ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Thursday, December 11, 2008

ಪರೋಕ್ಷ ಸಂಗಾತಿಗೆ...

ನಾ ನಿನಗಾಗಿ ನಿನ್ನ ದಿನವ
ಬೆಳಗುವ ಸೂರ್ಯನಾಗಬೇಕಿದೆ
ನಾ ನಿನಗಾಗಿ ಇರುಳಿನಲಿ
ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ,
ನಾ ನಿನ್ನಲಿರುವ ದುಃಖ ದುಮ್ಮಾನವನು
ಹೊತ್ತೋಯ್ಯುವ ನದಿಯಾಗಬೇಕಿದೆ,
ನಾ ನಿನ್ನಜೊತೆ ಜೊತೆಯಲಿ
ಹೆಜ್ಜೆಯಿಡುವ ನೆರಳಾಗಬೇಕಿದೆ,
ನಾ ನಿನ್ನ ಪ್ರೀತಿ ಪಡೆಯಬೇಕಿದೆ,
ನಿನ್ನೋಂದಿಗೆ ನಡೆಯಬೇಕಿದೆ
ದೂರ ಬಲು ದೂರ ಸಾಗಬೇಕಿದೆ
ನಾ ನಿನ್ನೊಳು ಬೆರೆಯಬೇಕಿದೆ
ನಾ ನಿನ್ನ ಕಾಣದಿದ್ದರೇನು,
ನಿನ್ನಯ ಸ್ಪರ್ಶವ ಕಂಡಿಹೆನು
ನೀ ಬರುವೆ ತಂಗಾಳಿಯ ನಡುವೆ ತೇಲುತಾ,
ಮನಕೆ ಮುದವ ನೀಡುತಾ
ನೀಲಿಗಗನದಿ ತೇಲುವ ಮೇಘಮಾಲೆಯ
ನಡುವೆ ನಾ ಕಾಣುವೆ ನಿನ್ನಯ ಚಿತ್ತಾರವ
ಇರುಳಿನ ತಂಪಾದ ಸಮಯದಲಿ ನಾ ಕಾಣುವೆ
ನಿನ್ನಯ ಚಂದವನು ಆ ಚುಕ್ಕಿಗಳ ಸೇರಿಸುತ...

Thursday, December 4, 2008

ಕೊಡುಗೆ




ಮೇಘಮಾಲೆಯ ತುಂತುರಿನ ಸಿಂಚನದಿ
ಮಿಂದೆದ್ದ ಕುಸುಮ ಆಗಸವ
ನೋಡುತಾ ಮುಗುಳ್ನಕ್ಕಿತ್ತು

ಅರಳಿನಿಂತ ಕುಸುಮವನ್ನು ಚುಂಬಿಸುತಾ
ಬೀಸಿಬಂದ ಗಾಳಿ ಅದರ
ಪರಿಮಳವ ಘಮ್ಮನೆ ಹರಡಿತ್ತು

ಗಾಳಿಯೊಡನೆ ಬೆರೆತ ಸುಗಂಧ
ದುಂಬಿಯ ಕರೆತಂದಿತ್ತು,
ಅರಳಿನಿಂತ ಕುಸುಮ ನಾಚಿ ರಂಗೇರಿತ್ತು

ರಂಗೇರಿದ ಕುಸುಮ ಕುಸುಮಬಾಲೆಯ
ಮುಡಿಯೇರಿತ್ತು, ಶೃಂಗಾರ ಕಾವ್ಯಕ್ಕೆ
ಮುನ್ನುಡಿ ಬರೆದಿತ್ತು

ಕುಸುಮಬಾಲೆಯ ಶೃಂಗಾರ ಕಾವ್ಯಕ್ಕೆ
ಹೃದಯವೊಂದು ಮಿಡಿದಿತ್ತು,
ಕಣ್ ಕಣ್ಣಲ್ಲೇ ಕವನ ಬರೆದಿತ್ತು

ಕವನದ ಛಾಪು ಹೃದಯದಲಿ
ಮೂಡಿತ್ತು, ಹೃದಯಗಳ ಮಿಲನ
ಮಹೋತ್ಸವ ಅನುದಿನವು ಸಾಗಿತ್ತು.

Monday, November 17, 2008

ಹುನ್ಕಲ್ ವುಡ್

ಪ್ರತೀ ಸಲದಂತೆ ಈ ಸಲವೂ ಡಿಸೆಂಬರಿನಲ್ಲಿ ನಮ್ಮ ಚಾರಣದ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿತ್ತು. ಕಳೆದಬಾರಿ ಅಣ್ಣನ ಮಗಳಿನ ನಾಮಕರಣವಿದ್ದಿದ್ದರಿಂದ ನನಗೆ ಚಾರಣಕ್ಕೆ ಹೋಗಲಾಗಿರಲಿಲ್ಲ. ವರುಷದ ಮಿಕ್ಕ ದಿನಗಳಲ್ಲಿ ಯಾಂತ್ರಿಕಜೀವನದಿಂದ ಸ್ವಲ್ಪ ಬದಲಾವಣೆ ಇರಲೆಂದು ನಮ್ಮ ಚಾರಣದ ತಂಡ ಡಿಸೆಂಬರಿನಲ್ಲಿ ಚಾರಣಕ್ಕೆ ಹೋಗುವುದು ವಾಡಿಕೆ. ಕಳೆದಬಾರಿ ಪ್ರಕೃತಿಯ ಮಡಿಲಿನಲ್ಲಿ ವಿಹರಿಸುವ ಅವಕಾಶ ಕೈತಪ್ಪಿದ್ದರಿಂದ ಈ ಸಲವಾದರೂ ಚಾರಣಕ್ಕೆ ಹೋಗಲೇಬೇಕೆಂದು ಮೊದಲೇ ಮನದಲ್ಲಿ ಎಣಿಸಿದ್ದೆ. ನಾನು ಖಂಡಿತವಾಗಿ ಬರುವುದಾಗಿಯೂ ತಿಳಿಸಿದ್ದೆ.

ಆದರೆ ಸ್ವಲ್ಪದಿನಗಳ ನಂತರವಷ್ಟೇ ನೆನಪಾಗಿದ್ದದ್ದು.... ನಾವು ಚಾರಣಕ್ಕೆ ಹೊರಡುವ ದಿನಾಂಕದಂದೇ ಅಪ್ಪನ ಮಾಸಿಕ ಇದೆಯೆಂದು. ಚಾರಣಕ್ಕಿಂತಾ ಮಾಸಿಕ ಮುಖ್ಯವಾದದ್ದರಿಂದ ಈ ಸಲವೂ ಚಾರಣದ ಅವಕಾಶ ಕೈ ತಪ್ಪಿ ಹೋಯಿತು. ಪ್ರಕೃತಿಯ ಮಡಿಲಿನಲ್ಲಿ ಪ್ರತಿವರುಷವೂ ಕಳೆಯುತ್ತಿದ್ದ ದಿನಗಳನ್ನು ಈ ಸಲ ಕಳೆಯಲಾಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಮನೋಹರ ೨ ದಿನಗಳ ಚಾರಣದಬಗ್ಗೆ ಹೇಳಿದ. ಚಾರಣದ ಸ್ಥಳ, ಹೊರಡುವ ವೇಳೆ, ಅಲ್ಲಿಗೆ ಹೋಗುವ ವ್ಯವಸ್ಥೆ ಎಲ್ಲಾ ತಿಳಿದುಕೊಂಡು ನಾನು ಬರುವುದಾಗಿ ಹೇಳಿ ಆ ವಿಚಾರವಾಗಿ ಅದರಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡೆ. ಹರ್ಷ ಈ ಚಾರಣದ ಜವಾಬ್ದಾರಿಯನ್ನು ಹೊತ್ತಿದ್ದರು. ಪ್ರಾಕ್-ಸಿಸ್ ಅನ್ನುವ ಕಂಪನಿಯಲ್ಲಿ ಕೆಲಸ ಮಾಡುವ ಅವರು ಮತ್ತು ಅವರ ಸಹೋದ್ಯೋಗಿಗಳ ಜೊತೆಯಲ್ಲಿ ನಾನೂ ಒಬ್ಬನಾಗಿ "ಹುನ್ಕಲ್ ವುಡ್" ಅನ್ನುವ ಧಾಮಕ್ಕೆ (Resort) ಹೋಗಿ ಹತ್ತಿರದಲ್ಲೇ ಇರುವ ಹುನ್ಕಲ್-ರಾಕ್ ಅನ್ನು ಹತ್ತುವುದು ನಮ್ಮ ಪೂರ್ವಯೋಜಿತ ಕಾರ್ಯಕ್ರಮವಾಗಿತ್ತು. ಅಂದಾಜು ೩೪ ಜನ ಒಟ್ಟಿಗೇ ಒಂದು ಬಸ್ಸಿನಲ್ಲಿ ಚಿಕ್ಕಮಗಳೂರಿನ ಮೂಲಕ "ಹುನ್ಕಲ್ ವುಡ್" ಧಾಮಕ್ಕೆ ಹೋಗಬೇಕಾಗಿತ್ತು. ಅಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದದ್ದರಿಂದ ಹರ್ಷ ಮೊದಲೇ ಅದನ್ನು ಕಾದಿರಿಸಿದ್ದರು. ಆ ೩೪ ಜನದಲ್ಲಿ ೪ ಪುಟ್ಟ ಮಕ್ಕಳೂ ಇದ್ದದ್ದು ವಿಷೇಶ.



ಪ್ರಕೃತಿಯ ಈ ಸೊಬಗನ್ನ ಸವಿಯಲು ನಾವು ನಾಡಿನ ಜನಜಂಗುಳಿಯಿಂದ, ಯಾಂತ್ರಿಕ ಬದುಕಿನಿಂದ ದೂರ ಅಂದರೆ ಚಿಕ್ಕಮಗಳೂರಿನಿಂದ ಅಂದಾಜು ೨೨ ಕಿ.ಮೀ ದೂರ ಬರಬೇಕು. ಇಲ್ಲಿಗೆ ಬಂದಾದಮೇಲೆ ಯಾವುದೇ ಮೊಬೈಲ್ ಕೆಲಸ ಮಾಡುವುದಿಲ್ಲ. ಬಿ.ಎಸ್.ಎನ್.ಎಲ್ ಬಿಟ್ಟು, ಅದು ಸಿಟಿಯ ಒಳಗಡೆ ಕೆಲಸ ಮಾಡದಿದ್ದರೂ ಇಲ್ಲಿ ಕೆಲಸ ಮಾಡುತ್ತದೆ ;)

ಇಲ್ಲಿಯೇ ವಾಸವಾಗಿರುವ ಸಹಾಯಕರು ನಮ್ಮ ಅಡುಗೆ, ತಿಂಡಿ ಮತ್ತು ಕಾಫಿಯ ವ್ಯವಸ್ಥೆ ಮಾಡಿದ್ದರು. ಇಲ್ಲಿಯ ರಾತ್ರಿಗಳನ್ನು ನೀವು ಮೇಣದಬತ್ತಿಯ ಸಹಾಯದಿಂದ ಕಳೆಯಬೇಕಾದೀತು, ಜೊತೆಯಲ್ಲಿ ಬ್ಯಾಟರಿಯನ್ನು ಕೊಂಡೊಯ್ದರೆ ಒಳಿತು. ಇಲ್ಲಿಗೆ ನೀವು ಈ ಮಾರ್ಗದಲ್ಲಿ ಬರಬಹುದು: ಬೆಂಗಳೂರು>ಚನ್ನರಾಯಪಟ್ಟಣ>ಹಾಸನ>ಬೇಲೂರು>ಚಿಕ್ಕಮಗಳೂರು>ಹೊಸಪೇಟೆ. ಅಲ್ಲಿಂದ ಅವರದೇ ಆದ ಸಾರಿಗೆ ವ್ಯವಸ್ಥೆಯಲ್ಲಿ ಹುನ್ಕಲ್ ವುಡ್ ತಲುಪಬೇಕು. ನೀವು ಕ್ರಮಿಸುವ ಅಂದಾಜು ದೂರ ೨೭೦ ಕಿ.ಮೀ. ಗಳು

ನಾವು ಬೆಂಗಳೂರನ್ನು ಶುಕ್ರವಾರ ರಾತ್ರಿ ಬಿಟ್ಟು ಶನಿವಾರ ಮುಂಜಾವದಂದು ಆ ಸ್ಥಳವನ್ನು ತಲುಪಿ, ಅಲ್ಲಿನ ಕಾರ್ಯಕ್ರಮಗಳನ್ನ ಮುಗಿಸಿ ಭಾನುವಾರ ರಾತ್ರಿ ಮರಳಿ ಬೆಂಗಳೂರಿಗೆ ಬರುವ ಯೋಜನೆಯನ್ನು ಹರ್ಷ ಮೊದಲೇ ಸಿದ್ದಪಡಿಸಿದ್ದರು.

ಪೂರ್ವನಿರ್ಧಾರಿತ ಯೋಜನೆಯಂತೆ ಖಾಸಗಿ ಬಸ್ಸನ್ನು ಬಾಡಿಗೆಗೆ ಪಡೆದುಕೊಂಡದ್ದರಿಂದ ಆಯ್ದ ಸ್ಥಳಗಳಿಂದ ನಾವೆಲ್ಲಾ ಆ ಬಸ್ಸನ್ನು ಹತ್ತಿ ರಾತ್ರಿ ಸುಮಾರು ರಾತ್ರಿ ೧೧.೩೦ ಕ್ಕೆ ಬಿಟ್ಟು ಬೆಳಗ್ಗೆ ಸುಮಾರು ೫.೩೦ ರ ಸಮಯಕ್ಕೆ ಚಿಕ್ಕಮಗಳೂರಿಗೆ ಬಂದಿದ್ದೆವು. ಬೆಂಗಳೂರಿನ ಚಳಿಗೆ ಹೋಲಿಸಿದರೆ ಅಲ್ಲಿನ ಚಳಿ ಒಂದು ಕೈ ಮೇಲೆ ಇದ್ದಂತಿತ್ತು. ರೆಸಾರ್ಟಿಗೆ ಹೋಗಲು ಇನ್ನು ಸಮಯವಿದ್ದದ್ದರಿಂದ ಅಲ್ಲೇ ಬಿಸಿ ಬಿಸಿ ಟೀ ಕುಡಿದು ನಂತರ ಮುಂದೆ ಸಾಗಿತ್ತು ನಮ್ಮ ಪಯಣ. ಆ ಚಳಿಯಲ್ಲಿ ಕೈಯಲ್ಲಿ ಬಿಸಿ ಬಿಸಿ ಟೀ ಕುಡಿಯುವ ಮಜವೇ ಬೇರೆ !!! ಗ್ರಾಹಕರಿಗೆ ಕಾದಿದ್ದ ಒಬ್ಬ ಟೋಪಿ ಮಾರುವವನಿಗೆ ನಮ್ಮ ಬಸ್ಸನ್ನು, ಬಸ್ಸಿನ ತುಂಬಾ ತುಂಬಿರುವ ಜನರನ್ನು ನೋಡಿ ಬಸ್ಸಿನಬಳಿಗೇ ತನ್ನ ಟೋಪಿ ತುಂಬಿದ ಚೀಲವನ್ನು ತಂದು ತನ್ನ ವ್ಯಾಪಾರವನ್ನು ಪ್ರಾರಂಭಿಸಿದ. ಅಲ್ಲಿಂದ ಹೊರಟ ನಮ್ಮ "ಹಂಸ" ಸುಮಾರು ೭.೦೦ ಸಮಯಕ್ಕೆ "ಹುನ್ಕಲ್ ವುಡ್" ಹತ್ತಿರದ ಮುಖ್ಯರಸ್ತೆಗೆ ಬಂದಿತ್ತು. ಅಲ್ಲಿಂದ ಅವರದೇ ಸಾರಿಗೆ ವ್ಯವಸ್ಥೆಯಲ್ಲಿ ನಾವು ಆ ಧಾಮಕ್ಕೆ ಹೋಗಬೇಕಾಗಿತ್ತು.

ಅಲ್ಲಿ ಮತ್ತೊಂದು ಚಹಾ ವಿರಾಮದ ನಂತರ ಸರಕುಸಾಗಾಣೆ ವಾಹನವೊಂದು ಅಲ್ಲಿನ ದಿನಗೂಲಿ ಕಾರ್ಮಿಕರನ್ನು ಹೊತ್ತು ಆ ಎಸ್ಟೇಟಿನ ಒಳಗೆ ಹೋಯಿತು. ಅದು ಮರಳಿ ನಮ್ಮ ಮುಂದೆ ಬಂದು ನಿಂತಾಗಲೇ ನಮಗೆ ತಿಳಿದದ್ದು, ಅದೇ ನಮ್ಮ ಮುಂದಿನ "ರಾಜಹಂಸ"ವೆಂದು. ನಾವೆಲ್ಲಾ ಅದರೊಳಗೆ (ಕುರಿಗಳು ಸಾರ್, ಕುರಿಗಳು) ಹತ್ತಿ ಯಾವ ಟೋರಾ ಟೋರಾದಲ್ಲೂ ಸಿಗದ ಮಜವನ್ನು ಅನುಭವಿಸಿ ೭.೫೦ಕ್ಕೆ ರೆಸಾರ್ಟ್ ತಲುಪಿದೆವು.

ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿ ತಿಂಡಿಯನ್ನು ತಿಂದು ಮಧ್ಯಾನ್ನದ ಊಟವನ್ನು ಕಟ್ಟಿಸಿಕೊಂಡು ಸುಮಾರು ೧೧.೨೦ಕ್ಕೆ ನಮ್ಮ ಚಾರಣವನ್ನು ಪ್ರಾರಂಭಿಸಿದೆವು. ಪುಟ್ಟಾಣಿ ರತನ್ ಪುಟ್ಟ ಬ್ಯಾಗ್ ಮತ್ತು ಪುಟ್ಟ ಬೈನಾಕ್ಯುಲರ್ ನೊಂದಿಗೆ ತಾನೂ ದೊಡ್ಡವರಿಗಿಂತ ಏನೂ ಕಡಿಮೆಯಿಲ್ಲವೆನ್ನುವಂತೆ ಬಂದಿದ್ದ. ಮಿಕ್ಕ ಪುಟಾಣಿಗಳು ತಮ್ಮ ಪೋಷಕರ ರಕ್ಷಣೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗುತ್ತಿದ್ದರು.



ಸಾಹಸಿಗರಿಗೆ, ಚಾರಣಿಗರಿಗೆ ಹೇಳಿಮಾಡಿಸಿದ ಈ ನಿಸರ್ಗತಾಣದಲ್ಲಿ ಸಣ್ಣ ಝರಿ, ಮನಮೊಹಕ ಪರ್ವತ ಶ್ರೇಣಿ, ದಟ್ಟವಾದ ಕಾಡುಗಳನ್ನೊಳಗೊಂಡಿರುವ ಈ ತಾಣ ಮುಖ್ಯವಾಗಿ ದಿನನಿತ್ಯದ ಜಂಜಾಟದಿಂದ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತ್ತು

ಮಧ್ಯಾನ್ನ ೧೨ರ ಸಮಯದಲ್ಲಿ ನಮ್ಮ ತಂಡಕ್ಕೆ ಹಸಿರು ಹಾವಿನ ದರುಶನವಾಯಿತು. ನವೆಂಬರ್ ತಿಂಗಳಿನಲ್ಲಿ ಮಳೆ ಇರದ ಕಾರಣ ನಮಗೆ ಜಿಗಣೆಗಳ ಕಾಟ ಇರಲಿಲ್ಲ, ಹಾಗೂ ಎಲ್ಲೆಲ್ಲಿ ತೇವಾಂಶವಿರುತ್ತದೋ ಅಲ್ಲೆಲ್ಲಾ ಅವುಗಳದೇ ರಾಜ್ಯಾಭಾರ... ಕಾಫೀ ಎಸ್ಟೇಟಿನಲ್ಲಿ ಕೆಲಸಾಮಾಡುವ ಕಾರ್ಮಿಕರು ಈ ಜಿಗಣೆಗಳ ಕಾಟದಿಂದ ಪಾರಾಗಲು ಸಾಸಿವೆ ಎಣ್ಣೆಗೆ ನಷ್ಯದ ಪುಡಿಯನ್ನು ಬೆರೆಸಿ ತಮ್ಮ ಕೈ ಕಾಲುಗಳಿಗೆ ಲೇಪಿಸಿಕೊಳ್ಳುತ್ತಾರಂತೆ, ಅದು ಅಲ್ಲಿ ಕೆಲಸಮಾಡಲು ಬಂದಿದ್ದವರಿಂದ ನಮಗೆ ತಿಳಿದುಬಂದ ವಿಷಯ. ಅಲ್ಲಿಂದ ಬಳಲಿದ್ದ ತಂಡದ ಸದಸ್ಯರನ್ನು ಹುರಿದುಂಬಿಸುತ್ತಾ ನಮ್ಮ ಹೆಜ್ಜೆಗಳನ್ನು ಹುನ್ಕಲ್-ರಾಕ್ ನ ಕಡೆಗೆ ಸವೆಸುತ್ತಿದ್ದೆವು. ಮಧ್ಯಾನ್ನ ೧.೨೦ ರ ಸಮಯದಲ್ಲಿ ಊಟಮಾಡುವ ಸಲುವಾಗಿ ಒಂದು ಝರಿಯಬಳಿ ತಂಗಿದ್ದೆವು, ಅಲ್ಲಿ ನಮಗೆ ಜಿಗಣೆ, ಮತ್ತು ಪಿಟ್ ವೈಪರ್ ಗಳು ಕಾಣಿಸಿದವು. ಈ ವೈಪರ್ ಅನ್ನುವ ಉರಗ ಪ್ರಭೇದ ಅತ್ಯಂತ ವಿಷಕಾರಿ. ನಮಗೆ ಕಂಡಿದ್ದು ಆಕಾರದಲ್ಲಿ ಪುಟ್ಟ ಮರಿಯಂತಿದ್ದರೂ ಅದರ ವಿಷ ಮಾರಣಾಂತಿಕವೇ. ಎಲ್ಲರ ಕ್ಯಾಮರಾ ಕಣ್ಣು ಆ ವೈಪರಿನತ್ತ ಹೊರಳಿತು.... ಕ್ಯಾಮರಾಗಳು ಮಾತನಾಡತೊಡಗಿದವು, ಕ್ಲಿಕ್.... ಕ್ಲಿಕ್... ಕ್ಲಿಕ್.... ಆ ವೈಪರ್ ತನ್ನ ಸುರುಳಿ ಸುತ್ತಿದ ಮೈಯನ್ನು ಛಾಯಾಗ್ರಾಹಕರಿಗೆ ಪ್ರದರ್ಶಿಸುತ್ತಾ ತನ್ನ ಬಳಿ ಬರಬೇಡಿರೆಂದು ಎಚ್ಚರಿಕೆ ನೀಡುತ್ತಿತ್ತು. ಅಲ್ಲಿಂದ ಸ್ವಲ್ಪ ಮುಂದೆ ಬಂದಂತೆ ಹಾವಿಗಿಂತಾ ನಾನೇನು ಕಮ್ಮಿ ಎನ್ನುವಂತೆ ಮತ್ತೊಂದು ಕೀಟ ತನ್ನ ಹೊಳಪಿನ ಮೈಮಾಟ ಪ್ರದರ್ಶಿಸಿತು.




ಚಾರಣಿಗರೆಲ್ಲಾ ಉತ್ಸಾಹದಿಂದ ಆ ಹೆಬ್ಬಂಡೆಯಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಮಿಕ್ಕವರು ಸುಸ್ತಾಗಿ ಹಿಂದೆ ಉಳಿದಿದ್ದೆವು. ಕಡಿದಾದ ಹುಲ್ಲುತುಂಬಿದ ಆ ಪರ್ವತವನ್ನು ಹತ್ತಲು ಅನುಭವ ಬೇಕೇ ಬೇಕು. ನಮ್ಮೊಂದಿಗೆ ಬಂದಿದ್ದ ಗೈಡ್ ನಮ್ಮಿಂದ ದೂರ ಹೋಗಿದ್ದರಿಂದ ನಮ್ಮ ಮತ್ತು ಅವರ ನಡುವಣ ಸಂಪರ್ಕ ಇರಲಿಲ್ಲ. ಹಾಗಾಗಿ ನಾವು ಹಿಂದುಳಿಯಬೇಕಾಯಿತು. ನಾವೆಲ್ಲಾ ಅಲ್ಲೇ ಕುಳಿತು ನಿಸರ್ಗದ ಸೊಬಗನ್ನು ಸವಿಯುತ್ತಲಿದ್ದರೆ ಮೇಲಿನ ತಂಡ ಆ ಹೆಬ್ಬಂಡೆಯನ್ನು ತಲುಪಲೇ ಬೇಕೆಂದು ತನ್ನ ಚಾರಣವನ್ನು ಮುಂದುವರಿಸಿತ್ತು. ಮುಂದಿನ ದಾರಿ ಕಡಿದಾದ್ದರಿಂದ ನಮ್ಮ ವಿಭಜಿತ ತಂಡ ಸುಮಾರು ೩.೦೦ ಘಂಟೆಯ ಸಮಯದಲ್ಲಿ ಮರಳಿ ರೆಸಾರ್ಟಿಗೆ ಹೋಗುವ ನಿರ್ಧಾರಕ್ಕೆ ಬಂದೆವು. ಹತ್ತುವಾಗ ನಿಂತು ಹತ್ತಿದ್ದ ತಂಡದ ಸದಸ್ಯರು ಇಳಿಯುವಾಗ ಪುಟ್ಟ ಮಕ್ಕಳು ಜಾರುಬಂಡೆಯಲ್ಲಿ ಜಾರಿದಂತೆ ಜಾರಿಕೊಂಡು ಇಳಿಯುತ್ತಿದ್ದರು. ಚಾರಣವನ್ನು ಮುಗಿಸಿ ಮರಳಿ ರೆಸಾರ್ಟಿಗೆ ಬಂದಾಗ ಸಂಜೆ ೬.೩೦ರ ಸಮಯ.

ಅಲ್ಲಿಂದ ಬಂದು ಸ್ವಲ್ಪ ಸುಧಾರಿಸಿಕೊಂಡಮೇಲೆ ಕರೆಂಟ್ ಇಲ್ಲದ ಕಾರಣ ನನ್ನ ಕ್ಯಾಮರದ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲಾಗಲಿಲ್ಲ. ಸಂಜೆಯಹೊತ್ತಿಗೆ ಬಿಸಿ ಬಿಸಿ ಮೆಣಸಿನಕಾಯಿ ಭಜ್ಜಿ, ಮತ್ತೆ ಕಾಪಿ ಬಂದಿತು. ಬೆಂಗಳೂರಿನಲ್ಲಿ ಬಹಳ ಕಡಿಮೆ ಕಾಫಿ ಕುಡಿಯುವ ನಾನು ಅಲ್ಲಿ ಅವರು ಕೊಟ್ಟಾಗಲೆಲ್ಲ ಬೇಡ ಎನ್ನದೇ ಕುಡಿಯುತ್ತಿದ್ದೆ, ಅಲ್ಲಿಯ ಚಳಿಗೆ ಅದು ಅತ್ಯವಶ್ಯಕ. ರಾತ್ರಿ Camp fireಹಾಕಿಕೊಂಡು ಅದರಲ್ಲಿಯ ಬಿಸಿಗೆ ಮೈಒಡ್ಡಿ ಕುಳಿತು ನಮಗೆ ತಿಳಿದಿರುವ ಹಾಡುಗಳನ್ನ ನಮ್ಮದೇ ರೀತಿಯಲ್ಲಿ ಹಾಡಿ, ಮಲಗುವ ಮುಂಚೆ ಮಲ್ಲಿ ಅವರಿಂದ "ಪಾಚೊ ನಾ ಆಯೋ" ಕಥೆಯನ್ನು ಕೇಳಿ ನಂತರ ಎಲ್ಲಾ ತಮ್ಮ ತಮ್ಮ ಕನಸಿನಲೋಕಕ್ಕೆ ಹೊರಳಿದರು.


ಬೆಳಿಗ್ಗೆ ಮನೋಹರ ಕತ್ತಿಗೆ ತನ್ನ ಕ್ಯಾಮರವನ್ನ ತೂಗುಹಾಕಿಕೊಂಡು ಪಕ್ಷಿವೀಕ್ಷಣೆಗೆ ಹೊರಟ. ಅಲ್ಲಿ ನಮಗೆ "ಬೀ ಈಟರ್" "ವ್ಯಾಗ್ ಟೈಲ್" "ಬುಲ್ ಬುಲ್" ಇವೇ ಮೊದಲಾದ ಪಕ್ಷಿಗಳನ್ನು ನೋಡುವ ಅವಕಾಶ ದೊರಕಿತು. ಬೆಳಗಿನ ತಿಂಡಿ ಮುಗಿಸಿ ಅದೇ ಬಂಗಲೆಯ ಹತ್ತಿರದಲ್ಲಿದ್ದ ಒಂದು ಸಣ್ಣ ಝರಿಯನ್ನು ನೋಡಲು ನಮ್ಮತಂಡ ಹೊರಟಿತು. ಸಾಮಾನ್ಯವಾಗಿ ನಮ್ಮಲ್ಲಿ ಕಾಣಸಿಗುವ Dragan flyನ ಮತ್ತೊಂದು ಪ್ರಭೇಧ ನಮ್ಮನ್ನು ಚಕಿತಗೊಳಿಸಿತು. ಸಾಮಾನ್ಯ ಚಿಟ್ಟೆಯಂತೆ ಹಾರುತ್ತಿದ್ದ ಆ ಚಿಟ್ಟೆ ಹೋಲಿಕೆಯಲ್ಲಿ Dragan flyನಂತಿತ್ತು. ಸಾಮಾನ್ಯವಾಗಿ Dragan flyಗಳು ಕುಳಿತಾಗ ತಮ್ಮ ರೆಕ್ಕೆಯನ್ನು ಅಗಲವಾಗಿ ಹರಡಿ ಕೂರುತ್ತವೆ, ಆದರೆ ಈ Dragan flyಪ್ರಭೇಧ ತನ್ನ ರೆಕ್ಕೆಯನ್ನು ಮಡಚಿ ಕೂರುತ್ತಿತ್ತು.



ಆ ಸೊಬಗನ್ನು ಸವಿಯುತ್ತಾ ನಂತರ ಅಲ್ಲಿಂದ ನಮ್ಮ ತಾಣಕ್ಕೆ ಮರಳಿ ಬಂದೆವು. ಅಲ್ಲಿ ಊಟಮಾಡಿಕೊಂಡು ಮತ್ತದೇ "ರಾಜಹಂಸ" ದಲ್ಲಿ ಮುಖ್ಯರಸ್ತೆಗೆ ಬಂದು ನಮಗಾಗಿ ಕಾದು ಕುಳಿತಿದ್ದ "ಹಂಸ"ವನ್ನೇರಿ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆವು. ಪಯಣದ್ದ ಪ್ರಾರಂಭದಲ್ಲಿ ನಮ್ಮ ಹಂಸದಲ್ಲಿ Sansui ಚಿತ್ರ ಪ್ರದರ್ಶನವಾಯಿತು. ನಂತರ ಹಿಂದಿನ ಸಾಲುಗಳಲ್ಲಿ ಕುಳಿತಿದ್ದ ನಮ್ಮ ಮಧುರ !!!! ಕಂಠದಿಂದ ಸುಶ್ರಾವ್ಯ ಗಾನಸಿರಿ ಶುರುವಾಗಿ ಅದು ಬೆಂಗಳೂರಿನ ತನಕ ಮುಂದುವರಿದಿತ್ತು. ೨ ದಿನಗಳಿಂದ ಜೊತೆಯಲ್ಲಿದ್ದ ತಂಡದ ಸದಸ್ಯರು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿದ್ದರು.

Thursday, November 13, 2008

ಪ್ರೀತಿ ಮೂಡಿದಾಗ...

ಛೇ....

ನಾನು ಹೀಗೆ ಮಾಡಬಾರದಿತ್ತು.....
ಆ ಪುಟ್ಟ ಮನಸ್ಸಿಗೆ ನೋವು ನೀಡಬಾರದಿತ್ತು....
ನಾನು ಅವಳನ್ನು ನೋಯಿಸಿಬಿಟ್ಟೆ ಕಣೋ !!!!
ಅವಳ ಆ ಕಣ್ಣುಗಳಿಂದ ಕಣ್ಣೀರಿಳಿಸಿಬಿಟ್ಟೆ....
ದೇವರು ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ....
ಅಲ್ಲ ಅಲ್ಲ ತಪ್ಪು....
ಈ ಪ್ರಶ್ನೆ ಬರುವುದೇ ಇಲ್ಲ ಅಲ್ವೇನೋ ???
ನಾನು ಈ ರೀತಿ ಮಾಡಿದ್ದು ಅವನ ಸಹಾಯದಿಂದನೇ ಅಲ್ವಾ ?
ಅವ್ನು ನನ್ಗೆ ಯಾಕೆ ಈ ರೀತಿ ತೊಂದ್ರೆ ಕೊಡ್ತ ಇದಾನೆ ?
ನಾನು ಮತ್ತೆ ಅವಳು ಗೆಳೆತನದಲ್ಲಿ ಖುಷಿಯಾಗಿದ್ವೋ ಆದ್ರೆ ಅದ್ಯಾವತ್ತು ಈ ರೀತಿ ಪ್ರೀತಿಗೆ ತಿರುಗಿತ್ತೋ ನನ್ಗೇ ಗೊತ್ತಾಗ್ಲಿಲ್ಲ ಕಣೋ....

ಇದು ಗಿರಿಧರ ತನ್ನ ಆಪ್ತಗೆಳೆಯ ಶಶಾಂಕನೊಂದಿಗೆ ಆಡಿದ ನೋವು ತುಂಬಿದ ಮಾತುಗಳು... ಗಿರಿಧರ ಪ್ರತೀದಿನ ಅವನ ಆಗು ಹೋಗುಗಳನ್ನ ಶಶಾಂಕನೊಂದಿಗೆ ಚಾಚೂ ತಪ್ಪದೇ ಹೇಳುತ್ತಿದ್ದ, ಅಂದು ಅವನು ಅಂದು ಪುಟ್ಟ ಮಗುವಾಗಿದ್ದ... ನೋವು ತುಂಬಿದ ಹೃದಯದಿಂದ ಸೊರಗಿಹೋಗಿದ್ದ. ಕಾಲೇಜಿನಲ್ಲಿ ವ್ಯಾಸಂಗಮಾಡುವಾಗ ಇವರಿಬ್ಬರ ಗೆಳೆತನ ಪ್ರಾರಂಭವಾದದ್ದು... ಒಂದು ಜೀವ ಎರೆಡು ದೇಹದಂತಿದ್ದ ಆ ಇಬ್ಬರ ಗೆಳೆತನ ನಿತ್ಯ ನೂತನವಾಗಿತ್ತು. ಗೆಳೆಯರು ಎಂದರೆ ಹೀಗಿರಬೇಕು- ಇವರೇ ಬೇರೆಯವರಿಗೆ ಮಾದರಿ ಎಂದು ಎಲ್ಲಾ ಹೊಗಳುತ್ತಿದ್ದರು.

ಗಿರಿಧರ ಸ್ವಭಾವದಲ್ಲಿ ಸಾಧು, ಮೃದು ಹೃದಯಿ. ಬಹಳ ಬೇಗ ನೊಂದುಕೊಳ್ಳುವ ಅವನು ಅಂದು ಶಶಾಂಕನೊಡನೆ ತನ್ನ ಜೀವನದಲ್ಲಾದ ಘಟನೆಯನ್ನು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಒಂದೇ ಊರಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಬೇರೆ ಬೇರೆ ಸ್ಥಳದಲ್ಲಿದ್ದದ್ದರಿಂದ ಕೇವಲ ದೂರವಾಣಿಯಲ್ಲಿ ಸಂವಾದ ಮಾಡುತ್ತಿದ್ದರು.

ಗಿರಿಧರನ ಮತ್ತು ಲಾಸ್ಯಳ ಪರಿಚಯವಾಗಿ ೧ ವರುಷ ೬ ತಿಂಗಳು ಕಳೆದಿದ್ದರೂ ಅವರು ಒಬ್ಬರನ್ನೊಬ್ಬರು ಭೇಟಿಮಾಡಿರಲಿಲ್ಲ. ಪರಸ್ಪರ ಪ್ರೀತಿಸುತ್ತಿದ್ದ ಯುವಜೋಡಿ ಅದು. ತಮ್ಮದೇ ಆದ ಕನಸುಗಳಲೋಕದಲ್ಲಿದ್ದ ಅವರಿಗೆ ವಾಸ್ತವ ಬದುಕಿನ ಕಟು ಸತ್ಯದ ಅರಿವಾಗಿರಲಿಲ್ಲ. ಕೆಲಸದಲ್ಲಿ ಉತ್ತಮ ಪ್ರಗತಿಹೊಂದಿ ಆಕೆಯ ಮನೆಯಲ್ಲಿ ಆಕೆಯನ್ನು ವಿವಾಹವಾಗುವ ಕನಸ ಕಂಡಿದ್ದ. ಆದರೆ ಅವನ ಮನೆಯಲ್ಲಿನ ಪರಿಸ್ಥಿತಿ ಅವನನ್ನು ಆಕೆಯಿಂದ ದೂರಮಾಡಿತ್ತು. ಪ್ರತಿದಿನ ಸಮಯದ ಅರಿವಿಲ್ಲದೇ ಕೇವಲ ದೂರವಾಣಿಯ ಸಂಪರ್ಕದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು... ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಅಡಿಪಾಯವಿಲ್ಲದ ಕಟ್ಟಡದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ತಮ್ಮದೇ ಆದ ಪುಟ್ಟ ಮನೆ, ಮನೆಯಲ್ಲಿ ತಮ್ಮ ಸಂಸಾರದ ಕನಸ ಹೆಣೆಯುತ್ತಿದ್ದರು. ಶಶಾಂಕ ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಮತ್ತು ಗಿರಿಧರ-ಲಾಸ್ಯರ ಸಂಭಂದವನ್ನು ಗೌರವಿಸುತ್ತಿದ್ದ. ಪ್ರತಿದಿನ ಲಾಸ್ಯಳೊಂದಿಗೆ ಮಾತನಾಡಿ ಶಶಾಂಕನೊಂದಿಗೆ ಮಾತನಾಡಿದರೆ ಗಿರಿಧರನಿಗೆ ಒಂದುರೀತಿಯ ಸಮಾಧಾನ. ಗಿರಿಧರ-ಲಾಸ್ಯರ ಜೋಡಿ ಎಲ್ಲಾ ಯುವಪ್ರೇಮಿಗಳಂತೆ ಇರಲಿಲ್ಲ. ಪರಸ್ಪರ ಗೌರವಿಸುತ್ತಾ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿದ್ದರು. ಮುಂದೆ ಒಮ್ಮೆ ತಾವು ಬೇರೆ ಬೇರೆ ಆಗುವ ಸಂಧರ್ಭ ಒದಗಿ ಬಂದರೂ ಧೈರ್ಯಗೆಡದೇ ಅದನ್ನು ಎದುರಿಸಬೇಕೆಂದು ನಿರ್ಧರಿಸಿದ್ದರು.

