಹೇಗಾದರೂ ತಡೆದುಕೊಳ್ಳ್ತಾರೆ. ಆದರೆ ಹುಡುಗಿಯರು ಸ್ವಲ್ಪಮಟ್ಟಿಗೆ ಕೋಮಲಾಂಗಿಯರು. ಬಿಸಿಲಿನ ತಾಪ ತಡೆಯಲೆಂದು Sunscreen Lotionಗಳು ತುಟಿ ಒಡೆಯದಿರಲೆಂದು Lip Guard ಗಳು ಇತ್ಯಾದಿ ಇಲ್ಲದೇ ಹೊರಗೆ ಬಾರದವರು. ನಾನು ನನ್ನ ತಲೆಏರಿದ್ದ capಅನ್ನ ತೆಗೆದು ನಿನಗೆ ಕೊಟ್ಟೆ. ಬಿಸಿಲಿನ ತಾಪದಲ್ಲೂ ನಿನ್ನ ಮೊಗದಲ್ಲಿ ಮಂದಹಾಸ ಮಿನುಗಿತ್ತು. ಒಟ್ಟಿನಲ್ಲಿ ನನಗೆ ಪದೇ ಪದೇ ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ನೆನಪಿಗೆ ಬರುತ್ತಲಿತ್ತು.

ನಾ ಕೊಟ್ಟ capಅನ್ನ ತಲೆಮೇಲೇರಿಸಿ ಕಡಿದಾದ (ಅಷ್ಟೇನೂ ಕಡಿದಾಗಿರಲಿಲ್ಲದ) ದಾರಿಯಲ್ಲಿ ತ್ರಾಸಪಟ್ಟು ಅಲ್ಲಲ್ಲಿ ಬಂಡೆಗಳಮೇಲೆ ಕುಳಿತು ಮತ್ತೆ ಮರಗಳ ನೆರಳಿನಲ್ಲಿ ವಿಶ್ರಮಿಸಿ ಮುಂದೆ ಬರುತ್ತಿದ್ದ ನಿನ್ನಪಾಡು ನೋಡಿ ಯಾರಿಗಾದರೂ "ಅಯ್ಯೋ ಪಾಪದ್ ಹುಡ್ಗಿ, ಯಾಕ್ ಅಷ್ಟು ಕಷ್ಟಾಪಟ್ಕೊಂಡ್ ಹೋಗ್ಬೇಕೋ, ಸುಮ್ನೆ ಮನೆಲಿ ಕೂತ್ರೆ ಆಗಲ್ವಾ ???" ಅಂತ ಅನ್ನಿಸೋ ಹಾಗಿತ್ತು . ಅಂತೂ ಇಂತೂ ಆ ಗುಡ್ಡದ ಅರ್ಧ ದಾರಿ ಕ್ರಮಿಸಿಯಾಯಿತು. ನಾನು ಮಾರ್ಗಮಧ್ಯದಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ಆ ಪ್ರಕೃತಿಯ ಸೊಬಗನ್ನ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾ ಹೋದೆ. ಅದರ ಮಧ್ಯೆ ನನಗರಿವಿಲ್ಲದಂತೇ ನಿನ್ನ ಕೆಲವು ತುಣುಕುಗಳೂ ಸೆರೆಯಾಗಿದ್ದವು. ಅರ್ಧ ದಾರಿ ಕ್ರಮಿಸಿದಮೇಲೆ ಮಿಕ್ಕಿದ್ದ ಅರ್ಧ ದಾರಿ ಬಲು ತ್ರಾಸದಾಯಕವಾಗಿ ಕಾಣತೊಡಗಿತು. ನಾನೊಬ್ಬನೇ ಇದ್ದಲ್ಲಿ ಬಹುಷಃ ಪೂರ್ತಿಯಾಗಿ ಹತ್ತಿಬಿಡುತ್ತಿದ್ದೆ. ಆದರೆ ನಿನ್ನ ಮೊಗದಲ್ಲಿ "ನನ್ಗೆ ಯಾರೂ ಹೆಲ್ಪ್ ಮಾಡ್ತಾ ಇಲ್ಲ, ನನ್ ಜೊತೆ ಇರು, ಪ್ಲೀಸ್" ಅನ್ನೊ ಭಾವನೆ ಎದ್ದು ಕಾಣುತ್ತಿತ್ತು. ಸರಿ ಆದದ್ದು ಆಗಿಹೋಗಲಿ ಅಂತ ಚಾರಣವನ್ನ ಅಲ್ಲಿಗೇ ನಿಲ್ಲಿಸಿ ಸ್ವಲ್ಪ ಹೊತ್ತು ನಾವು ಮತ್ತೆ ಹಲವರು ಅಲ್ಲಿಯೇ ಕುಳಿತು ಆ ಸೌಂದರ್ಯವನ್ನ ಸವಿಯುತ್ತಾ ಕೆಲಹೊತ್ತು ಕಾಲ ಮುಂದೂಡಿದೆವು. ಹೇಗೋ ಮಾಡಿ ಅರ್ಧ ಹತ್ತಿದ್ದೇನೋ ಆಯಿತು, ಇನ್ನು ಇಳಿಯೋದು ಹೇಗೇ ??? ಹತ್ತುವಾಗ ಸ್ವಲ್ಪ ಸುಲಭವಾದರೂ ಇಳಿಯುವಾಗ ನಮ್ಮ ದೇಹದ ಸಮತೋಲನ ಅತ್ಯಗತ್ಯ. ಕಾಲು ಜಾರಿದರೆ ಸೀದಾ ಕೆಳಗಿನ ಬಂಡೆಗಳಿಗೆ ಢಿಕ್ಕಿ ಹೊಡೆಯುವುದು ಖಂಡಿತ. ನಮ್ಮಲ್ಲಿ ಕೆಲವರು ಜೊತೆಗೆ ತಂದಿದ್ದ ಕೋಲಿನ ಸಹಾಯ ಪಡೆದು ಇಳಿದರೆ, ನೀನು ಮತ್ತೆ ನಿನ್ನ ಬೆಂಬಲಿಗರು ಬಾಲ್ಯದ "ಜಾರುಬಂಡಿ" ಯನ್ನ ಮತ್ತೆ ನೆನಪಿಸಿಕೊಂಡು ಜಾರುತ್ತಾ ಇಳಿದಿರಿ.

ನಾವೆಲ್ಲಾ ಪ್ರವಾಸವನ್ನ ಪ್ರಯಾಸದಿಂದ ಮುಗಿಸಿ ಮರಳಿ ನಮ್ಮ ನಮ್ಮ ಗೂಡಿಗೆ ಮರಳಲು ಇದ್ದ ಸಂಪರ್ಕ ಕೊಂಡಿಯನ್ನೇರಿದೆವು. ದಾರಿಯುದ್ದಕ್ಕೂ ಅಂತ್ಯಾಕ್ಷರಿಗಳ ಸುರಿಮಳೆ. ಆ ಬಸ್ಸಿನ ಛಾವಣಿ ಸ್ವಲ್ಪ ಗಟ್ಟಿಮುಟ್ಟಾಗಿದ್ದರಿಂದ ಹಾರಿ ಹೋಗಲಿಲ್ಲವೆನ್ನುವುದು ಸಂತಸದ ವಿಷಯ :) ಅಲ್ಲಿಯೇ ನಿನ್ನ ಮೊಬೈಲ್ ಸಂಖ್ಯೆ, ಈ-ಮೈಲ್ ವಿಳಾಸವನ್ನು ಮತ್ತೊಮ್ಮೆ ಪಡೆದುಕೊಂಡೆ. ನಾವೆಲ್ಲಾ ಹಾಡುತ್ತಾ ಕುಣಿಯುತ್ತಾ ಮರಳಿ ಬೆಂಗಳೂರಿಗೆ ಸೇರಿದ್ದೆವು. ಅದಾದನಂತರದ ಕೆಲವು ದಿನಗಳು ನೀನು ನನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿಸಿದ್ದುಂಟು. SMS ಕಳಿಸಿದ್ದುಂಟು. ಆದರೆ ದಿನ ಕಳೆದಂತೆ ಅವೆಲ್ಲವೂ ಕಡಿಮೆಯಾಗತೊಡಗಿತು.

ನಿಜವಾಗಲೂ ನನಗೆ ನಿನ್ನಲ್ಲಿ ಪ್ರೀತಿ ಪ್ರೇಮ ಅಂಥದ್ದೇನೂ ಇರಲಿಲ್ಲ.. ಆದರೆ ಒಬ್ಬ ಹುಡುಗ ಮತ್ತೊಂದು ಹುಡುಗಿಯಜೊತೆಯಲ್ಲಿ ಸಲುಗೆಇಂದ ಇದ್ದಾಗ ಸಮಾಜದ ಜನ ಮಾತನಾಡುವುದೇ ಪ್ರೇಮದ ಬಗ್ಗೆ. ನಮ್ಮ ನಡುವೆಯೂ ಹಾಗೇ ಆಯಿತು. ನಮ್ಮಿಬ್ಬರ ಸ್ನೇಹಕ್ಕೆ ಬೇರೆಯ ಹೆಸರು ಕಟ್ಟತೊಡಗಿತು ಸಮಾಜ. ಅದು ನನ್ನ ಗಮನಕ್ಕೆ ಬಂದದ್ದು ನನ್ನ ಸ್ನೇಹಿತನಿಂದ. ಬಹುಷಃ ನಿನಗೆ ನಿನ್ನ ಆಫೀಸಿನಲ್ಲೂ ಹಾಗೇ ಹೇಳಿದ್ದಿರಬಹುದು. ಅದೇ ಕಾರಣದಿಂದ ನೀನು ಕ್ರಮೇಣ ಫೋನ್ ಕಾಲ್, ಮೆಸ್ಸೇಜ್ ಎಲ್ಲ ವನ್ನೂ ಕಡಿಮೆಮಾಡಿರಬಹುದು. ನಾನುಕೂಡಾ ಕಡಿಮೆ ಮಾಡಿದೆ. ನೀನು ಚಾಟ್ ನಲ್ಲಿ Online ಇದ್ದರೂ ನಾನು ನಿನ್ನನ್ನು ಮಾತನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ. ಇಂದಿಗೂ ನಿನ್ನನ್ನು Online ನಲ್ಲಿ ನೋಡುತ್ತೇನೆ. ನಮ್ಮ ಚಾರಣದ ದಿನಗಳನ್ನ ನೆನಪಿಸಿಕೊಳ್ಳುತ್ತೇನೆ, ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ಹಾಗೆಯೇ ನನ್ನ ಕಿವಿಗಳಲ್ಲಿ ಗುಯ್ ಗುಡುತ್ತದೆ.

"ಖೂಬ್ ಸೂರತ್ ಬಾತ್ ಯೇ, ಚಾರ್ ಪಲ್ಕಾ ಸಾಥ್ ಯೇ, ಸಾರೀ ಉಮರ್ ಮುಝ್ಕೋ ರಹೇಗಾ ಯಾದ್"

Wednesday, April 7, 2010

ಚಿಗರೆ ಕಂಗಳ ಚೆಲುವೆ

ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿ
ಆನಂದ ಅನುದಿನವು ನನ್ನ ಮನಸಿನಲ್ಲಿ
ಅನುದಿನವು ಹೂದೋಟ, ನಡೆವದಾರಿಯಲ್ಲಿ
ಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿ

ನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣ
ನಿನ ಚೆಲುವು ಎನಗಾಯ್ತು ಸ್ಪೂರ್ತಿಯಾ ತಾಣ
ಕನಸಲ್ಲೂ ಹೊಂಬೆಳಕು ತಂದ ಬೆಳದಿಂಗಳು
ದಾಳಿಂಬೆ ನಗುಚೆಲ್ಲಿ ಬಿರಿದ ಆ ತುಟಿಗಳು

ಅರಳಿದಾ ಸುಮವು ನಾಚಿ ನೀರಾಗಿರಲು
ನಿನ ಸೌಂದರ್ಯಕೆ ಸಾಟಿ ನೀನೇ ಆಗಿರಲು
ದುಂಬಿಯದು ಝೇಂಕರಿಸಿ ನಿನ್ನರಸಿ ಬಂದಿರಲು
ಸುಮವಲ್ಲವೋ ಮರುಳೆ, ಕುಸುಮಬಾಲೆಯು ಇವಳು

ಸಿಂಹಿಣಿಯ ನಡು ನಿನದು ಬಳುಕುತಾ ನಡೆ ನೀನು
ಗೆಜ್ಜೆನಾದದಿ ನುಡಿಸಿ ಮಧುರಗೀತೆಯ ಜೇನು
ನಿನ ನಾಟ್ಯವಾ ನೋಡಿ ನವಿಲೂ ನಿಂದಿತ್ತು
ಆ ಮಧುರ ಗಾನಕ್ಕೆ ಕೋಗಿಲೆಯೂ ನಾಚಿತ್ತು

ಬೆಳಗಾಯ್ತು ಹಾಳಾಯ್ತು ಆ ನನ್ನ ಸವಿಗನಸು
ಚಿಗರೆ ಕಂಗಳ ಚೆಲುವೆ ನೀ ಸಿಗುವೆ- ಹೇಳುತಿದೆ ಈ ಮನಸು
ಕಾವಲಿರು ನೀ ಎನ್ನ ಸವಿಗನಸುಗಳಿಗೆ
ಕಳೆದು ಹೋಗದಿರಲೆಂದೂ ಈ ಮಧುರ ಘಳಿಗೆ
:D

Monday, April 5, 2010

ತಾಯೇ ನಿನಗೆ ವಂದನೆ...

Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till the end of your life.... ಈ SMS ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದರ ಬಗ್ಗೆ ವಾದ ವಿವಾದ ಮಾಡದೇಇದ್ರೂ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ನಾನು ಬರೆದ ಕೆಲವು ಸಾಲುಗಳಿವು. :)

I am dedicating this poem to all such ladies with respect.

ಹಸುಗೂಸು ಹೆರುವಾಗ ನೀ ಕಷ್ಟಪಟ್ಟೆ
ಹೆತ್ತಕಂದನ ಕಂಡು ಸಂತಸವ ಪಟ್ಟೆ
ಹುಟ್ಟಿದ ಹಸುಗೂಸ ಒಲುಮೆಯಲಿ ಸಾಕಿ
ಒಲುಮೆ ಸಿರಿ ಸಂತಸವ ಅನುದಿನವು ಉಣಿಸಿ

ಎದ್ದು ಬಂದಿದ್ದೆ ನಡುರಾತ್ರಿಯಲಿ, ಕೇಳಿ ಕಂದನ ಕೂಗು
ರಟ್ಟೆನೋವಾದರೂ ನೀ ಬಿಡಲಿಲ್ಲ ತೊಟ್ಟಿಲ ತೂಗು
ರಚ್ಚೆಹಿಡಿದತ್ತಾಗ ತೋಳ ತೆಕ್ಕೆಯಲಿ ಮಲಗಿಸಿ
ಮುದ್ದು ಕಂದನ ನಿನ್ನ ಕಣ್ರೆಪ್ಪೆಯಲಿ ಇರಿಸಿ

ಅಯ್ಯೋ ಕಂದನ ಒಡಲು ಬಿಸಿಯಾಯ್ತು
ಹೆತ್ತಕರುಳಿನ ಕೂಗು, ಚಿಂತೆ ನೂರಾಯ್ತು
ಗುಡಿ ಗೋಪುರದಿ ಪೂಜೆ, ಮನೆ ದೇವರಲಿ ಹರಕೆ
ಕಂದನಿಗೆ ಗುಣಮಾಡು, ನಗುತರಿಸು ಮೊಗಕೆ

ಅಪಾರ ಪ್ರೀತಿಯ ಮೊಗೆದು ಬೊಗಸೆಯಲಿ ತುಂಬಿ
ಮಮಕಾರ ತೋರಿ ಮುತ್ತಿನ ಮಳೆ ಸುರಿಸಿ
ನೋವುಗಳ ನುಂಗಿ, ಸಂತಸವ ಉಣಬಡಿಸಿ
ಕಣ್ಣೀರನು ಮರೆಸಿ, ನೋವನ್ನು ತೊರೆಸಿ

ಕೂಸದು ಗೆದ್ದಾಗ ನೀನೂ ಸಂಭ್ರಮಿಸಿ
ಸಿಹಿಯೂಟ ಪ್ರೋತ್ಸಾಹ, ಕಂದನಿಗೆ ಹರಸಿ
ನಿನ್ನೊಲುಮೆಯ ಧಾರೆ ಹರಿದಿರಲಿ ನಿರಂತರ
ನೀಜೊತೆಯಲಿದ್ದರೆ ಸಂಭ್ರಮದ ಸಡಗರ

Wednesday, March 31, 2010

ನನ್ನ ಚಲುವೆ..

ನನ್ನವಳು ಈ ಚಲುವೆ ಬಲು ಅಂದಗಾತಿ
ಸಾಗರದ ಅಲೆಯಂತೆ ನೀ ತೋರುವಾ ಪ್ರೀತಿ…

ಒಮ್ಮೆ ಬಲು ಮೃದುವಾಗಿ ಬಂದೆನ್ನ ಸೋಕಿ
ಮತೊಮ್ಮೆ ರಭಸದಿ ಬಂದೆನ್ನ ತಾಕಿ…

ಕಂಡೆನಾ ಏರಿಳಿತ ನನ್ನವಳ ಪ್ರೀತಿಯಲಿ
ಏನು ಗೊಂದಲವೊ ಏನೊ ಆಕೆಯಾ ಮನಸಿನಲಿ…

ಒಮ್ಮೊಮ್ಮೆ ಸಂತಸದಿ ಬಳಿನನ್ನ ಬರುವಳು
ಮತ್ತೊಮ್ಮೆ ಬೇಸರದಿ ದೊರದಲಿ ಇರುವಳು…

ಚೆಂದುಟಿಯ ಚೆಲುವೆ ಈ ಮೌನ ಬೇಕೇ
ಬಾಯ್ದೆರೆದು ಸವಿನುಡಿಯೆ ಈ ಮೌನ ಸಾಕೇ…

ಮಕ್ಕಳಾಟವು ಚೆನ್ನ ಜಿಂಕೆ ಓಟವು ಚೆನ್ನ
ಓ ನನ್ನ ಚೆಲುವೆ ನೀ ಮಾತಾಡೆ ಬಲುಚೆನ್ನ…

ಮಾತಾಡು ಎನಕೊಡ ಈಗಲಾದರೂ ನಗುತಲಿ
ಕಾದಿಹುದು ಈ ಹೃದಯ ನಿನಗಾಗಿ ತವಕದಲಿ…

Tuesday, March 30, 2010

ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ

ನಾನು ಹೈದರಾಬಾದಿನಲ್ಲಿದ್ದಾಗ ಗೆಳೆಯ ವಿಜಯ್ನೊಡನೆ ಮಾತನಾಡುತ್ತಾ ಇದ್ದಾಗ ತಮಾಶೆಗೆಂದು ನಾಲ್ಕು ಸಾಲು ಕವನದರೀತಿಯಲ್ಲಿ ಹೇಳಿದೆ. ಅವನ ಪ್ರೇರೇಪಣೆಯೊಂದಿಗೆ ಬರೆಯಲು ಪ್ರಾರಂಭಿಸಿದ್ದು ಇಂದು ಕೊಂಚ ಬೆಳೆದು ಕವನದ ಜೊತೆಗೆ ಲೇಖನದ ರೂಪವನ್ನೂ ಪಡೆದಿದೆ. ಆ ದಿನಗಳಲ್ಲಿ ಬಹುಶಃ ನನ್ನ ಕವನಗಳು ಹೊರಬರಲು ನನ್ನ ಒಂಟಿತನವೇ ಮೂಲಕಾರ್‍ಅಣವೇನೋ. ಕವನಗಳನ್ನು ಬ್ಲಾಗಿನ ಮುಖಾಂತರ ಗೆಳೆಯರ ಬಳಿ ತಲುಪಿಸಲೂ ಗೆಳೆಯರೇ ಕಾರಣ.

ಕೇವಲ ತಮಾಷೆಗೆಂದು ಪ್ರಾರಂಭಿಸಿದ ಬ್ಲಾಗಿನಗೀಳು ಇಂದು ನನ್ನ ಅವಿಭಾಜ್ಯ ಅಂಗವಾಗಿದೆ. ಬರವಣಿಗೆ ನನ್ನ ಕನಸು. ಹಾಗಾಗಿ ನನ್ನ ಕನಸಿನ ಕೂಸಿಗೆ ಅದೇ ಸರಿಯಾದ ಹೆಸರೆಂದು ನಾಮಕರಣ ಮಾಡಲು ಪ್ರಯತ್ನ ಪಟ್ಟೆ. ಆದರೆ ನನ್ನಂತೆಯೇ ಬೇರೆಯವರಿಗೂ ಆಲೋಚನೆ ಇದ್ದಿದ್ದರಿಂದ "ನನ್ನಕನಸು" ಹೆಸರಿನ ಬ್ಲಾಗೊಂದು ಮೊದಲೇ ಅವತರಿಸಿತ್ತು. ನನ್ನ ಕನಸು ಆಗತಾನೆ ಚಿಗುರೊಡೆದಿದ್ದರಿಂದ ನನ್ನ ಕನಸಿನ ಕೂಸಿಗೆ "ನನ್ನಕನಸು-ಚಿಗುರು" ಎಂದು ನಾಮಕರಣ ಮಾಡಿದೆ. ಮೊದ ಮೊದಲು ಮೂಡಿದ ಚಿಗುರು ಬಂಪರ್ ಬೆಳೆಯನ್ನೇ ತಂದಿತ್ತು. ಕೇವಲ ಕೆಲವೇ ದಿನಗಳಲ್ಲಿ ನನಗೇ ಅರಿಯದಂತೆ ನನ್ನೊಳಗಿನಿಂದ ೪೧ ಕವನ ಹೊರಹೊಮ್ಮಿತ್ತು. ಬರೆದದ್ದೆಲ್ಲವನ್ನೂ ಕವನ ಎನ್ನಲಾಗುವುದಿಲ್ಲ.

ಆ ದಿನಗಳಲ್ಲಿ ಕಣ್ಣಿಗೆ ಕಾಣುವ ದೃಷ್ಯಗಳೆಲ್ಲವೂ ಕವನಗಳಿಗೆ ಸ್ಪೂರ್ತಿ ತಂದುಕೊಡುತ್ತಿತ್ತು. ಜೊತೆಯಲ್ಲಿ ಗೆಳೆಯರ ಪ್ರೋತ್ಸಾಹ, ಪ್ರೀತಿ ತುಂಬಿದ ತಿದ್ದುವಿಕೆ, ಆಕ್ಷೇಪಣೆ ಎಲ್ಲಾ ಮತ್ತಷ್ಟು ಬರೆಯಬೇಕೆಂಬ ಬಯಕೆಯನ್ನ ಹೆಚ್ಚಿಸುತ್ತಿದ್ದವು. ನನ್ನ ಹಲವಾರು ಕವನಗಳನ್ನು ಇಷ್ಟಪಟ್ಟುಕೊಂಡು ಕೆಲವರು ತಮ್ಮ ಬ್ಲಾಗಿಗೂ ಹಾಕಿಕೊಂಡಿದ್ದುಂಟು. ಅದಕ್ಕೆ ನಾನು ಕೂಡಾ ಆಕ್ಷೇಪಣೆ ಮಾದಿದ ನೆನಪು. ಆದರೀಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಹಲವರು ನನಗೆ ಬೇಸರಿಸಬಾರದೆಂದು ನಾ ಬರೆದ ಕವನಗಳೆಲ್ಲಾ ಉತ್ತಮವಾಗಿದೆಯೆಂದರೆ ಮತ್ತೆ ಕೆಲವರು ಕಟುವಾಗಿ ಟೀಕಿಸಿದರು, ತಪ್ಪುಗಳನ್ನು ಎತ್ತಿ ಹಿಡಿದರು. ಅವರೆಲ್ಲರಿಗೂ ನನ್ನ ನಮನಗಳು.

ಮೊದ ಮೊದಲು ಅರ್ಧ ರಾತ್ರಿ ೨ ಘಂಟೆಗೆ ಎದ್ದು ಕವನ ಬರೆದದ್ದುಂಟು. ಕನಸಿನಲ್ಲೂ ಕವನಗಳೇ, ದಾರಿಯಲ್ಲಿ ಕಾಣಸಿಗುವ ಪ್ರತೀ ಮುಖದಲ್ಲಿ ಹುದುಗಿರುವ ಆಲೋಚನೆಗಳನ್ನು ಅರಿಯಲೆತ್ನಿಸುತ್ತಿದ್ದೆ. ನಾನು ಅವರ ಸ್ಥಾನದಲ್ಲಿದ್ದಿದ್ದರೆ ಏನಾಗುತ್ತಿತ್ತು? ಅದನ್ನೇ ಯೋಚಿಸುತ್ತಿದ್ದೆ. An Empty mind is Devil's Workshop ಅನ್ನುವಹಾಗೆಯೇ ಆಗಿತ್ತು ನನ್ನ ಕಥೆ :) ಆಫೀಸಿನಿಂದ ಹೆಚ್ಚು ಒತ್ತಡವಿರಲಿಲ್ಲ, ಮಾತನಾಡಲು ನಾನು ಎಲ್ಲರಿಂದ ದೂರವಿದ್ದೆ. ನಾನು ಆ ಸಮಯದಲ್ಲಿ ನನ್ನೊಂದಿಗೆ ಸದಾಕಾಲ ಒಂದು ಪೇಪರ್ ಮತ್ತು ಒಂದು ಪೆನ್ ಇಲ್ಲದೇ ಎಲ್ಲಿಗೂ ಹೋದ ನೆನಪಿಲ್ಲ. ನನ್ನ ಆ ಪಾಡನ್ನುಕಂಡು ನನ್ನ ಮಿತ್ರರು ಛೇಡಿಸಿದ್ದೂ ಉಂಟು. ಆದರೂ ಬರವಣಿಗೆಯ ಭೋರ್‍ಗರೆತ ನಿಲ್ಲಲಿಲ್ಲ. ಆದರೆ ಕಾರಣಾಂತರಗಲಿಂದ ಕ್ರಮೇಣ ಕಡಿಮೆಯಾಗುತ್ತಾ ಬಂತು.

