ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Wednesday, June 11, 2008

"ನೀನಾರಿಗಾದೆಯೋ ಎಲೆ ಮಾನವ"

ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗೆ Good morning ವಿಶ್ ಮಾಡ್ತಾಇರೊವ್ರು ಅಂತ ಅರ್ಧಂಭರ್ದ ಕಣ್ಣಿನಲ್ಲೇ ಮೆಸ್ಸೇಜನ್ನ ಓದಿ ಧಡ್ ಅಂತ ಎದ್ದು ಕುಳಿತೆ. ಅದು ನನ್ನ ಸ್ನೇಹಿತನಾದ ಹರೀಶನದು. We might need 4 units of A+ blood for my dad. I might call u if required ಅಂತ ಬಂದಿತ್ತು. ತಕ್ಷಣ ಅವನಿಗೆ ಫೋನ್ ಮಾಡಿ ಏನಯ್ತು ? ಏನು ವಿಚಾರ ಅಂತೆಲ್ಲಾ ಕೇಳಿ ತಿಳ್ಕೊಂಡೆ. ನೆನ್ನೆ ರಾತ್ರಿ ಸುಮಾರು ೧೦.೦೦ ಘಂಟೆಗೆ ಅವರ ತಂದೆಗೆ ಅಪಘಾತವಾಗಿ ಕಾಲಿನ ೨ ಮೂಳೆ ಮುರಿದು, ತಲೆಗೆ ಪೆಟ್ಟುಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಅನ್ನೋ ವಿಚಾರ ಕೇಳಿ ನನ್ನ ಎದೆ ಧಸಕ್ ಅಂತು. ಕಳೆದ ೫ ತಿಂಗಳ ಹಿಂದೆಯಷ್ಟೇ ನನ್ನ ತಂದೆಯನ್ನ ಕಳೆದುಕೊಂಡ ನಾನು ನನ್ನ ತಂದೆಯನ್ನ ನೆನಪುಮಾಡಿಕೊಂಡೆ.

ನಾನು ಎಲ್ಲಿಗೆ ಬರಬೇಕು ? ಎಷ್ಟು ಹೊತ್ತಿಗೆ ಬರಬೇಕು ಎಂಬ ವಿವರವನ್ನ ಪಡೆದುಕೊಂಡು ನಿತ್ಯಕರ್ಮಗಳನ್ನ ಮುಗಿಸಿ, ನೆನ್ನೆತಾನೆ ಸೀಮೇ ಬದನೆಯ ಸಿಪ್ಪೆ ತೆಗೆದಿಟ್ಟದ್ದರಲ್ಲಿ ಗಡಿಬಿಡಿಯಲ್ಲಿ ಚಟ್ನಿಮಾಡಿಟ್ಟು ಸ್ವಲ್ಪ ಅವಲಕ್ಕಿಯನ್ನ ತಿಂದು ಮನೆಗೆ ಬೀಗ ಹಾಕಿ ಮಣಿಪಾಲ್ ಆಸ್ಪತ್ರೆಯತ್ತ ಧಾವಿಸಿದೆ. ದಾರಿಯಲ್ಲೋ ನೂರಾರು ವಾಹನಗಳು.... ಅದರ ಸವಾರರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಯೋಚನೆಯಲ್ಲಿ ಮುಳುಗಿ, ಕಿವಿಗೆ ಮೊಬೈಲನ್ನು ಸಿಕ್ಕಿಸಿಕೊಂಡು ದಾರಿಬಿಡದೇ ಹೋಗುತ್ತಿದ್ದರು. ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ ರಕ್ತನೀಡಿ ಒಂದು ಜೀವವನ್ನ ಅಪಾಯದ ಅಂಚಿನಿಂದ ಪಾರುಮಾಡುವುದರಲ್ಲಿ ನೆರವು ನೀಡಬೇಕೆನ್ನುವುದು ನನ್ನ ತವಕ. ಆದರೆ ಆ ಮಹಾಜನಗಳು ನನ್ನ ದುಗುಡವನ್ನ ಎಲ್ಲಿ ತಿಳಿದಾರು. ಹಾಗೂ ಹೀಗೂ ಮಾಡಿ ಏರ್ಪೋರ್‍ಟ್ ರಸ್ತೆಯನ್ನ ತಲುಪಿದ ನನಗೆ ಸ್ವಾಗತಿಸಿದ್ದು ದೋಡ್ಡ ಟ್ರ್‍ಆಫಿಕ್ ಜ್ಯಾಮ್... ಚಕ್ರವ್ಯೂಹದೊಳು ನುಗ್ಗಿದಂತೆ ಅದರ ಮಧ್ಯೆ ಸಿಕ್ಕ ಸಿಕ್ಕ ಸಂದಿಗಳಲ್ಲಿ ನುಗ್ಗಿ ಅಂತೂ ಇಂತೂ ಆಸ್ಪತ್ರೆ ಸೇರಿದೆ.

