ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, October 25, 2010

ಒಲವಿನ ಆಮಂತ್ರಣ

ಆತ್ಮೀಯ ,


ನನ್ನ ಮದುವೆಯ ಮಂಗಳ ಕಾರ್ಯವು ಬರುವ ನವೆಂಬರ್ ತಿಂಗಳಿನ ೧೧ನೇ ತಾರೀಖು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ರಸ್ತೆಯ "ಶ್ರೀ ಗುರುನರಸಿಂಹ ಕಲ್ಯಾಣಮಂದಿರ" ದಲ್ಲಿ ನೆರವೇರಲಿದೆ. ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ ಹಾಗು ಮಿತ್ರರೊಂದಿಗೆ ಬಂದು ಯಥೋಚಿತ ಸತ್ಕಾರ ಸ್ವೀಕರಿಸಿ ವಧು-ವರರನ್ನು ಹಾರೈಸಬೇಕಾಗಿ ಕೋರಿಕೆ.


ಸಮಯದ ಅಭಾವದಿಂದ ಖುದ್ದಾಗಿ ಆಮಂತ್ರಣ ತಲುಪಿಸಲಾಗಲಿಲ್ಲ. ಕ್ಷಮೆ ಇರಲಿ (:


ಸ್ಥಳ: ಶ್ರೀ ಗುರುನರಸಿಂಹ ಕಲ್ಯಾಣಮಂದಿರ, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮದ ಎದುರು, ಬಸವನಗುಡಿ, ಬೆಂಗಳೂರು.




ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ

Wednesday, October 13, 2010

ಪ್ರೀತಿ???

ಹುಡುಗಿ: ನನ್ ಕಂದಮ್ಮ ಇವತ್ತು ಬೇಜಾರ್ ಮಾಡ್ಕೊಂಡಿತ್ತು ಕಣೋ... ನನ್ ಕಂದಮ್ಮನ್ ಜೊತೆ ಇವತ್ತು ಹೊರಗೆ ಹೋಗ್ಬೇಕು ಅಂತಿದ್ದೆ. ನಮ್ ಅಪ್ಪ ನನ್ನ ಅರ್ಥನೇ ಮಾಡ್ಕೊಳಲ್ಲ ಗೊತ್ತಾ ? ನಾನು ಹೊರಗೇ ಹೋಗ್ಬಾರ್ದಂತೆ, ಈ ಸಲ ನನ್ನ ಟ್ರಿಪ್ಪಿಗೂ ಕಳ್ಸಿಲ್ಲ. ತುಂಬಾ ಬೇಜಾರಾಯ್ತು ನನ್ಗೆ.

ಪೋಷಕರು: ಚಿನ್ನೂ... ಯಾಕಮ್ಮಾ ?? ನೆಗಡಿ ಆಗಿದ್ಯಾ ?? ಏಷ್ಟು ಸಲ ಹೇಳಿದೀನಿ ಮಳೇಲಿ ನೆನೀ ಬೇಡ ಅಂತ ? ಮೊದ್ಲು ಹೋಗಿ ತಲೆಒರ್ಸ್ಕೊ. ಬೇಕಾದ್ರೆ ಬಿಸಿ ಬಿಸಿ ಕಾಫೀ ಮಾಡ್ಕೊಡ್ತೀನಿ. ವಿಕ್ಸ್ ಹಚ್ಕೊಂಡು ಮಲ್ಕೊ ಇಲ್ಲಾಂದ್ರೆ ಮೂಗು ಕಟ್ಟತ್ತೆ, ಸರೀಗೆ ನಿದ್ದೆ ಬರೋದಿಲ್ಲ.

ಹುಡುಗಿ:
ನಾನು ಇವತ್ತು ಹೊಟೇಲ್ ನಲ್ಲಿ ತಿಂಡಿ ತಿನ್ ತೀನಿ (ಸಿನಿಮಾಗೆ ಬರ್ತೀನಿ ಅಂತ ಪ್ರಮಿಸ್ ಮಾಡಿದೀನಿ), ಕ್ಲಾಸಿಗೆ ಲೇಟ್ ಆಯ್ತು (ತಡ ಆದ್ರೆ ಟಿಕೇಟ್ ಸಿಕ್ಕೋದಿಲ್ಲ. ಪಾಪ ಅವ್ನು ಬೇಜಾರ್ ಮಾಡ್ಕೋತಾನೆ).

ಪೋಷಕರು:ಇವತ್ತು ನಿನ್ಗೆ ಇಷ್ಟಾ ಅಂತ ಬಿಸಿಬೇಳೆಭಾತ್ ಮಾಡಿದೀನಿ. ತಿನ್ಕೊಂಡು ಹೋಗು. ಭಾನುವಾರ ಲಾಲ್ ಭಾಗಿಗೆ ಹೋಗೋಣ, ಹೂವು ಅಂದ್ರೆ ನಿನ್ಗೆ ತುಂಬಾ ಇಷ್ಟ ಅಲ್ವಾ ? ಅಪ್ಪಂಗೆ ಹೇಳಿ ನಿನ್ಗೆ ಹೊಸಾ ಐಪಾಡ್ ಕೊಡ್ಸ್ತೀನಿ. ಅದ್ಯೇನೋ ಹೊಸಾ ಡ್ರಸ್ ಬೇಕು ಅಂತಾ ಇದ್ಯಲ್ಲ ಅದರ ವಿಷಯವಾಗಿ ಅಪ್ಪಂಗೆ ಹೇಳಿದೀನಿ. ಕೊಡ್ಸೋಣಾ ಅಂತಿದ್ರು.

ಹುಡುಗಿ: ಇವತ್ತು ಅವ್ನು ನನ್ ಜೊತೆ ಸರೀಗೆ ಮಾತಾಡ್ಲೇ ಇಲ್ಲ. ಅವ್ನಿಗೆ ಹೊಸಾ ಡ್ರೆಸ್ ಕೊಡ್ಸ್ ಬೇಕು. ಪಾಕೇಟ್ ಮನಿ ಹೇಗಿದ್ರೂ ಇದೆ.

ಪೋಷಕರು: ಇವತ್ತು ಯಾಕೆ ನನ್ ಮಗ್ಳು ಸಪ್ಪಗಿದಾಳೆ ? ಬಹುಷ ಅವಳ ಕಾಲೇಜಲ್ಲಿ ಏನೋ ಬೇಜಾರಾಗಿರ್ಬೇಕು. ಅವ್ಳ್ಗೆ ಕೊಬ್ರಿ ಮಿಠಾಯಿ ಅಂದ್ರೆ ಇಷ್ಟ, ರೀ ಇವತ್ತು ಕಾಯಿ ತುರ್ಕೊಡಿ. ಮಾಡಿ ಕೊಡೋಣ :)

ಹುಡುಗಿ: ಅಂತೂ ಇಂತೂ ನನ್ ಕಂದಮ್ಮ ನನ್ಜೊತೆ ಮಾತಾಡ್ತಾ ಇದೆ ಕಣೋ... "ಐ ಯಾಮ್ ಸೋ ಹ್ಯಾಪಿ" ಮೊನ್ನೆ ಇಂದಾ ಅದು ಮಾತಾಡ್ಸ್ತಾ ಇರ್ಲಿಲ್ಲ ಗೊತ್ತಾ... ನಂಗಂತೂ ಅಳುನೇ ಬಂದ್ಬಿಟ್ಟಿತ್ತು.

ಪೋಷಕರು: ಚಿನ್ನಮ್ಮಾ... ನಿನ್ಗೆ ಅಕ್ವೇರಿಯಂ ಬೇಕು ಅಂತಿದ್ಯಲ್ಲ... ನಾನೇ ಮಾಡ್ಕೊಡ್ತೀನಿ. ಏಷ್ಟು ದೊಡ್ಡದು ಬೇಕು ? ಅದ್ರಲ್ಲಿ ಯಾವ್ ಯಾವ್ ಮೀನು ಇರ್ಬೇಕು ? ಅದೆಲ್ಲಾ ನೋಡ್ಕೊ. ನಾಡಿದ್ದು ಹೋಗಿ ತರೋಣ. ಮೊದ್ಲು ಅಕ್ವೇರಿಯಂ ರೆಡಿಯಾಗ್ಲಿ.

ಹುಡುಗಿ: ಇವತ್ತು ನಾವು ಪಿಕ್ ನಿಕ್ಕಿಗೆ ಹೋಗಿದ್ವಿ. ಅವ್ನೂ ಬಂದಿದ್ದ. ಸಕ್ಕತ್ ಮಜ ಬಂತು ಗೊತ್ತಾ, ನನ್ ಫ್ರೆಂಡ್ಸ್ ಎಲ್ಲಾ ಅವನ್ ಜೊತೆ ಮಾತಾಡ್ತಾ ಇದ್ರೆ ನನ್ಗೆ ಕೋಪ ಬರ್ತಾ ಇತ್ತು. ಮನೇಲಿ ಹುಡ್ಗೀರೆಲ್ಲಾ ಹೋಗ್ತಾ ಇದೀವಿ ಅಂದಿದ್ದೆ, ಆದ್ರೆ ಅವ್ನೂ ಬರ್ತಾ ಇದಾನೆ ಅಂತ ಇವ್ರಿಗೆ ಗೊತ್ತಿಲ್ಲ.

ಪೋಷಕರು: ಇವತ್ತು ಪಿಕ್ನಿಕ್ಕಿಗೆ ಹೋಗಿದ್ಳಂತೆ, ಅವ್ಳ್ ಫ್ರೆಂಡ್ಸ್ ಎಲ್ಲಾ ನೀರಲ್ಲಿ ಆಟ ಆಡ್ಕೊಂಡ್ ಬಂದ್ರಂತೆ. ನಾಳೆ ಅವ್ಳಿಗೆ ನೆಗಡಿ ಆಗೋದು ಗ್ಯಾರೆಂಟಿ. ಈಗ್ಲೇ ಒಂದು ಮಾತ್ರೆ ಕೊಟ್ ಬಿಡ್ಬೇಕು. ಮತ್ತೆ ಜ್ವರ ಏನಾದ್ರೂ ಬಂದ್ರೆ ??? ಸಧ್ಯದಲ್ಲೇ ಇಂಟರ್ನಲ್ಸ್ ಇದೆ !!!

ಹುಡುಗಿ: ಇವತ್ತು ನನ್ಗೆ ಹೊಸಾ ಬಳೆ ಮಾಡ್ಸಿದ್ರು ಗೊತ್ತಾ ??? ನಾನು ಅದನ್ನ ಅವ್ನಿಗೆ ತೋರಿಸ್ಬೇಕು. ಏನೇ ಆದ್ರೂ ಅದೆಲ್ಲಾ ಅವ್ನಿಗೇ ತಾನೆ ??? ಮನೇಲಿ ಅವನ್ನ ಒಪ್ಪದಿದ್ರೆ ಎಲ್ಲಾ ತೊಗೊಂಡ್ ಹೋಗ್ತೀನಿ. ಪುಟ್ಟ ಮನೆ ಮಾಡಿ ಅವ್ನ್ ಜೊತೆ ಇರ್ತೀನಿ.

ಪೋಷಕರು: ಚಿನ್ನದ್ ರೇಟು ಆಕಾಶ ಮುಟ್ತಾ ಇದೆ. ಸಧ್ಯಕ್ಕೆ ಬಳೆ ಆಯ್ತು, ಮತ್ತೆ ಒಂದು ನೆಕ್ಲೆಸ್ ಮಾಡ್ಸಿದ್ರೆ ಚೆನ್ನಾಗಿರತ್ತೆ. ಅದಕ್ಕೆ ಇವಾಗಿಂದ್ಲೇ ಹಣ ಎತ್ತಿಡ್ಬೇಕು. ಮದುವೆಯಲ್ಲಿ ಅವಳು ಎಲ್ಲಾರ್ಗಿಂತಾ ಚೆನ್ನಾಗಿ ಕಾಣ್ ಬೇಕು. ದೇವ್ರೇ... ಒಂದು ಒಳ್ಳೇ ಹುಡುಗ ಸಿಕ್ಲಿ.

ಹುಡುಗಿ: ನನ್ಗೆ ಗೊತ್ತು, ಮನೇಲಿ ನಮ್ಮಿಬ್ರ ಮದುವೆಗೆ ಒಪ್ಪೋದಿಲ್ಲಾ ಅಂತ. ನಾನು ಡಿಸೈಡ್ ಮಾಡಿದೀನಿ. ಮದುವೆ ಆದ್ರೆ ಅವ್ನೇ ಆಗೋದು. ಅವ್ನೂ ರೆಡಿ ಇದಾನೆ. ಮನೇಲಿ ಮಾಡ್ಸಿರೋ ಚಿನ್ನಾ ಹೇಗಿದ್ರೂ ಇದೆ........ !!!!!

Wednesday, September 22, 2010

ನಿಮ್ಮ ಪ್ರಯಾಣ ಸುಖಕರವಾಗಿರಲಿ

ಜೀವನವೆಂಬುದು ನಂಬಿಕೆಯೆಂಬ

ಹಳಿಗಳಮೇಲಿನ ರೈಲು ಪಯಣ

ಹಳಿತಪ್ಪಿದರದು ಭಾರೀ ದುರಂತ,

ಭಾಂದವ್ಯಗಳ ಸಾವು

ಮನದ ತುಂಬಾ ನೋವು

ಪ್ರತಿಕ್ಷಣವೂ ಹೊಸಾ ಪಯಣಿಗರ ಸೇರ್ಪಡೆ

ಹಳೆ ಪಯಣಿಗರ ಬೀಳ್ಗೊಡುಗೆ

ಹೊಸ ಪಯಣಿಗನ ಆಗಮನದ ಸಂತಸ

ಹಳೆ ಪಯಣಿಗನ ನಿರ್ಗಮನದ ಬೇಸರ

ಪರಿಚಿತ, ಅಪರಿಚಿತ ಮೊಗದ ಸಹಪಯಣಿಗರ ನಡುವೆ

ನಮ್ಮ ನಿಮ್ಮ ಪಯಣ ನಿರಂತರ

ನಿಂತಲ್ಲೇ ನಿಂತು ಬರುವ ರೈಲಿಗಾಗಿ ಕಾದಿರುವ ನಿಲ್ದಾಣಗಳು

ನಿಂತ ಕೆಲ ನಿಮಿಷದ ನಂತರ ಮುಂದಿನ ನಿಲ್ದಾಣದ ನಿರೀಕ್ಷೆ

ಪಯಣದ ನಡುವಲ್ಲಿ ಸಿಗುವ ಅಪರಿಚಿತ ಮುಖಗಳಲ್ಲಿ

ಪರಿಚಯದ ಹುಡುಕಾಟ, ನಡು ನಡುವೆ ಹುಡುಗಾಟ

ಮುಂಬರುವ ನಿಲ್ದಾಣದ ಅರಿವು ಯಾರಿಗುಂಟು, ಯಾರಿಗಿಲ್ಲ

ನಮ್ಮ ನಿಲ್ದಾಣ ಬಂದಾಗ ರೈಲಿನಿಂದಿಳಿಯಲೇ ಬೇಕು

ಸಹ ಪಯಣಿಗರ ಪಯಣ ಸಾಗಲೇ ಬೇಕು

ದೇವನೆಂಬ ಚಾಲಕನ ವೇಗ ಬಲ್ಲವರಾರು

ಪಯಣವನೆಲ್ಲಿ ನಿಲ್ಲಿಸುವನೋ ಅರಿತವರು ಯಾರು

ಸಹ ಪಯಣಿಗನಾಗಿ ನಾ ಕೋರುವುದಿಷ್ಟೇ...