ಅಂದು ಆಕಸ್ಮಿಕವಾಗಿ ಆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಗಿರಿಧರನ ಮನೆಯವರು ಸಂಪ್ರದಾಯಸ್ಥರು. ಗಿರಿಧರನಿಗೆ ಮದುವೆ ಮಾಡುವ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ನಡೆದಿತ್ತು. ಮೊದಲು ಹುಡುಗಿಯ ಚಿತ್ರವನ್ನು ನೋಡಿ ನಂತರ ಜಾತಕವನ್ನು ನೋಡಿ ಅದೆರಡೂ ಒಪ್ಪಿಗೆಯಾದರೆ ಮುಂದಿನ ಮಾತುಕತೆ ಮುಗಿಸಿ ಮದುವೆ... ಗಿರಿಧರನಿಗೆ ಇದೆಲ್ಲಾ ತಿಳಿದಿದ್ದರೂ ಆತ ಲಾಸ್ಯಳನ್ನ ಪ್ರೀತಿಸುತ್ತಿದ್ದ. ಆ ವಿಚಾರವಾಗಿ ಆಕೆಯೊಡನೆ ಸಮಾಲೋಚನೆಕೂಡಾ ನಡೆಸಿದ್ದ. ಪರಸ್ಪರ ಒಪ್ಪಿಗೆಯಾದಮೇಲೆ, ಜಾತಕದ ಪ್ರಶ್ನೆ ಕಾಡುವುದಿಲ್ಲವೆಂದು ಅವರಿಬ್ಬರ ನಂಬಿಕೆ. ಆದರೆ ಒಂದು ದಿನ ಗಿರಿಧರನ ತಾಯಿಗೆ ತನ್ನ ಮನದ ಇಂಗಿತವನ್ನ ತಿಳಿಸಬೇಕೆನಿಸುವಷ್ಟರಲ್ಲಿ ಆತನ ತಾಯಿ ಮದುವೆಯ ವಿಚಾರ ಮಾತನಾಡತೊಡಗಿದರು.

"ನೋಡೋ ಗಿರೀ... ನಾನು ಮೊನ್ನೆ ಊರಿಗೆ ಹೋಗಿದ್ದಾಗ ಸುಬ್ಬಾಶಾಸ್ರಿಗಳ ಮಗಳು ಸಿಕ್ಕಿದ್ಳು ಕಣೋ... ಈಗ ಚಂದ ಕಾಣ್ತಾಳೆ... ಅವ್ಳಿಗೂ ಡಿಗ್ರೀ ಆಗಿದ್ಯಂತೆ.... ಹುಡುಗೀ ಅಂದ್ರೆ ಹಾಗಿರ್ಬೇಕು ನೋಡು. ದೊಡ್ಡವ್ರು ಅಂದ್ರೆ ಅವ್ಳಿಗೆ ಗೌರವ ಇದೆ. ನನ್ಗೆ ಅಂತವ್ಳ್ನೇ ಸೊಸೆಯಾಗಿ ತಂದ್ಕೋಬೇಕು ಅಂತ ಆಸೆ ಕಣೋ... ನೀನು ಅದಿಕ್ಕೆ ಒಪ್ಕೋತೀಯ ಅಂತನೂ ಗೊತ್ತು. ನನ್ ಕಣ್ ಮುಚ್ಚೋದ್ರೋಳ್ಗೇ ನಿನ್ ಮದ್ವೆ ನೋಡ್ಬೇಕು ಅಂತ ಆಸೆ. ನೆರವೇರಿಸ್ಕೊಡ್ತೀಯಾ......"

ಈ ವಿಚಾರವನ್ನ ಕೇಳಿ ಗಿರಿಧರನಿಗೆ ಸಿಡಿಲು ತಲೆಯಮೇಲೆರಗಿದ ಹಾಗಾಯಿತು... ಇನ್ನೂ ಒದುತ್ತಿರುವ ಅವನ ಲಾಸ್ಯಳಿಗೆ ಈ ವಿಚಾರವನ್ನ ಹೇಳುವುದು ಹೇಗೆ ? ಮುಂದಿನ ಜೀವನದಬಗ್ಗೆ ಸುಂದರ ಕನಸುಗಳನ್ನ ಹೆಣೆದಿರುವ ನಾವಿಬ್ಬರೂ ದೂರ ದೂರವಾದರೆ ನಮ್ಮ ಭವಿಷ್ಯದ ಕತೆ ಏನಾದೀತು ?? ಈ ವಿಚಾರವನ್ನು ಅವಳೊಡನೆ ಪ್ರಸ್ತಾಪ ಮಾಡುವುದಾದರೂ ಹೇಗೆ ? ತಲೆಯಲ್ಲಿ ನೂರಾರು ರೀತಿಯ ಪ್ರಶ್ನೆಗಳ ಸುರಿಮಳೆಗೆ ಗಿರಿಧರ ತತ್ತರಿಸಿ ಹೋಗಿದ್ದ...

ಅಂದಿನಿಂದ ಅವನಿಗೆ ಲಾಸ್ಯಳ ಜೊತೆಯಲ್ಲಿ ಮಾತನಾಡುವುದು ಕಷ್ಟವಾಗ ತೊಡಗಿತು. ಲಾಸ್ಯಳ ಹಲವು ಪ್ರಯತ್ನದ ನಡುವೆಯೂ ಗಿರಿಧರ ಅವನ ಮನೆಯಲ್ಲಿ ನಡೆದ ವಿಷಯವನ್ನ ಹೇಳಲಾಗಲಿಲ್ಲ. ಅವನ ಆ ರೀತಿಯ ವರ್ತನೆ ಲಾಸ್ಯಳ ಮೇಲೆ ಬಹಳವಾಗಿ ಪರಿಣಾಮಬೀರತೊಡಗಿತು. ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಆದರೆ ಗಿರಿಧರನ ವರ್ತನೆ ಆಕೆಗೆ ಅರ್ಥವಾಗಲಿಲ್ಲ. ಪರಿಪರಿಯಾಗಿ ಕೇಳಿದರೂ ಗಿರಿಧರನಿಂದ ಉತ್ತರ ಬಾರದ ಕಾರಣ ಲಾಸ್ಯ ತನಗಾಗುತ್ತಿರುವ ವೇದನೆಯನ್ನು ಅವನೊಡನೆ ಹೇಳಿದಳು.

ಇಷ್ಟುದಿನಗಳಿಂದ ಒಳಗೆ ಬಚ್ಚಿಟ್ಟಿದ್ದ ನೋವನ್ನು ಅಂದು ಗಿರಿಧರ ಹೊರಗೆಡವಿದ: ದಯವಿಟ್ಟೂ ನನ್ನ ಕ್ಷಮಿಸಿಬಿಡು.... ನಾನು ನಿನ್ನ ಮನಸ್ಸನ್ನ ಕೆಡಿಸಿದವನು... ಆದರೆ ನಾನು ಇಂದು ನಿಸ್ಸಹಾಯಕನಾಗಿದ್ದೇನೆ. ಮನೆಯಲ್ಲಿ ಅಮ್ಮನ ಬೇಡಿಕೆಯನ್ನು ಈಡೇರಿಸದ ಮಗ ಎನ್ನುವ ಪಟ್ಟ ನನ್ನಿಂದ ಕಟ್ಟಿಕೊಳ್ಳಲಾಗುವುದಿಲ್ಲ, ಹಾಗೆಂದು ನನ್ನ ಪ್ರೀತಿಗೂ ಮೋಸ ಮಾಡಲಾಗುವುದಿಲ್ಲ. ನನಗೆ ದಾರಿ ತೋಚದಾಗಿದೆ..... ಇಷ್ಟು ಹೇಳುತ್ತಲೇ ಅವನ ಕಣ್ಣೀರು ಧರೆಗಿಳಿಯತೊಡಗಿತು. ಪುಟ್ಟಮಗುವಿನಂತೆ ಅಳುತ್ತಾ ನಿಂತುಬಿಟ್ಟ. ಇತ್ತಕಡೆ ಲಾಸ್ಯಳಿಗೆ ಅವನ ಮಾತುಗಳನ್ನು ಕೇಳಿ ಯಾವರೀತಿ ಪ್ರತಿಕ್ರಿಯಿಸಬೇಕೆಂಬುದು ತಿಳಿಯಲಿಲ್ಲ. ಎರಡೂ ಕಡೆಯಿಂದ ಕೇವಲ ಬಿಕ್ಕಳಿಸಿ ಅಳುವ ಧನಿಯನ್ನು ಬಿಟ್ಟು ಬೇ‍ರೆ ಏನೂ ಸದ್ದಿರಲಿಲ್ಲ....

Friday, November 7, 2008

ನಿಮ್ಮಲ್ಲಿ ನಲ್ಮೆಯ ವಿನಂತಿ...

ನಾವು ನಮ್ಮ ಕಳೆದುಹೋದ ದಿನಗಳತ್ತ ತಿರುಗಿ ನೋಡಿದರೆ ಎಂದಾದರೂ ಒಮ್ಮೆ ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಅಥವಾ ಕರಪತ್ರ ಬಂದಿರಬಹುದು... "ಜೈ ಸಂತೋಷೀ ಮಾ" ...... ಹೀಗೆ ಆರಂಭವಾಗುವ ಪತ್ರ "ಇದನ್ನು ____ ಜನರಿಗೆ ಕಳುಹಿಸಿದರೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಡುಕಾಗುತ್ತದೆ" ಇಲ್ಲಿಯವರೆಗೆ ಇರುತ್ತಿತ್ತು. ಆದರೆ ಕಾಲ ಬದಲಾದಂತೆ ಇದು ಮರೆಯಾಯಿತೆಂದೇನಲ್ಲ, ಇದನ್ನು ಕಳುಹಿಸುವ ಜನರು ಹೊಸಾ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಈ ರೀತಿಯ ಸಂದೇಶಗಳನ್ನ ಬದಲಾಯಿಸಿಕೊಂಡಿದ್ದಾರೆ... ಅಂಚೆಯನ್ನು ಮರೆತು ಮೊಬೈಲಿಗೆ, ಈ-ಮೈಲಿಗೆ ದಾಸರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು e-mailಗಳು, SMSಗಳು, Orkut scrapಗಳು ನಿಮಗೆ ಅಷ್ಟಾಗಿ ಪರಿಚಯವಿಲ್ಲದವರಿಂದ ಬಂದಿರುತ್ತದೆ, ಅದರ ಅಡಕ ಈ ಮೇಲೆ ಹೇಳಿದ್ದಕ್ಕಿಂತಾ ಭಿನ್ನವೇನಲ್ಲ... "ಇದು _____ ದೇವಿಯ/ದೇವರ ಪವಾಡ... ಇದನ್ನು ೨೦ ಜನಗಳಿಗೆ ಕಳುಹಿಸಿದರೆ ನಿಮ್ಮ ಭವಿಷ್ಯ ಉತ್ತಮವಾಗುವುದು, ಕಡೆಗಾಣಿಸಿದರೆ ಕೆಡುಕಾಗುವುದು. ನಾನು ಇದನ್ನು ನಿಮಗೆ ಕಳುಹಿಸಲೇ ಬೇಕಾಗಿದೆ, ಕ್ಷಮೆ ಇರಲಿ" ಇತ್ಯಾದಿ ಇತ್ಯಾದಿ...

ದೇವರು ಅಥವಾ ದೇವತೆಯ ಹೆಸರು ಜೈ ಸಾಯಿನಾಥ್, ಜೈ ಅಂಬಾ..... ಏನಾದರೂ ಆಗಿರಬಹುದು ಹೀಗೇ ಪಟ್ಟಿ ಮಾಡುತ್ತಲಿದ್ದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಈ ಪಟ್ಟಿಯಲ್ಲಿ ಅಲ್ಲ, ಜೀಸಸ್ ದೇವರುಗಳೂ ಸೇರಿದ್ದಾರೆ. ಮೇಲಿನ ಹೆಸರನ್ನು ನೋಡಿಯೇ ಆಸ್ತಿಕರು ದೇವರಮೇಲಿನ ಭಕ್ತಿಯಿಂದಲೋ, ಭಯದಿಂದಲೋ, ತಮ್ಮ ಭವಿಷ್ಯದ ಚಿಂತೆಯಿಂದಲೋ ತಮ್ಮ ಪರಿಚಯದವರಿಗೆ ಅದನ್ನು ಕಳುಹಿಸುತ್ತಾರೆ. ಅವರ ಮಟ್ಟಿಗೆ ಅದು ಕೇವಲ ಒಂದು ಸಂದೇಶ ಮಾತ್ರ, ಆದರೆ ಅದರ ಹಿಂದೆ ತಂತ್ರಜ್ಞಾನ ತಿಳಿಯುವ ಆಸಕ್ತಿ ಅವರಲ್ಲಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪನಿಗಳು ನೀಡಿರುವ ಉಚಿತ SMS package ನಿಂದ ಆ ಸಂದೇಶ ಕಳುಹಿಸುವ ವ್ಯಕ್ತಿಗೆ ಯಾವುದೇ ಖರ್ಚಿಲ್ಲದೇ ತನ್ನ ಕೆಲಸ ಆಗಿಹೋಗುತ್ತದೆ. ಆದರೆ ಅದೇ ಒಂದು e-mail ಆದರಂತೂ ಒಂದು ನಯಾಪೈಸೆ ಕೂಡಾ ಖರ್ಚಿಲ್ಲ... ಉಚಿತವಾಗಿ ತಮ್ಮ ಪರಿಚಯಸ್ಥರ e-mailಐಡಿ ಗಳನ್ನ ಹಾಕಿ ಕಳುಹಿಸಿದರಾಯಿತು. e-mailವಿಚಾರದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಹಳ ದೊಡ್ಡಮೊತ್ತವನ್ನು ವ್ಯಯಿಸುತ್ತಿರುವುದು ಕಳುಹಿಸಿವವನ ಗಮನಕ್ಕೆ ಬರುವುದಿಲ್ಲ. ಅವನ ಮಟ್ಟಿಗೆ ಅದು ಕೇವಲ ಒಂದು ಸಂದೇಶವಷ್ಟೇ... ಆದರೆ ಆ ಸಂದೇಶವನ್ನ ಸ್ವೀಕರಿಸುವ ವ್ಯಕ್ತಿಗೆ ಮೇಲೆ ಹೇಳಿದಂತೆ ಅಪಾರ ನಂಬಿಕೆ ಇದ್ದಲ್ಲಿ ಆತ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ, ಕಳುಹಿಸದೇ ಬೇರೆ ದಾರಿ ಇಲ್ಲ... ಹಾಗಾಗಿ ಅವನಿಂದ ಆ e-mail ಮತ್ತಷ್ಟು e-mailಐಡಿ ಗಳಿಗೆ ತಳ್ಳಲ್ಪಡುತ್ತದೆ. ಅದರಿಂದ ಆಗುವ ಲಾಭ ???

ಸುಮ್ಮನೆ ಸಮಯದ ನಷ್ಟ ಮಾನಸಿಕ ಕಿರಿಕಿರಿ ಇತ್ಯಾದಿ.... ಈ ಮೇಲಿನ ಸಂದೇಶಗಳು ಕೇವಲ ದೇವರಿಗೆ ಸೀಮಿತವಾಗಿಲ್ಲ, ಅದು ನಿಮ್ಮ ಗೆಳೆತನಕ್ಕೂ ಸವಾಲೊಡ್ಡಬಹುದು.... "ನಿನಗೆ ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ಇದ್ದರೆ ನನಗೂ ಸೇರಿದಂತೆ ಇದನ್ನು ೨೦ ಜನರಿಗೆ ಕಳುಹಿಸು, ಎಷ್ಟು ಜನ ನಿನ್ನ ಬಗ್ಗೆ ಕಾಳಜಿ ಹೊಂದಿದ್ದರೆಂದು ನಿನಗೆ ಅರಿವಾಗುತ್ತದೆ". ಕೇವಲ ಸಂದೇಶ ಕಳುಹಿಸಿದರೆ ಮಾತ್ರಕ್ಕೆ ಕಾಳಜಿಯೆ ??? ಒಂದು ರೀತಿಯಲ್ಲಿ ಇಂತಹಾ ಸಂದೇಶಗಳು ಮೊಬೈಲ್ ಕಂಪನಿಯನ್ನು ಉದ್ದಾರ ಮಾಡುತ್ತವೆ !!! ನಾನು ಸಾಧ್ಯವಾದಷ್ತೂ ಇಂತಹಾ ಸಂದೇಶ ಕಳುಹಿಸುವ ಸ್ನೇಹಿತರಿಗೆ ಆದಷ್ಟೂ ತಿಳಿಹೇಳುತ್ತೇನೆ. ಸಾಧ್ಯವಾದಲ್ಲಿ ನೀವೂ ತಿಳಿಹೇಳಿ :)

ಕೊನೆಯದಾಗಿ ನಾನು ಹೇಳುವುದಿಷ್ಟೆ : ಇದನ್ನು ೨೦ ಜನಕ್ಕಲ್ಲ ಸಾಧ್ಯವಾದಷ್ಟು ಜನರಿಗೆ ತಿಳಿಹೇಳಿ ಅವರಲ್ಲಿ ಅರಿವು ಮೂಡಿಸಿರಿ :) ದೇವರು ನಮ್ಮ SMS ನಿಂದ ಸಂತಸ ಗೊಳ್ಳುವುದಿಲ್ಲ.... ಬದಲಾಗಿ ಕಷ್ಟಪಟ್ಟು ದುಡಿದರೆ ಸಂತಸ ಪಡಬಹುದೇನೊ....

Monday, November 3, 2008

ಪಯಣ-1

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...

ನಾನು ನನ್ನ ಆಫೀಸನ್ನ ಸಂಜೆ ಸರಿ ಸುಮಾರು ೫.೪೫ಕ್ಕೆ ಬಿಟ್ಟು ಮನೆಗೆ ಬಂದೆ. ಇನ್ನೂ ಹೊರಡುವ ತಯಾರಿ ಆಗಿಲ್ಲದ ಕಾರಣ ಸ್ವಲ್ಪ ಗಡಿಬಿಡಿಯಾಗುತ್ತಿತ್ತು. ಮನೆಗೆ ಬರುವ ಮುನ್ನ ಗಟ್ಟಿ ಅವಲಕ್ಕಿ, ಸ್ಲೈಸ್, ಮತ್ತೆ ಖರ್ಜೂರವನ್ನ ಮನೆಗೆ ತಂದಿದ್ದೆ. ನನ್ನ ಮನೆಯಿಂದ ಹೊರಟು ಕೆಂಪೇಗೌಡ ಬಸ್ ನಿಲ್ದಾಣವನ್ನ ತಲುಪಲು ಕನಿಷ್ಟಪಕ್ಷ ೧ ಘಂಟೆಯಾದರೂ ಬೇಕು. ಬೆಂಗಳೂರಿನ ಅದರಲ್ಲೂ ಬನ್ನೆರುಘಟ್ಟ ರಸ್ತೆಯ ವಾಹನದಟ್ಟಣೆಯಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕು. ಹಾಗಾಗಿ ಅಡುಗೆ ಮಾಡಿಕೊಂಡು ಊಟಮಾಡಿ ಹೊರಡಲು ನನ್ನ ಬಳಿ ಸಮಯದ ಅಭಾವವಿತ್ತು. ಹೇಗಿದ್ದರೂ ಆಗತಾನೆ ತಂದಿದ್ದ ಅವಲಕ್ಕಿ ಕೈಗೆ ಸಿಕ್ಕಿದ್ದರಿಂದ ಅದನ್ನೇ ಸ್ವಲ್ಪ ನೆನೆಸಿಕೊಂಡು ಮೊಸರಿನೊಂದಿಗೆ ತಿಂದು ಬಸ್ಸನ್ನು ಹುಡುಕುತ್ತಾ ಹೊರಟೆ. ನಾನಿರುವ ಮನೆಯ ಹತ್ತಿರದಲ್ಲಿ ಯಾವುದೇ Busstop ಇಲ್ಲದ್ದರಿಂದ ನಡೆದುಕೊಂಡು ಬನ್ನೇರುಘಟ್ಟ ಮುಖ್ಯರಸ್ತೆಗೆ ಬಂದೆ. ರಾತ್ರಿ ೧೦.೪೫ ಕ್ಕೆ ಗಂಗಾವತಿಗೆ ಹೊರಡುವ ಐರಾವತ ಬಸ್ಸನ್ನು ನಾನು ಹತ್ತಬೇಕಿತ್ತು. ನಾನು ಕೆಂಪೇಗೌಡ ನಿಲ್ದಾಣದ ಬಸ್ಸನ್ನು ಹತ್ತಿದಾಗಲೇ ೯ ಘಂಟೆ ಸಮಯವಾಗಿತ್ತು. ಮನದಲ್ಲೇ Traffic jamನ ಭಯಂಕರ ರೂಪವನ್ನ ನೆನೆಸಿಕೊಂಡು ನಾನು ಅದರಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಐರಾವತವನ್ನೇರಿದರೆ ಸಾಕೆನ್ನಿಸಿತ್ತು.

ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಾನು ಬಂದಾಗ ಇನ್ನೂ ಘಂಟೆ ೧೦ರ ಸಮಯ. ೪೫ ನಿಮಿಷ ಸಮಯವಿದ್ದದ್ದರಿಂದ ಅಲ್ಲೇ ಕುಳಿತುಕೊಳ್ಳುವ ಆಸನ ಖಾಲಿ ಇದ್ದದ್ದನ್ನು ಹುಡುಕಿ ಕುಳಿತೆ. ನಾನೇನೋ ಸಮಯಕ್ಕೆ ಮುಂಚಿತವಾಗಿ ಬಂದು ನಿರಾಳವಾಗಿ ಕುಳಿತಿದ್ದೆ. ಆದರೆ ನನ್ನ ಸುತ್ತ ಮುತ್ತ ಸ್ವಲ್ಪ ತಡವಾಗಿ ಬಂದವರ ಮುಖದಲ್ಲಿ ತಮ್ಮ ಬಸ್ಸು ತಪ್ಪಿಹೋದಬಗ್ಗೆ ಬೇಸರ, ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಪರಸ್ಪರ ದೂಷಿಸುತ್ತಿದ್ದ ದೃಷ್ಯ, ಆ ಜನಜಂಗುಳಿಯ ನಡುವೆ ಕುಡುಕರ ಕಾಟ, ಅವನನ್ನು ಬೆನ್ನಟ್ಟಿ ಬರುತ್ತಿದ್ದ ಪೋಲೀಸ್ ಪೇದೆಗಳು, ಭಿಕ್ಷುಕಿಯೊಬ್ಬಳು ತಾನು ಸಾಕಿದ ನಾಯಿಯ ಜೊತೆಯಲ್ಲಿ ತಿನ್ನುತ್ತಿದ್ದ Tigerಬಿಸ್ಕತ್ತಿನ ದೃಷ್ಯ ನನ್ನ ಸುತ್ತ ಸುಳಿದಾಡುತ್ತಿದ್ದವು. ಮನೆಯಿಂದ, ಮನೆಯವರಿಂದ ತಿರಸ್ಕಾರಕ್ಕೊಳಗಾದ ಹಲವಾರುಮಂದಿ ಇದೇರೀತಿ ರೈಲ್ವೇ ನಿಲ್ದಾಣದಲ್ಲೋ, ಬಸ್ ನಿಲ್ದಾಣದಲ್ಲೋ ತಮ್ಮ ಆಶ್ರಯವನ್ನ ಕಾಣಬೇಕಾಗುತ್ತದೆ. ಅದೇ ವಿಚಾರವನ್ನ ಯೋಚಿಸುತ್ತಿದ್ದಂತೆ ಅಲ್ಲಿ ಸಂತಸದ ಕ್ಷಣಗಳೂ ಕಂಡು ಬಂದವು. ಎಂದೋ ಭೇಟಿಯಾಗಿ ಸ್ನೇಹಿತರಾಗಿದ್ದು ನಂತರ ಜೀವನದ ಓಟದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗದೇ ಇದ್ದ ಸ್ನೇಹಿತರು ಆ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಪರಸ್ಪರ ಹಸ್ತಲಾಘವಮಾಡುತಾ ಒಬ್ಬರನ್ನೊಬ್ಬರು ಖುಷಿಯಾಗಿ ಮಾತನಾಡಿಸುತ್ತಾ ಇದ್ದದ್ದನ್ನು ಕಾಣುತ್ತಿದ್ದಂತೇ ನಾ ಕಾದು ಕುಳಿತಿದ್ದ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು.

ಹೊಸಪೇಟೆಗೆ ಇದು ನನ್ನ ೨ನೇ ಪಯಣ. ಆ ಸ್ಥಳದ ಪರಿಚಯ ಹೆಚ್ಚಾಗಿ ಇರದ ಕಾರಣ ಆ ಬಸ್ಸಿನ ನಿರ್ವಾಹಕನನ್ನ ಸ್ವಲ್ಪ ಹೊಸಪೇಟೆ ಬಂದಾಗ ನನ್ನನ್ನು ಎಚ್ಚರಿಸುವಂತೆ ಕೇಳಿಕೊಂಡು ನನ್ನ ಜಾಗಕ್ಕೆ ಹೋಗಿ ಕುಳಿತೆ. ಬಸ್ಸಿನ ಒಳಗಡೆ ಕನ್ನಡ ಚಲನಚಿತ್ರಗಳ ಗಾನಸುಧೆ ಹರಿದು ಬರುತ್ತಿತ್ತು. ಆದರೆ ಅದನ್ನು ಆಸ್ವಾದಿಸಲು ಬಸ್ಸಿನ ಒಳಗೆ ಕುಳಿತಿದ್ದ ಇಬ್ಬರು ಆಂಗ್ಲಭಾಷಿಗ ಕನ್ನಡಿಗರು ಅವಕಾಶ ನೀಡುತ್ತಿರಲಿಲ್ಲ. ದಾರಿಯುದ್ದಕ್ಕೂ ಪರಸ್ಪರ ಆಂಗ್ಲಭಾಷೆಯಲ್ಲೇ ಸಂಭಾಷಿಸುತ್ತಾ ತಮ್ಮ ದೂರವಾಣಿಯಲ್ಲಿ ಕನ್ನಡ ಮಾತನಾಡುತ್ತಾ (ಅಲ್ಲಾದರೂ ಕನ್ನಡದಲ್ಲಿ ಮಾತನಾಡಿದರೆನ್ನುವುದೇ ಸಮಾಧಾನ) ಕಿರಿಕಿರಿ ಉಂಟುಮಾಡುತ್ತಿದ್ದರು. ಅವರಿ ಕಿರಿಕಿರಿ ತಾಳಲಾಗದೇ ನಾನು ನನ್ನ ಕಿವಿಗೆ ಎಫ್ ಎಂ ಅನ್ನು ಚುಚ್ಚಿಕೊಂಡೆ. ರಾತ್ರಿಯ ಹೊತ್ತು ಬಸ್ಸು ದಾರಿಯನ್ನು ಸವೆಸುತ್ತಾ ಮುಂದೆಸಾಗಿತ್ತು. ಎಲ್ಲಾ ಸಹಪ್ರಯಾಣಿಗರು ನಿದ್ರಾದೇವಿಯ ವಶವಾದರೂ ನಾನವರ ಗೊರಕೆ ಸದ್ದಿಗೆ ನಿದ್ರಿಸಲಾಗದೇ ನಿದ್ರಿಸುವ ಪ್ರಯತ್ನ ಮಾಡುತ್ತಿದ್ದೆ. ಅಂತೂ ಇಂತೂ ಕತ್ತಲು ಕಳೆದು ಬೆಳಗಿನ ಚುಮುಚುಮು ಬೆಳಕಿನೊಂದಿಗೆ ಹೊಸಪೇಟೆ ನನ್ನನ್ನು ಸ್ವಾಗತಿಸಿತು.

ಬಸ್ ನಿಲ್ದಾಣದಿಂದ ಮೊದಲೇ ಕಾದಿರಿಸಿದ್ದ ಪ್ರಿಯದರ್ಶಿನಿ ಹೋಟೆಲಿಗೆ ನಡೆದುಕೊಂಡು ಬಂದು ನಿತ್ಯಕರ್ಮಗಳನ್ನು ಮುಗಿಸಿ ನಾ ತಂತ್ರಾಂಶವನ್ನ ಅಳವಡಿಸಿಕೊಡಬೇಕಾದ ಕಂಪನಿಗೆ ಹೊರಟೆ. ಮೊದಲೇ ಸ್ವಲ್ಪ ತಡವಾಗಿದ್ದದ್ದರಿಂದ ಗಡಿಬಿಡಿಯಲ್ಲಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಒಂದು ಧ್ವನಿ ನನ್ನ ಕೂಗಿದಂತಾಯಿತು. ಪರಿಚಯವಿಲ್ಲ ಈ ಊರಿನಲ್ಲಿ ನನ್ನ ಯಾರಾದರೂ ಏತಕ್ಕಗಿ ಕರೆದಾರು ? ಅವರು ಯಾರನ್ನೋ ಕರೆದಿರಬೇಕೆಂದು ಮುಂದೆ ಸಾಗಿದೆ. ನಂತರ ಹಿಂದಿನಿಂದ ಬಂದ ಬಾಲಕನೊಬ್ಬ ತನ್ನ ಕೈನಲ್ಲಿ ನಾ ಕಾದಿರಿಸಿದ್ದ ಬಸ್ಸಿನ ಟಿಕೇಟನ್ನು ಹಿಡಿದು ತಂದಿದ್ದ. ತಡವಾಯಿತೆಂದು ಗಡಿಬಿಡಿಯಲ್ಲಿ ಹೆಜ್ಜೆಹಾಕುವಾಗ ಪುಸ್ತಕದೊಳಗಿನಿಂದ ಟಿಕೇಟು ಬಿದ್ದುಹೋದದ್ದು ನನ್ನ ಗಮನಕ್ಕೇ ಬಂದಿರಲಿಲ್ಲ. ಆ ಹುಡುಗನಿಗೆ ಧನ್ಯವಾದಗಳನ್ನು ಹೇಳಿ ಟಿಕೇಟನ್ನ ಭದ್ರವಾಗಿರಿಸಿಕೊಂಡೆ.

ಅಲ್ಲಿಂದ ಗ್ರಾಹಕರ ಕಂಪನಿಗೆ ಹೋಗಿ ಅಲ್ಲಿ ಆ ಹೊಸಾ ತಂತ್ರಾಂಶವನ್ನ ಅಳವಡಿಸಿ ಅದರಬಗ್ಗೆ ಅವರಿಗೆ ವಿವರಿಸಿ ನಂತರ ನಾನು ಮರಳಿ ಬೆಂಗಳೂರಿಗೆ ಪಯಣ ಬೆಳೆಸಿದೆ.

Tuesday, October 14, 2008

ನನ್ನ ಪುಟ್ಟ ಗೂಡು



ಹಲೋ !!! ನಮಸ್ಕಾರ ಮೇಡಂ, ನಾನು ಪ್ರಶಾಂತ್, ನೆನ್ನೆ ಮನೆವಿಚಾರಕ್ಕೆ ಫೋನ್ ಮಾಡಿದ್ನಲ್ಲ....

ಇಲ್ಲ, ಅದನ್ನ ಕೊಟ್ಟಾಯ್ತು, ನೀವು ಲೇಟ್ ಮಾಡ್ಬಿಟ್ರಿ... ಹಾಗಂತ ಅತ್ತಕಡೆಯಿಂದ ಬಂದ ಧ್ವನಿ ನನ್ನ ಕನಸುಗಳಿಗೆ ಕತ್ತರಿಹಾಕಿತ್ತು.

ನೆನ್ನೆಯಷ್ಟೇ ನಾನು ಆಕೆಗೆ ದೂರವಾಣಿ ಕರೆನೀಡಿ ಮಾತನಾಡಿದ್ದೆ. ಇಂದು ಆ ಮನೆಯತ್ತ ಹೋಗುವ ದಾರಿಯನ್ನ ಬಲ್ಲವರಿಂದ ತಿಳಿದುಕೊಂಡು ಆಕೆಗೆ ನಾನು ಬರುವ ವಿಷಯವನ್ನ ತಿಳುಸುವ ಸಲುವಾಗಿ ಕರೆ ನೀಡಿದ್ದೆ. ಆದರೆ ನನ್ನ ಅದೃಷ್ಟವೋ ದುರಾದೃಷ್ಟವೋ ತಿಳಿಯದು. ನನಗೆ ಆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಕೈ ತಪ್ಪಿ ಹೋಯಿತು. ಇದು ಒಂದು ಮನೆಯ ಕಥೆಯಾದರೆ ಇಂತಹಾ ಕಥೆಗಳು ಹಲವಾರು. ನಾನು ಮನೆಗಾಗಿ ಅಂತರ್ಜಾಲದಲ್ಲೂ ಹುಡುಕಾಟ ಆರಂಭಿಸಿದ್ದೆ. ಆದರೂ ಅದು ಫಲ ನೀಡಲಿಲ್ಲ. "ನೀವು bachelorಆ, sorry, ನಾವು bachelorಗಳಿಗೆ ಮನೆ ಕೊಡೋದಿಲ್ಲ" ಇದೇ ಉತ್ತರ ನನಗೆ ಬಹಳಷ್ಟುಕಡೆ ಸಿಕ್ಕಿದ್ದು. bachelorಗಳಿಗೆ ಮನೆ ಕೊಡದಿರಲು ಕಾರಣ ?? ಹಿಂದೆಂದೋ ಆ ಮನೆಯನ್ನು ಯಾವುದೋ bachelorಗೆ ಕೊಟ್ಟು ಆ ಪುಣ್ಯಾತ್ಮ ಮನೆಯನ್ನ ಚೊಕ್ಕಟವಾಗಿಡದಿದ್ದದ್ದೋ, ಅಥವಾ ಅವನ ಕೆಟ್ಟ ಹವ್ಯಾಸಗಳೋ... ಕಾರಣಗಳು ನೂರ್‍ಆರು. ಆದರೆ ಅದರ ಪರಿಣಾಮದಿಂದ ನನಗೆ ಮನೆ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟು ಬೇಗ ನಾನು ನನ್ನ ಕಾಲಮೇಲೆ ನಿಲ್ಲಬೇಕೆಂಬ ಆಸೆ, ಆದರೆ ಆ ಸಂಧರ್ಭ ನನಗೆ ಹತ್ತಿರದಲ್ಲಿಲ್ಲ ಎಂದು ತೋರುತ್ತಿತ್ತು.

ಅಂತೂ ಇಂತೂ ಅಂತರ್ಜಾಲದ ಸಹಾಯದಿಂದ ಒಂದು ಮನೆಯನ್ನ ನೋಡಿ, ಆ ಮನೆಗೆ ಭೇಟಿನೀಡಲು ಅಣಿಯಾದೆ. ಆ ಮನೆ ಇದ್ದದ್ದು ಜೆ.ಪಿ ನಗರ ೬ನೇ ಹಂತದಲ್ಲಿ. ಕೆಲಸ ಬೇಗ ಮುಗಿಸಿ ರಾತ್ರಿ ಸರಿ ಸುಮಾರು ೭ ಘಂಟೆಯ ಹೊತ್ತಿಗೆ ಅಲ್ಲಿ ತಲುಪಿದ್ದೆ. ಮನೆಯ ಯಜಮಾನ ತುಸು ಮುಂಗೋಪಿಯಂತೆ ಕಂಡರೂ ನನಗೆ ಯಜಮಾನನಿಂದ ಏನೂ ನಷ್ಟವಾಗದೆಂದು ಮನೆಯ ಒಳಗಡೆ ಯಜಮಾನನ ಕಾವಲಿನಲ್ಲಿ ಕಾಲಿಟ್ಟೆ. ಮನೆಯೇನೋ ಚಿಕ್ಕದಾಗಿ ಚೊಕ್ಕವಾಗಿತ್ತು. ಅಮೃತಶಿಲೆಯ ಹಾಸುಗಲ್ಲು ಮನೆಯ ಅಂದವನ್ನು ಹೆಚ್ಚಿಸಿತ್ತು. ಒಂದು ಕೊಠಡಿಯ ಮನೆಯಲ್ಲಿ ಬಚ್ಚಲುಮನೆ ಕೊಠಡಿಗೆ ಹೊಂದಿಕೊಂಡಂತೆ ಇತ್ತು. ಆದರೂ ಪರವಾಗಿಲ್ಲ ಬಾಡಿಗೆ ವಿಚಾರಿಸಿ ಕಡಿಮೆಯಾದಲ್ಲಿ ಇಲ್ಲಿಯೇ ಇರಬಹುದೆಂದು ಆಲೋಚಿಸಿ ಆ ಯಜಮಾನನೊಡನೆ ಮಾತನಾಡೋಣ ಎಂದುಕೊಂಡರೆ ಆತನಿಗೆ ಮಾತನಾಡಲು ಪುರುಸೊತ್ತೂ ಇರಲಿಲ್ಲದ ಕಾರಣ ನಂತರ ನನಗೆ ಕರೆ ನೀಡುವುದಾಗಿ ಹೇಳಿದರು. ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಮನೆಗೆ ಮರಳಿದೆ. ಸರಿಸುಮಾರು ೯ ಘಂಟೆಗೆ ಆತನಿಂದ ಕರೆ ಬಂದಿತು. ಮನೆಯ ಬಾಡಿಗೆ ವಿಚಾರ ತಿಳಿಸಲು ಆತ ಕರೆ ನೀಡಿದ್ದರು. ಆತ ಹೇಳಿದ ಬಾಡಿಗೆ ಕೇಳಿ ಮೈ ನಡುಕ ಬಂದಿತ್ತು.