ಆದರೀಗ ಮತ್ತೊಮ್ಮೆ ವಸಂತ ಬಂದಿದೆ. ಮನದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ. ಒಂದು ವೆತ್ಯಾಸವೆಂದರೆ ಈ ಬಾರಿ ನಾನು ಹಿಂದಿನಂತೆ ಎಲ್ಲರಲ್ಲು ನನ್ನ ಬರವಣಿಗೆಯನ್ನು ಓದಿ ಎಂದು ದುಂಬಾಲು ಬೀಳುವುದಿಲ್ಲ :) ಆಸಕ್ತರು ತಾವಾಗೇ ಬರುತ್ತಾರೆ, ಯಾರದರೂ ನನ್ನ ಬ್ಲಾಗಿಗೆ ಬಾರದಿದ್ದರೆ, ನಾ ಬರೆದ ಬರವಣಿಗೆ ಓದಲಿಲ್ಲವೆನ್ನುವುದಕ್ಕೆ ನನಗೆ ಬೇಸರವಿಲ್ಲ. ಈ ಬಾರಿಯೂ ನಾನು ಕಾಗದ ಮತ್ತು ಲೇಖನಿಯನ್ನು ಹಿಡಿದೇ ಹೊರಟಿದ್ದೆ. ಆದರೆ ನನ್ನೊಡನೆ ಮುನಿಸಿಕೊಂಡಿದ್ದ ಲೇಖನಿ ಮೌನವಾಗಿತ್ತು. ಹಾಗಾಗಿ ನಾನು ಈ ಎಲ್ಲಾ ವಿಚಾರವನ್ನೂ ಬರೆಯಲು ಕಾಗದ ಬಳೆಸಲಿಲ್ಲ, ಬದಲಿಗೆ ನನ್ನ ಮೊಬೈಲಿನ ಸಹಾಯ ಪಡೆದುಕೊಂಡೆ. ಮನದ ಆಲೋಚನೆಗಳನ್ನೆಲ್ಲಾ ಅದರಲ್ಲಿ ದಾಖಲಿಸುತ್ತಾ ಹೋದೆ, ನಂತರ Computer ನನ್ನ ಸಹಾಯಕ್ಕೆ ಕಾಯುತ್ತಲಿತ್ತು. ಹಾಗಾಗಿ ಕಾಗದವನ್ನೂ ಮತ್ತು ಕಾಗದಕ್ಕಗಿ ಕತ್ತರಿಸುವ ಮರವನ್ನೂ ಉಳಿಸಿದೆ ;) ಏಪ್ರಿಲ್ ತಿಂಗಳಿಗೆ ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ.... ಈ ಮೂರು ವರುಷಗಳಲ್ಲಿ ಅಂದಾಜು 3900 Hits ನನ್ನ ಬ್ಲಾಗಿಗೆ!!! ನನ್ನ ಪಾಲಿಗೆ ಅದೇ ಸಂತೋಷದ ವಿಷಯ.

ನಿಮ್ಮೆಲ್ಲರ ಪ್ರೀತಿಯ ಹಾರೈಕೆ ನನ್ನೊಂದಿಗೆ, "ನನ್ನಕನಸೊಂದಿಗೆ" ಇದ್ದರೆ ಸಾಕು....

Thursday, March 25, 2010

bg******@ rediffmail. com ಗೆ ಒಂದು ಪತ್ರ

ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು ನಿನ್ನ ಅನುಮಾನಗಳ ಪರಿಹಾರಕ್ಕೆ ನನ್ನನೇ ಏಕೆ ಆಯ್ಕೆ ಮಾಡಿದೆಯೋ, ಗೊತ್ತಿಲ್ಲ. ನಮ್ಮ ಪರಿಚಯವಾಯ್ತು. ನಾನು ಅಂದು ಬಹಳ ಸಂಕೋಚದ ಹುಡುಗ. ಹೆಚ್ಚಿಗೆ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅದರಲ್ಲೂ ಹುಡುಗಿಯರನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಿದ್ದೆ.

ನಮ್ಮ ಕೋರ್ಸಿಗಾಗಿ ಮೀಸಲಿದ್ದದ್ದು ಕೇವಲ ೬ ತಿಂಗಳು ಮಾತ್ರ. ಅದೂ ನಾನು ಕೆಲಸ ಮುಗಿಸಿ ನನ್ನ ಮೊದಲ ದ್ವಿಚಕ್ರವಾಹನ TVS-XL ನಲ್ಲಿ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಮೊದ ಮೊದಲು ಮುಖ ಪರಿಚಯವಾಗಿ ಕೇವಲ ನಗುವಿನಲ್ಲೇ ನಮ್ಮ ಸಂಭಾಷಣೆ ನಡೆಯುತ್ತಿತ್ತು. ನಿನ್ನೊಡನೆ ಸದಾಕಾಲವೂ ಇರುತ್ತಿದ್ದ ನಿನ್ನ ಗೆಳತಿ ರಷ್ಮಿ ಯೊಡನೆ ನೀನು ಏನು ಮಾತನಾಡಿಕೊಳ್ಳುತ್ತಿದ್ದೆಯೋ ನನಗದು ತಿಳಿಯುತ್ತಿರಲಿಲ್ಲ. ಆದರೆ ಸದಾ ಹಸನ್ಮುಖಿಯಾಗಿ ಗೆಲುವಿನಿಂದ ಕೂಡಿರುತ್ತಿದ್ದ ನಿನ್ನೊಡನೆ ಎಲ್ಲರೂ ಸ್ನೇಹಬೆಳೆಸಬಯಸುವವರೇ ಆಗಿರುತ್ತಿದ್ದರು.

ಕ್ರಮೇಣ ನಗುವಿನ ಸಂಭಾಷಣೆ ಮಾತು ಕಲಿಯತೊಡಗಿತು. ಕಳೆದದಿನದಂದು ಮಾಡಿದ ಪಾಠದಲ್ಲಿನ ಅನುಮಾನ ನಿನ್ನನ್ನು ನನ್ನಹತ್ತಿರಕ್ಕೆ ತರುತ್ತಿತ್ತು. ಕೇವಲ ಅದನ್ನು ನೆಪವಾಗಿಟ್ಟುಕೊಂಡು ನಮ್ಮ ಗೆಳೆತನವನ್ನು ಪ್ರೀತಿ ಎಂದೆನಿಸಿಕೊಳ್ಳುವ ಹುಚ್ಚು ಮನಸ್ಸು ನನ್ನದಲ್ಲವಾದ್ದರಿಂದ ನನ್ನ ನಿನ್ನ ಗೆಳೆತನ ಮೊಳಕೆಯೊಡೆದಿತ್ತು. ತರಗತಿಯಲ್ಲಿ ನಾವಿಬ್ಬರೂ ಮತ್ತೆ ರಷ್ಮಿ ಒಟ್ಟಿಗೇ ಕುಳಿತು ಅಭ್ಯಾಸಿಸುತ್ತಿದ್ದೆವು. ಲ್ಯಾಬ್ ಗಳಲ್ಲಿ ನಾವೆಲ್ಲಾ ಒಟ್ಟಿಗೇ ಸೇರಿ ಕೊಟ್ಟ ಅಸೈಮೆಂಟ್ ಗಳನ್ನು ಮುಗಿಸುತ್ತಿದ್ದೆವು. ನನ್ನಲ್ಲಿ ನನ್ನ ಜೀವನದ ಕನಸುಗಳು ಮೊಳೆಯುವ ಕಾಲವದು. ಅಂದು ನಾನು ಕನಸಿನಲ್ಲಿಯೂ ಬೆಂಗಳೂರಿಗೆ ಬರುವೆನೆಂದು ಅನಿಸಿರಲಿಲ್ಲ. ನನ್ನದೇ ಒಂದು ಪುಟ್ಟ ಗೂಡನ್ನು ಕಟ್ಟುವ ತವಕವಿರಲಿಲ್ಲ. ಕೇವಲವಿದ್ದದ್ದು ಮುಗ್ದ ಹೃದಯ ಮತ್ತು ತನ್ಮಯತೆ.

ನಮ್ಮ ತರಗತಿಗಳು ೪ತಿಂಗಳ ಅವಧಿಯನ್ನು ಮುಗಿಸಿದ್ದವು. ಇನ್ನು ಬಾಕಿ ಉಳಿದದ್ದು ಕೇವಲ ೨ ತಿಂಗಳುಗಳು ಮಾತ್ರ. ಅಷ್ಟರಲ್ಲಾಗಲೇ ನಾವೆಲ್ಲಾ (ಅದರಲ್ಲೂ ನಾವಿಬ್ಬರು) ಒಳ್ಳೆಯ ಸ್ನೇಹಿತರಾಗಿದ್ದೆವು. ಅಂದು ವಾರಾಂತ್ಯ- ನಾನು ನನ್ನ ಅಣ್ಣ, ಮತ್ತವನ ಸ್ನೇಹಿತರು ಎಲ್ಲಾ ಸೇರಿ ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿಳಿದು ಗಾಯತ್ರಿ ಟಿಫನ್ ರೂಂ ನಲ್ಲಿ ತಿಂಡಿ ತಿಂದು ಇನ್ನೇನು ಹೊರಡಬೇಕೆನಿಸುವಷ್ಟರಲ್ಲಿ ಬೆಂಗಳೂರಿನಿಂದ ಅಣ್ಣನ ಸ್ನೇಹಿತನ ಕರೆ ಮೊಬೈಲಿನಲ್ಲಿ ಮೊಳಗಿತ್ತು. ಅಣ್ಣನ ಸ್ನೇಹಿತ ನನಗೆ ಬೆಂಗಳೂರಿನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ತಿಳಿಸಿದ್ದ. ಅಂದಿನಿಂದ ನನಗೆ ಮೈಸೂರಿನ ಸೆಳೆತ ಜೋರಾಗತೊಡಗಿತು. ಮೈಸೂರನ್ನು ಬಿಟ್ಟು ಹೋಗಬೇಕಾ ? ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರನ್ನೂ ಬಿಟ್ಟು ಹೋಗಬೇಕಾ.... ನಿನ್ನಿಂದ ದೂರ ಹೋಗಬೇಕಾ ???

ಈ ವಿಚಾರವನ್ನು ನಿನ್ನೊಡನೆ ಸೋಮವಾರ ಚರ್ಚಿಸಿದೆ. ಮನೆಯವರ ಧೈರ್ಯದೊಡನೆ ನಿನ್ನ ಧೈರ್ಯವೂ ಬೆರೆತು ಮನಸ್ಸು ಗಟ್ಟಿಯಾಗತೊಡಗಿತು. ತರಗತಿಗಳು ಇನ್ನೂ ೨ ತಿಂಗಳು ಬಾಕಿ ಇದ್ದವು. ನಾನು ಧೈರ್ಯಗೆಡಲಿಲ್ಲ, ಕಾರಣ ನನ್ನವರ ಪ್ರೋತ್ಸಾಹ ನನ್ನೊಡನಿತ್ತು. ನೀನೂಕೂಡ ಓದುವ ಸಲುವಾಗೇ ನಿನ್ನೂರಾದ ಮಂಡ್ಯವನ್ನು ಬಿಟ್ಟು ಬಂದು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ Working Women's hostel ನಲ್ಲಿ ತಂಗಿದ್ದೆ.

ಆದಿನ ಯಾವ ಕಾರಣಕ್ಕೋ ತಿಳಿಯದು.. ಬಹುಷಃ ಕೆಲಸಕ್ಕೆಂದು ಅರ್ಜಿ ಕಳಿಸಲಿರಬಹುದು ಮೊದಲ ಸಲ ನನ್ನ ಸಹಾಯ ಕೇಳಿದ್ದೆ ನೀನು. ರಾಯರ ಮಠಕ್ಕೆ ನಾವಿಬ್ಬರೂ ಒಟ್ಟಿಗೇ ನನ್ನ TVS-XL ನಲ್ಲಿ ಹೋಗಿ ನಮಸ್ಕರಿಸಿ ಹೊರಾಂಗಣದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದೆವು. ಅಂದು ನೀ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಹೇಳಿದಂತೆ ಅಚ್ಚಳಿಯದೇ ಉಳಿದಿದೆ. "ನಾನು ಇದೇ First time ಕಣೋ ಒಬ್ಬ ಹುಡುಗನ ಜೊತೇಲಿ ದೇವಸ್ಥನಕ್ಕೆ ಬಂದಿರೋದು. ಯಾಕೋ ಗೊತ್ತಿಲ್ಲ, ನಿನ್ನ ಮೇಲೆ ನನ್ಗೆ ಅಷ್ಟು ನಂಬಿಕೆ" ಹೌದು... ಅದೇ ನಂಬಿಕೆಯನ್ನ ನಾನು ಇಂದಿಗೂ ಉಳಿಸಿಕೊಂಡಿದ್ದೇನೆ. ನಿಜವಾಗಲೂ ನನಗೂ ಅದು ಫಸ್ಟ್ ಟೈಮೇ... ಸಂಕೋಚದ ಹುಡುಗನಾದ ನಾನು ಒಬ್ಬ ಹುಡುಗಿಯನ್ನ ಗಾಡಿಯಲ್ಲಿ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಇಂದಿಗೂ ನನ್ನಮೇಲೇ ನನಗೆ ಅಚ್ಚರಿಇದೆ. ಅಲ್ಲಿಂದ ನಾವು ನಿನ್ನ ಕೆಲಸದ ಅರ್ಜಿಯ ವಿಚಾರವಾಗಿ ಕುವೆಂಪು ನಗರದ ಕೊರಿಯರ್ ಆಫೀಸಿಗೆ ಹೋಗಿದ್ದೆವು. ಅಲ್ಲಿಂದ ನಾನು ನಿನ್ನನ್ನು ನಿನ್ನ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ.

ನನ್ನ ಜನ್ಮದಿನದಂದು ನೀ ಕೊಟ್ಟ ಉಡುಗೊರೆ ಇಂದಿಗೂ ನನ್ನ ಜೊತೆಯಲ್ಲೇ ಇದೆ. ನೀಕೊಟ್ಟ Wallet, ಅದರೊಳಗಿದ್ದ ೫ ರೂಪಾಯಿ Coin, ರಷ್ಮಿ ಕೊಟ್ಟ Key chain, ನೀವಿಬ್ಬರೂ ಸೇರಿ ನಿನ್ನ ಹಸ್ತಾಕ್ಷರದಿಂದ ಬರೆದ ಆ "To Dear Friend From, Appi and Rashu" ಸಾಲು ಇಂದಿಗೂ ನನ್ನೊಡನೆ ಭದ್ರವಾಗಿವೆ. ಬಹುಷಃ ನೀನು ನನ್ನ ಪಾಲಿನ "Crush" ಆಗಿದ್ದೆ. ಅಂದು ನಿಮ್ಮಲ್ಲಿಂದ ಪಡೆದುಕೊಂಡ ಉಡುಗೊರೆ ನನಗೆ ನಿಮ್ಮ ನೆನಪಿನ ಕಾಣಿಕೆಯಾಗಿದೆ. ಸಂಜೆ ತರಗತಿ ಮುಗಿದ ಬಳಿಕ ನಾನು ನಿಮ್ಮಿಬ್ಬರನ್ನೂ ನನ್ನ TVS-XL ನಲ್ಲಿ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ. ದಾರಿಯಲ್ಲಿ ನನ್ನ ಗಮನವೆಲ್ಲಾ ನಿನ್ನಮೇಲಿತ್ತು. ಅಪ್ಪಿತಪ್ಪಿ ನಾನೆಲ್ಲಿ ನಿನ್ನನ್ನು ಸ್ಪರ್ಶಿಸಿ ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿ ಸ್ನೇಹವನ್ನು ಕಳೆದುಕೊಳ್ಳುವೆನೋ ಎಂಬ ಭಯ.

ನಮ್ಮ ತರಗತಿಗಳು ಮುಗಿದಿದ್ದವು, ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ಬೆಂಗಳೂರಿಗೆ ಬಂದು ೨ ತಿಂಗಳ ನಂತರ ನಾ ಮತ್ತೆ ನಿನ್ನನ್ನು ನಿನ್ನ Working Women's hostel ಗೆ ಬಂದು ಭೇಟಿ ಮಾಡಿದ್ದೆ. ನಿನ್ನ ಈ-ಮೈಲ್ ವಿಳಾಸವನ್ನು ಖುದ್ದಾಗಿ create ಮಾಡಿ ಅದನ್ನು ಉಪಯೋಗಿಸುವ ವಿಧಾನವನ್ನೂ ಕಲಿಸಿದ್ದೆ. ಆದರೀಗ ಅದು ಕೆಲಸ ಮಾಡುತ್ತಿಲ್ಲ. ಮೊದ ಮೊದಲು ನಿನ್ನಿಂದ ನನ್ನ ಈ-ಅಂಚೆಗೆ ಉತ್ತರ ಬಂದರೂ ನಂತರದ ದಿನಗಳಲ್ಲಿ ಅದು ಸಂಪೂರ್ಣವಾಗಿ ನಿಂತುಹೋಯಿತು. ನಿನಗೆ ಮೈಲ್ ಮಾಡಲೆಂದೇ ನಾನು Browsing Center ಗಳಿಗೆ ಬರುತ್ತಿದ್ದೆ. ಆಗಿನ ದಿನಗಳಲ್ಲಿ ಮೊಬೈಲ್ ಫೋನ್ ಎಂಬುದು ಆಕಾಶದಲ್ಲಿನ ನಕ್ಷತ್ರದಷ್ಟೇ ದೂರವಾಗಿತ್ತು ನನಗೆ. ಇದ್ದ ಒಂದೇ ಒಂದು ಸಂಪರ್ಕ ಕೊಂಡಿ ಆ ಈ-ಮೈಲ್.

ನಂತರದ ದಿನಗಳಲ್ಲಿ ನಿನ್ನ ಸಂಪರ್ಕ ಸಾಧ್ಯವಾಗಲಿಲ್ಲ. ನಿನಗೂ ನಿನ್ನದೇ ಆದ ಜವಾಬ್ದಾರಿಗಳಿದ್ದಿರಬೇಕು. ಪರಿಸ್ಥಿತಿಯ ಒತ್ತಡಕ್ಕೆ ನೀನೂ ಸಿಲುಕಿರಬೇಕು. ನಿನ್ನ ಮಾತನಾಡಿಸಲು ಮತ್ತೊಮ್ಮೆ ನಿನ್ನ hostel ಗೆ ಫೊನಾಯಿಸಿದಾಗ ನೀನು ಅಲ್ಲಿಂದ ಬೇರೆಡೆಗೆ ಹೋಗಿರುವ ವಿಷಯ ತಿಳಿಯಿತು.

ಕಡೆಯದಾಗಿ ನೀನು ಬಳಿಬಂದು ಕೇಳಿದ ಪ್ರಶ್ನೆ: "ಬೆಂಗಳೂರಿಗೆ ಹೋಗ್ತಾ ಇದೀಯ... ನಾವೆಲ್ಲಾ ನಿನ್ಗೆ ನೆನ್ಪಿರ್ತೀವೇನೋ ?" ಹೌದು ಖಂಡಿತಾ ನೆನಪಿದೆ ಗೆಳತಿ ಆದರೆ ನಿನಗೆ ನನ್ನ ನೆನಪಿಲ್ಲ ಅನ್ನುವುದು ವಿಪರ್ಯಾಸ.

ಇಂದಿಗೂ ನಾನು ಆ ದಿನಗಳನ್ನ ಮರೆತಿಲ್ಲ. ಕುವೆಂಪು ನಗರಕ್ಕೆ ಹೋದಲ್ಲಿ ಆ ಕೊರಿಯರ್ ಆಫೀಸಿನೆಡೆಗೆ ನೋಡುತ್ತೇನೆ, ನಿನ್ನನ್ನು ಕಾಣುತ್ತೇನೆ... ಗೌರವದಿಂದ :)

Wednesday, March 24, 2010

ವಿಸ್ಮಯ


ಚಿತ್ರ ಕೃಪೆ: google dot com

ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕನಸನ್ನು ಸಾಕಾರ ಗೊಳಿಸಿ ಧರೆಗೆ ಬಂದ ಕೂಸು. ಹೌದು ವಿಸ್ಮಯ ನನ್ನ ಅಣ್ಣನ ಮಗಳು. ಮುದ್ದು ಮುದ್ದಾಗಿ ತೊದಲುಮಾತನಾಡುತ್ತಿರುವ ಅವಳಿಗೆ ಈಗ ೨ ವರುಷಗಳು ತುಂಬಿವೆ. ಆಕೆಗೋಸ್ಕರ ಬರೆದ ನನ್ನ ಕೆಲವು ಸಾಲುಗಳಿವು.

ಪುಟ್ಟ ಕಂದ ಜಗಕೆ ಬರಲು ತಾಯ್ತಂದೆಗೆ ಹರುಷವು
ನವಮಾಸದ ನೋವುಗಳಲೂ ಅವರಿಗಾನಂದವು

ಮುದ್ದುಕಂದ ನೀತಂದೆ ಸಂತಸದ ದಿನಗಳ
ಮುಗ್ದ ನಗುವ ಬೀರಿ ನೀನು ತೊಯ್ದೆ ತಾಯ ಕಂಗಳ

ಕಣ್ಣಂಚಿನ ಕಣ್ಣೀರು ದುಃಖಕಲ್ಲ ಕಂದನೇ
ಆನಂದಕೆ ಮಾತಿಲ್ಲ, ಆನಂದಭಾಷ್ಪದರ್ಪಣೆ

ಹೊಟ್ಟೆಯೆಳೆದು ರಚ್ಚೆ ಹಿಡಿದು ತಾಯ ಹುಡುಕುತಾ ನೀನು
ಅಂಬೆಗಾಲನಿಟ್ಟು ಬರಲು ತಾಯ ಮೊಗದಿ ಹಾಲ್ಜೇನು

ವರುಷಕಳೆದು ವರುಷತುಂಬಿ ವಸಂತಗಳು ಉರುಳಿವೆ
ನಿನ್ನ ತೊದಲು ಮಾತ ಕೇಳ್ವುದಕೆ ಕಿವಿಗಳೆಲ್ಲಾ ಕಾದಿವೆ

ಎಂಥಾ ಬೆರಗು ಎಂಥಾ ಮೆರಗು ತಂದೆ ನೀನು ಬಾಳಿಗೆ
ನೀನು ಬಂದ ಕ್ಷಣದಿ ತಂದ ಆನಂದವು ನಾಳಿಗೆ

ನಿನ್ನ ಆಟ ಓಡಾಟದಿ ತಾಯಿ ತಂದೆ ತನ್ಮಯ
ಅದಕಾಗಿ ಹೆಸರಿಟ್ಟರು ನಿನಗಂದು ವಿಸ್ಮಯ :)

Monday, March 22, 2010

ಸಂಭ್ರಮದ ಶನಿವಾರ

ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮೇಲೆ ಮಿಕ್ಕಿದ ಕೆಲಸಗಳೆಲ್ಲಾ... ನನ್ನ ಅನಿಸಿಕೆಯಂತೇ ಬೆಳಗ್ಗೆ 9:30ರ ತನಕ ಗಡದ್ದಾಗಿ ನಿದ್ದೆ ಮಾಡ್ದೆ. ಆಮೇಲೆ ಮಾಮೂಲಿ ಯೋಚನೆ... ಇವತ್ತು ತಿಂಡಿ ಏನು ಮಾಡೋದು ಅಂತ. ಆಗ ನೆನ್ಪಾಗಿದ್ದೇ ನನಗೆ ಇಷ್ಟವಾದ ಮಾಡಲು ಸುಲಭವಾದ ತಿಂಡಿ- "ಗಂಜಿ". ಗಂಜಿಯ ಜೊತೆಗೆ ಮಿಡಿ ಉಪ್ಪಿನಕಾಯಿ, ಸ್ವಲ್ಪ ಮೊಸರು, ಸ್ವಲ್ಪ ಕುತ್ತುಂಬರಿ ಚಟ್ನಿ, ಇಷ್ಟಿದ್ಬಿಟ್ರೇ... ಸ್ವರ್ಗಕ್ಕೆ 3ರೇ ಗೇಣು... ಮಾಡುವುದು ಅತಿ ಸುಲಭ, So ಅದನ್ನೆ ಮಾಡಲು ಒಲೇಮೇಲೆ cooker ಇಟ್ಟು ಮನೆಗೆಲಸ ಶುರು ಮಾಡ್ಕೊಂಡೆ. ಮೊದಲನೇದು ಬಟ್ಟೆ ಒಗೆಯೋದು. ವಾರದಲ್ಲಿ ಬೆಂಗಳೂರಿನ ಕೊಳೆ, ಧೂಳು ಹೊತ್ಕೊಂಡು ತಂದಿದ್ದನ್ನ ಬ್ರಷ್ ಉಜ್ಜಿ ಉಜ್ಜಿ ತೆಗೆಯೋದು.

ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...

ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.

ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....

ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)

Friday, March 12, 2010

ಇವತ್ತು ಏನ್ ತಿಂಡಿ ಮಾಡ್ಲೀ....

ಇವತ್ತು ಏನ್ ತಿಂಡಿ ಮಾಡ್ಲೀ....

ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.

ಅಬ್ಬಬ್ಬಾ!!!! ಅದಿರಲಿ ಬಿಡಿ, ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....

ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????

ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)

ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.

ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).

ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ....