ನಿಮ್ಮ ಪ್ರಯಾಣ ಸುಖಕರವಾಗಿರಲಿ.... :)

Thursday, September 16, 2010

ಮದುವೆ ಯಾವಾಗ ಮಾಡ್ಕೋತೀಯ ???

ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ.

"ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನನ್ನೇ ಕೇಳಿ, ಮಾಡಿ ಹಾಕ್ತೀನಿ. ಅದಿಕ್ಕೆ ನನ್ ಮದುವೇನೇ ಆಗಬೇಕಾ ? ಬೇರೆ ಏನೂ ಕಾರಣನೇ ಸಿಕ್ಲಿಲ್ವಾ ??? ನಾನು ಒಂಟಿಯಾಗಿ ಇರೋದು ಕಂಡು ನಿಮ್ಗೆ (ಮದುವೆ ಆದವರಿಗೆ) ಹೊಟ್ಟೆ ಉರಿ ಬರತ್ತಾ??? ಅಥವಾ ನೀವು ಖೆಡ್ಡಾಗೆ ಬಿದ್ದಾಯ್ತು ಅಂತ ನನ್ನ ಮೇಲೆ ಹೊಟ್ಟೆಕಿಚ್ಚಾ???" ಹೀಗೆಲ್ಲಾ ಕೇಳೋಣಾ ಅನ್ಸತ್ತೆ. ಆದ್ರೆ ಸಮಾಜದಲ್ಲಿ ಸಭ್ಯ.. ಅಂತ ಅನ್ನಿಸ್ಕೊಂಡಿರೋದ್ರಿಂದ.... "ಅಯ್ಯೋ ಅದಕ್ಕೇನಂತೆ.... ಮೊದಲು ಒಳ್ಳೇ ಹುಡುಗಿ ಸಿಕ್ಲಿ.... ಆಮೇಲೆ ಮದುವೆ ಆಗ್ತೀನಿ" ಅಂತ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ.

ಇನ್ನು ಅದಕ್ಕೆಲ್ಲಾ ಅವಕಾಶ ಇಲ್ಲ ಬಿಡಿ. ಅಂತೂ ಇಂತೂ ನಮ್ಮ ಮನೆಯವರೆಲ್ಲಾ ಸೇರಿ ನನಗೂ ಒಂದು ಖೆಡ್ಡಾನ ತೋಡಿ ಆಗಿದೆ. ಅದರ ಹತ್ತಿರ ಕರ್ಕೊಂಡು ಬಂದದ್ದೂ ಆಗಿದೆ... ಇನ್ನೇನು ಅದಕ್ಕೆ ತಳ್ಳೋದೊಂದೇ ಬಾಕಿ ನೋಡಿ. ಇಷ್ಟು ದಿನ ನನ್ನ ಸ್ನೇಹಿತರಿಗೆ ಸಿಕ್ಕಾಪಟ್ಟೆ ಗೋಳುಕೊಡ್ತಾ ಇದ್ದೆ. ಇನ್ನು ಆ ಸರದಿಯಲ್ಲಿ ನಾನೇ ನಿಲ್ಲಬೇಕು. ನನ್ನ ಸಹೋದ್ಯೋಗಿ ಅವನ ಶ್ರೀಮತಿಯೊಂದಿಗೆ ಪ್ರತೀ ದಿನ ೧ ಘಂಟೆ ಫೋನಿನಲ್ಲಿ ಮಾತನಾಡೋವಾಗ ರೇಗಿಸ್ತಾ ಇದ್ದ ನಾನು ಇವತ್ತು ಗಪ್ ಚುಪ್... ಆಗೆಲ್ಲಾ ಕೇಳ್ತಾ ಇದ್ದೆ.... "ಅಷ್ಟು ಹೊತ್ತು ಮಾತಾಡೋಕೆ ಅದೇನಿರತ್ತೆ ನಿನ್ಗೆ ವಿಷ್ಯಗಳೂ??? ಪ್ರಪಂಚದ ಸುದ್ದೀ ಎಲ್ಲಾ ನಿನ್ ಹತ್ರಾನೇ ಇರತ್ತಾ???" ಇತ್ಯಾದಿ ಇತ್ಯಾದಿ.... ಆದ್ರೆ ಸತ್ಯವಾಗ್ಲೂ ಇವತ್ತು ನನ್ನ ಹತ್ರ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಇಲ್ಲ :)

ಮದುವೆಗೆ ಹುಡುಗಿಯ ಹುಡುಕಾಟ ಶುರುವಾದ್ರೆ ಗೆಳೆಯರು ಕೇಳೋ ಪ್ರಶ್ನೆ: "ಏನಮ್ಮಾ.... ಏಷ್ಟು ಉಪ್ಪಿಟ್ಟು+ಕೇಸರೀ ಭಾತು ಆಯ್ತು ಇಲ್ಲೀವರ್ಗೇ ???" ಅಂತ. ನಿಜ ಹೇಳಬೇಕು ಅಂದ್ರೆ ನನ್ನ ಜೀವನದಲ್ಲಿ ನಾನು ಉಪ್ಪಿಟ್ಟು+ಕೇಸರೀ ಭಾತು ತಿಂದೇ ಇಲ್ಲ :) ಇವಳನ್ನ ನೋಡಲು ಹೋದಾಗಲೂ ಕೊಟ್ಟದ್ದು ಆಲೂಗಡ್ಡೆ ಚಿಪ್ಸ್ ಮತ್ತೆ ಸೋನ್ ಪಾಪಡಿ.... ಅದೇ ನನ್ನ ಮೊದಲ ಮತ್ತು ಕೊನೆಯ ಇಂಟರ್ವ್ಯು ಆಗೋಯ್ತು. ಅದೇನೋಪ್ಪ.... ಪ್ರಪಂಚದಲ್ಲಿ ಹುಡುಗಿಯರು ಕಡಿಮೆ ಅಂತಾರೆ, ಆದ್ರೆ ನನ್ಗೆ ಯಾವುದೇ ಸಮಸ್ಯೆ ಆಗ್ಲಿಲ್ಲ ನೋಡಿ. ಮೊದಲ್ನೇ ಸಲ ನೋಡಿದ ಹುಡುಗೀನೇ ಕ್ಲಿಕ್ ಆಗೋದ್ಳು. ಇವತ್ತಿಗೂ ಅವಳಿಗೆ ರೇಗಿಸ್ತಾ ಇರ್ತೀನಿ ನಂಗೆ ಜೀವನದಲ್ಲಿ ಒಂದೇ ಒಂದ್ ಸಾರೀನೂ ಉಪ್ಪಿಟ್ಟು+ಕೇಸರೀ ಭಾತು ತಿನ್ನೋ ಅವಕಾಶ ಸಿಕ್ಕ್ಲೇ ಇಲ್ಲ ಅಂತ ;)

ಅವಳನ್ನ ನೋಡಿಕೊಂಡು ಬಂದ ಕೆಲವೇ ದಿನಗಳಲ್ಲಿ ಅವಳ ಹುಟ್ಟಿದ ಹಬ್ಬ ಇತ್ತು. ಹೇಗಾದ್ರೂ ಮಾಡಿ ಶುಭಾಷಯ ತಿಳಿಸ್ಬೇಕು, ಆ ನೆಪದಲ್ಲಿ ಅವಳಜೊತೆ ಮಾತಾಡ್ಬೇಕು ಅಂತ ಒದ್ದಾಡ್ತಾ ಇದ್ದೆ. ಅವಳ ಮೊಬೈಲ್ ನಂಬರ್ ಕೂಡಾ ನನ್ನ ಹತ್ತಿರ ಇರಲಿಲ್ಲ. ಇದ್ದದ್ದು ೨ ಬೇರೆ ಬೇರೆ ನಂಬರ್ ಗಳು. ಒಂದು ಅವರ ಮನೆಯ ಸ್ಥಿರದೂರವಾಣಿದು, ಮತ್ತೊಂದು ಅವಳ ದೊಡ್ಡಪ್ಪನ ಮೊಬೈಲ್ ನಂಬರ್. ಅಂತೂ ಇಂತೂ ನಾನು ಅವಳಿಗೆ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಲೇ ಬೇಕು ಅಂತ ಅವಳ ಹುಟ್ಟಿದ ದಿನದಂದೇ ಆ ಸ್ಥಿರದೂರವಾಣಿ ಗೆ ಕರೆಮಾಡಿದೆ.

ನನ್ನ ಗ್ರಹಚಾರ ಕಣ್ರಿ.... ಆ ದಿನಾನೇ ಆ ಸ್ಥಿರದೂರವಾಣಿ ಕೈ ಕೊಟ್ಟಿತ್ತು. ನಾನೂ ಇತ್ತಕಡೆಯಿಂದ ಪ್ರಯತ್ನ ಪಟ್ಟಿದ್ದೂ ಪಟ್ಟಿದ್ದೇ... ಆದ್ರೆ ಪ್ರಯೋಜನ ಮಾತ್ರ ಆಗ್ಲಿಲ್ಲ. ಕೊನೇಗೆ ಧೈರ್ಯ ಮಾಡ್ಕೊಂಡು ಅವಳ ದೊಡ್ಡಪ್ಪನ ಮೊಬೈಲಿಗೇ ಕರೆ ಮಾಡಿದ್ದೆ :) ಕರೆ ಮಾಡಿ ನಂತರ ಆಕೆಯ ಮೊಬೈಲ್ ನಂಬರ್ ಪಡ್ಕೊಂಡಿದ್ದೆ.

ಮನೆಯಲ್ಲಿ ನಿಶ್ಛಿತ್ತಾರ್ಥದ ದಿನವೆಲ್ಲಾ ನಿಗದಿಯಾದಮೇಲೆ ಶುರುವಾಯ್ತು ನಮ್ಮ ಮೊಬೈಲ್ ಸಂಭಾಷಣೆ ಅದರ ಜೊತೆಯಲ್ಲೇ ನನ್ನ ಮೊಬೈಲ್ ಬಿಲ್ಲಿನ ಸ್ಪರ್ಧೆ ಕೂಡಾ!!! ನನ್ನ ಮೊಬೈಲ್ ಬಿಲ್ಲು ತಿಂಗಳಿಂದ ತಿಂಗಳಿಗೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತಿತ್ತು. ಮೊದ ಮೊದಲು ವೋಡೋಫೋನಿನವರಿಗೆ ಧಾರಾಳವಾಗಿ ಹಣ ಕಟ್ಟಿದ್ದಾಯ್ತು.... ಆಮೇಲೆ ಹೊಸಾ"ಐಡಿಯಾ" ಹೊಳೆದದ್ದರಿಂದ ಈಗ ತಿಂಗಳಿಗೆ ಕೇವಲ ೨೦೦/- ರೂಪಾಯಿಯಲ್ಲಿ ನಮ್ಮ ಮಾತೆಲ್ಲಾ ಸಾಗುತ್ತಲಿದೆ. ಹೆಚ್ಚಿನ ಖರ್ಚಿಲ್ಲದೇ ನಾವಿಬ್ಬರೂ ಆರಾಮವಾಗಿ ಮಾತನಾಡುವ ಸದವಕಾಶವನ್ನ "ಐಡಿಯ" ದವರು ನಮಗೆ ಒದಗಿಸಿಕೊಟ್ಟಿದ್ದಾರೆ. ನಿಮ್ಮಲ್ಲಿ ಯಾರಾದರೂ ನನ್ನ ಪರಿಸ್ಥಿತಿಯಲ್ಲೇ ಇದ್ದರೆ ನಿಮಗೂ "ಐಡಿಯ" ಚೆನ್ನಾಗಿ ಉಪಯೋಗಕ್ಕೆ ಬರಬಹುದು ಅಂತ ನನ್ನ ಅನಿಸಿಕೆ ;)

ನಿಶ್ಛಿತ್ತಾರ್ಥಕ್ಕೆ ಮೈಸೂರಿನಿಂದ ಒಂದು ಖಾಸಗೀ ವಾಹನದಲ್ಲಿ ಹೊರಟನಾವೆಲ್ಲಾ (ನಾನು ಮತ್ತು ನಮ್ಮ ಕುಟುಂಬದವರು) ಬೆಂಗಳೂರಿಗೆ ಬಂದ್ವಿ. ಬರುವಾಗ ಎಲ್ಲಾ ಸೇರ್ಕೊಂಡು ನನಗೆ ರೇಗ್ಸಿದ್ದೋ ರೇಗ್ಸಿದ್ದು. ಮದುವೆ ನಿಶ್ಛಿತ್ತಾರ್ಥದ ದಿನ ಎಲ್ಲರ ಹದ್ದಿನ ಕಣ್ಣೂ ನನ್ನನ್ನೇ ಹುಡುಕುತ್ತಿದ್ದವು. ಏನೋ ಒಂದುರೀತಿಯ ಮುಜುಗರ ನನ್ನಲ್ಲಿ. ಒಳ್ಳೆ ಮೃಗಾಲಯದಲ್ಲಿ ಪ್ರಾಣಿಯನ್ನ ನೋಡಿ ಖುಷಿ ಪಡೋರೀತಿ ನನ್ನ ನೋಡ್ತಾ ಅವರವರಲ್ಲೇ ಏನೇನೋ ಮಾತಾಡ್ಕೊತಾ ಇದ್ರು. ಅವಳ ಮನೆಯ ಮಂದಿಗೆ ನಾನು ಹೊಸಬ. ಹಾಗಾಗಿ ಎಲ್ಲರ ಕಣ್ಣೂ ನನ್ನ ಮೇಲೇ. ಹಲವು ಅಪರಿಚಿತ ಮುಖಗಳು ನನ್ನನ್ನೇ ನೋಡ್ತಾ ಇದ್ರೆ ಏನ್ ಮಾಡ್ಬೇಕು ಅಂತನೇ ಗೊತ್ತಾಗ್ತಾ ಇರ್ಲಿಲ್ಲ. ನನ್ಗೂ Full tension ಆಗ್ತಾ ಇತ್ತು. ಬರೀ ಎಲ್ಲಾರಿಗೂ ಒಂದು ಸ್ಮೈಲ್ ಮಾತ್ರ ಕೊಡ್ತಾ ಇದ್ದೆ. ಬೇರೆ ಮಾಡೋದಾದ್ರೂ ಏನು ಹೇಳಿ... :(