ಹರೀಶನ ಅಣ್ಣ ಹೇಳಿದಂತೆ ನಾನು ರಕ್ತನಿಧಿಯನ್ನ ಹುಡುಕಿಕೊಂಡು ಹೊರಟೆ. ರಕ್ತನಿಧಿಯಲ್ಲಿ ಸ್ವಲ್ಪ ಹೊತ್ತು ಹರೀಶನೊಂದಿಗೆ ಕುಳಿತಿದ್ದು ಮಾತನಾಡಿದ ನಂತರ ನನ್ನ ರಕ್ತದಾನ ಮಾಡಲಿಕ್ಕೆ ಒಳಕ್ಕೆ ಹೋದೆ. ಮೊದಲು ಸ್ವಲ್ಪ ರಕ್ತವನ್ನ ಪರೀಕ್ಷೆಗೆ ತೆಗೆದುಕೊಂಡ ನಂತರ ಅದನ್ನ ಪರೀಕ್ಷೆ ಮಾಡಿ ನಂತರ ನನ್ನ ರಕ್ತವನ್ನ ಪಡೆಯಲಿಕ್ಕೆ ಪ್ರಾರಂಭಿಸಿದ್ರು. ಹಾಗೇ ಹಾಸಿಗೆ ಮೇಲೆ ಮಲಗಿದ್ದಾಗ ಮಾಡೋಕೆ ಬೇರೆ ಏನು ಕೆಲಸ !!! ಸುತ್ತ ಮುತ್ತ ಕಣ್ಣಾಡಿಸಿದೆ, ಒಂದು ಬರಹ ನನ್ನ ಆಕರ್ಷಿಸಿತು... ಅದರಲ್ಲಿದ್ದ ಅರ್ಥ ಈ ರೀತಿ ಇದೆ:

ನೇತ್ರದಾನ ಕೇವಲ ಒಮ್ಮೆ ಮಾತ್ರ,
ಮೂತ್ರಪಿಂಡದಾನ ಕೇವಲ ಒಮ್ಮೆ ಮಾತ್ರ,
ಹೃದಯದಾನ ಕೇವಲ ಒಮ್ಮೆ ಮಾತ್ರ,
ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ...


ಎಷ್ಟು ಸತ್ಯದ ಮಾತಲ್ವ ??? ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಅನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಎಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಯಾಕೆ ರಕ್ತವನ್ನ ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು ??? ನಾನು ನನ್ನ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡುತ್ತಾ ಬರುತ್ತಿದ್ದೇನೆ. ನನಗೆ ಯಾವ ತೊಂದರೆಯೂ ಆಗಿಲ್ಲ... ಆರೋಗ್ಯದಿಂದ ಆರಾಮವಾಗಿದ್ದೇನೆ. ಇವತ್ತಿನ ದಿನ ನಾವು ಚೆನ್ನಾಗಿ ಆರೋಗ್ಯದಿಂದ ಇರಬಹುದು, ನಾಳೆ ನಮಗೇ ಏನಾದರೂ ಆದರೆ ??? ಈಗ ಅದೆಲ್ಲಾ ಬೇಡ ಅಲ್ವಾ ??? ಒಟ್ಟಿನಲ್ಲಿ ನಾ ಕೊಟ್ಟ ರಕ್ತದಿಂದ ಒಬ್ಬ ವ್ಯಕ್ತಿ ಅಪಾಯದಿಂದ ಪಾರಾಗಿ ಗುಣಮುಖನಾದರೆ ನನಗೆ ಅದೇ ಸಂತೋಷ...

ನಿಮ್ಮೆಲ್ಲರಲ್ಲಿ ನನ್ನದೊಂದು ಸಣ್ಣ ಕೋರಿಕೆ PLEASE DONATE BLOOD TO SAVE LIFE....

1 comment:

Unknown said...

ತುಂಬಾ ಚೆನ್ನಾಗಿ ಹೇಳಿದ್ದೀರಾ, ನಾನು ಎರಡು ಬಾರಿ ರಕ್ತ ಧಾನ ಮಾಡಿದ್ದೇನೆ. ಇದರಿಂದ ಒಬ್ಬರಿಗೆ ಉಪಕಾರ ಆಗುತ್ತೆ . ಇದರಲ್ಲಿ ಹೆದರುವ ಅವಶ್ಯಕತೆ ಇಲ್ಲ. ಏನಾದರೂ ರಕ್ತ ಬೇಕಿದ್ದಲಿ ಪ್ಲೀಸ್ ನಮ್ಮನ್ನು ನೆನಸಿಕೊಳ್ಳಿ ಯಾವಾಗಲು ನಾವು ಸಿದ್ದ.