ಬಾಡಿಗೆ ೫.೦೦೦/- ಮತ್ತೆ ಮುಂಗಡ ಹಣ ೭೦.೦೦೦/- ಉಸ್ಸಪ್ಪಾ !!! ಬೆಂಗಳೂರಿನ ಜನರಿಗೆ ಹಣದ ಬೆಲೆ ತಿಳಿಯದೇನೋ ಅಂದೆನಿಸಿಬಿಟ್ಟಿತು. ಕಾಸು ಕಾಸು ಸೇರಿಸಿ ಜೋಡಿಸಿಟ್ಟ ಹಣವನ್ನೆಲ್ಲಾ ಈ ಮನೆಯಸಲುವಾಗಿ ನೀಡಬೇಕಾಗುವುದಲ್ಲ ಎಂದು ಮನಸ್ಸಿನಲ್ಲಿಯೇ ಯೋಚಿಸಿ ಈ ಮನೆಯ ಸಹವಾಸವೇ ಬೇಡವೆಂದುಕೊಂಡು ಮತ್ತೊಮ್ಮೆ ನನ್ನ ಅಮ್ಮ, ಅಣ್ಣನ ಅಭಿಪ್ರಾಯ ಕೇಳಿ ಆತನನ್ನು ಸಂಪರ್ಕಿಸುವೆನೆಂದು ಹೇಳಿದೆ. ಅಲ್ಲಿಂದ ಮತ್ತೆ ಬೇರೆ ಬೇರೆ ಮನೆಯ ಭೇಟೆ ಮುಂದುವರಿಸಿದೆ. ನನ್ನ ಮೈಸೂರಿನ ಮನೆಯ ಎದುರಿನಲ್ಲಿರುವ ಪರಿಚಯಸ್ಥರೊಬ್ಬರ ಮಗನಿಗೆ ಬೆಂಗಳೂರಿನಲ್ಲೇ ಕೆಲಸ. ಆತ ಮೈಸೂರಿಗೆ ಬಂದಿದ್ದಾಗ ನನ್ನ ಅಣ್ಣನೊಡನೆ ಮಾತನಾಡಿ ನನ್ನ ಮನೆಯ ಭೇಟೆಯ ಬವಣೆಯನ್ನು ಪರಿಹರಿಸುವ ಸಲುವಾಗಿ ಆತನೂ ಈ ಕೆಲಸಕ್ಕೆ ಕೈ ಜೋಡಿಸಿದ. ಆತ ತೋರಿಸಿದ ಮನೆಗಳು ನನಗೆ ಸ್ವಲ್ಪ ದೂರ ಎನಿಸಿತು. ಅದೂ ಅಲ್ಲದೇ ಅಮ್ಮನ್ನನ್ನು ಒಪ್ಪಿಸಿ ನನ್ನಜೊತೆ ಇರಿಸಿಕೊಳ್ಳುವುದು ಎಂದು ತೀರ್ಮಾನಿಸಿದ್ದೆ. ಹಾಗಾಗಿ ಮನೆಯ ಸುತ್ತ ಮುತ್ತ ಸ್ವಲ್ಪ ಅಚ್ಹುಕಟ್ಟಾಗಿರಬೇಕು, ಮನೆಯಿರುವ ಸ್ಥಳ ಪ್ರಶಾಂತವಾಗಿರಬೇಕೆಂದು ನಾನು ಎಣಿಸಿದ್ದೆ. ನನ್ನ ಈ ಮನೆ ಭೇಟೆ ಮುಂದುವರಿಸುವ ಭರದಲ್ಲಿ ಸಿಕ್ಕ ಮನೆಯನ್ನ ಬಿಡುವುದು ಬೇಡವೆಂದು ಮತ್ತೆ ೫.೦೦೦/- ಬಾಡಿಗೆಯ ಮನೆಗೆ ಬಂದು ಆ ಮನೆಯ ಯಜಮಾನನಿಗೆ ೧೦೦೦/- ಮುಂಗಡ ಹಣ ನೀಡಿ ಮತ್ತೆ ನನ್ನ ಹುಡುಕಾಟವನ್ನ ಮುಂದುವರಿಸಲು ನಿರ್ಧರಿಸಿದೆ.

ಮೊದಲೇ ನಿರ್ಧರಿಸಿದಂತೆ ಮುಂಗಡ ಹಣ ನೀಡಲು ಆ ಮನೆಯತ್ತ ಹೊರಟೆ. ಅಂದು ಆ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಇದು ಒಳ್ಳೆಯ ಲಕ್ಷಣವೆಂದುಕೊಂಡು ಮನೆಯ ಯಜಮಾನನಿಗೆ ೧೦೦೦/- ಮುಂಗಡ ಹಣವನ್ನು ನೀಡಿ ಪ್ರಸಾದವನ್ನು ಪಡೆದು ಮರಳಿ ನನ್ನ ಹಳೇ ಮನೆಗೆ ಬರುವಾಗ ದಾರಿಯಲ್ಲಿ ನನ್ನ ಮಿತ್ರ ಸೋಮ ಸಿಕ್ಕಿದ. ಆತನಿಗೆ ಮನೆಯ ವಿಚಾರವನ್ನೆಲ್ಲಾ ಹೇಳಿದಮೇಲೆ ಹತ್ತಿರದಲ್ಲೇ ಕಡಿಮೆ ಬಾಡಿಗೆಗೆ ಮನೆಗಳು ದೊರೆಯುತ್ತವೆ ಅನ್ನುವುದು ತಿಳಿಯಿತು. ಆತನಿಗೆ ಯಾವುದಾದರೂ ಇದ್ದರೆ ತಿಳಿಸೆಂದು ಹೇಳಿ ಮನೆಗೆ ಬಂದೆ. ಮನೆಗೆ ಬಂದು ಅಡುಗೆಗೆ ಸಿದ್ಧತೆ ಮಾಡುತ್ತಿದ್ದಾಗ ಸೋಮನ ಮಿತ್ರನಿಂದ ಕರೆಬಂತು. ಒಂದು ಮನೆಇರುವುದಾಗಿ ತಕ್ಷಣ ಬಂದು ನೋಡಬೇಕಾಗಿ ಹೇಳಿದರು. ಅಡುಗೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಆ ಮನೆಯನ್ನ ನೋಡಲು ಹೊರಟೆ.

ಆ ಮನೆ ನಾನಿದ್ದ ಸ್ಥಳದಿಂದ ೩ ಕಿಮೀ ದೂರದಲ್ಲಿತ್ತು. ಒಂದು ಕೊಠಡಿಯ ಮನೆ ಮೊದಲ ಮಹಡಿಯಲ್ಲಿದ್ದರೂ ಚೊಕ್ಕಟವಾಗಿತ್ತು. ಆ ತಕ್ಷಣವೇ ಆ ಮನೆಯ ಯಜಮಾನರಿಗೆ ೫೦೦೦ ಮುಂಗಡ ಹಣ ನೀಡಿ ೧ನೇ ತಾರೀಖು ಬರುವುದಾಗಿ ಹೇಳಿ ಮನೆಗೆ ಬಂದೆ. ಮನೆಗೆ ಬಂದು ಅಮ್ಮ, ಅಣ್ಣನಿಗೆ ಕರೆ ಮಾಡಿ ಹಾಲು ಉಕ್ಕಿಸುವ ಕಾರ್ಯಕ್ರಮವನ್ನ ಅಮ್ಮನಿಂದಲೇ ಮಾಡಿಸುವುದಾಗಿ ತಿಳಿಸಿ ಅಂತೂ ಇಂತೂ ೧ನೇ ತಾರೀಖು ಅಮ್ಮ, ಅಕ್ಕ, ಅಣ್ಣ ಮತ್ತು ಕುಟುಂಬದೊಡನೆ ನನ್ನ ಜೀವನದ ಮೊದಲ ಮನೆಯಲ್ಲಿ ಬಾಳುವೆ ನಡೆಸಲು ಪ್ರಾರಂಭಿಸಿದೆ. ಆ ಮನೆಯಲ್ಲಿ ಅಣ್ಣನ ಮಗಳು ೧ ವರುಷದ "ವಿಸ್ಮಯ" ತನ್ನ ಅಂಬೇಗಾಲಿನಲ್ಲಿ ಮನೆಯತುಂಬಾ ಓಡಾಡುವುದನ್ನ, ಅಕ್ಕನ ಮಗಳು "ಸ್ಪೂರ್ತಿ"ಯ ಆಟಪಾಟಗಳನ್ನ ಕಂಡು ಏನೋ ಒಂದು ರೀತಿಯ ಸಂತಸವಾಗುತ್ತಿತ್ತು.

Friday, September 12, 2008

ಚೆಂಗುಲಾಬಿ ಅರಳಿ ನಗುವ ಹೊಮ್ಮಿಸೀತೇ ???

ಮನದ ತುಂಬಾ ಬೇಸರ, ಏನೋ ಕೇಳುವ ತವಕ, ಮನಸ್ಸಿಗೆ ಬೇಸರವಾದರೆ ? ನೊಂದಮನಕೆ ಮತ್ತೊಮ್ಮೆ ನೋವುಕೊಡುವುದು ಎಷ್ಟುಸರಿ ? ನಾನಾಡುವ ನಾಲ್ಕುಮಾತುಗಳು ಆ ಜೀವಕ್ಕೆ ನೆಮ್ಮದಿಯ ತರಲೆಂದು ನನ್ನ ಆಸೆ, ಆದರೆ ಆ ಮನಸ್ಸು....

ಬೇಸರದ ಮನದಿ ಉಲ್ಲಾಸಮೂಡಿಸುವ ನನ್ನ ಸರ್ವಪ್ರಯತ್ನಗಳೂ ವಿಫಲವಾಯಿತೇ ??? ಆ ಪುಟ್ಟ ಘಾಸಿಗೊಂಡ ಮನಸ್ಸಿಗೆ ಗೆಳೆತನದ ಔಷಧವ ಲೇಪನ ನನ್ನಿಂದ ಹಚ್ಚಲಾದೀತೇ ? ಒಮ್ಮೊಮ್ಮೆ ಮನಃ ಬಿಚ್ಚಿಮಾತನಾಡುವ, ಮತ್ತೊಮ್ಮೆ ಮೌನವಾಗಿರುವ ಆ ಮನಸ್ಸು ವಿಚಲಿತಗೊಂಡಂತಿದೆ. ನನ್ನ ಜೀವನದ ಅನುಭವವನ್ನೆಲ್ಲಾ ಧಾರೆಯೆರೆದಾಯ್ತು, ಆ ಮನಸ್ಸಿಗೆ ಚೇತರಿಕೆ ಮೂಡಿಸುವ ಪ್ರಯತ್ನದಲ್ಲಿ. ಓ ದೇವರೇ... ಏತಕ್ಕೆ ಈ ತುಡಿತ !!!

ಆ ನಗೆಯಲ್ಲಿ ಅದೇನು ಮೋಡಿ !!! ಏನೋ ಒಂದುರೀತಿಯ ಸೆಳೆತ ಮೇಲ್ನೋಟಕ್ಕೆ... ಸ್ವಲ್ಪ ಸೂಕ್ಷ್ಮವಾಗಿ ನೋಡಿದಾಗ ಆರಲಾಗದ ಗಾಯ... ಮುದುಡಿಹೋದ ಕನಸುಗಳ ದೊಡ್ಡ ಭಂಡಾರ. ಆ ಮರುಭೂಮಿಯಲ್ಲಿ ಒಂದು ಚೆಂಗುಲಾಬಿಯ ಚಿಗುರಿಸುವ ಪ್ರಯತ್ನ ನನ್ನದು... ಅದು ಚಿಗುರೀತೇ ??? ಸುಂದರ ಸ್ವಪ್ನಗಳು ಫಲಿಸೀತೇ ??? ಆ ಚಿಗುರಿದ ಗಿಡದಿಂದ ಒಂದು ಚೆಂಗುಲಾಬಿ ಅರಳಿ ನಗುವ ಹೊಮ್ಮಿಸೀತೇ ???

Tuesday, September 9, 2008

ಮಳೆಬರುವ ತುಸು ಮುಂಚೆ

ಮಳೆಬರುವ ತುಸು ಮುಂಚೆ
ತಂಗಾಳಿ ಬೀಸಿತ್ತು...
ನಿನ್ನ ಕಂಪತಂದಿತ್ತು...
ಮನಸ್ಸೇಕೋ ನಾಚಿತ್ತು...
ಮುಗುಳ್ನಗೆಯು ಹೊಮ್ಮಿತ್ತು...
ನಿನ್ನ ಸನಿಹ ಬೇಕಿತ್ತು...
ನಿನ್ನ ಒಲುಮೆಗೆ ಕಾದಿತ್ತು...
ಸಿಹಿಮುತ್ತ ಬೇಡಿತ್ತು...

ಹಾ ಗೆಳತೀ... ಕಂಡೆ ನಾ ನಿನ್ನನು...
ಕೋಲ್ಮಿಂಚಿನಲಿ ನಿನ್ನ ಕಣ್ನೋಟ ಕಂಡೆ
ತುಂತುರು ಹನಿಯಲಿ ಸಿಹಿಮುತ್ತನುಂಡೆ...
ತಂಗಾಳಿಯಲಿ ನೀ ಬಂದೆನ್ನ ಅಪ್ಪಿದೆ...

ಮಳೆಗೂ ನಿನಗೂ ಎಂತಹಾ ಹೋಲಿಕೆ...

Saturday, September 6, 2008

ಹಬ್ಬ ತಂದ ನೆನಪು...

ಹಬ್ಬ ತಂದ ನೆನಪು...

ಇವತ್ತು ಗಣೇಶ ಚತುರ್ಥಿ... ಏನು ಮಾಡಿದ್ದೀಯೋ ??? ನಮ್ಮನೇಲಿ ಕಡುಬು, ಒಬ್ಬಟ್ಟು, ಪಾಯಸ ಮಾಡಿದ್ದೀನಿ...

ಹೀಗೆ ನನ್ನ ಗೆಳತಿಯೊಬ್ಬಳು ಹೇಳುತ್ತಿರುವಾಗ ನನ್ನ ಕಣ್ತುಂಬಿ ಬಂದಿತ್ತು. ಮನೆಯಲ್ಲಿ ಯಾರಾದರೂ ಸಾವನ್ನಪ್ಪಿರುವಾಗ ಯಾವುದೇ ಹಬ್ಬ ಹರಿದಿನಗಳನ್ನ ಆಚರಿಸುವುದಾದರೂ ಹೇಗೆ ? ಅಪ್ಪ ಕಳೆದ ಗಣಪತಿ ಹಬ್ಬದಂದು ನಮ್ಮೊಂದಿಗಿದ್ದರು, ಆದರೆ ಈ ಬಾರಿ.... ಅವರು ನಮ್ಮನ್ನಗಲಿ ೮ ತಿಂಗಳು ಕಳೆದಿದೆ. ನಮ್ಮನ್ನಗಲಿಯೂ ಅವರು ನಮ್ಮೊಂದಿಗಿದ್ದಾರೆ. ಕಳೆದ ೨ ವರುಷಗಳ ಹಿಂದೆ ಇದೇ ಸಮಯಕ್ಕೆ ನಾವೆಲ್ಲಾ ಉಡುಪಿಗೆ ಹೋಗಿ ನಮ್ಮ ಅಜ್ಜನಮನೆಯಲ್ಲಿ ಹಬ್ಬವನ್ನಾಚರಿಸಿದ್ದುಂಟು... ಆಗ ಮನೆ ಮಂದಿಯೆಲ್ಲಾ ಒಟ್ಟಿಗೇ ಸೇರಿ ಮನೆಯಲ್ಲಿ ಏನೋ ಒಂದುರೀತಿಯ ಸಂಬ್ರಮ, ಸಡಗರ ನೆಲೆಸಿತ್ತು. ನಮ್ಮ ಮಾವನವರು ಸ್ವತಃ ತಾವೇ ತಯಾರಿಸಿದ ಗಣಪನ ಮೂರ್ತಿಯನ್ನು ಪೂಜಿಸಿ ನಂತರ ನಮ್ಮ ಅಜ್ಜನ ಮನೆಮುಂದಿರುವ ಕೆರೆಯಲ್ಲಿ ವಿಸರ್ಜಿಸುತ್ತಿದ್ದರು. ಆ ಸಂಧರ್ಬದಲ್ಲಿ ಅಲ್ಲಿಯ ವಾತಾವರಣವನ್ನು ನೋಡುವುದೇ ಒಂದು ರೀತಿಯ ಖುಷಿ...

ಎಲ್ಲರೋಂದಿಗೆ ಬೆರೆತು ಮಾತನಾಡಿ ಅಜ್ಜನ ತೋಟದೊಳಗಡೆ ತಿರುಗಾಡಿ ಬುಗುರಿಮರದಡಿಯಲ್ಲಿ ಬಿದ್ದಿದ್ದ ಬುಗುರಿ ಹಣ್ಣನ್ನು ಹೆಕ್ಕಿ ತಿನ್ನುತ್ತಿದ್ದೆವು. ಕೊಟ್ಟಿಗೆಯಲ್ಲಿ ಇರುವ ದನ ಕರುಗಳ ಮೈದಡವುತ್ತಾ ಹಕ್ಕಿಗಳ ಚಿಲಿಪಿಲಿಯನ್ನು ಕೇಳುತ್ತಾ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಆದರೆ ಈ ವರುಷ ಮನೆಯಲ್ಲಿ ಸಂಭ್ರಮ, ಸಡಗರ ಇಲ್ಲ, ಹಬ್ಬಕ್ಕೆಂದು ನಾನು ಮೈಸೂರಿಗೂ ಹೋಗಲಿಲ್ಲ. ಮನದಲ್ಲಿ ಏನೋ ಒಂದು ರೀತಿಯ ಬೇಸರ ಮಡುಗಟ್ಟಿತ್ತು. ಬೆಳಗಿನಿಂದ ತಿಂಡಿಯನ್ನೂ ಮಾಡಿಕೊಳ್ಳದೇ ಕಂಪ್ಯೂಟರಿನಲ್ಲಿ ನಾನು ತೆಗೆದಿದ್ದ ಹಳೆಯ ಫೋಟೋಗಳನ್ನು ನೋಡುತ್ತಾ ಕುಳಿತಿದ್ದೆ. ಆ ಸಂಧರ್ಭದಲ್ಲಿ ಅಪ್ಪನ ಕೆಲವು ಚಿತ್ರಗಳು ಹಾದು ಹೋದವು. ಅದು ಆಯುಧಪೂಜೆಯ ಸಂಧರ್ಭ. ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗೆ ಪೂಜೆ ಮಾಡಿ ಅವರ ಸೈಕಲ್ಲಿಗೆ ಮತ್ತೆ ನನ್ನ, ಅಣ್ಣನ ಬೈಕಿಗೆ ಪೂಜೆ ಮಾಡುತ್ತಿದ್ದರು. ಅವರ ಕೈಇಂದಲೇ ಪೂಜೆಯನ್ನು ಮಾಡಿಸುವ ಸಲುವಾಗಿ ನಾನು ಬೆಂಗಳೂರಿನಿಂದ ಮೈಸೂರಿಗೆ ನನ್ನ ಬೈಕಿನಲ್ಲೇ ಹೋಗುತ್ತಿದ್ದೆ. ಅವರನ್ನು ಕೊನೆಯ ಸಲ ಕಾಣಲು ನಾನು ಹೋಗಿದ್ದೂ ಅದೇ ಬೈಕಿನಲ್ಲಿ.

ಅಪ್ಪನಿಗೆ ಸಕ್ಕರೆಖಾಯಿಲೆ ಇದ್ದರೂ ಹಬ್ಬದ ದಿನಗಳಂದು ಸಿಹಿ ಊಟ ಮಾಡದೇ ಬಿಡುತ್ತಿರಲಿಲ್ಲ, ಬಾಕಿ ದಿನಗಳಂದು ಕಹಿಬೇವಿನ ಮಾತ್ರೆಯನ್ನ ತೆಗೆದುಕೊಂಡು ತಮ್ಮ ಆರೋಗ್ಯವನ್ನ ಸರಿದೂಗಿಸಿಕೊಳ್ಳುತ್ತಿದ್ದರು. ಅವರ ಮನಸ್ಸಿಗೆ ಬೇಸರವಾಗಬಾರದೆಂದು ಮನೆಯಲ್ಲಿ ಸಿಹಿತಿಂಡಿಗಳನ್ನು ತರುವುದನ್ನೇ ನಾವೆಲ್ಲಾ ಕಡಿಮೆ ಮಾಡಿದ್ದೆವು. ಹಬ್ಬ ಹರಿದಿನಗಳಂದು ಸ್ವಲ್ಪವೇ ಸ್ವಲ್ಪ ದೇವರಿಗೆ ನೈವೇದ್ಯ ಮಾಡುವ ಸಲುವಾಗಿ ಸಿಹಿತಿಂಡಿ ಇರುತ್ತಿತ್ತು. ಅಪ್ಪನಿಗೆ ಮೊದಲಿಂದಲೂ ಸಿಹಿತಿಂಡಿಯನ್ನು ಕಂಡರೆ ಪ್ರೀತಿ ಹೆಚ್ಚು. ಅವರಿಗೆ ಸಕ್ಕರೆಖಾಯಿಲೆ ಬಂದಮೇಲೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ... ಪ್ರತಿ ಹೆಜ್ಜೆಯಲ್ಲೂ ಮೈಎಲ್ಲಾ ಕಣ್ಣಾಗಿಸಿಕೊಂಡು ತಿರುಗಾಡಬೇಕಾಗಿ ಬಂತು. ಅಪ್ಪಿ ತಪ್ಪಿ ಕೈಗೇನಾದರೂ ಮುಳ್ಳು ಚುಚ್ಹಿದರೆ ಚಿಮ್ಮುಟವನ್ನು ಬಿಸಿಮಾಡಿ ಮುಳ್ಳು ತೆಗೆದು ಅವರಿಗೆ ಇನ್ಫೆಕ್ಶನ್ ಆಗದಂತೆ ನೋಡಿಕೊಳ್ಳುತ್ತಿದ್ದೆವು.

ಇಂದು ಅಪ್ಪ ನೆಟ್ಟು ಬೆಳೆಸಿದ, ಫಲನೀಡುತ್ತಿರುವ ತೆಂಗಿನ ಮರವನ್ನ ಪಕ್ಕದ ಮನೆಯವರು ಕತ್ತರಿಸಿ ಹಾಕಿ ಎಂದು ಹೇಳುತ್ತಿದ್ದಾರೆ !!! ಆ ಮರವನ್ನ ನೇರವಾಗಿ ಬೆಳೆಸಲು ಸೈಕಲ್ಲಿನ ಟಯರ್‍ಅನ್ನು ಹಾಕಿ ಎಳೆದು ಕಟ್ಟಿ ನಾವೆಲ್ಲಾ ಪಟ್ಟ ಪಾಡು ಅಷ್ಟಿಷ್ಟಲ್ಲ... ಅಪ್ಪ ನಮ್ಮನ್ನಗಲಿ ಇನ್ನೂ ವರುಷ ಕೂಡಾ ಸಂಧಿಲ್ಲ, ಪಕ್ಕದ ಮನೆಯವನು ಗಲಾಟೆ ಮಾಡುತ್ತಿದ್ದಾನೆ. ಆ ಮರದಲ್ಲಿ ಜೀವ ತುಂಬಿದೆ, ಅಪ್ಪ ಕಂಡ ಕನಸುಗಳು ತುಂಬಿದೆ, ಅವರ ನೆನಪಿದೆ, ಅವರ ಶ್ರಮ, ದುಡಿಮೆ ಎಲ್ಲಾ ಸೇರಿ ಆ ಮರ ಇಂದು ಬೆಳೆದು ನಿಂತಿದೆ. ಅದನ್ನು ಯಾವ ಕೈ ಇಂದ ಕಡಿಯುವುದು ??? ಏನು ಮಾಡಲೂ ದಾರಿ ಕಾಣುತ್ತಿಲ್ಲ...

ಅಪ್ಪಾ, ನೀವು ನೆಟ್ಟ ಆ ಕಲ್ಪವೃಕ್ಷವನ್ನು ಉಳಿಸಿಕೊಳ್ಳಲು ನಮ್ಮ ಕೈಲಾದ ಪ್ರಯತ್ನ ನಾವು ಮಾಡುತ್ತೇವೆ... ನಮ್ಮ ದಾರಿದೀಪವಾಗಿ... ನಮಗೆ ದಾರಿ ತೋರಿಸಿ

ವೃತ್ತಿಜೀವನದ ಹಂತಗಳು...

ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ. ಇದರ ಹಿಂದೆ ಸಾಕಷ್ಟು ಜನರ ಹಾರೈಕೆ, ಒಲವು ಪ್ರೋತ್ಸಾಹಗಳು ನನ್ನನ್ನು ಕಾಪಾಡಿಕೊಂಡು ಬಂದಿವೆ. ಮೈಸೂರಿನಿಂದ ನನ್ನ ಟಿ.ವಿ.ಎಸ್ ನಲ್ಲಿ ನಾನು ಮತ್ತೆ ನನ್ನ ನಲ್ಮೆಯ ಅಣ್ಣ ಜೊತೆಗೆ ನನ್ನ ಬಟ್ಟೆಗಳನ್ನ ಹೊತ್ತುಕೊಂಡು ಹೊರಟು ಬಂದಿದ್ದೆವು. ಬೆಂಗಳೂರಿಗೆ ಬಂದ ಹೊಸದರಲ್ಲಿ ಇಲ್ಲಿನ ಟ್ರಾಫಿಕ್ ನಲ್ಲಿ ನಮ್ಮ ಪುಟ್ಟದಾದ ಟಿ.ವಿ.ಎಸ್ ಅನ್ನು ಓಡಿಸುವುದೇ ಒಂದು ದೊಡ್ಡ ಪರೀಕ್ಷೆ. ಅಲ್ಲಿಂದ ಬಂದ ನಾನು ನನ್ನ ಸಂಭಂದಿಕರ ಮನೆಯಲ್ಲಿ ವಾಸ್ತವ್ಯ ಹೂಡಿದೆ.

ಏನೇ ಆದರೂ ಒಂದುರೀತಿಯ ಸಂಕೋಚ, ಭಯ. ನನ್ನ ಸಂಭಂದಿಯೇ ಆದರೂ ಅವರಲ್ಲಿ ನಾನು ಮನಬಿಚ್ಚಿ ಮಾತನಾಡುತ್ತಿರಲಿಲ್ಲ. ಕಾಲೇಜಿನಲ್ಲಿ ಬಿಕಾಂ ಓದಿದ್ದರೂ ಅದರ ಕಡೆಗೆ ಒಲವಿಲ್ಲದ ಕಾರಣ ನನ್ನ ಆಸಕ್ತಿ ಕಂಪ್ಯೂಟರಿನ ಕಡೆಗೆ ಇತ್ತು. ನನ್ನ ಅಣ್ಣನ ಸಹಾಯದಿಂದ ಕಂಪ್ಯೂಟರ್ ಹಾರ್ಡ್ವೇರ್ ಶಿಕ್ಷಣವನ್ನ ಮುಗಿಸಿದ್ದೆ. ಆಗ ನನಗೆ ತಿಳಿದಿದ್ದು ಕೇವಲ ಕಂಪ್ಯೂಟರ್ ಮದರ್ ಬೋರ್‍ಡ್ assembel ಮಾಡೋದು, ಆಪರೇಟಿಂಗ್ ಸಿಸ್ಟಮ್ install ಮಾಡೋದು, ಮತ್ತೆ ಕೆಲವು ಹಂತದ ಕಂಪ್ಯೂಟರಿನ ಸಮಸ್ಯೆಗಳಿಗೆ ಪರಿಹಾರ ನೀಡುವುದು. ನನ್ನ ಆ skillset ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದ್ದು. ನಾನು ನನ್ನ ಅಣ್ಣನಿಗೆ ಚಿರರುಣಿ. ಬೆಂಗಳೂರಿನ ನನ್ನ ಮೊದಲ ಕೆಲಸ ಪೂರ್‍ಣವಾಗಿ ಕಂಪ್ಯೂಟರ್ ಅನ್ನು ಜೋಡಿಸಿ ಅದರ ಗ್ರಾಹಕರ ಮನೆಗೆ ತಲುಪಿಸುವುದು, ಏನಾದರೂ ತಾಂತ್ರಿಕ ತೊಂದರೆ ಇದ್ದಲ್ಲಿ ಅದನ್ನ ನಿವಾರಿಸುವುದು ಆಗಿತ್ತು. ನನ್ನ ಆ ಕೆಲಸಕ್ಕೆ ನಾಲ್ಕಂಕಿಯ ಸಂಬಳ ಕೊಡುತ್ತಿದ್ದರು. ನನ್ನ ಜೊತೆಯಲ್ಲಿ ನಮ್ಮ ಟ್ರಕ್ಕಿಂಗ್ ಟೀಮಿನ ಮತ್ತೊಬ್ಬ ಪ್ರಮುಖ ಸದಸ್ಯ ರಾಜೇಶ್ ಕೆಲಸ ಮಾಡುತ್ತಿದ್ದರು. ಪ್ರಾರಂಭದಲ್ಲಿ ಬೆಂಗಳೂರಿನ ದರುಶನ ಆದದ್ದು ಆತನಿಂದಲೇ. ನಂತರವಷ್ಟೇ ನಾನು ಸ್ವಂತವಾಗಿ ತಿರುಗಾಡಲು ಪ್ರಾರಂಭಿಸಿದ್ದು.

ಹೀಗೇ ಹೆಚ್ಚುಕಡಿಮೆ ಒಂದು ಆರುತಿಂಗಳ ನಂತರ ನನ್ನದಲ್ಲದ ತಪ್ಪಿನಿಂದ ನನ್ನ ಸಂಭಂದಿಕರ ಮನೆ ಬಿಟ್ಟು ನಮ್ಮ ಟ್ರಕ್ಕಿಂಗ್ ಟೀಮಿನ ಕ್ಯಾಪ್ಟನ್ ಮನೆ ಸೇರಿಕೊಂಡೆ. ನೇರ ನಡೆ ನುಡಿಯ ಅವರ ಮನೆಯಲ್ಲಿ ವಾಸ ಮಾಡತೊಡಗಿದೆ. ನನ್ನ ಕಾರ್ಯಾಲಯಕ್ಕೆ ದೂರದ ಪ್ರಯಾಣ ಮಾಡಬೇಕಾದರೂ ನನಗೆ ಇಲ್ಲಿ ನೆಮ್ಮದಿ ಸಿಕ್ಕುತ್ತಿತ್ತು. ಹೀಗೇ ಸರಿ ಸುಮಾರು ಒಂದು ವರುಷ, ಆರು ತಿಂಗಳ ನಂತರ ನನ್ನ ಅಣ್ಣನ ಸ್ನೇಹಿತರ ಮೂಲಕ ವಾಸು ಅಗರಬತ್ತಿಯ ಅಂಗ ಸಂಸ್ಥೆಯಲ್ಲಿ System administrator ಹುದ್ದೆ ಇರುವ ವಿಷಯ ತಿಳಿಯಿತು. ಅಲ್ಲೂ ಒಂದು ಪ್ರಯತ್ನ ಮಾಡೇ ಬಿಡೋಣವೆಂದು Interview attend ಮಾಡಿದೆ. ನನ್ನ ಅದೃಷ್ಟಕ್ಕೆ ನನಗೆ ಅಲ್ಲಿ ಕೆಲಸ ಸಿಕ್ಕಿತು. ಮನೆಯಿಂದ ಸರಿ ಸುಮಾರು ೨೦ ಕಿ.ಮೀ ದೂರದಲ್ಲಿದ್ದ ಆ ಕಾರ್ಯಾಲಯಕ್ಕೆ ನನ್ನ ಕ್ಯಾಪ್ಟನ್ ಜೊತೆಯಲ್ಲೇ ಹೋಗುತ್ತಿದ್ದೆ. ಅವರು ಐಟಿಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ನನ್ನ ಕಾರ್ಯಾಲಯ ಮಾರತ್ ಹಳ್ಳಿಯಲ್ಲಿ ಇದ್ದದ್ದರಿಂದ ಅವರ ಐರಾವತ (ಸ್ಯಾಂಟ್ರ್‍ಓ) ದಲ್ಲಿ ನನ್ನನ್ನು ಕರೆದುಕೊಂದು ಹೋಗುತ್ತಿದ್ದರು. ಪುನಃ ಅವರಜೊತೆಯಲ್ಲೇ ಮನೆಗೆ ಬರುತ್ತಿದ್ದೆ. ಅಲ್ಲಿ ಕೂಡಾ ನನಗೆ ಬರುತ್ತಿದ್ದದ್ದು ೪ ಅಂಕಿಯ ಸಂಬಳ. ಏನಾದರೂ ಆಗಲಿ ಕೆಲವು ವರುಷಗಳು ಇಲ್ಲಿಯೇ ಇದ್ದು Experience ಪಡೆಯಬೇಕೆಂದು ನಿರ್ಧರಿಸಿದ್ದೆ. ಕೆಲಸದ ವಾತಾವರಣ ನನಗೆ ಬಹಳವಾಗಿ ಹಿಡಿಸಿತ್ತು. ನಮ್ಮ ಕಾರ್ಯಾಲಯದ ಮುಖ್ಯಸ್ತರಾದ ರವಿಶಂಕರ ಬಹಳ ಆತ್ಮೀಯರಾಗಿದ್ದರು. ತಮ್ಮ ಸಂಸ್ಥೆಯ ಯಾವುದೇ ಉದ್ಯೋಗಿಯನ್ನಾಗಲಿ ನಗುನಗುತ್ತಾ ಮಾತನಾಡಿಸಿ ಕೆಲಸದಲ್ಲಿ ಹುರಿದುಂಬಿಸುತ್ತಿದ್ದರು. ಅವರ ಪ್ರೋತ್ಸಾಹದ ಮಾತುಗಳು ಆ ಕಾರ್ಯಾಲಯದ ವಾತಾವರಣವನ್ನೇ ಬದಲಾಯಿಸಿತ್ತು. ಎಲ್ಲಾ ಒಂದೇ ಮನೆಯ ಸದಸ್ಯರಂತೆ ಸೇರಿ ದುಡಿಯುತ್ತಿದ್ದೆವು. ಅಲ್ಲಿ ಸತತವಾಗಿ ೩ ವರುಷದ ಅನುಭವದ ನಂತರ ನನ್ನ ಪಯಣ Computer Securities ನತ್ತ ಹೊರಳಿತು. ಅಲ್ಲಿಯೂ ನನ್ನ ಟ್ರಕ್ಕಿಂಗ್ ಟೀಮಿನ ಸಹಾಯ ಬಹಳವಾಗೇ ಇತ್ತು. ಟೀಮಿನ ಕ್ಯಾಪ್ಟನ್ ಹೇಳಿದ್ದರಿಂದ ಪ್ರವೀಣ್, ನಮ್ಮ ಟೀಮಿನ ಮತ್ತೊಬ್ಬ ಸದಸ್ಯ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಉದ್ಯೋಗಾವಕಾಶ ಮೂಡಿಬಂತು. ಅದಕ್ಕೆ ನಾನು ಪ್ರವೀಣ್ ಮನೆಗೆ ಹೋಗಿ ತಯಾರಾಗುತ್ತಿದ್ದೆ. ಅಲ್ಲಿನ ಕೆಲಸ ಸಿಕ್ಕಮೇಲೆ ಒಂದು ಪ್ರಖ್ಯಾತ Antivirus ಅನ್ನು Support ಮಾಡುವ ಕೆಲಸ ಸಿಕ್ಕಿತು. ಪ್ರವೀಣ್ ಜೊತೆಯಲ್ಲೇ ನನ್ನ ಕೆಲಸ ಸಾಗುತ್ತಿತ್ತು. ಮನೆಯಿಂದ ಕೇವಲ ೪ ಕಿ.ಮೀ ದೂರದಲ್ಲಿದ್ದ ಕಾರ್ಯಾಲಯಕ್ಕೆ ಹೋಗಿ ಅಲ್ಲಿಂದ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಹೆಚ್ಚು ಕಡಿಮೆ ೯ರಿಂದ ೧೦ ತಿಂಗಳುಗಳ ಕಾಲ ಅಲ್ಲಿ ದುಡಿದೆ. ಅಲ್ಲಿಯ ವಾತಾವರಣ ನನಗೆ ಹಿಡಿಸಲಿಲ್ಲ... ನನ್ನ ಸೀನಿಯರ್ ಗಳ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಸ್ವಾಭಿಮಾನಿಯಾದ ನಾನು ಅಲ್ಲಿಂದ ಬೇರೆಡೆಗೆ ಹೊರಡುವ ಆಲೋಚನೆ ಮಾಡಿದೆ.

ಅಮರನಾಥ, ನನ್ನ ಸಹೋದ್ಯೋಗಿ ಕೂಡಾ ಅದೇ ರೀತಿಯಲ್ಲಿ ಕೆಲಸ ಬಿಟ್ಟು ಮತ್ತೊಂದು ಕಡೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಆತನ ಸಹಾಯದಿಂದ ನನಗೆ ಅವನ ಕಾರ್ಯಾಲಯದಲ್ಲಿ ಕೆಲಸ ಸಿಕ್ಕಿತು. ಮೊದಲ ಬಾರಿ ೫ ಅಂಕಿಯ ಸಂಬಳ ಪಡೆಯುವ ಸುಯೋಗ ಕೂಡಿಬಂದಿತ್ತು. ಆ ಸಂತಸವನ್ನ ನನ್ನ ಹಳೆಯ ಕಂಪನಿಯವರಿಗೆ ತಿಳಿಯದಂತೆ ಅಕ್ಟೋಬರಿನ ತಿಂಗಳಲ್ಲಿ ಅವರು ಕೊಟ್ಟ ೩೦೦೦ ರೂ ಗಳ ಬೋನಸ್ ಚೆಕ್ಕನ್ನು ಪಡೆದುಕೊಂಡು ಆ ಕಂಪನಿಗೆ ಒಂದು ಸಲಾಮ್ ಹೊಡೆದು ನನ್ನ ಹೊಸ ಕಂಪನಿಯತ್ತ ನನ್ನ ಪಯಣ ಬೆಳೆಸಿದೆ. ಅಲ್ಲಿಂದ ಪ್ರಾರಂಭಿಸಿದ ಪಯಣ ಇಂದಿಗೂ ಮುಂದುವರಿಯುತ್ತಲೇ ಇದೆ... ಇಲ್ಲಿನ ವಾತಾವರಣ ನನ್ನ ಹಿಂದಿನ ಕಂಪನಿಗೆ ಹೋಲಿಸಿದರೆ ಉತ್ತಮವಾಗಿದೆ. ಇಲ್ಲಿ ನಾನು ಸರಿ ಸುಮಾರು ೨ ವರುಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕೇವಲ ಕಂಪ್ಯೂಟರಿನ ಹಾರ್ಡ್ವೇರ್ ತಿಳಿದಿದ್ದ ನಾನು ಇಂದು ಕಂಪ್ಯೂಟರಿನ ನೆಟ್ವರ್ಕ್ ಸೆಕ್ಯೂರಿಟಿಯನ್ನು ತಿಳಿದಿದ್ದೇನೆ. ಅಷ್ಟೇ ಅಲ್ಲದೇ ಅದರಲ್ಲಿ ಬರುವ ಬೇರೆ ಬೇರೆ ಹಂತಗಳನ್ನು ಅರಿತಿದ್ದೇನೆ...