Wednesday, October 7, 2009

ಮುಳ್ಳಯ್ಯನ ಗಿರಿ-ಕೆಮ್ಮಣ್ಣುಗುಂಡಿ ಚಾರಣ

ನವೆಂಬರ್ ೨೯,೩೦ ೨೦೦೮

ದಿನಪೂರ್ತಿ ಕಂಪ್ಯೂಟರಿನ ಮುಂದೆ ಕೆಲ್ಸಮಾಡಿ, ಮನೆಗೆ ಹೋಗಿ ಮನೆಲೂ ಕೆಲ್ಸ ಮಾಡಿ ಸಕತ್ ಬೇಜಾರಾಗೋಗಿತ್ತು. ಇದರ ನಡುವೆ ಒಂದು ಪುಟ್ಟ Break ಬೇಕಾಗಿತ್ತು. ಯಾವರೀತಿ Timepass ಮಾಡಿದ್ರೆ ಚೆನ್ನಾ ಅಂತ ಲೆಕ್ಕಾಚಾರ ಹಾಕ್ತಾ ಇರೋಹಾಗೇ ಮನೋಹರ ನಂಗೆ call ಮಾಡಿದ್ದ. ಒಂದು Trekking ಇದೆ, ಬರ್ತೀಯಾ ? ಬರೋಹಾಗಿದ್ರೆ ನನ್ನ Accountಗೆ ದುಡ್ಡು Transfer ಮಾಡ್ಬಿಡು ಅಂದ. ನಿಸರ್ಗದ ನಡುವೆ ಇರೋ ಅವಕಾಶ ತಾನಾಗೇ ಸಿಕ್ಕಿರೋವಾಗ ತಡಮಾಡದೇ ಮನೋಹರನಿಗೆ ಈ ಚಾರಣದ ವಿಷಯ ತಿಳಿಸಿದ್ದಕ್ಕೆ ಮನದಲ್ಲೇ Thanks ಹೇಳ್ತಾ ಚಾರಣಕ್ಕೆ ಬೇಕಾಗುವ ಮೊತ್ತವನ್ನ ಮುಂಗಡವಾಗಿ ಇಂಟರ್ನೆಟ್ಟಿನಿಂದ ಸುಲಭವಾಗಿ ಮನೋಹರನ ಖಾತೆಗೆ ಜಮಾ ಮಾಡಿ ನಾನು ಚಾರಣಕ್ಕೆ ಬರುವುದನ್ನ ಖಾತ್ರಿ ಪಡಿಸಿಕೊಂಡೆ.

ಮನೋಹರ್ ಮತ್ತೆ ಹರ್ಷ ಗುಂಪಿನೊಡನೆ ಇದು ನನ್ನ ಎರಡನೇ ಚಾರಣ. ಚಾರಣಕ್ಕೆ ಹೋಗಬೇಕಾಗಿದ್ದ ಜಾಗ "ಮುಳ್ಳಯ್ಯನ ಗಿರಿ", ಅಲ್ಲಿಂದ ನಾವು ಕೆಮ್ಮಣ್ಣುಗುಂಡಿಗೆ ಬಂದು ನಮ್ಮ ಚಾರಣವನ್ನ ಅಂತ್ಯಗೊಳಿಸೋದು ಅಂತ ಅವರಿಬ್ಬರೂ Plan ಮಾಡಿದ್ರು.

ಮೊದಲಿಗೇ ಚಾರಣದ ಸಿದ್ದತೆಯನ್ನು ಮಾಡಿಕೊಂಡಿದ್ದವರು ನಮ್ಮ ಗುಂಪಿನ ನಾಯಕರಾದ ಹರ್ಷ ಮತ್ತು ಮನೋಹರ. ಚಾರಣದ ಆಸಕ್ತಿ ಇರೋ ೧೧ ಚಾರಣಿಗರನ್ನ ಒಟ್ಟುಸೇರಿಸಿ, ಅವರಿಂದ ಮುಂಗಡ ಹಣ ಪಡೆದು KSRTC ಯಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಮುಂಗಡ ಟಿಕೇಟ್ ಖರೀದಿ ಮಾಡಿ, ಬೀರೂರಿನಿಂದ ಬೆಂಗಳೂರಿಗೆ Return Journey ಯನ್ನ ಕಾದಿರಿಸಿದ್ರು. ನಾನು ಸಾಮಾನ್ಯವಾಗಿ ಚಾರಣಕ್ಕೆ ಹೋಗುವಾಗೆಲ್ಲಾ ನಮ್ಮ ಊಟ ಕಾಡಿನಲ್ಲೇ ತಯಾರಾಗುತ್ತಿತ್ತು. ಆದರೆ ಇಲ್ಲಿ ಅದು ಸ್ವಲ್ಪ ಬದಲಾಗಿತ್ತು. ಕಾಡಿನಲ್ಲಿ ಅಡುಗೆ ಮಾಡಿ ಊಟಮಾಡುವಬದಲಿಗೆ MTRನ Ready To Eat Packetsನ ತಂದಿದ್ದರು. ಅದರ ಜೊತೆಯಲ್ಲಿ ಕಾಡಿನಲ್ಲಿ Campingಗೆ ಬೇಕಾಗುವ Tent ಮತ್ತೆ sleeping bag ಗಳು, Tentನ ಒಳಗೆ ಹಾಸಲು ಬೇಕಾಗುವ Matಗಳ ಪೂರ್ವ ಸಿದ್ದತೆ ಆಗಿತ್ತು. ಈ ಸಲದ ಚಾರಣದಲ್ಲಿ ನನಗೆ ಹೊಸದೆನಿಸಿದ್ದು ಹರ್ಷ ತಂದಿದ್ದ GPS. ಅದರಲ್ಲಿ Google earth ನಿಂದ ಮೊದಲೇ ನಾವು ಚಾರಣ ಮಾಡುವ ಮಾರ್ಗವನ್ನ ಸಿದ್ಧಪಡಿಸಿ ತಂದಿದ್ದರು, ಅದಿಲ್ಲದಿದ್ದಲ್ಲಿ ದಟ್ಟವಾಗಿ ಮಂಜು ಕವಿದಿದ್ದರಿಂದ ನಮಗೆ ಚಾರಣ ಮಾಡಲು ದಿಕ್ಕು ದಾರಿ ತಿಳಿಯುತ್ತಿರಲಿಲ್ಲ.

ಚಾರಣಿಗರ ಪಟ್ಟಿ ಇಂತಿದೆ:


Harsha
Manohar D.C ಅವರ ಇನ್ನೊಂದು ಹೆಸರು Manu
Vishwanath ಅವರ ಇನ್ನೊಂದು ಹೆಸರು Choodi
Anees K.A
Santhosh
Dilip
Linson Jose ಅವರ ಇನ್ನೊಂದು ಹೆಸರು Linsa
Arun Sadasivan ಅವರ ಇನ್ನೊಂದು ಹೆಸರು Sadasiva
Praveen ಅವರ ಇನ್ನೊಂದು ಹೆಸರು SNMP
Joephin


ಶನಿವಾರ: ಚಿಕ್ಕಮಗಳೂರು-ಮುಳ್ಳಯ್ಯನ ಗಿರಿ-ಬಾಬಾ ಬುಡನ್ ಗಿರಿ-ಗಾಳಿಕೆರೆ ಚಾರಣ

ಶುಕ್ರವಾರ ರಾತ್ರಿ ನಾವೆಲ್ಲಾ ಬೆಂಗಳೂರಿನಿಂದ ವೋಲ್ವೋ ಬಸ್ಸಿನಲ್ಲಿ ಹೊರಟು ಶನಿವಾರ ಬೆಳಗಿನಜಾವ ಸುಮಾರು ೪:೩೦ಕ್ಕೆ ನಮ್ಮ ಐರಾವತದಲ್ಲಿ ಚಿಕ್ಕಮಗಳೂರಿಗೆ ಬಂದು ತಲುಪಿದೆವು. ಬೆಳ್ಳಂಬೆಳಿಗ್ಗೆ ಆ ಚುಮು ಚುಮು ಚಳಿಯಲ್ಲಿ ಎಲ್ಲಾ ಐರಾವತದಿಂದ ಧರೆಗಿಳಿದೆವು :D . ಇಳಿಯುತ್ತಿದ್ದಂತೇ ಎಲ್ಲರ ಕಣ್ಣೂ ಹುಡುಕಿದ್ದು ಟೀ ಅಂಗಡಿಯನ್ನ. ನಾವೆಲ್ಲಾ ಬಿಸಿ ಬಿಸಿ ಟೀ ಆಸ್ವಾಧಿಸುತ್ತಿದ್ದರೆ ಹರ್ಷ ಮತ್ತೆ ವಿಶ್ವನಾಥ್ ನಮಗಾಗಿ Lodge ವ್ಯವಸ್ಥೆ ಮಾಡಲು ಹೋಗಿದ್ದರು. ಒಟ್ಟಿಗೇ ಅಷ್ಟುಜನ ಬಸ್ಸಿನಿಂದ ಇಳಿದದ್ದನ್ನು ನೋಡಿದ Wollen Cap ಮಾರುವವನು ತನ್ನ ಅಂಗಡಿಯನ್ನೇ ನಾವು ನಿಂತಿದ್ದ ಸ್ಥಳಕ್ಕೆ ತಂದಿದ್ದ. ನಮ್ಮಲ್ಲಿ ಕೆಲವರು ಅವನಿಂದ Cap ಖರೀದಿಸಿದ ನಂತರ ಹರ್ಷ ಅವರು Book ಮಾಡಿದ್ದ Lodgeನತ್ತ ಪಯಣ ಬೆಳೆಸಿದ್ವಿ.


ಹರ್ಷ ಮತ್ತೆ ವಿಶ್ವನಾಥ್ ಬಹಳಹೊತ್ತು ಹುಡುಕಿದ ನಂತರ Naveen-Lodge ಎಂಬಲ್ಲಿ ನಮಗೆ ಕೊಠಡಿಯ ವ್ಯವಸ್ಥೆಯಾಯಿತು. ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಹತ್ತಿರದಲ್ಲೇ ಇದ್ದ ಹೊಟೇಲ್ ಒಂದರಲ್ಲಿ ಇಡ್ಲಿ, ವಡೆ ತಿಂಡಿ ತಿಂದು ಸುಮಾರು ೭:೪೫ ಕ್ಕೆ ಅಲ್ಲಿಯೇ ಒಂದು ಜೀಪು ಮತ್ತೊಂದು ಮಾರುತಿ ಆಮ್ನಿ ಯನ್ನ ಬಾಡಿಗೆ ಪಡೆದು ಸುಮಾರು ೧೫ ಕಿ.ಮೀ ದೂರದ ನಮ್ಮ ಚಾರಣ ಪ್ರಾರಂಭವಾಗುವ ಸ್ಥಳಕ್ಕೆ ೮:೩೦ ರ ಹೊತ್ತಿಗೆ ಎಲ್ಲಾ ಚಾರಣಿಗರು ಬಂದಿಳಿದೆವು.


ಆ ಎರಡೂ ವಾಹನಗಳಿಗೆ ೬೦೦ ರೂಪಾಯಿ ಹಣ ನೀಡಿ, ಮೊದಲೇ ಚಿಕ್ಕಮಗಳೂರಿನ ಕಾಮತ್ ಹೋಟೇಲಿನಿಂದ ಕಟ್ಟಿಸಿಕೊಂಡು ಬಂದಿದ್ದ ತಿಂಡಿಯ ಪೊಟ್ಟಣಗಳನ್ನ (೨ ಚಪಾತಿ + ಖಾರಾ ಭಾತ್) ಪ್ರತಿಯೊಬ್ಬರು ಪಡೆದು, ನಮ್ಮ ಕಾಲಿಗೆ ಜಿಗಣೆಗಳು ಹತ್ತದಂತೆ ಮನೋಹರ ತಂದಿದ್ದ Body sprayಯನ್ನ ಹಾಕಿಸಿಕೊಂಡು ಚಾರಣದ ಹಾದಿಯಲ್ಲಿ ನಡೆದೆವು.


ಈ ಸ್ಥಳಕ್ಕೆ ಸರ್ಪಹಾದಿ ಎಂದು ಹೆಸರು. ಇಲ್ಲಿಂದಲೇ ನಮ್ಮ ಚಾರಣದ ಆರಂಭ. ಚಾರಣದ ಹಾದಿ ಹಾವಿನ ಮಾದರಿಯಲ್ಲಿ ಇದ್ದದ್ದರಿಂದಲೇ ಆ ಹೆಸರು ಬಂದಿರಬೇಕು. ನಮ್ಮ ಹಾದಿ ಸರ್ಪಹಾದಿಯ ಕಮಾನಿನಿಂದ ಪ್ರಾರಂಭವಾಯ್ತು. ಹಾದಿ ಸ್ವಲ್ಪ ಕಡಿದಾಗಿದ್ದರೂ ಬಹಳ ಕಠಿಣವಾಗಿರಲಿಲ್ಲ. ಪಕ್ಕಾ ಹಾವಿನ ಹಾದಿಯಂತೆ Zig-zag ಆಗಿತ್ತು. ಹಾದಿಬದಿಯಲ್ಲಿ ಹಲವಾರು ಪದರಗಳೊಳಗೊಂಡ ಬಂಡೆಗಲ್ಲುಗಳು ಸುಂದರವಾಗಿದ್ದವು. ಚಾರಣದ ಆರಂಭದಲ್ಲಿ ಸಾಧಾರಣ ಕ್ಯಾಮರಾ ತಂದಿದ್ದ ನನಗೆ ನಮ್ಮನ್ನ ಸುತ್ತುವರೆದಿದ್ದ ಮಂಜಿನಿಂದ ಹೆಚ್ಚು Photoಗಳನ್ನ ತೆಗೆಯಲಾಗಲಿಲ್ಲ :(


ಚಾರಣದ ಪ್ರಾರಂಭದಿಂದ ಅಂತ್ಯದವರೆಗೂ ನಮ್ಮೊಡನೆ "ನಿಷ" ಇದ್ದದ್ದು ಒಂದುರೀತಿಯಲ್ಲಿ ಸಂತಸದ ವಿಷಯವಾದರೂ ಮತ್ತೊಂದೆಡೆ ಬೇಸರ ತರಿಸಿತ್ತು. ಅಂದಹಾಗೆ ಈ "ನಿಷ" ಯಾರೆಂದು ಕುತೂಹಲವಿದ್ದಲ್ಲಿ ಹೇಳಿಬಿಡುತ್ತೇನೆ. ೨೦೦೮ರ ನವೆಂಬರಿನ ಕೊನೆಯವಾರದಲ್ಲಿ ತಮಿಳುನಾಡಿಗೆ ಅಪ್ಪಳಿಸಿದ್ದ ಚಂಡಮಾರುತದ ಹೆಸರೇ "ನಿಷ" ಇದರಿಂದ ನಮಗಾದ ಉಪಯೋಗ ಅಂದರೆ ಚಾರಣದಲ್ಲಿ ಎಲ್ಲಿಯೂ ನಾವು ಬಿಸಿಲಿನ ತಾಪದಿಂದ ಬಳಲಲಿಲ್ಲ ಆದ್ದರಿಂದ ಸಂತಸ :). ಬೇಸರದ ವಿಷಯ ಎಂದರೆ ನಿಸರ್ಗದ ಸೊಬಗನ್ನು ನಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಲಿಲ್ಲ ಎಂಬುದು :|. ಚಂಡಮಾರುತದ ಪ್ರಭಾವ ಎಷ್ಟಿತ್ತೆಂದರೆ ದಟ್ಟವಾದ ಮಂಜು ನಮ್ಮ ದೃಷ್ಟಿ ೧೦ಮೀಟರ್ ಮೀರಿ ಹೋಗದಂತೆ ತಡೆ ಹಿಡಿದಿತ್ತು. ನನ್ನ ಹಿಂದಿನ ಕೆಲವು ಚಾರಣದಲ್ಲಿ ವರುಣನ ಜೊತೆಯಾದರೆ ಇಲ್ಲಿ ಮಂಜಿನ ಜೊತೆಗೇ ನಮ್ಮ ಚಾರಣ ಮುಂದುವರೆದಿತ್ತು.


ನಮ್ಮಂತೆಯೇ ಹಲವು ಚಾರಣಿಗರು ಇಲ್ಲಿ ಆಗಾಗ ಬರುವುದುಂಟು, ಹಾಗಾಗಿ ಕಾಲುದಾರಿ ನಮಗೆ ಸ್ಪಷ್ಟವಾಗೇ ಕಾಣುತ್ತದೆ. ಇದು ಆರಂಭದ ಹಂತ ಮಾತ್ರ. ಮಂಜಿನ ಕಾರಣದಿಂದ ನಮಗೆ ಬೆಟ್ಟದಮೇಲಿನ ದೊಡ್ಡ ಬಂಡೆ ಕಾಣಲಿಲ್ಲ, ಸೂರ್ಯನ ಬೆಳಕಿದ್ದಲ್ಲಿ ಅದು ಗೊಚರಿಸುತ್ತದೆ ಎಂದು ಹರ್ಷನಿಂದ ತಿಳಿದುಬಂತು. ಹಾದಿಯುದ್ದಕ್ಕೂ ಹುಲ್ಲು ಹಾಸಿನ ಮೇಲೆ ಮಂಜಿನ ಹನಿಗಳು ಮುತ್ತಿನ ಮಾಲೆಯಂತೆ ಕಾಣಿಸುತ್ತಿತ್ತು. ಸಾಧ್ಯವಾದಷ್ಟೂ ಅವುಗಳನ್ನ ನನ್ನ ಕ್ಯಾಮರದಲ್ಲಿ ಸೆರೆ ಹಿಡಿದೆ. ಮಾರ್ಗಮಧ್ಯದಲ್ಲಿ ಸ್ವಲ್ಪ ಹಾದಿ ತಪ್ಪಿ ಬೇರೆ ಹಾದಿ ಹಿಡಿದು ಹೊರಟಿದ್ದೆವು, ನಂತರ ಮರಳಿ ಸರಿಯಾದ ದಾರಿಯಲ್ಲಿ ನಮ್ಮ ಪಯಣ ಮುಂದುವರೆಯಿತು.





ಅಂದಾಜು ಅರ್ಧ ದಾರಿಯಾದಮೇಲೆ ಒಂದು ನಂದಿಯ ವಿಗ್ರಹವನ್ನು ಕಾಣಬಹುದು. ಸೂರ್ಯನ ಬೆಳಕಿದ್ದಲ್ಲಿ ಇಲ್ಲಿಂದಲೇ ದೇವಸ್ಥಾನದ ಗೋಪುರವನ್ನ ನೋಡಬಹುದಂತೆ. ಅಲ್ಲಿಂದ ಸುಮಾರು ೧೦-೧೫ ನಿಮಿಷಗಳ ಚಾರಣದ ನಂತರ ನಮಗೆ ಒಂದು ಗುಹೆ ಕಾಣಿಸಿತು.


ನಮ್ಮಲ್ಲಿ ಕೆಲವರು ಆಲ್ಲಿಗೆ ಹೋಗಿ ಅದರ ಒಳಹೊಕ್ಕು ಕೆಲವು Photoಗಳನ್ನ ಕ್ಲಿಕ್ಕಿಸಿ ಮತ್ತೆ ದೇವಸ್ಥಾನದ ದಾರಿ ಹಿಡಿದೆವು. ದೇವಸ್ಥಾನ ತಲುಪುವ ಹೊತ್ತಿಗೆ ಸಮಯ ಅಂದಾಜು ೧೦:೧೫ ಆಗಿತ್ತು.



ಮೊದಲಿದ್ದ ದೇವಸ್ಥಾನವನ್ನ "ಜೀರ್ಣೊದ್ಧಾರ" ಮಾಡುತ್ತಿದ್ದರು, ಹಾಗಾಗಿ ಅಲ್ಲಿ ಹಲವು ಕಾರ್ಮಿಕರು ಮತ್ತು ಹತ್ತಿರದ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳು ಇದ್ದರು. ನಮ್ಮನ್ನೆಲ್ಲಾ ನೋಡಿ ಮಂಜಿನ ನಡುವೆ ನಮ್ಮ ಚಾರಣಮಾಡುವ ಉತ್ಸಾಹ ಕಂಡು ಅಚ್ಚರಿ ಪಟ್ಟರು. ಅಲ್ಲಿಯ ಪ್ರಧಾನ ಅರ್ಚಕರಿಂದ ನೆನ್ನೆ ಬಾಬಾಬುಡನ್ ಗಿರಿ ಮತ್ತು ಸುತ್ತಲ ಪ್ರದೇಶಗಳಲ್ಲಿ ಧರಾಕಾರವಾಗಿ ಮಳೆಯಾಗಿ ಮಣ್ಣು ಕುಸಿದಿರುವುದು ತಿಳಿದುಬಂತು. ಅಲ್ಲಿಯೇ ಸ್ವಲ್ಪ ಹೊತ್ತು ಕೂತಿದ್ದು ಅರ್ಚಕರ ಮನೆಯಲ್ಲಿ ನಾವು ಕೊಂಡೊಯ್ದಿದ್ದ ಹಾಲನ್ನು ಅವರಿಗೆ ನೀಡಿ ಅವರಿಂದ ಕಾಫೀ ಮಾಡಿಸಿಕೊಂಡು ಕುಡಿದು ಅವರು ಸಾಕಿದ್ದ ಬೆಕ್ಕಿನ Photoಗಳನ್ನ ಸೆರೆ ಹಿಡಿದು ಪರ್ವತದಂಚಿನ ಕಡೆಗೆ (Ridge) ನಮ್ಮ ಪಯಣಬೆಳೆಸಿದೆವು.





ನಾವು ಮುಳ್ಳಯ್ಯನ ಗಿರಿಯಿಂದ ಬಾಬಾ ಬುಡನ್ ಗಿರಿಯನ್ನು ತಲುಪಲು ಪರ್ವತಗಳ ಅಂಚಿನಲ್ಲೇ ಸಾಗಬೇಕಿತ್ತು.




ಆ ದಟ್ಟವಾಗಿ ಕವಿದಿದ್ದ ಮಂಜಿನ ನಡುವೆ GPSನ ಸಹಾಯದಿಂದ ಸರಿಯಾದ ದಾರಿಯಲ್ಲೇ ಹೋಗುತ್ತಿದ್ದೆವು. ನಮ್ಮ ಸಧ್ಯದ ಗುರಿಯಿದ್ದದ್ದು ನಮ್ಮ Lunch point ನೆಡೆಗೆ. ನಾವು ದೇವಸ್ಥಾನದಿಂದ ಹೊರಟಾಗ ಅಂದಾಜು ೧೧:೧೫ ರ ಸಮಯ. ನಮ್ಮ Lunch point ತಲುಪಲು ನಾವು ಪರ್ವತದಿಂದ ಇಳಿದು ಮತ್ತೆ ನಮ್ಮ ಊಟದ ಕಾರ್ಯಕ್ರಮವನ್ನ ಮುಗಿಸಿ ಮುಂದೆ ಸಾಗಬೇಕಿತ್ತು. ಇಂತಹಾ ಸ್ಥಳಗಳಲ್ಲಿ ಸಂಜೆಯ ಹೊತ್ತಿಗೆ ಸುರಿಯುವ ಮಳೆ ಸಾಮಾನ್ಯ. ಮಳೆಯನಡುವೆ ಪರ್ವತದ ಅಂಚಿನಲ್ಲಿ ಚಾರಣ ಮಾಡುವುದು ಕಷ್ಟವಾದ್ದರಿಂದ ಅಲ್ಲಿದ್ದ ಅನುಭವಿ ಚಾರಣಿಗರು ಎಲ್ಲರನ್ನೂ ಸಾಧ್ಯವಾದಷ್ಟು ಬೇಗ ಗುರಿ ಮುಟ್ಟಿಸಲು ನಮ್ಮೆಲ್ಲರನ್ನು ಹುರಿದುಂಬಿಸುತ್ತಿದ್ದರು. ಅಂದಾಜು ಒಂದು ಘಂಟೆಯ ಚಾರಣದ ನಂತರ ಸ್ವಲ್ಪ ಸ್ವಲ್ಪವಾಗಿ ಸೂರ್ಯಕಿರಣ ಕಾಣಲಾರಂಭಿಸಿತು. :) ಆದರೆ ಅದು ಇದ್ದದ್ದು ಕೇವಲ ೫ ನಿಮಿಷಗಳು ಮಾತ್ರ. ಆದರೂ ಆ ನಡುವೆಯೇ ನಮಗೆ ಛಾಯಾಗ್ರಹಣಕ್ಕೆ ಸಮಯ ಸಿಕ್ಕಿತ್ತು. ಮೋಡಗಳು ನಮ್ಮ ಕಾಲಕೆಳಗೆ ತೇಲಾಡುತ್ತಿದ್ದವು. ಇದುವರೆವಿಗೂ ಮೋಡದ ಒಳಗೇ ಚಾರಣ ಮಾಡುತ್ತಿದ್ದ ನಮಗೆ ಪ್ರಕೃತಿಯ ಸೊಬಗು ಕಂಡಿದ್ದು ಆ ೫ ನಿಮಿಷಗಳಲ್ಲೇ ಹೆಚ್ಚು. ಪರ್ವತಗಳ ನಡುವೆ ಕಂಡುಬರುವ ಕಣಿವೆಗಳ ನೋಟ, ಮೋಡಗಳ ತೇಲಾಟ ಎಲ್ಲವೂ ನಯನ ಮನೋಹರವಾಗಿತ್ತು.

ಇದುವರೆವಿಗೂ ತಮ್ಮ ಬ್ಯಾಗಿನಲ್ಲಿ ಬೆಚ್ಚಗೆ ಕುಳಿತಿದ್ದ ಎಲ್ಲಾ ಕ್ಯಾಮರಗಳೂ ಆ ಸೊಬಗನ್ನು ನೋಡಲು ಹೊರಗೆ ಬಂದಿದ್ದವು. ಅಲ್ಲಿ ಕ್ಯಾಮರ ಹೊಂದಿದ್ದ ಪ್ರತಿಯೊಬ್ಬರೂ ಆಗ ಅತ್ಯುತ್ತಮ ಛಾಯಾಗ್ರಾಹಕರೇ !!!! :D




ನಾವೆಲ್ಲಾ ಸುಮಾರು ೧೨:೪೦ ರ ಹೊತ್ತಿಗೆ Lunch point ತಲುಪಿದ್ದೆವು. ನಮ್ಮ Lunch point ಒಂದು Tar-roadನ ಹತ್ತಿರವಿದ್ದ View point. ಅಲ್ಲಿಂದ ಸುತ್ತಮುತ್ತಣ ಪರ್ವತ ಶ್ರೇಣಿಗಳು, ನಿಸರ್ಗದ ಹಸಿರಿನ ಸಿರಿ ಎಲ್ಲಾ ರಮಣೀಯವಾಗಿ ಕಾಣುತ್ತಿತ್ತು. ನಾವು ಊಟಮಾಡಲು ಆಯ್ಕೆಮಾಡಿದ ಸ್ಥಳದಲ್ಲಿಯೇ ಚಿಕ್ಕಮಗಳೂರಿನ ಕೆಲವು ಪ್ರಾಧ್ಯಾಪಕರು, ಮತ್ತೆ ಕೆಲವು Business men ಗಳೂ ಸೇರಿ ಅಲ್ಲಿ ತಮ್ಮ Party ಆಚರಿಸಲು ಬಂದಿದ್ದರು :P. ಅವರೊಡನೆ ಸ್ವಲ್ಪ ಮಾತುಕತೆಯಾದ ನಂತರ ನಮಗೆ ಅವರಿಂದ ಸ್ವಲ್ಪ ತಿಂಡಿ ಮತ್ತು ಹಣ್ಣುಗಳು ಸಿಕ್ಕಿತು. ಸುಮಾರು ೧೨:೪೦ ರ ಹೊತ್ತಿಗೆ ನಮ್ಮ ಊಟದ ಕಾರ್ಯಕ್ರಮ ಸಂಪನ್ನ ಗೊಂಡಿತ್ತು.