ನಾನು ಅವಳನ್ನ ನೋಡೋಕೆ ನಿಶ್ಛಿತ್ತಾರ್ಥಕ್ಕಿಂತಾ ಸುಮಾರು ೩ ತಿಂಗಳ ಹಿಂದೆ ಹೋಗಿದ್ದು. ನಂತರದ ನಮ್ಮ ಭೇಟಿ ನಿಶ್ಛಿತ್ತಾರ್ಥ ದ ದಿನದಂದೇ ಆದದ್ದು. ಚೆಂದದ ಸೀರೆ ಉಟ್ಕೊಂಡು ನನ್ನವಳು ಚೆನ್ನಾಗಿ ಕಾಣ್ತಾ ಇದ್ಳು. ಎಲ್ಲಾ ಕೇಳೋದು ಒಂದೇ ಪ್ರಶ್ನೆ, "ಯಾಕೆ ಇಷ್ಟು ಸಣ್ಣ ಆಗಿದ್ದೀರ ? ಪಾಪ ಅವ್ಳ್ದೇ ಯೋಚ್ನೇನಾ?? ಇನ್ನು ಸ್ವಲ್ಪ ತಿಂಗ್ಳು ವೈಟ್ ಮಾಡಿ... ಮನೆಗೇ ಬರ್ತಾಳೆ... ಅಲ್ಲಿವರ್ಗೇ ಸ್ವಲ್ಪ ಚೆನ್ನಾಗಿ ತಿಂದು ದಪ್ಪ ಆಗಿ, ಆಮೇಲೆ ಅವ್ಳು ಬಂದು ನಿಮ್ಮನ್ನ ಚೆನ್ನಾಗಿ ನೋಡ್ಕೋತಾಳೆ" ಅಂತ. ಎಲ್ಲರಿಗೂ ಉತ್ತರ ಕೊಟ್ಟೂ ಕೊಟ್ಟೂ ಸಾಕಾಯ್ತು. ಬಂದವರಿಗೆಲ್ಲಾ ನಮ್ಮ ಜೋಡಿ ಮೆಚ್ಚುಗೆ ಆಯ್ತು.

ಅಲ್ಲಾ.... ನಾನು ಅವ್ಳು ಬಂದಿಲ್ಲಾ ಅಂತ ಯೋಚ್ನೆ ಮಾಡ್ತಾ ಸಣ್ಣ ಆದ್ನಂತೆ. ಅವ್ರಿಗೇನ್ ಗೊತ್ತು, ದಿನಾಬೆಳಿಗ್ಗೆ ೪ ಘಂಟೆಗೇ ಎದ್ದು ತಿಂಡಿ ಮಾಡ್ಕೊಂಡು ಕೆಲ್ಸಕ್ಕೂ ಹೋಗಿ ಮತ್ತೆ ಮನೆಗೆ ಬಂದು ಅಡುಗೆ ಮಾಡ್ಕೊಂಡು ಮಲ್ಗೋವ್ರ ಕಷ್ಟ :P ಅದರ ಮಜವನ್ನ ಅನುಭವಿಸಿದವನೇ ಬಲ್ಲ ;) ಬೆಳಿಗ್ಗೆ ಆದ್ರೆ ತಿಂಡಿ ಮಾಡೋ ಗಡಿಬಿಡಿ, ಸಂಜೆ ಆದ್ರೆ ಅಡುಗೆ ಮಾಡೋ ಗಡಿಬಿಡಿ, ಇದರ ಜೊತೆಯಲ್ಲೇ ನಾಳೆಗೇನು ತಿಂಡಿ ಮಾಡೋದಪ್ಪಾ ಅನ್ನೋ ಯೋಚನೆ.... ಉಸ್ಸ್ಸಪ್ಪಾ... ಒಂದೋ ಎರಡೋ.... ಆದ್ರೂ ಸಧ್ಯಕ್ಕೆ ಈ ಜೀವನ ಮಸ್ತ್ ಆಗೇ ಇದೆ :) ಮುಂದೆ ಮದುವೆಯಾದಮೇಲೆ ಹೇಗಾಗತ್ತೋ ಗೊತ್ತಿಲ್ಲ :)

ಸಧ್ಯಕ್ಕೆ ನನ್ನ ಮದುವೆ ನಿಶ್ಛಿತ್ತಾರ್ಥಮುಗಿದಿದೆ. ಇನ್ನು ಮದುವೆ ಕಾರ್ಯ ಹೇಗೆ ಆಗತ್ತೋ ಅನ್ನೋ ಭಯ ಮನಸ್ಸಲ್ಲಿ ಕಾಡ್ತಾ ಇದೆ. ನಿಶ್ಛಿತ್ತಾರ್ಥ ಏನೋ ಯಾವ ತೊಂದರೆಯೂ ಇಲ್ಲದೇ ನಡೆದುಹೋಯ್ತು. ಮುಂದೆನೂ ಹಾಗೇ ಎಲ್ಲಾ ಸರಾಗವಾಗಿ ಆಗತ್ತೆ ಅಂತ ಅಂದ್ಕೊಂಡಿದೀನಿ. :)

Tuesday, September 14, 2010

ಬಾಲ್ಯ....

ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾಗಿದ್ದಾಗಿನ ನೆನಪು ನಮ್ಮ ನನಪಿನಂಗಳದಲ್ಲಿ ಬಂದು ಒಮ್ಮೊಮ್ಮೆ ನಲಿದು, ಕುಣಿದು ಹೋಗುವುದು ಸಾಮಾನ್ಯವೇ.

ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ. ಆಗಲೇ ನನಗೆ ನಮ್ಮ ಬಾಲ್ಯದ ನೆನಪು ಬಹಳ ಕಾಡಿದ್ದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿದ್ದೇನೆ :) ನೀವೂ ಓದಿ ನಿಮ್ಮ ಬಾಲ್ಯವನ್ನ ನೆನಪುಮಾಡಿಕೊಳ್ಳಿ :)

• ನಾವೆಲ್ಲಾ ಚಿಕ್ಕವರಾಗಿದ್ದಾಗ ಹಳೇ ಪೇಪರಿನಲ್ಲಿ (ಒಮ್ಮೊಮ್ಮೆ ಹೊಸಾ ನೋಟ್ ಬುಕ್ಕಿನಿಂದ ಹರಿದದ್ದೂ ಇದೆ) ದೋಣಿ, ರಾಕೇಟ್, ವಿಮಾನ ಇನ್ನೂ ಮುಂತಾದವನ್ನ ಮಾಡಿ ಶಾಲೆಯ ಬಿಡುವಿನಲ್ಲಿ ತರಗತಿಗಳಲ್ಲೇ ಆಟ ಆಡಿದ್ದುಂಟು.

• ಎರೆಡು ಪುಸ್ತಕಗಳ ಹಾಳೆಗಳನ್ನು ಒಂದರಮೇಲೊಂದರಂತೆ ಜೋಡಿಸಿ ನಂತರ ಅದನ್ನ ಉಲ್ಟಾ ಮಾಡಿ ಸಿನಿಮ ನೋಡುವ ಆಟ ಆಡಿದ್ದುಂಟು.

• ಆಟದ ಸಮಯದಲ್ಲಿ ಲಗೋರಿ, ಜೂಟಾಟ, ಐಸ್ ಪೈಸ್ ಎಲ್ಲಾ ಆಡಿದ್ದನ್ನು ನೆನಸಿಕೊಂಡರೆ ಏನೋ ಒಂದು ರೀತಿ ಖುಷಿಯಾಗತ್ತೆ. :)

• ಆಗೆಲ್ಲಾ ನಮಗೆ ತೆಂಗಿನ ಗರಿಯ ಬುಡವೇ (ಹೆಡೆಮಂಡೆ) ಬ್ಯಾಟು, ಖಾಲಿಯಾದ ಪ್ಲಾಸ್ಟಿಕ್ ಕವರಿನ ಗಂಟೇ ಬಾಲು. ಅದರಲ್ಲೇ ಕ್ರಿಕೇಟನ್ನು ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಆಡಿ ಖುಷಿಪಟ್ಟಿದ್ವಿ.

• ಪುಸ್ತಕದ ಕೊನೆಯ ಹಾಳೆಯಲ್ಲಿ ಮೂರುಕಲ್ಲಿನ ಆಟದ ಮನೆಗಳು ಇದ್ದೇ ಇರುತ್ತಿದ್ದವು. ಚೌಕಾಬಾರ, ಚನ್ನೇಮಣೆ, ಕಳ್ಳಾ ಪೊಲೀಸ್ ಆಟ, ಪಠ್ಯಪುಸ್ತಕದಿಂದ ಆಡಿದ ಬುಕ್ ಕ್ರಿಕೇಟ್ ಮತ್ತು ಇನ್ನೂ ಹಲವು ಆಟಗಳು ನಮ್ಮ ಮೆಚ್ಚಿನ ಆಟಗಳಾಗಿರುತ್ತಿದ್ದವು.

• ರಜೆ ಬಂತೆಂದರೆ ನಾನು ಕ್ರಿಕೇಟ್ ಆಡಲು ಅಕ್ಕನಹಿಂದೆ ದುಂಬಾಲು ಬೀಳುತ್ತಿದ್ದೆ. ಅದಕ್ಕವಳು ತನ್ನ "ಅಮ್ಮ ಆಟಕ್ಕೆ" ಬಂದರೆ ಮಾತ್ರಾ ಕ್ರಿಕೇಟನ್ನು ಆಡುವುದಾಗಿ ಶರತ್ತು ಇಡುತ್ತಿದ್ದಳು. ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಒಪ್ಪಿ ಕ್ರಿಕೇಟಿನ ಆಟ ಆಡಲು ಕಾಯುತ್ತಿದ್ದೆ.

• ಸ್ವಿಚ್ ಆನ್ ಮಾಡಿರದ ಪ್ಲಗ್ಗಿಗೆ ಪಿನ್ನನ್ನು ಚುಚ್ಚಿ ಕರೆಂಟ್ ಹೊಡೆಸಿಕೊಂಡದ್ದು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.

• ಪುಟ್ಟ ಪುಟ್ಟ ಮೋರಿಗಳಲ್ಲಿ ಮೀನು ಹಿಡಿದು ಹಾರ್ಲಿಕ್ಸ್ ಬಾಟಲಿಗೆ ಹಾಕಿ ಸಾಕಲು ಮಾಡುತ್ತಿದ್ದ ವಿಫಲಯತ್ನ ಗಳು, ಏರೋಪ್ಲೇನ್ ಚಿಟ್ಟೆಯನ್ನು ಹಿಡಿಯಲು ಹೋಗಿ ಎಡವಿ ಕೆಳಬಿದ್ದದ್ದು.

• ಅಪ್ಪನೊಡನೆ ಪೇಟೆಗೆ ಹೋದಾಗ ಹಠಮಾಡಿ ಕೊಂಡ ಪ್ಲಾಸ್ಟಿಕ್ ಲಾರಿಯ ಗಾಲಿ ಮುರಿದಾಗ ಬೇಸರದಿಂದ ಸಪ್ಪೆಮುಖ ಮಾಡಿಕೊಂಡದ್ದು.

• ಶಾಲೆ ಮುಗಿಸಿ ಮನೆಗೆ ಬಂದು ಅಮ್ಮನಿಗೆ ಏನಾದರೂ ತಿನ್ನಲಿಕ್ಕೆ ಕೊಡು ಅಂತ ತಲೆ ತಿಂದದ್ದು.

• ಸುಳ್ಳು ಸುಳ್ಳಾಗೇ ಹೊಟ್ಟೇ ನೋವು ಬರಿಸಿಕೊಂಡು ಶಾಲೆಗೆ ಹೋಗದೇ ಚಕ್ಕರ್ ಹೊಡೆದು ಮನೆಯಲ್ಲಿ ಮಜವಾಗಿ ಸಮಯ ಕಳೆದದ್ದು.

• ಐಯೋಡೆಕ್ಸ್ ಬಾಟಲಿಯಲ್ಲಿ ನಲ್ಲಿ ಗಿಡ ನೆಟ್ಟು ಪ್ರೀತಿಯಿಂದ ೫ ವರುಷ ಸಾಕಿದ್ದು.

• ಅಪ್ಪ ಪೇಟೆಯಿಂದ ತಂದಿದ್ದ ಕಡಲೇ ಕಾಯಿಯನ್ನ ಎಲ್ಲರೊಂದಿಗೆ ಹಂಚಿ ತಿಂದದ್ದು.

• ಅಪ್ಪನ ಸೈಕಲ್ಲಿನ ಚಕ್ರವನ್ನು ಜೋರಾಗಿ ತಿರುಗಿಸಿ ಅದಕ್ಕೆ ಕಡ್ಡಿ ಇಟ್ಟು ಅಪ್ಪನಿಂದ ಬೈಸಿಕೊಂಡದ್ದು.

• ಊಟ ಮಾಡಲು ಮನಸ್ಸಿಲ್ಲದಾಗ ಅಮ್ಮನ ಕೈ ತುತ್ತಿಗೆ ಕಾಡಿದ್ದು, ಕೈ ತುತ್ತು ತಿಂದು ನಿದ್ರೆಗೆ ಜಾರಿದ್ದು.

ಸಧ್ಯಕ್ಕೆ ಇಷ್ಟು ಸಾಕು, ಮಿಕ್ಕವನ್ನು ಪಟ್ಟಿ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ... :)

Monday, September 6, 2010

ಅವಳು ನನ್ನವಳು

ಅವಳು ನನ್ನವಳು ಬಲು ಚೆಂದದವಳು

ಮೋಹಕ ನಗೆ ಬೀರಿ ಸಂತಸವ ತಂದವಳು

ಮಧುರ ಮಾತನು ನುಡಿದು ನೋವ ಮರೆಸಿದವಳು

ಹೃದಯ ಬಡಿತದಿ ಬೆರೆತು ಉಸಿರಾಗಿ ನಿಂದವಳು

ಮುಗ್ದ ಮನಸಿನ ಚಲುವೆ, ಈಕೆ ನನ್ನವಳು

ಎನ್ನೆಡೆಗೆ ಪ್ರೀತಿಯ ಧಾರೆ ಹರಿಸಿದವಳು

ನನ್ನ ಬಾಳ ಪಯಣದ ಸಹ ಪಯಣಿಗಳು

ಬಾಳಬಂಡಿಯ ನೊಗವ ಹೊತ್ತು ಜೊತೆ ಸಾಗುವವಳು :)

Friday, August 27, 2010

ನನ್ನೊಲುಮೆಯಾ ಸಖೀ....