Wednesday, July 16, 2008

ಅನುಭವ ಕಥನ

ನಮಸ್ಕಾರ,

ಮೊನ್ನೆ ದಿನಪೂರ್ತಿ ಕಂಪ್ಯೂಟರಿನ ಮುಂದೆ ಕಣ್ಣುರಿಸಿಕೊಂಡು ಕೆಲಸ ಮಾಡಿ ಬಹಳ ದಣಿವಾಗಿತ್ತು. ಆಯಾಸ ಪರಿಹರಿಸಿಕೊಳ್ಳಲು ತಂಪಾಗಿ ಏನಾದರೂ ಬೇಕೆನಿಸಿತು. ಆಫೀಸಿನ ಕಿಟಕಿಯಿಂದ ಹೊರಕ್ಕೆ ಇಣುಕಿನೋಡಿದಾಗ ದಟ್ಟವಾದ ಮೋಡಗಳು ಭುವಿಯನ್ನು ತಬ್ಬಿ ಹಿಡಿದಿದ್ದವು... ಇನ್ನೇನು ಅವುಗಳ ಮಿಲನಕಾಲ ಹತ್ತಿರವಾದಂತಿತ್ತು. ಹೇಗಿದ್ದರೂ ದಣಿವಾಗಿದ್ದರಿಂದ ಮಳೆಯಲ್ಲಿ ನೆನೆಯುವ ಆಸೆ, ಉತ್ಸಾಹ ಮನದಲ್ಲಿ ಪುಟಿಯುತ್ತಿತ್ತು. ಮನದ ಆಸೆಯನ್ನು ಮನದಲ್ಲೇ ಅಡಗಿಸಿಡುವುದು ಬೇಡವೆನಿಸಿ ನನ್ನ ಸಂಚಾರಿ ದೂರವಾಣಿಗಳನ್ನ ಮತ್ತೆ ಮುಖ್ಯವಾಗಿ ಬೇಕಾಗುವ Documentsಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೆ ನೀರು ಬೀಳದಂತೆ ಅದನ್ನು ನನ್ನ ಭದ್ರಪಡಿಸಿಕೊಂಡೆ.

ಅಷ್ಟರಲ್ಲಿ ಊರಿನಿಂದ ಅಮ್ಮ ಕರೆ ಮಾಡತೊಡಗಿದರು. ಅವರೊಡನೆ ಮಾತನಾಡುವಾಗ ಅಲ್ಲಿ ಸ್ವಲ್ಪವೂ ಮಳೆಯೇ ಬಾರದ ಕಾರ್‍ಅಣ ಅಲ್ಲಿಯ ಬೇಸಾಯಕ್ಕೆ ತೊಂದರೆಯಾಗುತ್ತಿದೆ ಎಂದು ಅಮ್ಮ ಹೇಳಿದರು. ಹಾಗೇ ಕರುಳಬಳ್ಳಿಯ ಕಡೆಗಿನ ಪ್ರೀತಿಯನ್ನು ತೋರುತ್ತಾ, "ನೆನೀಬೇಡಾ ಕಣೋ, ಮಳೆ ಬಂದು ನಿಂತ್ಮೇಲೆ ಹೊರಡು, ಅಕಸ್ಮಾತ್ ನನ್ಕೊಂಡು ಹೋದ್ರೆ ಮನೆಗೆ ಹೋದ ತಕ್ಷಣಾ ತಲೆನ ಟವಲ್ ಇಂದ ಒರಸ್ಕೊಂಡು ಒಣಗಿಸ್ಕೋ" !!! ಅಮ್ಮನ ಪ್ರೀತಿ ತುಂಬಿದ ಮಾತುಗಳು ಮನಸ್ಸಿಗೆ ಏನೋ ಖುಷಿತುಂಬಿದವು. ಆದರೂ "ಅಮ್ಮಾ, ತಲೆಮೇಲೆ ಹೆಲ್ಮೆಟ್ ಇದ್ದೇ ಇರತ್ತೆ, ಮತ್ತೆ ಮೈ ಗೆ ಜರ್ಕಿನ್ ಹಾಕಿದೀನಿ, ಲೇಟಾಗಿ ಮನೆಗೆ ಹೋದ್ರೆ ನನ್ಗೊಸ್ಕರ ಅಡುಗೆ ಮಾಡ್ಕೊಂಡು ಯಾರು ಕಾಯ್ತಾ ಇರ್ತಾರೆ ಹೇಳಿ ??? ನಾನು ಜೋಪಾನವಾಗಿ ಮನೆಗೆ ಹೋಗಿ ನಿಮಗೆ ಫೋನ್ ಮಾಡ್ತೀನಿ, ಆಯ್ತಾ ?? ಅಂತೆ ಸಮಾಧಾನಿಸಿ ಅಲ್ಲಿಂದ ಮನೆಯೆಡೆಗೆ ಪಯಣ ಬೆಳೆಸಲು ಅಣಿಯಾದೆ.

ನಾನು ಮೊದಲೇ ಮಳೆಯಲ್ಲಿ ನೆನೆಯಬೇಕೆಂದು ನಿರ್ಧಾರ ಮಾಡಿದ್ದರಿಂದ ಸರಿಯಾಗಿ ೬.೦೦ಘಂಟೆಗೆ ನನ್ನ ಕಾರ್ಯಾಲಯವನ್ನ ಬಿಟ್ಟು ನನ್ನ ಲೋಹಕುದುರೆ (ಬಜಾಜ್)ಯನ್ನೇರಿ ಮನೆಯತ್ತ ಪಯಣ ಬೆಳೆಸಿದೆ. ಹೊರಟು ೧ ನಿಮಿಷಕೂಡಾ ಆಗಿರಲಿಲ್ಲ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಕಾಶವೇ ಕಳಚಿ ಮೇಲೆ ಬೀಳುತ್ತಿದೆಯೇನೋ ಅನ್ನುವಂತಾ ದಪ್ಪ ದಪ್ಪ ಹನಿಗಳು !!! ನಾನು ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದುಹೋದೆ. ಮನಸ್ಸಿನಲ್ಲಿ ಏನೋ ಸಂತಸ... ಉಲ್ಲಾಸ... ೩ ದಿನಗಳ ಹಿಂದೆಯಷ್ಟೇ ಹಲ್ಲು ನೋವಿನಿಂದ ಡಾಕ್ಟರ್ ಹತ್ತಿರ ಹೋಗಿ ಬಂದು ಅದರ ನೋವಿನಿಂದ ಬಳಲುತ್ತಿದ್ದೆ, ಒಮ್ಮೆ ಮಳೆ ಬಂದದ್ದೇ ತಡ !!! ಯಾವ ನೋವೂ ನನ್ನ ಪರಿವೆಗೆ ಇರಲಿಲ್ಲ, ನೀರಿನಲ್ಲಿ ಬಿಟ್ಟ ಮೀನಿನಂತೆ ಮಳೆಯಲ್ಲಿ ಸಾಗಿದೆ. ನನ್ನ ಬೈಕನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪುಟ್ಟ ಮಗುವಿನಂತೆ ಮಳೆಯಲ್ಲಿ ನನ್ನ ಕೈಗಳನ್ನ ಚಾಚಿ ನಿಂತೆ...

ಆಗಷ್ಟೆ ಸುರಿದ ಮಳೆ ನನ್ನ ಮನದಲ್ಲಿದ್ದ ನೋವುಗಳನ್ನ ಅಲ್ಪಕಾಲವಾದರೂ ಕೊಚ್ಚಿಕೊಂಡು ಹೋಗಿತ್ತು. ನಾನು ಒಂಟಿಯಾಗಿ ಮನೆಗೆ ಹೋಗಲು ಬಿಡದ ಮಳೆ ಮನೆಯ ತನಕ ನನ್ನ ಜೊತೆಗೂಡಿ ಬಂದಿತ್ತು, ಆದರೆ ಮನೆಯ ಬಳಿ ನನ್ನ ಬಿಟ್ಟು ತಾನೆಲ್ಲೋ ಮಾಯವಾಗಿತ್ತು.

ಹೈದರಾಬಾದಿನಲ್ಲಿ ನಾನಿದ್ದ ದಿನಗಳಂದು ಬಂದ ಮಳೆಯ ಬಗ್ಗೆ ಬರೆದ ಕೆಲವೇ ಸಾಲುಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ...

ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...

ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...

ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...

ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...

ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...

ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...

ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...

ಮಳೆಯೇ ನಿನ್ನ ಮಾಯವಿದೇನೇ...

Friday, July 11, 2008

ಕನ್ನಡದಲ್ಲಿ ಬರೆಯೋದು ಬಹಳ ಸುಲಭ....

ಎಲ್ಲಾ ಸಹೃದಯ ಓದುಗರಿಗೆ ನಮಸ್ಕಾರಗಳು,

ಹೀಗೇ ಅಂತರ್ಜಾಲದಲ್ಲಿ ಸುತ್ತಾಡುತ್ತಿದ್ದಾಗ ನನಗೆ ಕನ್ನಡದಲ್ಲಿ ಬರೆಯುವ ಒಂದು ಒಳ್ಳೇ ಕೊಂಡಿ ಸಿಕ್ಕಿತು. ನಿಮ್ಮಲ್ಲಿ ಬಹುತೇಕರಿಗೆ ಇದರ ಬಗ್ಗೆ ಸುಳಿವಿದ್ದಿರಬಹುದು. ಆದರೂ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣಾ ಅಂತ ನಾನು ಇಲ್ಲಿ ಆ ಕೊಂಡಿಯನ್ನ ಹಾಕುತ್ತಿದ್ದೇನೆ. ಇದನ್ನು ಉಪಯೋಗಿಸಲು ನಿಮ್ಮ ಗಣಕಯಂತ್ರದಲ್ಲಿ ಬರಹ ತಂತ್ರಾಂಶ ಇರಲೇಬೇಕೆಂದೇನಿಲ್ಲ.

http://www.yanthram.com/kn/type/

ಸಾಧ್ಯವಾದಷ್ಟೂ ಕನ್ನಡದಲ್ಲಿ ಮಾತನಾಡೋಣ....

ಇಂತಿ ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ

Wednesday, July 9, 2008

ಮುಂದೇನಾಗಬಹುದು ???

ಉಸ್ಸಪ್ಪಾಪ್ಪಾಪ್ಪಾ !!!!


ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!


ಯಾಕೋ ಈ ನಡುವೆ ನನ್ಗೆ ಸರಿಯಾಗಿ ಟೈಮ್ ಸಿಕ್ತಾನೇ ಇಲ್ಲ. ಆ ತೊಂದರೆ ಇಂದ ನನ್ನ friends ನ meetಕೂಡಾ ಮಾಡೋಕೆ ಅಗ್ತಾ ಇಲ್ಲ. ಹೀಗೇ ಯೋಚನೆ ಮಾಡ್ತಾ ಇರೋವಾಗ ನನ್ಗನ್ನಿಸ್ತು... ನಾಳೆದಿನ ನಮ್ಗೇನಾದ್ರೂ ಹೆಚ್ಚು ಕಮ್ಮಿ ಆಗಿ ನಾವು ಪರಲೋಕಕ್ಕೆ ಪ್ರಯಾಣ ಬೆಳೆಸಿದ್ರೆ ನಮ್ಮ ಬಗ್ಗೆ ನಮ್ಮ ಗೆಳೆಯರು ಏನಂತ ಮಾತಾಡ್ಕೋಬಹುದು ??? ಕೆಲವರಿಗೆ ಅಯ್ಯೋ ಪಾಪಾ ಅಂತ ಅನ್ನಿಸ್ಬಹುದು, ಮತ್ತೆ ಕೆಲವರ ಓಹೋ ಹೌದಾ ??? ಹೇಗಾಯ್ತಂತೆ ???? ಯಾವಾಗಾ ???? ಅಂತ ರಾಗ ತೆಗೆದು ತಮಗಿಲ್ಲದ ಕಾಳಜಿ ತೋರಿಸಬಹುದು, ಮತ್ತೆ ಕೆಲವರಿಗೆ ನಮ್ಮ ಉಳಿವು, ಅಳಿವಿನ ಸುಳಿವೇ ಇಲ್ಲದೇ ಹೋಗಬಹುದು... ಸುಮಾರು ದಿನಗಳ ನಂತರ ನನ್ನ ಮೊಬೈಲಿನಲ್ಲಿ Store ಆಗಿರುವ ಅವರ ನಂಬರಿನಿಂದ call ಬಂದು ಮೊಬೈಲ್ ರಿಂಗಣಿಸಬಹುದು, ಆನಂತರ ಆ ಕಡೆ ಇರುವ ವ್ಯಕ್ತಿ, ಛೇ !!! ನಂಗೆ ವಿಷ್ಯ ಗೊತ್ತೇ ಇರ್ಲಿಲ್ಲ.... ಅಂತ ಅನ್ನ ಬಹುದು. ಮತ್ತೆ ಕೆಲವರು ನಿಜವಾಗಿಯೂ ದುಃಖ ಪಡಬಹುದು...


ಇನ್ನು ನಮ್ಮ ಕುಟುಂಬದವರಲ್ಲಿ ದುಃಖ ಮಡುಗಟ್ಟಿರಬಹುದು.... ತದ ನಂತರ ನೆಂಟರಿಷ್ಟರಲ್ಲಿ ಕೆಲವರು ಮೊಸಳೇ ಕಣ್ಣೀರು ಇಡುತ್ತಾ Phone ಮಾಡಿ ದುಃಖದಲ್ಲಿರಿವವರನ್ನು ಮತ್ತಷ್ಟು ಅಳುವಂತೆ ಮಾಡಿ ತಾವೂ ದುಃಖಿತರಾಗಿದ್ದೀವಿ ಅಂತ ತೋರ್ಪಡಿಸಬಹುದು... ಕೆಲವರಿಗೆ ನೊಂದವರನ್ನು ಸಮಾಧಾನ ಪಡಿಸಲು ಬಾರದಿದ್ದರೂ, ಮತ್ತಷ್ಟು ಅಳಿಸಿ ಮರೆಯಲೆತ್ನಿಸುತ್ತಿದ್ದ ನೋವನ್ನ ಮತ್ತೆ ಕೆದಕಿ ತಿಳಿಗೊಳ್ಳುತ್ತಿರುವ ಮನವನ್ನ ಕದಡಿ ರಾಡಿ ಎಬ್ಬಿಸಿ ಹೋಗುತ್ತಾರೆ.


ನಮ್ಮ ಬ್ಯಾಂಕಿನ ಅಕೌಂಟುಗಳಲ್ಲಿ ಕೆಲವುದರ ಬಗ್ಗೆ ಮನೆಯವರಿಗೆ ತಿಳಿದಿದ್ದು ಸುಖಾಂತ್ಯ ಪಡೆಯಬಹುದು, ಮತ್ತೆ ಕೆಲವು ಸದ್ದಿಲ್ಲದೇ ಸತ್ತುಹೋಗಬಹುದು... ನಾವು ಉಪಯೋಗಿಸುತ್ತಿದ್ದ ವಸ್ತುಗಳು ಪರರ ಪಾಲಾಗಬಹುದು... ನಮ್ಮ ಬ್ಲಾಗು, ಈ-ಮೈಲ್ ಐಡಿ ಗಳು, ಅದರಲ್ಲಿ ಇರಬಹುದಾದ ವಿಷಯಗಳು ಎಲ್ಲಾ ಯಾರಕೈಗೂ ಸಿಗದೇ ಮುಂದೊಂದುದಿನ ಸರ್ವರ್ ಇಂದ ತೆಗೆಯಲ್ಪಡುತ್ತದೆ. ಇದೆಲ್ಲಾ ಆಗುವುದಂತೂ ಸತ್ಯ. ಏನಾದರೇನು ? ಅದನ್ನೆಲ್ಲಾ ನೋಡುವುದಕ್ಕೆ ನಾವೇ ಅಲ್ಲಿ ಇರುವುದಿಲ್ಲ ಅಲ್ವಾ ??? ಸುಮ್ಮನೇ ಯೋಚನೆ ಏತಕ್ಕೆ ಮಾಡಿ ತಲೆ ಕೆಡಿಸಿ ಇವತ್ತಿನ ದಿನವನ್ನ ಯಾಕೆ ಹಾಳುಮಾಡಿಕೊಳ್ಳುವುದು....
ಅಲ್ವಾ !!!


ಮತ್ತೆ ನೀವು ಈಗ ಕೇಳ್ತೀರಿ, ಯಾಕೆ ಅಷ್ಟೆಲ್ಲಾ ಹೇಳಿದ್ದು, ಬರೆದಿದ್ದು ಅಂತ.... ಸುಮ್ನೆ ಯಾಕೋ ತಲೇಲಿ ಯೋಚ್ನೆ ಬಂತು, ನಿಮ್ಮಲ್ಲಿ ಬೇರೆ ಯಾರಿಗಾದ್ರೂ ಇದೇ ಯೋಚ್ನೆ ಬಂದಿರ್ಬಹುದು, ಆದ್ರೆ ಅದ್ನ ಹೇಳಿರೋದಿಲ್ಲ ಅಷ್ಟೆ.
ಓಟ್ಟಿನಲ್ಲಿ ಎಲ್ಲಾ ಒಳ್ಳೇದಾಗ್ಲಿ ಅಂತ ಮಾತ್ರ ಹಾರೈಸಬಹುದು....

Tuesday, July 8, 2008

ದಿನಚರಿಯ ಒಂದು ದಿನ...

ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕೆ ಕಾರಣ ಏನು ? ನನಗಂತೂ ಗೊತ್ತಿಲ್ಲ... ನಿಮ್ಗೆನಾದ್ರೂ... ????

ಒಮ್ಮೊಮ್ಮೆ ಯಾವುದಾದರೂ ಪುಟ್ಟ ಮಕ್ಕಳನ್ನು ನೋಡಿದರೆ ನಾವೂ ಮಕ್ಕಳಾಗಿಬಿಡಬಾರದಾ !!! ಈ ಜಂಜಾಟಕ್ಕೆ ಸ್ವಲ್ಪನಾದ್ರೂ ಬಿಡುವು ಸಿಕ್ಕಬಾರದಾ ಅಂತ ಅನ್ಸತ್ತೆ. ದಿನಾ ಬೆಳಿಗ್ಗೆ ಎದ್ದು, ಗಡಿಬಿಡಿಯಲ್ಲಿ ಆಫೀಸಿಗೆ ಬಂದು ಬಾಸ್ ಎಂಬ ಭಾವನೆ ಇಲ್ಲದ ಪ್ರಾಣಿಯ ಕಿರಿ ಕಿರಿಯನ್ನ ಸಹಿಸಿಕೊಂಡು ಮನಸ್ಸಿಲ್ಲದ ಮನಸ್ಸಿಂದ ಆತನಿಗೆ ಒಂದು ಸ್ಮೈಲ್ ಕೊಟ್ಟು ಮತ್ತೆ ಕಂಪ್ಯೂಟರಿನ ಮುಂದೆ ಕೀಬೋರ್ಡನ್ನು ಕುಟ್ಟುತ್ತಾ ಕೆಲವೊಮ್ಮೆ ಊಟವನ್ನೂ ಮರೆಯುತ್ತಾ ಕೆಲಸ ಮಾಡಿ ಸಂಜೆಯ ಹೊತ್ತಿಗೆ ಅಲ್ಲಿಂದ ಯಾವಾಗ ಕಾಲು ಕೀಳುತ್ತೇವೋ ಅನ್ನುವ ರೀತಿ ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಸಾಕಪ್ಪಾ !!! ಸಾಕು !!!!

ಅಂದು ನನಗೂ ಇದೇ ರೀತಿ ಆಯಿತು, ಆರೋಗ್ಯ ಹದಗೆಟ್ಟಿದ್ದ ಕಾರಣ ದೇಹಕ್ಕೆ ದಣಿವಾಗಿತ್ತು. ರಾತ್ರಿ ಕೆಮ್ಮು ನಿದ್ದೆ ಮಾಡಲು ಅನುವುಮಾಡಿ ಕೊಟ್ಟಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ನನ್ನ ಮೊಬೈಲಿನ ಅಲಾರಾಂ ನನ್ನ ಬೈದು ಬೈದು ಎಬ್ಬಿಸೋದಕ್ಕೆ ಪ್ರಯತ್ನಿಸುತ್ತಿತ್ತು. ಅದರ ಮೇಲೊಂದು ಮೊಟಕಿ ಮತ್ತೆ ಐದು ನಿಮಿಷ, ಮತ್ತೆ ಐದು ನಿಮಿಷ ಅಂತಾ ೬.೩೦ ಕ್ಕೆ ಎದ್ದೆ, ಎದ್ದು ನಿದ್ದೆಗಣ್ಣಿಂದ ಗಡಿಯಾರ ನೋಡಿದಾಕ್ಷಣ ಎದೆ ಧಸಕ್ ಅಂತು, ಇನ್ನೂ ಸ್ನಾನ ಮಾಡಿ ತಿಂಡಿ ಮಾಡ್ಕೊಂಡು ಆಫೀಸಿಗೆ ಹೋಗೋದು ಯಾವಾಗ ??? ಮೀಟಿಂಗ್ ಬೇರೆ ಇದೆ, ಇವತ್ತು ನನ್ನ ಕತೆ ಅಷ್ಟೇ !!! ಅಂದುಕೊಂಡು ಈ ದಿನ ಎಲ್ಲಾ ಸಸೂತ್ರವಾಗಿ ಸಾಗಲಿ ದೇವರೇ ಅಂತ ವಿಘ್ನನಿವಾರಕನಲ್ಲಿ ಬೇಡಿಕೊಂಡು ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಷೂಗಳಿಗೆ ಪಾಲಿಶ್ ಮಾಡಿಲ್ಲ, ಕರ್ಮಕಾಂಡವೇ.... ಸರಿ ಇನ್ನು ಅದಕ್ಕೆ ೫ ನಿಮಿಷ ತಡವಾಯ್ತು, ಅಲ್ಲಿಂದ ಗಾಡಿ ಹತ್ತಿದ ನಂತರವೇ ನೆನಪಿಗೆ ಬಂದದ್ದು, ಗಾಡಿಯಲ್ಲಿ ಪೆಟ್ರೋಲ್ ಕೇವಲ ಮುಂದಿನ ಬಂಕ್ ತನಕವೇ ನನ್ನ ಗಾಡಿಯನ್ನ ಮುನ್ನಡೆಸಬಲ್ಲದು ಅಂತ, ವಿಧಿ ಇಲ್ಲ.... ಪೆಟ್ರೋಲ್ ಬಂಕ್ ಕಡೆಗೆ ಗಾಡಿಯನ್ನ ತಿರುಗಿಸಿ ಅಲ್ಲಿದ್ದ ಸಾಲಿನಲ್ಲಿ ನಾನೂ ನಿಂತು ಮತ್ತೆ ೧೦ ನಿಮಿಷ ತಡ ಮಾಡಿಕೊಂಡು ಅಲ್ಲಿಂದ ಟ್ರ್‍ಆಫಿಕ್ ನೊಡನೆ ಹೋರಾಡುತ್ತಾ ಅಂತೂ ಇಂತೂ ಆಫೀಸಿಗೆ ಬರುವ ಹೊತ್ತಿಗೆ ನನ್ನ ಮೊಬೈಲಿನಲ್ಲಿ ೩ ಮಿಸ್ಸ್ಡ್ ಕಾಲ್ಗಳು !!!! ಇನ್ಯಾರದ್ದು ??? ನಮ್ಮ ರೇಷ್ಮ (ನಮ್ಮ ಆಫೀಸಿನ efficient worker!!!) ನನಗೆ ಮತ್ತೊಮ್ಮೆ ಕಾಲ್ ಮಾಡಿ "ಪ್ರಶಾಂತ್, ಎಲ್ಲಿದ್ದೀರ ? ಎಲ್ಲಾ ಮೀಟಿಂಗಿಗೆ ಬಂದಿದ್ದಾರೆ.... ನೀವೊಬ್ಬರೇ ತಡ" ಅಂತ ಹೇಳಿದಳು. ಗಡಿಬಿಡಿಯಲ್ಲಿ ತಲೆಯ ಕೂದಲನ್ನ ಸರಿಪಡಿಸಿಕೊಳ್ಳುತ್ತಾ Conference room ಕಡೆಗೆ ಹೆಜ್ಜೆ ಹಾಕಿದೆ, ನನ್ನ ಬಾಸ್ ಒಮ್ಮೆ ನನ್ನಕಡೆ ತನ್ನ ಕೆಂಗಣ್ಣು ಬೀರಿ ನಂತರ ತನ್ನ ಕೆಲಸದಲ್ಲಿ ಮಗ್ನರಾದರು. ಅದರ ಅರ್ಥ ಮೀಟಿಂಗ್ ಮುಗಿದ ಮೇಲೆ ನನಗೆ ಗ್ರಹಚಾರ ಕಾದಿದೆ ಅಂತ.

As usual ಮೀಟಿಂಗಿನಲ್ಲಿ ಅದೇ ಹಳೇ ಭರವಸೆಗಳು... ಅಂತೂ ಇಂತೂ ಮೀಟಿಂಗ್ ಮುಗೀತು, ನಂತರ ನನಗೆ ಒಂದು Customer call ಇದ್ದದ್ದರಿಂದ ನಾನು ಹೊರಡಬೇಕಾಯಿತು. ಪಯಣ ಬಹಳ ದೂರ ಆದ್ದರಿಂದ ಸ್ವಲ್ಪ ಸಮಾಧಾನ ಪಡಿಯೋದಕ್ಕೆ ರೇಡಿಯೋ ಕೇಳುವ ಮನಸ್ಸಾಯಿತು. ರೇಡಿಯೋ ಹಾಕಿದಾಗ ಅದರಲ್ಲಿ ಬರ್ತಾ ಇದ್ದ ಹಾಡು "ಜಾನೆ ತು ಮೆರ ಕ್ಯಾ ಹೈ, ಜಾನೆ ತು ಮೆರ ಕ್ಯ ಥಾ...." ಅನ್ನೋ ಹೊಸಾ ಹಾಡು. ಈ ಹಾಡು ಬರಿಯೋವ್ರಿಗೆ ಅದನ್ನ ಕೇಳೋವ್ರ ಮನಸ್ಸು ಹೇಗೆ ಅರ್ಥ ಆಗತ್ತೋ !!!! ನಿಜ ಅಲ್ವಾ ? ಒಮ್ಮೊಮ್ಮೆ ನಮ್ಗೂ ಹಾಗೇ ಅನ್ಸತ್ತೆ. ಯಾರಾದರೂ ನಮಗೆ ಹತ್ತಿರ ಅನ್ಸಿದ್ರೆ ಅವ್ರಜೊತೆ ಏನೇನೋ ಹೇಳೋಣ ಅಂತ ಅನ್ನಿಸ್ಬಹುದು, ಆದ್ರೆ ಅವ್ರು ಏನಾದ್ರೂ ಅಂದ್ಕೊಂಡ್ಬಿಟ್ರೇ ??? ಅನ್ನೋ ಭಾವನೆ. ಹಾಗಾಗಿ ಬಹಳಷ್ಟು ಮಾತುಗಳು ಮನಸ್ಸಲ್ಲೇ ಮೂಡಿ ಮನಸ್ಸಲ್ಲೇ ಮುದುಡಿ ಹೋಗ್ತಾವೆ.

ನಾನು ಕಾಲ್ ಮುಗಿಸಿ ಸಂಜೆ ಮನೆಗೆ ಬಂದಾಗ ನನ್ನ ಹೂವಿನ ಗಿಡ ಒಂದು ಚೆಲುವಾದ ಹೂವನ್ನ ಅರಳಿಸಿ ನಗು ನಗುತ್ತಾ ತನ್ನ ಕಂಪನ್ನ ಬೀರಿ ನನ್ನ ಸ್ವಾಗತಿಸ್ತಾ ಇತ್ತು. ಅದನ್ನ ನೋಡಿ ನನ್ನಲ್ಲೇ ಏನೋ ಒಂದು ರೀತಿಯ ಸ್ಪೂರ್ತಿ ಮೂಡಿಬಂತು. ಮನೆಯ ಒಳಗೆ ಹೋಗಿ ಮನೆಯನ್ನ ಗುಡಿಸಿ, ಬಟ್ಟೆಗಳನ್ನ ಮಡಿಸಿಟ್ಟು ಗಿಡಗಳಿಗೆ ನೀರು ಹಾಕಿ ಅಮ್ಮನೊಡನೆ ಮಾತನಾಡಲು ಫೋನ್ ಮಾಡಿದೆ...

ಅನಿರೀಕ್ಷಿತ ಅತಿಥಿ...




ಕಳೆದ ತಿಂಗಳು ಒಂದು ಶುಕ್ರವಾರದಂದು ನಡೆದ ಘಟನೆ ಇದು. ವಾರಾಂತ್ಯವಾದ್ದರಿಂದ ನನ್ನ ಆಫೀಸಿನಿಂದ ಸ್ವಲ್ಪ ಬೇಗ ಹೊರಟಿದ್ದೆ. ಹೇಗಿದ್ದರೂ ಬೇಗ ಹೊರಟಿದ್ದರಿಂದ ಜಯನಗರದ ಜನತಾಬಜಾರ್‍ ನಿಂದ ಚಪಾತಿ ಮಾಡುವ ಸಲುವಾಗಿ ಹಿಟ್ಟು ಮತ್ತು ಸ್ವಲ್ಪ ತರಕಾರಿಯನ್ನ ತಂದು ಮನೆಗೆ ಬಂದ ನನಗೆ ಮನೆಯ ಗೇಟಿನ ಬಳಿ ಅನಿರೀಕ್ಷಿತವಾಗಿ ಯಾವುದೋ ಪ್ರಾಣಿ ಮಲಗಿರುವಂತೆ ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಒಂದು ಪುಟಾಣಿ ಅಳಿಲಿನ ಮರಿ !!!

ಪಾಪ ಅದು ಅಲ್ಲಿ ಏತಕ್ಕಾಗಿ ಬಂದು ಬಿದ್ದಿತ್ತೋ ? ಯಾರಾದರೂ ಕಿಡಿಗೇಡಿಗಳು ಅದನ್ನ ಹಿಡಿಯಲು ಪ್ರಯತ್ನಿಸಿ ಹಿಡಿಯಲಾಗದೇ ಕಲ್ಲು ತೂರಿ ಅದನ್ನು ಬಿಟ್ಟು ಹೋಗಿದ್ದರೋ ನನಗೆ ಅರ್ಥವಾಗಲಿಲ್ಲ, ಪಾಪ, ಅದರ ಬಾಯಿಯಲ್ಲಿ ಕೆಳಗಿನ ಒಂದು ಹಲ್ಲು ಮುರಿದಿತ್ತು, ಬಾಯಿಯಿಂದ ರಕ್ತ ಬಂದಿತ್ತು. ನಿತ್ರಾಣಗೊಂಡಿದ್ದ ಅದನ್ನ ತಕ್ಷಣವೇ ಕೈನಲ್ಲಿ ಎತ್ತಿಕೊಂಡು ಮನೆಗೆ ಓಡಿಬಂದು ಅದಕ್ಕೆ ಸ್ವಲ್ಪ ನೀರು ಕುಡಿಸಿದೆ... ಉಸಿರಾಡುವಲ್ಲಿ ಕಷ್ಟ ಪಡುತ್ತಿದ್ದ ಅದನ್ನು ನಿಧಾನವಾಗಿ ಮನೆಯ ಬಕೇಟಿನೊಳಗೆ ತೆಂಗಿನನಾರು ಮತ್ತೆ ಹಳೇ ಬನಿಯನ್ ಅನ್ನು ಇಟ್ಟು ಅದರೊಳಗೆ ಜೋಪಾನವಾಗಿ ಅಳಿಲಿನ ಮರಿಯನ್ನ ಇಟ್ಟು ಅಂಗಡಿಗೆ ಹಾಲು ತರಲು ಓಡಿದೆ. ಹಲ್ಲು ಇಲ್ಲದ ಕಾರಣ ಅದಕ್ಕೆ ಏನನ್ನೂ ತಿನ್ನಲು ಆಗುವುದಿಲ್ಲವೆಂದು ತಿಳಿದಿತ್ತು. ಹಾಲು ತಂದು ಅದಕ್ಕೆ ಸ್ವಲ್ಪ ಬಿಸ್ಕೇಟನ್ನು ನುರಿದು ಆ ಬಿಸ್ಕೇಟಿನ ಹಾಲನ್ನು ಸ್ವಲ್ಪ ಸ್ವಲ್ಪವಾಗೇ ಅದರ ಬಾಯಿಗೆ ಹಾಕಿದೆ. ಕೇವಲ ಬಾಯಿಯ ಮೂಲಕ ಉಸಿರಾಡುತ್ತಿದ್ದ ಆ ಮರಿ ವಿಧಿಯಿಲ್ಲದೇ ನಾನು ಹಾಕಿದ ಹಾಲನ್ನು ಕುಡಿಯುತ್ತಲಿತ್ತು. ನಾನು ಬಲವಂತದಿಂದಾದರೂ ಸ್ವಲ್ಪ ಕುಡಿಸಲೇಬೇಕು, ಶಕ್ತಿಯಿಲ್ಲದಿದ್ದರೆ ಅದು ಮತ್ತೆ ಮೊದಲಿನಂತೆ ಆಗುವುದಾದರೂ ಹೇಗೆ ಅಂತ ಪ್ರಯತ್ನ ಪಟ್ಟು ಸ್ವಲ್ಪ ಕುಡಿಸಿ ನಂತರ ಅದನ್ನು ಆ ಬಕೇಟಿನಲ್ಲಿ ಮಲಗಿಸಿದೆ.

ಪಾಪ, ಅದರಲ್ಲಿ ಶಕ್ತಿ ಅಡಗಿಹೋಗಿತ್ತು. ಪೂರ್ಣವಾಗಿ ನಿತ್ರಾಣಗೊಂಡಿದ್ದ ಅದು ನನಗೆ ಮುಗ್ದ ಮಗುವಿನಂತೆ, ಕೈಲಾಗದ ಹಸುಗೂಸಿನಂತೆ ಕಾಣಿಸಿತು. ನಾನು ಹೇಳಿದ ಮಾತನ್ನು ಕೇಳುತ್ತಿದೆಯೇನೋ ಅನ್ನುವಹಾಗೆ ಹಾಲು ಕುಡಿದು ತನ್ನ ಬಕೇಟಿನಲ್ಲಿ ಮಲಗಿತ್ತು. ಅದಕ್ಕೆ ಹೊರಗಿನಿಂದ ಏನೂ ಪೆಟ್ಟಾದಂತೆ ಕಾಣದಿದ್ದರೂ ಒಳಗಿನಿಂದ ಪೆಟ್ಟಾದದ್ದು ಅದರ ನಿತ್ರಾಣಕ್ಕೆ ಕಾರಣವಾಗಿತ್ತು. ಸಂಜೆಯಿಂದಾ ರಾತ್ರಿಯ ವರೆವಿಗೂ ಅದನ್ನು ಗಮನಿಸುತ್ತಲೇ ಇದ್ದೆ. ರಾತ್ರಿಯ ಹೊತ್ತಿಗೆ ಅದರಲ್ಲಿ ಸ್ವಲ್ಪ ಚೈತನ್ಯ ಬಂದು ಆ ಬಕೇಟಿನ ಒಳಗಡೆ ಓಡಾಡುತ್ತಲಿತ್ತು. ಅಬ್ಬಾ !!! ಸಧ್ಯ ಅಪಾಯದಿಂದ ಪಾರಾಯಿತಲ್ಲ !!! ಅಂದುಕೊಂಡು ಸಂತಸದಿಂದ ಅದನ್ನು ಬಕೇಟಿನಿಂದ ಹೊರಗೆ ತೆಗೆದು ಹಾಲು ಕುಡಿಸಿದೆ. ಮನೆಯೆಲ್ಲಾ ತಿರುಗಾಡಿದ ಅದು ನನ್ನ ಕೈಮೇಲೆಲ್ಲಾ ಹತ್ತಿ ನಂತರ ಕೈಲಾಗದ ಮಗುವಿನಂತೆ ಬಂದು ನನ್ನ ತೊಡೆಯನ್ನೇರಿ ಅಲ್ಲೇ ತನ್ನ ಸುಂದರ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನೇ ನೋಡುತ್ತಾ ನನ್ನಲ್ಲಿ ಏನೋ ಹೇಳುತ್ತಿದೆಯೇನೋ ಅನ್ನಿಸುತ್ತಿತ್ತು. ಮೊದಲೇ ಪ್ರಾಣಿ ಪ್ರಿಯನಾದ ನಾನು ಅದನ್ನೆತ್ತಿಕೊಂಡು ಮುದ್ದಾಡಿ ಮತ್ತೆ ರಾತ್ರಿಯಾದ್ದರಿಂದ ಅದರ ಬಕೇಟಿನಲ್ಲಿ ಮಲಗಿಸಿ ಚಳಿಯಾಗದಂತೆ ಅದಕ್ಕೆ ಬನಿಯನ್ ಬಟ್ಟೆಯನ್ನು ಹೊದ್ದಿಸಿ ಮಲಗಿಸಿದೆ. ಹಾಲು ಕುಡಿದು ಹೊಟ್ಟೇ ತುಂಬಿಸಿಕೊಂಡಿದ್ದ ಅದು ನಿರಮ್ಮಳವಾಗಿ ನಿದ್ರೆ ಮಾಡುತ್ತಿತ್ತು. ಅದನ್ನು ನೋಡಿ ನಾನು ನಿದ್ರೆ ಮಾಡಿದೆ. ಬೆಳಗ್ಗಿನತನಕ ನನಗೆ ಅದರದ್ದೇ ಯೋಚನೆ, ಮುಂಜಾವದಲ್ಲಿ ಎದ್ದು ಅದು ಏನುಮಾಡುತ್ತಿದೆ ಎಂದು ನೋಡಿ, ಇನ್ನೂ ನಿದ್ರೆ ಮಾಡುತ್ತಿದ್ದರಿಂದ ನಾನು ನನ್ನ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ಮಾಡಿ ಬಂದು ನೋಡುವ ಹೊತ್ತಿಗೆ ಅದು ಎದ್ದು ಅತ್ತಿಂದಿತ್ತ ಓಡಾಡುತ್ತಿತ್ತು. ಅದಕ್ಕೆ ಹಾಲು ಕುಡಿಸಿ ಎಂದಿನಂತೆ ನನ್ನ ಕೆಲಸಕ್ಕೆ ಹೊರಟೆ.