ಅಲ್ಲಿ ಬಂದವರೊಂದಿಗೆ ಕೆಲವು Photo ತೆಗೆಸಿಕೊಂಡು ಅಲ್ಲಿಂದ ಸುಮಾರು ೧೩:೩೦ರ ಹೊತ್ತಿಗೆ ನಮ್ಮ ಚಾರಣವನ್ನು ಮುಂದುವರೆಸಿದೆವು. ನಮ್ಮ ಮುಂದಿನ ಗುರಿ ಇದ್ದದ್ದು BSNLನ tower ಬಳಿಗೆ. ಸಾಮಾನ್ಯ ದಿನಗಳಂದು ಬರಿಗಣ್ಣಿಗೆ ಕಾಣುವ ಈ tower ಅಂದು ಮುಸುಕಿದ್ದ ಮಂಜಿನ ಕಾರಣದಿಂದ ನಮಗೆ ಕಾಣಿಸಲಿಲ್ಲ. GPSನ ಸಹಾಯ ಪಡೆದು ಪರ್ವತದ ಮತ್ತೊಂದು ತುದಿಯಲ್ಲಿದ್ದ ಆ towerನೆಡೆಗೆ ನಾವೆಲ್ಲಾ ಪರ್ವತದ ಅಂಚಿನಲ್ಲಿ ಹೆಬ್ಬಂಡೆಗಳ ನಡುವೆ ಸಾಹಸ ಪಡುತ್ತಾ ನಡೆಯುತ್ತಿದ್ದೆವು. ನಮ್ಮ ಗುರಿಯಿದ್ದದ್ದು ಆ ಟವರ್ರಿನ ಬಳಿಯಿರುವ ರಸ್ತೆ ಸೇರಿ ಅಲ್ಲಿಂದ ಅಂದಾಜು ೭ ಕಿ.ಮೀ ದೂರವನ್ನ ಕ್ರಮಿಸಿ ಬಾಬಾ ಬುಡನ್ ಗಿರಿಯನ್ನು ತಲುಪಬೇಕೆನ್ನುವುದು. ಅದಕ್ಕಾಗಿ ನಾವು ಹುಲ್ಲುಗಾವಲುಗಳು ಮತ್ತು ಹೆಬ್ಬಂಡೆಯಿಂದ ಕೂಡಿದ ಪರ್ವತಗಳನ್ನ ದಾಟಿ ಹೋಗಬೇಕಿತ್ತು.



ನಾವು ನಡೆಯುತ್ತಿದ್ದ ಹಾದಿಯಲ್ಲಿ ಯಾವುದೇ ಕಾಲುದಾರಿಯ ಕುರುಹುಗಳಿರದ ಕಾರಣ ನಮ್ಮ ದಾರಿಯನ್ನು ನಾವೇ ಕಂಡುಕೊಂಡು ಮುನ್ನಡೆಯಬೇಕಿತ್ತು. ಹೀಗಿರುವಾಗ ಮಾರ್ಗಮಧ್ಯದಲ್ಲಿ ನಮಗೆ ಹೆಬ್ಬಂಡೆಯೊಂದು ಎದುರಾಗಿ ಎತ್ತಕಡೆ ಹೋಗುವುದು ಎಂದು ಯೋಚಿಸುವಂತಾಯಿತು. ಸ್ವಲ್ಪ ವಾಲಿಕೊಂಡಿದ್ದ ಆ ಬಂಡೆಯನ್ನು ದಾಟಿ ಹೋಗಲು ಒಂದೋ ಅದರ ಕೆಳಗಿನಿಂದ ಇದ್ದ ಸ್ವಲ್ಪವೇ ಜಾಗದಲ್ಲಿ ನುಸುಳಿಕೊಂಡು ಹೋಗಬೇಕು, ಇಲ್ಲವಾದಲ್ಲಿ ಅದನ್ನ ಜಾಗ್ರತೆಯಿಂದ ಹತ್ತಿ ದಾಟಬೇಕಾಗಿತ್ತು. ಎರಡೂ ಕಷ್ಟವಾದ ಕೆಲಸಗಳೇ. ಮಂಜಿನಿಂದ ಸ್ವಲ್ಪ ಒದ್ದೆಯಾಗಿದ್ದ ಆ ಬಂಡೆಯ ಕೆಳಗೆ ನುಸುಳುವಾಗ ಅಥವಾ ಹತ್ತಿ ದಾಟುವಾಗ ಆಯತಪ್ಪಿದಲ್ಲಿ ಪರ್ವತದಿಂದ ನೇರವಾಗಿ ಕೆಳಗೆ ಬೀಳುವುದೇ !!!! ನಮ್ಮಲ್ಲಿ ಕೆಲವರು ಆ ಬಂಡೆಯ ಕೆಳಗಿನಿಂದ ನುಸುಳಿದರೆ ಮಿಕ್ಕವರು ಅದನ್ನು ಏರಿಕೊಂಡು ಹಾಗೂ ಹೀಗೂ ದಾಟಿ ಬಂದರು. ಕೆಲವು ಬಂಡೆಗಳು ಮಂಜಿನ ನೀರಿಗೆ ಒದ್ದೆಯಾದ್ದರಿಂದ ನಮ್ಮ ಕಾಲುಗಳು ಜಾರುತ್ತಲಿದ್ದವು. ಇಂತಹಾ ಸಮಯದಲ್ಲಿ ನಿಮ್ಮ ಅನುಭವ ಮತ್ತು ತಾಳ್ಮೆಯೇ ನಿಮಗೆ ಶ್ರೀರಕ್ಷೆ. ಒಂದು ಹಂತದಲ್ಲಿ ನಮ್ಮೊಂದಿಗೆ ಬಂದಿದ್ದ ಪ್ರವೀಣ್ ಆ ಬಂಡೆಗಳನ್ನು ಹತ್ತಲಾಗದೇ ನಮ್ಮ Lunch Point ಗೆ ಮರಳಿ ಅಲ್ಲಿಂದ ಇದ್ದ ರಸ್ತೆಯಲ್ಲಿ ಯಾವುದಾದರೂ ಬಸ್ ಹಿಡಿದು ಬಾಬಾ ಬುಡನ್ ಗಿರಿಗೆ ಬರುವುದಾಗಿ ಹೇಳಿದರೂ ನಂತರ ಪ್ರಯಾಸದಿಂದ ನಮ್ಮ ಮಾರ್ಗದಲ್ಲೇ ಬಂದದ್ದು ನಮಗೂ ಮತ್ತು ಅವನಿಗೂ ಖುಷಿತಂದಿತ್ತು.


ಬಂಡೆಗಳನ್ನ ದಾಟಿ ನಂತರ ಹುಲ್ಲುಗಾವಲಿನ ಚಾರಣ ಆರಂಭವಾಯಿತು. ಇಷ್ಟು ಹೊತ್ತಿಗೆ ನಮ್ಮನ್ನಾವರಿಸಿದ್ದ ಮಂಜು ಕರಗಿದ್ದದ್ದರಿಂದ ನಮಗೆ ದೂರದಲ್ಲಿ ನಿಂತಿದ್ದ ಟವರ್ ಕಾಣುತ್ತಿತ್ತು. ಬಂಡೆಗಳನ್ನ ಹತ್ತುವ ಸಾಹಸವಿಲ್ಲದ್ದರಿಂದ ಎಲ್ಲಾ ಹುಲ್ಲುಗಾವಲಿನಲ್ಲಿ ಸ್ವಲ್ಪ ಸುಧಾರಿಸಿಕೊಂಡು ನಡೆಯುತ್ತಿದ್ದೆವು. ಇದೇ ಜಾಗದ ಸಪೀಪದಲ್ಲಿ ಇರುವುದೇ "ಮಾಣಿಕ್ಯಧಾರಾ". ನಾವೆಲ್ಲಾ ಸುಮಾರು ೧೬:೦೦ ರ ಹೊತ್ತಿಗೆ BSNL ಟವರ್ರಿನ ಹತ್ತಿರವಿರುವ ಪಾಳುಬಿದ್ದಿದ್ದ ಪೋಲೀಸ್ ಚೆಕ್ ಪೋಸ್ಟ್ ಬಳಿ ಬಂದೆವು. ಅಲ್ಲಿ ಕೆಲವರು ಕುಳಿತುಕೊಂಡು ಸುಧಾರಿಸಿಕೊಂಡರೆ ಮಿಕ್ಕವರು ಆ ಟವರ್ರನ್ನು ಹತ್ತುವ ಸಾಹಸ ಮಾಡುತ್ತಿದ್ದರು. :D


ಅಲ್ಲಿಂದ ನಮ್ಮ ಚಾರಣ ೧೪:೩೦ಕ್ಕೆ ಮತ್ತೆ ಪ್ರಾರಂಭವಾಗಿ ಡಂಬಾರು ರಸ್ತೆಯ ಮೂಲಕ ಬಾಬಾ ಬುಡನ್ ಗಿರಿಯತ್ತ ಹೊರಟಿತ್ತು. ಮಾರ್ಗಮಧ್ಯದಲ್ಲಿ ನಮಗೆ ಕೆಲವು ಸುಂದರವಾದ Photoಗಳು ಸೆರೆ ಸಿಕ್ಕವು. ನಾವಲ್ಲಿಂದ ಹೋಗುತ್ತಿದ್ದಂತೆಯೇ ನಮ್ಮನ್ನ ಗಾಳೀಕೆರೆಗೆ ಕರೆದೊಯ್ಯಲು ಜೀಪ್ ಡ್ರೈವರ್ ಗಳು ಪೈಪೋಟಿ ನಡೆಸುತ್ತಿದ್ದರು. ಕೊನೆಗೆ ಒಂದು ಜೀಪ್ ಚಾಲಕನ ಹತ್ತಿರ ಹರ್ಷ ಮಾತನಾಡಿ ಚರ್ಚೆ ಮಾಡಿ ಅವನಿಗೆ ನಮ್ಮ ಲಘು ಉಪಹಾರವನ್ನು ಮುಗಿಸುವ ವರೆಗೆ ಕಾಯುವಂತೆ ಹೇಳಿ ಹೊಟೇಲಿನ ಕಡೆಗೆ ನಡೆದೆವು, ಸಮಯ ಸುಮಾರು ೧೭:೧೫ ಆಗಿರಬಹುದು. ನಾನು, ಹರ್ಷ, ಪ್ರವೀಣ್ ಮತ್ತೆ ವಿಶ್ವನಾಥ್ ಸಸ್ಯಾಹಾರಿಗಳಾದ್ದರಿಂದ ಪರೋಟ ಮತ್ತು ದಾಲ್ ತಿಂದರೆ ಮಿಕ್ಕವರು ಆಮ್ಲೇಟನ್ನು ಸವಿದರು. ಅಲ್ಲಿಂದ ಕೇವಲ ೧೦ ನಿಮಿಷದ ದಾರಿಕ್ರಮಿಸಿದ ನಂತರ ನಮ್ಮ ಮುಂದಿನ ಗುರಿ ಸಿಕ್ಕಿಬಿಟ್ಟಿತು, ಅದೇ ಗಾಳೀಕೆರೆ. ಇಷ್ಟು ಹೊತ್ತಿಗೇ ಸಂಜೆ ೧೮:೩೦ರ ಸಮಯ, ಮಂಜು ನಮ್ಮನ್ನು ಸ್ವಲ್ಪ ಸ್ವಲ್ಪವಾಗೇ ನುಂಗುತ್ತಿತ್ತು.


ಸಂಜೆ ಅಲ್ಲಿಯೇ Camping ಆದ್ದರಿಂದ ನಾವೆಲ್ಲಾ ನಮ್ಮ ಬೆನ್ನ ಮೇಲಿದ್ದ ಹೊರೆಯನ್ನು ಕೆಳಗಿಳಿಸಿ ಸ್ವಲ್ಪ ವಿಶ್ರಾಂತಿ ಪಡೆದೆವು. ಪರ್ವತಗಳಿಂದ ಮೂರೂಕಡೆಗಳಿಂದ ಆವರಿಸಲ್ಪಟ್ಟ ಪ್ರದೇಶವಿದು. ಮತ್ತೊಂದೆಡೆ ದೊಡ್ಡ ಕಣಿವೆ, ಅಲ್ಲಿಯೇ ಒಂದು ಪುಟ್ಟ ಕೆರೆ. ಆ ಕೆರೆ ಎಷ್ಟು ದೊಡ್ಡದೆಂದು ನೋಡಲಾಗಲಿಲ್ಲ, ಎತ್ತನೋಡಿದರೂ ಅಲ್ಲಿ ಬರೀ ಮಂಜನ್ನು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ. ಆ ಸ್ಥಳದಲ್ಲಿ ಒಂದು ಗುಡಿಸಲಿನ ಅಳಿದುಳಿದ ಕಂಬಗಳಿದ್ದವು. ಅಲ್ಲಿ ೩ Tentಗಳನ್ನು ಹಾಕಲು ಸ್ಥಳಾವಕಾಶವಿಲ್ಲದ್ದರಿಂದ ಅಲ್ಲಿಂದ ಸ್ವಲ್ಪ ಮುಂದೆ ಸಮತಟ್ಟಾದ ಪ್ರದೇಶದಲ್ಲಿ ನಮ್ಮ Tentಗಳನ್ನ ಹಾಕುವುದಾಗಿ ನಿರ್ಧರಿಸಿ Tentಗಳನ್ನ ಹಾಕಲು ಶುರುಮಾಡಿದೆವು. ಸಂಜೆ ಮಂಜು ಮುಸುಕಿದ್ದರಿಂದ ಬಹಳ ಬೇಗ ಕತ್ತಲು ಆವರಿಸುತ್ತಿತ್ತು. ಅನೀಸ್ ಮತ್ತು ತಂಡ ಬಿಸಿನೀರಿನ ವ್ಯವಸ್ಥೆಮಾಡಲು ಶುರುಮಾಡಿದರೆ ನಾವೆಲ್ಲಾ ಟೆಂಟ್ ಗಳನ್ನ ಹಾಕುತ್ತಿದ್ದೆವು.

ಟೆಂಟ್ ಹಾಕಿದನಂತರ ನಾವೆಲ್ಲಾ ಊಟಕ್ಕೆ ಹಾಜರಾದೆವು. ಅಂದಿನ ಊಟ MTRರವರ Ready to eat Rice items ಆಗಿತ್ತು. ತಯಾರಿಸಲು ಬಹಳ ಸುಲಭವಾದ ಆ ಪ್ಯಾಕೇಟುಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ ೫ ನಿಮಿಷಗಳಕಾಲ ಬಿಟ್ಟರೆ ಬಿಸಿ ಬಿಸಿಯಾದ ರುಚಿ ರುಚಿಯಾದ ಅಡುಗೆ ಸಿದ್ದ. ಆದರೆ ಆ ಮಂಜು ಮುಸುಕಿದ್ದ ಬೆಟ್ಟದಲ್ಲಿ ಕುದಿಯುವ ನೀರನ್ನು ಸಿದ್ದಪಡಿಸುವುದೇ ಒಂದು ಸಾಹಸ. ಅಂತೂ ಇಂತೂ ಅನೀಸ್ ಮತ್ತವನ ತಂಡದಿಂದ ನಮ್ಮೆಲ್ಲರ ಊಟದ ಕಾರ್ಯಕ್ರಮ ಮುಗಿದಿತ್ತು.

ಕತ್ತಲು ಬೇಗನೇ ಆವರಿಸಿದ್ದರಿಂದ ಸುಮಾರು ೮.೩೦ಕ್ಕೆ ನಾವೆಲ್ಲಾ ನಮ್ಮ ನಮ್ಮ ಟೆಂಟಿನಲ್ಲಿ ಮಲಗಿದ್ವಿ. ನಾನು ಮತ್ತು ಪ್ರವೀಣ್ ಒಂದು ಟೆಂಟಿನಲ್ಲಿ ಮಲಗಿದ್ವಿ. ನಮ್ಮ ಟೆಂಟ್ ಸ್ವಲ್ಪ ಮಧ್ಯದಲ್ಲಿ ಇದ್ದದ್ದರಿಂದ ನಮಗೇನೂ ತೊಂದರೆ ಆಗಲಿಲ್ಲ. ಆದರೆ ಮಿಕ್ಕ ೨ ಟೆಂಟ್ ಗಳಲ್ಲಿದ್ದವರಿಗೆ ನಿದ್ರೆ ಇರಲಿಲ್ಲ ಅಂತ ಬೆಳಗ್ಗೆ ನಾನು ಎದ್ದಮೇಲೆ ತಿಳಿದದ್ದು. ರಾತ್ರಿ ರಭಸದಿಂದ ಬೀಸಿದ ಗಾಳಿ ಎರಡರಲ್ಲಿ ಒಂದು ಟೆಂಟಿನ ಮೇಲ್ಚಾವಣಿಯನ್ನ ಹಾರಿಸಿತ್ತಂತೆ. ನಂತರ ಅವರೆಲ್ಲಾ ಬೇರೆಕಡೆಗಳಲ್ಲಿ ಮತ್ತೆ ಟೆಂಟನ್ನ ಹಾಕಿ ಮಲಗಿದ್ರಂತೆ. ನಾವಿಬ್ಬರೂ ಚೆನ್ನಾಗಿ ನಿದ್ದೆ ಮಾಡಿದ್ವಿ :)

ಎರಡನೇ ದಿನ (ಭಾನುವಾರ) ನಮ್ಮ ಪಯಣ ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಗೆ ಹೋಗಿ ಅಲ್ಲಿಂದ ಬೀರೂರಿನಲ್ಲಿರುವ ರೈಲ್ವೇನಿಲ್ದಾಣಕ್ಕೆಬಂದು ಅಲ್ಲಿಂದ ಬೆಂಗಳೂರಿನ ಕಡೆಗೆ.

ಬೆಳಗ್ಗೆ ೬.೩೦ಕ್ಕೆ ಎದ್ದು, ನಮ್ಮ ಎಲ್ಲಾಕೆಲಸವನ್ನೂ ಮುಗಿಸಿ ತಿಂಡಿ ತಿಂದು ಪಯಣ ಮುಂದುವರೆಸಿದೆವು. ಬೆಳಗಿನ ತಿಂಡಿಗೆ Cornflakes ಮತ್ತು ಹಾಲು.

ಮುರಿದು ಹೋಗಿದ್ದ ಗುಡಿಸಲಿನ ಮಧ್ಯದಲ್ಲಿ ಮೂರುಕಲ್ಲುಗಳನ್ನು ಇಟ್ಟು ಒಲೆ ಹತ್ತಿಸಿ ಹಾಲನ್ನು ಬಿಸಿಮಾಡಿಕೊಂಡು ಅದಕ್ಕೆ Cornflakes ಹಾಕಿ ತಿಂದೆವು. ನಾನು ಕೊಂಡೊಯ್ದಿದ್ದ ಸೌತೇಕಾಯಿಯನ್ನು ತಿನ್ನಲು ಇನ್ನೂ ಸಮಯ ಬಂದಿರದ ಕಾರಣ ಅದನ್ನು ಮತ್ತೆ ನನ್ನ ಬ್ಯಾಗಿಗೆ ಹಾಕಿಕೊಂಡು ಅಲ್ಲೇ ಕೆಲವು photo ಕ್ಲಿಕ್ಕಿಸಿ ಅಂದಾಜು ೮.೩೦ಕ್ಕೆ ನಮ್ಮ ಪಯಣ ಅಲ್ಲಿಂದ ಉತ್ತರದಿಕ್ಕಿನೆಡೆಗೆ ಮುಂದುವರೆಯಿತು. ದಟ್ಟವಾದ ಮಂಜು ಮುಸುಕಿದ್ದರಿಂದ ನಮ್ಮ ಎಲ್ಲಾ ಕಾರ್ಯಗಳೂ ನಿಧಾನಗತಿಯಲ್ಲಿ ಸಾಗುತ್ತಿತ್ತು.

ಅಂದಾಜು ೧೪ ಕಿಲೋಮೀಟರಿನ ಈ ಹಾದಿ ಕಠಿಣವಾದ ಹಾದಿಯೇನಲ್ಲ. ಮಾರ್ಗಮಧ್ಯದಲ್ಲಿ ನಮಗೆ ಹಲವಾರು ಶೋಲಾಗಳು (ಎರಡುಪರ್ವತಗಳು ಸೇರುವ ಮಧ್ಯದ ಕಾಡು) ಮತ್ತೆ ಕೆಲವು ಪರ್ವತದ ಅಂಚು ಮತ್ತೆ ಕೆಲವು ಝರಿಗಳು ಈ ಮಾರ್ಗದಲ್ಲಿ ಸಿಕ್ಕುತ್ತವೆ.


ಮಾರ್ಗ ಪೂರ್ಣವಾಗಿ ಮಂಜು ಮುಸುಕಿದ್ದರಿಂದ ಪ್ರತಿಯೊಬ್ಬರೂ ನಿರ್ಧಿಷ್ಟ ಅಂತರದಲ್ಲಿ ಮುಂದುವರೆಯುತ್ತಿದ್ದೆವು. ಹೆಚ್ಚುದೂರ ಬಂದರೆ ಇಬ್ಬರ ನಡುವೆ ಮಂಜು ಆವರಿಸಿ ದಾರಿ ಕಾಣಿಸುತ್ತಿರಲಿಲ್ಲ. ಗಾಳೀಕೆರೆಯಿಂದ ಕೆಮ್ಮಣ್ಣುಗುಂಡಿಯ ವರೆಗೂ ಇರುವ ಹಾದಿಯನ್ನ "ರಾಜ-ಹಾದಿ" ಎನ್ನುತ್ತಾರಂತೆ. ಹಿಂದೆ ರಾಜ ಮಹರಾಜರುಗಳು ಇದೇಹಾದಿಯಲ್ಲಿ ಕ್ರಮಿಸುತ್ತಿದ್ದರಂತೆ. ನಾವು ಚಾರಣ ಮಾಡುವಹೊತ್ತಿಗೆ ಆ ವಿಶಾಲವಾದ ಹಾದಿ ಬಹುತೇಕ ಗಿಡಗಂಟೆಗಳಿಂದ ಮುಚ್ಚಲ್ಪಟ್ಟಿತ್ತು. ನಮ್ಮೊಡನೆ GPS ಇಲ್ಲದಿದ್ದಲ್ಲಿ ಮಾರ್ಗಮಧ್ಯೆ ಕಳೆದುಹೋಗುವ ಸಂಭವ ಹೆಚ್ಚಿತ್ತು. ಚಾರಣದ ಮಧ್ಯೆ ಮಂಜಿಲ್ಲದ ದಿನಗಳಲ್ಲಿ ಹಾದಿ ಸುಗಮವಾಗಿರುತ್ತದೆ. ಮಾರ್ಗಮಧ್ಯೆ ನಮಗೆ ಅಂದಾಜು ೬-೭ ಶೋಲಾ ಕಾಡುಗಳು ಎದುರಾಗುತ್ತವೆ. ಅಲ್ಲೆಲ್ಲಾ ನಿಮ್ಮ ದಾರಿಯನ್ನು ನೀವೇ ಮಾಡಿಕೊಂಡು ಮುನ್ನಡೆಯಬೇಕು. ಸಹಚಾರಣಿಗರು ತಂದಿದ್ದ "ಖರ್ಜೂರ" ಮತ್ತು "ಟ್ಯಾಂಗ್" ಅನ್ನು ಸೇವಿಸುತ್ತಾ ಮಾರ್ಗ ಮಧ್ಯದಲ್ಲಿ ಜೋಫಿನ್ ಮತ್ತು ಸಂಗಡಿಗರ ನೃತ್ಯ ಕಾರ್ಯಕ್ರಮವನ್ನ ನೋಡಿಕೊಂಡು ಮುಂದುವರೆದೆವು. :) ಹರ್ಷ ಅದರ ವಿಡಿಯೋ ಚಿತ್ರಣ ಮಾಡಿದರು, ಮಂಜಿನ ಮಧ್ಯೆ ಹೇಗೆ ಮೂಡಿ ಬಂದಿತ್ತೂ... ನಾನು ನೋಡಲಾಗಲಿಲ್ಲ.

ಶೋಲಾ ಕಾಡುಗಳನ್ನೆಲ್ಲಾ ದಾಟಿ ಒಂದು ಬಯಲಿನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ಎಲ್ಲರಿಗೂ ದಣಿವಾದ್ದರಿಂದ ಮತ್ತೆ ನಮ್ಮ "ಟ್ಯಂಗ್" ಕುಡಿದು ಪಯಣ ಮುಂದುವರಿಸಿದೆವು. ಮಧ್ಯಹ್ನ ಅಂದಾಜು ೧೨.೦೦ ಘಂಟೆಗೆ ನಮ್ಮ ಮತ್ತೊಂದು ವಿರಾಮ. ಅಷ್ಟು ಹೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಲು ತನ್ನ ಕಿರಣಗಳನ್ನ ಬೀರಿದ್ದ, ಮಂಜು ಕರಗುತ್ತಿತ್ತು.