ದೇವ ದೇವರಲಿ ನಮಿಸಿ

ಬೇಡಿಕೆಗಳ ಮಳೆ ಸುರಿಸಿ

ಬಂದೆ ನಾ ನಗು ಮೊಗವನರೆಸಿ

ಹುಡುಕಿದ್ದೆ ನಾನಂದು ಎನ್ನ ಅರಸಿ



ಕಂಡಿದ್ದೆ ನಾ ನಂದು

ನಗುಮೊಗದ ಕನಸೊಂದು

ಕನಸಿನಲಿ ನೀ ಬಂದು

ನಿಂತಿದ್ದೆ ನಗು ತಂದು



ನಿನ್ನ ಆ ಹೊಳೆವ ಕಣ್ಗಳು

ನಗುವಿನಾ ಅಲೆಗಳು

ಕಣ್ಣಂಚಿನಲಿ ಇದ್ದ ಆ ನಿನ್ನ ಕುಡಿನೋಟ

ಕುಡಿನೋಟದೊಳಗಿದ್ದ ಆ ನಿನ್ನ ತುಂಟಾಟ



ಬಾ ಸಖಿ ಸಾಗುವ ಬಾಳ ಬಂಡಿಯಲಿ

ದೂರ, ಬಲುದೂರದಾ ಪಯಣದಲಿ

ನಾ ನಿನ್ನ ಜೊತೆಗಾರ ನೀ ಎನಗೆ ಆಧಾರ

ಪ್ರೀತಿಯದು ಜೊತೆಯಿರಲು ಸುಖಮಯವು ಸಂಸಾರ

Friday, May 28, 2010

ಭಾವನೆಗಳ ಬುತ್ತಿ

ಭಾವನೆಗಳ ಬುತ್ತಿಯ ಬಿಚ್ಚಿಡುತ್ತಿದ್ದೇನೆ

ನೂರೆಂಟು ಬಗೆಯ ಖಾದ್ಯಗಳು ಅದರಲ್ಲಿ

ಒಮ್ಮೆ ಅದರ ಘಮಲು ಮನಸಿಗೆ ಹಿತವಾದರೆ

ಮತ್ತೊಮ್ಮೆ ಅದರದ್ದೇ ಘಾಟು

ಯಾವುದನ್ನು ಪುರಸ್ಕಾರಿಸುವುದು

ಯಾವುದನ್ನು ತಿರಸ್ಕರಿಸುವುದು

ಒಮ್ಮೊಮ್ಮೆ ಸವಿಯಾದ ಭಾವನೆ

ಮತ್ತೊಮ್ಮೆ ಕಹಿಯಾದ ಭಾವನೆ

ಎರಡಕ್ಕೂ ಸರಿ ಸಮಾನ ಪೈಪೋಟಿ

ಸಕಲ ರುಚಿಗಳ ಸಮ್ಮೇಳನ

ಬುತ್ತಿಯ ಹಂಚಿಕೊಳ್ಳಲು ನನ್ನವರಿಲ್ಲ

ಸಕಲ ಖಾದ್ಯಗಳೂ ನನ್ನವೇ

ಅತ್ತ ಇತ್ತ ಎತ್ತನೋಡಿದರೂ ಯಾರ ಸುಳಿವಿಲ್ಲ

ಆದರೂ ಬುತ್ತಿಯ ಬಿಡಲು ಮನಸ್ಸಿಲ್ಲ

ಭಾವನೆಗಳ ಬುತ್ತಿಯಿಲ್ಲದೇ ಬದುಕಿಲ್ಲ

ದೂರದಿಂದ ಒಂದು ಅಸ್ಪಷ್ಟ ಆಕೃತಿ ನನ್ನೆಡೆಗೆ ಬರುತ್ತಿದೆ

ಬುತ್ತಿಯನ್ನೋಮ್ಮೆ ಅದರೊಡನೆ ಹಂಚಿಕೊಳ್ಳಲಾ?

Thursday, May 6, 2010

ನೀನಾರೇ...

ನೀಳಕೂದಲು, ಹೊಳೆವ ಕಣ್ಗಳು

ಬಂದು ನೆಲೆಸಿಹೆ ಎನ್ನ ಮನದೊಳು

ಬಿಂಕದ ವೈಯಾರಿ, ನೀನಾರೇ...



ಮಿಂಚಿನ ನೋಟ, ಸೊಬಗಿನ ಮೈ ಮಾಟ

ತುಂಟತನದಿ ಆಡುವ ಹುಡುಗಾಟ

ಬೈತಲೆಯ ಸೊಬಗಿ, ನೀನಾರೇ...



ಸರಳ ಸೌಂದರ್ಯ, ತುಸು ಗಾಂಭೀರ್ಯ

ದನಿಯ ಮಧುರ ಮಾಧುರ್ಯ

ನಾಚಿ ನೀರಾದ ಬಾಲೆ, ನೀನಾರೇ...



ಮನದ ಮುಗಿಲಿನಲಿ ಹೂ ಮಳೆಯ ಸುರಿಸಿದಾಕೆ

ಕಣ್ಣಂಚಿನಲೇ ಮಾತನಾಡಿ ಪುಳಕಗೊಂಡಾಕೆ

ಅಕ್ಕರೆಯ ಸಕ್ಕರೆ ಗೊಂಬೆ, ನೀನಾರೇ...

Thursday, April 22, 2010

ಚುಟುಕ - Weekend ಪ್ರೇಮಿ

ಅನುದಿನ ಮಟ ಮಟ ಮಧ್ಯಾನವಾದರೂ ಸರಿಯೇ
ಸೂರ್ಯನ ಕಾಟವಿದ್ದರೂ ಸರಿಯೇ
ದಟ್ಟ ಕಂಬಳಿಯನು ಮುಸುಕು ಹಾಕಿಕೊಂಡು ಮಲಗುವ ಈ ನನ್ನ ರೀತಿ...
ದುರಭ್ಯಾಸವಲ್ಲ HERO...

ಅದೇನಂದರೆ..
ಶನಿವಾರ ಭಾನುವಾರ ನೀವೆನ್ನ ಎಚ್ಚರಿಸುವ ಪರಿಯ ಮೋಡಿಯನನುಭವಿಸಿ
ಪ್ರತಿನಿತ್ಯವೂ WEEKEND ಎಂಬ ಹುಸಿ ಆಶ್ವಾಸನೆ ನೀಡಿ
ಕನವರಿಸಿ ಮಲಗುವ ಹಾಗೆ ಮಾಡುವ ನನ್ನ ಈ ಹುಚ್ಚು ಹೃದಯದ "WEEKEND ಪ್ರೀತಿ"!!!

Wednesday, April 21, 2010

ಮೊಟ್ಟ ಮೊದಲ ಕೇಕ್ ಕಟ್ಟಿಂಗ್

ಫೆಬ್ರವರಿ ೧೪ ೨೦೦೯

ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅಣ್ಣನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)

ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"

ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)

ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"

ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"

ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.


ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.

ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...

(ಲೇಖನ ಬರೆದು ಬಹಳ ತಿಂಗಳಾಯ್ತು. ಆದ್ರೆ ನಾ ಬರೆದಿದ್ದ ಪುಸ್ತಕ ನನ್ನ ಕೈಗೆ ಸಿಕ್ಕದೇ ಕಣ್ಣಾಮುಚ್ಚೇ ಕಾಡೇಗೂಡೇ ಆಡ್ತಾ ಇತ್ತು... ಇವತ್ತಿಗೆ ಸಿಕ್ಕೇ ಬಿಡ್ತು :) ಅದಕ್ಕೇ ನಿಮ್ಮೊಂದಿಗೆ ಹಂಚಿಕೊಳ್ತಾ ಇದೀನಿ....)

Monday, April 12, 2010

"ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ"

ಪ್ರತೀ ದಿನ ಕಂಪ್ಯೂಟರಿನ ಕೆಲಸ ಬಿಟ್ಟರೆ ನನ್ನ ಚಟುವಟಿಕೆಗಳು ಮತ್ಯಾವುದರಲ್ಲೂ ಹೆಚ್ಚಿಗೆ ಇರದ ದಿನಗಳ ಮಾತು. ನಾನು ಅಂದು ನನ್ನ ಗೆಳೆಯರೊಡನೆ ಚಾರಣಕ್ಕೆ ಹೊರಟಿದ್ದೆ. ಹೊಸಾ ತಂಡ, ಹೊಸಾ ಜನ, ಹೊಸಾ ಪ್ರದೇಶ... ಎಲ್ಲವೂ ಹೊಸತಾಗಿತ್ತು. ಯಾವುದೇ ಪ್ರವಾಸದಲ್ಲಾಗಲಿ, ಅಥವಾ ಸಭೆ ಸಮಾರಂಭಗಳಲ್ಲಾಗಲಿ ನಮಗೆ ಮೊದಲು ಯಾರ ಪರಿಚಯವೂ ಇಲ್ಲದಿದ್ದರೂ ಅಲ್ಲಿಂದ ಹೊರ ನಡೆವಾಗ ಯಾರದ್ದಾದರೂ ಪರಿಚಯ ಆಗಿರುತ್ತದ್ದೆ.

ನನಗೆ ನಿನ್ನ ಪರಿಚಯವೂ ಹಾಗೇ ಆದದ್ದು. ನಾವೆಲ್ಲಾ ಅಂದು ರಾತ್ರಿ ಬೆಂಗಳೂರಿನಿಂದ ಹೊರಟು ನಮ್ಮ ಪ್ರವಾಸದ ತಾಣದೆಡೆಗೆ ತೆರಳುವಾಗ ನೀನಾರೋ ನಾನಾರೋ... ಆ ಬಸ್ಸಿನ ಒಂದು ಮೂಲೆಯಲ್ಲಿ ನಾನು ಕುಳಿತಿದ್ದರೆ ನೀನೆಲ್ಲಿದ್ದೆಯೋ ನನಗಂತೂ ನೆನಪಿಲ್ಲ. ನಾನು ನನ್ನಷ್ಟಕ್ಕೆ ಕಿಟಕಿಯಿಂದ ಇಣುಕಿ ಹೊರ ಪ್ರಪಂಚವನ್ನು ನೋಡುತ್ತಾ ಕುಳಿತಿದ್ದೆ. ಮೊದಲಿಗೆ ನನ್ನ ಸ್ನೇಹಿತನಿಂದ ನಿನ್ನ ಪರಿಚಯವಾದರೂ ಬರಿಯ ನಗೆ ಬೀರಿ ಸುಮ್ಮನಾದೆ. ಅಲ್ಲಿಂದ ನಮ್ಮ ತಂಡ ಪ್ರವಾಸ ಮಾಡಲಿದ್ದ ಸ್ಥಳಕ್ಕೆ ಬಂದಾಗ ಕತ್ತಲೆಯನ್ನ ಸೀಳಿಕೊಂಡು ಸೂರ್ಯದೇವ ನಮಗೆಲ್ಲ ಶುಭೋದಯವನ್ನ ಸಾರಿದ್ದ. ಮಾರ್ಗ ಕಡಿದಾದ್ದರಿಂದ ನಾವೆಲ್ಲಾ ಅಲ್ಲಿದ್ದ ಮಿನಿ ಲಾರಿಯೊಂದನ್ನೇರಿ ಪಯಣವನ್ನು ಮುಂದುವರೆಸಿದ್ದೆವು. ನಾನು ನನ್ನಷ್ಟಕ್ಕೇ ನನ್ನ ಕ್ಯಾಮರಾ ಕಣ್ಣಿನಿಂದ ಸುತ್ತಲ ಪರಿಸರವನ್ನ ನೋಡುತ್ತಿದ್ದೆ. ಆಗ ಮೊದಲಬಾರಿಗೆ ನೀನು ನನ್ನೊಡನೆ ಮಾತಿಗಿಳಿದೆ. "ಬರೀ ನಿಮ್ದೇ ಫೋಟೋ ತೆಕ್ಕೋತೀರಾ ? ನಾವೂ ಎಲ್ಲಾ ಇಲ್ಲೇ ಇದೀವಲ್ಲ"... ಸರಿ... ಮಾತಿಗಿಳಿದಾಯಿತು. "ಅದಕ್ಕೇನಂತೆ, ನಿಮ್ದೂ ಒಂದ್ ಫೋಟೋ ತೆಗೀತೀನಿ" ಅಂದು ನಿನ್ನದೂ ಒಂದು ಫೋಟೋವನ್ನ ತೆಗೆದಿದ್ದೆ. ತದನಂತರ ನಿನ್ನ ಈ-ಮೈಲ್ ಐಡಿಯನ್ನು ನನಗೆ ತಿಳಿಸಿ "ಈ ಫೋಟೋನ ಮೈಲ್ ಮಾಡಿ, ಮರೀಬೇಡಿ" ಅಂದಿದ್ದೆ- ಅಷ್ಟಕ್ಕೇ ನಮ್ಮ ಮಾತು ಅಲ್ಲಿಗೆ ಮುಗಿದಿತ್ತು.