ಮಧ್ಯಾನ್ನ ಬೇಗ ಮನೆಗೆ ಬಂದು ಅದು ಏನುಮಾಡುತ್ತಿದೆ ಎಂದು ನೋಡುವ ತವಕದಿಂದಲೇ ಹೊರಟೆ. ಹಾಗೆಯೇ ಅಕಸ್ಮಾತಾಗಿ ಅದಕ್ಕೆ ಹೊಟ್ಟೆ ಹಸಿದರೆ ಎಂದು ಒಂದು ಬಿಸ್ಕೇಟನ್ನೂ ಆ ಬಕೇಟಿನಲ್ಲಿ ಇಟ್ಟಿದ್ದೆ. ಮಧ್ಯಾನ್ನ ಮನೆಗೆ ಬಂದಾಕ್ಷಣ ಅದಕ್ಕೆ ಹಾಲು ಕುಡಿಸಿ ಸಾಧ್ಯವಾದರೆ ಸ್ವಲ್ಪ ಅನ್ನ, ಬಿಸ್ಕೇಟನ್ನು ನೀಡಬೇಕೆಂದು ಮನದಲ್ಲೇ ನೆನೆದು ಬಂದು ಅದನ್ನು ನೋಡಿದೆ, ಅದು ಸ್ವಲ್ಪ ನಿತ್ರಾಣಗೊಂಡಂತೆ ಕಂಡದ್ದರಿಂದ ತಕ್ಷಣ ಅದಕ್ಕೆ ಸ್ವಲ್ಪ ಹಾಲು ಕುಡಿಸಿ ಮಲಗಲು ಬಿಟ್ಟೆ. ಮಧ್ಯಾನ್ನದ ಮಂಪರು ಹತ್ತಿದ್ದರಿಂದ ಆ ಬಕೇಟಿನ ಪಕ್ಕದಲ್ಲೇ ನಾನು ನಿದ್ರೆಗೆ ಶರಣಾದೆ. ಒಂದು ೩೦ ನಿಮಿಷಗಳ ತರುವಾಯ ಎಚ್ಚರವಾಗಿ ಅದನ್ನು ನೋಡಿದರೆ ಅದು ಉಸಿರಾಡುತ್ತಿರುವಂತೆ ಕಾಣಲಿಲ್ಲ, ಅಯ್ಯೋ ದೇವರೇ ಎಂದುಕೊಂಡು ಅದನ್ನು ಎತ್ತಿಕೊಳ್ಳಲು ಕೈಚಾಚಿದರೆ ಅದರ ದೇಹ ಪೂರ್ಣವಾಗಿ ಮರುಗಟ್ಟಿತ್ತು, ಅದರ ಹೃದಯಬಡಿತ ನಿಂತುಹೋಗಿತ್ತು, ಅದು ಆತ್ಮವಿಲ್ಲದ ಶರೀರವಾಗಿತ್ತು. ಕೇವಲ ಒಂದು ದಿನದ ಅತಿಥಿಯಾಗಿ ಬಂದ ಅದು ನನ್ನ ಮನದಲ್ಲಿ ಆಳವಾದ ಹೆಜ್ಜೆಯ ಗುರುತನ್ನ ಮೂಡಿಸಿ ಪರಲೋಕಕ್ಕೆ ಪಯಣ ಬೆಳೆಸಿತ್ತು. ಮುಂಗಾರುಮಳೆಯಲ್ಲಿನ ದೇವದಾಸ ಗಣೇಶನನ್ನು ಬಿಟ್ಟು ಹೋದಾಗ ಕೂಡಾ ನನ್ನ ಕಣ್ಣಿನಲ್ಲಿ ನೀರು ಬಂದಿತ್ತು, ಅದು ಕೇವಲ ಸಿನಿಮಾ ಆದರೂ ದುಃಖ ತಡಿಯಲಾಗಿರಲಿಲ್ಲ, ಅಂತದ್ದರಲ್ಲಿ ನನ್ನ ಜೊತೆಯಲ್ಲೇ, ನನ್ನ ಆರೈಕೆಯಲ್ಲೇ ಒಂದು ದಿನ ಕಳೆದ ಆ ಪುಟ್ಟ ಅಳಿಲಿನ ಮರಿಯೊಡನೆ ಬೆಳೆದ ಬಾಂಧವ್ಯ ನನ್ನ ಕಣ್ಣಂಚಿನಲ್ಲಿ ನೀರುಬರಿಸಿತ್ತು. ನೆನ್ನೆತಾನೆ ಜಿಗಿದು ಓಡಾಡಿಕೊಂಡಿದ್ದ ಅಳಿಲು ಇಂದು ಕೇವಲ ಒಂದು ಶವವಾಗಿತ್ತು. ಅದನ್ನು ಎಲ್ಲೆಲ್ಲೋ ಬಿಸಾಡಲು ಮನಸ್ಸು ಬರದೇ ನನ್ನಬಳಿ ಇದ್ದ ಒಂದು ಹೂವಿನ ಕುಂಡದಲ್ಲಿ ಅದನ್ನು ಮಣ್ಣು ಮಾಡಿ ಅದರ ನೆನಪಿಗೆ ಅದೇ ಕುಂಡದಲ್ಲಿ ಒಂದು ಗಿಡವನ್ನ ನೆಟ್ಟೆ.

ಇಂದು ಆ ಗಿಡದಲ್ಲಿ ಹೂ ಮೂಡಿದೆ, ಆ ಗಿಡದ ಬುಡದಲ್ಲಿ ಬಹುಷ: ಮಣ್ಣಲ್ಲಿ ಮಣ್ಣಾಗಿ ಆ ಪುಟ್ಟ ಅಳಿಲುಮರಿ ನಿಸರ್ಗದ ಮಡಿಲಲ್ಲಿ ಸೇರಿಹೋಗಿದೆ...

Tuesday, June 24, 2008

ಕಾವ್ಯ ಗಂಗೆಯನ್ನರಸುತ್ತಾ...

ಬಹಳದಿನಗಳಾಗಿ ಹೋಯಿತು
ಕಾವ್ಯ ಗಂಗೆಯನ್ನ ಹರಿಬಿಟ್ಟು
ಎಲ್ಲಿ ಹೊರಟಿದೆಯೋ ಅವಳ ಪಯಣ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಮುಂಜಾನೆ ಎದ್ದು ಸೂರ್ಯೋದಯಕ್ಕೆ
ಮುಂಚಿನಸಮಯದಲ್ಲಿ ಜಳಕವಮಾಡಿ
ಜಪ ತಪದಲ್ಲಿ ಲೀನವಾಗುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಪ್ರತಿದನದ ಎಂದೂ ಮುಗಿಯದ
ಪಯಣದಲ್ಲಿ ದಾರಿಯಲ್ಲಿ ಸಿಕ್ಕುವ
ಅಪರಿಚಿತ ಮುಖಗಳಲ್ಲಿ ಅಡಗಿರುವ ಪರಿಚಯವನ್ನು ಹುಡುಕುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ಹಕ್ಕಿಗಳ ಇಂಪಾದ್ ಇಂಚರದಿ
ದಿಗಂತದಿ ತೇಲುವ ತಿಳಿ ಮೋಡದ ನಡುವೆ
ಇಣುಕಿ ನೋಡುವ ಭಾಸ್ಕರನ ನೋಡುತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

ತಂಪಾದ ತಂಗಾಳಿಯಲ್ಲಿ ತೇಲಿಬರುವ
ನನ್ನವರ ನೆನಪುಗಳ ಮೆಲುಕುಹಾಕುತ್ತಾ
ದಿನದ ದಣಿವನ್ನ ಬೆಳದಿಂಗಳ ಚೆಂದಿರನೊಡನೆ ಕಳೆಯುತ್ತಾ
ನಾ ಹೊರಟಿರುವೆ ಕಾವ್ಯ ಗಂಗೆಯನ್ನ ಹುಡುಕುತ್ತಾ

Wednesday, June 11, 2008

"ನೀನಾರಿಗಾದೆಯೋ ಎಲೆ ಮಾನವ"

ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗೆ Good morning ವಿಶ್ ಮಾಡ್ತಾಇರೊವ್ರು ಅಂತ ಅರ್ಧಂಭರ್ದ ಕಣ್ಣಿನಲ್ಲೇ ಮೆಸ್ಸೇಜನ್ನ ಓದಿ ಧಡ್ ಅಂತ ಎದ್ದು ಕುಳಿತೆ. ಅದು ನನ್ನ ಸ್ನೇಹಿತನಾದ ಹರೀಶನದು. We might need 4 units of A+ blood for my dad. I might call u if required ಅಂತ ಬಂದಿತ್ತು. ತಕ್ಷಣ ಅವನಿಗೆ ಫೋನ್ ಮಾಡಿ ಏನಯ್ತು ? ಏನು ವಿಚಾರ ಅಂತೆಲ್ಲಾ ಕೇಳಿ ತಿಳ್ಕೊಂಡೆ. ನೆನ್ನೆ ರಾತ್ರಿ ಸುಮಾರು ೧೦.೦೦ ಘಂಟೆಗೆ ಅವರ ತಂದೆಗೆ ಅಪಘಾತವಾಗಿ ಕಾಲಿನ ೨ ಮೂಳೆ ಮುರಿದು, ತಲೆಗೆ ಪೆಟ್ಟುಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಅನ್ನೋ ವಿಚಾರ ಕೇಳಿ ನನ್ನ ಎದೆ ಧಸಕ್ ಅಂತು. ಕಳೆದ ೫ ತಿಂಗಳ ಹಿಂದೆಯಷ್ಟೇ ನನ್ನ ತಂದೆಯನ್ನ ಕಳೆದುಕೊಂಡ ನಾನು ನನ್ನ ತಂದೆಯನ್ನ ನೆನಪುಮಾಡಿಕೊಂಡೆ.

ನಾನು ಎಲ್ಲಿಗೆ ಬರಬೇಕು ? ಎಷ್ಟು ಹೊತ್ತಿಗೆ ಬರಬೇಕು ಎಂಬ ವಿವರವನ್ನ ಪಡೆದುಕೊಂಡು ನಿತ್ಯಕರ್ಮಗಳನ್ನ ಮುಗಿಸಿ, ನೆನ್ನೆತಾನೆ ಸೀಮೇ ಬದನೆಯ ಸಿಪ್ಪೆ ತೆಗೆದಿಟ್ಟದ್ದರಲ್ಲಿ ಗಡಿಬಿಡಿಯಲ್ಲಿ ಚಟ್ನಿಮಾಡಿಟ್ಟು ಸ್ವಲ್ಪ ಅವಲಕ್ಕಿಯನ್ನ ತಿಂದು ಮನೆಗೆ ಬೀಗ ಹಾಕಿ ಮಣಿಪಾಲ್ ಆಸ್ಪತ್ರೆಯತ್ತ ಧಾವಿಸಿದೆ. ದಾರಿಯಲ್ಲೋ ನೂರಾರು ವಾಹನಗಳು.... ಅದರ ಸವಾರರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಯೋಚನೆಯಲ್ಲಿ ಮುಳುಗಿ, ಕಿವಿಗೆ ಮೊಬೈಲನ್ನು ಸಿಕ್ಕಿಸಿಕೊಂಡು ದಾರಿಬಿಡದೇ ಹೋಗುತ್ತಿದ್ದರು. ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ ರಕ್ತನೀಡಿ ಒಂದು ಜೀವವನ್ನ ಅಪಾಯದ ಅಂಚಿನಿಂದ ಪಾರುಮಾಡುವುದರಲ್ಲಿ ನೆರವು ನೀಡಬೇಕೆನ್ನುವುದು ನನ್ನ ತವಕ. ಆದರೆ ಆ ಮಹಾಜನಗಳು ನನ್ನ ದುಗುಡವನ್ನ ಎಲ್ಲಿ ತಿಳಿದಾರು. ಹಾಗೂ ಹೀಗೂ ಮಾಡಿ ಏರ್ಪೋರ್‍ಟ್ ರಸ್ತೆಯನ್ನ ತಲುಪಿದ ನನಗೆ ಸ್ವಾಗತಿಸಿದ್ದು ದೋಡ್ಡ ಟ್ರ್‍ಆಫಿಕ್ ಜ್ಯಾಮ್... ಚಕ್ರವ್ಯೂಹದೊಳು ನುಗ್ಗಿದಂತೆ ಅದರ ಮಧ್ಯೆ ಸಿಕ್ಕ ಸಿಕ್ಕ ಸಂದಿಗಳಲ್ಲಿ ನುಗ್ಗಿ ಅಂತೂ ಇಂತೂ ಆಸ್ಪತ್ರೆ ಸೇರಿದೆ.

ಹರೀಶನ ಅಣ್ಣ ಹೇಳಿದಂತೆ ನಾನು ರಕ್ತನಿಧಿಯನ್ನ ಹುಡುಕಿಕೊಂಡು ಹೊರಟೆ. ರಕ್ತನಿಧಿಯಲ್ಲಿ ಸ್ವಲ್ಪ ಹೊತ್ತು ಹರೀಶನೊಂದಿಗೆ ಕುಳಿತಿದ್ದು ಮಾತನಾಡಿದ ನಂತರ ನನ್ನ ರಕ್ತದಾನ ಮಾಡಲಿಕ್ಕೆ ಒಳಕ್ಕೆ ಹೋದೆ. ಮೊದಲು ಸ್ವಲ್ಪ ರಕ್ತವನ್ನ ಪರೀಕ್ಷೆಗೆ ತೆಗೆದುಕೊಂಡ ನಂತರ ಅದನ್ನ ಪರೀಕ್ಷೆ ಮಾಡಿ ನಂತರ ನನ್ನ ರಕ್ತವನ್ನ ಪಡೆಯಲಿಕ್ಕೆ ಪ್ರಾರಂಭಿಸಿದ್ರು. ಹಾಗೇ ಹಾಸಿಗೆ ಮೇಲೆ ಮಲಗಿದ್ದಾಗ ಮಾಡೋಕೆ ಬೇರೆ ಏನು ಕೆಲಸ !!! ಸುತ್ತ ಮುತ್ತ ಕಣ್ಣಾಡಿಸಿದೆ, ಒಂದು ಬರಹ ನನ್ನ ಆಕರ್ಷಿಸಿತು... ಅದರಲ್ಲಿದ್ದ ಅರ್ಥ ಈ ರೀತಿ ಇದೆ:

ನೇತ್ರದಾನ ಕೇವಲ ಒಮ್ಮೆ ಮಾತ್ರ,
ಮೂತ್ರಪಿಂಡದಾನ ಕೇವಲ ಒಮ್ಮೆ ಮಾತ್ರ,
ಹೃದಯದಾನ ಕೇವಲ ಒಮ್ಮೆ ಮಾತ್ರ,
ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ...


ಎಷ್ಟು ಸತ್ಯದ ಮಾತಲ್ವ ??? ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಅನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಎಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಯಾಕೆ ರಕ್ತವನ್ನ ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು ??? ನಾನು ನನ್ನ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡುತ್ತಾ ಬರುತ್ತಿದ್ದೇನೆ. ನನಗೆ ಯಾವ ತೊಂದರೆಯೂ ಆಗಿಲ್ಲ... ಆರೋಗ್ಯದಿಂದ ಆರಾಮವಾಗಿದ್ದೇನೆ. ಇವತ್ತಿನ ದಿನ ನಾವು ಚೆನ್ನಾಗಿ ಆರೋಗ್ಯದಿಂದ ಇರಬಹುದು, ನಾಳೆ ನಮಗೇ ಏನಾದರೂ ಆದರೆ ??? ಈಗ ಅದೆಲ್ಲಾ ಬೇಡ ಅಲ್ವಾ ??? ಒಟ್ಟಿನಲ್ಲಿ ನಾ ಕೊಟ್ಟ ರಕ್ತದಿಂದ ಒಬ್ಬ ವ್ಯಕ್ತಿ ಅಪಾಯದಿಂದ ಪಾರಾಗಿ ಗುಣಮುಖನಾದರೆ ನನಗೆ ಅದೇ ಸಂತೋಷ...

ನಿಮ್ಮೆಲ್ಲರಲ್ಲಿ ನನ್ನದೊಂದು ಸಣ್ಣ ಕೋರಿಕೆ PLEASE DONATE BLOOD TO SAVE LIFE....

Tuesday, June 10, 2008

ನೆನಪು...

ನೆನಪು

ಅಪ್ಪ ಹೋದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕುತ್ತಿಲ್ಲ. ನಾನು ಅಪ್ಪನೊಂದಿಗೆ ಕಳೆದ ಪ್ರತೀ ಕ್ಷಣ ನನ್ನ ಕಣ್ಮುಂದೆ ಹಾದು ಬರುತ್ತವೆ, ನನ್ನನ್ನು ಕೂಗಿ ಕರೆಯುತ್ತವೆ. ನಾನು ಇನ್ನೇನು ಆ ಕ್ಷಣವನ್ನ ಹಿಡಿದು ಅದರೊಡನೆ ಬೆರೆಯಬೇಕೆನಿಸುವಷ್ಟರಲ್ಲಿ ವಿಕ್ರಮನ ಕೈಗೆ ಸಿಕ್ಕದ ಬೇತಾಳದಂತೆ ಮತ್ತೆಲ್ಲೋ ಮರೆಯಾಗಿ ಹುದುಗಿಬಿಡುತ್ತದೆ. ಪ್ರತೀದಿನ ಪ್ರತೀಕ್ಷಣ ನಾನು ಜೀವನದಲ್ಲಿ ಒಂಟಿ ಪಯಣಿಗ ಎನ್ನುವ ಸತ್ಯವನ್ನ ಕಣ್ಮುಂದೆ ತೋರುತ್ತದೆ.

ಅಪ್ಪನ ನೆನಪಾದಾಗಲೆಲ್ಲಾ ನಾನು ಅವರೊಡನೆ ಕಳೆದ ಕೆಲವು ಘಟನೆಗಳ ದ್ರುಶ್ಯಾವಳಿಗಳು ಪದೇ ಪದೇ ಕಾಣುತ್ತವೆ. ವಾರಾಂತ್ಯದಲ್ಲಿ ಬಿಡುವಿದ್ದಾಗ ಮನೆಗೆ ಹೋಗಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆಯೇ ತಮಾಷೆಯಾಗಿ "ಏನ್ ಬುದ್ದೀ ಹೇಗಿದ್ದೀರಾ !!!, ಮನೆ ಕಡೆ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ತಾ ಐತೋ ??? " ಎಂದೆಲ್ಲಾ ಮಾತನಾಡಿದ್ದು ನೆನಪಿಗೆಬರುತ್ತದೆ.

"ಅಪ್ಪಾ, ನಾನು ಬಂದ್ಮೇಲೆ ನಿಮ್ಗೆ ಟಿವಿ ಸಿಕ್ಕೊದಿಲ್ಲ, ಒಂದು ದಿನ ಅಡ್ಜಸ್ಟ್ ಮಾಡ್ಕೊಳಿ ಆಯ್ತಾ ??" ಹೀಗೆ ಹೇಳಿದಾಗ ಅಪ್ಪ, "ಪರ್ವಾಗಿಲ್ಲ ಬಿಡೋ, ನಾನೇನು ನೋಡೋದಿಲ್ಲ, ಎಲ್ಲಾ ನಿಮ್ ಅಮ್ಮನೇ ನೋಡೋದು... ನೀನು ಏನ್ ಬೇಕಾದ್ರೂ ಹಾಕ್ಕೊ. ಹೇಗಿದ್ರೂ ನೀನು ಅಲ್ಲಿ ಅಂತೂ ನೋಡೋದಿಲ್ಲ" ಅಂತ ಹೇಳಿ ಒಂದು ಕಿರುನಗೆ ನಕ್ಕು ತಾವೂ ನನ್ನಜೊತೆಯಲ್ಲಿ ಕುಳಿತು ಹಿಂದಿ ಸಿನಿಮಾದ ಸಿಡಿಯನ್ನ ನೋಡುತ್ತಲಿದ್ದರು. "ಅಪ್ಪಾ !!! ಕನ್ನಡಕ ಹಳೇದಾಗಿದೆ, ಅದೂ ಅಲ್ದೇ ಗಾಜಿನ ಕನ್ನಡಕ ಅಪ್ಪಾ, ಇದು ಬೇಡ, ಪ್ಲಾಸ್ಟಿಕ್ ದು ಮಾಡಿಸ್ಕೊಳಿ, ಅದು ಭಾರ ಕಮ್ಮಿ ಇರತ್ತೆ ಅಂತ ಹೇಳಿದ್ರೆ, ಅಯ್ಯೋ ಬಿಡೋ ಪರ್ವಾಗಿಲ್ಲ, ಇದ್ದರೆ ಇನ್ನೆಷ್ಟುದಿನಾ ಅಂತ ಇರ್ತೀನಿ, ಇವತ್ತು ಇದ್ದು ನಾಳೆ ಹೋಗೋ ಶರೀರ !!! ಅದಕ್ಕೆ ಹೊಸಾ ಕನ್ನಡಕ ಅಂತ ದುಡ್ಡು ಖರ್ಚುಮಾಡಬೇಡ, ಅದನ್ನೇ ಕೂಡಿಡು... ಮುಂದೆ ನಿನ್ನ ಮದುವೇ ಆದಮೇಲೆ ಬೇಕಾಗತ್ತೆ" ಅಂತೆಲ್ಲಾ ಹೇಳ್ತಾ ಇದ್ರು.

"ನಾಳೆ ನಿನಗೆ ಪುರುಸೊತ್ತಾದಾಗ ತೆಂಗಿನ ಕಾಯಿ ಕುಯ್ಯೋಣ, ಟೈಮ್ ಇಲ್ಲಾ ಅಂದ್ರೆ ಬೇಡ". ನೆಕ್ಸ್ಟ್ ಟೈಮ್ ತೆಗೆದ್ರಾಯ್ತು ಅಂತ ಹೇಳಿದಾಗ ನಾನು ಸಾಧ್ಯವಾದಷ್ಟೂ ನನ್ನ ಎಲ್ಲಾಕೆಲಸಗಳನ್ನ ಬಿಟ್ಟು ಹೋಗಿ ತೆಂಗಿನ ಕಾಯಿ ಕುಯ್ದು ಕೊಡುತ್ತಿದ್ದೆ. ಕಾಯಿ ತೆಗೆಯುವಾಗಲೂ ಅಪ್ಪ ಕೆಳಗೆ ನಿಂತು ನನಗೆ ಮಾರ್ಗದರ್ಶನ ನೀಡ್ತಾಇದ್ರು. "ಅದುಬೇಡ, ಅದರ ಪಕ್ಕದ್ದ್ನ ತೆಗಿ, ಸ್ವಲ್ಪ ತಡಿ ಯಾರೂ ಬರ್ತಾ ಇದಾರೆ, ಇಗ ತೆಗೀಬಹುದು, ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತೆಲ್ಲಾ ಹೇಳಿದಮೇಲೆ ನಾನು ಕಾಯಿ ಕೆಡವಿದ ನಂತರ ಅದನ್ನೆಲ್ಲಾ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಈ ಸಾರಿ ಏಷ್ಟು ಕಾಯಿ ಕಿತ್ತಿದ್ದು ಅಂತ ಎಣಿಕೆ ಮಾಡ್ತಾ ಇದ್ರು. ಸ್ವಾಭಿಮಾನಿಯಾದ ಅಪ್ಪ ಕಾಯಿ ಕಿತ್ತಾದಮೇಲೆ ತಾವೇ ಆ ಚೀಲವನ್ನ ಮಹಡಿಯ ಮೇಲೆ ಇಡಲು ಅದನ್ನ ಹೊತ್ತುಕೊಂಡು ಹೋಗುತ್ತಿದ್ದರು, ಆದರೆ ನಾನು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. "ಬಿಡೋ ಪರ್ವಾಗಿಲ್ಲ, ನೀನು ಕಾಯಿ ಕಿತ್ತು ಸುಸ್ತಾಗಿರ್ತೀಯ. ಸ್ವಲ್ಪ ಸುಧಾರಿಸ್ಕೋ... ಕಣ್ಣಿಗೆ ಧೂಳು ಬಿತ್ತಾ !!! ಸ್ವಲ್ಪ ನೀರು ಹಾಕಿ ತೊಳ್ಕೊ !!!" ಎಂದೆಲ್ಲಾ ಬರೀ ನನ್ನಬಗ್ಗೆ ಕಾಳಜಿವಹಿಸುತ್ತಿದ್ದರೇ ಹೊರತು ಅವರ ಬಗೆಗೆ ಕಾಳಜಿ ವಹಿಸಿದ್ದು ಕಡಿಮೆಯೇ.

ಕಾಯಿಕಿತ್ತಾದಮೇಲೆ ಒಣಗಿರುವ ತೆಂಗಿನ ಗರಿಗಳೂ ಬೀಳುತ್ತಿದ್ದವು, ಅದನ್ನ ಕತ್ತಿ ಹಿಡಿದು ತುಂಡು ತುಂಡುಮಾಡಿ ಬಿಸಿಲಿಗೆ ಹಾಕದಿದ್ದರೆ ಅಪ್ಪನಿಗೆ ಸಮಾಧಾನ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟೂ ನಾನು ಅದಕ್ಕೆ ಅವಕಾಶ ನೀಡದ ಕಾರಣ, ನಾನು ಅಲ್ಲಿ ಇರದಿದ್ದಾಗ ಆ ಕೆಲಸಕ್ಕೆ ಕೈ ಹಾಕುತ್ತಿದ್ದರು.

ಮೊನ್ನೆತಾನೆ ನಮ್ಮ ಮನೆಯಲ್ಲಿ ನಾನು ಮತ್ತೆ ನನ್ನ ಅಕ್ಕ ಸೇರಿ ಕಾಯಿಗಳನ್ನ ತೆಗೆಯುತ್ತಿದ್ದಾಗ ನನಗರಿವಿಲ್ಲದೇ ಅಪ್ಪಾ !!! ಅಂತ ಬಾಯಿಯಿಂದ ಸ್ವರ ಹೊರಬಂದು ತಕ್ಷಣ ಅವರಲ್ಲಿ ಇಲ್ಲವೆಂದು ಅರಿವಾಯಿತು. ಕಣ್ಣಿನಿಂದ ಅವರ ನೆನಪಬಿಂದುಗಳು ಹರಿದುಬಂದವು. ಕೆಳಗಿದ್ದ ಅಕ್ಕ "ಏನಾಯ್ತೋ ?" ಅಂತ ಕೇಳಿದ್ದಕ್ಕೆ "ಏನಿಲ್ವೇ, ಧೂಳು ಕಣ್ಣಿಗೆ ಬಿತ್ತು..." ಅಂತ ಸುಳ್ಳು ಹೇಳಿದ್ದು ಅವಳ ಅರಿವಿಗೂ ಬಂದಿತ್ತು. "ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತ ಹೇಳಲು ಅಲ್ಲಿ ಅಪ್ಪ ಇರಲಿಲ್ಲ...

ಅಪ್ಪ ನನ್ನೊಡನೆ ಇಲ್ಲದಿದ್ದರೂ ಅವರು ಕಲಿಸಿರುವ ಸ್ವಾಭಿಮಾನ, ಆತ್ಮಾಭಿಮಾನ ಅವರೊಡನೆ ಕಳೆದ ಮಧುರ ವಾತ್ಸಲ್ಯಭರಿತ ಕ್ಷಣಗಳು ನನ್ನೊಂದಿಗಿದ್ದಾವೆ. ಅವರು ಸ್ವರ್ಗಸ್ಥರಾದ ೫ ತಿಂಗಳುಗಳ ನಂತರವೂ ನಾನು ಮನೆಗೆ ಹೋದಾಗ ನನಗರಿವಿಲ್ಲದಂತೆ ಮನಸ್ಸಿನಿಂದ ಮಾತು ಹೊರಡುತ್ತದೆ... "ಏನ್ ಬುದ್ದೀ, ಹೇಗಿದ್ದೀರಾ !!!"

Thursday, June 5, 2008

ಹೈದರಾಬಾದಿನ ದಿನಗಳು....

ಹೈದರಾಬಾದಿನ ಆಫೀಸಿನಲ್ಲಿ ಜಾಸ್ತಿಏನೂ ಕೆಲಸ ಇಲ್ಲದೇ ಇದ್ದಿದ್ರಿಂದ ನಾನು ಅಂತರ್ಜಾಲದಲ್ಲಿ ನನ್ನ ಗೆಳೆಯರಜೊತೆ ಮಾತಾಡೊ ಅಭ್ಯಾಸ ಇತ್ತು. ಹಾಗೇ ನನಗೆ ತುಂಬಾಜನ ಗೆಳೆಯರಾದ್ರು. ನನ್ನ ನಿಜಜೀವನದಲ್ಲಿ ಪಡಿದೇಇರೋ ತಮ್ಮ, ತಂಗಿಯರ ಪ್ರೀತಿ ಇಲ್ಲಿಂದ ಪಡ್ಕೊಂಡೆ. ಇಷ್ಟರ ಮಧ್ಯದಲ್ಲಿ ವಿಜಯ್ ನನ್ಗೆ ತುಂಬಾ ಆಪ್ತನಾದ. ದಿನಾ ಅಲ್ದಿದ್ದ್ರೂ ವಾರಂತ್ಯದಲ್ಲಿ ಅವನ ಪುಟ್ಟ ಗೂಡಿಗೆ ಹೂಗಿ ಬರ್ತಾ ಇದ್ದೆ. ಹಾಗೆ ನಮ್ಮ ಸ್ನೇಹ ಗಾಡವಾಯ್ತು... ಶಿಲ್ಪಾ ಕೂಡಾ ಕನ್ನಡದವಳು. ಸ್ನೇಹಕ್ಕೆ ಬೆಲೆ ಕೊಡೋ ಹುಡುಗಿ. ನಮ್ಮ ಆಫೀಸ್ ಹತ್ತಿರದಲ್ಲೇ ಇತ್ತು. ಹಾಗಾಗಿ ಒಮೊಮ್ಮೆ ಹರಟೆ ಹೊಡಿಯೊದಿಕ್ಕೆ ಭೇಟಿಯಾಗ್ತಾ ಇರ್ತಿದ್ವಿ. ನಾನು ವಿಜಯ್ ಶಿಲ್ಪ... ಮೂರೂಜನ ತುಂಬಾನೇ ಒಳ್ಳೆ ಗೆಳೆಯರಾದ್ವಿ.

ಗೆಳೆತನ ನನ್ನ ಯಾವ ರೀತಿಯಲ್ಲಿ ಪ್ರೋತ್ಸಾಹಿಸತ್ತೆ ಅನ್ನೊದನ್ನ ನಾನು ತಿಳಿದಿರಲಿಲ್ಲ. ಯಾವ ಕ್ಷಣದಲ್ಲಿ ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ನೋ... ಗೊತ್ತಾಗ್ಲಿಲ್ಲ (ಕವಿ ಅಂತ ನನ್ನ ನಾನೇ ಕರ್ಕೊಬೇಕು ಅಲ್ವ !!!!). ಆವತ್ತಿನ ದಿನ ಹೈದರಾಬಾದಿನ ಮೊದಲ ಮಳೆ ಬೀಳ್ತಾಇತ್ತು. ನಾನು ವಿಜಯ್ ಜೊತೆ ಫೋನಿನಲ್ಲಿ ಮಾತಾಡ್ತಾ ಅವನಿಗೆ ಹಾಗೇ ಒಂದು ಕವನದ ರೂಪದಲ್ಲಿ ಏನೋ ಹೇಳಿದೆ. ತಕ್ಷಣ ಅವನು ನನ್ನ ಪ್ರೋತ್ಸಾಹಿಸಿ ನೀನು ಇದನ್ನ ಬರೀ ಚೆನ್ನಾಗಿದೆ ಅಂತ ಹುರಿದುಂಬಿಸಿದ. ಆವತ್ತು ಹೊರಗೆ ಬಂದದ್ದೇ ನನ್ನ ಮೊದಲ ಕವನ "ಭಾವನೆಗಳ ಸಾಗರದಲ್ಲಿ". ಮೊದಲ ಪ್ರಯತ್ನ ಸಫಲವಾಗದಿದ್ದರೂ ವಿಫಲವಾಗಲಿಲ್ಲ... ನಾನು ಬರೆದ ಸಾಲುಗಳನ್ನ ನನ್ನ ಗೆಳೆಯರೊಡನೆ ಹಂಚಿಕೊಂಡೆ, ಏಲ್ಲ ನನಗೆ ಪ್ರೋತ್ಸಾಹಿಸಿದ್ರು. ಹೀಗೇ ಕೇವಲ ಒಂದು ತಿಂಗಳಿನಲ್ಲಿ ಹೆಚ್ಚೂಕಮ್ಮೀ ೩೦ ಕವನಗಳು ಹೊರಗೆ ಬಂದ್ವು. ಅವು ಕವನಗಳಲ್ಲ, ನನ್ನ ಮನಸ್ಸಿನ ಭಾವನೆಗಳು. ಕೆಲವು ಸಲ ರಾತ್ರಿ ೪ ಘಂಟೆಯಲ್ಲಿ ೪ ಸಾಲು ನೆನಪಾಗಿ ಆ ಅರ್ಧ ರಾತ್ರಿಯಲ್ಲಿ ಎದ್ದು ಬರೆದದ್ದೂ ಇದೆ. ವಿಜಯ್ ನನಗೆ ನಾನು ಬರೆದ ಕವನಗಳನ್ನ ನನ್ನದೇ ಆದ ಬ್ಲಾಗ್ ನಲ್ಲಿ ಹಾಕೋದಕ್ಕೆ ಹೇಳಿ ನಾನು ಅದನ್ನ ಅಂತರ್ಜಾಲದಲ್ಲಿ ಪ್ರಕಟಗೊಳಿಸಿದೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಚೆನ್ನಾಗೇ ಇತ್ತು. ನನ್ನ ಕವನವನ್ನ ಓದಿ ನನ್ನಗೆ ಕೆಲವು ಮಿತ್ರರು ಆಪ್ತರಾದರು. ನನ್ನ ಬಾಳಿನಲ್ಲಿ ಅಳಿಸಿಹೋಗದ ಮೈಲಿಗಲ್ಲಾದರು. ಅವರಿಗೆಲ್ಲಾ ಇಲ್ಲಿ ಒಂದು ಅಭಿನಂದನೆ ಸಲ್ಲಿಸ್ತಾಇದ್ದೆನೆ.

ಹೀಗೇ ನಡಿತಾ ಇರೋವಾಗ ನನ್ನ ಹಳೇ ಕಂಪನಿಯ ಸಹೋದ್ಯೋಗಿ, ಮಿತ್ರರೂ ಆದ ಶಂಕರಮೂರ್ತಿ ಹೈದರಾಬಾದಿಗೆ ಬರೋವಿಚಾರ ತಿಳಿಸಿದ್ರು. ನಾನು ಹೇಗಿದ್ರೂ ಒಬ್ಬನೇ ಇದ್ದದ್ದರಿಂದ ನನ್ನ ಜೊತೆ ಬಂದು ಉಳಿದುಕೊಳ್ಳಬಹುದು ಅಂತ ಹೇಳಿ ನನ್ನದೇ ಆದ ಕೆಲವು ಕರಾರುಗಳನ್ನ ಅವರಿಗೆ ಹೇಳಿದೆ :) . ಅದಕ್ಕೆಲ್ಲಾ ಒಪ್ಪಿ ಶಂಕರ್ ನನ್ನ ಮನೆಗೆ ಬಂದರು.
ಅಲ್ಲಿಂದ ನಮ್ಮ ಅಡುಗೆ ಮಾಡೋ ಕಾರ್ಯಕ್ರಮ ಸ್ವಲ್ಪ ಜಾಸ್ತಿ ಆಯ್ತು. ನಾವಿಬ್ಬರೂ ಸೇರಿ ಅಡುಗೆ ಮಾಡ್ಕೋತಿದ್ವಿ. ಜೊತೆ ನಲ್ಲಿ ಊಟಮಾಡಿ ಪಾತ್ರೆ ತೊಳೆದಿಡ್ತಿದ್ವಿ. ಬೇಸರ ಆದ್ರೆ ಅಲ್ಲೇ ಮನೆಸುತ್ತಾಮುತ್ತಾ ಹೊಗಿ ತಿರುಗಾಡ್ಕೊಂಡು ತರಕಾರಿ, ಮೊಸರು ತಂದು ರಾತ್ರಿ ಅದನ್ನ ಮಜ್ಜಿಗೆ ಅಥವಾ ಲಸ್ಸಿ ಮಾಡಿಕೊಂಡು ಕುಡಿದು ಹೊತ್ತು ಕಳೀತಾ ಇದ್ವಿ.

ನನ್ನ ಮಿತ್ರ ಮಂಡಳಿಯಿಂದ ನನಗೆ ಬಹಳಷ್ಟು ಸಹಾಯ ಸಿಕ್ಕಿದೆ. ಹಾಗೆ ನಾನು ಕೂಡಾ ನನ್ನ ಕೈಲಾದ ಸಹಾಯವನ್ನ ಮಾಡಿದ್ದೇನೆ ಎಂದು ನನ್ನ ಅನಿಸಿಕೆ. ಅದೆಷ್ಟು ನಿಜಾನೋ ಎಷ್ಟು ಸುಳ್ಳೋ ನನ್ಗಂತೂ ಗೊತ್ತಿಲ್ಲ. ಈ ವಿಚಾರ ಬರ್ತಾ ಇದ್ದಹಾಗೇ ನನಗೆ ನನ್ನ ಗೆಳೆಯ ಅಮಿತ್ ಮತ್ತೆ ದೀಪ್ತಿ ನೆನಪಾಗ್ತಾ ಇದಾರೆ, ಸ್ವಲ್ಪ ಅವರಬಗ್ಗೆ ನಿಮಗೆ ಹೇಳ್ತೀನಿ.

ಅಮಿತ್ ಬಗ್ಗೆ ಹೇಳ್ಬೇಕು ಅಂದ್ರೆ ಅವನು ನನ್ನ ಆರ್ಕುಟ್ ಗೆಳತಿ ದೀಪ್ತಿ ಯಿಂದ ಪರಿಚಯ ಆದದ್ದು. ಇನ್ನು ದೀಪ್ತಿ ಯಾರು ಅಂತ ಹೇಳ್ಬೆಕು ಅಲ್ವಾ ???? ಆಯ್ತು ಆಯ್ತು... ಅವಳು ನನ್ನಗೆ ಅದೇ ಆರ್ಕುಟ್ಟಿನಮೂಲಕ ಪರಿಚಯವಾದ ಮತ್ತೊಬ್ಬಗೆಳತಿ. ಹೈದರಾಬಾದಿನಲ್ಲಿ ನನಗೆ ಬೇರೆಬೇರೇ ಅಡುಗೆಯ ಪಾಕರುಚಿ ಕಲಿಸೋದಕ್ಕೆ ಅದರ ವಿಧಾನಗಳನ್ನ ಕಳಿಸಿಕೊಟ್ಟವಳು. ಅವಳ ಗೆಳೆಯನೇ ಈ ಅಮಿತ್. ನಾನು ಹೈದರಾಬದಿನಲ್ಲಿ ವಾಸವಾಗಿದ್ದಾಗ ನನ್ನ ಜೊತೆ ಕೆಲವು ತಿಂಗಳು ನನ್ನ ಅತಿಥಿಯಾಗಿದ್ದವನು. ಅವನಿಗೆ ಹೈದರಾಬಾದಿನಲ್ಲಿ ಕೆಲವು ತಿಂಗಳು ಕೆಲಸವಿದ್ದಿದ್ದರಿಂದ ಉಳಿದುಕೊಳ್ಳೋದಿಕ್ಕೆ ನನ್ನ ಜೊತೆ ಇದ್ದ. ಸೀದಾ ಸಾದಾ ಹುಡುಗ, ಆದರೆ ಬತ್ತಿ ಹೊಡಿಯೋದು, ಎಣ್ಣೇ ಹಾಕೊದು ಬಿಟ್ರೆ ಮತ್ತೆಲ್ಲಾ ಒಳ್ಳೇ ಅಭ್ಯಾಸಗಳೆ ಇತ್ತು. ನನ್ನ ಮೊದಲ ಉಪ್ಪಿಟ್ಟಿನ ಪ್ರಯೋಗಕ್ಕೆ ಸಿಕ್ಕಿದ್ದೇ ಅಮಿತ್. ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ವಾಪಾಸ್ ಬಂದು ನಮ್ಮಜೊತೆ ಹರಟೆ ಹೊಡ್ಕೊಂಡು ಮಲ್ಕೊತಾ ಇದ್ದ. ವಾರಾಂತ್ಯದಲ್ಲಿ ಅಮಿತ್ ಮತ್ತೆ ಶಂಕರ್ ಜೋಡಿ ಮನೆ ಬಿಟ್ಟು ಹೊರಗೆ ತಿರುಗಾಡ್ಕೊಂಡು ಬರ್ತಾಇದ್ರು. ಈಗ ಅಮಿತ್ ಮತ್ತೆ ದೀಪ್ತಿ ಇಬ್ಬರೂ ದಂಪತಿಗಳು. ಅವರನ್ನ ಒಂದುಮಾಡಿದ ಹಿರಿಮೆ ಆರ್ಕುಟ್ ಗೆ ಸೇರಬೇಕು.