ಆ ಸ್ಥಳದ ಎದುರಿನಲ್ಲಿ ದಟ್ಟವಾದ ಕಾಡಿನಿಂದಾವೃತವಾದ ಕಣಿವೆ, ಮತ್ತು ಭದ್ರಾ ಅಣೇಕಟ್ಟೆಯ ನಯನ ಮನೋಹರವಾದ ದೃಷ್ಯ ನಮ್ಮ ದಣಿವನ್ನು ಮರೆಯಾಗಿಸಿತ್ತು. ಅಲ್ಲಿ ನಮ್ಮ ಕಣ್ಣುಗಳಲ್ಲದೇ ಕ್ಯಾಮರಾ ಕಣ್ಣುಗಳೂ ಆ ಸೊಬಗನ್ನ ಸೆರೆಹಿಡಿಯುತ್ತಿದ್ದವು.



ಆ ವಿರಾಮದಲ್ಲಿ ನಮಗೆಲ್ಲಾ ಮೊದಲೇ ತಂದಿದ್ದ Dil-pasand ಮತ್ತು Cream-bun ನೀಡಲಾಯಿತು. ನನ್ನ ಬ್ಯಾಗಿನಲ್ಲಿ ಇಲ್ಲಿಯ ತನಕ ಜೊತೆಯಾಗಿ ಬಂದಿದ್ದ ಸೌತೇಕಾಯಿಯನ್ನು ಎಲ್ಲರಿಗೂ ನೀಡಿ ನನ್ನ ಭಾರವನ್ನ ಕಡಿಮೆ ಮಾಡಿಕೊಂಡೆ ;) ಅಲ್ಲಿಂದ ಕೆಳಗೆ ಕಣಿವೆಯ ಕಡೆಗೆ ಇಳಿದರೆ ಒಂದು ಗುಹೆ ಇದೆಯಂತೆ, ನಮ್ಮಲ್ಲಿ ಕೆಲವರು ಅತ್ತಕಡೆಗೆ ಹೊರಟರು. ಮಿಕ್ಕವರು ಕೆಮ್ಮಣ್ಣುಗುಂಡಿಯ ಹಾದಿ ಹಿಡಿದೆವು. ಹಾಗೆಯೇ ಮುಂದೆ ಸಾಗುವಾಗ ಅಲ್ಲಿ ಮಹಾರಾಜರು ಹಿಂದೆ ತಂಗಲು ಬಳಸುತ್ತಿದ್ದ ಮಹಲಿನ ಪಳಯುಳಿಕೆ ಇದೆ. ದಾರಿಯುದ್ದಕ್ಕೂ ಪ್ರಕೃತಿಯ ಸೊಬಗನ್ನ ಸಾಧ್ಯವಾದಷ್ಟೂ ನನ್ನ ಕ್ಯಾಮರದ ಒಳಗಡೆ ತುಂಬಿಸುವ ಪ್ರಯತ್ನ ಮಾಡುತ್ತಾ ನಮ್ಮ ಅಂತಿಮವಾದ ಮತ್ತು ಕಠಿಣವಾದ ಮಾರ್ಗದ ಮುಂದೆ ಬಂದು ನಿಂತಾಗ ಸಮಯ ಸುಮಾರು ೧.೩೦.

ಈ ದುರ್ಗಮವಾದ ಹಾದಿ ಎದುರಾಗುವಮುನ್ನ ನಮಗೆ ಕೆಮ್ಮಣ್ಣುಗುಂಡಿಯ ಕಟ್ಟಡಗಳು ಬರಿಗಣ್ಣಿಗೇ ಕಾಣುತ್ತವೆ, ಆದರೆ ಮಾರ್ಗಮಾತ್ರ ಕಾಣುವುದಿಲ್ಲ. ಹಾಗಾಗಿ ಆ ಹಾದಿಯನ್ನ ನಾವೇ ಮಾಡಿಕೊಂಡು ಕೆಳಗಿಳಿಯಬೇಕು. ಮನು ಮತ್ತು ಹರ್ಷ ಕೆಳಗಿಳಿಯುವ ಹಾದಿಯ ಪತ್ತೆಯಲ್ಲಿ ತೊಡಗಿ ವಿಫಲರಾದರು. ಕಾರಣ ಅಷ್ಟು ದಟ್ಟವಾದ ಆ ಕಾಡುಮರಗಳು ಮತ್ತು ಮುಳ್ಳಿನಿಂದ ಕೂಡಿದ ಪೊದೆಗಳು.

ಸುಮಾರು ೩೦ ನಿಮಿಷದ ಹಾದಿಯಲ್ಲಿ ೬ ಅಡಿಗೂ ಮೀರಿದ ಎತ್ತರದ ಪೊದೆಗಳನ್ನು ಸರಿಸುತ್ತಾ ನಾವೆಲ್ಲಾ ಯುದ್ದಕ್ಕೆ ಹೊರಟ ಸೈನಿಕರಂತೆ ಮುನ್ನುಗ್ಗುತ್ತಿದ್ದೆವು. ನಮ್ಮ ಗುರಿಇದ್ದದ್ದು ಕೆಮ್ಮಣ್ಣುಗುಂಡಿಯೊಂದೇ. ಮಾರ್ಗಮಧ್ಯದಲ್ಲಿ ನಮ್ಮನ್ನು ದಾರಿ ತಪ್ಪಿಸುವ ಹಾದಿಗಳು ಹಲವಾರು, ಆದರೆ ನಾವು ಕೇವಲ GPSನ ಮಾತನ್ನು ಮಾತ್ರ ಕೇಳುತ್ತಾ ಮುನ್ನಡೆದೆವು. ಮಾರ್ಗಮಧ್ಯದಲ್ಲಿ ಮತ್ತೊಮ್ಮೆ ಕಡಿದಾದ ಪರ್ವತವನ್ನು ಹತ್ತಬೇಕಾಯಿತು, ಆದರೆ ಹತ್ತಲು ಯಾವುದೇ ಆಧಾರವಿರಲಿಲ್ಲ, ಇದ್ದದ್ದು ಅಲ್ಲಿ ಬೆಳೆದು ನಿಂತಿದ್ದ ಮುಳ್ಳಿನ ಪೊದೆಗಳಷ್ಟೇ. ನಾನು ನನ್ನ ಕೈಗಳಿಗೆ Glove ಹಾಕಿದ್ದರಿಂದ ಆ ಪೊದೆಗಳನ್ನ ಸರಿಸಲು ಅನುಕೂಲವಾಯಿತು. ಮುಳ್ಳಿನ ಪೊದೆಗಳು ನಮ್ಮ ಮೈ ಮೇಲೆ ಮಾಡಿದ್ದ ಗಾಯಗಳು ನಮ್ಮ ಮುಖ್ಯಹಾದಿ ದೊರೆತ ಸಂಭ್ರಮದಲ್ಲಿ ಮರೆಯಾಗಿದ್ದವು. ಅಂತೂ ಇಂತೂ ನಾವೆಲ್ಲಾ ಸುರಕ್ಷಿತವಾಗಿ ಮುಖ್ಯ ರಸ್ತೆಯಲ್ಲಿದ್ದೆವು... ಹುರ್ರೇ..... :D

ನಾವೆಲ್ಲಾ ಕೆಮ್ಮಣ್ಣುಗುಂಡಿ ತಲುಪಿ ವಿಶ್ರಮಿಸಿಕೊಳ್ಳುತ್ತಿರುವಾಗ ಹರ್ಷ ಮತ್ತವನ ಸಂಗಡಿಗರು ಅಲ್ಲಿಂದ ಬೀರೂರಿಗೆ ಹೊರಡಲು ನಮಗೆ ಜೀಪಿನ ವ್ಯವಸ್ಥೆ ಮಾಡಲು ಹೊರಟಿದ್ದರು. ನಾವೆಲ್ಲಾ ಎರಡು ಜೀಪಿನಲ್ಲಿ ಬೀರೂರಿನ ಕಡೆಗೆ ಪಯಣ ಬೆಳೇಸಿದೆವು.

ಮಾರ್ಗಮಧ್ಯದಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ನಮ್ಮನ್ನೆಲ್ಲಾ ಬೀಳ್ಗೊಟ್ಟಿತು. ಬೀರೂರಿನಿಂದ ನಮ್ಮ ರೈಲ್ವೇ ಪ್ರಯಾಣ ೫.೪೫ಕ್ಕೆ ಶುರುವಾಗಿ ೯.೨೦ಕ್ಕೆ ಬೆಂಗಳೂರನ್ನು ತಲುಪಿದೆವು. ಅಲ್ಲಿಂದ ನಾನು ನನ್ನ ಮನೆಯಕಡೆ ಹೊರಡುವ BMTC ಹತ್ತಿ ಮನೆಗೆ ಬಂದೆ.


ನಿಸರ್ಗಮಾತೆಯ ಮಡಿಲಿನಲ್ಲಿ ಕಳೆದ ಆ ೨ ದಿನ ಅವಿಸ್ಮರಣೀಯ.... :)

Friday, August 21, 2009

"ಮುನಿಯ"



"ಮುನಿಯ" ಎಂದಾಕ್ಷಣ ಯಾವುದೋ ಕನ್ನಡ ಚಿತ್ರವಲ್ಲ... ಇದು ಒಂದು ಪುಟ್ಟ ಪಕ್ಷಿಯ ಉಳಿವಿನ ಹೋರಾಟದ ಲೇಖನ...

ಶುಕ್ರವಾರದಂದು ವಾರಾಂತ್ಯವಾದ್ದರಿಂದ ಕೆಲಸದ ಒತ್ತಡ ಹೆಚ್ಚಿರಲಿಲ್ಲ. ರಾತ್ರಿ ಸವಿಯಾದ ನಿದ್ದೆ ಮಾಡಿ ಬೆಳಗ್ಗೆ ಬೇಗ ಎದ್ದು ಬರಿಅಕ್ಕಿ ದೋಸೆ (ನೀರು ದೋಸೆ) ಮತ್ತೆ ಕಡಲೇ ಬೇಳೆ ಚಟ್ನಿ ಮಾಡಿದ್ದೆ. ನೆನ್ನೆ ನನ್ನ ಸಹೋದ್ಯೋಗಿಯಾದ ಕನಕರಾಜ ತನಗೂ ತಿಂಡಿ ತರುವಂತೆ ಹೇಳಿದ್ದರಿಂದ ಅವನನಿಗೂ ದೋಸೆಯನ್ನ ಮಾಡಿಕೊಂಡು ಡಬ್ಬಿಯಲ್ಲಿ ತಂದಿದ್ದೆ. ಪ್ರತಿದಿನದಂತೆ ಇಂದಿನ ಕೆಲಸ ಪ್ರಾರಂಭಿಸಿ ಮಧ್ಯೆ ವಿರಾಮದ ಸಲುವಾಗಿ ನಮ್ಮ ಕ್ಯಾಂಟಿನಿಗೆ ಟೀ ಕುಡಿಯಲು ಹೋದಾಗ ಅಲ್ಲಿ ಒಂದು ಪುಟ್ಟ ಪಕ್ಷಿ ಹಾರಾಡಿದಂತಾಯಿತು. ಸಂಪೂರ್ಣವಾಗಿ ಕಿಟಕಿಗಳನ್ನು ಮುಚ್ಚಿರುವ ಜಾಗದಲ್ಲಿ ಇದ್ಯಾವ ಹಕ್ಕಿ ಬಂದಿತೆಂದು ಗಮನವಿಟ್ಟು ನೋಡಿದಾಗ ಅದು ಹಿಂದೆ ನಾನು ಸಾಕಿದ್ದ "ಮುನಿಯ" ಎಂಬ ಹಕ್ಕಿ ಎಂದು ತಿಳಿಯಿತು. ಪಾಪ... ಅದು ಹೇಗೋ ದಾರಿ ತಪ್ಪಿ ಕ್ಯಾಂಟಿನಿಗೆ ಬಂದುಬಿಟ್ಟಿತ್ತು. ಹವಾನಿಯಂತ್ರಿತವಾದ ನಮ್ಮ ಕಾರ್ಯಾಲಯದಲ್ಲಿ ಯಾವುದೇ ಕಿಟಕಿಯನ್ನು ತೆರೆದಿಡುವ ಹಾಗಿಲ್ಲ, ದಾರಿ ತಪ್ಪಿ ಒಳಗೆ ಬಂದಿರುವ ಇದನ್ನು ಮತ್ತೆ ಹೊರಗೆ ಕಳಿಸುವುದು ಹೇಗೆಂದು ನನಗೆ ತಿಳಿಯಲಿಲ್ಲ. ಆ ಪಕ್ಷಿಯೋ ಅಪಾರ ಜನ ಜಂಗುಳಿಯನ್ನು ಕಂಡು ಬೆದರಿ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಾ ತನ್ನಲ್ಲಿದ್ದ ಶಕ್ತಿಯನ್ನ ಕಳೆದುಕೊಳ್ಳುತ್ತಲಿತ್ತು. ಅದನ್ನು ಕಂಡು ಹಾಗೇ ಏನೂಮಾಡಲಾಗದೇ ಮರಳಿ ನನ್ನ ಜಾಗಕ್ಕೆ ಬಂದೆ.

ಕೆಲಸದ ಒತ್ತಡದಲ್ಲೂ ನನಗೆ ಅದರದೇ ಚಿಂತೆ... ಮತ್ತೊಂಮ್ಮೆ ನಾನು ಹೊರಬಂದಾಗ ಅದೇ ಹಕ್ಕಿ ನಮ್ಮ ಕ್ಯಾಂಟಿನಿನಿಂದ ಹೊರಬಂದು ನಮ್ಮ ಕಾರ್ಯಾಲಯದ ಆವರಣದಲ್ಲಿ ಹಾರಾಡುತ್ತಾ ಹೊರ ಹೋಗುವ ದಾರಿ ಹುಡುಕುತ್ತಿತ್ತು. ನಾನು ಕೆಲಸ ಮಾಡುವುದು ೬ನೇ ಅಂತಸ್ಥಿನಲ್ಲಿ. ಅದೂ ಪೂರ್ಣವಾಗಿ ಗಾಜಿನಿಂದಾವ್ರುತವಾದ ಕಟ್ಟಡ. ಇನ್ನು ಅದಕ್ಕೆ ಹೊರ ಹೋಗುವ ದಾರಿಯಾದರೂ ಹೇಗೆ ಸಿಗಬೇಕು... ನಾನು ಅದನ್ನು ಹಿಡಿದು ಹೊರಬಿಡಲು ನನ್ನ ಶಕ್ತಿಮೀರಿದ ಪ್ರಯತ್ನ ಮಾಡಿ ವಿಫಲನಾಗಿದ್ದೆ. ಅದು ನನ್ನ ಕೈಗೆಟುಕದಂತೆ ಮೇಲೆ ಹೋಗಿ ಕಣ್ಮುಚ್ಚಿ ಕುಳಿತಿತ್ತು.

ದಾರಿಕಾಣದೇ ಕೊನೆಗೆ ಆ ಗಣೇಶನನ್ನು ನೆನೆದು ಆ ಪಕ್ಷಿಗೆ ಒಂದು ದಾರಿ ತೋರಿಸೆಂದು ಕೋರಿಕೊಂಡು ಮತ್ತೆ ನನ್ನ ಕಾರ್ಯಸ್ಥಳಕ್ಕೆ ಮರಳಿದೆ. ಪ್ರತೀ ಅರ್ಧ ಘಂಟೆಗೊಮ್ಮೆ ಅದು ಕುಳಿತಿದ್ದ ಸ್ಥಳಕ್ಕೆ ಹೋಗಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೆ. ಕಡೆಗೂ ನನ್ನ ಕೋರಿಕೆ ಆ ಗಣೇಶನಿಗೆ ಕೇಳಿಸಿತೇನೋ ಎಂಬಂತೆ ಆ ಹಕ್ಕಿ ನನ್ನ ಕೈಗೆಟುಕುವ ಸ್ಥಳಕ್ಕೆ ಬಂದು ಕಣ್ಮುಚ್ಚಿ ಕುಳಿತಿತ್ತು. ಬಹಳಹೊತ್ತಿನಿಂದಾ ಹಾರಾಡಿ ಸ್ವಲ್ಪ ಬಳಲಿದ್ದರಿಂದ ಮಿಸುಕಾಡದೇ ಕುಳಿತಿದ್ದ ಅದರೆಡೆಗೆ ಸದ್ದು ಮಾಡದೇ ಹೆಜ್ಜೆ ಹಾಕಿದೆ. ಆ ಪಕ್ಷಿಯನ್ನ ನನ್ನೆರಡೂ ಕೈಗಳಿಂದ ಅದಕ್ಕೆ ತೊಂದರೆಯಾಗದಂತೆ ಹಿಡಿದು ನಮ್ಮ ಕಟ್ಟಡದಿಂದ ಹೊರಬಂದು ಅದನ್ನು ಮತ್ತೆ ನಿಸರ್ಗದ ಮಡಿಲಿಗೆ ಬಿಟ್ಟೆ. ಬದುಕಿದೆಯಾ ಬಡಜೀವವೇ ಎಂಬಂತೆ ತನ್ನೆ ರೆಕ್ಕೆಗಳನ್ನು ಚಾಚುತ್ತಾ ಅದು ಹತ್ತಿರವಿದ್ದ ಒಂದು ಮರದ ಮೇಲೆ ಹಾರಿ ಕುಳಿತಿತು. :-D

ಕೆಲವು ತಿಂಗಳ ಹಿಂದೆ ಒಂದು ಪುಟ್ಟ ಅಳಿಲಿನ ಮರಿಯನ್ನ ಕಾಪಾಡಲು ಪ್ರಯತ್ನ ಪಟ್ಟು ಅದು ವಿಫಲವಾಗಿತ್ತು :-( , ಆದರೆ ಇಂದು ಆ ಪುಟ್ಟಜೀವವನ್ನ ಕಾಪಾಡಿದ ಸಂತಸದಿಂದ ಮರಳಿ ನನ್ನ ಕೆಲಸದೆಡೆಗೆ ಮರಳಿದೆ :-) . ಮೇಲೆ ಲಗತ್ತಿಸಿರುವ ಚಿತ್ರವನ್ನ ಗೂಗಲ್ಲಿನಿಂದ ಪಡೆದದ್ದು.

Monday, July 20, 2009

RJಗಳೊಡನೆ ಒಂದು ಸಂಜೆ

ಪ್ರತೀದಿನ ಬೆಳ್ಳಂಬೆಳಿಗ್ಗೆ ಎದ್ದು ಚುಮು ಚುಮು ಮುತ್ತಿಡುವ ಚಳಿಯಲ್ಲಿ ರೇಡಿಯೋ ಸ್ಟೇಷನ್ನಿಗೆ ಬಂದು ಸರಿಯಾಗಿ 7ಘಂಟೆಗೆ Very Goooooooood Morning ಅಂತ ಫುಲ್ಲ್ ಜೋಷಿನಲ್ಲಿ ಎಲ್ಲರ ದಿನ ಪ್ರಾರಂಭಿಸುವ RJ Pradeepa ನ ಕಾರ್ಯಕ್ರಮವನ್ನ ಪ್ರತೀದಿನ ಕೇಳುವ ಕೇಳುಗ ನಾನು. ಪ್ರದೀಪ ಪ್ರತಿ ದಿನ ಮಳೆಯಿರಲಿ ಮಂಜಿರಲಿ ರೇಡಿಯೋ ಸ್ಟೇಷನ್ನಿಗೆ ಬಂದು 7:15ಕ್ಕೆ ಯಾರಿಗಾದರೂ ಕೋಳಿ ಕೂಗಿಸಿ ತರಲೆ ಮಾಡಿ ಸದಾ ಖುಷಿಯಿಂದ ಚಟಪಟನೆ ಮಾತನಾಡುತ್ತಾ ಇರುವ RJ ಪ್ರದೀಪನ ಕಾರ್ಯಕ್ರಮ Whatte fun Morning. ಆ ಕಾರ್ಯಕ್ರಮವನ್ನ ಕೇಳುತ್ತಲೇ ನಾನು ಆಫೀಸಿಗೆ ರೆಡಿಯಾಗುವುದು. ಸಮಯ ಸಿಕ್ಕಾಗೆಲ್ಲಾ ಪ್ರದೀಪನಿಗೆ ಕಾಲ್ ಮಾಡಿ ಅವರೊಡನೆ ಮಾತನಾಡ್ತಾ ಗಡಿಬಿಡಿಯಲ್ಲಿ ಆಫೀಸಿಗೆ ಹೊರಡುತ್ತೇನೆ.

Sardaar ಗಳಿಗೆ ಗುಂಡ ಅನ್ನುವ ಹೊಸಾ ನಾಮಕರಣ ಮಾಡಿ ಯಾವುದೇ Sardaar ಗಳಿಗೆ ಬೇಸರವಾಗದಂತೆ ಪ್ರತೀದಿನ ಒಂದೊಂದು ನಗೆಚಟಾಕಿಯನ್ನ ಹಾರಿಸುತ್ತಾ, ನಮ್ಮ ಬೆಂಗಳೂರಿನ ಸುತ್ತ ಮುತ್ತಲ ಆಗು ಹೋಗುಗಳಬಗ್ಗೆ ಎಲ್ಲರಿಗೂ Update ಕೊಡುತ್ತಾ ಎಲ್ಲರೊಡನೆ ಸೌಜನ್ಯದಿಂದ ಮಾತನಾಡುತ್ತಾ ಇರುವ ಪ್ರದೀಪನನ್ನ ನಾನು ನೋಡಿಯೇ ಇರಲಿಲ್ಲ. ಆದರೂ ಅವರು ಆಯ್ಕೆಮಾಡಿ ಹಾಕುವ ಹಾಡುಗಳನ್ನ ಕೇಳುತ್ತಾ, ಅವರ ಸಂಭಾಷಣೆಯ ರೀತಿಯನ್ನು ಕೇಳುತ್ತಾ ಅವರ ಅಭಿಮಾನಿಯಾದೆ. ಕೇಳುಗರನ್ನ ತನ್ನತ್ತ ಸೆಳೆಯುವಲ್ಲಿ RadioCity ಯಶಸ್ವಿಯಾಗಿದೆಯೆಂದರೆ ಅದು ಇಂತಹಾ RJ ಗಳಿಂದಲೇ. ಪ್ರತಿದಿನ ಜನರ ಪ್ರತಿನಿಧಿಯಾಗಿ ಬರುವ Character(ಮಣಿ) ಮತ್ತು ಪ್ರದೀಪನ ಸಂಭಾಷಣೆ ಸಕತ್ ಮಜ ಕೊಡತ್ತೆ.

ಹೀಗೇ ಒಮ್ಮೆ RadioCity ಯವರು ಪ್ರಾರಂಭಿಸಿದ Musicನ ಕಿಲಾಡಿಗಳಲ್ಲಿ ನಾನು ಭಾಗವಹಿಸಿ ಸರಿಸುಮಾರು 600 to 700 ಸಲ ಪ್ರದೀಪನಿಗೆ Vote ಮಾಡಿದ್ದೆ. ಕಾರಣ ಪ್ರದೀಪನ ಕಾರ್ಯಕ್ರಮ ಅಷ್ಟು ಹಿಡಿಸಿಬಿಟ್ಟಿತ್ತು. ಅದರ ನಡುವೇ ಬುಧವಾರ RadioCityಗೆ call ಮಾಡಿದ್ದಾಗ ಪ್ರದೀಪ ನನಗೆ ಅವರ ಕಡೆಯಿಂದ ಒಂದು T-Shirt ಮತ್ತು Mug ಕೊಡ್ತೀನಿ ಅಂತ ಹೇಳಿದ್ರು. ಇದೇ ರೀತಿ ಗುರುವಾರವೂ ಮತ್ತೊಮ್ಮೆ T-Shirt ಮತ್ತು Mug ಗೆಲ್ಲುವ ಅವಕಾಶ ನನಗೆ ದೊರಕಿತ್ತು. ಇದಕ್ಕಾಗಿ 600 to 700 ಸಲ SMS ಕಳಿಸಿದ್ರಿಂದ ಆ ತಿಂಗಳು ಹೊರಲಾರದ ಭಾರ ಹೊರುವ ಹಾಗೆ Vodafoneನವರು ಸರಿಯಾಗಿ Bill ಕಳಿಸಿಕೊಟ್ಟಿದ್ದರು.



ಶನಿವಾರ ಗರುಡಾ ಮಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ Musicನ ಕಿಲಾಡಿಯ Result ಹೊರಬರತ್ತೆ, ಅಲ್ಲೇ ನಿಮಗೆ ನಿಮ್ಮ ಬಹುಮಾನ ಅಂದರೆ T-Shirt ಮತ್ತು Mugನ ಕೊಡ್ತಾರೆ, ಸಂಜೆ ಸರಿಯಾಗಿ 5 ಘಂಟೆಗೆ ಬಂದ್ಬಿಡಿ ಅಂತ RadioCity office ನ ಸಿಬ್ಬಂದಿ ಫೋನ್ ಮಾಡಿದ್ರು. ಶನಿವಾರ ರಜೆ ಇದ್ದರೂ ಆಫೀಸಿನಲ್ಲಿ ಇದ್ದ ಸ್ವಲ್ಪ ಕೆಲಸವನ್ನ ಮುಗಿಸಿ ಗರುಡಾ ಮಾಲ್ Address ಮತ್ತು ದಾರಿಯನ್ನು ಕೇಳ್ಕೊಂಡು ಅಂತೂ ಇಂತೂ ತಲುಪಿದೆ. ಅಲ್ಲಿ ಆಗತಾನೆ ವೇದಿಕೆ ಸಜ್ಜಾಗುತ್ತಿತ್ತು. ದೊಡ್ಡದಾಗಿ ಪ್ರದೀಪನ ಮತ್ತು ವಿನಾಯಕ ಜೋಷಿಯ Photo ಹಾಕಿದ್ರು. ಯಾವಾಗ Programe ಶುರುಆಗೋದು ಅಂತ ಕೇಳಿದ್ದಕ್ಕೆ ಇನ್ನೇನು ಆಗತ್ತೆ, ಇಬ್ಬರೂ RJಗಳು ಬರ್ತಾಇದಾರೆ ಅನ್ನೋ ಸಾಲುಗಳು 5 ಘಂಟೆಗೆ ಶುರುವಾದದ್ದು ಪ್ರತೀ ಅರ್ಧ ಘಂಟೆಗೆ ಪ್ರತಿದ್ವನಿಸುತ್ತಿತ್ತು. ಅಂತೂ ಇಂತೂ ಇಬ್ಬರೂ RJಗಳು Film Actor ತರುಣ್ ಜೊತೆಯಲ್ಲಿ ವೇದಿಕೆಗೆ ಬಂದೇಬಿಟ್ರು. ಅಲ್ಲಿ ಸ್ವಲ್ಪ ಕೂಗಾಟ ಕಿರುಚಾಟ ಎಲ್ಲ ಮಜವಾಗಿತ್ತು.