ನಮ್ಮ ಚಾರಣದ ಪ್ರಾರಂಭದ ಹಂತದಲ್ಲಿ ಹೆಚ್ಚಾಗಿ ಕಷ್ಟಕರವೆನಿಸಿರದಿದ್ದರೂ ನಮ್ಮಲ್ಲಿ ಕೆಲವರು ತುಸು ಬಳಲಿದ್ದರು, ನೀನೂ ಅದರಲ್ಲೊಬ್ಬಳು. ಚಾರಣದ ಮೊದಲ ಹಂತದಲ್ಲಿ ಎಲ್ಲಾ ಒಟ್ಟಿಗೇ ಮಾತನಾಡುತ್ತಾ ಹೋದಂತೆ ನೀನೂ ನನ್ನೊಡನೆ ಮಾತಿಗಿಳಿದೆ. ಆ ಗುಂಪಿನಲ್ಲಿ ನನಗೆ ಪರಿಚಯವಿದ್ದ ಒಬ್ಬನೇ ಗೆಳೆಯ ತುಸು ದೂರದಲ್ಲಿ ಹೋಗುತ್ತಿದ್ದರಿಂದ ನಿನ್ನೊಡನೆ ಮಾತನಾಡುತ್ತಾ ನಾನೂ ಹೆಜ್ಜೆ ಹಾಕತೊಡಗಿದೆ. ಅದು ನಿನ್ನ ಮೊದಲನೇ ಚಾರಣ. ನಾನು ವರ್ಷಕ್ಕೊಂದುಬಾರಿ ತಪ್ಪದೇ ಚಾರಣಕ್ಕೆ ಹೋಗುತ್ತಿದ್ದ ಚಾರಣಿಗ. ನನಗೆ ಚಾರಣದಲ್ಲಿದ್ದ ಅನುಭವವನ್ನ ಹಂಚಿಕೊಳ್ಳುತ್ತಾ ನಿನ್ನೊಡನೆ ನಡೆಯುತ್ತಿದ್ದೆ. ಒಂದು ಹಂತದಲ್ಲಿ ಚಾರಣದ ಹಾದಿ ಕಡಿದಾಗಿತ್ತು ಅಲ್ಲಿ ನಿನ್ನಿಂದ ಹತ್ತಲು ತುಸು ಕಷ್ಟವೆನಿಸಿದ್ದರಿಂದ ನನ್ನ ಸಹಾಯ ಹಸ್ತವನ್ನ ನಿನ್ನೆಡೆಗೆ ಚಾಚಿದ್ದೆ. ಅಲ್ಲಿಂದ ಮುಂದೆ ಎಲ್ಲೇ ಕಡಿದಾದ ದಾರಿಯಿದ್ದರೂ ನಾನು ನಿನ್ನ ಸಹಾಯಕ್ಕೆ ನಿಂತಿರುತ್ತಿದ್ದೆ, ಕೈ ಹಿಡಿದು ಮೇಲೆ ಹತ್ತಿಸುತ್ತಿದ್ದೆ.

ನಿನ್ನಲ್ಲಿ ಏನೋ ವಿಷೇಶತೆ ಇರುವ ಹಾಗನಿಸುತ್ತಿತ್ತು. ಎಲ್ಲರಂತೆ ನೀನು ಅತಿಯಾಗಿ ಅಲಂಕಾರ ಮಾಡಿರಲಿಲ್ಲ ನಿನ್ನಲ್ಲಿ ಮುಗ್ಧತೆ ಮತ್ತು ಸರಳತೆ ಎದ್ದು ಕಾಣುತ್ತಿತ್ತು. ನಿನ್ನ ಸ್ನೇಹಮಾಡಬೇಕೆನಿಸಿತು. ಸಾಮಾನ್ಯವಾಗಿ ಬಹುಪಾಲು ಹುಡುಗರಿಗೆ ಗರ್ಲ್ ಫ್ರೆಂಡ್ಸ್ ಇದ್ದೇ ಇರುತ್ತಾರೆ. ಎಲ್ಲೋ ನೂರಕ್ಕೆ ೧೦ ಜನಮಾತ್ರ ಆ ತಾಪತ್ರೇಯ (?) ದಿಂದ ದೂರ ಉಳಿದಿರುತ್ತಾರೆ. ಆ ಹತ್ತು ಜನರಲ್ಲಿ ನಾನೂ ಒಬ್ಬನಾಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕೆಲವು ಘಟನೆಗಳು ಇದ್ದೇ ಇರುತ್ತದೆ. ನನ್ನ ಜೀವನದಲ್ಲಿಕೂಡಾ ಹಲವು ಘಟನೆಗಳು ನಡೆದಿವೆ. ಆದರೆ ನಿನ್ನೊಡನೆ ಕಳೆದ ಆ ೨ ದಿನಕೂಡಾ ಆ ಘಟನೆಗಳ ಸಾಲಿನಲ್ಲಿ ಬಂದು ನಿಲ್ಲುತ್ತವೆಂದು ನಾನು ಎಣಿಸಿರಲಿಲ್ಲ.

ಬಿಸಿಲಿನ ತಾಪ ಏರುತ್ತಲಿತ್ತು. ನೀನು ತಲೆಯಮೇಲೆ ಯಾವುದೇ cap ಹಾಕಿರಲಿಲ್ಲ. ಬಹುಷಃ ಅನುಭವದ ಕೊರತೆ ಅಂತ ಕಾಣ್ಸತ್ತೆ. ನಾನು ಪೂರ್ವಸಿದ್ದತೆ ಮಾಡಿಕೊಂಡೇ ಬಂದಿದ್ದೆ. ತಲೆಯಮೇಲೆ ಒಂದು ಕ್ಯಾಪ್, ಸೊಂಟಕ್ಕೊಂದು ಪೌಚ್, ಅದರಲ್ಲಿ ಕೆಲವು ಪೆಪ್ಪರ್ಮೆಂಟ್ ಗಳು. ಪುಟ್ಟದೊಂದು ನೀರಿನ ಬಾಟಲಿ, ಆಪತ್ಕಾಲಕ್ಕೆ ಗಾಯಗಳಿಗೆ ಹಚ್ಚುವ ಒಂದು ತೈಲ... ಇತ್ಯಾದಿ. ನಿನ್ನ ಪಾಡು ನೋಡಿ ಅಯ್ಯೋ ಅನ್ನಿಸ್ತಾ ಇತ್ತು ನನ್ಗೆ. ಹುಡುಗರಾದರೆ ಗಟ್ಟಿಗರು.. ಹೇಗಾದರೂ ತಡೆದುಕೊಳ್ಳ್ತಾರೆ. ಆದರೆ ಹುಡುಗಿಯರು ಸ್ವಲ್ಪಮಟ್ಟಿಗೆ ಕೋಮಲಾಂಗಿಯರು. ಬಿಸಿಲಿನ ತಾಪ ತಡೆಯಲೆಂದು Sunscreen Lotionಗಳು ತುಟಿ ಒಡೆಯದಿರಲೆಂದು Lip Guard ಗಳು ಇತ್ಯಾದಿ ಇಲ್ಲದೇ ಹೊರಗೆ ಬಾರದವರು. ನಾನು ನನ್ನ ತಲೆಏರಿದ್ದ capಅನ್ನ ತೆಗೆದು ನಿನಗೆ ಕೊಟ್ಟೆ. ಬಿಸಿಲಿನ ತಾಪದಲ್ಲೂ ನಿನ್ನ ಮೊಗದಲ್ಲಿ ಮಂದಹಾಸ ಮಿನುಗಿತ್ತು. ಒಟ್ಟಿನಲ್ಲಿ ನನಗೆ ಪದೇ ಪದೇ ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ನೆನಪಿಗೆ ಬರುತ್ತಲಿತ್ತು.

ನಾ ಕೊಟ್ಟ capಅನ್ನ ತಲೆಮೇಲೇರಿಸಿ ಕಡಿದಾದ (ಅಷ್ಟೇನೂ ಕಡಿದಾಗಿರಲಿಲ್ಲದ) ದಾರಿಯಲ್ಲಿ ತ್ರಾಸಪಟ್ಟು ಅಲ್ಲಲ್ಲಿ ಬಂಡೆಗಳಮೇಲೆ ಕುಳಿತು ಮತ್ತೆ ಮರಗಳ ನೆರಳಿನಲ್ಲಿ ವಿಶ್ರಮಿಸಿ ಮುಂದೆ ಬರುತ್ತಿದ್ದ ನಿನ್ನಪಾಡು ನೋಡಿ ಯಾರಿಗಾದರೂ "ಅಯ್ಯೋ ಪಾಪದ್ ಹುಡ್ಗಿ, ಯಾಕ್ ಅಷ್ಟು ಕಷ್ಟಾಪಟ್ಕೊಂಡ್ ಹೋಗ್ಬೇಕೋ, ಸುಮ್ನೆ ಮನೆಲಿ ಕೂತ್ರೆ ಆಗಲ್ವಾ ???" ಅಂತ ಅನ್ನಿಸೋ ಹಾಗಿತ್ತು . ಅಂತೂ ಇಂತೂ ಆ ಗುಡ್ಡದ ಅರ್ಧ ದಾರಿ ಕ್ರಮಿಸಿಯಾಯಿತು. ನಾನು ಮಾರ್ಗಮಧ್ಯದಲ್ಲಿ ಅವಕಾಶ ಸಿಕ್ಕಲ್ಲೆಲ್ಲಾ ಆ ಪ್ರಕೃತಿಯ ಸೊಬಗನ್ನ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾ ಹೋದೆ. ಅದರ ಮಧ್ಯೆ ನನಗರಿವಿಲ್ಲದಂತೇ ನಿನ್ನ ಕೆಲವು ತುಣುಕುಗಳೂ ಸೆರೆಯಾಗಿದ್ದವು. ಅರ್ಧ ದಾರಿ ಕ್ರಮಿಸಿದಮೇಲೆ ಮಿಕ್ಕಿದ್ದ ಅರ್ಧ ದಾರಿ ಬಲು ತ್ರಾಸದಾಯಕವಾಗಿ ಕಾಣತೊಡಗಿತು. ನಾನೊಬ್ಬನೇ ಇದ್ದಲ್ಲಿ ಬಹುಷಃ ಪೂರ್ತಿಯಾಗಿ ಹತ್ತಿಬಿಡುತ್ತಿದ್ದೆ. ಆದರೆ ನಿನ್ನ ಮೊಗದಲ್ಲಿ "ನನ್ಗೆ ಯಾರೂ ಹೆಲ್ಪ್ ಮಾಡ್ತಾ ಇಲ್ಲ, ನನ್ ಜೊತೆ ಇರು, ಪ್ಲೀಸ್" ಅನ್ನೊ ಭಾವನೆ ಎದ್ದು ಕಾಣುತ್ತಿತ್ತು. ಸರಿ ಆದದ್ದು ಆಗಿಹೋಗಲಿ ಅಂತ ಚಾರಣವನ್ನ ಅಲ್ಲಿಗೇ ನಿಲ್ಲಿಸಿ ಸ್ವಲ್ಪ ಹೊತ್ತು ನಾವು ಮತ್ತೆ ಹಲವರು ಅಲ್ಲಿಯೇ ಕುಳಿತು ಆ ಸೌಂದರ್ಯವನ್ನ ಸವಿಯುತ್ತಾ ಕೆಲಹೊತ್ತು ಕಾಲ ಮುಂದೂಡಿದೆವು. ಹೇಗೋ ಮಾಡಿ ಅರ್ಧ ಹತ್ತಿದ್ದೇನೋ ಆಯಿತು, ಇನ್ನು ಇಳಿಯೋದು ಹೇಗೇ ??? ಹತ್ತುವಾಗ ಸ್ವಲ್ಪ ಸುಲಭವಾದರೂ ಇಳಿಯುವಾಗ ನಮ್ಮ ದೇಹದ ಸಮತೋಲನ ಅತ್ಯಗತ್ಯ. ಕಾಲು ಜಾರಿದರೆ ಸೀದಾ ಕೆಳಗಿನ ಬಂಡೆಗಳಿಗೆ ಢಿಕ್ಕಿ ಹೊಡೆಯುವುದು ಖಂಡಿತ. ನಮ್ಮಲ್ಲಿ ಕೆಲವರು ಜೊತೆಗೆ ತಂದಿದ್ದ ಕೋಲಿನ ಸಹಾಯ ಪಡೆದು ಇಳಿದರೆ, ನೀನು ಮತ್ತೆ ನಿನ್ನ ಬೆಂಬಲಿಗರು ಬಾಲ್ಯದ "ಜಾರುಬಂಡಿ" ಯನ್ನ ಮತ್ತೆ ನೆನಪಿಸಿಕೊಂಡು ಜಾರುತ್ತಾ ಇಳಿದಿರಿ.

ನಾವೆಲ್ಲಾ ಪ್ರವಾಸವನ್ನ ಪ್ರಯಾಸದಿಂದ ಮುಗಿಸಿ ಮರಳಿ ನಮ್ಮ ನಮ್ಮ ಗೂಡಿಗೆ ಮರಳಲು ಇದ್ದ ಸಂಪರ್ಕ ಕೊಂಡಿಯನ್ನೇರಿದೆವು. ದಾರಿಯುದ್ದಕ್ಕೂ ಅಂತ್ಯಾಕ್ಷರಿಗಳ ಸುರಿಮಳೆ. ಆ ಬಸ್ಸಿನ ಛಾವಣಿ ಸ್ವಲ್ಪ ಗಟ್ಟಿಮುಟ್ಟಾಗಿದ್ದರಿಂದ ಹಾರಿ ಹೋಗಲಿಲ್ಲವೆನ್ನುವುದು ಸಂತಸದ ವಿಷಯ :) ಅಲ್ಲಿಯೇ ನಿನ್ನ ಮೊಬೈಲ್ ಸಂಖ್ಯೆ, ಈ-ಮೈಲ್ ವಿಳಾಸವನ್ನು ಮತ್ತೊಮ್ಮೆ ಪಡೆದುಕೊಂಡೆ. ನಾವೆಲ್ಲಾ ಹಾಡುತ್ತಾ ಕುಣಿಯುತ್ತಾ ಮರಳಿ ಬೆಂಗಳೂರಿಗೆ ಸೇರಿದ್ದೆವು. ಅದಾದನಂತರದ ಕೆಲವು ದಿನಗಳು ನೀನು ನನ್ನೊಂದಿಗೆ ಮೊಬೈಲಿನಲ್ಲಿ ಮಾತನಾಡಿಸಿದ್ದುಂಟು. SMS ಕಳಿಸಿದ್ದುಂಟು. ಆದರೆ ದಿನ ಕಳೆದಂತೆ ಅವೆಲ್ಲವೂ ಕಡಿಮೆಯಾಗತೊಡಗಿತು.