ಹೈದರಾಬಾದಿಗೆ ಬಂದಾಗಿನಿಂದಾ ನಾನು ಎಲ್ಲೂ ಹೋಗಿರಲಿಲ್ಲ, ಆದ್ದರಿಂದ ನಾನು, ಶಂಕರ್, ಅಮಿತ್, ವಿಜಯ್ ಮತ್ತೆ ಶಿಲ್ಪಾ ಎಲ್ಲಾ ಸೇರಿ ಒಂದು ಸಿನಿಮಾಕ್ಕೆ ಹೋಗೋದು ಅಂತ ತೀರ್ಮಾನಿಸ್ಕೊಂಡು ಡೈಹಾರ್ಡ್ ಭಾಗ-೪ ಕ್ಕೆ ಮಲ್ಟಿಪ್ಲಕ್ಸ್ ಗೆ ಹೋದ್ವಿ. ಸಿನಿಮಾಏನೋ ಚೆನ್ನಾಗೇ ಇತ್ತು, ಆದರೆ ಇವತ್ತಿಗೂ ನನಗೆ ಸಿನಿಮಾಗಿಂತಾ ನನ್ನ ಗೆಳೆಯರೊಡನೆ ಕಳೆದ ಸಮಯ ನೆನಪಾಗತ್ತೆ. ನಾನು ವಿಜಯ್ ಒಟ್ಟಿಗೇ ವಿರಾಮದಲ್ಲಿ ಹೋಗಿ ಪಾಪ್ ಕರ್ನ್ ತಂದಿದ್ದು, ಕತ್ತಲ ಸಿನಿಮಾ ಹಾಲ್ನಲ್ಲಿ ಎಡವಿ ತಡವರಿಸಿದ್ದು... ಹೀಗೆ... ಸಿನಿಮಾ ಮುಗಿದ ನಂತರ ಇನ್ನೂ ಸಮಯವಿದ್ದದ್ದರಿಂದ ಮತ್ತೆ ನಮ್ಮ ಪ್ರಯಾಣ ಹುಸೇನ್ ಸಾಗರ್ ಕಡೆ ಹೊರಡ್ತು. ಅಲ್ಲಿ ನಾವು ಎಲ್ಲಾ ಸೇರಿ ಜೋಳ, ಐಸ್ಕ್ರೀಮ್ ತಿಂದು ಸಕ್ಕತ್ ಮಜಾ ಮಾಡಿದ್ವಿ. ನಾನು ಇಲ್ಲಿ ನನ್ನ ಎಲ್ಲಾ ದಿನಗಳನ್ನ ನನ್ನ ದಿನಚರಿಯಲ್ಲಿ ಬರೀಬೇಕು ಅಂತ ಅಂದುಕೊಂಡಿದ್ದೆ. ಆದರೆ ಬರೀತಾ ಇಲ್ಲ, ಯಾಕೇ ಅಂದ್ರೆ ಅದನ್ನ ಬರೀತಾ ಹೋದ್ರೇ ನನ್ನದೇ ಒಂದು ಕಾದಂಬರಿ ಬಿಡುಗಡೆ ಮಾಡ್ಬೇಕಾಗತ್ತೇನೋ...

ನಾನು ಅಲ್ಲಿ ಯಾವ ಪ್ರೇಕ್ಷಣೀಯ ಸ್ಥಳಗಳಿಗೂ ಹೋಗಿರಲಿಲ್ಲ. ಹೀಗಿರೋವಾಗ ಇದ್ದಕ್ಕಿದ್ದಂತೇ ನಾನು, ಶಂಕರ್ ಮತ್ತೆ ಅಮಿತ್ ಸೇರಿ ಮತ್ತೊಂದು ವಾರಾಂತ್ಯದಲ್ಲಿ ಮಂತ್ರಾಲಯಕ್ಕೆ ಹೊಗೋ ಕಾರ್ಯಕ್ರಮ ಹಾಕ್ಕೋಂಡ್ವಿ. ಅಮಿತ್ ತನ್ನ ಊರಿಗೆ ಹೋಗಬೇಕಿದ್ದಿದ್ದರಿಂದ ನಮ್ಮಜೊತೆ ಬರಲಿಲ್ಲ. ನಾನು ಮತ್ತೆ ಶಂಕರಮೂರ್ತಿ ಮಂತ್ರಾಲಯಕ್ಕೆ ಹೊರಡುವುದು ನಿಶ್ಚಯವಾಯ್ತು ಮತ್ತೆ ಏ.ಪಿ.ಸ್.ಟಿ.ಡಿ.ಸಿ ಯ ಮೂಲಕ ಮಂತ್ರಾಲಯ ಪ್ರವಾಸದ ಕಾರ್ಯಕ್ರಮ ಶುರುವಾಯ್ತು. ಶನಿವಾರದಂದು ಅವರದೇ ಆದ ಒಂದು ಮಿನಿ ಬಸ್ ನಲ್ಲಿ ನಾನು ಮತ್ತೆ ಶಂಕರ್ ಇಬ್ಬರೂ ಹೊರಟಿದ್ವಿ, ನಮ್ಮ ಜೊತೆ ನಮ್ಮ ಗುಂಪಿನ ಮಿಕ್ಕ ಸದಸ್ಯರಿಲ್ಲದ ಕಾರಣ ಪ್ರಯಾಣ ಬಹಳ ಬೇಸರ ಬರಿಸ್ತಾಇತ್ತು. ಆದ್ದರಿಂದ ನಮ್ಮ ಸಹಪ್ರಯಾಣಿಗರ ಬಗ್ಗೆ ನಾವು ಮಾತಾಡಿಕೊಳ್ತಾ ನಗುನಗುತ್ತಾ ಪ್ರಯಾಣ ಮುಂದುವರಿಸ್ತಾ ಇದ್ವಿ. ಅದೊಂದು ಪ್ಯಾಕೇಜ್ ಟೂರ್ ಆದದ್ದರಿಂದ ಕೇವಲ ಮಂತ್ರಾಲಯವಲ್ಲದೇ ಮತ್ತಿತರ ಸ್ಥಳಗಳನ್ನೂ ನೋಡ್ಕೊಂಡು ವಾಪಾಸ್ ಬಂದ್ವಿ.

ನನಗೆ ಅಲ್ಲಿವಾತಾವರಣ ದಿನ ಕಳೆದಂತೆ ಬೇಸರ ತರಲಾರಂಭಿಸಿತ್ತು. ಕೆಲಸಮಾಡಲು ಅಲ್ಲಿ ಹೆಚ್ಚಿನ ಅವಕಾಶವಿಲ್ಲದ ಕಾರಣ ನಾನು ಅಲ್ಲಿಂದ ಹೊರಟು ಮರಳಿ ಬೆಂಗಳೂರಿಗೆ ಬರುವ ಯೋಜನೆ ಹಾಕತೊಡಗಿದೆ. ನಾನು ಅಲ್ಲಿ ಇನ್ನೂ ಕೆಲವು ದಿನ ಇರಬಹುದು ಅನ್ನೋಒಂದು ಲೆಕ್ಕಾಚಾರದ ಮೇಲೆ ನಾನು ಅಲ್ಲಿಯ ಒಂದು ಕಂಪ್ಯೂಟರ್ ಕ್ಲಾಸಿಗೆ ಶಿಲ್ಪಜೊತೆ ಹೋಗಿ ಸೇರಿದ್ದೆ, ನಿಮಗೆ ಶಿಲ್ಪಾಳ ಪರಿಚಯ ಮಾಡಿಕೊಟ್ಟಿಲ್ಲ ಅಲ್ವಾ !!! ಆಮೇಲೆ ಅವಳನ್ನ ಇಲ್ಲಿ ಪರಿಚಯಿಸ್ತೀನಿ. ಹಾಗಾಗಿ ನಾನು ಬೆಂಗಳೂರಿಗೆ ಮರಳಿಬರೊ ವಿಚಾರನ್ನ ಸ್ವಲ್ಪ ತಿಂಗಳಮಟ್ಟಿಗೆ ಮುಂದೂಡಿದ್ದೇ ಈ ಕ್ಲಾಸಿನ ವಿಚಾರಕ್ಕಾಗಿ. ಇದೆಲ್ಲದರ ನಡುವೆ ನನ್ನ ಸಹೋದ್ಯೋಗಿ ಮತ್ತೆ ಮಿತ್ರರೂ ಆದ ಶಿವರಾಜ್ ಅವರಿಗೆ ಕಂಕಣಭಾಗ್ಯ ಕೂಡಿಬಂದಿತ್ತು. ಹೌದು, ಅವರಿಗೆ ಮದುವೆ... ಆ ಸಂಭ್ರಮದಲ್ಲಿ ನಾನೂ ಭಾಗಿಯಾಗುವ ಉತ್ಸಾಹದಲ್ಲಿ ಅವರಿಗೆ ಮದುವೆಯ ಆಮಂತ್ರಣಪತ್ರವನ್ನ ನಾನೆ ತಯಾರಿಸಿ ಕೊಟ್ಟಿದ್ದೆ, ನನ್ನ ಬಳಿ ಮುದ್ರಣಯಂತ್ರ ಇಲ್ಲ ಸ್ವಾಮೀ, ಅಂತರ್ಜಾಲದಲ್ಲಿ ಹುಡುಕಿ ಯಾವುದೋ ಒಂದು ಒಳ್ಳೆಯ ಚಿತ್ರವನ್ನ ಕದ್ದು ಅದರಮೇಲೆ ಕನ್ನಡದಲ್ಲಿ ಆಮಂತ್ರಣ ಪತ್ರವನ್ನ ಬರೆದುಕೊಟ್ಟಿದ್ದೆ. ೧೩-ಮೆ-೨೦೦೮ ಈ ತಾರೀಖು ಶಿವರಾಜ್ ಮತ್ತು ಶಿವಲೀಲ ಅವರ ಮದುವೆ ಸಮಾರಂಭ ಧಾರವಾಡದಲ್ಲಿ ಎಂದು ನಿಶ್ಚಯವಾಯಿತು. ಅದಕ್ಕೆಂದೇ ನಾನು ಮತ್ತೆ ನಮ್ಮ ಮ್ಯಾನೇಜರ್ ಹೈದರಾಬಾದಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ವಿ. ದಾರಿಯ ಖರ್ಚಿನಲ್ಲಿ ಅರ್ಧ ನನ್ನ ಮ್ಯಾನೇಜರ್ರೇ ಹಾಕಿಕೊಂಡ್ರು. ಹವಾನಿಯಂತ್ರಿತ ರೈಲ್ವೇಬೋಗಿಯಲ್ಲಿ ಧಾರವಾಡಕ್ಕೆ ಬಂದು ಸೇರಿದ್ವಿ. ಶಿವರಾಜ್ ಅವರ ಮನೆಯವರಿಂದ ಆಥಿತ್ಯ ಪಡೆದುಕೊಂಡು ನನ್ನ ಮ್ಯಾನೇಜರ್ ಕಾದಿರಿಸಿದ್ದ ಹೋಟೇಲ್ ರೂಮಿಗೆ ಬಂದೆ. ಅಲ್ಲಿ ನಾನು ಕರುನಾಡಿಗೆ ಬಂದ ಖುಷಿ ಒಂದುಕಡೆಯಾದರೆ ನನ್ನ ಮನೆಯವರೊಂದಿಗೆ, ಗೆಳೆಯರೊಡನೆ ಹೆಚ್ಚುಹೊತ್ತು ಮಾತನಾಡಬಹುದು ಅನ್ನೋದು ಮತ್ತೊಂದು ಸಂಭ್ರಮ. ಮದುವೆ ಮುಗಿಸಿ ನಂತರ ಮರಳಿ ನನ್ನ ಬೆಂಗಾಡು ಹೈದರಾಬಾದಿಗೆ ಮರಳಿ ಬಂದೆ.

ಈಗ ಸ್ವಲ್ಪ ಶಿಲ್ಪಾಳ ಪರಿಚಯ ಮಾಡಿಕೊಳ್ಳೋಣ, Charming, innocent and decent girl ನನ್ನ ಗೆಳತಿ ಶಿಲ್ಪ. ಒಬ್ಬಳೇ ಕರ್ನಾಟಕದಿಂದ ಇಷ್ಟುದೂರದ ಹೈದರಾಬಾದಿಗೆ ಬಂದಿದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು ಎಂದು ಪಣತೊಟ್ಟಿದ್ದ ಛಲಗಾತಿಆಕೆ. ಸ್ವಲ್ಪ ವಿದೇಷೀತಿಂಡಿಗಳ ವ್ಯಾಮೋಹ ಜಾಸ್ತಿನೇ ಇತ್ತು ಅವಳಿಗೆ, ಆದರೂ ಕೋಮಲ ಮನಸ್ಸು. ಭವಿಷ್ಯದ ಕನಸನ್ನ ಕಟ್ಟಿ ಅದನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟವಳು. ಕಂಪ್ಯೂಟರ್ ಕೋರ್‍ಸಿಗೆ ಅವಳಜೊತೆಯಲ್ಲಿ ಹೋಗಬೇಕಿದ್ದ ನಾನು ಅನಿವಾರ್ಯಕಾರ್‍ಅಣಗಳಿಂದ ಆ ಅವಕಾಶವನ್ನ ಕಳೆದುಕೊಂಡೆ. ತನ್ನ ಗೆಳತಿಯರೊಡನೆ ಮನೆ ಮಾಡ್ಕೊಂಡು ತಾನೇ ಅಡುಗೆಕೂಡಾ ಮಾಡ್ತಾ, ಕೆಲಸಕ್ಕೂ ಬಂದು, ಕ್ಲಾಸಿಗೂ ಹೋಗ್ತಾ ಇದ್ಳು. ಅವಳ ಗೆಳೆತನದ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೀತೀನಿ, ಯಾಕಂದ್ರೆ ಇಲ್ಲಿ ಅವಳ ಮತ್ತೆ ವಿಜಯ್ ನ ಪರಿಚಯ ಮಾಡಿಕೊಡ್ತಾಇದ್ರೆ ಪುಟಗಳೇ ಸಾಲೋದಿಲ್ಲ.

ಹೀಗೇ ನಾನು ನನ್ನ ಜೀವನದ ಪಯಣ ಸಾಗುತ್ತಾ ಇರೋವಾಗ ಒಂದುದಿನ ನಮ್ಮ ಮ್ಯಾನೇಜರ್ ಮತ್ತೆ ನಮ್ಮ ಆಫೀಸಿನ ಹೆಚ್ ಆರ್ ಆದ ಕಾರ್ತಿಕ್ಗೂ ಮಾತಿನ ಚಕಮಕಿ ನಡೆದು ನಮ್ಮ ಮ್ಯಾನೇಜರ್ ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ರು. ಅಲ್ಲಿಂದ ಮುಂದೆ ನಡೆಯುವ ಬೆಳವಣಿಗೆಯನ್ನ ಊಹಿಸಿಕೊಂಡು ನನಗೆ ಮತ್ತೆ ಶಿವರಾಜಿಗೆ ನಡುಕ ಶುರು ಆಗಿತ್ತು. ಮೊದಲೇ ಹೈದರಾಬಾದಿನಿಂದ ಹೆಚ್ಚಿಗೆ ಏನೂ ವಹಿವಾಟು ಆಗುತ್ತಿರಲಿಲ್ಲ, ಅದರ ಜೊತೆಗೆ ಈ ಘಟನೆ... ನಾವು ಮನಸ್ಸಿನಲ್ಲೇ ಮುಂದಿನ ಬೆಳವಣಿಗೆ ಬಗ್ಗೆ ಊಹಿಸಿಕೊಂಡಿದ್ವಿ.


ಹೈದರಾಬಾದಿನಲ್ಲಿ ಸಂತಸ ತಂದ ಮಳೆ:
ಆವತ್ತೊಂದು ದಿನ ನಾನು ಮತ್ತೆ ಶಿಲ್ಪಾ ನಮ್ಮ ಕಂಪ್ಯೂಟರ್ ಸೆಂಟರ್ನಿಂದ ಮನೆಗೆ ಹೊರಟಿದ್ವಿ, ದಾರಿಮೇಲೆ ದಟ್ಟವಾದ ಮೋಡ ಇದಿದ್ದ್ರಿಂದ ಮಳೆ ಬಂದೇ ಬರತ್ತೆ ಅಂತ ಗೊತ್ತಿತ್ತು. ಆದರೂ ಮಳೆ ಬರೋದಕ್ಕೆ ಮುಂಚೆ ಹೋಗಿ ಮನೆ ಸೇರ್ಕೊಳ್ಳೊಣ ಅಂತ ಭಂಡಧೈರ್ಯ ಮಾಡಿ ಮನೇಕಡೆಗೆ ಹೊರಟಿದ್ವಿ. ನಾವಂದುಕೊಂಡಿದ್ದ ಹಾಗೇ ದಾರಿಯಲ್ಲಿ ಮಳೆ ಬಂದೇ ಬಿಡ್ತು. ಮಳೆಯ ಪ್ರಾರಂಭದಲ್ಲಿ ವಿಧಿಯಿಲ್ಲದೇ ನೆನೆದ್ವಿ, ಆದರೆ ಆಮೇಲೆ ಆ ಮಳೆಹನಿಗಳಲ್ಲೂ ಒಂದು ರೀತಿಯ ಖುಷಿ ಸಿಕ್ತು. ಆ ಕ್ಷಣದಲ್ಲಿ ನಾವಿಬ್ಬರೂ ಚಿಕ್ಕ ಮಕ್ಕಳಾಗ್ಬಿಟ್ಟಿದ್ವಿ... ದಾರಿಯಲ್ಲಿ ಮ್ಯಕ್ಡೋನಾಲ್ಡ್ಸ್ ಗೆ ಹೋಗಿ ವಿದೇಷೀ ತಿಂಡಿ(ಬರ್ಗರ್) ತಿಂದು ಹರಟೆ ಹೊಡಿತಾ ಮತ್ತೆ ನಮ್ಮ ಪ್ರಯಾಣ ಮುಂದುವರಿಸಿದ್ವಿ, ಜೊತೆ ಜೊತೆಯಲ್ಲೇ ಮಳೆಕೂಡಾ ತನ್ನ ರೌದ್ರ ರೂಪವನ್ನ ತೋರಿಸ್ತಾನೇ ಇತ್ತು. ಹಾಗೂ ಹೀಗೂ ಶಿಲ್ಪನ್ನ ಅವಳ ಮನೆಗೆ ಬಿಟ್ಟು ನಾನು ನನ್ನ ಮನೆ ದಾರಿ ಹಿಡಿದು ಹೊರಟೆ. ಮನೆಗೆಬಂದು ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ ರಾಗಿ ಅಂಬಲಿ ಕುಡಿದು ನನ್ನ ಹೊದಿಕೆ ಹೊದ್ದುಕೊಂಡು ಮಲಗಿದಾಗ ಸಿಕ್ಕ ಸಂತೋಷ... ಅಬ್ಭಾ !!! ಅದನ್ನ ಇಲ್ಲಿ ವಿವರಿಸೊದಕ್ಕೆ ಪದಗಳು ಸಿಕ್ತಾ ಇಲ್ಲ.

ಮನಸ್ಸಿನಲ್ಲಿ ನಾನು ಹೈದರಾಬಾದಿನಲ್ಲಿ ಉಳಿವ/ ಮರಳಿ ಹಿಂದಿರುಗುವ ಪ್ರಶ್ನೆಗಳ ಸರಮಾಲೆ ಸುಳಿತಾಇರೋ ಹಾಗೇ ನನ್ನ ಸಹೋದ್ಯೋಗಿ ಬಂದು ನಮ್ಮ ಮೇಡಂ ಮೀಟಿಂಗೆ ಕರೀತಾ ಇದಾರೆ, ಸೋಮವಾರ ನಾವಿಬ್ಬ್ರೂ ಬೆಂಗಳೂರಿಗೆ ಹೋಗಬೇಕು ಅಂತ ಹೇಳಿದ್ರು. ಆ ವಿಚಾರ ಕೇಳಿ ಮನ್ಸಲ್ಲಿ ಏನೊ ಖುಷಿಆದ್ರೂ ಹಾಗೇ ಒಂದ್ ಸ್ವಲ್ಪ ಭಯ ಆಯ್ತು. ಖುಷಿ ನಾನು ಮರಳಿ ನನ್ನ ನಾಡಿಗೆ ಹೋಗ್ತಾಇದೀನಿ ಅಂತ, ಭಯ ಎಲ್ಲಿ ಏನಾಗತ್ತೋ ಅಂತ. ನನ್ಗೆ ನನ್ನ ಸಹೋದ್ಯೋಗಿ ಸಮಾಧಾನ ಹೇಳಿದ್ರೆ ನಾನು ನನ್ನ ಸಹೋದ್ಯೋಗಿಗೆ ಸಮಾಧಾನ ಹೇಳ್ತಾಇದ್ವಿ. ಆದ್ರೆ ಇಬ್ಬರ ಮನಸ್ಸಲ್ಲೂ ಎಲ್ಲೊ ಒಂದು ರೀತಿ ಆತಂಕ ಇದ್ದೇ ಇತ್ತು.

ನಾನು ಮಿಕ್ಕ ಎರಡುದಿನ ತಡಮಾಡೋದು ಬೇಡ ಅಂತ ಆವತ್ತೇ ರಾತ್ರಿ ಟಿಕೇಟ್ ಬುಕ್ಮಾಡ್ಸಿ ರಾತ್ರಿ ಹೊರಡೋಕ್ಕೆ ಸಿದ್ಧತೆ ಮಾಡ್ಕೊಂಡೆ. ರಾತ್ರಿ ಪ್ರಯಾಸದಾಯಕವಾದ ಪ್ರಯಾಣ ಮಾಡಿ, ಬೆಳಿಗ್ಗೆ ನಮ್ಮ ಕನ್ನಡವನ್ನ ಕರುನಾಡನ್ನ ನೋಡಿದ್ಮೇಲೇ ನನ್ಗೆ ಸ್ವಲ್ಪ ಸಮಾಧಾನ, ಸಂತೋಷ ಆಗಿದ್ದು. ನನ್ನ ಅಪಾರ ಮಿತ್ರಮಂಡಳಿಗೆ ಮೆಸ್ಸೇಜ್ ಮಾಡಿ ನಾನು ಬಂದಿರೋದನ್ನ ಹೇಳಿದೆ. ಎರಡುದಿನ ಅದು ಹ್ಯಾಗೆ ಹೋಯ್ತೂ ಗೊತ್ತೇ ಆಗ್ಲಿಲ್ಲ...

ಇನ್ನು ನಾನು ಕಾಯ್ತಾ ಇದ್ದ ದಿನ ಬಂದೇ ಬಿಡ್ತು, ಸೋಮವಾರ ನಮ್ಮ ಹೊಸಾ ಡೈರೆಕ್ಟರ್ ಮತ್ತೆ ಹೊಸಾ ಹೆಡ್ ಜೊತೆ ಇದ್ದ ಮೀಟಿಂಗೊಸ್ಕರ ನಾನು ನನ್ನ ಸಹೋದ್ಯೋಗಿ ಇಬ್ಬರೂ ನಮ್ಮ ಬೆಂಗಳೂರಿನ ಕಾರ್ಯಾಲಯಕ್ಕೆ ಬಂದ್ವಿ. ಮೊದಲನೇ ಸುತ್ತಿನಲ್ಲಿ ನಮ್ಮ ಹೊಸಾ ಡೈರೆಕ್ಟರ್ (ಖಂಡಿತಾ ಇದು ಸಿನಿಮಾ ಅಲ್ಲ ರೀ...) ಪಾಪ ಶಿವರಾಜ್ ಅವರಿಗೆ ಸಕ್ಕತ್ತಾಗಿ ಕ್ಲಾಸ್ ತೊಗೋಂಡಿದ್ರು. ಶಿವರಾಜಿಗೇ ಹಾಗಾದ್ರೆ ಇನ್ನು ನನ್ನ ಕಥೆಏನಪ್ಪಾ ಅಂತ ಹೆದರಿಕೊಂಡೇ ಮಾತಾಡಿಸೊಕೆ ಹೋದೆ. ಅಲ್ಲಿ ನಾನು ಅಂದುಕೊಂಡಿದ್ದ ಹಾಗೇ ಮೂರುಜನ ದಿಗ್ಗಜರು ಆಸೀನರಾಗಿದ್ರು. ನನಗೆ ಅಲ್ಲಿ ಮತ್ತೊಮ್ಮೆ ಸಂದರ್ಶನ ಮಾಡಿದ್ರು. ಇಲ್ಲಿ ಆ ದಿಗ್ಗಜರು ಯಾರು ಅನ್ನೋದನ್ನ ಹೇಳ್ತಾಇಲ್ಲ. ನನ್ನ ಸಂದರ್ಶನದ ಮುಂದಿನ ಬೆಳವಣಿಗೆ ಬಗ್ಗೆ ನನಗೆ ಸ್ವಲ್ಪ ಅನುಮಾನ ಮೊದಲಿಂದಲೇ ಇತ್ತು. ಅದಕ್ಕೆ ಸರಿಯಾಗಿ ನಾನು ಮರಳಿ ಬೆಂಗಳೂರಿಗೆ ಬರಬೇಕಾಯಿತು. ಅಲ್ಲಿ ನನಗೆ ಹೈದರಾಬಾದಿನ ಬ್ರ್ಯಾಂಚನ್ನ ಮುಚ್ಚಲಿರುವ ನಿರ್ಧಾರದಬಗ್ಗೆ ಸ್ಪಷ್ಟವಿವರ ಸಿಕ್ಕಿತು.

ಮೀಟಿಂಗ್ ಮುಗಿಸಿ ಅಲ್ಲಿ ನಾನು ಮರಳಿ ಬೆಂಗಳೂರಿಗೆ ಬರೋ ವಿಚಾರ ಕೇಳಿ ಒಂದು ರೀತಿ ಖುಷಿ ಆದ್ರೆ ಮತ್ತೋಂದುಕಡೆ ನನ್ಗೇ ತಿಳಿದೇಇರೋಹಾಗೆ ಬೇಜಾರಾಗ್ತಾ ಇತ್ತು. ಮರಳಿ ಬೆಂಗಳೂರಿಗೆ ಬರೋ ವಿಚಾರ ಏನೋ ಖುಷಿನೇ, ಆದ್ರೂ ನಾನು ನನ್ನ ಹೈದರಾಬಾದಿನ ದಿನಗಳನ್ನ, ಜನಗಳನ್ನ, ಆಪ್ತಮಿತ್ರರನ್ನ, ಆ ಕ್ಷಣಗಳನ್ನ, ನಾನೇ ಬಾಡಿಗೆಗೆ ಪಡೆದ ಮನೆಯನ್ನ, ಇದೆಲ್ಲಾ ಬಿಟ್ಟು ಮರಳಿಬರೋ ವಿಚಾರ ಕೇಳಿ ನನ್ಗೆ ಜೀರ್ಣಿಸ್ಕೊಳೊಕ್ಕೆ ಕಷ್ಟ ಆಗ್ತಾ ಇತ್ತು.

ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲಸಕ್ಕೆ ಅಂತ ಬೆಂಗಳೂರನ್ನ ಸೇರಿ ಮತ್ತೆ ಅಲ್ಲಿಂದ ಕೆಲಸದ್ಮೇಲೇ ಹೈದರಾಬಾದಿಗೆ ಬಂದು ಇಲ್ಲಿ ಕೇವಲ ೫ ತಿಂಗಳೋ ಅಥವ ೬ ತಿಂಗಳೋ ಇದ್ದರೂ... ನಾನು ನನ್ನ ಇಡೀ ಜೀವನ ಮರೀದೇ ಇರೋಹಾಗೆ ನನ್ನ ಹೈದರಾಬಾದಿನ ದಿನಗಳು ನನ್ನನ್ನ ಆವರಿಸಿಬಿಟ್ಟಿದ್ವು.

ಒಂದು ಕ್ಷಣದಲ್ಲಿ ಆ ಸುದ್ದಿ ಕೇಳಿ ಸಂತಸಪಟ್ಟರೂ ಮರುಘಳಿಗೆಯಲ್ಲಿ ಅಷ್ಟೇ ಬೇಸರವಾಯ್ತು. ನನ್ನ ಆ ೫ ತಿಂಗಳ ಒಂಟಿತನವನ್ನ ದೂರ ತಳ್ಳಿದ್ದ ನನ್ನ ಗೆಳೆಯರನ್ನ ಬಿಟ್ಟು ಬರೋಕೆ ತುಂಬಾ ಬೇಸರವಾಗ್ತಾ ಇತ್ತು. ಅಲ್ಲಿ ನಾನೇ ಮಾಡಿದ್ದ ಬಾಡಿಗೆ ಮನೆ, ನನ್ನದೇ ಆದ ಸಾಮ್ರಾಜ್ಯವನ್ನ ಬಿಟ್ಟು ಬರಬೇಕಲ್ಲಾ, ನನಗಿದ್ದ ಸ್ವಾತಂತ್ರ್ಯವನ್ನ ಕಳೆದುಕೊಳ್ಳಬೇಕಲ್ಲಾ, ಎಂದೆಲ್ಲಾ ನನ್ನ ಮನಸ್ಸು ನನಗೆ ಹೇಳುತ್ತಲೇ ಇತ್ತು.

ಆದರೂ ಬೇರೆ ದಾರಿ ಇಲ್ಲದೇ ತುರಾತುರಿಯಲ್ಲಿ ಮನೆ ಖಾಲಿ ಮಾಡೋ ಕಾಯಕಕ್ಕೆ ಕೈ ಹಾಕಿದೆ. ಶಿವರಾಜ್ ಕೂಡಾ ಇದರಲ್ಲಿ ತಮ್ಮ ಸಹಾಯ ಹಸ್ತ ನೀಡಿದ್ರು ಅನ್ನೊದನ್ನ ವಿಷೇಶವಾಗಿ ಹೇಳಬೇಕಿಲ್ಲ.

Wednesday, June 4, 2008

ನನ್ನ ಅಮ್ಮ

೦೪-ಜೂನ್-೨೦೦೮

ನೆನ್ನೆ ತಾನೆ ಅಪ್ಪನ ಮಾಸಿಕ ಇತ್ತು, ಅದಕ್ಕೆಂದು ಮೊನ್ನೆ ರಾತ್ರಿ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟಿದ್ದ ನನ್ನ ಪಕ್ಕದಲ್ಲಿ ಸರಿ ಸುಮಾರು ೩೦ರಿಂದ ೪೦ರ ಒಳಗಿನ ಮಹಿಳೆ ಕುಳಿತಿದ್ದರು. ನೋಡಲಿಕ್ಕೆ ಅವಿದ್ಯಾವಂತೆಯಂತೆ ಕಾಣಿತ್ತಿದ್ದ ಆ ಮಹಿಳೆ ಬಸ್ಸನ್ನು ಹತ್ತಿದಾಗಿನಿಂದಾ ಏನಾದರೊಂದು ತಿಂಡಿಯನ್ನ ತಿನ್ನುತ್ತಲೇ ಇದ್ದರು.

ಪ್ರಯಾಣ ಇನ್ನೂ ಬಿಡದಿಯನ್ನೂ ಮುಟ್ಟಿರಲಿಲ್ಲ, ಆಕೆಗೆ ವಾಂತಿ ಶುರುವಾಯಿತು. ಒಬ್ಬೊಂಟಿ ಮಹಿಳೆ, ಅದರಜೊತೆಯಲ್ಲಿ ಆಕೆಗೆ ಕಾಡುತ್ತಿದ್ದ ಅನಾರೋಗ್ಯ. ಸುಸ್ತಾಯ್ತಾ ? ನೀರುಬೇಕಾ ? ಸ್ವಲ್ಪ ಸುಧಾರಿಸ್ಕೊ !!! ನಿದ್ದೆಮಾಡು !!! ಹೀಗೆಲ್ಲಾ ಹೇಳುವುದಕ್ಕೆ ಅಲ್ಲಿ ಆಕೆಯ ಸಂಭಂದಿಗಳು ಯಾರೂ ಇರಲಿಲ್ಲ. ಅದರ ಬದಲಿಗೆ ಏನು ಹೆಂಗಸೋ ಏನೋ, ಮೈ ಗೆಲ್ಲಾ ಹಾರಿಸ್ತಾಳೆ, ಏಯ್, ಹೋಗಿ ಹಿಂದಿನ ಸೀಟಿನಲ್ಲಿ ಕೂತ್ಕೋ, ಅಲ್ಲಿ ಹೋಗಿ ವಾಂತಿ ಮಾಡ್ಕೊ !!! ಹೀಗೆ ಎಲ್ಲಾ ಬೈಗುಳಗಳ ಸುರಿಮಳೆ ಪ್ರಾರಂಭಿಸಿದ್ರು. ನನಗೆ ಆಕೆಯ ಮೇಲೆ ಮರುಕ ಉಂಟಾಗಿ ನನ್ನಬಳಿ ಇದ್ದ ನೀರನ್ನ ಸ್ವಲ್ಪ ಕುಡಿಯಲಿಕ್ಕೆ ಕೊಟ್ಟೆ. ಆಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ತುಂಬಿತ್ತು. ಒಂಟಿತನದಲ್ಲಿ ಇರುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು.

ನೀರು ಕುಡಿದ ಆಕೆ ನನ್ನ ಪಕ್ಕದಲ್ಲೇ ಮುದುಡಿ ಮಲಗಿದಳು. ಆಕೆಗೆ ಏನು ಸಮಸ್ಯೆ ಇತ್ತೋ ಏನೋ, ಯಾವ ಕಾರಣಕ್ಕಾಗಿ ಮೈಸೂರಿನ ಪ್ರಯಾಣ ಬೆಳಸಿದ್ದಳೋ ಏನೋ, ಒಂದಲ್ಲಾ ಒಂದು ದಿನ ನಾವೂ ಹೀಗೇ ಇದೇ ಪಾಡು ಅನುಭವಿಸಿರಬಹುದು. ಆಗಲೇ ನಮಗೆ ನಮ್ಮ ಆಪ್ತರು ನೆನಪಾಗುವುದು. ಇಂದಿನ ಪೀಳಿಗೆಗೆ ಇದರ ಆತಂಕವಿಲ್ಲ, ಏಕೆಂದರೆ ತಕ್ಷಣದ ನೆರವಿಗೆ ಒಂದು ಫೋನಾದರೂ ಮಾಡಬಹುದು ಕಾರಣ ಅವರ ಕೈನಲ್ಲಿ ಇರುವ ಮೊಬೈಲು. ಆದರೆ ಆಕೆಗೆ ಫೋನು ಕೊಟ್ಟರೂ ಆಕೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆ ತಿಳಿಯದು.

ಆ ಸಂಧರ್ಭದಲ್ಲಿ ನನಗೆ ನನ್ನ ಅಮ್ಮ ನೆನಪಾದಳು. ಮಗುವಿನ ಮನಸ್ಸಿನ ನನ್ನ ಅಮ್ಮನಿಗೆ ಹೊರಗಿನ ಪ್ರಪಂಚದ ಒಂದೇ ಒಂದು ಕಿಂಡಿಯೆಂದರೆ ದೂರದರ್ಶನ (ಕೇಬಲ್ ಕೂಡಾ ಇಲ್ಲ), ಅದರಲ್ಲಿ ಬರುವ ಧಾರಾವಹಿಗಳ ಪಾತ್ರಗಳನ್ನು ಕಂಡು ತನ್ನ ತಾನೇ ಮರೆಯುವಷ್ಟು ಮುಗ್ದೆ. ಅಯ್ಯೋ !!! ನೋಡು ನೋಡು ಅವ್ಳಿಗೆ ಎಲ್ಲಾ ಬೈತಾ ಇದಾರೆ, ಪಾಪ, ಅವ್ಳು ಯಾಕೆ ಅವ್ನ ಮನೆಗೆ ಹೋಗ್ಬೇಕಿತ್ತು ? ಸುಮ್ನೆ ಇರ್ಬಾರ್ದಿತ್ತಾ ??? ಎಂದೆಲ್ಲಾ ತಾನೇ ಆ ಧಾರಾವಾಹಿಯೊಳಗೆ ಇರುವ ಒಂದು ಪಾತ್ರವೆಂಬಂತೆ ಅದರಲ್ಲಿ ತಲ್ಲೀನಳಾಗಿಬಿಡುತ್ತಾರೆ. ಹೌದು, ಈಗ ಆಕೆಯ ದಿನದ ಹೆಚ್ಚಿನಪಾಲು ಸಮಯ ಕಳೆಯುವುದು ಆ ಮಾಂತ್ರಿಕ ಪೆಟ್ಟಿಗೆಯೊಡನೆಯೇ.

ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ನಾನು ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬರುತ್ತೇನೆ. ನನ್ನ ಸಹೋದರ/ಸಹೋದರಿಯರ ಪ್ರೀತಿ ಆಕೆಗೆ ಸಿಕ್ಕರೂ ನಾನು ನನ್ನ ಪಾಲಿನ ಪ್ರೀತಿಯನ್ನ ಆಕೆಗೆ ಕೊಡುವುದರಲ್ಲಿ ಮೋಸ ಮಾಡುತ್ತಿದ್ದೇನೆಬ ಅಳುಕು ನನ್ನಲ್ಲಿ. ಸಾಧ್ಯವಾದಷ್ಟು ಆಕೆಯೊಡನೆ ಮಾತನಾಡಿ ಆಕೆಯ ಒಂಟಿತನವನ್ನ ದೂರಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.