ಮಜ ಬೇಸರವಾಗಿ ಮಾರ್ಪಾಡಾಗಿದ್ದು ಕಾರ್ಯಕ್ರಮದ ಅಂತ್ಯದಲ್ಲಿ T-Shirt ಮತ್ತು Mugನ ಹಂಚೋವಾಗ. ಸತತವಾಗಿ ಎರಡುದಿನ ಗೆದ್ದಿದ್ದರೂ ನನಗೆ ಒಂದೂ T-Shirt ಮತ್ತುMug ಸಿಕ್ಕಲಿಲ್ಲ. ಕೆಲವರಿಗೆ ಮಾತ್ರ ಅದು ಸಿಕ್ಕರೂ ನನಗೆ ಮತ್ತೆ ಕೆಲವರಿಗೆ ಸಿಕ್ಕಲಿಲ್ಲ. ಅಲ್ಲಿಂದ ಬಂದದಕ್ಕೆ ಕೇವಲ RJ ಗಳನ್ನ ನೋಡಿ ಅದರಲ್ಲೇ ಸಮಾಧಾನ ಪಟ್ಟುಕೊಂಡು ವಾಪಾಸ್ ಬರೋಣ ಅಂದುಕೊಂಡೆ. ಆದರೆ RadioCity ಗೆ ಸಂಭಂದಿಸಿದ ಒಬ್ಬರು (ಮಧು) ಎದುರಿಗೆ ಬರುತ್ತಿದ್ದನ್ನ ನೋಡಿ ಅವರಿಗೆ ನಡೆದ ವಿಷಯ ತಿಳಿಸಿ ಸೋಮವಾರ ಅವರ Office ನಿಂದಲೇ ಅದನ್ನ ಪಡೆದುಕೊಳ್ಳುವ ಭರವಸೆ ಮಧುವಿನಿಂದ ಪಡೆದು ಮನೆಯತ್ತ ಪಯಣ ಬೆಳೆಸಿದೆ. ಅಂದಿನ ದಿನ "Radio City" Musicನ ಕಿಲಾಡಿಯಾಗಿ ಹೊರಹೊಮ್ಮಿತ್ತು.



ಶನಿವಾರದ ಆ ಘಟನೆಯ ನಂತರ ಮತ್ತೆ ಸೋಮವಾರ RadioCityಯ Officeಗೆ ಹೋಗಿ ನನ್ನ ಆ T-Shirt ಮತ್ತು Mugಅನ್ನ ತಂದೆ. ಇದಾದ ನಂತರ ಗುರುವಾರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಗ ನನ್ನ ಮೊಬೈಲ್ ರಿಂಗಣಿಸಿತು, ಯಾರಿರಬಹುದು ಎಂದು ನೋಡಿದಾಗ RadioCity ಆಫೀಸಿನ ನಂಬರ್ ಕಂಡಿತು. ಕಳೆದವಾರದ ಹಿಂದೆಯಷ್ಟೇ ಮ್ಯೂಸಿಕ್ ನ ಕಿಲಾಡಿಗಳು ಸ್ಪರ್ಧೆ ನಡ್ದಿದ್ದರಿಂದ ಆ ವಿಚಾರವಾಗೇನಾದರೂ ಈ ಕರೆ ಇರಬಹುದು ಅಂತ Phone call ರಿಸೀವ್ ಮಾಡ್ದಾಗ ಅತ್ತಕಡೆಯಿಂದ RJ Pradeepa ನ ಧ್ವನಿ ಕೇಳಿಸಿತು. ಶುಕ್ರವಾರ ಸಂಜೆ ಒಟ್ಟಿಗೇ Coffee ಕುಡ್ಯೋಣ ನಮ್ Officeಗೆ ಬರ್ತೀರಾ ?? ಅಂತ ಪ್ರದೀಪ ಕೇಳಿದಾಗ "ಖಂಡಿತಾ ಬಂದೇ ಬರ್ತೀನಿ" ಅಂತ ಖುಷಿಯಿಂದ ಒಪ್ಪಿಕೊಂಡೆ.

ಹೇಗಿದ್ದರೂ ವಾರಾಂತ್ಯವಾದ್ದರಿಂದ ಕೆಲಸವನ್ನ ಬೇಗ ಮುಗಿಸಿ ಸರಿಯಾಗಿ 6 ಘಂಟೆಗೆ ಸುರಿವ ಮಳೆಯಲ್ಲಿ RadioCity Office ಗೆ ಬಂದೆ. ಅಲ್ಲಿ ನನ್ನಂತೆಯೇ ಆಮಂತ್ರಿತ ಕೆಲವು ಕೇಳುಗರಿದ್ದರು. ಗರುಡಾ ಮಾಲಿನಲ್ಲಿ ಪ್ರದೀಪನನ್ನ ಗುರುತಿಸಿದ್ದರಿಂದ ಈಸಲ ಪ್ರಯಾಸಪಡದೇ ಗುರುತಿಸಿದೆ. ಆತ್ಮೀಯವಾಗಿ ಬರಮಾಡಿಕೊಂಡ ಪ್ರದೀಪ ಅಲ್ಲಿ ಬಂದಿದ್ದ ಕೇಳುಗರಿಗೆ ನನ್ನ ಕಿರುಪರಿಚಯ ಮಾಡಿಕೊಟ್ಟರು. ಮಳೆಯಲ್ಲಿ ನೆನೆದುಬಂದಿದ್ದ ನನಗೆ ಬಿಸಿ ಬಿಸಿ Tea ಕೊಟ್ಟರು. ಆತ್ಮೀಯವಾಗಿ ಹರಟಿದರು. ಆ ನಡುವೆ ಸ್ವಲ್ಪ Flash back ಘಟನೆಗಳನ್ನ ನೆನೆಯುತ್ತಾ ಹರಟೆ ಹೊಡೆಯುತ್ತಾ ಇರುವಾಗ ಅಲ್ಲಿಗೆ RJ Sweet heart ಸೌಜನ್ಯ ಬಂದರು. ಅವರೊಡನೆ ಮಾತನಾಡಿದ ನಂತರ Loveguru ಖ್ಯಾತಿಯ RJ ರಾಜೇಶ್ ಪ್ರದೀಪನೊಡಗೂಡಿ ಬಂದರು. ಎಲ್ಲಾ RJ ಗಳನ್ನ ನೋಡಿ ಖುಷಿಯಾಯ್ತು. ಎಲ್ಲರೂ Tea ಕುಡಿದ ನಂತರ ಪ್ರದೀಪ ತಮ್ಮ Radio station ತೊರಿಸಲು ನಮ್ಮನ್ನ ತಮ್ಮೊಡನೆ ಕರೆದೊಯ್ದರು. RJ ವಿನಾಯಕ ಜೋಷಿ ತಮ್ಮ City ಮಾತು ಕಾರ್ಯಕ್ರಮ ನಡೆಸಿಕೊಡುತ್ತಲಿದ್ದರು. ಮೊಟ್ಟಮೊದಲಿಗೆ ಒಂದು Radio Station ನ ನೋಡಿದೆ.



ಅಲ್ಲಿಂದ ಪ್ರದೀಪ, ರಾಜೇಶ್, ಮತ್ತು ವಿನಾಯಕ ಜೋಷಿಯೊಡನೆ ನಮ್ಮ Mobileನಲ್ಲಿ Photo ಕ್ಲಿಕ್ಕಿಸಿ ಪ್ರದೀಪನಿಗೆ ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ವಂದನೆ ಸಲ್ಲಿಸುತ್ತಾ ಅದೇ ಜಿನುಗುತ್ತಿದ್ದ ಮಳೆಯಲ್ಲಿ ನೆನೆದುಕೊಂಡು Radio city ಯ ಮಧುರ ಹಾಡುಗಳನ್ನ ಕೇಳಿಕೊಂಡು ನನ್ನ ಗೂಡು ಸೇರಿಕೊಂಡೆ.

ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ Happy manಗೆ ವಂದನೆಗಳು :) ಮತ್ತೊಮ್ಮೆ "ಒಟ್ಟಿಗೇ ಕಾಫೀ ಕುಡಿಯೋಣ, ನಮ್ಮ ಆಫೀಸಿಗೆ ಬರ್ತೀರಾ?" ಅಂತ ನೀವು ಕರೆಮಾಡ್ತೀರ ಅಂತ ಕಾಯ್ತಾ ಇದೀನಿ.


ಕೊನೆಯಲ್ಲಿ ನಾನು ಹೇಳೋದೇನು ಅಂದ್ರೆ ನೀವು RJ ಅಲ್ಲ, ಬದಲಾಗಿ RG ಅಂದರೆ....

ರೇಡಿಯೋ ಜಾಕಿ ಅಲ್ಲ, ರೇಡಿಯೋ ಗೆಳೆಯ.... :-)

Monday, February 16, 2009

ಫೆಬ್ರವರಿ ೧೪ ೨೦೦೯

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅನ್ನನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

Thursday, December 11, 2008

ಪರೋಕ್ಷ ಸಂಗಾತಿಗೆ...

ನಾ ನಿನಗಾಗಿ ನಿನ್ನ ದಿನವ
ಬೆಳಗುವ ಸೂರ್ಯನಾಗಬೇಕಿದೆ
ನಾ ನಿನಗಾಗಿ ಇರುಳಿನಲಿ
ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ,
ನಾ ನಿನ್ನಲಿರುವ ದುಃಖ ದುಮ್ಮಾನವನು
ಹೊತ್ತೋಯ್ಯುವ ನದಿಯಾಗಬೇಕಿದೆ,
ನಾ ನಿನ್ನಜೊತೆ ಜೊತೆಯಲಿ
ಹೆಜ್ಜೆಯಿಡುವ ನೆರಳಾಗಬೇಕಿದೆ,
ನಾ ನಿನ್ನ ಪ್ರೀತಿ ಪಡೆಯಬೇಕಿದೆ,
ನಿನ್ನೋಂದಿಗೆ ನಡೆಯಬೇಕಿದೆ
ದೂರ ಬಲು ದೂರ ಸಾಗಬೇಕಿದೆ
ನಾ ನಿನ್ನೊಳು ಬೆರೆಯಬೇಕಿದೆ
ನಾ ನಿನ್ನ ಕಾಣದಿದ್ದರೇನು,
ನಿನ್ನಯ ಸ್ಪರ್ಶವ ಕಂಡಿಹೆನು
ನೀ ಬರುವೆ ತಂಗಾಳಿಯ ನಡುವೆ ತೇಲುತಾ,
ಮನಕೆ ಮುದವ ನೀಡುತಾ
ನೀಲಿಗಗನದಿ ತೇಲುವ ಮೇಘಮಾಲೆಯ
ನಡುವೆ ನಾ ಕಾಣುವೆ ನಿನ್ನಯ ಚಿತ್ತಾರವ
ಇರುಳಿನ ತಂಪಾದ ಸಮಯದಲಿ ನಾ ಕಾಣುವೆ
ನಿನ್ನಯ ಚಂದವನು ಆ ಚುಕ್ಕಿಗಳ ಸೇರಿಸುತ...

Thursday, December 4, 2008

ಕೊಡುಗೆ




ಮೇಘಮಾಲೆಯ ತುಂತುರಿನ ಸಿಂಚನದಿ
ಮಿಂದೆದ್ದ ಕುಸುಮ ಆಗಸವ
ನೋಡುತಾ ಮುಗುಳ್ನಕ್ಕಿತ್ತು

ಅರಳಿನಿಂತ ಕುಸುಮವನ್ನು ಚುಂಬಿಸುತಾ
ಬೀಸಿಬಂದ ಗಾಳಿ ಅದರ
ಪರಿಮಳವ ಘಮ್ಮನೆ ಹರಡಿತ್ತು

ಗಾಳಿಯೊಡನೆ ಬೆರೆತ ಸುಗಂಧ
ದುಂಬಿಯ ಕರೆತಂದಿತ್ತು,
ಅರಳಿನಿಂತ ಕುಸುಮ ನಾಚಿ ರಂಗೇರಿತ್ತು

ರಂಗೇರಿದ ಕುಸುಮ ಕುಸುಮಬಾಲೆಯ
ಮುಡಿಯೇರಿತ್ತು, ಶೃಂಗಾರ ಕಾವ್ಯಕ್ಕೆ
ಮುನ್ನುಡಿ ಬರೆದಿತ್ತು

ಕುಸುಮಬಾಲೆಯ ಶೃಂಗಾರ ಕಾವ್ಯಕ್ಕೆ
ಹೃದಯವೊಂದು ಮಿಡಿದಿತ್ತು,
ಕಣ್ ಕಣ್ಣಲ್ಲೇ ಕವನ ಬರೆದಿತ್ತು

ಕವನದ ಛಾಪು ಹೃದಯದಲಿ
ಮೂಡಿತ್ತು, ಹೃದಯಗಳ ಮಿಲನ
ಮಹೋತ್ಸವ ಅನುದಿನವು ಸಾಗಿತ್ತು.

Monday, November 17, 2008

ಹುನ್ಕಲ್ ವುಡ್

ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕಜೀವನದಿಂದ ಸ್ವಲ್ಪ ಬದಲಾವಣೆ ಇರಲೆಂದು ನಮ್ಮ ಚಾರಣದ ತಂಡ ಡಿಸೆಂಬರಿನಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಕಳೆದಬಾರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ಕೈತಪ್ಪಿದ್ದರಿಂದ ಈ ಸಲವಾದರೂ ಚಾರಣಕ್ಕೆ ಹೋಗಲೇಬೇಕೆಂದು ಮೊದಲೇ ಮನದಲ್ಲಿ ಎಣಿಸಿದ್ದೆ. ನಾನು ಖಂಡಿತವಾಗಿ ಬರುವುದಾಗಿಯೂ ತಿಳಿಸಿದ್ದೆ.

ಆದರೆ ಸ್ವಲ್ಪದಿನಗಳ ನಂತರವಷ್ಟೇ ನೆನಪಾಗಿದ್ದದ್ದು.... ನಾವು ಚಾರಣಕ್ಕೆ ಹೊರಡುವ ದಿನಾಂಕದಂದೇ ಅಪ್ಪನ ಮಾಸಿಕ ಇದೆಯೆಂದು. ಚಾರಣಕ್ಕಿಂತಾ ಮಾಸಿಕ ಮುಖ್ಯವಾದದ್ದರಿಂದ ಈ ಸಲವೂ ಚಾರಣದ ಅವಕಾಶ ಕೈ ತಪ್ಪಿ ಹೋಯಿತು. ಪ್ರಕೃತಿಯ ಮಡಿಲಿನಲ್ಲಿ ಪ್ರತಿವರುಷವೂ ಕಳೆಯುತ್ತಿದ್ದ ದಿನಗಳನ್ನು ಈ ಸಲ ಕಳೆಯಲಾಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಮನೋಹರ ೨ ದಿನಗಳ ಚಾರಣದಬಗ್ಗೆ ಹೇಳಿದ. ಚಾರಣದ ಸ್ಥಳ, ಹೊರಡುವ ವೇಳೆ, ಅಲ್ಲಿಗೆ ಹೋಗುವ ವ್ಯವಸ್ಥೆ ಎಲ್ಲಾ ತಿಳಿದುಕೊಂಡು ನಾನು ಬರುವುದಾಗಿ ಹೇಳಿ ಆ ವಿಚಾರವಾಗಿ ಅದರಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡೆ. ಹರ್ಷ ಈ ಚಾರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಪ್ರಾಕ್-ಸಿಸ್ ಅನ್ನುವ ಕಂಪನಿಯಲ್ಲಿ ಕೆಲಸ ಮಾಡುವ ಅವರು ಮತ್ತು ಅವರ ಸಹೋದ್ಯೋಗಿಗಳ ಜೊತೆಯಲ್ಲಿ ನಾನೂ ಒಬ್ಬನಾಗಿ "ಹುನ್ಕಲ್ ವುಡ್" ಅನ್ನುವ ಧಾಮಕ್ಕೆ (Resort) ಹೋಗಿ ಹತ್ತಿರದಲ್ಲೇ ಇರುವ ಹುನ್ಕಲ್-ರಾಕ್ ಅನ್ನು ಹತ್ತುವುದು ನಮ್ಮ ಪೂರ್ವಯೋಜಿತ ಕಾರ್ಯಕ್ರಮವಾಗಿತ್ತು. ಅಂದಾಜು ೩೪ ಜನ ಒಟ್ಟಿಗೇ ಒಂದು ಬಸ್ಸಿನಲ್ಲಿ ಚಿಕ್ಕಮಗಳೂರಿನ ಮೂಲಕ "ಹುನ್ಕಲ್ ವುಡ್" ಧಾಮಕ್ಕೆ ಹೋಗಬೇಕಾಗಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದದ್ದರಿಂದ ಹರ್ಷ ಮೊದಲೇ ಅದನ್ನು ಕಾದಿರಿಸಿದ್ದರು. ಆ ೩೪ ಜನದಲ್ಲಿ ೪ ಪುಟ್ಟ ಮಕ್ಕಳೂ ಇದ್ದದ್ದು ವಿಷೇಶ.



ಪ್ರಕೃತಿಯ ಈ ಸೊಬಗನ್ನ ಸವಿಯಲು ನಾವು ನಾಡಿನ ಜನಜಂಗುಳಿಯಿಂದ, ಯಾಂತ್ರಿಕ ಬದುಕಿನಿಂದ ದೂರ ಅಂದರೆ ಚಿಕ್ಕಮಗಳೂರಿನಿಂದ ಅಂದಾಜು ೨೨ ಕಿ.ಮೀ ದೂರ ಬರಬೇಕು. ಇಲ್ಲಿಗೆ ಬಂದಾದಮೇಲೆ ಯಾವುದೇ ಮೊಬೈಲ್ ಕೆಲಸ ಮಾಡುವುದಿಲ್ಲ. ಬಿ.ಎಸ್.ಎನ್.ಎಲ್ ಬಿಟ್ಟು, ಅದು ಸಿಟಿಯ ಒಳಗಡೆ ಕೆಲಸ ಮಾಡದಿದ್ದರೂ ಇಲ್ಲಿ ಕೆಲಸ ಮಾಡುತ್ತದೆ ;)

ಇಲ್ಲಿಯೇ ವಾಸವಾಗಿರುವ ಸಹಾಯಕರು ನಮ್ಮ ಅಡುಗೆ, ತಿಂಡಿ ಮತ್ತು ಕಾಫಿಯ ವ್ಯವಸ್ಥೆ ಮಾಡಿದ್ದರು. ಇಲ್ಲಿಯ ರಾತ್ರಿಗಳನ್ನು ನೀವು ಮೇಣದಬತ್ತಿಯ ಸಹಾಯದಿಂದ ಕಳೆಯಬೇಕಾದೀತು, ಜೊತೆಯಲ್ಲಿ ಬ್ಯಾಟರಿಯನ್ನು ಕೊಂಡೊಯ್ದರೆ ಒಳಿತು. ಇಲ್ಲಿಗೆ ನೀವು ಈ ಮಾರ್ಗದಲ್ಲಿ ಬರಬಹುದು: ಬೆಂಗಳೂರು>ಚನ್ನರಾಯಪಟ್ಟಣ>ಹಾಸನ>ಬೇಲೂರು>ಚಿಕ್ಕಮಗಳೂರು>ಹೊಸಪೇಟೆ. ಅಲ್ಲಿಂದ ಅವರದೇ ಆದ ಸಾರಿಗೆ ವ್ಯವಸ್ಥೆಯಲ್ಲಿ ಹುನ್ಕಲ್ ವುಡ್ ತಲುಪಬೇಕು. ನೀವು ಕ್ರಮಿಸುವ ಅಂದಾಜು ದೂರ ೨೭೦ ಕಿ.ಮೀ. ಗಳು

ನಾವು ಬೆಂಗಳೂರನ್ನು ಶುಕ್ರವಾರ ರಾತ್ರಿ ಬಿಟ್ಟು ಶನಿವಾರ ಮುಂಜಾವದಂದು ಆ ಸ್ಥಳವನ್ನು ತಲುಪಿ, ಅಲ್ಲಿನ ಕಾರ್ಯಕ್ರಮಗಳನ್ನ ಮುಗಿಸಿ ಭಾನುವಾರ ರಾತ್ರಿ ಮರಳಿ ಬೆಂಗಳೂರಿಗೆ ಬರುವ ಯೋಜನೆಯನ್ನು ಹರ್ಷ ಮೊದಲೇ ಸಿದ್ದಪಡಿಸಿದ್ದರು.

ಪೂರ್ವನಿರ್ಧಾರಿತ ಯೋಜನೆಯಂತೆ ಖಾಸಗಿ ಬಸ್ಸನ್ನು ಬಾಡಿಗೆಗೆ ಪಡೆದುಕೊಂಡದ್ದರಿಂದ ಆಯ್ದ ಸ್ಥಳಗಳಿಂದ ನಾವೆಲ್ಲಾ ಆ ಬಸ್ಸನ್ನು ಹತ್ತಿ ರಾತ್ರಿ ಸುಮಾರು ರಾತ್ರಿ ೧೧.೩೦ ಕ್ಕೆ ಬಿಟ್ಟು ಬೆಳಗ್ಗೆ ಸುಮಾರು ೫.೩೦ ರ ಸಮಯಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ಹೋಲಿಸಿದರೆ ಅಲ್ಲಿನ ಚಳಿ ಒಂದು ಕೈ ಮೇಲೆ ಇದ್ದಂತಿತ್ತು. ರೆಸಾರ್ಟಿಗೆ ಹೋಗಲು ಇನ್ನು ಸಮಯವಿದ್ದದ್ದರಿಂದ ಅಲ್ಲೇ ಬಿಸಿ ಬಿಸಿ ಟೀ ಕುಡಿದು ನಂತರ ಮುಂದೆ ಸಾಗಿತ್ತು ನಮ್ಮ ಪಯಣ. ಆ ಚಳಿಯಲ್ಲಿ ಕೈಯಲ್ಲಿ ಬಿಸಿ ಬಿಸಿ ಟೀ ಕುಡಿಯುವ ಮಜವೇ ಬೇರೆ !!! ಗ್ರಾಹಕರಿಗೆ ಕಾದಿದ್ದ ಒಬ್ಬ ಟೋಪಿ ಮಾರುವವನಿಗೆ ನಮ್ಮ ಬಸ್ಸನ್ನು, ಬಸ್ಸಿನ ತುಂಬಾ ತುಂಬಿರುವ ಜನರನ್ನು ನೋಡಿ ಬಸ್ಸಿನಬಳಿಗೇ ತನ್ನ ಟೋಪಿ ತುಂಬಿದ ಚೀಲವನ್ನು ತಂದು ತನ್ನ ವ್ಯಾಪಾರವನ್ನು ಪ್ರಾರಂಭಿಸಿದ. ಅಲ್ಲಿಂದ ಹೊರಟ ನಮ್ಮ "ಹಂಸ" ಸುಮಾರು ೭.೦೦ ಸಮಯಕ್ಕೆ "ಹುನ್ಕಲ್ ವುಡ್" ಹತ್ತಿರದ ಮುಖ್ಯರಸ್ತೆಗೆ ಬಂದಿತ್ತು. ಅಲ್ಲಿಂದ ಅವರದೇ ಸಾರಿಗೆ ವ್ಯವಸ್ಥೆಯಲ್ಲಿ ನಾವು ಆ ಧಾಮಕ್ಕೆ ಹೋಗಬೇಕಾಗಿತ್ತು.

ಅಲ್ಲಿ ಮತ್ತೊಂದು ಚಹಾ ವಿರಾಮದ ನಂತರ ಸರಕುಸಾಗಾಣೆ ವಾಹನವೊಂದು ಅಲ್ಲಿನ ದಿನಗೂಲಿ ಕಾರ್ಮಿಕರನ್ನು ಹೊತ್ತು ಆ ಎಸ್ಟೇಟಿನ ಒಳಗೆ ಹೋಯಿತು. ಅದು ಮರಳಿ ನಮ್ಮ ಮುಂದೆ ಬಂದು ನಿಂತಾಗಲೇ ನಮಗೆ ತಿಳಿದದ್ದು, ಅದೇ ನಮ್ಮ ಮುಂದಿನ "ರಾಜಹಂಸ"ವೆಂದು. ನಾವೆಲ್ಲಾ ಅದರೊಳಗೆ (ಕುರಿಗಳು ಸಾರ್, ಕುರಿಗಳು) ಹತ್ತಿ ಯಾವ ಟೋರಾ ಟೋರಾದಲ್ಲೂ ಸಿಗದ ಮಜವನ್ನು ಅನುಭವಿಸಿ ೭.೫೦ಕ್ಕೆ ರೆಸಾರ್ಟ್ ತಲುಪಿದೆವು.

ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿ ತಿಂಡಿಯನ್ನು ತಿಂದು ಮಧ್ಯಾನ್ನದ ಊಟವನ್ನು ಕಟ್ಟಿಸಿಕೊಂಡು ಸುಮಾರು ೧೧.೨೦ಕ್ಕೆ ನಮ್ಮ ಚಾರಣವನ್ನು ಪ್ರಾರಂಭಿಸಿದೆವು. ಪುಟ್ಟಾಣಿ ರತನ್ ಪುಟ್ಟ ಬ್ಯಾಗ್ ಮತ್ತು ಪುಟ್ಟ ಬೈನಾಕ್ಯುಲರ್ ನೊಂದಿಗೆ ತಾನೂ ದೊಡ್ಡವರಿಗಿಂತ ಏನೂ ಕಡಿಮೆಯಿಲ್ಲವೆನ್ನುವಂತೆ ಬಂದಿದ್ದ. ಮಿಕ್ಕ ಪುಟಾಣಿಗಳು ತಮ್ಮ ಪೋಷಕರ ರಕ್ಷಣೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗುತ್ತಿದ್ದರು.