ನಿಜವಾಗಲೂ ನನಗೆ ನಿನ್ನಲ್ಲಿ ಪ್ರೀತಿ ಪ್ರೇಮ ಅಂಥದ್ದೇನೂ ಇರಲಿಲ್ಲ.. ಆದರೆ ಒಬ್ಬ ಹುಡುಗ ಮತ್ತೊಂದು ಹುಡುಗಿಯಜೊತೆಯಲ್ಲಿ ಸಲುಗೆಇಂದ ಇದ್ದಾಗ ಸಮಾಜದ ಜನ ಮಾತನಾಡುವುದೇ ಪ್ರೇಮದ ಬಗ್ಗೆ. ನಮ್ಮ ನಡುವೆಯೂ ಹಾಗೇ ಆಯಿತು. ನಮ್ಮಿಬ್ಬರ ಸ್ನೇಹಕ್ಕೆ ಬೇರೆಯ ಹೆಸರು ಕಟ್ಟತೊಡಗಿತು ಸಮಾಜ. ಅದು ನನ್ನ ಗಮನಕ್ಕೆ ಬಂದದ್ದು ನನ್ನ ಸ್ನೇಹಿತನಿಂದ. ಬಹುಷಃ ನಿನಗೆ ನಿನ್ನ ಆಫೀಸಿನಲ್ಲೂ ಹಾಗೇ ಹೇಳಿದ್ದಿರಬಹುದು. ಅದೇ ಕಾರಣದಿಂದ ನೀನು ಕ್ರಮೇಣ ಫೋನ್ ಕಾಲ್, ಮೆಸ್ಸೇಜ್ ಎಲ್ಲ ವನ್ನೂ ಕಡಿಮೆಮಾಡಿರಬಹುದು. ನಾನುಕೂಡಾ ಕಡಿಮೆ ಮಾಡಿದೆ. ನೀನು ಚಾಟ್ ನಲ್ಲಿ Online ಇದ್ದರೂ ನಾನು ನಿನ್ನನ್ನು ಮಾತನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ. ಇಂದಿಗೂ ನಿನ್ನನ್ನು Online ನಲ್ಲಿ ನೋಡುತ್ತೇನೆ. ನಮ್ಮ ಚಾರಣದ ದಿನಗಳನ್ನ ನೆನಪಿಸಿಕೊಳ್ಳುತ್ತೇನೆ, ಹಿಂದಿಯ ಮಧುರ ಗೀತೆ "ಏಕ್ ಅಜ್ನಭಿ ಹಸೀನಾಸೇ ಯೂ ಮುಲಾಕಾತ್ ಹೋಗಯಿ" ಹಾಗೆಯೇ ನನ್ನ ಕಿವಿಗಳಲ್ಲಿ ಗುಯ್ ಗುಡುತ್ತದೆ.

"ಖೂಬ್ ಸೂರತ್ ಬಾತ್ ಯೇ, ಚಾರ್ ಪಲ್ಕಾ ಸಾಥ್ ಯೇ, ಸಾರೀ ಉಮರ್ ಮುಝ್ಕೋ ರಹೇಗಾ ಯಾದ್"

Wednesday, April 7, 2010

ಚಿಗರೆ ಕಂಗಳ ಚೆಲುವೆ

ನೀ ಬರುವೆ ಪ್ರತಿದಿನವು ನನ್ನ ಕನಸಿನಲ್ಲಿ
ಆನಂದ ಅನುದಿನವು ನನ್ನ ಮನಸಿನಲ್ಲಿ
ಅನುದಿನವು ಹೂದೋಟ, ನಡೆವದಾರಿಯಲ್ಲಿ
ಸಾಕೆನಗೆ ಆ ಕುಡಿನೋಟ, ಮನಕರಗಿತಿಲ್ಲಿ

ನಿನ್ನದೆಂತಹಾ ಬೆರಗು, ಬಿಂಕ ಬಿನ್ನಾಣ
ನಿನ ಚೆಲುವು ಎನಗಾಯ್ತು ಸ್ಪೂರ್ತಿಯಾ ತಾಣ
ಕನಸಲ್ಲೂ ಹೊಂಬೆಳಕು ತಂದ ಬೆಳದಿಂಗಳು
ದಾಳಿಂಬೆ ನಗುಚೆಲ್ಲಿ ಬಿರಿದ ಆ ತುಟಿಗಳು

ಅರಳಿದಾ ಸುಮವು ನಾಚಿ ನೀರಾಗಿರಲು
ನಿನ ಸೌಂದರ್ಯಕೆ ಸಾಟಿ ನೀನೇ ಆಗಿರಲು
ದುಂಬಿಯದು ಝೇಂಕರಿಸಿ ನಿನ್ನರಸಿ ಬಂದಿರಲು
ಸುಮವಲ್ಲವೋ ಮರುಳೆ, ಕುಸುಮಬಾಲೆಯು ಇವಳು

ಸಿಂಹಿಣಿಯ ನಡು ನಿನದು ಬಳುಕುತಾ ನಡೆ ನೀನು
ಗೆಜ್ಜೆನಾದದಿ ನುಡಿಸಿ ಮಧುರಗೀತೆಯ ಜೇನು
ನಿನ ನಾಟ್ಯವಾ ನೋಡಿ ನವಿಲೂ ನಿಂದಿತ್ತು
ಆ ಮಧುರ ಗಾನಕ್ಕೆ ಕೋಗಿಲೆಯೂ ನಾಚಿತ್ತು

ಬೆಳಗಾಯ್ತು ಹಾಳಾಯ್ತು ಆ ನನ್ನ ಸವಿಗನಸು
ಚಿಗರೆ ಕಂಗಳ ಚೆಲುವೆ ನೀ ಸಿಗುವೆ- ಹೇಳುತಿದೆ ಈ ಮನಸು
ಕಾವಲಿರು ನೀ ಎನ್ನ ಸವಿಗನಸುಗಳಿಗೆ
ಕಳೆದು ಹೋಗದಿರಲೆಂದೂ ಈ ಮಧುರ ಘಳಿಗೆ
:D

Monday, April 5, 2010

ತಾಯೇ ನಿನಗೆ ವಂದನೆ...

Human body can bear only upto 45 Del(Unit) of pain. But at the time of giving girth, a woman feels upto 57 del of pain. this is similar to 20 bones getting fractured, at a time. Love your Mother till the end of your life.... ಈ SMS ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದರ ಬಗ್ಗೆ ವಾದ ವಿವಾದ ಮಾಡದೇಇದ್ರೂ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ ಅಪಾರವಾದದ್ದು ಅನ್ನೋದು ಸತ್ಯ. ಅಂತಹಾ ತಾಯಂದಿರಿಗಾಗಿ, ಪ್ರತಿಯೊಬ್ಬ ಮಹಿಳಾಮಣಿಯರಿಗಾಗಿ ನಾನು ಬರೆದ ಕೆಲವು ಸಾಲುಗಳಿವು. :)

I am dedicating this poem to all such ladies with respect.

ಹಸುಗೂಸು ಹೆರುವಾಗ ನೀ ಕಷ್ಟಪಟ್ಟೆ
ಹೆತ್ತಕಂದನ ಕಂಡು ಸಂತಸವ ಪಟ್ಟೆ
ಹುಟ್ಟಿದ ಹಸುಗೂಸ ಒಲುಮೆಯಲಿ ಸಾಕಿ
ಒಲುಮೆ ಸಿರಿ ಸಂತಸವ ಅನುದಿನವು ಉಣಿಸಿ

ಎದ್ದು ಬಂದಿದ್ದೆ ನಡುರಾತ್ರಿಯಲಿ, ಕೇಳಿ ಕಂದನ ಕೂಗು
ರಟ್ಟೆನೋವಾದರೂ ನೀ ಬಿಡಲಿಲ್ಲ ತೊಟ್ಟಿಲ ತೂಗು
ರಚ್ಚೆಹಿಡಿದತ್ತಾಗ ತೋಳ ತೆಕ್ಕೆಯಲಿ ಮಲಗಿಸಿ
ಮುದ್ದು ಕಂದನ ನಿನ್ನ ಕಣ್ರೆಪ್ಪೆಯಲಿ ಇರಿಸಿ

ಅಯ್ಯೋ ಕಂದನ ಒಡಲು ಬಿಸಿಯಾಯ್ತು
ಹೆತ್ತಕರುಳಿನ ಕೂಗು, ಚಿಂತೆ ನೂರಾಯ್ತು
ಗುಡಿ ಗೋಪುರದಿ ಪೂಜೆ, ಮನೆ ದೇವರಲಿ ಹರಕೆ
ಕಂದನಿಗೆ ಗುಣಮಾಡು, ನಗುತರಿಸು ಮೊಗಕೆ

ಅಪಾರ ಪ್ರೀತಿಯ ಮೊಗೆದು ಬೊಗಸೆಯಲಿ ತುಂಬಿ
ಮಮಕಾರ ತೋರಿ ಮುತ್ತಿನ ಮಳೆ ಸುರಿಸಿ
ನೋವುಗಳ ನುಂಗಿ, ಸಂತಸವ ಉಣಬಡಿಸಿ
ಕಣ್ಣೀರನು ಮರೆಸಿ, ನೋವನ್ನು ತೊರೆಸಿ

ಕೂಸದು ಗೆದ್ದಾಗ ನೀನೂ ಸಂಭ್ರಮಿಸಿ
ಸಿಹಿಯೂಟ ಪ್ರೋತ್ಸಾಹ, ಕಂದನಿಗೆ ಹರಸಿ
ನಿನ್ನೊಲುಮೆಯ ಧಾರೆ ಹರಿದಿರಲಿ ನಿರಂತರ
ನೀಜೊತೆಯಲಿದ್ದರೆ ಸಂಭ್ರಮದ ಸಡಗರ

Wednesday, March 31, 2010

ನನ್ನ ಚಲುವೆ..

ನನ್ನವಳು ಈ ಚಲುವೆ ಬಲು ಅಂದಗಾತಿ
ಸಾಗರದ ಅಲೆಯಂತೆ ನೀ ತೋರುವಾ ಪ್ರೀತಿ…

ಒಮ್ಮೆ ಬಲು ಮೃದುವಾಗಿ ಬಂದೆನ್ನ ಸೋಕಿ
ಮತೊಮ್ಮೆ ರಭಸದಿ ಬಂದೆನ್ನ ತಾಕಿ…

ಕಂಡೆನಾ ಏರಿಳಿತ ನನ್ನವಳ ಪ್ರೀತಿಯಲಿ
ಏನು ಗೊಂದಲವೊ ಏನೊ ಆಕೆಯಾ ಮನಸಿನಲಿ…

ಒಮ್ಮೊಮ್ಮೆ ಸಂತಸದಿ ಬಳಿನನ್ನ ಬರುವಳು
ಮತ್ತೊಮ್ಮೆ ಬೇಸರದಿ ದೊರದಲಿ ಇರುವಳು…

ಚೆಂದುಟಿಯ ಚೆಲುವೆ ಈ ಮೌನ ಬೇಕೇ
ಬಾಯ್ದೆರೆದು ಸವಿನುಡಿಯೆ ಈ ಮೌನ ಸಾಕೇ…

ಮಕ್ಕಳಾಟವು ಚೆನ್ನ ಜಿಂಕೆ ಓಟವು ಚೆನ್ನ
ಓ ನನ್ನ ಚೆಲುವೆ ನೀ ಮಾತಾಡೆ ಬಲುಚೆನ್ನ…

ಮಾತಾಡು ಎನಕೊಡ ಈಗಲಾದರೂ ನಗುತಲಿ
ಕಾದಿಹುದು ಈ ಹೃದಯ ನಿನಗಾಗಿ ತವಕದಲಿ…

Tuesday, March 30, 2010

ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ

ನಾನು ಹೈದರಾಬಾದಿನಲ್ಲಿದ್ದಾಗ ಗೆಳೆಯ ವಿಜಯ್ನೊಡನೆ ಮಾತನಾಡುತ್ತಾ ಇದ್ದಾಗ ತಮಾಶೆಗೆಂದು ನಾಲ್ಕು ಸಾಲು ಕವನದರೀತಿಯಲ್ಲಿ ಹೇಳಿದೆ. ಅವನ ಪ್ರೇರೇಪಣೆಯೊಂದಿಗೆ ಬರೆಯಲು ಪ್ರಾರಂಭಿಸಿದ್ದು ಇಂದು ಕೊಂಚ ಬೆಳೆದು ಕವನದ ಜೊತೆಗೆ ಲೇಖನದ ರೂಪವನ್ನೂ ಪಡೆದಿದೆ. ಆ ದಿನಗಳಲ್ಲಿ ಬಹುಶಃ ನನ್ನ ಕವನಗಳು ಹೊರಬರಲು ನನ್ನ ಒಂಟಿತನವೇ ಮೂಲಕಾರ್‍ಅಣವೇನೋ. ಕವನಗಳನ್ನು ಬ್ಲಾಗಿನ ಮುಖಾಂತರ ಗೆಳೆಯರ ಬಳಿ ತಲುಪಿಸಲೂ ಗೆಳೆಯರೇ ಕಾರಣ.

ಕೇವಲ ತಮಾಷೆಗೆಂದು ಪ್ರಾರಂಭಿಸಿದ ಬ್ಲಾಗಿನಗೀಳು ಇಂದು ನನ್ನ ಅವಿಭಾಜ್ಯ ಅಂಗವಾಗಿದೆ. ಬರವಣಿಗೆ ನನ್ನ ಕನಸು. ಹಾಗಾಗಿ ನನ್ನ ಕನಸಿನ ಕೂಸಿಗೆ ಅದೇ ಸರಿಯಾದ ಹೆಸರೆಂದು ನಾಮಕರಣ ಮಾಡಲು ಪ್ರಯತ್ನ ಪಟ್ಟೆ. ಆದರೆ ನನ್ನಂತೆಯೇ ಬೇರೆಯವರಿಗೂ ಆಲೋಚನೆ ಇದ್ದಿದ್ದರಿಂದ "ನನ್ನಕನಸು" ಹೆಸರಿನ ಬ್ಲಾಗೊಂದು ಮೊದಲೇ ಅವತರಿಸಿತ್ತು. ನನ್ನ ಕನಸು ಆಗತಾನೆ ಚಿಗುರೊಡೆದಿದ್ದರಿಂದ ನನ್ನ ಕನಸಿನ ಕೂಸಿಗೆ "ನನ್ನಕನಸು-ಚಿಗುರು" ಎಂದು ನಾಮಕರಣ ಮಾಡಿದೆ. ಮೊದ ಮೊದಲು ಮೂಡಿದ ಚಿಗುರು ಬಂಪರ್ ಬೆಳೆಯನ್ನೇ ತಂದಿತ್ತು. ಕೇವಲ ಕೆಲವೇ ದಿನಗಳಲ್ಲಿ ನನಗೇ ಅರಿಯದಂತೆ ನನ್ನೊಳಗಿನಿಂದ ೪೧ ಕವನ ಹೊರಹೊಮ್ಮಿತ್ತು. ಬರೆದದ್ದೆಲ್ಲವನ್ನೂ ಕವನ ಎನ್ನಲಾಗುವುದಿಲ್ಲ.