ಮುಲತಃ ಸ್ವಲ್ಪ ಹಠವಾದಿಯಾದ ನನ್ನ ಅಮ್ಮ ಸುಲಭವಾಗಿ ಯಾರ ಮಾತನ್ನೂ ಒಪ್ಪಿಕೊಳ್ಳುವುದಿಲ್ಲ. ಒಂದು ತಿಂಗಳಿನ ಹಿಂದೆ ಆಕೆಯನ್ನ ಬೊಂಬಾಯಿಗೆ ನನ್ನ ಅಕ್ಕ ಕರ್ಕೊಂಡು ಹೋಗಿದ್ರು, ಸ್ವಲ್ಪ ಮನಸ್ಸು ಹಗುರವಾಗ್ಲಿ ಅಂತ. ಆಕೆಯನ್ನ ನಾನೇ ಉಡುಪಿಗೆ ಬಿಟ್ಟು ಬಂದಿದ್ದೆ. ಉಡುಪಿಗೆ ಹೋಗೋವಾಗ ಸ್ವಲ್ಪ ನೆಮ್ಮದಿಯಾಗಿ ಪ್ರಯಾಣ ಮಾಡ್ಲಿ ಅಂತ ನನ್ನ ಹತ್ತಿರ ಇದ್ದ ಒಂದು ಐಪಾಡ್ ನಲ್ಲಿ ಹಾಡುಗಳನ್ನ ಆಕೆಗೆ ಕೇಳೋಕ್ಕೆ ಕೊಟ್ಟೆ. ಅಯ್ಯೋ !!!! ಇದು ನನ್ಗೆ ಆಗೋದಿಲ್ಲ ಮಾರಾಯಾ !!! ಕಿವಿಯಿಂದ ಬಿದ್ದು ಬಿದ್ದು ಹೋಗತ್ತೆ ಅಂತ ಆಕೆಯ ಕಂಪ್ಲೈಂಟು !!! ಕೊನೆಗೆ ನನ್ನ ಮೊಬೈಲಿನ ಇಯರ್ ಫೋನನ್ನ ಕೊಟ್ಟು ಆಕೆ ಹಾಡುಕೇಳೋಹಾಗೆ ಮಾಡಿದೆ. ಹಾಡು ಕೇಳ್ತಾ ನನ್ನ ಮುದ್ದು ಅಮ್ಮ ನಿದ್ದೆ ಮಾಡಿದ್ಳು. ನಿದ್ದೆಯಲ್ಲಿ ಒಂದು ಪುಟ್ಟ ಪಾಪು ನನ್ನ ಹತ್ತಿರ ಮಲಗಿರೋತರ ಕಾಣ್ತಾ ಇತ್ತು.

ಅಮ್ಮ, ನಿನ್ನ ಋಣ ನಾ ಹೇಗೆ ತೀರಿಸಲಿ !!!

Monday, May 26, 2008

ಕಟ್ಟೆ...

ಒಂದು ಕಾಲದಲ್ಲಿ ಭೋರ್ಗರಿದು ಉಕ್ಕಿ ಹರಿದಿದ್ದ
ಮನಸ್ಸಿನ ಭಾವನೆಗಳ ಕಡಲಲ್ಲಿ
ಇಂದು ಒಂದುರೀತಿಯ ಪ್ರಶಾಂತತೆ ಕಾಣುತ್ತಿದೆ...

ಮನದ ಪುಟದಿಂದ ಉಕ್ಕಿ ಉಕ್ಕಿ
ಬಂದಿದ್ದ ಭಾವನೆಗಳು ಇಂದು
ಮನದೊಳಗಡೆ ಅವಿತು ಬಚ್ಚಿಟ್ಟುಕೋಂಡಿವೆ

ಮನಸ್ಸಿನಿಂದ ಹರಿಬಿಡದೆ
ಅದಕ್ಕೆ ಅಣೇಕಟ್ಟನ್ನು ನಾನೇ ಕಟ್ಟಿದ್ದೇನೆ,
ಆ ಪ್ರವಾಹವನ್ನ ಹಿಡಿದಿಟ್ಟಿದ್ದೇನೆ...

ಪ್ರವಾಹದಲ್ಲಿ ನನ್ನ ಭಾವನೆಗಳು
ಎಲ್ಲಿ ಹರಿದು ಕಣ್ಣೀರ ಕಡಲೊಳು
ಬೆರೆತುಹೋಗುವುದೋ ಎಂಬ ಆತಂಕದಿಂದ

ನನ್ನ ಭಾವನೆಗಳ ಆಕ್ರಂದನವನ್ನ
ಪ್ರವಾಹದಲ್ಲಿ ಕೇಳಲಾರದೇ,
ಮನದಲ್ಲಿ ಬಚ್ಚಿಡಲೂ ಆಗದೇ

ಮುಂದೇನು ಮಾಡುವುದೆಂದು ಆಲೋಚಿಸುತ್ತಾ ದಿಗಂತದಲ್ಲಿ
ನನ್ನ ನೋಟವನ್ನ ನೆಟ್ಟಿದ್ದೇನೆ, ಅಣೇಕಟ್ಟೆಯ
ಬಾಗಿಲನು ತೆರೆಯುವ ದಿನಕ್ಕಾಗಿ ಕಾದು ಕುಳಿತಿದ್ದೇನೆ...

Friday, May 23, 2008

Bye bye ಆರ್ಕುಟ್

ಆರ್ಕುಟ್

ನನಗೆ ನನ್ನ lifeನಲ್ಲಿ ಇದ್ದ ಒಂದು ದೊಡ್ಡ ಕೊರತೆಯನ್ನ ನೀಗಿಸಿದ್ದ ನಿನಗೆ ನನ್ನ Thanks. ಇಷ್ಟುದಿನ ನನ್ನ ಜೊತೆಗಿದ್ದು ನನ್ನ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿದ್ದ ನಿನಗೆ ನನ್ನ Thanks. ಸ್ನೇಹಕ್ಕಾಗಿ ಹಾತೊರೆಯುತ್ತಿದ್ದ ನನಗೆ ಸ್ನೇಹಿತರ ಅಪಾರ ಸಾಗರವನ್ನ ಪರಿಚಯ ಮಾಡಿಕೊಟ್ಟ ನಿನಗೆ Thanks. ನಾನು ಇವತ್ತು ನಿರ್ಧಾರ ಮಾಡಿದ್ದೇನೆ. ನಿನ್ನಿಂದ ನಾನು ದೂರ ಹೋಗ್ಬೇಕು ಅಂತ. Yes !!! i am going away from you. ಆದರೆ ಹೋಗೋದಕ್ಕೆ ಮುಂಚೆ ನಿನ್ನೊಡನೆ ನಾನು ಕಳೆದ ದಿನಗಳನ್ನ ಇಲ್ಲಿ ಮೆಲುಕುಹಾಕಬೇಕು ಅನ್ನಿಸ್ತಾ ಇದೆ !!!

ನನಗೆ ನಿನ್ನ ಪರಿಚಯ ಮಾಡಿಕೊಟ್ಟಿದ್ದು ನನ್ನ ಹಳೇ Officeನ friend ಕೃಷ್ಣ ಕುಮಾರ್. ಆರಂಭ ಶೂರತ್ವ ಆನೋಹಾಗೆ ಅಲ್ಲಿ ಒಂದು communitieನ ಶುರುಮಾಡಿ ಆಮೇಲೆ ಅದನ್ನ ಕಡೆಗಾಣಿಸಿಬಿಟ್ಟ. ೮/೧೪/೦೬ ಅಂದರೆ ನಮ್ಮ Independence dayಗೆ ಸರಿಯಾಗಿ ಒಂದು ದಿನ ಬಾಕಿ ಇತ್ತು. ಆವತ್ತು ನನಗೆ ಮೊದಲನೇ Scrap ಬಂದದ್ದು. ಅಲ್ಲಿಂದ ಶುರುಆದ ನಿನ್ನ ಪರಿಚಯ ಇಲ್ಲೀವರೆಗೂ ಬಂದಿದೆ. ಇನ್ನು ಮುಂದೆ ನನಗೆ ಗೊತ್ತಿಲ್ಲ. ನಿನ್ನ ಪರಿಚಯ ೧೪ನೇ ತಾರೀಖೇ ಆದರೂ ನಿನ್ನ ಬಗ್ಗೆ ನನಗೆ ಜಾಸ್ತಿ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಸುಮಾರು ತಿಂಗಳುಗಳು ಕಳೆದಮೇಲೇ !!! ಒಬ್ಬರಿಂದ ಮತ್ತೊಬ್ಬರ ಪರಿಚಯ ಆಗ್ತಾ ನನ್ನ ಸ್ನೇಹದ ಸಂಕೋಲೆ ಬೆಳಿತಾ ಹೋಗ್ತಾ ಇತ್ತು. ಅಮರ, ಶಿಲ್ಪ, ಪ್ರಿಯ, ನವ್ಯ, ವಿಜಯ್, ವಿನೋದ್, ದೀಪ್ತಿ, ಅಮಿತ್, ಅರ್ಪಿತ, ಪುಷ್ಪ, ಜಯಶಂಕರ್, ಪ್ರಶಾಂತ್, ನಾರಾಯಣ, ತವಿಶ್ರೀ... ಹೀಗೇ ನನ್ನ ಆಪ್ತರ ಪಟ್ಟಿಮಾಡ್ತಾ ಹೋದರೆ ನನಗೆ ಒಂದು ದಿನ ಸಾಲೋದಿಲ್ಲ.

ಸ್ನೇಹ ಬೆಳಿತಾ ಇದ್ದಂತೆಲ್ಲಾ ನನ್ನಮೇಲೆ ಅದನ್ನು ನಿಭಾಯಿಸುವ ಜವಾಬ್ದಾರಿ ಬೆಳೀತಾ ಹೊಯ್ತು. ಪ್ರತೀ ದಿನ ಏನಾದರೊಂದು ಹೊಸತನ್ನು ನನ್ನ ಸ್ನೇಹಿತರಿಗೆ ಕೊಡಬೇಕೆನ್ನುವ ಹಂಬಲ. ಹಾಗಾಗಿ ಕೆಲವು ನುಡಿಮುತ್ತುಗಳನ್ನ, ಮತ್ತೆ ಕೆಲವು Jokes ಗಳನ್ನ ಪ್ರತೀ ದಿನ ನನ್ನ ಬಳಗಕ್ಕೆ Scrap ಮಾಡ್ತಾ ಇದ್ದೆ. ಕೆಲವೊಂದು ದಿನ ಅದು ಸಾಧ್ಯ ಆಗಲಿಲ್ಲ ಅಂದರೆ ಅದಕ್ಕೆ ಉತ್ತರವಾಗಿ ಸ್ನೇಹಿತರಿಂದ ಮತ್ತೋಂದು scrap ಬಂದಿರ್ತಿತ್ತು. ನನ್ನ ಬೆಂಗಳೂರಿನ Officeನಿಂದ ನನ್ನನ್ನು ಹೈದರಾಬಾದಿಗೆ ವರ್ಗಮಾಡಿದಾಗಲಂತೂ ನೀನು ನನ್ನ ಬೆನ್ನೆಲುಬಾಗಿ ನಿಂತಿದ್ದು ಮರೆಯೋಕೆ ಸಾಧ್ಯ ಇಲ್ಲ. ಆ ಗೊತ್ತಿಲ್ಲದ ನಾಡಿನಲ್ಲಿ ಕನ್ನಡಿಗರ ಪರಿಚಯಕ್ಕೆ ಮೂಲ ಕಾರಣ ನೀನೇ. ನಿನ್ನಿಂದಲೇ ನನಗೆ ಅಡುಗೆ ಹೇಳಿಕೊಡುವ ಟೀಚರ್ (ದೀಪ್ತಿ) ಪರಿಚಯ ಆದದ್ದು. ಸಾಹಿತ್ಯಾಭಿಮಾನಿ ಅಮರನ ಪರಿಚಯ ಆದದ್ದು, ಮನಸ್ಸಿನ ಮಾತ ಕೇಳುವ ಗೆಳೆಯರು ಸಿಕ್ಕಿದ್ದು, ನೊಂದ ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚೋ ಕೈಗಳುಸಿಕ್ಕಿದ್ದು, ನನ್ನ ಬ್ಲಾಗ್ ಗುರು ಸೋಮನ ಪರಿಚಯ ಆದದ್ದು. ನನ್ನ ಬ್ಲಾಗ್ ಬರೋದಕ್ಕೆ ಸ್ಪೂರ್ತಿ ಕೊಟ್ಟ ಗೆಳೆಯು ವಿಜಯ್ ಪರಿಚಯವಾದದ್ದೂ ನಿನ್ನಿಂದಲೇ !!! ನಾನು ನಿನ್ನ ಇಷ್ಟಾ ಪಟ್ಟು ದೂರ ಕಳಿಸ್ಥಾ ಇಲ್ಲ, ಕಷ್ಟಾಪಟ್ಟು ನಾನೇ ದೂರ ಹೋಗ್ತಾ ಇದೀನಿ.

ಒಂದು ಕಾಲದಲ್ಲಿ ನೀನು ನನಗೆ ಎಷ್ಟು ಸನಿಹವಾಗಿದ್ದೆ ಅಂದರೆ ನಾನು ನನ್ನ ನಿದ್ದೆಬಿಟ್ಟು ನಿನ್ನ ಮುದ್ದಾಡಿದ್ದಿದೆ, ನಿನಗೆ ಸಿಂಗಾರ ಮಾಡಿದ್ದಿದೆ. ಇನ್ನೂ ಚುಮು ಚುಮು ಬಿಸಿಲು ಮೂಡೋದಕ್ಕೂ ಮುನ್ನ ನಿನ್ನಲ್ಲಿ ಹುದುಗಿರುವ ಅಪಾರ ಮಿತ್ರವೃಂದಕ್ಕೆ ಬೆಳಗ್ಗೆ ಬೆಳಗ್ಗೆ Good morning scrap ಹಾಕ್ತಿದ್ದಿದೆ. ನಿನ್ನ ಬಗ್ಗೇನೇ ಒಂದು ಪದ್ಯ ರಚಿಸಿದ್ದೂ ಇದೆ... ನಮ್ಮ ಅಭಿರುಚಿಯನ್ನ ಬೇರೆಯವರಿಗೆ ತಿಳಿಸುವ ಮಾಧ್ಯಮ ನೀನೆ, ಆದರೆ ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಆರ್ಕುಟ್ ಅಂದರೆ ನೀನು boring ಅನ್ನಿಸ್ತಾ ಇದಿಯ. ಆರ್ಕುಟ್ ಇದ್ದರೆ ಅದರಲ್ಲಿ ಇರೋ ಅಪಾರ ಮಿತ್ರವೃಂದವನ್ನ ಮಾತಾಡಿಸಬೇಕು ಅನ್ಸತ್ತೆ. ಆದರೆ ಅದಕ್ಕೆ ಸಮಯ ಸಿಕ್ತಾ ಇಲ್ಲ. ಎಷ್ಟೋ ಕಾಣದಿರುವ ಹೃದಯಗಳು, ಎಷ್ಟೋ ಕಾಣದಿರುವ ಮುಖಗಗಳು, ಎಲ್ಲಾ ನನಗೆ ನಿನ್ನಿಂದ ಸಿಕ್ಕಿತ್ತು. ಆದರೆ ನಾನು ಅದನ್ನೆಲ್ಲಾ maintain ಮಾಡಲಾರೆ. ಆರ್ಕುಟ್- ನಿನ್ನ ಬಿಟ್ಟು ದೂರ ಹೋಗ್ತಾ ಇದೀನಿ.

ನಿನ್ನ ಮತ್ತೊಬ್ಬ ಗೆಳೆಯ ಅನ್ನೋ ಈ Blogನಿಂದ ಯಾವಾಗ ದೂರ ಹೋಗ್ತೀನೋ ಗೊತ್ತಿಲ್ಲ. ನಾನು ನಿನ್ನಿಂದ ದೂರ ಹೋಗೊದಕ್ಕೆ ಏನುಕಾರಣ ಅಂತ ಮಾತ್ರ ಕೇಳ್ಬೇಡ Please... ಅದಕ್ಕೆ ಉತ್ತರ ನನ್ನ ಹತ್ತಿರ ಇಲ್ಲ. ಮತ್ತೊಮ್ಮೆ ನಿನ್ನ ಬಳಿ ಹಿಂದಿರುಗಬೇಕು ಅನ್ನಿಸ್ತಾ ಇದೆ, ಆದರೆ ಮನಸ್ಸು "ಬೇಡ ಮತ್ತೆ ಆ ಕಡೆಗೆ ಹೊರಳಬೇಡ" ಅಂತ ಸಾರಿ ಸಾರಿ ಹೇಳ್ತಾ ಇದೆ. ನಿಮ್ಮಿಬ್ಬರಿಗೂ ಬೇಸರ ಮಾಡೋದಕ್ಕೆ ನನಗೆ ಇಷ್ಟ ಇಲ್ಲ, ನಿನ್ನ ವಾರಕ್ಕೊಮ್ಮೆ ಬಂದು ಮಾತನಾಡಿಸಿಕೊಂಡು ಹೋಗ್ತೀನಿ, ಆಯ್ತಾ ???

Bye Bye orkut... ಮತ್ತೋಮ್ಮೆ ನಿನ್ನ ನಾನು ಹುಡುಕಿಕೊಂಡು ಬಂದು ನನ್ನ ಜೀವನದಲ್ಲಿ ಮತ್ತೋಂದು ತಿರುವಿಗೆ ಹೊರಳುವಂತೆ ಮಾಡಬೇಡ.

Tuesday, May 20, 2008

ಎಚ್ಚರಿಕೆ !!!

೨೦-ಮೇ-೨೦೦೮

ಇವತ್ತಿಗೆ ನಮ್ಮ ಕಂಪನಿಯ ಮತ್ತೊಂದು Wicket ಬಿತ್ತು. ನಾನು ಕಳೆದ ಒಂದು ವರುಷ ಏಳು ತಿಂಗಳಿಂದಾ ಕೆಲಸಮಾಡುತ್ತಿರುವ ಕಂಪನಿಯ ಆಗು ಹೋಗುಗಳನ್ನ ಗಮನಿಸುತ್ತಾ ಬಂದಿದ್ದೇನೆ. ಒಂದು ಕಂಪನಿಯಲ್ಲಿ ಯಾವ ಯಾವ ರೀತಿಯ ವಾತಾವರಣ ಏನೆಲ್ಲಾ ಮಾಡಬಲ್ಲದು ಅನ್ನೋದಕ್ಕೆ ನಿದರ್ಶನ ಈ ಕಂಪನಿ. ರಾಜಕೀಯ ಅನ್ನೋದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಲ್ಲ. ರಾಜಕಾರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೇರಳವಾಗಿ ಹಬ್ಬಿದೆ. ಒಂದೇ ಸ್ಥಳದಲ್ಲಿದ್ದುಕೊಂಡು ಒಬ್ಬರಮೇಲೆ ಮತ್ತೋಬ್ಬರು ಕತ್ತಿಮಸೆಯುವುದು, ದ್ವೇಷಿಸುವುದು, ಹೊಟ್ಟೇಕಿಚ್ಚು ಪಡುವುದು ಏನೆಲ್ಲಾ ನಮ್ಮ ನಡೆಯುತ್ತಿರುತ್ತದೆ, ನಾವು ಅದನ್ನು ಗಮನಿಸಿ ನೋಡಬೇಕಷ್ಟೆ !!!!

ಯಾರದ್ದೋ ಕಿವಿಮಾತನ್ನು ಕೇಳಿಕೊಂಡು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಸೂತ್ರದ ಗೊಂಬೆಗಳಂತಿರುವ ಜನರು ಹಲವಾರು. ತಮ್ಮ ವೈಯುಕ್ತಿಕ ದ್ವೇಷದಿಂದ ಮತ್ತೊಬ್ಬರ ಜೀವನವನ್ನು ಕಷ್ಟಕ್ಕೀಡುಮಾಡುವವರು ಬಹಳಮಂದಿ. ನಮ್ಮ Office ನಲ್ಲೂ ಕೂಡಾ ಅಂತಹಾ ಒಬ್ಬ ವ್ಯಕ್ತಿ ನನ್ನ ಸಹೋದ್ಯೋಗಿಯು ಕೆಲಸ ಕಳೆದುಕೊಳ್ಳಲು ಮುಖ್ಯ ಕಾರಣ. ರೇಷ್ಮಾ ಕೆಲಸಕ್ಕೆ ಸೇರಿ ಇನ್ನು ಒಂದು ವರುಷವೂ ಆಗಿಲ್ಲ, ಆಗಲೇ ನಮ್ಮ Boss ಅನ್ನು ತನ್ನ ಮೋಡಿಯಲ್ಲಿ ಮರಳುಮಾಡಿ ಒಂದುರೀತಿಯಲ್ಲಿ ಪೂರ್‍ಣವಾಗಿ ತನ್ನ ಅಧಿಕಾರ ಸ್ಥಾಪನೆ ಮಾಡಲು ಹೊರಟಿರುವ ಧೀರ ಮಹಿಳಾಮಣಿ. ತನಗಾಗದವರನ್ನು ಒಂದಲ್ಲಾ ಒಂದು ಸಬೂಬು ಹೇಳಿಕೊಂಡು ಕೆಲಸದಿಂದ ತೆಗೆಯುತ್ತಾ ಬಂದಿರುವ ಈಕೆಯ ಪಾಪದ ಕೊಡ ಎಂದಿಗೆ ತುಂಬುತ್ತದೋ ಎಂದು ಮಿಕ್ಕ ಎಲ್ಲಾಮಂದಿ ಕಾಯ್ತಾ ಕುಳಿತಿದ್ದಾರೆ. ನಮ್ಮ ಈ ಅಳಲನ್ನು ನಮ್ಮ Boss ತನಕ ನಾವು ತಲುಪಿಸಲು ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವಳಮೋಡಿ ನನ್ನ ಬಾಸ್ ಮೇಲೆ ಪರಿಣಾಮ ಬೀರಿದೆ. ತನಗಾಗದವರನ್ನ ಏನಾದರೂ ಮಾಡಿ ಕೆಲಸದಿಂದ ತೆಗೆಸಿ ತನ್ನ ಬಳಗವನ್ನ ಸೇರಿಸಿಕೊಳ್ಳುವುದು ಆಕೆಯ ದುರುದ್ದೇಶ. ಏಲ್ಲರನ್ನೂ ತನ್ನ ಅಧೀನದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಕನ್ನಡಿಗರನ್ನು ಕಂಡರೆ ತಾತ್ಸಾರ, ತಮಿಳಿಗರಲ್ಲಿ ಅಪಾರ ಮಮಕಾರ. ನಾನು ಇಲ್ಲಿಗೆ ಸೇರಿದಮೇಲೆ ಸರಿ ಸುಮಾರು ೫ ಜನರನ್ನ ಕೆಲಸಬಿಡುವಂತೆ ಒತ್ತಡ ತಂದವಳು ಈಕೆ. ಏನೇ ಆದರೂ ಪ್ರತಿಯೊಬ್ಬರೂ ತನ್ನ ಮಾತನ್ನೇ ಕೇಳಬೇಕು, ತನಗಿಲ್ಲದ ಹಕ್ಕನ್ನು ಸಾಧಿಸಬೇಕೆಂಬ ಹಟ. ಆಕೆಯ ವಿರುದ್ದವಾಗಿರುವವರ ಮೇಲೆ ತನ್ನ ಕೆಂಗಣ್ಣು ಬಿಟ್ಟು ಅವರನ್ನು ಕೆಲಸದಿಂದ ತೆಗೆಸುವುದರಲ್ಲೇ ಒಂದು ರೀತಿಯ ಸಂತೃಪ್ತಿ ಅವಳಿಗೆ.

ನನ್ನ ಸಹೊದ್ಯೋಗಿಗಳಲ್ಲಿ ಕೆಲವರಿಗೆ ಅವರು ಮಾಡಿದ ಕೆಲಸಕ್ಕೆ Experience certificate ಕೂಡಾ ಸಿಗದಂತೆ ಮಾಡಿದ್ದವಳು ಈಕೆ. ಇಂದಿನ ಸರದಿ ನನ್ನ ಗೆಳೆಯ, ಸಹೋದ್ಯೋಗಿ ಹರೀಶನದು. ತನ್ನ ಹಿಂದಿನ ಕಂಪನಿಯಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ರಾತ್ರಿ ನಿದ್ರೆ ತಡವಾಗಿ ಬರುತ್ತಿದ್ದರಿಂದ ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಬರುವುದು ತಡವಾಗುತ್ತಿತ್ತು. ಅದಕ್ಕೆ ತಕ್ಕಂತೆ ಅವನು ರಾತ್ರಿ ತಡವಾಗಿ ಹೋಗುತ್ತಿದ್ದ. ಪ್ರತಿಯೊಂದು Customer call ಅನ್ನೂ attend ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಹೆಚ್ಚು ಕಡಿಮೆ ಒಂದು ವರುಷದಿಂದ ಕೆಲಸ ಮಾಡುತ್ತಿದ್ದ ಅವನಿಗೆ ನಮ್ಮ ರೇಷ್ಮಳನ್ನು ಕಂಡರೆ ಅಷ್ಟಕ್ಕಷ್ಟೇ... ಹಾಗಾಗಿ ಅವಳ ಕೆಂಗಣ್ಣಿಗೆ ಗುರಿಯಾಗಿದ್ದ. ನಾನು ಸೇರಿದ ಹೊಸದರಲ್ಲಿ ಇಲ್ಲಿನ ಉದ್ಯೋಗಿಗಳ ಸಂಖ್ಯೆ ೨೦ ಇದ್ದದ್ದು ಇಂದು ೯ಕ್ಕೆ ಬಂದಿಳಿದಿದೆ. ಪ್ರತೀ meeting ನಲ್ಲೂ ನಾವು ಅಷ್ಟುಜನರನ್ನ Interview ಮಾಡಿದ್ದೇವೆ, ಇಷ್ಟು ಜನ ಕೆಲಸಕ್ಕೆ ಸೇರಬೇಕಿದೆ ಎಂದೆಲ್ಲಾ ಭರವಸೆಯನ್ನ ಕೊಡುತ್ತಾ ಬಂದರೂ ಇಲ್ಲಿಯತನಕ ನಾನು ಯಾವುದೂ ಕಾರ್ಯರೂಪಕ್ಕೆ ಬಂದಿರುವುದನ್ನು ಕಂಡಿಲ್ಲ. ಇನ್ನೂ ಇಲ್ಲಿ ಇರುವ ಉದ್ಯೋಗಿಗಳೇ ಇಲ್ಲಿನ ವಾತಾವರಣ ಸರಿಯಿಲ್ಲ ಎಂದು ಕೆಲಸ ತೊರೆದಿರುವುದನ್ನ ಕಂಡಿದ್ದೇನೆ. ನಿಮಿಷಕ್ಕೊಂದು ನಿರ್ಧಾರವನ್ನ ತೆಗೆದುಕೊಳ್ಳುವ ನನ್ನ reporting officer, so called sales head ಗೆ ಕೆಲಸ ಮಾಡಿದರೂ ತಪ್ಪು ಕೆಲಸ ಮಾಡದಿದ್ದರೂ ತಪ್ಪು. ದೃಢ ನಿರ್ಧಾರವನ್ನ ತೆಗೆದುಕೊಳ್ಳದವರನ್ನು ನೇಮಕಾತಿ ಮಾಡಿಕೊಂಡಿರುವ ನಮ್ಮ Boss, ಅವಳ ಮಾತನ್ನು ಕೇಳಿಕೊಂಡು ನಮ್ಮ ಕಾರ್ಯಾಲಯದ ವಾಸ್ತುವನ್ನ ಬದಲಿಸ ಹೊರಟಿದ್ದಾರೆ !!!! ಮುಗ್ದ ಮನಸಿನ ನನ್ನ Boss ಅನ್ನು ಯಾವ ಯಾವ ರೀತಿಯಲ್ಲಿ ವಶಪಡಿಸಿಕೊಳ್ಳಬಹುದು ಏಂಬುದನ್ನ ಚೆನ್ನಾಗಿ ಅರಿತಿರುವ ಈಕೆ ಎಲ್ಲರೆದುರು ತಾನೊಬ್ಬಳೇ ಕೆಲಸಮಾಡುತ್ತಿರುವುದಾಗಿ ತೋರ್ಪಡಿಸುತ್ತಾಳೆ. ನಾನಿಲ್ಲಿ ಬರೆದಿರುವುದು ಅವಳ ಗುಣವನ್ನ ಎಲ್ಲರಿಗೂ ಪ್ರಚಾರ ಪಡಿಸುವ ಉದ್ದೇಶದಿಂದಲ್ಲ, ನನ್ನ ಕಾರ್ಯಾಲಯದಂತೆಯೇ ಬೇರೆ ಕಾರ್ಯಾಲಯದಲ್ಲೂ ಕೂಡಾ ರೇಷ್ಮಾಳಂತ ವ್ಯಕ್ತಿಗಳು ಹೇರಳವಾಗಿ ಇದ್ದೇ ಇರುತ್ತಾರೆ. ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕಷ್ಟೇ !!!

Wednesday, April 30, 2008

ಹೀಗೊಂದು ಪತ್ರ...

ಹೀಗೊಂದು ಪತ್ರ...

ಜೀವನದಲ್ಲಿ ನಾವು ಕಂಡಿದ್ದೆಲ್ಲಾ ಆಗೋದಿಲ್ಲ ಅಲ್ವ ??? ಹೀಗೆ ನನ್ನ ಮಿತ್ರರೊಬ್ಬರು ಹೇಳೊವಾಗ ನನ್ಗೂ ಅದು ಸತ್ಯ ಅಂತ ಅನ್ನಿಸ್ತು, ನಾ ಕಂಡಿದ್ದ ಕನಸು, ಪಟ್ಟ ಆ ಪುಟ್ಟ ಪುಟ್ಟ ಆಸೆಗಳು ಎಲ್ಲಿಗೆ ಹೊರ್ಟ್ ಹೊಯ್ತು ???

ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲ್ಸಮಾಡೊದಿಕ್ಕೆ ಅಂತ ಸದಾ ಟ್ರಾಫಿಕ್ ಜ್ಯಾಮ್ಗಳೇ ತುಂಬಿರೋ ಬೆಂಗಳೂರಿಗೆ ಬಂದಿದ್ದೆ. ಅಲ್ಲಿ ೨ ಕಂಪನಿಯಲ್ಲಿನ ಅನುಭವದಿಂದ ಒಂದು ಕಂಪನಿ ಸೇರಿದ್ದೆ. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿ ನಂತರ ಕಂಪನಿಯವರು ಹೈದರಾಬಾದಿನಲ್ಲಿ ಮತ್ತೊಂದು ಶಾಖೆ ತೆರೆದಿದ್ದರಿಂದ ಅಲ್ಲಿಗೆ ನನ್ನ ವರ್ಗಾಯಿಸಿದ್ದ್ರು.

ನನಗೂ ಹೊಸಾಜಾಗಕ್ಕೆ ಹೋಗಿ ಏನಾದರೂ ಕಲಿಯುವ, ಏನಾದರೂ ಸಾಧಿಸುವ ಉತ್ಸಾಹ, ಅದಕ್ಕೆ ನಾನೂ ಒಪ್ಪಿಕೊಂಡು ಮನೆಯಲ್ಲಿ ವಿಷಯ ತಿಳಿಸಿ ನನ್ನ ಪ್ರಯಾಣ ಬೆಳೆಸಿದ್ದೆ. ಹೈದರಾಬಾದಿನ ನನ್ನ ಮ್ಯಾನೇಜರ್ ಆದ ವ್ಯಕ್ತಿ ಮೊದಲೇ ಅಲ್ಲಿನ ಜನರಬಗ್ಗೆ ಎಚ್ಚರಿಕೆ ಕೊಟ್ಟಿದ್ದರೂ ಅಲ್ಲಿ ಕಾಲಿಡುತ್ತಿದ್ದಂತೇ ಒಬ್ಬ ಆಟೋ ಚಾಲಕನಿಂದ ಮೋಸಹೋಗಿ ನಾನು ತಲುಪಬೇಕಾದ ಹೋಟೆಲ್ ತಲುಪಿದೆ. ಅಲ್ಲಿಂದ ನನ್ನ ಮ್ಯಾನೇಜರ್ ಗೆ ವಿಷಯ ತಿಳಿಸಿದಾಗ ಅವರೇ ಬಂದು ನನ್ನ ಹೋಟೇಲಿಂದ ನನ್ನ ಹೊಸಾ ಆಫೀಸಿಗೆ ಕರೆತಂದಿದ್ದರು. ಹೊಸಾ ಜಾಗ, ಹೊಸಾ ಜನ... ನಾನು ಅಲ್ಲಿಗೆ ಹೇಗೆ ಹೊಂದಿಕೊಳ್ಳೋದು ಅಂತ ವಿಚಾರ ಮಾಡ್ತಾಇದ್ದಾಗ ಶಿವರಾಜ್ ಪರಿಚಯ ಆಯ್ತು. ಅಲ್ಲಿ ಬಂದು ಒಂದು ಸಮಾಧಾನ ಏನಂದ್ರೆ ನನ್ನ ಮ್ಯಾನೇಜರ್ ಮತ್ತೆ ಶಿವರಾಜ್ ಇಬ್ಬರೂ ಕನ್ನಡಿಗರು... ಆದರೆ ಧಾರವಾಡದವರು. ನಾನು ಮೊದಲ ಒಂದುವಾರ ಅಲ್ಲಿಯ ಹೋಟೇಲ್ ಒಂದರಲ್ಲಿ ತಂಗಿದ್ದು ನಂತರ ಶಿವರಾಜ್ ನೆರವಿನಿಂದ ಒಂದು ಮನೆ ಬಾಡಿಗೆ ಪಡೆದೆ.

ನಾನು ಬಂದ ಮೊದಲ ದಿನಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶಿವರಾಜ್ ನಂತರದ ದಿನಗಳಲ್ಲಿ ಅದಕ್ಕಿಂತ ಹೆಚ್ಚಿಗೆ ಮಿತ್ರರಾಗಿ ನನ್ನ ಸಹಾಯಕ್ಕೆ ಬಂದ್ರು. ನಾನು ಅಲ್ಲಿ ಕೆಲವು ತಿಂಗಳು ಇರ್ಬೆಕು ಅಂತ ನನ್ಗೆ ತಿಳಿದಿತ್ತು, ಹಾಗಾಗಿ ಅಲ್ಲೇ ಒಂದು ಮನೆ ಬಾಡಿಗೆಗೆ ಹುಡುಕ್ತಾ ಇದ್ವಿ ನಾನು ಮತ್ತೆ ಶಿವರಾಜ್. ತಿರುಮಲಗಿರಿಯಲ್ಲಿ ಒಂದು ಮನೆ ಇರೊ ವಿಚಾರ ನಮ್ಗೆ ಗೊತ್ತಾಯ್ತು. ಆಗ ಅಲ್ಲಿಗೆ ಹೋಗಿ ಮನೆ ಯಜಮಾನಿಜೊತೆ ಮಾತಾಡಿ ಮನೆ ಬಾಡಿಗೆಗೆ ಪಡ್ಕೊಂಡು ನಾನು ಇದ್ದ ಹೋಟೇಲನ್ನ ಖಾಲಿಮಾಡಿ ನನ್ನ ಹೊಸಾ ಮನೆಕಡೆಗೆ ಶಿವರಾಜ್ ಸಹಾಯದಿಂದ ಹೋದೆ.

ಇನ್ನು ನಾನು ನನ್ನ ಬಾಡಿಗೆ ಪಡೆದ ಮನೆ ಬಗ್ಗೆ ಹೇಳಬೇಕು ಅಂದ್ರೆ ಅದೇನು ದೊಡ್ಡ ಅರಮನೆಯಲ್ಲ, ಒಂದು ಪುಟ್ಟ ಸೂರು. ವಿಶಾಲವಾದ ಕಾಂಪೌನ್ಡ್ ಹೊಂದಿದ್ದ ಆ ಸೂರಿನಲ್ಲಿ ಒಟ್ಟು ೫ ಮನೆಗಳಿದ್ದವು. ನನ್ನಮನೆ ಮತ್ತೆ ಮಿಕ್ಕ ೩ ಮನೆಗಳನ್ನ ಬಿಟ್ಟು ನಮ್ಮ ಮನೆ ಯಜಮಾನಿ ಸಾಕಿದ ನಾಯಿಯನ್ನ ನೋಡಿಕೊಳ್ಳಲೆಂದೇ ಒಬ್ಬ ವಾಚ್ಮೆನ್ ಮನೆ ನನ್ನ ಮನೆ ಹಿಂದೆ ಇತ್ತು. ಆ ಪುಟ್ಟ ಮನೆಯಲ್ಲಿ ೫ ಜನರ ಸಂಸಾರ !!! ಅಂದರೆ ಆ ಕಾಂಪೌನ್ಡ್ ನ ಒಳಗೆ ಒಟ್ಟು ೫ ಮನೆಗಳು... ಅವುಗಳಲ್ಲಿ ಒಂದು ಮನೆ ಸದಾ ಬಾಗಿಲಿಗೆ ಬೀಗಾಹಾಕಿಕೊಂಡು ನಿದ್ದೆ ಮಾಡುತ್ತಿತ್ತು. ಮತ್ತೊಂದರಲ್ಲಿ ಒಂದು ಪುಟ್ಟ ಕುಟುಂಬ- ಅಪ್ಪ ಅಮ್ಮ ಮತ್ತೆ ಅವರಿಗಿದ್ದ ಎರೆಡು ಮಕ್ಕಳು. ಒಂದು ಗಂಡು ಮತ್ತೊಂದು ಹೆಣ್ಣು. ಆ ಪುಟ್ಟ ಹುಡುಗಿ ಹೆಸರು ಸಿಂಧು. ನನ್ನ ಮನೆಮೇಲೆ ಮತ್ತೊಬ್ಬ ಮಹಾರಾಷ್ಟ್ರದ ಹುಡುಗ ವಾಸಕ್ಕಿದ್ದ. ಅವನ ಹವ್ಯಾಸಗಳಬಗ್ಗೆ ಇಲ್ಲಿ ಹೇಳೋದು ಬೇಡ, ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕೆಟ್ಟ ಹವ್ಯಾಸಗಳೂ ಅವನಲ್ಲಿ ಮನೆ ಮಾಡಿತ್ತು.