ಸಾಹಸಿಗರಿಗೆ, ಚಾರಣಿಗರಿಗೆ ಹೇಳಿಮಾಡಿಸಿದ ಈ ನಿಸರ್ಗತಾಣದಲ್ಲಿ ಸಣ್ಣ ಝರಿ, ಮನಮೊಹಕ ಪರ್ವತ ಶ್ರೇಣಿ, ದಟ್ಟವಾದ ಕಾಡುಗಳನ್ನೊಳಗೊಂಡಿರುವ ಈ ತಾಣ ಮುಖ್ಯವಾಗಿ ದಿನನಿತ್ಯದ ಜಂಜಾಟದಿಂದ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತ್ತು

ಮಧ್ಯಾನ್ನ ೧೨ರ ಸಮಯದಲ್ಲಿ ನಮ್ಮ ತಂಡಕ್ಕೆ ಹಸಿರು ಹಾವಿನ ದರುಶನವಾಯಿತು. ನವೆಂಬರ್ ತಿಂಗಳಿನಲ್ಲಿ ಮಳೆ ಇರದ ಕಾರಣ ನಮಗೆ ಜಿಗಣೆಗಳ ಕಾಟ ಇರಲಿಲ್ಲ, ಹಾಗೂ ಎಲ್ಲೆಲ್ಲಿ ತೇವಾಂಶವಿರುತ್ತದೋ ಅಲ್ಲೆಲ್ಲಾ ಅವುಗಳದೇ ರಾಜ್ಯಾಭಾರ... ಕಾಫೀ ಎಸ್ಟೇಟಿನಲ್ಲಿ ಕೆಲಸಾಮಾಡುವ ಕಾರ್ಮಿಕರು ಈ ಜಿಗಣೆಗಳ ಕಾಟದಿಂದ ಪಾರಾಗಲು ಸಾಸಿವೆ ಎಣ್ಣೆಗೆ ನಷ್ಯದ ಪುಡಿಯನ್ನು ಬೆರೆಸಿ ತಮ್ಮ ಕೈ ಕಾಲುಗಳಿಗೆ ಲೇಪಿಸಿಕೊಳ್ಳುತ್ತಾರಂತೆ, ಅದು ಅಲ್ಲಿ ಕೆಲಸಮಾಡಲು ಬಂದಿದ್ದವರಿಂದ ನಮಗೆ ತಿಳಿದುಬಂದ ವಿಷಯ. ಅಲ್ಲಿಂದ ಬಳಲಿದ್ದ ತಂಡದ ಸದಸ್ಯರನ್ನು ಹುರಿದುಂಬಿಸುತ್ತಾ ನಮ್ಮ ಹೆಜ್ಜೆಗಳನ್ನು ಹುನ್ಕಲ್-ರಾಕ್ ನ ಕಡೆಗೆ ಸವೆಸುತ್ತಿದ್ದೆವು. ಮಧ್ಯಾನ್ನ ೧.೨೦ ರ ಸಮಯದಲ್ಲಿ ಊಟಮಾಡುವ ಸಲುವಾಗಿ ಒಂದು ಝರಿಯಬಳಿ ತಂಗಿದ್ದೆವು, ಅಲ್ಲಿ ನಮಗೆ ಜಿಗಣೆ, ಮತ್ತು ಪಿಟ್ ವೈಪರ್ ಗಳು ಕಾಣಿಸಿದವು. ಈ ವೈಪರ್ ಅನ್ನುವ ಉರಗ ಪ್ರಭೇದ ಅತ್ಯಂತ ವಿಷಕಾರಿ. ನಮಗೆ ಕಂಡಿದ್ದು ಆಕಾರದಲ್ಲಿ ಪುಟ್ಟ ಮರಿಯಂತಿದ್ದರೂ ಅದರ ವಿಷ ಮಾರಣಾಂತಿಕವೇ. ಎಲ್ಲರ ಕ್ಯಾಮರಾ ಕಣ್ಣು ಆ ವೈಪರಿನತ್ತ ಹೊರಳಿತು.... ಕ್ಯಾಮರಾಗಳು ಮಾತನಾಡತೊಡಗಿದವು, ಕ್ಲಿಕ್.... ಕ್ಲಿಕ್... ಕ್ಲಿಕ್.... ಆ ವೈಪರ್ ತನ್ನ ಸುರುಳಿ ಸುತ್ತಿದ ಮೈಯನ್ನು ಛಾಯಾಗ್ರಾಹಕರಿಗೆ ಪ್ರದರ್ಶಿಸುತ್ತಾ ತನ್ನ ಬಳಿ ಬರಬೇಡಿರೆಂದು ಎಚ್ಚರಿಕೆ ನೀಡುತ್ತಿತ್ತು. ಅಲ್ಲಿಂದ ಸ್ವಲ್ಪ ಮುಂದೆ ಬಂದಂತೆ ಹಾವಿಗಿಂತಾ ನಾನೇನು ಕಮ್ಮಿ ಎನ್ನುವಂತೆ ಮತ್ತೊಂದು ಕೀಟ ತನ್ನ ಹೊಳಪಿನ ಮೈಮಾಟ ಪ್ರದರ್ಶಿಸಿತು.




ಚಾರಣಿಗರೆಲ್ಲಾ ಉತ್ಸಾಹದಿಂದ ಆ ಹೆಬ್ಬಂಡೆಯಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಮಿಕ್ಕವರು ಸುಸ್ತಾಗಿ ಹಿಂದೆ ಉಳಿದಿದ್ದೆವು. ಕಡಿದಾದ ಹುಲ್ಲುತುಂಬಿದ ಆ ಪರ್ವತವನ್ನು ಹತ್ತಲು ಅನುಭವ ಬೇಕೇ ಬೇಕು. ನಮ್ಮೊಂದಿಗೆ ಬಂದಿದ್ದ ಗೈಡ್ ನಮ್ಮಿಂದ ದೂರ ಹೋಗಿದ್ದರಿಂದ ನಮ್ಮ ಮತ್ತು ಅವರ ನಡುವಣ ಸಂಪರ್ಕ ಇರಲಿಲ್ಲ. ಹಾಗಾಗಿ ನಾವು ಹಿಂದುಳಿಯಬೇಕಾಯಿತು. ನಾವೆಲ್ಲಾ ಅಲ್ಲೇ ಕುಳಿತು ನಿಸರ್ಗದ ಸೊಬಗನ್ನು ಸವಿಯುತ್ತಲಿದ್ದರೆ ಮೇಲಿನ ತಂಡ ಆ ಹೆಬ್ಬಂಡೆಯನ್ನು ತಲುಪಲೇ ಬೇಕೆಂದು ತನ್ನ ಚಾರಣವನ್ನು ಮುಂದುವರಿಸಿತ್ತು. ಮುಂದಿನ ದಾರಿ ಕಡಿದಾದ್ದರಿಂದ ನಮ್ಮ ವಿಭಜಿತ ತಂಡ ಸುಮಾರು ೩.೦೦ ಘಂಟೆಯ ಸಮಯದಲ್ಲಿ ಮರಳಿ ರೆಸಾರ್ಟಿಗೆ ಹೋಗುವ ನಿರ್ಧಾರಕ್ಕೆ ಬಂದೆವು. ಹತ್ತುವಾಗ ನಿಂತು ಹತ್ತಿದ್ದ ತಂಡದ ಸದಸ್ಯರು ಇಳಿಯುವಾಗ ಪುಟ್ಟ ಮಕ್ಕಳು ಜಾರುಬಂಡೆಯಲ್ಲಿ ಜಾರಿದಂತೆ ಜಾರಿಕೊಂಡು ಇಳಿಯುತ್ತಿದ್ದರು. ಚಾರಣವನ್ನು ಮುಗಿಸಿ ಮರಳಿ ರೆಸಾರ್ಟಿಗೆ ಬಂದಾಗ ಸಂಜೆ ೬.೩೦ರ ಸಮಯ.

ಅಲ್ಲಿಂದ ಬಂದು ಸ್ವಲ್ಪ ಸುಧಾರಿಸಿಕೊಂಡಮೇಲೆ ಕರೆಂಟ್ ಇಲ್ಲದ ಕಾರಣ ನನ್ನ ಕ್ಯಾಮರದ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲಾಗಲಿಲ್ಲ. ಸಂಜೆಯಹೊತ್ತಿಗೆ ಬಿಸಿ ಬಿಸಿ ಮೆಣಸಿನಕಾಯಿ ಭಜ್ಜಿ, ಮತ್ತೆ ಕಾಪಿ ಬಂದಿತು. ಬೆಂಗಳೂರಿನಲ್ಲಿ ಬಹಳ ಕಡಿಮೆ ಕಾಫಿ ಕುಡಿಯುವ ನಾನು ಅಲ್ಲಿ ಅವರು ಕೊಟ್ಟಾಗಲೆಲ್ಲ ಬೇಡ ಎನ್ನದೇ ಕುಡಿಯುತ್ತಿದ್ದೆ, ಅಲ್ಲಿಯ ಚಳಿಗೆ ಅದು ಅತ್ಯವಶ್ಯಕ. ರಾತ್ರಿ Camp fireಹಾಕಿಕೊಂಡು ಅದರಲ್ಲಿಯ ಬಿಸಿಗೆ ಮೈಒಡ್ಡಿ ಕುಳಿತು ನಮಗೆ ತಿಳಿದಿರುವ ಹಾಡುಗಳನ್ನ ನಮ್ಮದೇ ರೀತಿಯಲ್ಲಿ ಹಾಡಿ, ಮಲಗುವ ಮುಂಚೆ ಮಲ್ಲಿ ಅವರಿಂದ "ಪಾಚೊ ನಾ ಆಯೋ" ಕಥೆಯನ್ನು ಕೇಳಿ ನಂತರ ಎಲ್ಲಾ ತಮ್ಮ ತಮ್ಮ ಕನಸಿನಲೋಕಕ್ಕೆ ಹೊರಳಿದರು.


ಬೆಳಿಗ್ಗೆ ಮನೋಹರ ಕತ್ತಿಗೆ ತನ್ನ ಕ್ಯಾಮರವನ್ನ ತೂಗುಹಾಕಿಕೊಂಡು ಪಕ್ಷಿವೀಕ್ಷಣೆಗೆ ಹೊರಟ. ಅಲ್ಲಿ ನಮಗೆ "ಬೀ ಈಟರ್" "ವ್ಯಾಗ್ ಟೈಲ್" "ಬುಲ್ ಬುಲ್" ಇವೇ ಮೊದಲಾದ ಪಕ್ಷಿಗಳನ್ನು ನೋಡುವ ಅವಕಾಶ ದೊರಕಿತು. ಬೆಳಗಿನ ತಿಂಡಿ ಮುಗಿಸಿ ಅದೇ ಬಂಗಲೆಯ ಹತ್ತಿರದಲ್ಲಿದ್ದ ಒಂದು ಸಣ್ಣ ಝರಿಯನ್ನು ನೋಡಲು ನಮ್ಮತಂಡ ಹೊರಟಿತು. ಸಾಮಾನ್ಯವಾಗಿ ನಮ್ಮಲ್ಲಿ ಕಾಣಸಿಗುವ Dragan flyನ ಮತ್ತೊಂದು ಪ್ರಭೇಧ ನಮ್ಮನ್ನು ಚಕಿತಗೊಳಿಸಿತು. ಸಾಮಾನ್ಯ ಚಿಟ್ಟೆಯಂತೆ ಹಾರುತ್ತಿದ್ದ ಆ ಚಿಟ್ಟೆ ಹೋಲಿಕೆಯಲ್ಲಿ Dragan flyನಂತಿತ್ತು. ಸಾಮಾನ್ಯವಾಗಿ Dragan flyಗಳು ಕುಳಿತಾಗ ತಮ್ಮ ರೆಕ್ಕೆಯನ್ನು ಅಗಲವಾಗಿ ಹರಡಿ ಕೂರುತ್ತವೆ, ಆದರೆ ಈ Dragan flyಪ್ರಭೇಧ ತನ್ನ ರೆಕ್ಕೆಯನ್ನು ಮಡಚಿ ಕೂರುತ್ತಿತ್ತು.



ಆ ಸೊಬಗನ್ನು ಸವಿಯುತ್ತಾ ನಂತರ ಅಲ್ಲಿಂದ ನಮ್ಮ ತಾಣಕ್ಕೆ ಮರಳಿ ಬಂದೆವು. ಅಲ್ಲಿ ಊಟಮಾಡಿಕೊಂಡು ಮತ್ತದೇ "ರಾಜಹಂಸ" ದಲ್ಲಿ ಮುಖ್ಯರಸ್ತೆಗೆ ಬಂದು ನಮಗಾಗಿ ಕಾದು ಕುಳಿತಿದ್ದ "ಹಂಸ"ವನ್ನೇರಿ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆವು. ಪಯಣದ್ದ ಪ್ರಾರಂಭದಲ್ಲಿ ನಮ್ಮ ಹಂಸದಲ್ಲಿ Sansui ಚಿತ್ರ ಪ್ರದರ್ಶನವಾಯಿತು. ನಂತರ ಹಿಂದಿನ ಸಾಲುಗಳಲ್ಲಿ ಕುಳಿತಿದ್ದ ನಮ್ಮ ಮಧುರ !!!! ಕಂಠದಿಂದ ಸುಶ್ರಾವ್ಯ ಗಾನಸಿರಿ ಶುರುವಾಗಿ ಅದು ಬೆಂಗಳೂರಿನ ತನಕ ಮುಂದುವರಿದಿತ್ತು. ೨ ದಿನಗಳಿಂದ ಜೊತೆಯಲ್ಲಿದ್ದ ತಂಡದ ಸದಸ್ಯರು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿದ್ದರು.

Thursday, November 13, 2008

ಪ್ರೀತಿ ಮೂಡಿದಾಗ...

ಛೇ....

ನಾನು ಹೀಗೆ ಮಾಡಬಾರದಿತ್ತು.....
ಆ ಪುಟ್ಟ ಮನಸ್ಸಿಗೆ ನೋವು ನೀಡಬಾರದಿತ್ತು....
ನಾನು ಅವಳನ್ನು ನೋಯಿಸಿಬಿಟ್ಟೆ ಕಣೋ !!!!
ಅವಳ ಆ ಕಣ್ಣುಗಳಿಂದ ಕಣ್ಣೀರಿಳಿಸಿಬಿಟ್ಟೆ....
ದೇವರು ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ....
ಅಲ್ಲ ಅಲ್ಲ ತಪ್ಪು....
ಈ ಪ್ರಶ್ನೆ ಬರುವುದೇ ಇಲ್ಲ ಅಲ್ವೇನೋ ???
ನಾನು ಈ ರೀತಿ ಮಾಡಿದ್ದು ಅವನ ಸಹಾಯದಿಂದನೇ ಅಲ್ವಾ ?
ಅವ್ನು ನನ್ಗೆ ಯಾಕೆ ಈ ರೀತಿ ತೊಂದ್ರೆ ಕೊಡ್ತ ಇದಾನೆ ?
ನಾನು ಮತ್ತೆ ಅವಳು ಗೆಳೆತನದಲ್ಲಿ ಖುಷಿಯಾಗಿದ್ವೋ ಆದ್ರೆ ಅದ್ಯಾವತ್ತು ಈ ರೀತಿ ಪ್ರೀತಿಗೆ ತಿರುಗಿತ್ತೋ ನನ್ಗೇ ಗೊತ್ತಾಗ್ಲಿಲ್ಲ ಕಣೋ....

ಇದು ಗಿರಿಧರ ತನ್ನ ಆಪ್ತಗೆಳೆಯ ಶಶಾಂಕನೊಂದಿಗೆ ಆಡಿದ ನೋವು ತುಂಬಿದ ಮಾತುಗಳು... ಗಿರಿಧರ ಪ್ರತೀದಿನ ಅವನ ಆಗು ಹೋಗುಗಳನ್ನ ಶಶಾಂಕನೊಂದಿಗೆ ಚಾಚೂ ತಪ್ಪದೇ ಹೇಳುತ್ತಿದ್ದ, ಅಂದು ಅವನು ಅಂದು ಪುಟ್ಟ ಮಗುವಾಗಿದ್ದ... ನೋವು ತುಂಬಿದ ಹೃದಯದಿಂದ ಸೊರಗಿಹೋಗಿದ್ದ. ಕಾಲೇಜಿನಲ್ಲಿ ವ್ಯಾಸಂಗಮಾಡುವಾಗ ಇವರಿಬ್ಬರ ಗೆಳೆತನ ಪ್ರಾರಂಭವಾದದ್ದು... ಒಂದು ಜೀವ ಎರೆಡು ದೇಹದಂತಿದ್ದ ಆ ಇಬ್ಬರ ಗೆಳೆತನ ನಿತ್ಯ ನೂತನವಾಗಿತ್ತು. ಗೆಳೆಯರು ಎಂದರೆ ಹೀಗಿರಬೇಕು- ಇವರೇ ಬೇರೆಯವರಿಗೆ ಮಾದರಿ ಎಂದು ಎಲ್ಲಾ ಹೊಗಳುತ್ತಿದ್ದರು.

ಗಿರಿಧರ ಸ್ವಭಾವದಲ್ಲಿ ಸಾಧು, ಮೃದು ಹೃದಯಿ. ಬಹಳ ಬೇಗ ನೊಂದುಕೊಳ್ಳುವ ಅವನು ಅಂದು ಶಶಾಂಕನೊಡನೆ ತನ್ನ ಜೀವನದಲ್ಲಾದ ಘಟನೆಯನ್ನು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಒಂದೇ ಊರಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಬೇರೆ ಬೇರೆ ಸ್ಥಳದಲ್ಲಿದ್ದದ್ದರಿಂದ ಕೇವಲ ದೂರವಾಣಿಯಲ್ಲಿ ಸಂವಾದ ಮಾಡುತ್ತಿದ್ದರು.

ಗಿರಿಧರನ ಮತ್ತು ಲಾಸ್ಯಳ ಪರಿಚಯವಾಗಿ ೧ ವರುಷ ೬ ತಿಂಗಳು ಕಳೆದಿದ್ದರೂ ಅವರು ಒಬ್ಬರನ್ನೊಬ್ಬರು ಭೇಟಿಮಾಡಿರಲಿಲ್ಲ. ಪರಸ್ಪರ ಪ್ರೀತಿಸುತ್ತಿದ್ದ ಯುವಜೋಡಿ ಅದು. ತಮ್ಮದೇ ಆದ ಕನಸುಗಳಲೋಕದಲ್ಲಿದ್ದ ಅವರಿಗೆ ವಾಸ್ತವ ಬದುಕಿನ ಕಟು ಸತ್ಯದ ಅರಿವಾಗಿರಲಿಲ್ಲ. ಕೆಲಸದಲ್ಲಿ ಉತ್ತಮ ಪ್ರಗತಿಹೊಂದಿ ಆಕೆಯ ಮನೆಯಲ್ಲಿ ಆಕೆಯನ್ನು ವಿವಾಹವಾಗುವ ಕನಸ ಕಂಡಿದ್ದ. ಆದರೆ ಅವನ ಮನೆಯಲ್ಲಿನ ಪರಿಸ್ಥಿತಿ ಅವನನ್ನು ಆಕೆಯಿಂದ ದೂರಮಾಡಿತ್ತು. ಪ್ರತಿದಿನ ಸಮಯದ ಅರಿವಿಲ್ಲದೇ ಕೇವಲ ದೂರವಾಣಿಯ ಸಂಪರ್ಕದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು... ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಅಡಿಪಾಯವಿಲ್ಲದ ಕಟ್ಟಡದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ತಮ್ಮದೇ ಆದ ಪುಟ್ಟ ಮನೆ, ಮನೆಯಲ್ಲಿ ತಮ್ಮ ಸಂಸಾರದ ಕನಸ ಹೆಣೆಯುತ್ತಿದ್ದರು. ಶಶಾಂಕ ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಮತ್ತು ಗಿರಿಧರ-ಲಾಸ್ಯರ ಸಂಭಂದವನ್ನು ಗೌರವಿಸುತ್ತಿದ್ದ. ಪ್ರತಿದಿನ ಲಾಸ್ಯಳೊಂದಿಗೆ ಮಾತನಾಡಿ ಶಶಾಂಕನೊಂದಿಗೆ ಮಾತನಾಡಿದರೆ ಗಿರಿಧರನಿಗೆ ಒಂದುರೀತಿಯ ಸಮಾಧಾನ. ಗಿರಿಧರ-ಲಾಸ್ಯರ ಜೋಡಿ ಎಲ್ಲಾ ಯುವಪ್ರೇಮಿಗಳಂತೆ ಇರಲಿಲ್ಲ. ಪರಸ್ಪರ ಗೌರವಿಸುತ್ತಾ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರು. ಮುಂದೆ ಒಮ್ಮೆ ತಾವು ಬೇರೆ ಬೇರೆ ಆಗುವ ಸಂಧರ್ಭ ಒದಗಿ ಬಂದರೂ ಧೈರ್ಯಗೆಡದೇ ಅದನ್ನು ಎದುರಿಸಬೇಕೆಂದು ನಿರ್ಧರಿಸಿದ್ದರು.

ಅಂದು ಆಕಸ್ಮಿಕವಾಗಿ ಆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಗಿರಿಧರನ ಮನೆಯವರು ಸಂಪ್ರದಾಯಸ್ಥರು. ಗಿರಿಧರನಿಗೆ ಮದುವೆ ಮಾಡುವ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ನಡೆದಿತ್ತು. ಮೊದಲು ಹುಡುಗಿಯ ಚಿತ್ರವನ್ನು ನೋಡಿ ನಂತರ ಜಾತಕವನ್ನು ನೋಡಿ ಅದೆರಡೂ ಒಪ್ಪಿಗೆಯಾದರೆ ಮುಂದಿನ ಮಾತುಕತೆ ಮುಗಿಸಿ ಮದುವೆ... ಗಿರಿಧರನಿಗೆ ಇದೆಲ್ಲಾ ತಿಳಿದಿದ್ದರೂ ಆತ ಲಾಸ್ಯಳನ್ನ ಪ್ರೀತಿಸುತ್ತಿದ್ದ. ಆ ವಿಚಾರವಾಗಿ ಆಕೆಯೊಡನೆ ಸಮಾಲೋಚನೆಕೂಡಾ ನಡೆಸಿದ್ದ. ಪರಸ್ಪರ ಒಪ್ಪಿಗೆಯಾದಮೇಲೆ, ಜಾತಕದ ಪ್ರಶ್ನೆ ಕಾಡುವುದಿಲ್ಲವೆಂದು ಅವರಿಬ್ಬರ ನಂಬಿಕೆ. ಆದರೆ ಒಂದು ದಿನ ಗಿರಿಧರನ ತಾಯಿಗೆ ತನ್ನ ಮನದ ಇಂಗಿತವನ್ನ ತಿಳಿಸಬೇಕೆನಿಸುವಷ್ಟರಲ್ಲಿ ಆತನ ತಾಯಿ ಮದುವೆಯ ವಿಚಾರ ಮಾತನಾಡತೊಡಗಿದರು.

"ನೋಡೋ ಗಿರೀ... ನಾನು ಮೊನ್ನೆ ಊರಿಗೆ ಹೋಗಿದ್ದಾಗ ಸುಬ್ಬಾಶಾಸ್ರಿಗಳ ಮಗಳು ಸಿಕ್ಕಿದ್ಳು ಕಣೋ... ಈಗ ಚಂದ ಕಾಣ್ತಾಳೆ... ಅವ್ಳಿಗೂ ಡಿಗ್ರೀ ಆಗಿದ್ಯಂತೆ.... ಹುಡುಗೀ ಅಂದ್ರೆ ಹಾಗಿರ್ಬೇಕು ನೋಡು. ದೊಡ್ಡವ್ರು ಅಂದ್ರೆ ಅವ್ಳಿಗೆ ಗೌರವ ಇದೆ. ನನ್ಗೆ ಅಂತವ್ಳ್ನೇ ಸೊಸೆಯಾಗಿ ತಂದ್ಕೋಬೇಕು ಅಂತ ಆಸೆ ಕಣೋ... ನೀನು ಅದಿಕ್ಕೆ ಒಪ್ಕೋತೀಯ ಅಂತನೂ ಗೊತ್ತು. ನನ್ ಕಣ್ ಮುಚ್ಚೋದ್ರೋಳ್ಗೇ ನಿನ್ ಮದ್ವೆ ನೋಡ್ಬೇಕು ಅಂತ ಆಸೆ. ನೆರವೇರಿಸ್ಕೊಡ್ತೀಯಾ......"

ಈ ವಿಚಾರವನ್ನ ಕೇಳಿ ಗಿರಿಧರನಿಗೆ ಸಿಡಿಲು ತಲೆಯಮೇಲೆರಗಿದ ಹಾಗಾಯಿತು... ಇನ್ನೂ ಒದುತ್ತಿರುವ ಅವನ ಲಾಸ್ಯಳಿಗೆ ಈ ವಿಚಾರವನ್ನ ಹೇಳುವುದು ಹೇಗೆ ? ಮುಂದಿನ ಜೀವನದಬಗ್ಗೆ ಸುಂದರ ಕನಸುಗಳನ್ನ ಹೆಣೆದಿರುವ ನಾವಿಬ್ಬರೂ ದೂರ ದೂರವಾದರೆ ನಮ್ಮ ಭವಿಷ್ಯದ ಕತೆ ಏನಾದೀತು ?? ಈ ವಿಚಾರವನ್ನು ಅವಳೊಡನೆ ಪ್ರಸ್ತಾಪ ಮಾಡುವುದಾದರೂ ಹೇಗೆ ? ತಲೆಯಲ್ಲಿ ನೂರಾರು ರೀತಿಯ ಪ್ರಶ್ನೆಗಳ ಸುರಿಮಳೆಗೆ ಗಿರಿಧರ ತತ್ತರಿಸಿ ಹೋಗಿದ್ದ...

ಅಂದಿನಿಂದ ಅವನಿಗೆ ಲಾಸ್ಯಳ ಜೊತೆಯಲ್ಲಿ ಮಾತನಾಡುವುದು ಕಷ್ಟವಾಗ ತೊಡಗಿತು. ಲಾಸ್ಯಳ ಹಲವು ಪ್ರಯತ್ನದ ನಡುವೆಯೂ ಗಿರಿಧರ ಅವನ ಮನೆಯಲ್ಲಿ ನಡೆದ ವಿಷಯವನ್ನ ಹೇಳಲಾಗಲಿಲ್ಲ. ಅವನ ಆ ರೀತಿಯ ವರ್ತನೆ ಲಾಸ್ಯಳ ಮೇಲೆ ಬಹಳವಾಗಿ ಪರಿಣಾಮಬೀರತೊಡಗಿತು. ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಆದರೆ ಗಿರಿಧರನ ವರ್ತನೆ ಆಕೆಗೆ ಅರ್ಥವಾಗಲಿಲ್ಲ. ಪರಿಪರಿಯಾಗಿ ಕೇಳಿದರೂ ಗಿರಿಧರನಿಂದ ಉತ್ತರ ಬಾರದ ಕಾರಣ ಲಾಸ್ಯ ತನಗಾಗುತ್ತಿರುವ ವೇದನೆಯನ್ನು ಅವನೊಡನೆ ಹೇಳಿದಳು.

ಇಷ್ಟುದಿನಗಳಿಂದ ಒಳಗೆ ಬಚ್ಚಿಟ್ಟಿದ್ದ ನೋವನ್ನು ಅಂದು ಗಿರಿಧರ ಹೊರಗೆಡವಿದ: ದಯವಿಟ್ಟೂ ನನ್ನ ಕ್ಷಮಿಸಿಬಿಡು.... ನಾನು ನಿನ್ನ ಮನಸ್ಸನ್ನ ಕೆಡಿಸಿದವನು... ಆದರೆ ನಾನು ಇಂದು ನಿಸ್ಸಹಾಯಕನಾಗಿದ್ದೇನೆ. ಮನೆಯಲ್ಲಿ ಅಮ್ಮನ ಬೇಡಿಕೆಯನ್ನು ಈಡೇರಿಸದ ಮಗ ಎನ್ನುವ ಪಟ್ಟ ನನ್ನಿಂದ ಕಟ್ಟಿಕೊಳ್ಳಲಾಗುವುದಿಲ್ಲ, ಹಾಗೆಂದು ನನ್ನ ಪ್ರೀತಿಗೂ ಮೋಸ ಮಾಡಲಾಗುವುದಿಲ್ಲ. ನನಗೆ ದಾರಿ ತೋಚದಾಗಿದೆ..... ಇಷ್ಟು ಹೇಳುತ್ತಲೇ ಅವನ ಕಣ್ಣೀರು ಧರೆಗಿಳಿಯತೊಡಗಿತು. ಪುಟ್ಟಮಗುವಿನಂತೆ ಅಳುತ್ತಾ ನಿಂತುಬಿಟ್ಟ. ಇತ್ತಕಡೆ ಲಾಸ್ಯಳಿಗೆ ಅವನ ಮಾತುಗಳನ್ನು ಕೇಳಿ ಯಾವರೀತಿ ಪ್ರತಿಕ್ರಿಯಿಸಬೇಕೆಂಬುದು ತಿಳಿಯಲಿಲ್ಲ. ಎರಡೂ ಕಡೆಯಿಂದ ಕೇವಲ ಬಿಕ್ಕಳಿಸಿ ಅಳುವ ಧನಿಯನ್ನು ಬಿಟ್ಟು ಬೇ‍ರೆ ಏನೂ ಸದ್ದಿರಲಿಲ್ಲ....

Friday, November 7, 2008

ನಿಮ್ಮಲ್ಲಿ ನಲ್ಮೆಯ ವಿನಂತಿ...

ನಾವು ನಮ್ಮ ಕಳೆದುಹೋದ ದಿನಗಳತ್ತ ತಿರುಗಿ ನೋಡಿದರೆ ಎಂದಾದರೂ ಒಮ್ಮೆ ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಅಥವಾ ಕರಪತ್ರ ಬಂದಿರಬಹುದು... "ಜೈ ಸಂತೋಷೀ ಮಾ" ...... ಹೀಗೆ ಆರಂಭವಾಗುವ ಪತ್ರ "ಇದನ್ನು ____ ಜನರಿಗೆ ಕಳುಹಿಸಿದರೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಡುಕಾಗುತ್ತದೆ" ಇಲ್ಲಿಯವರೆಗೆ ಇರುತ್ತಿತ್ತು. ಆದರೆ ಕಾಲ ಬದಲಾದಂತೆ ಇದು ಮರೆಯಾಯಿತೆಂದೇನಲ್ಲ, ಇದನ್ನು ಕಳುಹಿಸುವ ಜನರು ಹೊಸಾ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಈ ರೀತಿಯ ಸಂದೇಶಗಳನ್ನ ಬದಲಾಯಿಸಿಕೊಂಡಿದ್ದಾರೆ... ಅಂಚೆಯನ್ನು ಮರೆತು ಮೊಬೈಲಿಗೆ, ಈ-ಮೈಲಿಗೆ ದಾಸರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು e-mailಗಳು, SMSಗಳು, Orkut scrapಗಳು ನಿಮಗೆ ಅಷ್ಟಾಗಿ ಪರಿಚಯವಿಲ್ಲದವರಿಂದ ಬಂದಿರುತ್ತದೆ, ಅದರ ಅಡಕ ಈ ಮೇಲೆ ಹೇಳಿದ್ದಕ್ಕಿಂತಾ ಭಿನ್ನವೇನಲ್ಲ... "ಇದು _____ ದೇವಿಯ/ದೇವರ ಪವಾಡ... ಇದನ್ನು ೨೦ ಜನಗಳಿಗೆ ಕಳುಹಿಸಿದರೆ ನಿಮ್ಮ ಭವಿಷ್ಯ ಉತ್ತಮವಾಗುವುದು, ಕಡೆಗಾಣಿಸಿದರೆ ಕೆಡುಕಾಗುವುದು. ನಾನು ಇದನ್ನು ನಿಮಗೆ ಕಳುಹಿಸಲೇ ಬೇಕಾಗಿದೆ, ಕ್ಷಮೆ ಇರಲಿ" ಇತ್ಯಾದಿ ಇತ್ಯಾದಿ...

ದೇವರು ಅಥವಾ ದೇವತೆಯ ಹೆಸರು ಜೈ ಸಾಯಿನಾಥ್, ಜೈ ಅಂಬಾ..... ಏನಾದರೂ ಆಗಿರಬಹುದು ಹೀಗೇ ಪಟ್ಟಿ ಮಾಡುತ್ತಲಿದ್ದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಈ ಪಟ್ಟಿಯಲ್ಲಿ ಅಲ್ಲ, ಜೀಸಸ್ ದೇವರುಗಳೂ ಸೇರಿದ್ದಾರೆ. ಮೇಲಿನ ಹೆಸರನ್ನು ನೋಡಿಯೇ ಆಸ್ತಿಕರು ದೇವರಮೇಲಿನ ಭಕ್ತಿಯಿಂದಲೋ, ಭಯದಿಂದಲೋ, ತಮ್ಮ ಭವಿಷ್ಯದ ಚಿಂತೆಯಿಂದಲೋ ತಮ್ಮ ಪರಿಚಯದವರಿಗೆ ಅದನ್ನು ಕಳುಹಿಸುತ್ತಾರೆ. ಅವರ ಮಟ್ಟಿಗೆ ಅದು ಕೇವಲ ಒಂದು ಸಂದೇಶ ಮಾತ್ರ, ಆದರೆ ಅದರ ಹಿಂದೆ ತಂತ್ರಜ್ಞಾನ ತಿಳಿಯುವ ಆಸಕ್ತಿ ಅವರಲ್ಲಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪನಿಗಳು ನೀಡಿರುವ ಉಚಿತ SMS package ನಿಂದ ಆ ಸಂದೇಶ ಕಳುಹಿಸುವ ವ್ಯಕ್ತಿಗೆ ಯಾವುದೇ ಖರ್ಚಿಲ್ಲದೇ ತನ್ನ ಕೆಲಸ ಆಗಿಹೋಗುತ್ತದೆ. ಆದರೆ ಅದೇ ಒಂದು e-mail ಆದರಂತೂ ಒಂದು ನಯಾಪೈಸೆ ಕೂಡಾ ಖರ್ಚಿಲ್ಲ... ಉಚಿತವಾಗಿ ತಮ್ಮ ಪರಿಚಯಸ್ಥರ e-mailಐಡಿ ಗಳನ್ನ ಹಾಕಿ ಕಳುಹಿಸಿದರಾಯಿತು. e-mailವಿಚಾರದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಹಳ ದೊಡ್ಡಮೊತ್ತವನ್ನು ವ್ಯಯಿಸುತ್ತಿರುವುದು ಕಳುಹಿಸಿವವನ ಗಮನಕ್ಕೆ ಬರುವುದಿಲ್ಲ. ಅವನ ಮಟ್ಟಿಗೆ ಅದು ಕೇವಲ ಒಂದು ಸಂದೇಶವಷ್ಟೇ... ಆದರೆ ಆ ಸಂದೇಶವನ್ನ ಸ್ವೀಕರಿಸುವ ವ್ಯಕ್ತಿಗೆ ಮೇಲೆ ಹೇಳಿದಂತೆ ಅಪಾರ ನಂಬಿಕೆ ಇದ್ದಲ್ಲಿ ಆತ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ, ಕಳುಹಿಸದೇ ಬೇರೆ ದಾರಿ ಇಲ್ಲ... ಹಾಗಾಗಿ ಅವನಿಂದ ಆ e-mail ಮತ್ತಷ್ಟು e-mailಐಡಿ ಗಳಿಗೆ ತಳ್ಳಲ್ಪಡುತ್ತದೆ. ಅದರಿಂದ ಆಗುವ ಲಾಭ ???

ಸುಮ್ಮನೆ ಸಮಯದ ನಷ್ಟ ಮಾನಸಿಕ ಕಿರಿಕಿರಿ ಇತ್ಯಾದಿ.... ಈ ಮೇಲಿನ ಸಂದೇಶಗಳು ಕೇವಲ ದೇವರಿಗೆ ಸೀಮಿತವಾಗಿಲ್ಲ, ಅದು ನಿಮ್ಮ ಗೆಳೆತನಕ್ಕೂ ಸವಾಲೊಡ್ಡಬಹುದು.... "ನಿನಗೆ ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ಇದ್ದರೆ ನನಗೂ ಸೇರಿದಂತೆ ಇದನ್ನು ೨೦ ಜನರಿಗೆ ಕಳುಹಿಸು, ಎಷ್ಟು ಜನ ನಿನ್ನ ಬಗ್ಗೆ ಕಾಳಜಿ ಹೊಂದಿದ್ದರೆಂದು ನಿನಗೆ ಅರಿವಾಗುತ್ತದೆ". ಕೇವಲ ಸಂದೇಶ ಕಳುಹಿಸಿದರೆ ಮಾತ್ರಕ್ಕೆ ಕಾಳಜಿಯೆ ??? ಒಂದು ರೀತಿಯಲ್ಲಿ ಇಂತಹಾ ಸಂದೇಶಗಳು ಮೊಬೈಲ್ ಕಂಪನಿಯನ್ನು ಉದ್ದಾರ ಮಾಡುತ್ತವೆ !!! ನಾನು ಸಾಧ್ಯವಾದಷ್ತೂ ಇಂತಹಾ ಸಂದೇಶ ಕಳುಹಿಸುವ ಸ್ನೇಹಿತರಿಗೆ ಆದಷ್ಟೂ ತಿಳಿಹೇಳುತ್ತೇನೆ. ಸಾಧ್ಯವಾದಲ್ಲಿ ನೀವೂ ತಿಳಿಹೇಳಿ :)

ಕೊನೆಯದಾಗಿ ನಾನು ಹೇಳುವುದಿಷ್ಟೆ : ಇದನ್ನು ೨೦ ಜನಕ್ಕಲ್ಲ ಸಾಧ್ಯವಾದಷ್ಟು ಜನರಿಗೆ ತಿಳಿಹೇಳಿ ಅವರಲ್ಲಿ ಅರಿವು ಮೂಡಿಸಿರಿ :) ದೇವರು ನಮ್ಮ SMS ನಿಂದ ಸಂತಸ ಗೊಳ್ಳುವುದಿಲ್ಲ.... ಬದಲಾಗಿ ಕಷ್ಟಪಟ್ಟು ದುಡಿದರೆ ಸಂತಸ ಪಡಬಹುದೇನೊ....

Monday, November 3, 2008

ಪಯಣ-1

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...

ನಾನು ನನ್ನ ಆಫೀಸನ್ನ ಸಂಜೆ ಸರಿ ಸುಮಾರು ೫.೪೫ಕ್ಕೆ ಬಿಟ್ಟು ಮನೆಗೆ ಬಂದೆ. ಇನ್ನೂ ಹೊರಡುವ ತಯಾರಿ ಆಗಿಲ್ಲದ ಕಾರಣ ಸ್ವಲ್ಪ ಗಡಿಬಿಡಿಯಾಗುತ್ತಿತ್ತು. ಮನೆಗೆ ಬರುವ ಮುನ್ನ ಗಟ್ಟಿ ಅವಲಕ್ಕಿ, ಸ್ಲೈಸ್, ಮತ್ತೆ ಖರ್ಜೂರವನ್ನ ಮನೆಗೆ ತಂದಿದ್ದೆ. ನನ್ನ ಮನೆಯಿಂದ ಹೊರಟು ಕೆಂಪೇಗೌಡ ಬಸ್ ನಿಲ್ದಾಣವನ್ನ ತಲುಪಲು ಕನಿಷ್ಟಪಕ್ಷ ೧ ಘಂಟೆಯಾದರೂ ಬೇಕು. ಬೆಂಗಳೂರಿನ ಅದರಲ್ಲೂ ಬನ್ನೆರುಘಟ್ಟ ರಸ್ತೆಯ ವಾಹನದಟ್ಟಣೆಯಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕು. ಹಾಗಾಗಿ ಅಡುಗೆ ಮಾಡಿಕೊಂಡು ಊಟಮಾಡಿ ಹೊರಡಲು ನನ್ನ ಬಳಿ ಸಮಯದ ಅಭಾವವಿತ್ತು. ಹೇಗಿದ್ದರೂ ಆಗತಾನೆ ತಂದಿದ್ದ ಅವಲಕ್ಕಿ ಕೈಗೆ ಸಿಕ್ಕಿದ್ದರಿಂದ ಅದನ್ನೇ ಸ್ವಲ್ಪ ನೆನೆಸಿಕೊಂಡು ಮೊಸರಿನೊಂದಿಗೆ ತಿಂದು ಬಸ್ಸನ್ನು ಹುಡುಕುತ್ತಾ ಹೊರಟೆ. ನಾನಿರುವ ಮನೆಯ ಹತ್ತಿರದಲ್ಲಿ ಯಾವುದೇ Busstop ಇಲ್ಲದ್ದರಿಂದ ನಡೆದುಕೊಂಡು ಬನ್ನೇರುಘಟ್ಟ ಮುಖ್ಯರಸ್ತೆಗೆ ಬಂದೆ. ರಾತ್ರಿ ೧೦.೪೫ ಕ್ಕೆ ಗಂಗಾವತಿಗೆ ಹೊರಡುವ ಐರಾವತ ಬಸ್ಸನ್ನು ನಾನು ಹತ್ತಬೇಕಿತ್ತು. ನಾನು ಕೆಂಪೇಗೌಡ ನಿಲ್ದಾಣದ ಬಸ್ಸನ್ನು ಹತ್ತಿದಾಗಲೇ ೯ ಘಂಟೆ ಸಮಯವಾಗಿತ್ತು. ಮನದಲ್ಲೇ Traffic jamನ ಭಯಂಕರ ರೂಪವನ್ನ ನೆನೆಸಿಕೊಂಡು ನಾನು ಅದರಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಐರಾವತವನ್ನೇರಿದರೆ ಸಾಕೆನ್ನಿಸಿತ್ತು.

ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಾನು ಬಂದಾಗ ಇನ್ನೂ ಘಂಟೆ ೧೦ರ ಸಮಯ. ೪೫ ನಿಮಿಷ ಸಮಯವಿದ್ದದ್ದರಿಂದ ಅಲ್ಲೇ ಕುಳಿತುಕೊಳ್ಳುವ ಆಸನ ಖಾಲಿ ಇದ್ದದ್ದನ್ನು ಹುಡುಕಿ ಕುಳಿತೆ. ನಾನೇನೋ ಸಮಯಕ್ಕೆ ಮುಂಚಿತವಾಗಿ ಬಂದು ನಿರಾಳವಾಗಿ ಕುಳಿತಿದ್ದೆ. ಆದರೆ ನನ್ನ ಸುತ್ತ ಮುತ್ತ ಸ್ವಲ್ಪ ತಡವಾಗಿ ಬಂದವರ ಮುಖದಲ್ಲಿ ತಮ್ಮ ಬಸ್ಸು ತಪ್ಪಿಹೋದಬಗ್ಗೆ ಬೇಸರ, ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಪರಸ್ಪರ ದೂಷಿಸುತ್ತಿದ್ದ ದೃಷ್ಯ, ಆ ಜನಜಂಗುಳಿಯ ನಡುವೆ ಕುಡುಕರ ಕಾಟ, ಅವನನ್ನು ಬೆನ್ನಟ್ಟಿ ಬರುತ್ತಿದ್ದ ಪೋಲೀಸ್ ಪೇದೆಗಳು, ಭಿಕ್ಷುಕಿಯೊಬ್ಬಳು ತಾನು ಸಾಕಿದ ನಾಯಿಯ ಜೊತೆಯಲ್ಲಿ ತಿನ್ನುತ್ತಿದ್ದ Tigerಬಿಸ್ಕತ್ತಿನ ದೃಷ್ಯ ನನ್ನ ಸುತ್ತ ಸುಳಿದಾಡುತ್ತಿದ್ದವು. ಮನೆಯಿಂದ, ಮನೆಯವರಿಂದ ತಿರಸ್ಕಾರಕ್ಕೊಳಗಾದ ಹಲವಾರುಮಂದಿ ಇದೇರೀತಿ ರೈಲ್ವೇ ನಿಲ್ದಾಣದಲ್ಲೋ, ಬಸ್ ನಿಲ್ದಾಣದಲ್ಲೋ ತಮ್ಮ ಆಶ್ರಯವನ್ನ ಕಾಣಬೇಕಾಗುತ್ತದೆ. ಅದೇ ವಿಚಾರವನ್ನ ಯೋಚಿಸುತ್ತಿದ್ದಂತೆ ಅಲ್ಲಿ ಸಂತಸದ ಕ್ಷಣಗಳೂ ಕಂಡು ಬಂದವು. ಎಂದೋ ಭೇಟಿಯಾಗಿ ಸ್ನೇಹಿತರಾಗಿದ್ದು ನಂತರ ಜೀವನದ ಓಟದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗದೇ ಇದ್ದ ಸ್ನೇಹಿತರು ಆ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಪರಸ್ಪರ ಹಸ್ತಲಾಘವಮಾಡುತಾ ಒಬ್ಬರನ್ನೊಬ್ಬರು ಖುಷಿಯಾಗಿ ಮಾತನಾಡಿಸುತ್ತಾ ಇದ್ದದ್ದನ್ನು ಕಾಣುತ್ತಿದ್ದಂತೇ ನಾ ಕಾದು ಕುಳಿತಿದ್ದ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು.

ಹೊಸಪೇಟೆಗೆ ಇದು ನನ್ನ ೨ನೇ ಪಯಣ. ಆ ಸ್ಥಳದ ಪರಿಚಯ ಹೆಚ್ಚಾಗಿ ಇರದ ಕಾರಣ ಆ ಬಸ್ಸಿನ ನಿರ್ವಾಹಕನನ್ನ ಸ್ವಲ್ಪ ಹೊಸಪೇಟೆ ಬಂದಾಗ ನನ್ನನ್ನು ಎಚ್ಚರಿಸುವಂತೆ ಕೇಳಿಕೊಂಡು ನನ್ನ ಜಾಗಕ್ಕೆ ಹೋಗಿ ಕುಳಿತೆ. ಬಸ್ಸಿನ ಒಳಗಡೆ ಕನ್ನಡ ಚಲನಚಿತ್ರಗಳ ಗಾನಸುಧೆ ಹರಿದು ಬರುತ್ತಿತ್ತು. ಆದರೆ ಅದನ್ನು ಆಸ್ವಾದಿಸಲು ಬಸ್ಸಿನ ಒಳಗೆ ಕುಳಿತಿದ್ದ ಇಬ್ಬರು ಆಂಗ್ಲಭಾಷಿಗ ಕನ್ನಡಿಗರು ಅವಕಾಶ ನೀಡುತ್ತಿರಲಿಲ್ಲ. ದಾರಿಯುದ್ದಕ್ಕೂ ಪರಸ್ಪರ ಆಂಗ್ಲಭಾಷೆಯಲ್ಲೇ ಸಂಭಾಷಿಸುತ್ತಾ ತಮ್ಮ ದೂರವಾಣಿಯಲ್ಲಿ ಕನ್ನಡ ಮಾತನಾಡುತ್ತಾ (ಅಲ್ಲಾದರೂ ಕನ್ನಡದಲ್ಲಿ ಮಾತನಾಡಿದರೆನ್ನುವುದೇ ಸಮಾಧಾನ) ಕಿರಿಕಿರಿ ಉಂಟುಮಾಡುತ್ತಿದ್ದರು. ಅವರಿ ಕಿರಿಕಿರಿ ತಾಳಲಾಗದೇ ನಾನು ನನ್ನ ಕಿವಿಗೆ ಎಫ್ ಎಂ ಅನ್ನು ಚುಚ್ಚಿಕೊಂಡೆ. ರಾತ್ರಿಯ ಹೊತ್ತು ಬಸ್ಸು ದಾರಿಯನ್ನು ಸವೆಸುತ್ತಾ ಮುಂದೆಸಾಗಿತ್ತು. ಎಲ್ಲಾ ಸಹಪ್ರಯಾಣಿಗರು ನಿದ್ರಾದೇವಿಯ ವಶವಾದರೂ ನಾನವರ ಗೊರಕೆ ಸದ್ದಿಗೆ ನಿದ್ರಿಸಲಾಗದೇ ನಿದ್ರಿಸುವ ಪ್ರಯತ್ನ ಮಾಡುತ್ತಿದ್ದೆ. ಅಂತೂ ಇಂತೂ ಕತ್ತಲು ಕಳೆದು ಬೆಳಗಿನ ಚುಮುಚುಮು ಬೆಳಕಿನೊಂದಿಗೆ ಹೊಸಪೇಟೆ ನನ್ನನ್ನು ಸ್ವಾಗತಿಸಿತು.

ಬಸ್ ನಿಲ್ದಾಣದಿಂದ ಮೊದಲೇ ಕಾದಿರಿಸಿದ್ದ ಪ್ರಿಯದರ್ಶಿನಿ ಹೋಟೆಲಿಗೆ ನಡೆದುಕೊಂಡು ಬಂದು ನಿತ್ಯಕರ್ಮಗಳನ್ನು ಮುಗಿಸಿ ನಾ ತಂತ್ರಾಂಶವನ್ನ ಅಳವಡಿಸಿಕೊಡಬೇಕಾದ ಕಂಪನಿಗೆ ಹೊರಟೆ. ಮೊದಲೇ ಸ್ವಲ್ಪ ತಡವಾಗಿದ್ದದ್ದರಿಂದ ಗಡಿಬಿಡಿಯಲ್ಲಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಒಂದು ಧ್ವನಿ ನನ್ನ ಕೂಗಿದಂತಾಯಿತು. ಪರಿಚಯವಿಲ್ಲ ಈ ಊರಿನಲ್ಲಿ ನನ್ನ ಯಾರಾದರೂ ಏತಕ್ಕಗಿ ಕರೆದಾರು ? ಅವರು ಯಾರನ್ನೋ ಕರೆದಿರಬೇಕೆಂದು ಮುಂದೆ ಸಾಗಿದೆ. ನಂತರ ಹಿಂದಿನಿಂದ ಬಂದ ಬಾಲಕನೊಬ್ಬ ತನ್ನ ಕೈನಲ್ಲಿ ನಾ ಕಾದಿರಿಸಿದ್ದ ಬಸ್ಸಿನ ಟಿಕೇಟನ್ನು ಹಿಡಿದು ತಂದಿದ್ದ. ತಡವಾಯಿತೆಂದು ಗಡಿಬಿಡಿಯಲ್ಲಿ ಹೆಜ್ಜೆಹಾಕುವಾಗ ಪುಸ್ತಕದೊಳಗಿನಿಂದ ಟಿಕೇಟು ಬಿದ್ದುಹೋದದ್ದು ನನ್ನ ಗಮನಕ್ಕೇ ಬಂದಿರಲಿಲ್ಲ. ಆ ಹುಡುಗನಿಗೆ ಧನ್ಯವಾದಗಳನ್ನು ಹೇಳಿ ಟಿಕೇಟನ್ನ ಭದ್ರವಾಗಿರಿಸಿಕೊಂಡೆ.

ಅಲ್ಲಿಂದ ಗ್ರಾಹಕರ ಕಂಪನಿಗೆ ಹೋಗಿ ಅಲ್ಲಿ ಆ ಹೊಸಾ ತಂತ್ರಾಂಶವನ್ನ ಅಳವಡಿಸಿ ಅದರಬಗ್ಗೆ ಅವರಿಗೆ ವಿವರಿಸಿ ನಂತರ ನಾನು ಮರಳಿ ಬೆಂಗಳೂರಿಗೆ ಪಯಣ ಬೆಳೆಸಿದೆ.