ಆ ದಿನಗಳಲ್ಲಿ ಕಣ್ಣಿಗೆ ಕಾಣುವ ದೃಷ್ಯಗಳೆಲ್ಲವೂ ಕವನಗಳಿಗೆ ಸ್ಪೂರ್ತಿ ತಂದುಕೊಡುತ್ತಿತ್ತು. ಜೊತೆಯಲ್ಲಿ ಗೆಳೆಯರ ಪ್ರೋತ್ಸಾಹ, ಪ್ರೀತಿ ತುಂಬಿದ ತಿದ್ದುವಿಕೆ, ಆಕ್ಷೇಪಣೆ ಎಲ್ಲಾ ಮತ್ತಷ್ಟು ಬರೆಯಬೇಕೆಂಬ ಬಯಕೆಯನ್ನ ಹೆಚ್ಚಿಸುತ್ತಿದ್ದವು. ನನ್ನ ಹಲವಾರು ಕವನಗಳನ್ನು ಇಷ್ಟಪಟ್ಟುಕೊಂಡು ಕೆಲವರು ತಮ್ಮ ಬ್ಲಾಗಿಗೂ ಹಾಕಿಕೊಂಡಿದ್ದುಂಟು. ಅದಕ್ಕೆ ನಾನು ಕೂಡಾ ಆಕ್ಷೇಪಣೆ ಮಾದಿದ ನೆನಪು. ಆದರೀಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಹಲವರು ನನಗೆ ಬೇಸರಿಸಬಾರದೆಂದು ನಾ ಬರೆದ ಕವನಗಳೆಲ್ಲಾ ಉತ್ತಮವಾಗಿದೆಯೆಂದರೆ ಮತ್ತೆ ಕೆಲವರು ಕಟುವಾಗಿ ಟೀಕಿಸಿದರು, ತಪ್ಪುಗಳನ್ನು ಎತ್ತಿ ಹಿಡಿದರು. ಅವರೆಲ್ಲರಿಗೂ ನನ್ನ ನಮನಗಳು.

ಮೊದ ಮೊದಲು ಅರ್ಧ ರಾತ್ರಿ ೨ ಘಂಟೆಗೆ ಎದ್ದು ಕವನ ಬರೆದದ್ದುಂಟು. ಕನಸಿನಲ್ಲೂ ಕವನಗಳೇ, ದಾರಿಯಲ್ಲಿ ಕಾಣಸಿಗುವ ಪ್ರತೀ ಮುಖದಲ್ಲಿ ಹುದುಗಿರುವ ಆಲೋಚನೆಗಳನ್ನು ಅರಿಯಲೆತ್ನಿಸುತ್ತಿದ್ದೆ. ನಾನು ಅವರ ಸ್ಥಾನದಲ್ಲಿದ್ದಿದ್ದರೆ ಏನಾಗುತ್ತಿತ್ತು? ಅದನ್ನೇ ಯೋಚಿಸುತ್ತಿದ್ದೆ. An Empty mind is Devil's Workshop ಅನ್ನುವಹಾಗೆಯೇ ಆಗಿತ್ತು ನನ್ನ ಕಥೆ :) ಆಫೀಸಿನಿಂದ ಹೆಚ್ಚು ಒತ್ತಡವಿರಲಿಲ್ಲ, ಮಾತನಾಡಲು ನಾನು ಎಲ್ಲರಿಂದ ದೂರವಿದ್ದೆ. ನಾನು ಆ ಸಮಯದಲ್ಲಿ ನನ್ನೊಂದಿಗೆ ಸದಾಕಾಲ ಒಂದು ಪೇಪರ್ ಮತ್ತು ಒಂದು ಪೆನ್ ಇಲ್ಲದೇ ಎಲ್ಲಿಗೂ ಹೋದ ನೆನಪಿಲ್ಲ. ನನ್ನ ಆ ಪಾಡನ್ನುಕಂಡು ನನ್ನ ಮಿತ್ರರು ಛೇಡಿಸಿದ್ದೂ ಉಂಟು. ಆದರೂ ಬರವಣಿಗೆಯ ಭೋರ್‍ಗರೆತ ನಿಲ್ಲಲಿಲ್ಲ. ಆದರೆ ಕಾರಣಾಂತರಗಲಿಂದ ಕ್ರಮೇಣ ಕಡಿಮೆಯಾಗುತ್ತಾ ಬಂತು.

ಆದರೀಗ ಮತ್ತೊಮ್ಮೆ ವಸಂತ ಬಂದಿದೆ. ಮನದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿವೆ. ಒಂದು ವೆತ್ಯಾಸವೆಂದರೆ ಈ ಬಾರಿ ನಾನು ಹಿಂದಿನಂತೆ ಎಲ್ಲರಲ್ಲು ನನ್ನ ಬರವಣಿಗೆಯನ್ನು ಓದಿ ಎಂದು ದುಂಬಾಲು ಬೀಳುವುದಿಲ್ಲ :) ಆಸಕ್ತರು ತಾವಾಗೇ ಬರುತ್ತಾರೆ, ಯಾರದರೂ ನನ್ನ ಬ್ಲಾಗಿಗೆ ಬಾರದಿದ್ದರೆ, ನಾ ಬರೆದ ಬರವಣಿಗೆ ಓದಲಿಲ್ಲವೆನ್ನುವುದಕ್ಕೆ ನನಗೆ ಬೇಸರವಿಲ್ಲ. ಈ ಬಾರಿಯೂ ನಾನು ಕಾಗದ ಮತ್ತು ಲೇಖನಿಯನ್ನು ಹಿಡಿದೇ ಹೊರಟಿದ್ದೆ. ಆದರೆ ನನ್ನೊಡನೆ ಮುನಿಸಿಕೊಂಡಿದ್ದ ಲೇಖನಿ ಮೌನವಾಗಿತ್ತು. ಹಾಗಾಗಿ ನಾನು ಈ ಎಲ್ಲಾ ವಿಚಾರವನ್ನೂ ಬರೆಯಲು ಕಾಗದ ಬಳೆಸಲಿಲ್ಲ, ಬದಲಿಗೆ ನನ್ನ ಮೊಬೈಲಿನ ಸಹಾಯ ಪಡೆದುಕೊಂಡೆ. ಮನದ ಆಲೋಚನೆಗಳನ್ನೆಲ್ಲಾ ಅದರಲ್ಲಿ ದಾಖಲಿಸುತ್ತಾ ಹೋದೆ, ನಂತರ Computer ನನ್ನ ಸಹಾಯಕ್ಕೆ ಕಾಯುತ್ತಲಿತ್ತು. ಹಾಗಾಗಿ ಕಾಗದವನ್ನೂ ಮತ್ತು ಕಾಗದಕ್ಕಗಿ ಕತ್ತರಿಸುವ ಮರವನ್ನೂ ಉಳಿಸಿದೆ ;) ಏಪ್ರಿಲ್ ತಿಂಗಳಿಗೆ ನನ್ನ ಕನಸಿನ ಕೂಸಿಗೆ ೩ ವರುಷಗಳು ತುಂಬಲಿದೆ.... ಈ ಮೂರು ವರುಷಗಳಲ್ಲಿ ಅಂದಾಜು 3900 Hits ನನ್ನ ಬ್ಲಾಗಿಗೆ!!! ನನ್ನ ಪಾಲಿಗೆ ಅದೇ ಸಂತೋಷದ ವಿಷಯ.

ನಿಮ್ಮೆಲ್ಲರ ಪ್ರೀತಿಯ ಹಾರೈಕೆ ನನ್ನೊಂದಿಗೆ, "ನನ್ನಕನಸೊಂದಿಗೆ" ಇದ್ದರೆ ಸಾಕು....

Thursday, March 25, 2010

bg******@ rediffmail. com ಗೆ ಒಂದು ಪತ್ರ

ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು ನಿನ್ನ ಅನುಮಾನಗಳ ಪರಿಹಾರಕ್ಕೆ ನನ್ನನೇ ಏಕೆ ಆಯ್ಕೆ ಮಾಡಿದೆಯೋ, ಗೊತ್ತಿಲ್ಲ. ನಮ್ಮ ಪರಿಚಯವಾಯ್ತು. ನಾನು ಅಂದು ಬಹಳ ಸಂಕೋಚದ ಹುಡುಗ. ಹೆಚ್ಚಿಗೆ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅದರಲ್ಲೂ ಹುಡುಗಿಯರನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಿದ್ದೆ.

ನಮ್ಮ ಕೋರ್ಸಿಗಾಗಿ ಮೀಸಲಿದ್ದದ್ದು ಕೇವಲ ೬ ತಿಂಗಳು ಮಾತ್ರ. ಅದೂ ನಾನು ಕೆಲಸ ಮುಗಿಸಿ ನನ್ನ ಮೊದಲ ದ್ವಿಚಕ್ರವಾಹನ TVS-XL ನಲ್ಲಿ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಮೊದ ಮೊದಲು ಮುಖ ಪರಿಚಯವಾಗಿ ಕೇವಲ ನಗುವಿನಲ್ಲೇ ನಮ್ಮ ಸಂಭಾಷಣೆ ನಡೆಯುತ್ತಿತ್ತು. ನಿನ್ನೊಡನೆ ಸದಾಕಾಲವೂ ಇರುತ್ತಿದ್ದ ನಿನ್ನ ಗೆಳತಿ ರಷ್ಮಿ ಯೊಡನೆ ನೀನು ಏನು ಮಾತನಾಡಿಕೊಳ್ಳುತ್ತಿದ್ದೆಯೋ ನನಗದು ತಿಳಿಯುತ್ತಿರಲಿಲ್ಲ. ಆದರೆ ಸದಾ ಹಸನ್ಮುಖಿಯಾಗಿ ಗೆಲುವಿನಿಂದ ಕೂಡಿರುತ್ತಿದ್ದ ನಿನ್ನೊಡನೆ ಎಲ್ಲರೂ ಸ್ನೇಹಬೆಳೆಸಬಯಸುವವರೇ ಆಗಿರುತ್ತಿದ್ದರು.

ಕ್ರಮೇಣ ನಗುವಿನ ಸಂಭಾಷಣೆ ಮಾತು ಕಲಿಯತೊಡಗಿತು. ಕಳೆದದಿನದಂದು ಮಾಡಿದ ಪಾಠದಲ್ಲಿನ ಅನುಮಾನ ನಿನ್ನನ್ನು ನನ್ನಹತ್ತಿರಕ್ಕೆ ತರುತ್ತಿತ್ತು. ಕೇವಲ ಅದನ್ನು ನೆಪವಾಗಿಟ್ಟುಕೊಂಡು ನಮ್ಮ ಗೆಳೆತನವನ್ನು ಪ್ರೀತಿ ಎಂದೆನಿಸಿಕೊಳ್ಳುವ ಹುಚ್ಚು ಮನಸ್ಸು ನನ್ನದಲ್ಲವಾದ್ದರಿಂದ ನನ್ನ ನಿನ್ನ ಗೆಳೆತನ ಮೊಳಕೆಯೊಡೆದಿತ್ತು. ತರಗತಿಯಲ್ಲಿ ನಾವಿಬ್ಬರೂ ಮತ್ತೆ ರಷ್ಮಿ ಒಟ್ಟಿಗೇ ಕುಳಿತು ಅಭ್ಯಾಸಿಸುತ್ತಿದ್ದೆವು. ಲ್ಯಾಬ್ ಗಳಲ್ಲಿ ನಾವೆಲ್ಲಾ ಒಟ್ಟಿಗೇ ಸೇರಿ ಕೊಟ್ಟ ಅಸೈಮೆಂಟ್ ಗಳನ್ನು ಮುಗಿಸುತ್ತಿದ್ದೆವು. ನನ್ನಲ್ಲಿ ನನ್ನ ಜೀವನದ ಕನಸುಗಳು ಮೊಳೆಯುವ ಕಾಲವದು. ಅಂದು ನಾನು ಕನಸಿನಲ್ಲಿಯೂ ಬೆಂಗಳೂರಿಗೆ ಬರುವೆನೆಂದು ಅನಿಸಿರಲಿಲ್ಲ. ನನ್ನದೇ ಒಂದು ಪುಟ್ಟ ಗೂಡನ್ನು ಕಟ್ಟುವ ತವಕವಿರಲಿಲ್ಲ. ಕೇವಲವಿದ್ದದ್ದು ಮುಗ್ದ ಹೃದಯ ಮತ್ತು ತನ್ಮಯತೆ.

ನಮ್ಮ ತರಗತಿಗಳು ೪ತಿಂಗಳ ಅವಧಿಯನ್ನು ಮುಗಿಸಿದ್ದವು. ಇನ್ನು ಬಾಕಿ ಉಳಿದದ್ದು ಕೇವಲ ೨ ತಿಂಗಳುಗಳು ಮಾತ್ರ. ಅಷ್ಟರಲ್ಲಾಗಲೇ ನಾವೆಲ್ಲಾ (ಅದರಲ್ಲೂ ನಾವಿಬ್ಬರು) ಒಳ್ಳೆಯ ಸ್ನೇಹಿತರಾಗಿದ್ದೆವು. ಅಂದು ವಾರಾಂತ್ಯ- ನಾನು ನನ್ನ ಅಣ್ಣ, ಮತ್ತವನ ಸ್ನೇಹಿತರು ಎಲ್ಲಾ ಸೇರಿ ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿಳಿದು ಗಾಯತ್ರಿ ಟಿಫನ್ ರೂಂ ನಲ್ಲಿ ತಿಂಡಿ ತಿಂದು ಇನ್ನೇನು ಹೊರಡಬೇಕೆನಿಸುವಷ್ಟರಲ್ಲಿ ಬೆಂಗಳೂರಿನಿಂದ ಅಣ್ಣನ ಸ್ನೇಹಿತನ ಕರೆ ಮೊಬೈಲಿನಲ್ಲಿ ಮೊಳಗಿತ್ತು. ಅಣ್ಣನ ಸ್ನೇಹಿತ ನನಗೆ ಬೆಂಗಳೂರಿನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ತಿಳಿಸಿದ್ದ. ಅಂದಿನಿಂದ ನನಗೆ ಮೈಸೂರಿನ ಸೆಳೆತ ಜೋರಾಗತೊಡಗಿತು. ಮೈಸೂರನ್ನು ಬಿಟ್ಟು ಹೋಗಬೇಕಾ ? ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರನ್ನೂ ಬಿಟ್ಟು ಹೋಗಬೇಕಾ.... ನಿನ್ನಿಂದ ದೂರ ಹೋಗಬೇಕಾ ???

ಈ ವಿಚಾರವನ್ನು ನಿನ್ನೊಡನೆ ಸೋಮವಾರ ಚರ್ಚಿಸಿದೆ. ಮನೆಯವರ ಧೈರ್ಯದೊಡನೆ ನಿನ್ನ ಧೈರ್ಯವೂ ಬೆರೆತು ಮನಸ್ಸು ಗಟ್ಟಿಯಾಗತೊಡಗಿತು. ತರಗತಿಗಳು ಇನ್ನೂ ೨ ತಿಂಗಳು ಬಾಕಿ ಇದ್ದವು. ನಾನು ಧೈರ್ಯಗೆಡಲಿಲ್ಲ, ಕಾರಣ ನನ್ನವರ ಪ್ರೋತ್ಸಾಹ ನನ್ನೊಡನಿತ್ತು. ನೀನೂಕೂಡ ಓದುವ ಸಲುವಾಗೇ ನಿನ್ನೂರಾದ ಮಂಡ್ಯವನ್ನು ಬಿಟ್ಟು ಬಂದು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ Working Women's hostel ನಲ್ಲಿ ತಂಗಿದ್ದೆ.