ನಾನು ಮನೆ ಬಾಡಿಗೆ ಪಡೆದಾಗ ಮನೆ ನೋಡೊಕ್ಕೂ ಸಾಧ್ಯ ಆಗದೇ ಇರೋ ಸ್ಥಿತಿಯಲ್ಲಿತ್ತು. ಮನೆ ಯಜಮಾನಿಗೆ ೩.೦೦೦ ಹಣವನ್ನ ಮುಂಗಡವಾಗಿ ಕೊಟ್ಟು ಮನೆಗೆ ಬಣ್ಣ ಹೊಡಿಸಿ ತಯಾರು ಮಾಡಿಸಿದೆ. ಹಾಗೆ ನೋಡಿದ್ರೆ ನನಗೆ ಒಂದು ರೀತಿಯಲ್ಲಿ ಹವಾನಿಯಂತ್ರಿತ ಮನೆ ಸಿಕ್ಕುತ್ತು ಅನ್ನಿ. ಮನೆಯಲ್ಲಿದ್ದ ಕಿಟಕಿಗಳ ಗಾಜುಗಳು ಒಡೆದು ಅಲ್ಲಿಂದ ಹೇರಳವಾಗಿ ಗಾಳಿ ಬೀಸುತಿತ್ತು. ಇದರಿಂದ ಹಲವು ರೀತಿಯ ಅನುಕೂಲ ಇದೆ ನೋಡಿ- ಹೈದರಾಬಾದಿನ ಆ ಬೇಸಿಗೆಯಲ್ಲೂ ನನ್ನ ಮನೆ ತಂಪಗಿರುತಿತ್ತು.... ಇದರಿಂದ ಆಗೋ ವಿದ್ಯುತ್ ಉಳಿತಾಯದ ಲಾಭ ನನಗೇ ಅಲ್ವಾ ??? ಗಾಳಿ ಮನೆ ತುಂಬಿರ್ತಾ ಇದ್ದಿದ್ರಿಂದ ಒದ್ದೇ ಬಟ್ಟೆಗಳು ಬಹಳ ಬೇಗ ಒಣಗಿಬಿಡುತ್ತಿದ್ದವು. ರಾತ್ರಿ ನನ್ನ ಕಿವಿಗಳಿಗೆ ಇಂಪಾದ ಸಂಗೀತ ಕೇಳಿ ಬರುತ್ತಿತ್ತು... (ಅದು ಮೋಹಿನಿ ಕಾಟ ಅಲ್ಲ ಸ್ವಾಮೀ... ಸೊಳ್ಳೆಗಳ ಸಂಗೀತ).

ನಾನು ಇದ್ದ ನನ್ನ ಬಾಡಿಗೆ ಮನೇನಲ್ಲಿ ನನ್ನ ವಾಸ್ತವ್ಯದ ಮೊದಲು ಎರಡುತಿಂಗಳು ನನ್ನ ಮಿತ್ರರು ಅಂದ್ರೆ ನನ್ನಜೊತೆಗೆ ನಾನು ತಂದಿದ್ದ ನನ್ನ ಬೋನ್ಸಾಯ್, ಕಂಪ್ಯೂಟರ್ ಮತ್ತೆ ಅದರಲ್ಲಿ ಕೇಳಿ ಬರುತ್ತಿದ್ದ ಕನ್ನಡಮಾತು ಮತ್ತೆ ಹಾಡು. ಮನೆಯಿಂದ ಹೊರಗೆ ಬಂದರೆ ಬರೀ ತೆಲುಗು ಮತ್ತೆ ಹಿಂದಿ. ನನಗೆ ಹಿಂದಿ ಭಾಷೆತಿಳಿದಿದ್ದರಿಂದ ಹ್ಯಾಗೂ ನಿಭಾಯಿಸಿಕೊಂಡು ಹೊಗ್ತಾ ಇದ್ದೆ. ಇಲ್ಲಿಗೆ ಬಂದಮೇಲೆ ನಾನು ಅಪಾರ ಸ್ನೇಹಪಡೆದೆ, ಮಿತ್ರರನ್ನ ಪಡೆದೆ, ಒಂಟಿತನ ಏನೂ ಅನ್ನೊದನ್ನ ತಿಳ್ಕೊಂಡೆ, ನಮ್ಮ ಭಾಷೆ, ನಮ್ಮ ನಾಡಿನ ಮಹತ್ವನ್ನ ಇನ್ನೂ ಚೆನ್ನಾಗಿ ಅರಿತೆ. ಇನ್ನೂ ಹೇಳ್ಬೇಕು ಅಂದ್ರೆ ಉಪ್ಪಿಟ್ಟು ಮಾಡೊದು, ಅಡುಗೆ ಮಾಡೊದು, ಇದ್ದ ಒಂದೇ ಒಂದು ಕರೆಂಟ್ ಸ್ಟೊವ್ ಮತ್ತೆ ೪ ಪಾತ್ರೆಗಳಲ್ಲಿ ದಿನಾ ಅಡುಗೆ ಮಾಡ್ಕೊಂಡು, ಅದನ್ನೇ ತಿಂದ್ಕೊಂಡೂ, ಮನೆನ ಚೊಕ್ಕವಾಗಿ ಇಟ್ಕೊಳ್ಳೊಕೆ ಕಲ್ತೆ. ಹಾಗೇಂತ ನನ್ಗೆ ಇದೆಲ್ಲಾ ಮೊದ್ಲು ಬರ್ತಾಇರ್ಲಿಲ್ಲ ಅಂತ ಅಲ್ಲ, ಆದ್ರೂ ಅಡುಗೆ ಮಾಡೊದು ಕಮ್ಮಿನೇ ಇತ್ತು.

ಗೆಳೆಯರಿಲ್ಲ್ದೇ ನಾನು ಆ ಅಪರಿಚಿತ ಪ್ರದೇಶದಲ್ಲಿ ಇರೋದಿಕ್ಕೆ ಸಾಧ್ಯಾನೇ ಇರ್ಲಿಲ್ಲ. ಈ ಗೆಳೆತನ ಅನ್ನೋದು ತುಂಬಾ ವಿಚಿತ್ರವಾದದ್ದು. ನಾವೆಲ್ಲೋ ಇರ್ತೀವಿ, ಅವ್ರೆಲ್ಲೋ ಇರ್ತಾರೆ ಆದ್ರೂ ಅದು ಹೇಗೋ ಗೆಳೆತನ ಬೆಳೆದುಬಿಡತ್ತೆ. ಒಂದು ರೀತಿಯ ಬಾಂಧವ್ಯ ಬೆಳೆದುಬಿಡತ್ತೆ. ನಾನು ಅಲ್ಲಿ ಇದ್ದ ಆ ಕೆಲವು ದಿನಗಳಲ್ಲಿ ಪಡೆದ ಮಿತ್ರರ ಗಣನೆ ಅಪರಿಮಿತವಾದದ್ದು... ಆದರೂ ಶಿವರಾಜ್ ಬಿಟ್ಟು ಮರಿಯೋದಕ್ಕೇ ಆಗದೇ ಇರೋ ಗೆಳೆಯರು ಅಂದ್ರೆ ನನ್ನ ಮತ್ತಿಬ್ಬ ಸ್ನೇಹಿತರು- ವಿಜಯ್ ಮತ್ತೆ ಶಿಲ್ಪ. ವಿಜಯ್ ನನ್ನ್ಗೆ ಮತ್ತೊಬ್ಬ ಆರ್ಕುಟ್ ಮಿತ್ರ ಅಮರನಿಂದ ಪರಿಚಯವಾದ್ರೆ, ಶಿಲ್ಪ ವಿಜಯ್ ಮೂಲಕ ಪರಿಚಯವಾದ್ಳು. ನನ್ನ ಮುಂದಿನ ಭವಿಷ್ಯವನ್ನ ಅಲ್ಲಿ ರೂಪಿಸಿಕೊಳ್ಳೋಣ ಎಂದು ಲೆಕ್ಕಾಚಾರ ಹಾಕಿ ಅಲ್ಲಿಗೆ ಪ್ರಯಾಣ ಬೆಳೆಸಿದ್ದ ನನಗೆ ಅಲ್ಲಿನ ಜೀವನ ಬೇಸರ ತರಿಸುತ್ತಿತ್ತು.

ಅದನ್ನ ಹೋಗಲಾಡಿಸಿಕೊಳ್ಳಲು ಮತ್ತೆ ನನ್ನ ವೃತ್ತಿಜೀವನದಲ್ಲಿ ನನ್ನ ಕನಸನ್ನ ನನಸು ಮಾಡಿಕೊಳ್ಳಲು ಶಿಲ್ಪಜೊತೆ ಒಂದು ಕಂಪ್ಯೂಟರ್ ಕ್ಲಾಸಿಗೆ ಸೇರಿಕೊಂಡೆ. ನನ್ನ ಕಂಪ್ಯೂಟರ್ ಕ್ಲಾಸ್ ಇನ್ನೂ ಪ್ರಾರಂಭವಾಗಿರಲಿಲ್ಲ ನನಗೆ ನನ್ನ ಕಾರ್ಯಾಲಯದಿಂದ ಒಂದು ಮೈಲ್ ಬಂದಿತ್ತು. You are requested to visit bangalore office in 2 days ಮೊದಲೇ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ ಅದರ ನಡುವೆ ನನಗೆ ಬಂದ ಆ ಮೈಲ್ ಮನಸ್ಸಿನಲ್ಲಿ ಒಂದುರೀತಿಯ ಗೊಂದಲ ಉಂಟುಮಾಡಿತ್ತು. ನಮ್ಮ ಆಫೀಸಿನಲ್ಲಿ Boss ನ ಅನಿಸಿಕೆಯಂತೆ ಸೇಲ್ಸ್ ಆಗಿರಲಿಲ್ಲದ ಕಾರಣದಿಂದ ಈ ಮೀಟಿಂಗ್ ಅನ್ನೋದು ನನಗೆ ಮತ್ತೆ ಶಿವರಾಜ್ ಅವರಿಗೆ ಖಚಿತವಾಗಿ ಗೊತ್ತಿತ್ತು. ನಾವು ಬೆಂಗಳೂರಿಗೆ ಬಂದು, ನಮ್ಮ Boss ನ ಜೊತೆ ಮೀಟಿಂಗ್ ಮುಗಿಸಿದ ಮೇಲೆ ನಮ್ಮ ಅನುಮಾನಕ್ಕೆ ಪರಿಹಾರ ಸಿಕ್ಕಿತು. "ಹೈದರಾಬಾದಿನ ಬ್ರಾಂಚನ್ನು ಮುಚ್ಚಲಿದ್ದೇವೆ, ನೀವು ಮರಳಿ ಬೆಂಗಳೂರಿಗೆ ಇನ್ನುಳಿದ ೫ ದಿನದಲ್ಲಿ ಬರಬೇಕು" ಇದು ನನಗೆ ನನ್ನ ಮೇಲಿನವರಿಂದ ಬಂದ ಸೂಚನೆ. ಕೇವಲ ೫ ದಿನಗಳ ಸಮಯದಲ್ಲಿ ನನ್ನ ಆ ಮನೆಯನ್ನ ಖಾಲಿಮಾಡಿ ಬರುವುದು ಹುಡುಗಾಟವಲ್ಲ, ಆದರೂ ಬರಲೇ ಬೇಕಾಯಿತು. ನನ್ನ ಮನೆಯ ಯಜಮಾನಿ ತಕರಾರು ತೆಗೆದು ನನ್ನ ಮನೆಯ Advance ಅನ್ನು ಮರಳಿ ಹಿಂದಿರುಗಿಸಲಿಲ್ಲ.

ಕೊನೆಯದಾಗಿ ಹೈದರಾಬಾದಿನಲ್ಲಿ ಏನನ್ನೋ ಸಾದಿಸ ಹೊರಟಿದ್ದ ನಾನು ಮರಳಿ ನನ್ನ ಕರುನಾಡಿಗೆ ಪ್ರಯಾಣ ಬೆಳೆಸಿದ್ದೆ, ಹೈದರಾಬಾದಿನಲ್ಲಿ ನನಗೆ ಸಿಕ್ಕ ಅಪಾರ ಮಿತ್ರವೃಂದವನ್ನ ಜೊತೆಯಲ್ಲಿ ಕರುನಾಡಿಗೆ ತಂದಿದ್ದೆ.

Tuesday, April 29, 2008

ಪ್ರೇಮ



ಹೃದಯದೊಳು ಮೂಡಿ
ರಕ್ತದೊಳು ಹರಿದು
ಉಸಿರಿನಲಿ ಬೆರೆತು
ಮನಸ್ಸಿನಿಂದ ಹೊರಹೊಮ್ಮಿದ
ಮನದನ್ನೆಯ ಹೆಸರು...

Monday, April 28, 2008

ಹಕ್ಕಿಯೊಂದು ಗೂಡು ಕಟ್ಟಿತ್ತು...




ನಾನು ಹೈದರಾಬಾದಿನಲ್ಲಿ ವಾಸವಿದ್ದ ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಜೀವನದ ಪುಟಗಳಲ್ಲಿ ಮರೆಯೋದಕ್ಕೇ ಸಾಧ್ಯವಾಗದೇ ಇರೋ ಅಂಥಾ ಕೆಲವು ಸುಂದರ ನೆನಪುಗಳು ನನ್ನಲ್ಲಿ ಮನೆಮಾಡಿವೆ. ನಾನು ಪ್ರತೀದಿನ ನನ್ನ ಕೆಲಸವನ್ನ ಮುಗಿಸಿಕೊಂಡು ಮಧ್ಯಾನ್ನ ಅಲ್ಲೇ ಇದ್ದ ಒಂದು ಉಡುಪಿ ಹೋಟೇಲಿನಲ್ಲಿ ಊಟ ಮುಗಿಸಿ ಸಂಜೆ ಎಲ್ಲಿ ಟ್ರಾಫಿಕ್ ಪೋಲೀಸು ನನ್ನ ನೋಡಿ ನನ್ನ ಬೈಕನ್ನ ಹಿಡಿದುಬಿಡುತ್ತಾನೋ ಅನ್ನೋ ಭಯದಿಂದ ಮನೆಕಡೆ ಹೋಗುತ್ತಿದ್ದೆ.

ಆ ಟ್ರಾಫಿಕ್ಕೋ, ಅಲ್ಲಿಯ ಜನರೋ !!! ಅಭ್ಭಾ !!! ಬಲಗಡೆಯ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗುವ ಮಹಾನುಭಾವರು. ಪುರುಷ, ಮಹಿಳೆಯ ತಾರತಮ್ಯ ಅಲ್ಲಿ ಕಾಣೋದಿಲ್ಲ. ಜೀವ ಕೈನಲ್ಲಿ ಹಿಡಿದುಕೊಂಡು ಗಾಡಿ ಓಡಿಸಿಕೊಂಡು ಮನೆ ತಲುಪಿದರೆ ನನ್ನಲ್ಲೇ ಏನೋ ಒಂದು ಯುದ್ದದಲ್ಲಿ ಗೆಲುವು ಸಾಧಿಸಿದ ಹಾಗೆ ಸಂತಸ. ದಾರಿಮಧ್ಯೆ ಏನಾದರೂ ಕರ್ನಾಟಕದ ನೊಂದಣಿಯ ಯಾರಾದರೂ ಸಿಕ್ಕಿಬಿಟ್ಟರೆ ಅದಕ್ಕಿಂತಾ ಸಂತಸ ಮತ್ತೊಂದಿಲ್ಲ. ಹೇಗಾದರೂ ನಾನು ಅವರ ಮುಂದೆ ಹೋಗಿ ನಾನೂ ಕರುನಾಡಿನವನೇ ಎಂದು ಅವರಿಗೆ ಕಾಣಿಸುವಹಾಗೆ ನನ್ನ ಗಾಡಿಯನ್ನ ಅವರ ಮುಂದೆ ಕೊಂಡೊಯ್ದು ಅದರ ಕನ್ನಡಿಯಲ್ಲಿ ತಿರುಗಿನೋಡ್ತಾ ಇದ್ದೆ. ನನ್ನ ಹಾಗೇ ಅವರೂ ಕರ್ನಾಟಕದ ನೊಂದಣಿಯ ವಾಹನದ ನಿರೀಕ್ಷೆಮಾಡ್ತಾ ಇದ್ರೆ !!! ಅವರಿಗೂ ಸಮಾಧಾನ ಸಿಕ್ಕಲಿ ಅನ್ನೋ ಭಾವನೆ.

ನಾನಿದ್ದ ಮನೆಯಲ್ಲಿ ನನ್ನ ಮನೆಯ ಮುಂದೆ ಕೆಲವು ಗಿಡಗಳಿದ್ದರೆ ಮನೆಯ ಕಾಂಪೌಂಡಿನ ಮೂಲೆಯಲ್ಲಿ ಒಂದು ಸೀತಾಫಲದ ಮರ ಇತ್ತು. ಯಾವುದೋ ಕಾರಣಕ್ಕಾಗಿ ಅದನ್ನ ಕತ್ತರಿಸಿಹಾಕಿದ್ದರೂ ಅದು ಮತ್ತೆ ಚಿಗುರಿ ನಾನು ಸೋಲುವುದಿಲ್ಲವೆಂಬಂತೆ ಬೆಳೆಯುತ್ತಿತ್ತು. ಪ್ರತಿಸಂಜೆ, ಬೆಳಗಿನ ಹೊತ್ತಿನಲ್ಲಿ ಮತ್ತೆ ರಜೆಯದಿವಸ ನಾನು ಆ ಮರವನ್ನ ನೋಡ್ತಾ ಇರ್ತಿದ್ದೆ. ನನ್ನ ಮನೆಇದ್ದ ಜಾಗದಲ್ಲಿ ಸ್ವಲ್ಪ ಪ್ರಶಾಂತತೆ ನೆಲಸಿತ್ತು. ಅದು ಮುಖ್ಯರಸ್ತೆಗಿಂತಲೂ ಸ್ವಲ್ಪ ದೂರದಲ್ಲಿ ಇದ್ದದ್ದರಿಂದ ಅಲ್ಲಿ ಪಕ್ಷಿಗಳ ಕಲರವ ಆಗಾಗ ಕೇಳಿಬರುತ್ತಲಿತ್ತು. ಅಂದೊಂದು ದಿನ ನಾನು ನಮ್ಮ ಸೀತಾಫಲದಮರದಲ್ಲಿ ಕೆಲವು ಪುಟ್ಟ ಪುಟ್ಟ ಪಕ್ಷಿಗಳು ಹಾರಿ ಬಂದು ಕುಳಿತು ತಮ್ಮಲ್ಲೇ ಏನೋ ಮಾತನಾಡಿಕೊಳ್ಳುತ್ತಿರುವುದನ್ನ ಕಂಡೆ. ಅದಾದ ಕೆಲವು ದಿನಗಳ ನಂತರ ಅದೇ ಮರದಲ್ಲಿ ಆ ಎರಡೂ ಪಕ್ಷಿಗಳು ತಮ್ಮ ಪುಟ್ಟ ಗೂಡೊಂದನ್ನ ಕಟ್ಟಲು ಪ್ರಾರಂಭಿಸಿದವು. ದೂರದಿಂದ ಹೆಕ್ಕಿತರುತ್ತಲಿದ್ದ ಆ ಕಸ ಕಡ್ಡಿಗಳನ್ನ ನಾಜೂಕಾಗಿ ಜೋಡಿಸಿ ತಮ್ಮ ಗೂಡನ್ನ ಸಿಂಗರಿಸತೊಡಗಿದವು. ಅದನ್ನು ನೋಡುವುದೇ ಒಂದು ಖುಷಿ.

ದಿನದಿಂದ ದಿನಕ್ಕೆ ಆ ಜೋಡಿಗಳು ಕಟ್ಟುತ್ತಿದ್ದ ಪುಟ್ಟ ಗೂಡು ಪೂರ್ಣವಾಗ್ತಾ ಬಂದಿತ್ತು. ನಾನು ಆ ಪುಟ್ಟ ಗೂಡಿನಲ್ಲಿ ಪುಟಾಣಿ ಮರಿಗಳ ಕಲರವ ಕೇಳಿಬರಬಹುದು ಅದರ ಫೋಟೋ ತೆಗಿಯಬಹುದು ಅಂತೆಲ್ಲಾ ಲೆಕ್ಕಾಚಾರ ಹಾಕ್ತಾಇದ್ದೆ. ಅಪರೂಪಕ್ಕೆಂದು ಆಗಸದಿಂದ ಸುರಿದ ಮಳೆ ಎಲ್ಲಿ ಆ ಪುಟ್ಟ ಗೂಡನ್ನ ನುಚ್ಚು ನೂರುಮಾಡಿರತ್ತೋ ಅಂತ ಆತಂಕದಿಂದ ಅಂದು ಸಂಜೆ ನನ್ನ ಆಫೀಸಿನಿಂದ ಮನೆಗೆ ಬಂದೆ. ಬಂದವನೇ ಆ ಸೀತಾಫಲದ ಮರದಬಳಿ ಹೋಗಿ ನೋಡಿದಾಗ ಅಲ್ಲಿ ಮುದ್ದಾದ ಕೆಮ್ಮಣ್ಣಿನಬಣ್ಣದ ೪ ಮೊಟ್ಟೆಗಳನ್ನ ಚೆಂದವಾಗಿ ಜೋಡಿಸಿಟ್ಟ ಹಕ್ಕಿ ಮೇಲಿನ ಕೇಬಲ್ಲಿನಲ್ಲಿ ಕುಳಿತು ಜೋರಾಗಿ ಕೂಗಲಾರಂಭಿಸಿತು. ಅದಕ್ಕೆ ತೊಂದರೆ ಮಾಡಬಾರದೆಂಬ ಕಾರಣದಿಂದ ನಾನು ಒಂದು ಛಾಯ ಚಿತ್ರವನ್ನ ಸೆರೆ ಹಿಡಿದು ಮರಳಿ ನನ್ನ ಗೂಡಿಗೆ ಸೇರ್ಕೊಂಡೆ.

ಈ ಘಟನೆಯಾದ ೨ದಿನದ ನಂತರ ನನಗೆ ಆ ಹಕ್ಕಿಗಳ ಕಲರವವಾಗಲೀ, ಅವುಗಳ ಹಾರಾಟವಾಗಲೀ ಆ ಮರದ ಹತ್ತಿರ ಕಾಣಲಿಲ್ಲ. ಏನಾಗಿರಬಹುದೆಂಬ ಗೊಂದಲದೊಂದಿಗೇ ನಾನು ಗೂಡಿನತ್ತ ಹೊರಟೆ. ಅಲ್ಲಿದ್ದ ಆ ಮೊಟ್ಟೆಗಳು ಬರಿದಾಗಿತ್ತು. ಖಾಲಿಯಾಗಿದ್ದ ಆ ಗೂಡಿನಲ್ಲಿ ಹಕ್ಕಿಗಳು ಹೇಗೆತಾನೆ ಇದ್ದಾವು ??? ಆ ಗೂಡಿನಿಂದ ಕೊಂಚ ದೂರದಲ್ಲಿ ಅದರ ಒಡೆದ ಒಂದು ಮೊಟ್ಟೆ ಕಾಣಿಸಿತು.

ಮನೆಯ ಮುಂದಿನ ಪುಂಡ ಹುಡುಗರು ಆ ಗೂಡಿನೊಳಗಿನಿಂದ ಆ ಮೊಟ್ಟೆಗಳನ್ನು ಹೊರತೆಗೆದು ಅದನ್ನು ಒಡೆದು ಹಾಕಿದ್ದರು. ಪುಟ್ಟ ಪುಟ್ಟ ಮರಿಗಳೊಂದಿಗೆ ಹಾರಬೇಕಿದ್ದ ಆ ಪಕ್ಷಿಯ ಸಂಸಾರ ಅಂದು ಬರಿದಾಗಿತ್ತು, ಮನುಷ್ಯನ ಕ್ರೂರತನಕ್ಕೆ ಮೂಕ ಸಾಕ್ಷಿಯಾಗಿತ್ತು.

Friday, April 25, 2008

ನೊಡಿದ್ಯಾ !!!

ನೊಡಿದ್ಯಾ !!! ನಾನು ಬರ್ದಿರೋ ಕವನ (ಅದು ಕವನ ಅಂತ ಅಂದ್ಕೋಬೇಕು ಅಷ್ಟೇ) ಅದು, ಯಾರೋ ಕಾಪಿಮಾಡಿ ಅವರ ಬ್ಲಾಗಿನಲ್ಲಿ ಹಾಕಿದಾರೆ !!! ನೋಡೋ !!!!

ಈ ಮೇಲಿನ ಸಾಲುಗಳು ಬೇರೆಯಾರೂ ಹೇಳಿದ್ದಲ್ಲ ಸ್ವಾಮೀ, ನಾನೇ ಹೇಳಿದ್ದು. ಹೌದು, ಕೆಲವು ತಿಂಗಳ ಹಿಂದೆ ನನ್ನ ಬ್ಲಾಗಿನಿಂದ ಕೆಲವು ಕವನ?? ಗಳು ಬೇರೆಯವರ ಪಾಲಾಗಿತ್ತು, ಅಷ್ಟಕ್ಕೇ ರಾಧ್ಧಾಂತ ಮಾಡಿ ಗಲಾಟೆ ಮಾಡ್ಕೊಂಡು ನನ್ನ ಬ್ಲಾಗ್ ನನ್ನ ಸರ್ವಸ್ವ ಅಂತ ನನ್ನ ಬ್ಲಾಗನ್ನ ಯಾರೂ ನೋಡದ ಹಾಗೆ ನಾನೇ ಲಾಕ್ ಮಾಡಿದ್ದೆ. ಕೆಲವು ತಿಂಗಳ ಹಿಂದೆ ನನ್ನ ಜೀವನದಲ್ಲಿ ನಾನು ಊಹಿಸಲಾಗದ ಕೆಲವು ಕಹಿ ಘಟನೆಗಳು ಜರುಗಿದವು. ಅದು ನನ್ನ ಪ್ರೀತಿಯ ಅಪ್ಪನ ಅಗಲಿಕೆ. ಆಗ ನನಗನ್ನಿಸಿದ್ದು "ಈ ಪ್ರಪಂಚದಲ್ಲಿ ನಾವು ಹುಟ್ಟಿದಾಗ ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗ್ತೀವಿ, ಅದರ ನಡುವೆ ನಾನು ನನ್ನದು ಅನ್ನುವ ಅಹಂ ಏತಕ್ಕೆ???" ಜೀವನದಲ್ಲಿ ಒಂದುರೀತಿಯ ನಿರಾಸಕ್ತಿ ಮೂಡಿತ್ತು. ಕಾಲಾಯ ತಸ್ಮೈ ನಮಃ ಅನ್ನೋಹಾಗೆ ಕ್ರಮೇಣವಾಗಿ ನಾನು ನನ್ನ ಇಂದಿನ ಜೀವನಕ್ಕೆ ಹೊಂದಿಕೊಂಡು ಬದುಕುವುದನ್ನ ರೂಢಿಸಿಕೊಂಡಿದ್ದೇನೆ.

ಬೇರೆಯವರಿಗೆ ಏನಾದರೂ ಕೊಟ್ಟರೆ ಅದು ಅವರಿಗೆ ಸಂತಸ ಅಥವ ಸಮಾಧಾನ ತರುವಂತದ್ದಾಗಿರಬೇಕು. ನನ್ನ ಆ ಬರಹ ಕೂಡಾ ಕೆಲವು ಮಂದಿಗೆ ಸಮಾಧಾನ ತಂದಿತ್ತೇನೋ !!! ಆದಕಾರಣದಿಂದಲೇ ಅವರು ಅದನ್ನ ತಮ್ಮ ಬ್ಲಾಗಿಗೆ ಸೇರಿಸಿಕೊಂಡಿದ್ದರು ಅಂತ ನಂತರ ತಿಳಿಯಿತು. ಆಗ ಏನೋ ಒಂದುರೀತಿಯ ಕಸಿವಿಸಿಯಾಗ್ತಾ ಇತ್ತು. ಆದರೆ ಮಾನವ ಸಹಜಗುಣ ಎಲ್ಲಿ ಹೋಗತ್ತೆ !!! "ನಾನು, ನನ್ನದು ಅನ್ನೋ ಅಹಂ" ನಂತರ ನಾನು ಆ ವ್ಯಕ್ತಿಯಿಂದ ಬಂದ ಸ್ನೇಹದ ಕೋರಿಕೆಯನ್ನ ಒಪ್ಪಿಕೊಂಡು ಅವರ ಸ್ನೇಹಿತನಾದೆ.

ಆ ಘಟನೆಯ ನಂತರ ನನ್ನ ಮನದಲ್ಲೇ ನಾನು ನೂರಾರುಬಾರಿ ಯೋಚನೆ ಮಾಡಿದ್ದೇನೆ, ಯಾವುದೇ ವ್ಯಕ್ತಿಯಲ್ಲಿ ಇರುವ ಕಲೆ ಹೊರಬರಬೇಕಾದರೆ ಆ ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಲೇಬೇಕು. ಯಾವುದೇ ಒಂದು ಗಿಡವು ಬೆಳೆದು ನಿಲ್ಲಬೇಕಾದರೆ ಅದಕ್ಕೆ ತಕ್ಕ ಪೋಷಣೆ ಅತ್ಯಗತ್ಯ. ನನ್ನ ಬ್ಲಾಗನ್ನು ನೋಡಿ ಅದನ್ನು ಮೆಚ್ಚಿದಾಗ ತಾನೆ ನನಗೆ ಮತ್ತೊಮ್ಮೆ ಬರೆಯುವ ಪ್ರಯತ್ನ ಪಡಲಿಕ್ಕೆ ಸಾಧ್ಯ ??? ನಾನು ಬರೆದದ್ದನ್ನ ಯಾರೊಂದಿಗೂ ಹಂಚಿಕೊಳ್ಳದಿದ್ದರೆ ನಾನು ಬರೆದದ್ದಾದರೂ ಯಾವ ಕಾರಣಕ್ಕೆ ??? ಇದೆಲ್ಲಾ ವಿಚಾರಮಂಥನವಾದ ನಂತರ ನನ್ನ ಬ್ಲಾಗನ್ನು ಬಂಧಮುಕ್ತಗೊಳಿಸಿದೆ.

Thursday, March 13, 2008

ನೆನಪು

ಎದೆಯಾಳದಿಂದ ನೆನಪುಗಳನ್ನ ಹೆಕ್ಕಿಕೊಂಡು ಕುಳಿತಿದ್ದೇನೆ
ನೆನಪುಗಳನ್ನ ನೆನಪುಗಳಿಂದ ಸಿಂಗರಿಸ ಹೊರಟಿದ್ದೇನೆ

ಬಾಲ್ಯದಿಂದ ಬೆನ್ನಟ್ಟಿ ಬಂದ ನೆನಪುಗಳು
ಯೌವ್ವನದಲ್ಲೂ ನನ್ನ ಕಾಡುತ್ತಲಿವೆ

ಅಂದು ಪುಸ್ತಕದೊಳಗಿಟ್ಟ ಮಲ್ಲಿಗೆಯ ಪರಿಮಳವ ಇಂದು ಆನಂದಿಸುತ್ತಿದ್ದೇನೆ
ತುಸು ಕೋಪದಿ ಹರಿದ ಆ ಪುಟಗಳ ಕಂಡು ಇಂದು ಪರಿತಪಿಸುತ್ತಿದ್ದೇನೆ

ನೆನಪಿನ ಜಾತ್ರೆಯಲಿ ನನ್ನ ನಾ ಕಳೆದುಕೊಂಡು
ನೆನಪಿನ ಸಾವಿರ ಕಣ್ಣುಗಳಿಂದ ಹುಡುಕುತ್ತಿದ್ದೇನೆ

ನೆನಪಿನ ಲೇಖನಿಯಿಂದ ನನ್ನದೇ
ಚಿತ್ರವನ್ನು ಬರೆಯುತ್ತಿದ್ದೇನೆ ಬಣ್ಣ ತುಂಬುತ್ತಿದ್ದೇನೆ

ಬರಡಾದ ಮನದಿ ನೆನಪಿನ ಮಳೆಯ ಸುರಿಸಿ
ಕನಸಿನ ಬೀಜವನ್ನು ಬಿತ್ತಿ ಚಿಗುರನ್ನು ಬೆಳೆಸುತ್ತಿದ್ದೇನೆ

ಚಿಗುರನ್ನು ಹೆಮ್ಮರವಾಗಿಸಿ ಅದರ ನೆರಳಲ್ಲಿ ಕುಳಿತು
ಕನಸು ನನಸಾಗುವುದನ್ನು ಕಾಣಹೊರಟಿದ್ದೇನೆ...

Tuesday, March 11, 2008

ನಿನಗಾಗಿ

ನಾ ನಿನಗಾಗಿ ನಿನ್ನ ದಿನವ
ಬೆಳಗುವ ಸೂರ್ಯನಾಗಬೇಕಿದೆ

ನಾ ನಿನಗಾಗಿ ಇರುಳಿನಲಿ
ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ,

ನಾ ನಿನ್ನಲಿರುವ ದುಃಖ ದುಮ್ಮಾನವನು
ಹೊತ್ತೋಯ್ಯುವ ನದಿಯಾಗಬೇಕಿದೆ,

ನಾ ನಿನ್ನಜೊತೆ ಜೊತೆಯಲಿ
ಹೆಜ್ಜೆಯಿಡುವ ನೆರಳಾಗಬೇಕಿದೆ,

ನಾ ನಿನ್ನ ಪ್ರೀತಿ ಪಡೆಯಬೇಕಿದೆ,
ನಿನ್ನೋಂದಿಗೆ ನಡೆಯಬೇಕಿದೆ

ದೂರ ಬಲು ದೂರ ಸಾಗಬೇಕಿದೆ
ನಾ ನಿನ್ನೊಳು ಬೆರೆಯಬೇಕಿದೆ

ನಾ ನಿನ್ನ ಕಾಣದಿದ್ದರೇನು,
ನಿನ್ನಯ ಸ್ಪರ್ಶವ ಕಂಡಿಹೆನು

ನೀ ಬರುವೆ ತಂಗಾಳಿಯ ನಡುವೆ ತೇಲುತಾ,
ಮನಕೆ ಮುದವ ನೀಡುತಾ

ನೀಲಿಗಗನದಿ ತೇಲುವ ಮೇಘಮಾಲೆಯ
ನಡುವೆ ನಾ ಕಾಣುವೆ ನಿನ್ನಯ ಚಿತ್ತಾರವ

ಇರುಳಿನ ತಂಪಾದ ಸಮಯದಲಿ ನಾ ಕಾಣುವೆ
ನಿನ್ನಯ ಚಂದವನು ಆ ಚುಕ್ಕಿಗಳ ಸೇರಿಸುತ...

Monday, January 21, 2008

ಪಿತೃ ದೇವೋಭವ...

ಪಿತೃ ದೇವೋಭವ

ಜನ್ಮನೀಡಿದ ತಂದೆ, ತಾಯಿಯ ಋಣವನ್ನ ತೀರಿಸೋದಕ್ಕೆ ಆಗದೇ ಇರ್‍ಓ ವಿಷಯ. ೮ನೇ ಜನವರಿಯಂದು ನಮ್ಮನ್ನಗಲಿದ ನಮ್ಮ ತಂದೆಯವರಿಗೆ ನಾನು ಇಲ್ಲಿ ಕೇವಲ ನನ್ನ ನಮನವನ್ನ ಸಲ್ಲಿಸುತ್ತಿದ್ದೇನೆ.


ಹುಟ್ಟಿದಾಗಿನಿಂದಲೂ ಕೈ ಹಿಡಿದು,
ಗುಟುಕು ನೀಡಿ ನಮ್ಮ ಬೆಳೆಸಿದ
ಆ ಕೈಗಳು ಇಂದು ಕೇವಲ ಒಂದು ಹಿಡಿ ಭಸ್ಮ...

ಪುಟ್ಟ ಹೆಜ್ಜೆಗಳನಿಟ್ಟು ನಡೆವಾಗ
ಬಿದ್ದು ಅತ್ತಾಗ ಎತ್ತಿಹಿಡಿದು ಮುದ್ದಾಡಿದ
ಆ ಕೈಗಳು ಇಂದು ಕೇವಲ ಅರೆ ಬೆಂದ ಮೂಳೆ ಮಾತ್ರ...

ಅಂದು ನಮಗೆ ಮಾತಕಲಿಸಿದ
ತೊದಲು ನುಡಿಯ ಕೇಳಿ ಆನಂದಿಸಿದ
ಆ ಮಹಾನ್ ತೇಜ ಇಂದು ಕೇವಲ ನೆನಪು ಮಾತ್ರ...

ತುತ್ತು ಕೂಳಿಗೋಸ್ಕರ ಸಾಲ ಮಾಡಿ
ಭವಿಷ್ಯದ ಕನಸ ಹೆಣೆದು ಕೈ ಹಿಡಿದು
ಜೊತೆಗೂಡಿ ನಡೆಸಿದ ಆ ಕ್ಷಣಗಳು ಇಂದು ಕೇವಲ ಸ್ಮರಣಿಕೆ...

ಬಾಳಪಯಣದಿ ಸಾಗುತಿದ್ದ ನೌಕೆಗೆ
ಇಂದು ನಾವಿಕನಿಲ್ಲ, ದಿಕ್ಕು ತಪ್ಪದೇ
ಪಯಣವ ಸಾಗಿಸುತ್ತಿದ್ದ ದಿಕ್ಸೂಚಿ ಇಲ್ಲ...

ದಾರಿಕಾಣದೇ ಮುಂದೇನೆಂದು
ಯೋಚಿಸುತ್ತಾ ನಿಂತಿರುವಾಗ ಸರಿಯಾದ
ಮಾರ್ಗವ ತೋರಿದ ಮಾರ್ಗದರ್ಶಿಯು ಇಂದಿಲ್ಲ...

ಆಗಸದಿ ಮೂಡಿದ್ದ ರವಿಯ ಕಿರಣದ
ತೇಜ ಇಂದು ಕಾಣುತ್ತಿಲ್ಲ,
ಎಲ್ಲೇಲ್ಲೂ ಕತ್ತಲು, ಕಗ್ಗತ್ತಲು...

ತುಂಬಿದ ಮನೆಯಲ್ಲಿ ನೆಲೆಸಿದ್ದ
ಆ ಕಲರವದ ಸದ್ದು, ಇಂದು
ಅಡಗಿ ಬರೀ ಮೌನ ತುಂಬಿದ ವಾತಾವರಣ...

ಕುಟುಂಬದೆಲ್ಲೆಡೆ ಸೂತಕದ ಛಾಯೆ,
ಮನೆಯ ಪ್ರತಿ ಹೆಜ್ಜೆಯಲ್ಲೂ
ನಿಮ್ಮದೇ ನೆನಪಿನ ಹೊದಿಕೆ...

ದುಃಖ ತುಂಬಿರುವ ಮನಕೆ ನಿಮ್ಮ
ಮಾತನು ಕೇಳುವ ತವಕ, ಕಣ್ಣೀರಿನಲಿ ಮುಳುಗಿರುವ
ಈ ಕಣ್ಣುಗಳಿಗೆ ನಿಮ್ಮ ನೋಡುವ ಕಾತರ...

ದೇಹ ನಾಶವಾದರೇನು ಆತ್ಮವೊಂದಿರಲು,
ಜೊತೆಯಿದ್ದು ದಾರಿ ತೋರಿಸಿ ತಂದೆ
ನಮ್ಮ ಮನ, ಮನೆಯಲ್ಲಿ ಶಾಂತಿ ನೆಲೆಸಿರಲು...