ಆದಿನ ಯಾವ ಕಾರಣಕ್ಕೋ ತಿಳಿಯದು.. ಬಹುಷಃ ಕೆಲಸಕ್ಕೆಂದು ಅರ್ಜಿ ಕಳಿಸಲಿರಬಹುದು ಮೊದಲ ಸಲ ನನ್ನ ಸಹಾಯ ಕೇಳಿದ್ದೆ ನೀನು. ರಾಯರ ಮಠಕ್ಕೆ ನಾವಿಬ್ಬರೂ ಒಟ್ಟಿಗೇ ನನ್ನ TVS-XL ನಲ್ಲಿ ಹೋಗಿ ನಮಸ್ಕರಿಸಿ ಹೊರಾಂಗಣದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದೆವು. ಅಂದು ನೀ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಹೇಳಿದಂತೆ ಅಚ್ಚಳಿಯದೇ ಉಳಿದಿದೆ. "ನಾನು ಇದೇ First time ಕಣೋ ಒಬ್ಬ ಹುಡುಗನ ಜೊತೇಲಿ ದೇವಸ್ಥನಕ್ಕೆ ಬಂದಿರೋದು. ಯಾಕೋ ಗೊತ್ತಿಲ್ಲ, ನಿನ್ನ ಮೇಲೆ ನನ್ಗೆ ಅಷ್ಟು ನಂಬಿಕೆ" ಹೌದು... ಅದೇ ನಂಬಿಕೆಯನ್ನ ನಾನು ಇಂದಿಗೂ ಉಳಿಸಿಕೊಂಡಿದ್ದೇನೆ. ನಿಜವಾಗಲೂ ನನಗೂ ಅದು ಫಸ್ಟ್ ಟೈಮೇ... ಸಂಕೋಚದ ಹುಡುಗನಾದ ನಾನು ಒಬ್ಬ ಹುಡುಗಿಯನ್ನ ಗಾಡಿಯಲ್ಲಿ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಇಂದಿಗೂ ನನ್ನಮೇಲೇ ನನಗೆ ಅಚ್ಚರಿಇದೆ. ಅಲ್ಲಿಂದ ನಾವು ನಿನ್ನ ಕೆಲಸದ ಅರ್ಜಿಯ ವಿಚಾರವಾಗಿ ಕುವೆಂಪು ನಗರದ ಕೊರಿಯರ್ ಆಫೀಸಿಗೆ ಹೋಗಿದ್ದೆವು. ಅಲ್ಲಿಂದ ನಾನು ನಿನ್ನನ್ನು ನಿನ್ನ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ.

ನನ್ನ ಜನ್ಮದಿನದಂದು ನೀ ಕೊಟ್ಟ ಉಡುಗೊರೆ ಇಂದಿಗೂ ನನ್ನ ಜೊತೆಯಲ್ಲೇ ಇದೆ. ನೀಕೊಟ್ಟ Wallet, ಅದರೊಳಗಿದ್ದ ೫ ರೂಪಾಯಿ Coin, ರಷ್ಮಿ ಕೊಟ್ಟ Key chain, ನೀವಿಬ್ಬರೂ ಸೇರಿ ನಿನ್ನ ಹಸ್ತಾಕ್ಷರದಿಂದ ಬರೆದ ಆ "To Dear Friend From, Appi and Rashu" ಸಾಲು ಇಂದಿಗೂ ನನ್ನೊಡನೆ ಭದ್ರವಾಗಿವೆ. ಬಹುಷಃ ನೀನು ನನ್ನ ಪಾಲಿನ "Crush" ಆಗಿದ್ದೆ. ಅಂದು ನಿಮ್ಮಲ್ಲಿಂದ ಪಡೆದುಕೊಂಡ ಉಡುಗೊರೆ ನನಗೆ ನಿಮ್ಮ ನೆನಪಿನ ಕಾಣಿಕೆಯಾಗಿದೆ. ಸಂಜೆ ತರಗತಿ ಮುಗಿದ ಬಳಿಕ ನಾನು ನಿಮ್ಮಿಬ್ಬರನ್ನೂ ನನ್ನ TVS-XL ನಲ್ಲಿ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ. ದಾರಿಯಲ್ಲಿ ನನ್ನ ಗಮನವೆಲ್ಲಾ ನಿನ್ನಮೇಲಿತ್ತು. ಅಪ್ಪಿತಪ್ಪಿ ನಾನೆಲ್ಲಿ ನಿನ್ನನ್ನು ಸ್ಪರ್ಶಿಸಿ ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿ ಸ್ನೇಹವನ್ನು ಕಳೆದುಕೊಳ್ಳುವೆನೋ ಎಂಬ ಭಯ.

ನಮ್ಮ ತರಗತಿಗಳು ಮುಗಿದಿದ್ದವು, ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ಬೆಂಗಳೂರಿಗೆ ಬಂದು ೨ ತಿಂಗಳ ನಂತರ ನಾ ಮತ್ತೆ ನಿನ್ನನ್ನು ನಿನ್ನ Working Women's hostel ಗೆ ಬಂದು ಭೇಟಿ ಮಾಡಿದ್ದೆ. ನಿನ್ನ ಈ-ಮೈಲ್ ವಿಳಾಸವನ್ನು ಖುದ್ದಾಗಿ create ಮಾಡಿ ಅದನ್ನು ಉಪಯೋಗಿಸುವ ವಿಧಾನವನ್ನೂ ಕಲಿಸಿದ್ದೆ. ಆದರೀಗ ಅದು ಕೆಲಸ ಮಾಡುತ್ತಿಲ್ಲ. ಮೊದ ಮೊದಲು ನಿನ್ನಿಂದ ನನ್ನ ಈ-ಅಂಚೆಗೆ ಉತ್ತರ ಬಂದರೂ ನಂತರದ ದಿನಗಳಲ್ಲಿ ಅದು ಸಂಪೂರ್ಣವಾಗಿ ನಿಂತುಹೋಯಿತು. ನಿನಗೆ ಮೈಲ್ ಮಾಡಲೆಂದೇ ನಾನು Browsing Center ಗಳಿಗೆ ಬರುತ್ತಿದ್ದೆ. ಆಗಿನ ದಿನಗಳಲ್ಲಿ ಮೊಬೈಲ್ ಫೋನ್ ಎಂಬುದು ಆಕಾಶದಲ್ಲಿನ ನಕ್ಷತ್ರದಷ್ಟೇ ದೂರವಾಗಿತ್ತು ನನಗೆ. ಇದ್ದ ಒಂದೇ ಒಂದು ಸಂಪರ್ಕ ಕೊಂಡಿ ಆ ಈ-ಮೈಲ್.

ನಂತರದ ದಿನಗಳಲ್ಲಿ ನಿನ್ನ ಸಂಪರ್ಕ ಸಾಧ್ಯವಾಗಲಿಲ್ಲ. ನಿನಗೂ ನಿನ್ನದೇ ಆದ ಜವಾಬ್ದಾರಿಗಳಿದ್ದಿರಬೇಕು. ಪರಿಸ್ಥಿತಿಯ ಒತ್ತಡಕ್ಕೆ ನೀನೂ ಸಿಲುಕಿರಬೇಕು. ನಿನ್ನ ಮಾತನಾಡಿಸಲು ಮತ್ತೊಮ್ಮೆ ನಿನ್ನ hostel ಗೆ ಫೊನಾಯಿಸಿದಾಗ ನೀನು ಅಲ್ಲಿಂದ ಬೇರೆಡೆಗೆ ಹೋಗಿರುವ ವಿಷಯ ತಿಳಿಯಿತು.

ಕಡೆಯದಾಗಿ ನೀನು ಬಳಿಬಂದು ಕೇಳಿದ ಪ್ರಶ್ನೆ: "ಬೆಂಗಳೂರಿಗೆ ಹೋಗ್ತಾ ಇದೀಯ... ನಾವೆಲ್ಲಾ ನಿನ್ಗೆ ನೆನ್ಪಿರ್ತೀವೇನೋ ?" ಹೌದು ಖಂಡಿತಾ ನೆನಪಿದೆ ಗೆಳತಿ ಆದರೆ ನಿನಗೆ ನನ್ನ ನೆನಪಿಲ್ಲ ಅನ್ನುವುದು ವಿಪರ್ಯಾಸ.

ಇಂದಿಗೂ ನಾನು ಆ ದಿನಗಳನ್ನ ಮರೆತಿಲ್ಲ. ಕುವೆಂಪು ನಗರಕ್ಕೆ ಹೋದಲ್ಲಿ ಆ ಕೊರಿಯರ್ ಆಫೀಸಿನೆಡೆಗೆ ನೋಡುತ್ತೇನೆ, ನಿನ್ನನ್ನು ಕಾಣುತ್ತೇನೆ... ಗೌರವದಿಂದ :)

Wednesday, March 24, 2010

ವಿಸ್ಮಯ


ಚಿತ್ರ ಕೃಪೆ: google dot com

ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕನಸನ್ನು ಸಾಕಾರ ಗೊಳಿಸಿ ಧರೆಗೆ ಬಂದ ಕೂಸು. ಹೌದು ವಿಸ್ಮಯ ನನ್ನ ಅಣ್ಣನ ಮಗಳು. ಮುದ್ದು ಮುದ್ದಾಗಿ ತೊದಲುಮಾತನಾಡುತ್ತಿರುವ ಅವಳಿಗೆ ಈಗ ೨ ವರುಷಗಳು ತುಂಬಿವೆ. ಆಕೆಗೋಸ್ಕರ ಬರೆದ ನನ್ನ ಕೆಲವು ಸಾಲುಗಳಿವು.

ಪುಟ್ಟ ಕಂದ ಜಗಕೆ ಬರಲು ತಾಯ್ತಂದೆಗೆ ಹರುಷವು
ನವಮಾಸದ ನೋವುಗಳಲೂ ಅವರಿಗಾನಂದವು

ಮುದ್ದುಕಂದ ನೀತಂದೆ ಸಂತಸದ ದಿನಗಳ
ಮುಗ್ದ ನಗುವ ಬೀರಿ ನೀನು ತೊಯ್ದೆ ತಾಯ ಕಂಗಳ

ಕಣ್ಣಂಚಿನ ಕಣ್ಣೀರು ದುಃಖಕಲ್ಲ ಕಂದನೇ
ಆನಂದಕೆ ಮಾತಿಲ್ಲ, ಆನಂದಭಾಷ್ಪದರ್ಪಣೆ

ಹೊಟ್ಟೆಯೆಳೆದು ರಚ್ಚೆ ಹಿಡಿದು ತಾಯ ಹುಡುಕುತಾ ನೀನು
ಅಂಬೆಗಾಲನಿಟ್ಟು ಬರಲು ತಾಯ ಮೊಗದಿ ಹಾಲ್ಜೇನು

ವರುಷಕಳೆದು ವರುಷತುಂಬಿ ವಸಂತಗಳು ಉರುಳಿವೆ
ನಿನ್ನ ತೊದಲು ಮಾತ ಕೇಳ್ವುದಕೆ ಕಿವಿಗಳೆಲ್ಲಾ ಕಾದಿವೆ

ಎಂಥಾ ಬೆರಗು ಎಂಥಾ ಮೆರಗು ತಂದೆ ನೀನು ಬಾಳಿಗೆ
ನೀನು ಬಂದ ಕ್ಷಣದಿ ತಂದ ಆನಂದವು ನಾಳಿಗೆ

ನಿನ್ನ ಆಟ ಓಡಾಟದಿ ತಾಯಿ ತಂದೆ ತನ್ಮಯ
ಅದಕಾಗಿ ಹೆಸರಿಟ್ಟರು ನಿನಗಂದು ವಿಸ್ಮಯ :)

Monday, March 22, 2010

ಸಂಭ್ರಮದ ಶನಿವಾರ

ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮೇಲೆ ಮಿಕ್ಕಿದ ಕೆಲಸಗಳೆಲ್ಲಾ... ನನ್ನ ಅನಿಸಿಕೆಯಂತೇ ಬೆಳಗ್ಗೆ 9:30ರ ತನಕ ಗಡದ್ದಾಗಿ ನಿದ್ದೆ ಮಾಡ್ದೆ. ಆಮೇಲೆ ಮಾಮೂಲಿ ಯೋಚನೆ... ಇವತ್ತು ತಿಂಡಿ ಏನು ಮಾಡೋದು ಅಂತ. ಆಗ ನೆನ್ಪಾಗಿದ್ದೇ ನನಗೆ ಇಷ್ಟವಾದ ಮಾಡಲು ಸುಲಭವಾದ ತಿಂಡಿ- "ಗಂಜಿ". ಗಂಜಿಯ ಜೊತೆಗೆ ಮಿಡಿ ಉಪ್ಪಿನಕಾಯಿ, ಸ್ವಲ್ಪ ಮೊಸರು, ಸ್ವಲ್ಪ ಕುತ್ತುಂಬರಿ ಚಟ್ನಿ, ಇಷ್ಟಿದ್ಬಿಟ್ರೇ... ಸ್ವರ್ಗಕ್ಕೆ 3ರೇ ಗೇಣು... ಮಾಡುವುದು ಅತಿ ಸುಲಭ, So ಅದನ್ನೆ ಮಾಡಲು ಒಲೇಮೇಲೆ cooker ಇಟ್ಟು ಮನೆಗೆಲಸ ಶುರು ಮಾಡ್ಕೊಂಡೆ. ಮೊದಲನೇದು ಬಟ್ಟೆ ಒಗೆಯೋದು. ವಾರದಲ್ಲಿ ಬೆಂಗಳೂರಿನ ಕೊಳೆ, ಧೂಳು ಹೊತ್ಕೊಂಡು ತಂದಿದ್ದನ್ನ ಬ್ರಷ್ ಉಜ್ಜಿ ಉಜ್ಜಿ ತೆಗೆಯೋದು.

ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...

ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.

ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....

ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)

Friday, March 12, 2010

ಇವತ್ತು ಏನ್ ತಿಂಡಿ ಮಾಡ್ಲೀ....

ಇವತ್ತು ಏನ್ ತಿಂಡಿ ಮಾಡ್ಲೀ....

ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.

ಅಬ್ಬಬ್ಬಾ!!!! ಅದಿರಲಿ ಬಿಡಿ, ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....

ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????

ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)

ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.

ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).

ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ....